ಮಂಗಳವಾರ, ನವೆಂಬರ್ 12, 2013

ಸಂಸ್ಕ್ರುತಕ್ಕಾಗಿ ಸವಲತ್ತುಗಳ ಪೋಲು!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ಬಾರಿ ಸಂಸ್ಕ್ರುತಾಬಿಮಾನಿ ಕನ್ನಡಿಗರಿಗೆ ದೀಪಾವಳಿ ಹಬ್ಬದ ಸಡಗರ ಎರಡು ವಾರ ಮುಂದಾಗೇ ಬಂತು. ಒಂದೆಡೆ ಸಂಸ್ಕ್ರುತ ವಿಶ್ವವಿದ್ಯಾಲಯದಲ್ಲಿ ಸಂಸ್ಕ್ರುತ ಸಂಜೆ ಕಾಲೇಜಿನ ಉದ್ಗಾಟನೆ ಆದರೆ, ಇನ್ನೊಂದೆಡೆ ಶ್ರೀ ಶ್ರೀ ರವಿಶಂಕರರ Art of Living ಆಶ್ರಮದಲ್ಲಿ ಅಕಿಲ ಬಾರತ ಸಂಸ್ಕ್ರುತ ಅದಿವೇಶನ ಜರುಗಿತು (ವರದಿ : ಪ್ರಜಾವಾಣಿ, ಅಕ್ಟೋಬರ್ ೨೦, ೨೦೧೩). ಇದಾದ ಕೆಲವೇ ದಿನಗಳಲ್ಲಿ ನಮ್ಮ ಸರ‍್ಕಾರ, ಸಂಸ್ಕ್ರುತ ವಿಶ್ವವಿದ್ಯಾಲಯಕ್ಕೆ ಈ ಮೊದಲು ರಿಯಾಯತಿ ದರದಲ್ಲಿ ನೀಡಿದ್ದ ನೂರೆಕರೆ ನೆಲವನ್ನು ಸಂಪೂರ‍್ಣ ಬಿಟ್ಟಿಯಾಗಿ ಮತ್ತೆ ಮಂಜೂರು ಮಾಡಿತು (ವರದಿ : ಪ್ರಜಾವಾಣಿ, ಅಕ್ಟೋಬರ್ ೨೯, ೨೦೧೩). ಒಟ್ಟಿನಲ್ಲಿ ನಮ್ಮ ಸ್ತಳೀಯ ಸಂಸ್ಕ್ರುತಾಬಿಮಾನಿಗಳಿಗೆ ಒಂದು ದೊಡ್ಡ ಹ್ಯಾಟ್ರಿಕ್ಕೇ ದೊರೆಯಿತು. ಸಂಸ್ಕ್ರುತಾಬಿಮಾನಿಗಳಿಗೆ ಇದಕ್ಕಿಂತಾ ಬೇರೇನು ಬೇಕು ಹೇಳಿ?
      ನನ್ನ ಗಮನ ಸೆಳೆದದ್ದು ಈ ಆಗುಗಳಿಗಿಂತ ಹೆಚ್ಚಾಗಿ ಈ ಸಮಯದಲ್ಲಿ ಬಿಚ್ಚುಗೊರಲಿನಿಂದ ಹೊರಹೊಮ್ಮಿದ ಕೆಲವು ಸಂಸ್ಕ್ರುತವನ್ನು ಹೊಗಳುವ ನುಡಿಮುತ್ತುಗಳು. ಸಂಸ್ಕ್ರುತ ಸಂಜೆ ಕಾಲೇಜನ್ನು ಉದ್ಗಾಟಿಸಿದ ಮಹನೀಯರು ತಮ್ಮ ಬಾಶಣದಲ್ಲಿ, ಅಂತರರಾಶ್ಟ್ರೀಯ ಮಟ್ಟದಲ್ಲಿ ಸಂಸ್ಕ್ರುತ ಇಂಗ್ಲೀಶಿಗೆ ಸರಿಸಮನಾದ ಬಾಶೆ ಎಂದೂ, ಸಂಸ್ಕ್ರುತದ ಪುನರುಜ್ಜೀವನದಿಂದ ಜನರಲ್ಲಿ ನಯ್ತಿಕ ಮಟ್ಟ ಹೆಚ್ಚುತ್ತದೆ ಎಂದೂ ಸಬಿಕರಿಗೆ ತಿಳಿಸಿದರಂತೆ! ಅಂತರರಾಶ್ಟ್ರೀಯ ಮಟ್ಟದಲ್ಲಿ ಸಂಸ್ಕ್ರುತ ಇಂಗ್ಲೀಶಿಗೆ ಸರಿಸಮನಾದ ಬಾಶೆ! ಇದಕ್ಕೆ ಏನು ಹೇಳುವುದು ಸ್ವಾಮೀ? ವಿಶ್ವದ ಮೂಲೆಮೂಲೆಗಳಲ್ಲೂ ಬದುಕಿನ ಏಳಿಗೆಗಾಗಿ ಜನ ಮುಗಿಬಿದ್ದು ಕಲಿಯುತ್ತಿರುವ ಸರ‍್ವವ್ಯಾಪಿ ಇಂಗ್ಲೀಶ್ ಎಲ್ಲಿ, ಅಲ್ಲೊಬ್ಬ ಇಲ್ಲೊಬ್ಬ, ಅಬಿಮಾನಕ್ಕೋ ಕುತೂಹಲಕ್ಕೋ ಅರೆಬರೆಯಾಗಿ ಕಲಿಯುವ ಸಂಸ್ಕ್ರುತ ಎಲ್ಲಿ? ಇವೆರಡೂ ಹೇಗೆ ಅಂತರರಾಶ್ಟ್ರೀಯ ಮಟ್ಟದಲ್ಲಿ ಸರಿಸಮಾನ ಅಂತ? ಇರಲಿ ಬಿಡಿ. ಇನ್ನು ನಯ್ತಿಕ ಮಟ್ಟಕ್ಕೂ, ಸಂಸ್ಕ್ರುತ ಬಿಡಿ, ಯಾವುದೇ ಬಾಶೆಯ ಪುನರುಜ್ಜೀವನಕ್ಕೂ ಯಾವ ಬಾದರಾಯಣ ಸಂಬಂದ ಇರಲಿಕ್ಕೆ ಸಾದ್ಯ?
      ಇತ್ತ ಸಂಸ್ಕ್ರುತ ಅದಿವೇಶನದಲ್ಲಿ ರಾಜಕಾರಣಿ ಸುಬ್ರಮಣಿಯನ್ ಸ್ವಾಮಿಯವರು ಮಾತಾಡುತ್ತಾ, ಸಂಸ್ಕ್ರುತ ಬಾಶೆಯ ’ಉಚ್ಚಾರಣೆಯಿಂದ’ ಮಕ್ಕಳ ಬವುದ್ದಿಕ ಮಟ್ಟ ಹಾಗೂ ವ್ಯಕ್ತಿತ್ವ ವಿಕಸನ ಹೆಚ್ಚುತ್ತದೆ ಎಂದರಂತೆ! ಇದಕ್ಕೇನಂತೀರಿ? ಒಂದು ಬಾಶೆಯ ಉಚ್ಚಾರಣೆಯನ್ನು ಕಲಿಯುವುದರಿಂದ ಬವುದ್ದಿಕ ಮಟ್ಟ ಹಾಗೂ ವ್ಯಕ್ತಿತ್ವ ವಿಕಸನ ಹೆಚ್ಚುತ್ತದಂತೆ! ಬೇಶ್! ಮೆಚ್ಚಿದೆ! ಎಂತಾ ಒಂದು ನಿಗೂಡ ಮಾಂತ್ರಿಕ ಶಕ್ತಿಯ ಬಾಶೆ ಇರಬೇಕು ನಮ್ಮ ಸಂಸ್ಕ್ರುತ ಬಾಶೆ! ಇಂತಾ ಬಾಶೆಯನ್ನು ಹೊರಿಸಿಕೊಂಡಿರುವ ನಾವೇ ಬಾಗ್ಯವಂತರು ಬಿಡಿ!
      ಸಂಸ್ಕ್ರುತದ ಹುಚ್ಚು ಅಬಿಮಾನಿಗಳು ಇಂತಾ ಬಾಲಿಶ ಬುರುಡೆಗಳನ್ನು ಬಿಡುತ್ತಾರಲ್ಲಾ, ಇವರ ಹೇಳಿಕೆಗಳಿಗೆ ಅದಾವ ಸಂಶೋದನೆಗಳ ಆದಾರ ಇದೆ ಎಂದು ನನಗೆ ಅಚ್ಚರಿಯಾಗುತ್ತದೆ. ಸಾಹಿತಿ ಎಸ್. ಎಲ್. ಬಯ್ರಪ್ಪನವರು, ಕನ್ನಡದಲ್ಲಿ ಶೇಕಡ ಎಂಬತ್ತರಶ್ಟು ಸಂಸ್ಕ್ರುತವೇ ಇದೆ, ಆದ್ದರಿಂದ ಕನ್ನಡವನ್ನು ಸರಿಯಾಗಿ ಕಲಿತುಕೊಳ್ಳುವುದಕ್ಕೆ ಸಂಸ್ಕ್ರುತದ ಕಲಿಕೆ ಬೇಕೇ ಬೇಕು ಎಂದು ಇದೇ ಅದಿವೇಶನದಲ್ಲಿ ತಮ್ಮ ಅಬಿಪ್ರಾಯ ಕೊಟ್ಟರಂತೆ. ಇದರ ಬಗ್ಗೆಯೂ ಕೊಂಚ ಯೋಚನೆ ಮಾಡಿ ನೋಡಿ. ಕನ್ನಡ ಇಂದು ಸಂಸ್ಕ್ರುತಮಯವಾಗಿದ್ದರೆ ಅದಕ್ಕೆ ಕಾರಣ ಯಾರು? ತಲತಲಾಂತರದಿಂದ ಸಂಸ್ಕ್ರುತವನ್ನು ಕನ್ನಡದಲ್ಲಿ ಸಾರಾಸಗಟಾಗಿ ತುರುಕಿಕೊಂಡು ಬಂದ ಸಂಸ್ಕ್ರುತದ ದುರಬಿಮಾನಿ ಸಾಹಿತಿಗಳೇ ಕಾರಣರು. ಈ ಮಂದಿ ಮೊದಲು ಕನ್ನಡವನ್ನು ಸಂಸ್ಕ್ರುತಮಯ ಮಾಡುತ್ತಾರೆ. ಬಳಿಕ, ಸಂಸ್ಕ್ರುತ ಕಲಿಯದೇ ಕನ್ನಡ ಕಲಿಯಲು ಬರುವುದಿಲ್ಲ ಎಂದು ಡೋಂಗೀ ಬಿಟ್ಟು, ಸಂಸ್ಕ್ರುತ ವಿಶ್ವವಿದ್ಯಾಲಯ ಮುಂತಾದವು ಬೇಕೇ ಬೇಕು ಎಂದು ಅರಚಾಡಿ, ಬಡಪಾಯಿ ಕನ್ನಡಿಗರ ನೆಲ ಹಣ ಮುಂತಾದ ಸವಲತ್ತುಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಹೇಗಿದೆ ಈ ವರಸೆ?
      ಸಂಸ್ಕ್ರುತದ ದುರಬಿಮಾನಿಗಳು ಸಾಮಾನ್ಯರಲ್ಲ. ಹಿಂದೊಮ್ಮೆ, ’ಅ,ಆ, ಇ,ಈ’ ಕಲಿಯುವ ಒಂದನೇ ತರಗತಿಯ ಮಟ್ಟದ ಸಂಸ್ಕ್ರುತವನ್ನು ಹಯ್‍ಸ್ಕೂಲು ಮಟ್ಟದ ಕನ್ನಡಕ್ಕೆ ಸರಿಸಮನಾಗಿ ತಂದು ಕೂಡಿಸಿ, ಕನ್ನಡಕ್ಕೇ ಬತ್ತಿ ಇಟ್ಟಿದ್ದರು ಈ ಉಂಡ ಮನೆಗೆ ಎರಡು ಬಗೆಯುವ ಮಂದಿ! ಇವರ ಕುತಂತ್ರವನ್ನು ತೆಗೆದುಹಾಕುವುದಕ್ಕೆ ಆಗ ಒಂದು ದೊಡ್ಡ ಹೋರಾಟವನ್ನೇ (ಗೋಕಾಕ್ ಹೋರಾಟ) ನಡೆಸಬೇಕಾಯಿತು ಕನ್ನಡಿಗರು. ಈಗಿನ ದಿನಗಳಲ್ಲಿ ಗೋಕಾಕ್ ಚಳುವಳಿಗೆ ಕಾರಣ ಏನು ಎಂಬುದೇ ಜನಕ್ಕೆ ನೆನಪಿಲ್ಲ. ಇದರ ಜೊತೆಗೆ, ಸಂಸ್ಕ್ರುತಪರ ರಾಜಕೀಯ ಶಕ್ತಿಗಳೂ ಬಲಗೊಂಡಿವೆ. ಹಾಗಾಗಿ, ಸಂಸ್ಕ್ರುತದ ಕಿಡಿಗೇಡಿಗಳು ಮತ್ತೆ ನಮ್ಮ ನಡುವೆ ಗರಿಗೆದರಿಕೊಂಡು ಹಾರಾಡಲು ಶುರುಮಾಡಿವೆ.
      ಸಂಸ್ಕ್ರುತದ ದುರಬಿಮಾನಿಗಳು ಎಶ್ಟೇ ಬಡಾಯಿ ಕೊಚ್ಚಿಕೊಳ್ಳಬಹುದು. ಆದರೆ, ಸತ್ಯ ಏನು? ಸಂಸ್ಕ್ರುತ ಒಂದು ಸತ್ತ ಬಾಶೆ. ಅದರಿಂದ ’ಪ್ರಾಕ್ಟಿಕಲ್’ ಉಪಯೋಗವಿಲ್ಲ. ಕೆಲಸ ಕೊಡುವವರು ಎಂದಾದರೂ, ’ನಿನಗೆ ಸಂಸ್ಕ್ರುತ ಬರುತ್ತದೆಯೆ?’ ಎಂದು ಕೇಳುತ್ತಾರೆಯೆ? ನಿಮಗೆ ಕೆಲಸ ಬೇಕು ಎಂದರೆ, ಇಂಗ್ಲೀಶ್ ಬೇಕು, ನಮ್ಮ ರಾಜ್ಯದಲ್ಲಿ ಕನ್ನಡ ಬೇಕು. ಬರೀ ಸಂಸ್ಕ್ರುತವನ್ನೇ ನೆಚ್ಚಿಕೊಂಡರೆ ಜನಸಾಮಾನ್ಯರಿಗೆ ಒಂದು ಪಯ್ಸೆಯೂ ಹುಟ್ಟುವುದಿಲ್ಲ.
      ಹೀಗೆ ಸಂಸ್ಕ್ರುತದಿಂದ ಯಾವ ಪ್ರಯೋಜನ ಇಲ್ಲದಿದ್ದರೂ, ಅದರ ಅಬಿಮಾನಿಗಳು ಸರ‍್ಕಾರದಿಂದ ಮೇಲಿಂದ ಮೇಲೆ ಸಾರ‍್ವಜನಿಕರ ಸವಲತ್ತುಗಳನ್ನು ಹೇಗೆ ಗಿಟ್ಟಿಸಿಕೊಳ್ಳುತ್ತಾರೆ? ಇದರ ಬಗ್ಗೆ ಸಾಮಾನ್ಯ ಕನ್ನಡಿಗರು ಏಕೆ ಚಕಾರ ಎತ್ತುವುದಿಲ್ಲ? ನನಗನ್ನಿಸುವುದು ಇದು - ಕನ್ನಡಿಗರಿಗೆ ಅವರ ದ್ರಾವಿಡತನದ ಅರಿವಿಲ್ಲದಿರುವುದೇ ಇದಕ್ಕೆ ಕಾರಣ. ಬಹಳಶ್ಟು ಕನ್ನಡಿಗರಿಗೆ, ಸಂಸ್ಕ್ರುತ ಇಂಡೋ-ಯೂರೋಪಿಯನ್ ವರ‍್ಗಕ್ಕೆ ಸೇರಿದ ಒಂದು ಪರಕೀಯ ಬಾಶೆ ಎಂಬುದರ ಅರಿವಿಲ್ಲ. ಕನ್ನಡ, ಸಂಸ್ಕ್ರುತದ ನೆತ್ತರನಂಟಿರದ ಒಂದು ದ್ರಾವಿಡ ಬಾಶೆ ಎಂಬುದರ ಅರಿವಿಲ್ಲ. ಸಂಸ್ಕ್ರುತದ ಅತಿಯಾದ ಬಳಕೆಯಿಂದ ಕನ್ನಡದ ದ್ರಾವಿಡತನವೇ ಅಳಿದು ಹೋಗಿರುವ ಸಂಗತಿಯಂತೂ ಗೊತ್ತೇ ಇಲ್ಲ. ದಾರ್‍ಮಿಕ ಕಾರ‍್ಯಗಳೆಲ್ಲ ಸಂಸ್ಕ್ರುತ ಮಂತ್ರಪಟನೆಯಿಂದಲೇ ಆಗುವುದರಿಂದ, ಸಂಸ್ಕ್ರುತವೆಂದರೆ ನಮ್ಮದೇ ಬಾಶೆ ಎಂದು ತಿಳಿದುಕೊಂಡಿದ್ದಾರೆ ಹಲವರು. ಹಾಗಾಗಿ, ಸಂಸ್ಕ್ರುತಕ್ಕೆ ಸರ‍್ಕಾರದ ಹಣ ಹರಿದಾಗ, ಕನ್ನಡಿಗರಿಗೆ ಅದು ಪರಕೀಯ ಬಾಶೆಯೊಂದಕ್ಕೆ ಹರಿದ ಹಣ ಎನ್ನಿಸುವುದಿಲ್ಲ. ಇದರಿಂದಾಗಿ, ಕನ್ನಡಿಗರ ಮಟ್ಟಿಗೆ ನಿಜಕ್ಕೂ ಕೆಲಸಕ್ಕೆ ಬಾರದ ಈ ಸಂಸ್ಕ್ರುತ ಬಾಶೆಗೆ ಕನ್ನಡಿಗರದೇ ಹಣ ಪೋಲಾಗುತ್ತಿದೆ!
      ಆದ್ದರಿಂದ, ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಕನ್ನಡಿಗರು ನಾವು ಒಟ್ಟಾರೆ ದ್ರಾವಿಡರು ಎನ್ನುವ ನನ್ನಿಯನ್ನು ಕಂಡುಕೊಳ್ಳಬೇಕು. ನಮ್ಮ ಮಕ್ಕಳಿಗೆ ಬದುಕಿನಲ್ಲಿ ಏಳಿಗೆಯನ್ನು ಪಡೆಯಲು ನೆರವಾಗುವ ಕನ್ನಡ ಮತ್ತು ಇಂಗ್ಲೀಶ್ ಬಾಶೆಗಳನ್ನು ಕಲಿಸುವುದಕ್ಕೆ ಮಾತ್ರ ಹಣವನ್ನು ಎರೆಯಬೇಕು. ಉಪಯೋಗಕ್ಕೆ ಬಾರದ ಸಂಸ್ಕ್ರುತದಂತಹ ಹೆರನುಡಿಗಳಿಗೆ ನಮ್ಮ ಸಮಯವನ್ನೂ ದುಡಿಮೆಯನ್ನೂ ಪೋಲು ಮಾಡಬಾರದು. ಕನ್ನಡಕ್ಕೆ ಬೇಕಾಗುವ ಪದಗಳನ್ನು ಕನ್ನಡದಲ್ಲೇ ಮಾಡಿಕೊಂಡು ಕ್ರಮೇಣ ಸಂಸ್ಕ್ರುತದ ಬಳಕೆಯನ್ನು ಕಡಿಮೆ ಮಾಡಬೇಕು. ಕನ್ನಡಕ್ಕೆ ಕನ್ನಡತನವನ್ನೂ ದ್ರಾವಿಡತನವನ್ನೂ ಮತ್ತೆ ತಂದುಕೊಡಬೇಕು. ಕನ್ನಡಕ್ಕೆ, ಸಂಸ್ಕ್ರುತವಾಗಲೀ ಇಲ್ಲ ಬೇರೆ ಯಾವುದೇ ಬಾಶೆಯಾಗಲೀ, ಕೇವಲ ಪೂರಕವೇ ಹೊರತು ಅನಿವಾರ‍್ಯವಲ್ಲ, ಹಾಗಾಗಿ ಅವುಗಳಿಗೆ ನಮ್ಮ ಸವಲತ್ತುಗಳನ್ನು ಸುರಿಯುವುದು ಸಲ್ಲ, ಎಂಬ ಸತ್ಯವನ್ನು ಎತ್ತಿ ತೋರಬೇಕು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶುಕ್ರವಾರ, ಅಕ್ಟೋಬರ್ 25, 2013

ಮಯ್ಬಣ್ಣ ಮತ್ತು ಕೀಳರಿಮೆ

ಕೆಲ ವಾರಗಳ ಹಿಂದೆ NDTV ಕಾಲುವೆಯಲ್ಲಿ ಬರ‍್ಕಾ ದತ್ ಎಂಬವರು ಚರ‍್ಚೆಯ ಕಾರ‍್ಯಕ್ರಮವೊಂದನ್ನು ನಡೆಸಿಕೊಟ್ಟರು. ಮಯ್ಬಣ್ಣವನ್ನು ಬಿಳುಪುಗೊಳಿಸುವ ಕ್ರೀಮುಗಳನ್ನು ಮಾರಾಟ ಮಾಡಲು ಬಳಸಲಾಗುತ್ತಿರುವ ಜಾಹೀರಾತುಗಳ ಬಗ್ಗೆ ಆ ಕಾರ‍್ಯಕ್ರಮದಲ್ಲಿ ಒಂದು ಚರ‍್ಚೆ ನಡೆಯಿತು. ಕಪ್ಪುಚೆಲುವಿನ ನಟಿ ನಂದಿತಾ ದಾಸ್, ಜಾಹೀರಾತುಗಳನ್ನು ತಯಾರಿಸುವ ರಂಗಕರ‍್ಮಿ ಪದಮ್‍ಸೀ ಮುಂತಾದವರು ಚರ‍್ಚೆಯಲ್ಲಿ ಪಾಲ್ಗೊಂಡಿದ್ದರು. ’ಕಪ್ಪು ಮಯ್ಬಣ್ಣದ ಎಳೆಯರಿಗೆ ತಮ್ಮ ಕಪ್ಪು ಬಣ್ಣದಿಂದಾಗಿ ಆತ್ಮವಿಶ್ವಾಸ ಕಡಿಮೆ. ಹಾಗಾಗಿ ಸಮಾಜದಲ್ಲಿ ಅವರು ಮುನ್ನಡೆ ಸಾದಿಸುವುದು ಕಶ್ಟ’ - ಹೀಗೆಂದು ಬಿಳುಪಿಸುವ ಕ್ರೀಮುಗಳ ಜಾಹೀರಾತುಗಳಲ್ಲಿ ಕಪ್ಪು ಬಣ್ಣದ ತರುಣರನ್ನು ಕೀಳಾಗಿ ಬಿಂಬಿಸಲಾಗುತ್ತಿದೆ. ಹೀಗೆ ಬಿಂಬಿಸುವುದು ತಪ್ಪು. ಇಂತಹ ಜಾಹೀರಾತುಗಳನ್ನು ತಯಾರಿಸಕೂಡದು, ಎಂಬುದು ನಂದಿತಾ ದಾಸ್ ಮತ್ತು ಅವರ ಪರ ಮಾತಾಡಿದವರ ವಾದವಾಗಿತ್ತು. ಕಪ್ಪು ಬಣ್ಣದವರಿಗೆ ಕೀಳರಿಮೆ ಇರುವುದು ಸಾಮಾಜಿಕ ಸತ್ಯ. ಇದ್ದುದನ್ನು ಇದ್ದ ಹಾಗೆ ಹೇಳಿದರೆ ತಪ್ಪೇನು? ಎಂಬುದು ಜಾಹೀರಾತುಗಳ ಪರದವರ ಪ್ರತಿವಾದವಾಗಿತ್ತು.
      ಅರ‍್ದ ಗಂಟೆಯ ಆ ಕಾರ‍್ಯಕ್ರಮದುದ್ದಕ್ಕೂ ಕಪ್ಪು ಬಣ್ಣದ ಬಗೆಗಿನ ಹಲವಾರು ಅಂಶಗಳ ಪ್ರಸ್ತಾಪವೇನೋ ಆಯಿತು. ಆದರೆ, ಕಪ್ಪು ಬಣ್ಣಕ್ಕೆ ಹಾಗೂ ಅದರ ಕೀಳುಗಾಣ್ಮೆಗೆ ಮೂಲ ಕಾರಣ ಏನು ಎಂಬುದರ ಬಗ್ಗೆ ಮಾತ್ರ ಹೆಚ್ಚು ಮಾತು ಹೊರಬರಲಿಲ್ಲ. ಒಬ್ಬ ಅತಿತಿಗಳು ಮಾತ್ರ ಕಪ್ಪು ಬಣ್ಣವನ್ನು ಕೀಳಾಗಿ ಕಾಣುವುದಕ್ಕೆ ಮೂಲ ಕಾರಣವನ್ನು ಪರೋಕ್ಶವಾಗಿ ಸೂಚಿಸಿದರು. ಆದರೆ, ಆ ಎಳೆಯನ್ನು ಉಳಿದವರು ಕಯ್ಗೆತ್ತಿಕೊಳ್ಳಲಿಲ್ಲ. ಹಾಗಾಗಿ ಆ ಎಳೆ ಅಲ್ಲಿಗೇ ನಿಂತು ಹೋಯಿತು. ನನ್ನ ಪ್ರಕಾರ, ಯಾವುದೇ ಸಮಸ್ಯೆಯಾಗಲಿ, ಆ ಸಮಸ್ಯೆಗೆ ಮೂಲ ಕಾರಣ ಏನೆಂದು ತಿಳಿದುಕೊಳ್ಳಬೇಕು. ಹಾಗೆ ತಿಳಿದುಕೊಳ್ಳುವುದು ಸಮಸ್ಯೆಯ ಬಗೆಹರಿವಿಗೆ ಸಾಕಶ್ಟು ನೆರವಾಗುತ್ತದೆ.
      ಬಿಳುಪಿಸುವ ಉತ್ಪನ್ನಗಳ ಜಾಹೀರಾತುಗಳು ಸಮಾಜದಲ್ಲಿ ವಾಸ್ತವವಾಗಿ ನಡೆಯುತ್ತಿರುವುದನ್ನೇ ಬಿಂಬಿಸುತ್ತಿವೆ. ನಮ್ಮ ಸಮಾಜದಲ್ಲಿ ಕಪ್ಪು ಬಣ್ಣದವರು ಉಳಿದವರಿಗಿಂತ ಕೊಂಚ ಹೆಚ್ಚು ಅಡೆತಡೆಗಳನ್ನು ಎದುರಿಸುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಶಯ. ಹೆಸರಾಂತ ನಟರಾದ ದುನಿಯಾ ವಿಜಯ್, ಮುರಳಿ ಮುಂತಾದವರೇ ಮೊದಮೊದಲು ಕಪ್ಪು ಬಣ್ಣದ ಕೀಳುಗಾಣ್ಮೆಯಿಂದಾಗಿ ತಮಗಾದ ತೊಂದರೆಗಳ ಬಗ್ಗೆ ಆಗಾಗ್ಗೆ ಹೇಳಿಕೊಂಡಿದ್ದಾರೆ. ಮದುವೆಗಾಗಿ ಗಂಡು ಹೆಣ್ಣುಗಳನ್ನು ಹೊಂದಿಸುವ ’ಮೇಟ್ರಿಮೋನಿಯಲ್’ ಕಾಲಮ್ಮುಗಳಲ್ಲಿನ ಬೇಡಿಕೆಗಳನ್ನು ನೋಡಿದರೆ, ಕಪ್ಪು ಬಣ್ಣ ಯಾರಿಗೂ ಬೇಡ ಎನ್ನುವುದಕ್ಕೆ ಪುರಾವೆ ಕೂಡಲೇ ದೊರೆಯುತ್ತದೆ. ವಾಸ್ತವ ಹೀಗಿರುವಾಗ ಕಪ್ಪು ಬಣ್ಣದ ಮಂದಿಯಲ್ಲಿ ಕೀಳರಿಮೆ ಹೇಗೆ ಮೂಡದೇ ಇದ್ದೀತು? ಈಗ ಕೇಳ್ವಿ ಇದು - ಈ ಕೀಳರಿಮೆಗೆ ಪರಿಹಾರ ಏನು?
      ಬಿಳಿಗೆಯ್ವ ಉತ್ಪನ್ನಗಳ ಬಳಕೆಯಿಂದ ಕೀಳರಿಮೆ ಕೊಂಚ ತಗ್ಗಬಹುದು. ಆದರೆ, ಕೊಂಚ ಮಾತ್ರ. ಅದೂ ಅಲ್ಲದೆ, ಒಂದೇ ಸವನೆ ಅವನ್ನು ಬಳಸುವುದರಿಂದ ಆರೋಗ್ಯ ಕೆಡಬಹುದು. ಒಳ್ಳೆಯ ಶಿಕ್ಶಣ ಹಾಗೂ ದುಡಿಯುವ ಆರ‍್ಪನ್ನು ಪಡೆದುಕೊಳ್ಳುವುದು ಇನ್ನೊಂದು ಪರಿಹಾರ. ಏಕೆಂದರೆ, ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವ ಸಾಮರ‍್ತ್ಯ, ಯಾರಿಗೇ ಆಗಲಿ, ಒಟ್ಟಾರೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇನ್ನೂ ಒಂದು ಪರಿಹಾರ ಇದೆ. ಆದರೆ, ಅದರ ಬಳಕೆ ನಮ್ಮ ದೇಶದಲ್ಲಿ ಆಗುತ್ತಿಲ್ಲ. ಏಕೆಂದರೆ, ಅದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅದು ತಿಳಿಯದಂತೆ ಮಾಡುವ ಪ್ರಯತ್ನ ಕೆಲವರಿಂದ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗಿನ ದಿನಗಳಲ್ಲಿ ಈ ಕೆಲವರಿಗೆ ರಾಜಕೀಯ ಬೆಂಬಲವೂ ದೊರಕುತ್ತಿದೆ. ಅದೇನೇ ಇರಲಿ, ಆ ಇನ್ನೊಂದು ಪರಿಹಾರ ಏನೆಂದರೆ, ಕೆಲವರಿಗೆ ಕಪ್ಪು ಕೆಲವರಿಗೆ ಬಿಳುಪು ಬಣ್ಣ ಇರುವುದಕ್ಕೆ ವಾಸ್ತವ ಕಾರಣ ಏನು ಎಂಬುದರ ಅರಿವು. ಈ ಅರಿವು ಅಮೆರಿಕದ ಕಪ್ಪು ಸಮುದಾಯಕ್ಕೆ ತಿಳಿದಿದೆ. ನಮ್ಮಲ್ಲಿ ಬಹುತೇಕ ಮಂದಿಗೆ ಈ ಅರಿವಿಲ್ಲ. ಈ ಅರಿವಿರುವುದರಿಂದ ಹಾಗೂ ತಮ್ಮ ಚರಿತ್ರೆಯ ಅರಿವೂ ಇರುವುದರಿಂದ ಅಮೆರಿಕದ ಬಹುತೇಕ ಕಪ್ಪು ಜನಾಂಗೀಯರು ಸಾಮಾಜಿಕ ಹಾಗೂ ರಾಜಕೀಯ ವಿಶಯಗಳಲ್ಲಿ ಒಗ್ಗಟ್ಟಿನಿಂದ ನಡೆದುಕೊಳ್ಳುತ್ತಾರೆ. ಅವರಲ್ಲಿ ಕೂಡ ನಮ್ಮಲ್ಲಿರುವಂತೆಯೆ ಕಪ್ಪು ಬಣ್ಣದ ಕೀಳರಿಮೆ ಇದೆ. ಆದರೆ, ಅರಿವು ಮತ್ತು ಅರಿವಿನಿಂದಾದ ಒಗ್ಗಟ್ಟು, ಅವರಲ್ಲಿ ಕೀಳರಿಮೆಯನ್ನು ಸಾಕಶ್ಟು ಮಟ್ಟಿಗೆ ತಗ್ಗಿಸಿದೆ. ಹಾಗೆ ನೋಡಿದರೆ, ಅವರು ಅಲ್ಲಿ ಅಲ್ಪಸಂಕ್ಯಾತರು. ನಮ್ಮ ನಾಡಿನಲ್ಲಿ ಕಪ್ಪು ಬಣ್ಣದವರೇ ಹೆಚ್ಚು. ಆದ್ದರಿಂದ, ನಮ್ಮ ಕಪ್ಪು ಬಣ್ಣಕ್ಕೆ ಸರಿಯಾದ ಕಾರಣವನ್ನು ತಿಳಿದುಕೊಳ್ಳುವುದರಿಂದ ಅದರ ಬಗೆಗಿನ ಕೀಳರಿಮೆಯನ್ನು ಇನ್ನೂ ಹೆಚ್ಚಿನ ಮಟ್ಟಿಗೆ ನಾವು ಕಡಿಮೆಗೊಳಿಸಬಹುದು. ಹಾಗಾದರೆ, ಯಾವುದು ಈ ಸರಿಯಾದ ತಿಳಿವಳಿಕೆ?
      ಹಿಂದಣ ಜನ್ಮದ ಕರ‍್ಮ, ಯಾವುದೋ ಶಾಪದ ಪಲ, ದುರದ್ರುಶ್ಟ, ದೇವರ ಇಚ್ಚೆ - ಹೀಗೇ ಮುಂತಾದುವು ನಮ್ಮ ಮಂದಿ, ’ಮಯ್ಬಣ್ಣ ಏಕೆ ಕಪ್ಪಾಗಿರುತ್ತದೆ?’ ಎನ್ನುವುದಕ್ಕೆ ಕೊಡುವ ಉತ್ತರಗಳು! ಬಸುರಿ ಹೆಣ್ಣುಮಗಳು ಕೇಸರಿ ಬೆರೆಸಿದ ಹಾಲನ್ನು ನಾಳುನಾಳೂ ಕುಡಿಯುತ್ತಿದ್ದರೆ ಹುಟ್ಟುವ ಮಗು ಬೆಳ್ಳಗಿರುತ್ತದೆ ಎಂಬ ನಂಬಿಕೆಯೂ ಇದೆಯಂತೆ! ಹೀಗೆಂದು ಶ್ರೀಮತಿ ಸಿ.ಜಿ.ಮಂಜುಳಾ ಅವರು ಪ್ರಜಾವಾಣಿಯ (ಸೆಪ್ಟಂಬರ್ ೨೪, ೨೦೧೩) ಅವರ ’ಕಡೆಗೋಲು’ ಅಂಕಣದಲ್ಲಿ ಬರೆದಿದ್ದಾರೆ. ಇಂತಹ ಅರಿವಿಲಿ ನಂಬಿಕೆಗಳಿದ್ದರೆ ಕಪ್ಪು ಬಣ್ಣದವರಿಗೆ ಕೀಳರಿಮೆ ಬರದೇ ಇನ್ನೇನು? ವಾಸ್ತವವಾಗಿ, ನಮ್ಮ ದೇಶದಲ್ಲಿ ಕಪ್ಪು ಮತ್ತು ಬಿಳಿ ಮಯ್ಬಣ್ಣಗಳು ಕಂಡುಬರುವುದಕ್ಕೆ ಕಾರಣ ಕಪ್ಪು ಮತ್ತು ಬಿಳಿಯ ಬೇರೆಬೇರೆ ಬುಡಕಟ್ಟುಗಳು ನೆಲೆಸಿರುವುದರಿಂದ. ಕಪ್ಪು ಚಾಯೆಗೆ ಕಾರಣ ನೆಗ್ರಿಟೋ, ಮುಂಡ ಮತ್ತು ದ್ರಾವಿಡ ಜನಾಂಗಗಳು. ಬಿಳಿ ಚಾಯೆಗೆ ಕಾರಣ ಆರ‍್ಯ ಮತ್ತು ಮಂಗೋಲ ಬುಡಕಟ್ಟುಗಳು. ವಿದ್ವಾಂಸರು ನಡೆಸಿದ ಸಂಶೋದನೆಯಿಂದ ತಿಳಿದು ಬಂದ ಈ ಅರಿವನ್ನು ಇತ್ತೀಚಿನ DNA ಅದ್ಯಯನಗಳೂ ಎತ್ತಿ ಹಿಡಿದಿವೆ.
      ಇನ್ನು ಕನ್ನಡಿಗರೂ ಸೇರಿದಂತೆ ತೆಂಕಣ ಬಾರತೀಯರ ಬಗ್ಗೆ ಹೇಳುವುದಾದರೆ, ನಮ್ಮಲ್ಲಿನ ಮಯ್ಬಣ್ಣ ವಯ್ವಿದ್ಯಕ್ಕೆ ಹೆಚ್ಚಾಗಿ ದ್ರಾವಿಡ ಮತ್ತು ಆರ‍್ಯ ಬುಡಕಟ್ಟುಗಳ ಬೆರಕೆಯೇ ಕಾರಣ. ಇದಕ್ಕೆ ಹೇರಳವಾದ ವಯ್‍ಜ್ನಾನಿಕ ಆದಾರವನ್ನು ನಮ್ಮ ಬಳಗದ ಕಯ್ಪಿಡಿ - ಕನ್ನಡಿಗರೂ ದ್ರಾವಿಡರೆ - ಓದುಗೆಯಲ್ಲಿ ಒದಗಿಸಲಾಗಿದೆ. ಇದು ನಮ್ಮ ಮಯ್ಬಣ್ಣದ ಸತ್ಯ. ತೆಂಕಣದವರಲ್ಲಿ, ಕನ್ನಡಿಗರೂ ಸೇರಿದಂತೆ, ದ್ರಾವಿಡ ಲಕ್ಶಣದ ಕಪ್ಪು ಬಣ್ಣದವರೇ ಹೆಚ್ಚು (ಇದೇ ಕಾರಣಕ್ಕಾಗೇ ತೆಂಕಣದವರು ಆಡುವ ನುಡಿಗಳು ದ್ರಾವಿಡ ನುಡಿಗಳಾಗಿರುವುದು). ಆದರೆ, ಅವರಲ್ಲಿ ಹೆಚ್ಚು ಮಂದಿಗೆ ಈ ಸತ್ಯ ತಿಳಿದಿಲ್ಲ. ಅಶ್ಟೇ ಅಲ್ಲ, ಸಾವಿರಾರು ವರ‍್ಶಗಳಿಂದ ಆರ‍್ಯ ನಡೆನುಡಿಗಳ ಅಟ್ಟುಳಿಯಿಂದ ತಮ್ಮ ನಡೆನುಡಿಗಳಿಗೆ ಆಗಿರುವ ಕೆಡುಕಿನ ಬಗ್ಗೆಯೂ ತಿಳಿದಿಲ್ಲ, ಈ ಎರಡೂ ವಿಶಯಗಳನ್ನು ಅರಿತುಕೊಂಡರೆ, ದ್ರಾವಿಡರಲ್ಲಿ ಒಗ್ಗಟ್ಟು ಮೂಡುತ್ತದೆ. ಒಗ್ಗಟ್ಟಿನಿಂದ ಸಾಮಾಜಿಕ ಮತ್ತು ರಾಜಕೀಯ ಕಸುವು ಹೆಚ್ಚುತ್ತದೆ. ನಾವೇ ಬಹುಸಂಕ್ಯಾತರೆಂಬ ನೆಮ್ಮದಿಯ ಬಲ ಬೆಳೆಯುತ್ತದೆ. ಮಯ್ಬಣ್ಣವೂ ಸೇರಿದಂತೆ ಎಲ್ಲಾ ಬಗೆಯ ಕೀಳರಿಮೆಗಳೂ ತಾವಾಗೇ ಕಡಿಮೆಯಾಗುತ್ತವೆ. ಇದು ನನ್ನ ನಂಬುಗೆ.
      ಕಪ್ಪು ಬಣ್ಣದ ಕೀಳರಿಮೆ ಎಂದೂ ನೆರೆಯಾಗಿ ಅಳಿಯದಿರಬಹುದು. ಮಾನವರ ಕಣ್ಣಿಗೆ ಸ್ವಾಬಾವಿಕವಾಗಿಯೇ ಬಿಳಿ ಮಯ್ಬಣ್ಣ ಒಟ್ಟಾರೆ ರುಚಿಸಬಹುದು. ಆ ಸಾದ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗೆಯೇ, DNA ಅರಿವು ನಾಗಾಲೋಟದಲ್ಲಿ ಬೆಳೆಯುತ್ತಿರುವ ಈ ದಿನಗಳಲ್ಲಿ, ಬೇಕೆನಿಸಿದ ಮಯ್ಪರಿ ಇರುವ designer ಮಕ್ಕಳನ್ನು ಪಡೆದುಕೊಳ್ಳುವ ಕಾಲ ದೂರವಿರದ ಆದುನಿಕ ಯುಗದಲ್ಲಿ, ಮಯ್ಬಣ್ಣ, ಬವಿಶ್ಯದಲ್ಲಿ ಒಂದು ಸಮಸ್ಯೆಯೇ ಆಗದಿರುವ ಇನ್ನೊಂದು ಸಾದ್ಯತೆಯೂ ಇದೆ. ಅದೇನೇ ಇರಲಿ, ಈಗಿನ ಮಟ್ಟಿಗಂತೂ, ನಮ್ಮ ಬಗ್ಗೆ ನಾವು ಸರಿಯಾಗಿ ತಿಳಿದುಕೊಂಡು, ಆ ತಿಳಿವಿನ ಬಲದಿಂದ ನಮ್ಮನ್ನು ಕಾಡುವ ದವುರ‍್ಬಲ್ಯಗಳನ್ನು ಕಳೆದುಕೊಳ್ಳುವುದು ಒಳ್ಳೆಯದೆನಿಸುತ್ತದೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಗುರುವಾರ, ಅಕ್ಟೋಬರ್ 10, 2013

’ಎನ್ನಡ ಎಕ್ಕಡ’ vs ’ಕ್ಯಾ ಹಯ್ ಕಹಾ ಹಯ್’

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಇತ್ತೀಚೆಗೆ ಚೆನ್ನಯಿಯಲ್ಲಿ ನಮ್ಮ ದೇಶದ ಚಿತ್ರೋದ್ಯಮ ನೂರು ವರ‍್ಶಗಳನ್ನು ಪೂರಯ್ಸಿದ ಸಂತಸಕ್ಕಾಗಿ ತಮಿಳುನಾಡಿನ ಸರ‍್ಕಾರದ ವತಿಯಿಂದ ಸಡಗರದ ಹಬ್ಬವೊಂದನ್ನು ನಡೆಸಲಾಯಿತು. ಹಬ್ಬದಲ್ಲಿ ತೆಂಕಣ ಬಾರತದ ಎಲ್ಲಾ ಬಾಶೆಗಳ ಚಿತ್ರಕರ‍್ಮಿಗಳು ಪಾಲ್ಗೊಂಡಿದ್ದರು. ಹಬ್ಬವೇನೋ ಸಂಬ್ರಮದಿಂದ ನಡೆದು ಮುಕ್ತಾಯವಾಯಿತು. ಆದರೆ, ಅದು ಮುಗಿದ ಮಾರನೇ ದಿನದಿಂದಲೇ ಶುರುವಾಯಿತು ನೋಡಿ ನಮ್ಮ ಕನ್ನಡ ಟೀವೀ ಕಾಲುವೆಗಳಲ್ಲಿ ಒಂದು ಜೋರು ಬೊಬ್ಬೆ! ಅದೇನೆಂದರೆ, ಉತ್ಸವದಲ್ಲಿ ಕನ್ನಡದ ನಟನಟಿಯರಿಗೆ ಆಯೋಜಕರಾದ ತಮಿಳರಿಂದ ಅವಮಾನವಾಯಿತು ಎಂದು. ’ಹಿರಿಯ ನಟಿಯರಾದ ಲೀಲಾವತಿ, ಬಾರತಿ, ಜಯಂತಿ ಮುಂತಾದವರಿಗೆ ಸರಿಯಾದ ವಾಹನ ಸವುಕರ‍್ಯವನ್ನು ಏರ‍್ಪಡಿಸದೆ ಅವರನ್ನು ಬಿಸಿಲಲ್ಲಿ ನಡೆಯುವಂತೆ ಮಾಡಿದರು. ಕನ್ನಡಿಗ ಅತಿತಿಗಳನ್ನು ಆಯೋಜಕರು ಯಾರೋ ಕಡಲೇಕಾಯಿ ಮಾರುವವರನ್ನು ಕರೆಯುವರಂತೆ ಕಯ್ ಸನ್ನೆ ಮಾಡಿ ಕರೆಯುತ್ತಿದ್ದರು. ನಟಿ ಜಯಮಾಲಾರನ್ನು ಸಬೆಯಲ್ಲಿ ಮೊದಲು ಮುಂದಿನ ಸಾಲಿನಲ್ಲಿ ಕೂರಿಸಿ, ಬಳಿಕ ಹಿಂದಿನ ಸಾಲಿಗೆ ಏಕಾಏಕಿ ಕಳಿಸಿದರು’ -  ಹೀಗೆ ಕೆಲವು ಆಪಾದನೆಗಳು ಕೇಳಿಬಂದವು. ಮೊದಮೊದಲು ಆಪಾದನೆಗಳನ್ನು ಅಲ್ಲಗಳೆಯುವ ಹೇಳಿಕೆಗಳು ಯಾರಿಂದಲೂ ಬರಲಿಲ್ಲ. ಆದರೆ, ಒಂದೆರಡು ದಿನಗಳ ಬಳಿಕ, ಸಾ. ರಾ. ಗೋವಿಂದು ಮತ್ತು ಎಸ್. ನಾರಾಯಣ್ ಅವರು ಆಪಾದನೆಗಳ ಸತ್ಯತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. ನಟ ಶ್ರೀನಾತರು, ’ನನಗೆ ಅವಮಾನ ಆಯಿತು ಅಂತ ಹೇಳಿಕೊಂಡಿದ್ದೇನೆ ಅಂತ ಊಹಾಪೋಹ ಎದ್ದಿದೆ. ಆದರೆ, ನಾನು ಹಾಗೆ ಹೇಳಿಕೊಂಡೇ ಇಲ್ಲ’, ಎಂದು ಅವರೇ ಸ್ವತಹ ಕಾರ‍್ಯಕ್ರಮವೊಂದಕ್ಕೆ ಕರೆ ಮಾಡಿ ತಿಳಿಸಿದರು. ಒಟ್ಟಿನಲ್ಲಿ, ಈ ಚರ‍್ಚೆಗಳ ಅಬ್ಬರ ಮುಗಿಯುವಶ್ಟರಲ್ಲಿ, ಚೆನ್ನಯಿಯಲ್ಲಿ ನಮ್ಮ ಮಂದಿಗೆ ನಿಜವಾಗಿಯೂ ಅವಮಾನ ಆಯಿತೋ ಇಲ್ಲ ನಮ್ಮವರು ಅವಮಾನ ಆಯಿತು ಎಂದು ಕಲ್ಪನೆ ಮಾಡಿಕೊಂಡರೋ ಎಂದು ಎಲ್ಲರೂ ಅನುಮಾನ ಪಡುವಂತಾಯಿತು.
      ನನಗೆ ಅನಿಸುವುದು ಇದು - ಬಹುಶಹ ನಮ್ಮವರಲ್ಲಿ ಕೆಲವರಿಗೆ ಸಣ್ಣಪುಟ್ಟ ಅವಮಾನಗಳು ಆಗಿವೆ. ಏಕೆಂದರೆ, ನಾವು ಸುಮ್ಮ ಸುಮ್ಮನೆ ಸುಳ್ಳು ಹೇಳುವವರಲ್ಲ. ಒಂದುವೇಳೆ ಆಯೋಜಕರು ಬೇಕೆಂತಲೇ ಈ ಅವಮಾನಗಳನ್ನು ಎಸಗಿದ್ದರೆ ಅವರ ನಡತೆ ನಿಜಕ್ಕೂ ಕಂಡನೀಯ. ನಿಜವಾಗಿಯೂ ಅವಮಾನವಾಗಿದ್ದರೆ, ಅದರ ಬಗ್ಗೆ ದೂರುವುದರಲ್ಲಿ ತಪ್ಪಿಲ್ಲ.
      ಚೆನ್ನಯಿಯಲ್ಲಿ ನಿಜವಾಗಿಯೂ ಏನು ನಡೆಯಿತೋ, ಅದು ಒತ್ತಟ್ಟಿಗೆ ಇರಲಿ. ಈ ಸಂದರ‍್ಬದಲ್ಲಿ ನಾವು ನಿಜಕ್ಕೂ ಯೋಚನೆ ಮಾಡಬೇಕಾಗಿರುವುದು ನಮ್ಮದೇ ಸ್ವಬಾವದ ಬಗ್ಗೆ. ’ನೆರೆಯವರಿಂದ ನಮಗೆ ಅವಮಾನವಾಯಿತು’ ಎಂದು ನಾವು ದೂರುತ್ತಿರುವುದು ಇದೇ ಮೊದಲಲ್ಲ. ಅಗಾಗ್ಗೆ ನಾವು ಈ ಬಗೆಯ ದೂರುಗಳನ್ನು ಮಾಡುತ್ತಲೇ ಇರುತ್ತೇವೆ. ನನಗೆ ಈ ವಿಶಯದಲ್ಲಿ ಸೋಜಿಗ ಎನಿಸುವುದು ಇದು - ಬರೀ ನೆರೆಯವರಶ್ಟೇ ನಮಗೆ ಅವಮಾನ ಮಾಡುವುದಿಲ್ಲ. ನಮ್ಮ ನಡುವೆ ಬದುಕುತ್ತಿರುವ ಹೆಚ್ಚುಕಡಿಮೆ ಎಲ್ಲಾ ಬಾಶಿಕರೂ ನಮಗೆ ದಿನನಿತ್ಯ ಅವಮಾನ ಮಾಡುತ್ತಲೇ ಇರುತ್ತಾರೆ. ಆದರೆ, ನಾವು ಸಾಮಾನ್ಯವಾಗಿ ನೆರೆಯವರನ್ನು ದೂರುತ್ತೇವೆಯೇ ಹೊರತು ಉಳಿದವರನ್ನು ದೂರುವುದಿಲ್ಲ. ಉದಾಹರಣೆಗೆ, ನಮ್ಮ ನೆಲದಲ್ಲಿ ಜಾಂಡಾ ಊರಿರುವ ಹಿಂದೀವಾಲಾಗಳನ್ನು ತೆಗೆದುಕೊಳ್ಳಿ. ಅವರಲ್ಲಿ ಎಶ್ಟು ಮಂದಿ ಕನ್ನಡ ಮಾತಾಡುತ್ತಾರೆ? ಮನೆ ಕೆಲಸದವರು, ತರಕಾರಿ ಗಾಡಿಯವರು, ಬಸ್ ಕಂಡಕ್ಟರರು, ಅಂಗಡಿಯವರು, ನೆರೆಹೊರೆಯವರು, ಬೀದಿಯ ಸಾರ‍್ವಜನಿಕರು, ಸಹೋದ್ಯೋಗಿಗಳು - ಈ ಎಲ್ಲರ ಬಾಯಲ್ಲೂ ಮುಲಾಜೇ ಇಲ್ಲದೆ ಹಿಂದೀ ಹೊರಡಿಸುತ್ತಾರೆ ನಮ್ಮ ಹಿಂದೀವಾಲರು! ನಮ್ಮ ನೆಲದಲ್ಲಿ ನೆಲೆ ನಿಂತ ಹಿಂದೀವಾಲರು ನಮ್ಮ ನುಡಿಯನ್ನು ಕಲಿತು ಆಡಬೇಕು. ಹಾಗೆ ನಡೆದುಕೊಳ್ಳದೆ, ಅವರ ಹಿಂದಿಯಲ್ಲೇ ನಮ್ಮನ್ನೂ ಮಾತಾಡುವಂತೆ ಮಾಡುವುದು ನಮಗೆ ಎಸಗುವ ಅವಮಾನ ತಾನೆ? ಆದರೆ, ನಾವು ಅದನ್ನು ಅವಮಾನ ಎಂದುಕೊಳ್ಳುವುದಿಲ್ಲ! ಉತ್ತರ ಬಾರತದ ಅನೇಕ ಪುಡಾರಿಗಳು ನಮ್ಮಲ್ಲಿಗೆ ಬಂದು ಹಿಂದಿಯಲ್ಲಿ ಬಾಶಣ ಜಡಿದು ಹೋಗುತ್ತಾರೆ. ಅದೂ ಅವಮಾನವೇ. ಆದರೆ, ಅದನ್ನೂ ನಾವು ಅವಮಾನ ಎಂದು ತೆಗೆದುಕೊಳ್ಳುವುದಿಲ್ಲ! ಅದೇ ನಮ್ಮ ನೆರೆಯ ತಮಿಳರೋ ತೆಲುಗರೋ ಎಡವೆಟ್ಟು ಮಾಡಿದರೆ, ’ಅಯ್ಯೋ ನಮಗೆ ಅವಮಾನ ಆಯ್ತು’ ಎಂದು ಬೊಬ್ಬೆ ಇಡುತ್ತೇವೆ!  ಈ ವಿಚಿತ್ರಕ್ಕೆ ಏನು ಹೇಳುವುದು, ಸ್ವಾಮೀ?
      ’ನಮಗೆ ಎನ್ನಡಾ ಎಕ್ಕಡಾ ಅನ್ನೋರು ಬೇಡ’ - ಈ ಸಾಲನ್ನು ಕನ್ನಡ ಚಿತ್ರಗಳಲ್ಲಿ ಪಾತ್ರದಾರಿಗಳು ನುಡಿಯುವುದನ್ನು ನಾನು ನೋಡಿದ್ದೇನೆ. ಇದರ ಅರ‍್ತ, ’ನಮಗೆ ತಮಿಳರೂ ತೆಲುಗರೂ ಬೇಡ’ ಎಂದು. ಆದರೆ, ’ನಮಗೆ ಕ್ಯಾ ಹಯ್, ಕಹಾ ಹಯ್ ಅನ್ನೋರು ಬೇಡ’ ಎನ್ನುವ ಸಿನಿಮಾ ಡಯಲಾಗನ್ನು ನಾನು ಇದುವರೆಗೆ ಕೇಳೇ ಇಲ್ಲ. ಹೇಗಿದೆ ನೋಡಿ ಈ ತಮಾಶೆ! ನಮಗೆ ನಮ್ಮಂತೆ ದ್ರಾವಿಡರೇ ಆದ ತಮಿಳರು ತೆಲುಗರು ಬೇಡ. ಆದರೆ, ನಮ್ಮನ್ನೆಲ್ಲಾ ಒಟ್ಟಿಗೆ ಸೇರಿಸಿ, ’ಮದ್ರಾಸಿ’ ಎಂದು ಹೀಯಾಳಿಸುವ ಹಿಂದೀವಾಲರು ಮಾತ್ರ ಬೇಡ ಎನಿಸುವುದಿಲ್ಲ!
      ಇಂತಹ ಪರಿಸ್ತಿತಿಗೆ ನಮ್ಮಲ್ಲಿ ದ್ರಾವಿಡತನ ಇಲ್ಲದಿರುವುದೇ ಕಾರಣ. ಕಾವೇರಿ ಹೊಳೆ, ಕರುನಾಡು ಮತ್ತು ತಮಿಳುನಾಡು - ಈ ಎರಡೂ ರಾಜ್ಯಗಳಲ್ಲಿ ಹರಿಯುವುದರಿಂದ, ನಮಗೂ ತಮಿಳರಿಗೂ ಜಗಳ ತಪ್ಪಿದ್ದಲ್ಲ. ಕಾವೇರಿಯ ನೀರು ಇಬ್ಬರಿಗೂ ಸಾಕಾಗುವುದಿಲ್ಲ. ಈ ಕೊರತೆಯನ್ನೇ ಎರಡೂ ಕಡೆಗಳಲ್ಲಿ ಬಂಡವಾಳವಾಗಿ ಬಳಸಿಕೊಂಡು ಇಬ್ಬರ ಮದ್ಯೆ ವಯ್ಮನಸ್ಯ ತಂದಿಕ್ಕುವ ಪುಡಾರಿಗಳಿಗೇನು ಕೊರತೆಯೇ? ಈ ಕಾರಣಕ್ಕಾಗಿ ನಮ್ಮ ಹಾಗೂ ತಮಿಳರ ನಡುವೆ ಸವ್‍ಹಾರ‍್ದ ಮೂಡುವುದು ಕೊಂಚ ಕಶ್ಟ. ಪದೇ ಪದೇ ಮಳೆಯ ಪ್ರಮಾಣದಲ್ಲಿ ಕೊರತೆಯಾದರೆ, ಕ್ರಿಶ್ಣಾ ನದಿಯ ಸಲುವಾಗಿ ನಮಗೂ ತೆಲುಗರಿಗೂ ಕೂಡ ಮನಸ್ತಾಪ ಉಂಟಾಗಬಹುದು. ಈ ರೀತಿ ಆಗುವುದು ನಮಗಶ್ಟೇ ಅಲ್ಲ, ಇಡೀ ತೆಂಕಣ ಬಾರತಕ್ಕೇ ಕೆಟ್ಟದ್ದು. ಜನಸಂಕ್ಯೆ ತಗ್ಗಿ ಹಿಡಿತಕ್ಕೆ ಬರುವವರೆಗೂ ಈ ಸಮಸ್ಯೆಗಳಿಗೆ ಬಗೆಹರಿವಿಲ್ಲ. ಆದರೆ, ಸಮಸ್ಯೆಗಳ ತೀಕ್ಶ್ಣತೆಯನ್ನು ದ್ರಾವಿಡತನದ ಅರಿವನ್ನು ಬೆಳೆಸಿಕೊಳುವುದರ ಮೂಲಕ ಕೊಂಚ ಕಡಿಮೆ ಮಾಡಬಹುದು. ’ದಕ್ಶಿಣದವರಾದ ನಾವೆಲ್ಲರೂ ದ್ರಾವಿಡ ಹಿನ್ನೆಲೆಯವರು’ ಎಂಬ ಅರಿವನ್ನು ಮೂಡಿಸಿಕೊಂಡರೆ, ಕಡೇ ಪಕ್ಶ, ಸಣ್ಣಪುಟ್ಟ ಕಾರಣಗಳಿಂದಾಗಿ ನಮ್ಮ ನಮ್ಮಲ್ಲಿ ಮನಸ್ತಾಪ ಉಂಟಾಗುವುದಾದರೂ ನಿಲ್ಲುತ್ತದೆ. ದ್ರಾವಿಡತನದ ಬಿಗಿಯಾದ ಅಡಿಗಲ್ಲನ್ನು ಹಾಕಿಕೊಂಡರೆ, ಎಲ್ಲರ ಮೇಲೆ ಹಿಂದೀ ಹೇರುವ ಉತ್ತರದವರ ಕೆಟ್ಟ ಚಾಳಿಗೂ ನಾವು ತಕ್ಕ ಎದುರನ್ನು ಒಡ್ಡುತ್ತೇವೆ. ಹಾಗಾಗಿ, ಹೇಗೆ ನೋಡಿದರೂ, ದಕ್ಶಿಣದವರಾದ ನಾವು ದ್ರಾವಿಡತನವನ್ನು ಮಯ್ಗೂಡಿಸಿಕೊಂಡರೇ ಒಳ್ಳೆಯದು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಬುಧವಾರ, ಸೆಪ್ಟೆಂಬರ್ 25, 2013

ವಿಶ್ವಕ್ಕೇ ಅಣ್ಣ ನಮ್ಮ ಬಸವಣ್ಣ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಮರಾಟರಿಗೆ ಶಿವಾಜಿ ಹೇಗೋ, ತಮಿಳರಿಗೆ ವಳ್ಳುವರ್ ಹೇಗೋ, ತೆಲುಗರಿಗೆ ವೇಮನ ಹೇಗೋ, ಹಾಗೆ ಕನ್ನಡರಿಗೆ ಬಸವಣ್ಣ ’ಸಾಂಸ್ಕ್ರುತಿಕ’ ನಾಯಕನಾದರೆ, ಕನ್ನಡಿಗರಲ್ಲಿ ಒಮ್ಮತ ಮೂಡುತ್ತದೆ ಎಂದು ಕನ್ನಡ ಗೆಳೆಯರ ಬಳಗದ ರಾ.ನಂ.ಚಂದ್ರಶೇಕರರು ಇತ್ತೀಚೆಗೆ ಕಾರ‍್ಯಕ್ರಮವೊಂದರಲ್ಲಿ ಸಲಹೆಯೊಂದನ್ನು ಮುಂದಿಟ್ಟಿದ್ದಾರೆ. ಹೀಗೆಂದು ಸೆಪ್ಟೆಂಬರ್ ಒಂದರ ಪ್ರಜಾವಾಣಿ ಸುದ್ದಿಹಾಳೆಯಲ್ಲಿ ಪ್ರಕಟವಾಗಿದೆ. ರಾ.ನಂ.ಚಂದ್ರಶೇಕರರ ಈ ಸಲಹೆಯನ್ನು ಕಂಡಾಗ, ’ಬಸವಣ್ಣ ಎಂತಹ ಮಹಾನ್ ವ್ಯಕ್ತಿ! ಇಡೀ ವಿಶ್ವಕ್ಕೇ ಆದರ‍್ಶಪ್ರಾಯನಾಗಿರಬೇಕಾದ ಬಸವಣ್ಣನನ್ನು ಆತನ ನೆಲದಲ್ಲೇ ’ನಾಡ ಲಾಂಚನ’ ವ್ಯಕ್ತಿಯಾಗಿ ಗುರುತಿಸಲಾಗಿಲ್ಲವಲ್ಲ!’ ಎಂದು ನನಗೆ ಕೊಂಚ ಬೇಸರವಾಯಿತು.
      ಪ್ರಾಪಂಚಿಕವಾಗಿ ನೋಡುವುದಾದರೆ, ಬಸವಣ್ಣನಿಗೆ ಯಾವ ಕೊರತೆ ಇತ್ತು? ತಾರುಣ್ಯದಲ್ಲೇ ಹಿರಿಯ ಅದಿಕಾರದ ಪದವಿ ದೊರೆತಿತ್ತು. ದೊರೆ ಬಿಜ್ಜಳನ ಇಡೀ ಬಂಡಾರದ ಪಾರುಪತ್ಯೆಯ ಹೊಣೆಯೇ ಆತನ ಮೇಲಿತ್ತು. ದೊರೆಯ ಮೆಚ್ಚುಗೆ, ಸಮಾಜದ ಮನ್ನಣೆ ಎರಡೂ ಅವನಿಗಿತ್ತು. ಎತ್ತರದ ಪದವಿ ತಂದ ಸಿರಿಸಂಪತ್ತು ಮಾತ್ರವಲ್ಲದೆ ಅವನಿಗೆ ತನ್ನನ್ನು ಚಚ್ಚರದಿಂದ ಅನುಸರಿಸುವ ಅಕ್ಕರೆಯ ಕುಟುಂಬವೂ ಇತ್ತು. ಒಬ್ಬ ಮನುಶ್ಯನಿಗೆ ಇದಕ್ಕಿಂತ ಬೇರೆ ಇನ್ನೇನು ಬೇಕು? ಬಸವಣ್ಣ ಇಂತಹ ಪ್ರಾಪಂಚಿಕ ಸುಕದಲ್ಲಿ ಬದುಕಿನುದ್ದಕ್ಕೂ ಹಾಯಾಗಿ ಇದ್ದುಬಿಡಬಹುದಾಗಿತ್ತು. ಕಶ್ಟಗಳನ್ನು ಮಯ್ಮೇಲೆ ತಂದುಕೊಳ್ಳುವ ಅಗತ್ಯವಾದರೂ ಅವನಿಗೆ ಎಲ್ಲಿತ್ತು? ಆದರೂ ಆತ ಸಮಾಜದ ಒಳಿತಿಗಾಗಿ ಅಪಾಯಗಳಿಗೆ ಮಯ್ ಒಡ್ಡಿದ. ತುಳಿತಕ್ಕೆ ಒಳಗಾದವರ ಏಳಿಗೆಗಾಗಿ ತನ್ನ ಬದುಕನ್ನೇ ಸವೆಸಿದ.
      ಪ್ರಪಂಚದಲ್ಲಿ ಹಲವಾರು ನೀತಿಬೋದಕರೂ ಸಮಾಜ ಸುದಾರಕರೂ ಬಂದು ಹೋಗಿದ್ದಾರೆ. ಮನುಶ್ಯರಲ್ಲಿ ಸಮಾನತೆ ಇರಬೇಕೆಂದು ಉಪದೇಶಿಸಿದ್ದಾರೆ. ಮನುಶ್ಯರು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂದು ಅರುಹಿದ್ದಾರೆ. ಪ್ರಾಣಿಪಕ್ಶಿಗಳಲ್ಲಿ ಮರುಕವಿಡಬೇಕೆಂದು ಕೇಳಿಕೊಂಡಿದ್ದಾರೆ. ಆದರೆ, ಅವರಲ್ಲಿ ಎಶ್ಟು ಮಂದಿ ’ಕಾಯಕದ’ ಹಿರಿಮೆಯ ಬಗ್ಗೆ ನುಡಿದಿದ್ದಾರೆ? ಬಸವಣ್ಣ, ಸಾಮಾಜಿಕ ಸಮಾನತೆ, ವಯ್ಯಕ್ತಿಕ ನಯ್ತಿಕತೆ, ಪ್ರಾಣಿದಯೆ ಮುಂತಾದ ಮುನ್ನಿನ ಕೆಲ ಸುದಾರಕರು ಕೊಟ್ಟ ಹಳೆಯ ಸಂದೇಶವನ್ನೇ ತಾನೂ ಇನ್ನೊಮ್ಮೆ ಕೊಟ್ಟು ಸುಮ್ಮನಾಗಲಿಲ್ಲ. ’ಕಾಯಕವೇ ಕಯ್ಲಾಸ’ ಎಂತಲೂ ಹೇಳಿದ. ತನ್ನ ಬಾಳಿನುದ್ದಕ್ಕೂ ಹೇಳಿದಂತೆಯೇ ನಡೆದುಕೊಂಡ. ಬಸವಣ್ಣನಿಗೆ, ಕಾಯಕವೆಂಬುದೇ ಒಂದು ಮಹಾನ್ ವ್ರತ ಎಂಬ ನನ್ನಿಯ ಅರಿವಿತ್ತು. ’ಮಡಕೆ ಮಾಡುವರೆ ಮಣ್ಣೇ ಮೊದಲು’ ಎಂದು ಆತನ ವಚನವೊಂದು ಹೇಳುತ್ತದೆ. ಅದೇ ಪರಿಯಲ್ಲಿ, ’ಪ್ರಪಂಚ ನಡೆವರೆ ಕಾಯಕವೇ ಮೊದಲು’ ಎಂದು ಯಾರೂ ಹೇಳಬಹುದು. ಮಂದಿ ಕೆಲಸ ಮಾಡಲಿಲ್ಲ ಎಂದರೆ ಪ್ರಪಂಚ ಎಲ್ಲಿರುತ್ತದೆ? ಅಶ್ಟು ಮುಕ್ಯ, ಕೆಲಸ ಮಾಡುವುದು. ಮಾಡುವ ಕೆಲಸವನ್ನೇ ಅಚ್ಚುಕಟ್ಟಾಗಿ ಮಾಡಿ, ಅದರಲ್ಲೇ ಕಯ್ವಲ್ಯವನ್ನು ಪಡೆಯಿರಿ ಎನ್ನುವ ಬಸವಣ್ಣ ಸಾರಿದ ಮತದ ಎತ್ತರವನ್ನು ಅದೆಶ್ಟು ಉಳಿದ ಮತಗಳು ತಲುಪಲಾರುವವು?
      ಪ್ರಾಣಿದಯೆಯ ವಿಶಯದಲ್ಲೂ ಅಶ್ಟೆ. ಬಸವಣ್ಣನ ಕಣ್ಣೋಲಿನಲ್ಲಿ ವಸ್ತುನಿಶ್ಟತೆ ಇತ್ತು. ಮಾಂಸಕ್ಕಿಂತ ಮಾಂಸವನ್ನು ಪಡೆದುಕೊಳ್ಳುವುದರ ಹಿಂದಿನ ಹಿಂಸೆಯ ಬಗ್ಗೆ ಅವನಿಗೆ ಹೆಚ್ಚು ಕಾಳಜಿಯಿತ್ತು. ಮೊದಲೇ ಸತ್ತು ಹೊರಗೆಸೆಯಲಾಗಿದ್ದ ಹಸುವಿನ ಬಾಡನ್ನು ತಿನ್ನುವ ಕುಲವಿಲ್ಲದವರಿಗಿಂತ, ಜೀವಂತಿಕೆ ಕುಲುಕಿ ಚಿಮ್ಮುವ ಎಳೆಯ ಪ್ರಾಣಿಗಳನ್ನು ಕೊಂದು, ಬಾಡುಂಡು ತೇಗುವ ಕುಲಜರೇ ಕೀಳು ಎಂಬ ವಸ್ತುನಿಶ್ಟ ಅಬಿಪ್ರಾಯ ಅವನದಾಗಿತ್ತು. ’ಹೊತ್ತು ತಂದು ಕೊಲುವಿರಿ ನೀವು!’ ಎಂದು ಎಳವಾಡಿಗೆ ಆಟಿಸುವ ಸವರ‍್ಣೀಯರನ್ನು ತನ್ನ ಒಂದು ವಚನದಲ್ಲಿ ಅವನು ನೇರವಾಗೇ ಮೂದಲಿಸಿದ್ದಾನೆ.
      ಬಸವಣ್ಣನಿಗೆ ಸತ್ತ ಬಳಿಕ ಸಿಗುವ ಸ್ವರ‍್ಗಕ್ಕಿಂತ ಇಂದಿದ್ದು ಬಾಳುವ ಎಂದಿನ ಪ್ರಪಂಚದ ಏಳಿಗೆಯೇ ಮುಕ್ಯವಾಗಿತ್ತು. ವಿದವೆಯರ ಮರುಮದುವೆಗೆ ತಡೆ ಇರಬಾರದೆಂದ. ಬೆಲೆವೆಣ್ಣುಗಳ ಬಿಡುಗಡೆಗೆ ಮಿಡುಕಿದ. ಜಾತೀಯತೆಯನ್ನಂತೂ ಅತ್ಯಂತ ಕಟುವಾಗಿ ವಿರೋದಿಸಿದ. ಜಾತೀಯತೆಯ ಎದುರು ತಾನು ತಳೆದಿದ್ದ ಕಡುನಿಲುವನ್ನು ಎಂದೂ ಆತ ಸಡಿಲಿಸಲಿಲ್ಲ. ಕಡೆಕಡೆಗೆ ಜಾತೀಯತೆಗೆ ಪತ್ತಿದ ಗಟನೆಯೊಂದರಿಂದ ಅವನ ಪ್ರಾಣಕ್ಕೇ ಕುತ್ತು ಬರುವಂತಾಗಿ, ಆತ ಊರನ್ನೇ ತೊರೆದು ಹೋಗಬೇಕಾಯಿತು.
      ಇಂತಹ ಒಬ್ಬ ದೀರ ದೇವತಾ ಮನುಶ್ಯನನ್ನು ನಮ್ಮ ನಾಡಿನ ಲಾಂಚನವನ್ನಾಗಿ ನಾವು ಇನ್ನೂ ಮಾಡಿಕೊಂಡಿಲ್ಲ ಎನ್ನುವುದನ್ನು ನೆನೆದರೇ ಆಶ್ಚರ‍್ಯವಾಗುತ್ತದೆ. ಇದಕ್ಕೆ ಕಾರಣ ಏನಿರಬಹುದು? ಜಾತೀಯತೆಯ ಕೋತಿಹಿಡಿಯಲ್ಲಿ ಸಿಲುಕಿರುವ ನಮ್ಮ ಸಮಾಜ ಬಸವಣ್ಣನನ್ನು ವೀರಶಯ್ವ ಮತದೊಂದಿಗೆ ತಳಿಕೆ ಹಾಕಿರುವುದೇ ಕಾರಣವಿರಬಹುದೆ? ’ಬಸವಣ್ಣನನ್ನು ಸಾಂಸ್ಕ್ರುತಿಕ ನಾಯಕನನ್ನಾಗಿ ಮಾಡಿಕೊಂಡರೆ ಕನ್ನಡಿಗರಲ್ಲಿ ಒಮ್ಮತ ಮೂಡುತ್ತದೆ’ - ಇದು ಈ ಮೊದಲು ತಿಳಿಸಿದಂತೆ ರಾ.ನ.ಚಂದ್ರಶೇಕರರ ಅಬಿಪ್ರಾಯ. ನನಗನ್ನಿಸುತ್ತದೆ, ಇಂದಿನ ಜಾತಿಮರುಳಿನ ನೆಲೆಯಲ್ಲಿ ಯಾರಾದರೂ ಬಸವಣ್ಣನನ್ನು ಸಾಂಸ್ಕ್ರುತಿಕ ನಾಯಕನನ್ನಾಗಿ ಮಾಡಹೊರಟರೆ, ಒಮ್ಮತದ ಮಾತು ಬಿಡಿ, ಕನ್ನಡಿಗರಲ್ಲಿ ಒಂದು ಮಿನಿ ಕಾಳಗವೇ ನಡೆದರೂ ನಡೆಯಬಹುದು. ಎಂತಹ ನಾಚಿಕೆಗೇಡು ಇದು!
      ಎಂದಾದರೊಂದು ದಿನ ನಮ್ಮಲ್ಲಿಯ ಜಾತೀಯತೆಯ ಸಣ್ಣತನ ತೊಲಗಿ, ನಮ್ಮ ದ್ರಾವಿಡ ನೆಲದಲ್ಲಿ ಹುಟ್ಟಿ, ನಮ್ಮ ಮೆಚ್ಚಿನ ದ್ರಾವಿಡ ನುಡಿಯಾದ ಕನ್ನಡದಲ್ಲೇ ಇಡೀ ವಿಶ್ವವೇ ಒಪ್ಪುವಂತಹ ಮತವನ್ನು ಸಾರಿ ಸಂದ ಬಸವಣ್ಣ, ನಮ್ಮೆಲ್ಲರ ನಾಯಕನಾಗಿ, ನಮ್ಮ ನಾಡಕುರುಹಾಗಿ ಮೆರೆಯುತ್ತಾನೆ ಎಂದು ಸದ್ಯಕ್ಕೆ ಹಾರಯ್ಸೋಣ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಮಂಗಳವಾರ, ಸೆಪ್ಟೆಂಬರ್ 10, 2013

ನನ್ನಿಯೋ ಇಲ್ಲ ಬರೀ ಆಶಾವಾದವೋ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಆಗಸ್ಟ್ ಹತ್ತರ The Times of India ಪತ್ರಿಕೆಯಲ್ಲಿ, ಕನ್ನಡ ನುಡಿಯ ಬವಿಶ್ಯದ ಬಗ್ಗೆ ನಡೆದ ಕಾರ‍್ಯಕ್ರಮವೊಂದರ ಸುದ್ದಿ ಪ್ರಕಟವಾಗಿದೆ. ಆ ಕಾರ‍್ಯಕ್ರಮದಲ್ಲಿ ಕನ್ನಡ ನುಡಿವೊಲದಲ್ಲಿ  ಹೆಸರು ಮಾಡಿರುವ ಶ್ರೀಯುತರಾದ ಜಿ.ವೆಂಕಟಸುಬ್ಬಯ್ಯ, ಕೆ.ವಿ.ನಾರಾಯಣ್, ಗಣೇಶ್ ದೇವಿ ಮುಂತಾದವರು ಬಾಶಣ ಮಾಡಿದ್ದಾರೆ. ಸುದ್ದಿ ಬರಹ ಅವರ ಬಾಶಣಗಳಿಂದ ಕೆಲ ಮುಕ್ಯ ಅಬಿಪ್ರಾಯಗಳನ್ನು ಎತ್ತಿ ಓದುಗರ ಮುಂದಿಟ್ಟಿದೆ. ಬಾಶಣಗಳ ಒಟ್ಟಾರೆ ತೀರ‍್ಮಾನ ಕನ್ನಡದೊಲವಿಗಳಿಗೆ ಹಿಗ್ಗು ತರುವಂತಹುದೇ ಆಗಿದೆ. ಏಕೆಂದರೆ, ’ಕನ್ನಡ ನುಡಿಗೆ ಕುಂದಿಲ್ಲ. ಬರುವ ನೂರಾರು ವರ‍್ಶ ಕನ್ನಡ ನುಡಿ ಏಳಿಗೆವೆತ್ತು ಸಂಬ್ರಮದಿಂದ ಬಾಳಿ ಬದುಕಲಿದೆ’ - ಇದು ಬಾಶಣಗಳು ಒಮ್ಮತದಿಂದ ವ್ಯಕ್ತಪಡಿಸಿದ ಅಬಿಪ್ರಾಯ.
      ಈ ಬಗೆಯ ಗೆಲುನೋಟಕ್ಕೆ ಬಾಶಣಕಾರರು ಕೊಟ್ಟ ಆದಾರಗಳನ್ನು ಸುದ್ದಿ ಉದ್ದರಿಸಿದೆ. ’ಕನ್ನಡಕ್ಕೆ ಎರಡು ಸಾವಿರ ವರ‍್ಶಗಳ ಇತಿಹಾಸವೂ ಮೇಲುನುಡಿಪಿನ (ಶ್ರೇಶ್ಟಸಾಹಿತ್ಯದ) ಬೆಳೆಯೂ ಇದೆ. ಅಂದದ ಲಿಪಿ ಇದೆ. ಬಗೆಗೊಳುವ ಇನಿದಾದ ದನಿ ಇದೆ. ಮುಕ್ಯವಾಗಿ, ಅದನ್ನಾಡುವ ಕೋಟಿಕೋಟಿ ಮಂದಿಯ ಸಂಕ್ಯಾಬಲದ ಅಡಿಗಲ್ಲೂ ಇದೆ’ - ಇದು ನಡೆದಾಡುವ ನಿಗಂಟು ವೆಂಕಟಸುಬ್ಬಯ್ಯನವರ ಅನಿಸಿಕೆಯಾದರೆ, ನುಡಿಯರಿಗ ಕೆ.ವಿ.ನಾರಾಯಣ್ ಅವರು ಹೇಳಿರುವುದು ಹೀಗೆ - ’ಯಾವುದೇ ನುಡಿ ಅಳಿಯುವುದು ಅದನ್ನಾಡುವವರು ಅಳಿದರೆ ಮಾತ್ರ. ಕನ್ನಡಕ್ಕೆ ಅಳಿಯುವ ಬಯವಿಲ್ಲ. ಆದರೆ, ಒಂದೇ ನುಡಿ ಚಲಾವಣೆಯಲ್ಲಿರುವಂತಹ ಪರಿಸರಗಳು ಇನ್ನು ಮುಂದೆ ಇರುವ ಹಾಗಿಲ್ಲ. ಒಂದೇ ಪರಿಸರದಲ್ಲಿ ಹಲನುಡಿಗಳ ಬಳಕೆಯಾಗುವುದೇ ಬವಿಶ್ಯದ ವಾಸ್ತವ. ಸಂಕ್ಯಾಬಲ ಅಶ್ಟೊಂದು ಮುಕ್ಯವಲ್ಲ. ಏಕೆಂದರೆ, ಕೊಂಕಣಿ ಆಡುವರಿಗಿಂತ ಹಲವುಪಟ್ಟು ಹೆಚ್ಚು ಮಂದಿ ಗೋಂಡೀ ನುಡಿಯನ್ನು ಆಡುತ್ತಾರೆ. ಆದರೆ, ಸಂವಿದಾನದಲ್ಲಿ ಕೊಂಕಣಿಯನ್ನು ಹೆಸರಿಸಿದ್ದಾರೆಯೇ ಹೊರತು ಗೋಂಡೀಯನ್ನಲ್ಲ’. ಇನ್ನು ಮತ್ತೊಬ್ಬ ನುಡಿಯರಿಗರಾದ ಗಣೇಶ್ ದೇವಿ ಅವರು ಅಬಿಪ್ರಾಯಪಟ್ಟದ್ದು ಹೀಗೆ - ’ಕನ್ನಡಕ್ಕೆ ಎಲ್ಲ ನುಡಿಗಳಿಂದಲೂ ಪದಸಂಪತ್ತನ್ನು ತಂದುಕೊಳ್ಳುವ ಯುಕ್ತಿ ಇದೆ. ಬಾಶೆಗಳು ಅಳಿಯುತ್ತವೆ ಎನ್ನುವುದೇ ಸುಳ್ಳು. ಬಾಶೆಗಳು ಕಲುಶಿತವಾಗುತ್ತವೆ ಎನ್ನುವುದೂ ಸುಳ್ಳು. ಬಾಶೆಗಳು ಹೊಳೆಗಳ ಹಾಗೆ. ಹಲವು ಮೂಲಗಳಿಂದ ಕಸುವನ್ನು ಪಡೆದುಕೊಂಡು ನಿರಂತರವಾಗಿ ಹರಿಯುತ್ತವೆ, ಸಾಯುವುದಿಲ್ಲ. ಕನ್ನಡವೇ ಇದಕ್ಕೆ ಒಂದು ಒಳ್ಳೆಯ ಎತ್ತುಗೆ (ಉದಾಹರಣೆ)’.
      ಈ ಅನಿಸಿಕೆಗಳನ್ನು ಕೇಳಿದರೆ ಯಾವ ಕನ್ನಡಿಗನಿಗೇ ಆಗಲಿ ಸಂತೋಶವಾಗಬೇಕು. ನನಗೂ ಆಯಿತು. ಆದರೆ, ಒಡನೆಯೇ ಕೆಲ ಸಂದೇಹಗಳೂ ತಲೆ ಎತ್ತಿದುವು. ನಾನು ನುಡಿಯರಿಗನಲ್ಲ. ನುಡಿಗಳ ಬಗೆಗಿನ ಪೇರರಿವು ನನಗೆ ಕಂಡಿತ ಇಲ್ಲ. ಮೇಲೆ ಹೆಸರಿಸಿದ ಅರಿಗರ ತೀರ‍್ಮಾನಗಳನ್ನು ಅಲ್ಲಗಳೆಯುವ ಗುಂಡಿಗೆ ನನಗಿಲ್ಲ. ಆದರೂ, ಅವರ ಅನಿಸಿಕೆಗಳು ಇಡಿನನ್ನಿ (ಪೂರ‍್ಣ ಸತ್ಯ) ಅಲ್ಲ ಎನಿಸುವ ಸಂದೇಹಗಳು ನನ್ನಲ್ಲಿ ಮೂಡಿವೆ. ಅವುಗಳನ್ನು ಕಿರಿದಾಗಿ ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ.
      ಯಾವುದೇ ನುಡಿಯ ಇಂದಿನ ಹಾಗೂ ನಾಳೆಯ ಆರೋಗ್ಯವನ್ನು ಅದರ ಚರಿತ್ರೆ ಮತ್ತು ಸಾಹಿತ್ಯಗಳ ಹಳಮೆಯಿಂದ ನಿಜಕ್ಕೂ ಅಳೆಯಲು ಬರುತ್ತದೆಯೆ? ಕನ್ನಡದಲ್ಲಿ ’ಹಳೆಯ’ ನುಡಿಪೇನೋ ಬೇಕಾದಶ್ಟಿದೆ. ಆದರೆ, ಅದನ್ನು ಓದುವವರು ಎಶ್ಟಿದ್ದಾರೆ? ಜನ, ಬಾಶೆಗೆ ಇಂದು ಎಶ್ಟು ಉಪಯೋಗ ಇದೆ ಎಂಬುದರ ಬಗ್ಗೆ ಯೋಚಿಸುತ್ತಾರೆಯೆ ಹೊರತು ಅದರ ಚರಿತ್ರೆಯ ಬಗ್ಗೆ ಅಲ್ಲ. ಇನ್ನು, ’ಸಂಕ್ಯಾಬಲವಿದ್ದರೆ ನುಡಿ ಅಳಿಯುವುದಿಲ್ಲ’ ಮತ್ತು ’ಆಡುಗರು ಅಳಿಯದಿದ್ದರೆ ನುಡಿ ಅಳಿಯುವುದಿಲ್ಲ’ ಎಂಬ ನಂಬಿಕೆಗಳ ಬಗ್ಗೆ ಕೊಂಚ ಯೋಚಿಸೋಣ. ಉದಾಹರಣೆಗಾಗಿ, ಮೆಕ್ಸಿಕೋ ದೇಶದಲ್ಲಿದ್ದ ಮತ್ತು ಇಡೀ ದಕ್ಶಿಣ ಅಮೆರಿಕದ ದೇಶಗಳಲ್ಲಿದ್ದ ಸ್ತಳೀಯ ಬಾಶೆಗಳ ಪಾಡು ಏನಾಯಿತು ಎಂಬುದನ್ನು ಒಂದಿಶ್ಟು ಗಮನಿಸೋಣ. ಆ ನಾಡುಗಳಿಗೆ ವಲಸೆ ಹೋದ ಅಯ್‍ರೋಪ್ಯರ ಸಂಕ್ಯೆ ಅಲ್ಲಿನ ಸ್ತಳೀಯರ ಸಂಕ್ಯೆಗೆ ಹೋಲಿಸಿದರೆ ಬಹಳ ಕಡಿಮೆ. ಆದರೂ, ಅಯ್‍ರೋಪ್ಯರ ಸ್ಪ್ಯಾನಿಶ್ ಮತ್ತು ಪೋರ‍್ಚುಗೀಸ್ ಬಾಶೆಗಳು ಸ್ತಳೀಯರ ಬಾಶೆಗಳನ್ನು ಬಗ್ಗು ಬಡಿದವು! ಈಗ ಅಲ್ಲಿ, ಎಲ್ಲೋ ಅಲ್ಲೊಂದು ಇಲ್ಲೊಂದು ಸ್ತಳೀಯ ಬಾಶೆಗಳು ಬರೀ ಮನೆಗಳಿಗೆ ಮತ್ತು ಹಟ್ಟಿಗಳಿಗೆ ಸೀಮಿತವಾಗಿ, ಇದ್ದೂ ಸತ್ತಂತೆ ಬಳಕೆಯಲ್ಲಿವೆ. ಅಶ್ಟಕ್ಕೂ ಅಯ್‍ರೋಪ್ಯರ ಬರವಿನಿಂದಾಗಿ ಅಮೆರಿಕ ಕಂಡದ ಸ್ತಳೀಯ ಜನರೇನೂ ಅಳಿದು ಹೋಗಲಿಲ್ಲ. ಅವರ ಸಂತತಿ ನಿರಂತರವಾಗಿ ಬಾಳಿ ಬದುಕಿಕೊಂಡೇ ಬಂದಿದೆ. ಆದರೆ, ಅವರ ಬಾಶೆಗಳು ಮಾತ್ರ ಇತಿಹಾಸದ ಪುಟಗಳನ್ನು ಸೇರಿಕೊಂಡಿವೆ. ಅಂದರೆ, ಆಡುಗರು ಅಳಿಯಲಿಲ್ಲ, ಆದರೆ ಅವರ ಬಾಶೆಗಳು ಅಳಿದವು. ಇದಕ್ಕೆ ಕಾರಣ ಏನು? ಸ್ತಳೀಯರು ವಲಸೆ ಬಂದ ಅಯ್‍ರೋಪ್ಯರ ಕಯ್ಯಲ್ಲಿ ಸೋತು ಆಳಿಸಿಕೊಂಡರು! ಪರಿಣಾಮವಾಗಿ ಅಯ್‍ರೋಪ್ಯರ ನುಡಿಗಳು ’ಉಪಯುಕ್ತ’ ಎನಿಸಿದುವು. ಸ್ತಳೀಯರ ನುಡಿಗಳು ’ಅನುಪಯುಕ್ತ’ ಎನಿಸಿದುವು. ಅಶ್ಟೇ ಕಾರಣ.
      ದೂರದ ಅಮೆರಿಕ ಕಂಡಗಳು ಬೇಡ. ಕನ್ನಡದ ಚರಿತ್ರೆಯನ್ನು ನೋಡಿದರೇ ಮೇಲಿನ ನಂಬುಗೆಗಳು ಎಶ್ಟರಮಟ್ಟಿಗೆ ಸರಿ ಎನ್ನುವ ಸಂದೇಹ ಮೂಡುತ್ತದೆ. ಹಲವಾರು ವಿದ್ವಾಂಸರ ಪ್ರಕಾರ ಮಹಾರಾಶ್ಟ್ರದಲ್ಲಿ ಮೊದಲು ಕನ್ನಡವೇ ಜನರ ಮಾತಾಗಿತ್ತು. ಆದರೆ, ಕಾಲಕ್ರಮೇಣ ಮರಾಟಿ ಅಲ್ಲಿ ಕನ್ನಡವನ್ನು ಅಳಿಸಿ ಹಾಕಿತು. ಈ ಸತ್ಯದ ಬಗ್ಗೆ ಡಾ.ಚಿದಾನಂದ ಮೂರ‍್ತಿಯವರು ಅವರ ’ಬ್ರುಹತ್ ಬಾಶಿಕ ಕರ‍್ನಾಟಕ’ ಎಂಬ ಓದುಗೆಯಲ್ಲಿ ವಿವರವಾಗಿ ಬರೆದಿದ್ದಾರೆ. ಇದರ ಅರ‍್ತ ಏನು? ಕನ್ನಡರೇನೂ ಮಹಾರಾಶ್ಟ್ರದಿಂದ ಎಲ್ಲಿಗೋ ಓಡಿ ಹೋಗಲಿಲ್ಲ. ಕನ್ನಡವನ್ನು ಬಿಟ್ಟು ಮರಾಟಿಯನ್ನು ಕಯ್ಗೆತ್ತಿಕೊಂಡರು, ಅಶ್ಟೆ. ಕನ್ನಡಿಗರ ಸಂಕ್ಯಾಬಲವಾಗಲೀ, ಮುಂದುವರೆದ ಅವರ ಸಂತತಿಗಳಾಗಲೀ ಅವರಿಗೆ ಕನ್ನಡವನ್ನು ಉಳಿಸಿಕೊಳ್ಳುವಲ್ಲಿ ನೆರವಾಗಲಿಲ್ಲ.
      ಕಡೆಯದಾಗಿ, ’ನುಡಿಗಳು ಹೊಳೆಗಳ ಹಾಗೆ. ಹರಿಯುತ್ತಲೇ ಇರುತ್ತವೆ. ಸಾಯುವುದಿಲ್ಲ’ ಎಂಬ ಅಬಿಪ್ರಾಯದ ಬಗ್ಗೆ ನನಗೆ ಹೊಳೆಯುವುದು ಇದು. ನಿಸರ‍್ಗದ ಇತಿಹಾಸದಲ್ಲಿ ನೂರಾರು ಹೊಳೆಗಳು ಬತ್ತಿಹೋಗಿವೆ. ಮನುಶ್ಯನ ಇತಿಹಾಸದಲ್ಲಿ ನೂರಾರು ನುಡಿಗಳು ಕಣ್ಮರೆಯಾಗಿವೆ. ಹಾಗಾಗಿ, ಹೊಳೆಗಳಾಗಲೀ ನುಡಿಗಳಾಗಲೀ ನೆಲೆಯಾದುವಲ್ಲ.
      ಒಬ್ಬ ಸಾಮಾನ್ಯ ಬಾಶಾಸಕ್ತನಾಗಿ ನನ್ನ ಅನಿಸಿಕೆ ಇದು - ’ಯಾವುದೇ ಬಾಶೆ, ಜನರ ಕಣ್ಣಿಗೆ ಉಪಯುಕ್ತ ಎನಿಸಿದರೆ ತಾನಾಗೇ ಉಳಿದುಕೊಳ್ಳುತ್ತದೆ. ಉಪಯುಕ್ತ ಅಲ್ಲ ಎನಿಸಿದರೆ, ಅದರ ಉಳಿವು ಅದರ ಆಡುಗರ ಇಚ್ಚಾಶಕ್ತಿಯನ್ನು ಅವಲಂಬಿಸಿರುತ್ತದೆ. ಆಡುಗರ ಬೆಂಬಲವಿಲ್ಲದಿದ್ದರೆ ಯಾವುದೇ ನುಡಿಯಾಗಲೀ ಉಳಿಯುವುದಿಲ್ಲ. ಸಂಕ್ಯಾಬಲ ಮುಂತಾದ ವಾದಗಳಿಗೆ ಅಶ್ಟಿಶ್ಟು ಹುರುಳಿರಬಹುದು. ಆದರೆ, ಆಡುಗರ ಇಚ್ಚಾಶಕ್ತಿಯಶ್ಟು ಮುಕ್ಯ ಅವು ಎಂದೆಂದೂ ಅಲ್ಲ’. ಹಾಗಾಗಿ, ಪ್ರಶ್ನೆ ಇದು - ಕನ್ನಡಿಗರಿಗೆ ಕನ್ನಡವನ್ನು ಉಳಿಸಿಕೊಳ್ಳುವ ಇಚ್ಚಾಶಕ್ತಿ ಇದೆಯೆ? ಇದ್ದರೆ ಕನ್ನಡಕ್ಕೆ ಕುಂದಿಲ್ಲ.
      ಇಶ್ಟೆಲ್ಲಾ ಸಂದೇಹಗಳಿದ್ದರೂ, ಮೇಲಿನ ನುಡಿಯರಿಗರು ಕಂಡಿರುವ ಕಾಣ್ಕೆ ಕನ್ನಡದ ಪಾಲಿಗೆ ಸರಿಗಾಣ್ಕೆಯಾಗಲಿ ಎಂದೇ ನಾನು ಬಯಸುತ್ತೇನೆ. ಅಳಿದುಳಿದಿರುವ ಕೆಲವೇ ದ್ರಾವಿಡ ಸೊಲ್ಲುಗಳಲ್ಲಿ ಮುಕ್ಯವೆನಿಸಿರುವ ನಮ್ಮ ಕನ್ನಡ ನುಡಿಗೆ ಕೊನೆ ಎಂದೂ ಬಾರದಿರಲಿ ಎಂದೇ ನಾನು ಹಾರಯ್ಸುತ್ತೇನೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಭಾನುವಾರ, ಆಗಸ್ಟ್ 25, 2013

ತೆಲಂಗಾಣವೆಂಬ ಎಚ್ಚರಿಕೆಯ ಗಂಟೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕೆಲ ದಿನಗಳ ಹಿಂದೆ ನನ್ನ ಗೆಳೆಯರೊಬ್ಬರು ನನಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ನೆರೆಯ ತೆಲುಗುನಾಡು ತೆಲಂಗಾಣದ ಸಲುವಾಗಿ ಇರುಪೋಳು ಆಗುತ್ತಿರುವ ಸಂಗತಿ ಅವರಿಗೆ ತುಂಬಾ ನೋವನ್ನುಂಟು ಮಾಡಿತ್ತು. ಹಾಗಂತ ಅವರೇನೂ ತೆಲುಗರಲ್ಲ. ನನ್ನ ಹಾಗೇ ಕನ್ನಡಿಗರು. ಆದರೆ, ದ್ರಾವಿಡ ಅರಿಮೆ ಇರುವ ಕನ್ನಡಿಗರು.
      "ನಾವು ದ್ರಾವಿಡರೆಲ್ಲ ಒಂದಾಗಬೇಕು ಅಂತ ನಾವು ಅಂದುಕೊಂಡರೆ, ಒಂದೇ ಬಾಶೆ ಆಡುವ ತೆಲುಗರೇ ಎರಡು ಹೋಳಾಗಲಿಕ್ಕೆ ಹೊರಟಿದ್ದಾರಲ್ಲಾ, ಈ ದಡ್ಡತನಕ್ಕೆ ಏನು ಹೇಳೋದು, ರಾಜ್?", ಎಂದು ನನಗೆ ಪ್ರಶ್ನೆ ಹಾಕಿದರು. "ಈ ತೆಲುಗು ಮಂದಿಗೆ ಗಟ್ಟಿಯಾದ ಒಂದು ತೆಲುಗು ಅಯ್‍ಡೆಂಟಿಟಿ ಅನ್ನೋದು ಇದ್ದಿದ್ದರೆ ತಮ್ಮ ನೆಲವನ್ನೇ ಎರಡು ಹೋಳು ಮಾಡಲಿಕ್ಕೆ ಹೋಗುತ್ತಿದ್ದರೆ? ಇದಕ್ಕೆಲ್ಲಾ ತೆಲುಗು ಬಾಶೆಯ ಸಂಸ್ಕ್ರುತೀಕರಣ ಕಾರಣ, ಆರ‍್ಯಮಯವಾದ ತೆಲುಗು ಸಾಹಿತ್ಯ ಕಾರಣ", ಎಂದು ವಿಶಯದ ಬಗ್ಗೆ ತಮ್ಮ ತೀರ‍್ಮಾನವನ್ನೂ ಹೇಳಿದರು.
      ತೆಲಂಗಾಣದ ಬೇರ‍್ಪಡಿಕೆಗೂ ತೆಲುಗಿನ ಸಂಸ್ಕ್ರುತೀಕರಣಕ್ಕೂ ಎಲ್ಲಿಯ ನಂಟು ಎಂಬುದು ನನಗೆ ಕೂಡಲೇ ಹೊಳೆಯಲಿಲ್ಲ. "ತೆಲಂಗಾಣ ಬೇರೆ ಆಗುತ್ತಿರುವುದಕ್ಕೆ ಆರ‍್ತಿಕ ಅಸಮಾನತೆ ಕಾರಣ ಅಲ್ಲವೆ? ಬಹಳ ಹಿಂದಿನಿಂದಲೂ ತೆಲಂಗಾಣ ಪ್ರಾಂತ್ಯದ ಅಬಿವ್ರುದ್ದಿಯ ಬಗ್ಗೆ ಉಳಿದ ತೆಲುಗರು ನಿರ‍್ಲಕ್ಶ್ಯ ಮಾಡಿದ್ದಾರೆ. ಸಾಲದುದಕ್ಕೆ ತೆಲಂಗಾಣದ ತೆಲುಗನ್ನು ಕಳಪೆ ತೆಲುಗು ಎಂದು ಕೂಡ ಆಡಿಕೊಂಡು ಬಂದಿದ್ದಾರೆ. ದಶಕಗಳಿಂದ ಈ ಬಗ್ಗೆ ತೆಲಂಗಾಣದ ಮಂದಿ ತಮ್ಮ ಅಸಮಾದಾನವನ್ನು ವ್ಯಕ್ತಪಡಿಸಿಕೊಂಡು ಬಂದಿದ್ದಾರೆ. ಇದೆಲ್ಲದರ ಜೊತೆಗೆ ಈ ನಡುವೆ ಹಯ್ದರಾಬಾದು ನಗರಕ್ಕೆ ಹಣದ ಹೊಳೆಯೇ ಹರಿದಿದೆ. ಆ ಹಣವನ್ನು ಹೊಡೆದುಕೊಳ್ಳುವ ಆಲೋಚನೆ ಇರುವ ಸ್ತಳೀಯ ಪುಡಾರಿಗಳ ಹಂಚಿಕೆಯೂ ತೆಲಂಗಾಣದ ಪ್ರತ್ಯೇಕತೆಯಲ್ಲಿ ಸೇರಿಕೊಂಡಿದೆ. ತೆಲಂಗಾಣದ ಬೇರ‍್ಪಡಿಕೆಗೆ ಇವು ಕಾರಣಗಳು ಅಂತ ಎಲ್ಲರೂ ಹೇಳೋದು. ನೀವು ಹೇಳುವ ಹಾಗೆ ತೆಲುಗಿನ ಸಂಸ್ಕ್ರುತೀಕರಣ ಇರಲಾರದು", ಎಂದು ನಾನು ಅವರ ತೀರ‍್ಮಾನಕ್ಕೆ ಪ್ರತಿ ಹೇಳಿದೆ.
      "ಅಯ್ಯೋ! ನಾನು ಹೇಳೋದು ದ್ರಾವಿಡತನ ಇರೋ ನಿಮಗೂ ಅರ‍್ತವಾಗ್ತಾ ಇಲ್ವಲ್ಲಾ!", ಎಂದು ಆಕ್ಶೇಪಣಿಯ ದನಿಯಲ್ಲಿ ಉದ್ಗಾರ ತೆಗೆದು ನನ್ನ ಗೆಳೆಯರು ಅವರ ವಾದದ ಅರ‍್ತ ಏನೆಂಬುದನ್ನು ವಿವರಿಸಿದರು. "ನೋಡಿ ರಾಜ್, ತೆಲುಗರಿಗೆ, ’ನಾವು ಎಲ್ಲಕ್ಕೂ ಮೊದಲು ತೆಲುಗರು. ನಾವು ಒಂದೇ ಜನ. ನಮ್ಮ ನಿಶ್ಟೆ ಎಂದೂ ನಮ್ಮ ತೆಲುಗುತನಕ್ಕೇ’ಎಂಬ ಗಟ್ಟಿಯಾದ ’ತೆಲುಗು ಅಯ್‍ಡೆಂಟಿಟಿ’ ಇದ್ದಿದ್ದರೆ, ತೆಲಂಗಾಣದ ಅಬಿವ್ರುದ್ದಿಯನ್ನು ಅವರು ಕಡೆಗಣಿಸುತ್ತಿರಲಿಲ್ಲ. ತೆಲಂಗಾಣದ ತೆಲುಗನ್ನು ಕಳಪೆ ಅಂತ ಆಡಿಕೊಳ್ಳುತ್ತಿರಲಿಲ್ಲ. ಅಶ್ಟಕ್ಕೂ ತೆಲಂಗಾಣದ ಹೋರಾಟ ನೆನ್ನೆ ಮೊನ್ನೆಯದಲ್ಲ. ನಲ್ವತ್ತು ವರ‍್ಶಗಳಶ್ಟು ಹಳೆಯದು. ನಿಜವಾದ ತೆಲುಗುತನ ತೆಲುಗರಿಗೆ ಇದ್ದಿದ್ದರೆ ಅಶ್ಟು ಸಮಯದಲ್ಲಿ ತೆಲಂಗಾಣದ ಸಮಸ್ಯೆಯನ್ನು ಅವರು ಬಗೆಹರಿಸಿಕೊಂಡಿರುತ್ತಿದ್ದರು. ಈ ಮಾತನ್ನಾದರೂ ನೀವು ಒಪ್ಪಬೇಕು ತಾನೆ?"
      "ಮನುಶ್ಯರು ಎಶ್ಟೇ ಆಗಲಿ ಸ್ವಾರ‍್ತಿಗಳು. ಅವರ ಸ್ವಾರ‍್ತ ಅವರ ಕಯ್ಯಲ್ಲಿ ಯಾವ್ಯಾವಾಗ ಏನೇನು ಮಾಡಿಸುತ್ತೆ ಅಂತ ಹೇಳಲಿಕ್ಕೆ ಬರೋದಿಲ್ಲ. ಅಚಲವಾದ ತೆಲುಗು ಅಯ್‍ಡೆಂಟಿಟಿ ಅನ್ನೋದೊಂದು ತೆಲುಗರಲ್ಲಿ ಇದ್ದಿದ್ದರೆ ತೆಲುಗುನಾಡಿನಲ್ಲಿ ಎಲ್ಲಾ ಸರಿ ಇರುತ್ತಿತ್ತು ಅನ್ನೋದು ತುಂಬಾ ಸರಳ ದ್ರುಶ್ಟಿಯ ವಾದ ಅಂತ ನನಗೆ ಅನಿಸುತ್ತೆ. ಆದರೂ ಈ ವಾದವನ್ನು ಸುಮ್ಮನೆ ಬದಿಗೆ ಸರಿಸಲಿಕ್ಕೆ ಆಗೋದಿಲ್ಲ. ಅದರಲ್ಲಿ ಸತ್ಯದ ಎಳೆ ಇರೋ ಹಾಗಿದೆ. ಆದರೆ, ಇದರಲ್ಲಿ ತೆಲುಗು ಬಾಶೆಯ ಸಂಸ್ಕ್ರುತೀಕರಣದ ಪಾತ್ರ ಏನು ಅನ್ನೋದು ಮಾತ್ರ ಇನ್ನೂ ನನಗೆ ತಿಳೀತಿಲ್ಲ!", ಎಂದು ನನ್ನ ಸಂದೇಹವನ್ನು ಮತ್ತೆ ಅವರ ಮುಂದಿಟ್ಟೆ.
      "ಸಂಸ್ಕ್ರುತೀಕರಣದ ಪಾತ್ರ ಇದೆ. ನೋಡೀ, ಮೊದಮೊದಲು ನೂರಾರು ವರ‍್ಶ ತೆಲುಗಿನಲ್ಲಿ ಸಾಹಿತ್ಯ ಬರೆದವರೆಲ್ಲಾ ಸಂಸ್ಕ್ರುತ ಬಾಶೆಯ ಮೇಲೆ ಅಪಾರ ಗವ್ರವ ಇಟ್ಟುಕೊಂಡವರು. ಆರ‍್ಯ ಸಂಸ್ಕ್ರುತಿಯೇ ಇಡೀ ದೇಶದ ಸಂಸ್ಕ್ರುತಿ ಅಂತ ನಂಬಿಕೊಂಡವರು. ಅವರಿಗೆ ತೆಲುಗರ ದ್ರಾವಿಡತನದ ಬಗ್ಗೆ ಗೊತ್ತಿರಲಿಲ್ಲ. ಗೊತ್ತಿದ್ದರೂ ಅದನ್ನು ಲೆಕ್ಕಕ್ಕೆ ಇಡಲಿಲ್ಲ. ತೆಲುಗಿನ ಹೆಸರಿನಲ್ಲಿ ಬರೀ ಸಂಸ್ಕ್ರುತ ಪದಗಳನ್ನು ಗಿಡಿದು ’ತೆಲುಗು’ ಸಾಹಿತ್ಯ ರಚಿಸಿದರು. ಉತ್ತರದ ರಾಮಾಯಣ ಮಹಾಬಾರತದಂತಾ ಕತೆಗಳನ್ನೇ ಮತ್ತೆ ಮತ್ತೆ ತೆಲುಗಿನಲ್ಲಿ ಬರೆದು ’ಇದು ತೆಲುಗು ಸಾಹಿತ್ಯ’ ಎಂದು ಕರೆದರು. ಸಂಸ್ಕ್ರುತದಂತಾ ಬಾಶೆ ಇನ್ನೊಂದಿಲ್ಲ, ಆರ‍್ಯ ಸಂಸ್ಕ್ರುತಿಯೇ ಸಂಸ್ಕ್ರುತಿ ಅಂತ ಸಾಮಾನ್ಯ ತೆಲುಗರಿಗೆ ಶತಮಾನಗಳ ಕಾಲ ಒತ್ತುಣಿಸಿದರು. ತೆಲುಗರಲ್ಲಿ ತೆಲುಗಿನ ಅಬಿಮಾನ ಮೂಡಿಸುವ ಬದಲು ಅವರದಲ್ಲದ ಬಾರತದ ಅಬಿಮಾನ ತುಂಬಿಸಿದರು. ಬಾರತದ ಅಬಿಮಾನ ಮತ್ತು ತೆಲುಗು ಅಬಿಮಾನ ಬೇರೆಬೇರೆಯೇ ಅಲ್ಲ ಅನ್ನೋ ಹಾಗೆ ಗೊಂದಲ ಸ್ರುಶ್ಟಿ ಮಾಡಿದರು. ಇಂತಾ ಪರಿಸ್ತಿತಿಯಲ್ಲಿ ನಿಜವಾದ ’ತೆಲುಗು ಅಯ್‍ಡೆಂಟಿಟಿ’ ಹೇಗೆ ತಾನೆ ಬೆಳೆಯಲಿಕ್ಕೆ ಸಾದ್ಯ?", ಎಂದು ನನ್ನ ಗೆಳೆಯರು ಅವರ ವಾದವನ್ನು ಬಿಡಿಸಿ ಹೇಳಿದರು.
      ಅವರ ಈ ವಿವರಣೆ ಕೇಳಿದ ಮೇಲೆ ಅವರ ವಾದದಲ್ಲಿ ನಿಜಕ್ಕೂ ಹುರುಳಿದೆ ಎನಿಸಿತು. "ನಿಮ್ಮ ವಾದದ ಓಟ ಏನು ಅನ್ನೋದು ನನಗೆ ಈಗ ಗೊತ್ತಾಯಿತು. ನಿಮ್ಮ ವಾದ ಗಂಬೀರವಾಗಿ ಪರಿಗಣಿಸಬೇಕಾದದ್ದೇ. ನಿಮ್ಮ ವಾದ ತೆಲುಗಿಗೆ ಮಾತ್ರವಲ್ಲ, ಒಟ್ಟಾರೆ ಬಾರತದ ಎಲ್ಲ ಬಾಶೆಗಳಿಗೂ ಅನ್ವಯವಾಗುತ್ತೆ ಅಂತ ಅನಿಸುತ್ತೆ", ಎಂದು ಕೊಂಚ ಒಮ್ಮತ ಸೂಚಿಸಿದೆ.
      "ಹವ್‍ದು! weak identity ವಾದ ಎಲ್ಲ ಬಾಶೆಗಳಿಗೂ ಅನ್ವಯವಾಗುತ್ತೆ. ಅದರಲ್ಲೂ, ಮುಕ್ಯವಾಗಿ ಕನ್ನಡಕ್ಕೆ ಕಟುವಾಗೇ ಅನ್ವಯವಾಗುತ್ತೆ. ಕನ್ನಡದಲ್ಲಿ ಆಗಿರೋದೂ ಇದೇನೆ. ಕನ್ನಡದ ಸಾಹಿತಿಗಳಿಗೆ, ಚಿಂತಕರಿಗೆ, ಮಟಾದೀಶರಿಗೆ, ಮುಂದಾಳುಗಳಿಗೆ ಕನ್ನಡಿಗರ ದ್ರಾವಿಡತನವಾಗಲೀ ಕನ್ನಡತನವಾಗಲೀ ಚರಿತ್ರೆಯುದ್ದಕ್ಕೂ ಯಾವತ್ತೂ ಮುಕ್ಯವಾಗಿಲ್ಲ. ಹಳೆಯ ಸಾಹಿತಿಗಳು ಉತ್ತರದ ಹಳಸಲು ಕತೆಗಳನ್ನೇ ಕನ್ನಡದಲ್ಲಿ ಬರೆದು ’ಕನ್ನಡ’ಸಾಹಿತ್ಯ ಅಂತ ಕರೆದರು. ಕನ್ನಡದ ತುಂಬಾ ಸಂಸ್ಕ್ರುತ ಪದಗಳನ್ನು ತುರುಕಿಟ್ಟರು. ಈಚೆಗೆ ನಮ್ಮ ಮುಂದಾಳುಗಳು ದೇಶದ ಒಗ್ಗಟ್ಟಿನ ನೆವದಲ್ಲಿ ತ್ರಿಬಾಶಾ ಸೂತ್ರಕ್ಕೆ ಒಪ್ಪಿಗೆ ಕೊಟ್ಟು ಕನ್ನಡಿಗರಿಗೆ ಹಿಂದಿ ಕಲಿಸಿ, ಅದರ ಮೂಲಕ ಹಿಂದೀ ವಲಸಿಗರಿಗೆ ಅನುಕೂಲ ಮಾಡಿಕೊಟ್ಟರು. ಇನ್ನು ಸಂಸ್ಕ್ರುತ ವಿಶ್ವವಿದ್ಯಾಲಯ ಬೇರೆ ಕಟ್ಟುತ್ತಾರಂತೆ. ಹೀಗೆ ನಾಡಿನ ನಡೆನುಡಿಗಳನ್ನು ಎಡ್ಡಾದಿಡ್ಡಿ ಕಡೆಗಣಿಸಿದರೆ ಗೊಂದಲವಿಲ್ಲದ ’ಕನ್ನಡ ಅಯ್‍ಡೆಂಟಿಟಿ’ ಅನ್ನೋದು ಎಲ್ಲಿಂದ ಬರುತ್ತದೆ? ನಮ್ಮಲ್ಲೂ ಕೆಲವು ಪ್ರದೇಶಗಳು ಹಿಂದುಳಿದಿವೆ. ಅವುಗಳ ಮುನ್ನಡೆಗೆ ಉಳಿದ ಪ್ರದೇಶಗಳು ಸ್ವಾರ‍್ತ ಬಿಟ್ಟು ಗಮನ ಹರಿಸಬೇಕು. ಇಂತಾ ನಿಸ್ವಾರ‍್ತ ನಿಲುವನ್ನು ತೆಗೆದುಕೊಳ್ಳೋದಕ್ಕೆ, ’ನಾವು ಕನ್ನಡಿಗರು ಒಂದೇ ಮಂದಿ. ನಮಗೆ ನಮ್ಮ ನಾಡಿನ ನಡೆನುಡಿ ಮುಕ್ಯ. ನಮ್ಮ ನಿಶ್ಟೆ ನಮ್ಮ ನಾಡಿಗೆ ಅಶ್ಟೆ’ ಅನ್ನೋ ಒಂದು ಕಡುವಾದ ಕನ್ನಡ ಅಯ್‍ಡೆಂಟಿಟಿ ಬೇಕೇ ಬೇಕು. ಇಲ್ಲದಿದ್ದರೆ ತೆಲಂಗಾಣದಂತಾ ದುರಂತ ನಮ್ಮಲ್ಲೂ ಆಗಬಹುದು", ಎಂದು ನುಡಿದು ನನ್ನ ಗೆಳೆಯರು ಚರ‍್ಚೆ ಮುಗಿಸಿದರು.
      ನಾಡಿನ ಮುನ್ನಡೆಯಲ್ಲಿ ಪ್ರಾದೇಶಿಕ ಅಸಮಾನತೆ, ಕನ್ನಡಿಗರ ಬಗ್ಗೆ ಕಿಂಚಿತ್ತೂ ಆದರವಿಲ್ಲದ ಹೊರಗಿನವರ ಮಿತಿಮೀರಿದ ವಲಸೆ, ದೆಹಲಿಯ ಒಡೆಯರ ಮುಂದೆ ತೊತ್ತುಗಳಂತೆ ಕಯ್ಕಟ್ಟಿ ನಿಲ್ಲುವ ನಮ್ಮ ’ಮುಂದಾಳುಗಳು’ - ಇವು ಇತ್ತೀಚಿನ ದಶಕಗಳಲ್ಲಿ ನಾವು ಕಂಡಿರುವ ವಾಸ್ತವಗಳು. ಈ ವಾಸ್ತವಗಳ ಎದುರು ನಮ್ಮ ಗೆಳೆಯರು ಒಡ್ಡಿದ ವಾದದ ತಿರುಳನ್ನೂ ಪ್ರಸ್ತುತತೆಯನ್ನೂ ಅಲ್ಲಗಳೆಯಲು ಆದೀತೆ? ನೀವೇ ಹೇಳಿ!

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶನಿವಾರ, ಆಗಸ್ಟ್ 10, 2013

Frankenstein ಪದಗಳು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಇತ್ತೀಚೆಗೆ ಟೀವೀಯಲ್ಲಿ ಸುದ್ದಿ ಕಾರ‍್ಯಕ್ರಮವೊಂದನ್ನು ನೋಡುತ್ತಿದ್ದೆ. ಸುದ್ದಿ ಓದುತ್ತಿದ್ದ ಆಳು ಯಾವುದೋ ಸುದ್ದಿಯೊಂದನ್ನು ಓದಿ, ಅದು ’ನಂಬಿಕಾರ‍್ಹ’ ಮೂಲಗಳಿಂದ ಸಿಕ್ಕಿದುದು ಎಂದು ಹೇಳಿಕೊಂಡರು. ಆ ’ನಂಬಿಕಾರ‍್ಹ’ ಎಂಬ ಪದವನ್ನು ಕೇಳಿದೊಡನೆ ನನ್ನಲ್ಲಿ ಹಲವಾರು ’ಒಳ್ಳೆಯವು’ ಎಂದು ಹೇಳಲಾರದ ಬಾವನೆಗಳು ಒಟ್ಟಿಗೇ ಮೂಡಿದವು. ಹಿಂದೊಮ್ಮೆ ’ನಂಬಲಾರ‍್ಹ’ ಎಂಬ ಇಂತಹುದೇ ಇನ್ನೊಂದು ಪದವನ್ನು ಕೇಳಿದ್ದು ಕೂಡಾ ನನ್ನ ನೆನಪಿಗೆ ಬಂತು. ಮೊದಲೆಲ್ಲಾ ಇಂತಹ ಪದಗಳನ್ನು ಕೇಳಿದಾಗ ನನಗೆ ಸಿಟ್ಟೇ ಬರುತ್ತಿತ್ತು. ಈಗಲಾದರೋ, ವಯಸ್ಸಿಗೆ ಅನುಗುಣವಾಗಿ ಮೆದುವಾಗಿರುವುದರಿಂದಲೋ ಇಲ್ಲ ಸೋಲನ್ನು ಹೆಚ್ಚುಕಡಿಮೆ ಒಪ್ಪಿಕೊಂಡಿರುವುದರಿಂದಲೋ, ಇಂತಹ ಪದಗಳನ್ನು ಕೇಳಿದರೆ ನನ್ನಲ್ಲಿ ಸಿಟ್ಟಿನ ಬದಲು ’ಅಯ್ಯೋ ಪಾಪ’ ಎನ್ನುವ ಉದ್ಗಾರಕ್ಕೆ ಹೊಂದುವ ಬಾವನೆಗಳು ಏಳುತ್ತವೆ. ಏಕೆ ಎಂದು ಕೇಳುತ್ತೀರಾ? ಹೇಳುತ್ತೇನೆ ಕೇಳಿ.
      ಕನ್ನಡ ನುಡಿಯಲ್ಲಿ ಬಳಕೆಯಾಗುತ್ತಿರುವ ಪದಗಳಲ್ಲಿ ಕನ್ನಡದ್ದೇ ಆದ ’ಅಚ್ಚಗನ್ನಡ’ ಎಂದು ಕರೆಸಿಕೊಳ್ಳುವ ಕಯ್, ಕಣ್ಣು, ಕೋಳಿ, ನಾಯಿ, ಮಳೆ, ಹೊಳೆ ಮುಂತಾದ ಪದಗಳಿವೆ. ಇವುಗಳ ಜೊತೆಗೆ ಹೊರನುಡಿಗಳಿಂದ ಎರವಲಾಗಿ ಬಂದ ದೀಪ, ಆಕಾಶ, ಪೆನ್ನು, ಮೇಜು ಮುಂತಾದ ’ಆಮದು’ ಪದಗಳಿವೆ. ಈ ಎರಡು ಬಗೆಯ ಪದಗಳಲ್ಲಿ ಅಸಹಜವಾದದ್ದು ಏನೂ ಇಲ್ಲ. ಆದರೆ, ಇವರೆಡು ಬಗೆಗಳಿಗೆ ಹೊರತಾಗಿ ಇನ್ನೊಂದು ಬಗೆಯ ಪದಗಳಿವೆ. ಈ ಪದಗಳನ್ನು ಸಹಜ ಎನ್ನಬೇಕೋ, ಅಸಹಜ ಎನ್ನಬೇಕೋ, ನನಗೆ ಸುಲಬವಾಗಿ ತೋಚುವುದಿಲ್ಲ. ಮೇಲೆ ತಿಳಿಸಿದ ’ನಂಬಿಕಾರ‍್ಹ’ ಎನ್ನುವುದು ಈ ಗುಂಪಿಗೆ ಸೇರಿದ್ದು. ಯಾವುದೇ ಕಿಡಿಗೇಡಿತನವಿಲ್ಲದೆ ಕೆಲ ಜನರಿಂದ ತಾನೇ ತಾನಾಗಿ ಇಂತಹ ಪದಗಳ ಸ್ರುಶ್ಟಿ ಆಗಿರುವುದರಿಂದ, ಇಂತಹ ಪದಗಳನ್ನೂ ’ಸಹಜ’ ಎಂದೇ ಕರೆಯಬೇಕಾಗಬಹುದು. ಆದರೆ, ಇಂತಹ ಪದಗಳು ’ಸರಿ’ ಎನ್ನುವುದು ಮಾತ್ರ ನನ್ನಂತಹ ಮನೋಬಾವನೆಯವರಿಗೆ ಸಾದ್ಯವಿಲ್ಲ.
      ಅದೇನು ಈ ’ನಂಬಿಕಾರ‍್ಹ’ ಎನ್ನುವ ಪದದಲ್ಲಿ ಆಗಿರುವ ಅಂತಾ ಎಡವಟ್ಟು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಹೀಗಿದೆ ನೋಡಿ. ’ನಂಬಿಕಾರ‍್ಹ’ ಪದ ಕನ್ನಡದ ’ನಂಬಿಕೆ’ ಎನ್ನುವ ಪದಕ್ಕೆ ’ಅರ‍್ಹ’ ಎನ್ನುವ ಸಂಸ್ಕ್ರುತ ಪದವನ್ನು ಯಾರೂ ಕಂಡುಕೇಳರಿಯದ ಸೊಲ್ಲರಿಮೆಯ (ವ್ಯಾಕರಣದ) ಕಟ್ಟಳೆಯ ಪ್ರಕಾರ ಅಂಟಿಸಿ ಮಾಡಿಕೊಂಡ ಪದ! ’ವಿಶ್ವಾಸಾರ‍್ಹ’ ಎಂಬ ಸರಿಯಾದ ರೀತಿಯಲ್ಲಿ ಮಾಡಿಕೊಂಡ ಸಂಸ್ಕ್ರುತ ಪದ ಒಂದಿದೆ. ಅದನ್ನೇ ಅನುಕರಿಸ ಹೊರಟು ಕನ್ನಡ ಸರಿಯಾಗಿ ತಿಳಿಯದವರು ಯಾರೋ ಮಾಡಿಟ್ಟ ತಪ್ಪುತಪ್ಪು ಪದ ಈ ನಮ್ಮ ’ನಂಬಿಕಾರ‍್ಹ’ ಪದ. ಮೊದ್ದು ಅನುಕರುಣೆಯಿಂದಾಗಿ ಇಂತಹ ಪದಗಳ ಟಂಕಣೆ ಆಗಾಗ್ಗೆ ಕನ್ನಡದಲ್ಲಿ ಆಗಿದೆ, ಆಗುತ್ತಿರುತ್ತದೆ. ಎತ್ತುಗೆಗೆ (ಉದಾಹರಣೆಗೆ), ’ಊಟೋಪಚಾರ’ ಎನ್ನುವ ಇನ್ನೊಂದು ಪದವಿದೆ. ಇದಂತೂ ತುಂಬಾ ಸ್ವಾರಸ್ಯವುಳ್ಳ ಪದ. ಇಲ್ಲಿ ಕನ್ನಡದ ’ಊಟ’ ಮತ್ತು ಸಂಸ್ಕ್ರುತದ ’ಉಪಚಾರ’ ಎಂಬ ಪದಗಳನ್ನು ಸಂಸ್ಕ್ರುತ ಸೊಲ್ಲರಿಮೆಯ ’ಗುಣ ಸಂದಿ’ ಎಂಬ ಕಟ್ಟಳೆಗೆ ಒಳಪಡಿಸಿ, ’ಊಟೋಪಚಾರ’ ಎಂದು ಯಾರೋ ಕಡುಜಾಣರು ಇಶ್ಟೆಲ್ಲಾ ತಿಳಿಯದೆಯೇ ಸಮೆದಿದ್ದಾರೆ! ಇವರ ಪ್ರತಿಬೆಗೆ ತಕ್ಕ ಪ್ರಶಸ್ತಿಯನ್ನು ಕೊಡಬೇಕು! ಈ ಪದದ ಬಳಕೆ ಸಾಮಾನ್ಯವಾಗಿ ಮದುವೆಗೆ ಪತ್ತಿದ ಬರಹಗಳಲ್ಲಿ ಕಾಣಬರುತ್ತದೆ. ಹಾಗಾಗಿ, ಸಂಸ್ಕ್ರುತದ ’ವರೋಪಚಾರ’ ಎಂಬ ಪದದ ದಡ್ಡ ಅನುಕರಣೆಯೇ ’ಊಟೋಪಚಾರ’ ಪದದ ಬರವಿಗೆ ಕಾರಣ ಎಂದು ಊಹಿಸುವುದು ಕಶ್ಟವಲ್ಲ. ಈ ತೆರನ ಅಮಾಯಕ ಅನುಕರಣೆಯಿಂದ ’ದೊಡ್ಡಸ್ತಿಕೆ’, ’ನೆಂಟಸ್ತಿಕೆ’, ’ಚಿಪ್ಪೇಂದ್ರಿಯ (chip + ಇಂದ್ರಿಯ)’ ಮುಂತಾದ ಇನ್ನೂ ಕೆಲ ಪದಗಳು ಕನ್ನಡದಲ್ಲಿ ಸ್ರುಶ್ಟಿಯಾಗಿವೆ.
      ಈ ರೀತಿ, ಕನ್ನಡದ ಪದಕ್ಕೆ ಬೇರೆ ಬಾಶೆಯ ಪದವನ್ನು ಅಂಟಿಸಿ ಮಾಡಿಕೊಳ್ಳುವ ಪದಗಳಿಗೆ ನಾನು ’ಪ್ರಾಂಕನ್‍ಸ್ಟಯ್ನ್’ (frankenstein) ಪದಗಳು ಎಂದು ಕರೆಯುತ್ತೇನೆ (Dr. Frankenstein ಎಂಬ ಒಬ್ಬ ಹುಚ್ಚು ವಿಜ್ನಾನಿ ಬೇರೆ ಬೇರೆ ಹೆಣಗಳಿಂದ ಅವಯವಗಳನ್ನು ಆಯ್ದು ಒಟ್ಟಿಗೆ ಸೇರಿಸಿ ಒಬ್ಬ ಕ್ರುತಕ ಮನುಶ್ಯನನ್ನು ಮಾಡಿದ ಎಂಬುದು ಪಡುವಲ ನುಡಿಪಿನಲ್ಲಿ, ಅಂದರೆ ಪಾಶ್ಚಾತ್ಯ ಸಾಹಿತ್ಯದಲ್ಲಿ, ಮೂಡಿಬಂದ ಒಂದು ಕತೆ). ಪ್ರಾಂಕನ್‍ಸ್ಟಯ್ನ್ ಪದಗಳು ಕನ್ನಡದಲ್ಲಿ ಬಹು ಹಿಂದಿನಿಂದಲೂ ಇವೆ. ಕನ್ನಡದ ಮೊತ್ತಮೊದಲ ಬರಹವಾದ ಪಲ್ಮಿಡಿ ಶಾಸನದಲ್ಲೇ ’ಪೆತ್ತಜಯನ್’ ಎಂಬ ಪ್ರಾಂಕನ್‍ಸ್ಟಯ್ನ್ ಪದವಿದೆ! ಕನ್ನಡದ ಪದಗಳ ಕೊನೆಗೆ ಸಂಸ್ಕ್ರುತದ ಒಟ್ಟುಗಳನ್ನು (ಪ್ರತ್ಯಯಗಳನ್ನು) ಅಂಟಿಸುವುದಂತೂ ನಮ್ಮಲ್ಲಿ ತುಂಬಾ ಹಳೆಯ ವಾಡಿಕೆ. ಸಮಗಾರ (ಕಾರ), ಹಣವಂತ (ವಂತ < ಮತ್),  ಕೂದಲುಮಯ (ಮಯ) ಮುಂತಾದ ಪದಗಳು ಕನ್ನಡದಲ್ಲಿ ಸಾಕಶ್ಟಿವೆ. ಇನ್ನು ’ಕಸುಬುದಾರ’, ’ಗುತ್ತಿಗೆದಾರ’ ಮುಂತಾದ ಪದಗಳಲ್ಲಿ ಕನ್ನಡದ್ದಲ್ಲದ ’ದಾರ್’ ಎಂಬ ಹಿನ್ನೊಟ್ಟಿನ ಬಳಕೆಯಾಗಿದೆ. ಹಿನ್ನೊಟ್ಟುಗಳನ್ನು ಬಳಸುವುದು ಸರಿ ಎಂದ ಮೇಲೆ ಬೇರೆ ನುಡಿಗಳ ಮುನ್ನೊಟ್ಟುಗಳನ್ನೂ ಏಕೆ ಬಳಸಬಾರದು? ಹೀಗೆ ಪ್ರಶ್ನೆ ಕೇಳಿಕೊಂಡೋ ಎಂಬಂತೆ ಈಗೀಗ ನಾವು ಸಂಸ್ಕ್ರುತದ ಪ್ರತ್ಯಯಗಳನ್ನು ಕನ್ನಡದ ಪದಗಳ ಮೊದಲಿಗೂ ಹಚ್ಚುತ್ತಿದ್ದೇವೆ. ಸನ್ನಡತೆ, ದುರ‍್ಬಳಕೆ, ಪುನರ‍್ಬಳಕೆ ಮುಂತಾದವು ಇದಕ್ಕೆ ಎತ್ತುಗೆ. ಅಶ್ಟಕ್ಕೇ ನಾವು ಸುಮ್ಮನಾಗಿಲ್ಲ. ಕನ್ನಡಕ್ಕೆ ಸಂಸ್ಕ್ರುತದ ಒಟ್ಟುಗಳನ್ನು ಅಂಟಿಸಿದ ಹಾಗೇ ಸಂಸ್ಕ್ರುತಕ್ಕೆ ಕನ್ನಡದ ಒಟ್ಟುಗಳನ್ನು ಏಕೆ ಅಂಟಿಸಬಾರದು? ಹೀಗೆ ಯೋಚಿಸಿ ನಾವು ಅದನ್ನೂ ಮಾಡಿದ್ದೇವೆ! ’ಮುಂಬಾಗ’, ’ಹಿಂಬಾರ’, ’ಮುಂದಾಲೋಚನೆ’, ’ಹೊಂಗಿರಣ’ ಎಂದೆಲ್ಲಾ ಪದಗಳನ್ನು ಬಳಕೆಗೆ ತಂದಿದ್ದೇವೆ. ಈಗ ಉಳಿದಿರುವುದು ಇಂಗ್ಲೀಶಿನ ಪ್ರತ್ಯಯಗಳನ್ನು ಕನ್ನಡಕ್ಕೆ ಅಂಟಿಸುವುದು ಮಾತ್ರ. ಅದೂ ಆಗಲೇ ಆಗಿದೆ ಎಂದು ನನಗೆ ಯಾರಾದರೂ ಹೇಳಿದರೆ ನಾನೇನೂ ಅಚ್ಚರಿ ಪಡುವುದಿಲ್ಲ.
      ಸಾಮಾನ್ಯ ಮಂದಿಗೆ ಪದಗಳ ಕಟ್ಟೋಣ ಹೇಗೆ ಆಗಿದೆ ಎಂಬುದರ ಅರಿವಿರುವುದಿಲ್ಲ. ಅವರಿಗೆ ತಮ್ಮ ನುಡಿಯ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಹಾಗಾಗಿ, ಪದಗಳು ಸರಿಯಾಗಿ ಮಾಡಿರುವಂತಹವೋ ಅಲ್ಲವೋ ಎನ್ನುವುದು ಅವರಿಗೆ ಗೊತ್ತಾಗುವುದಿಲ್ಲ. ಪದಗಳು ಹೇಗಿದ್ದರೂ ಅವುಗಳನ್ನು ಅವರು ಒಪ್ಪಿಕೊಳ್ಳುತ್ತಾರೆ ಮತ್ತು ಬಳಸುತ್ತಾರೆ. ಆದರೆ, ’ನಮ್ಮ ನುಡಿ ಎಂತಹುದು, ಯಾವ ಗುಂಪಿನದು, ಅದರ ವಿಶೇಶತೆ ಏನು, ಅದರ ಮಾಳ್ಕೆ ಹೇಗೆ, ಅದನ್ನು ಹೇಗೆ ಬಳಸುವುದು ಒಳ್ಳೆಯದು, ಅದರ ಬೆಳವಣಿಗೆಗೆ ಯಾವುದು ಒಳ್ಳೆಯದು’ ಮುಂತಾದ ಮಾಹಿತಿಗಳನ್ನು ತಿಳಿದುಕೊಂಡಿರುವವರಿಗೆ, ಎಡ್ಡಾದಿಡ್ಡಿಯಾಗಿ ಪದಗಳನ್ನು ಮಾಡಿಕೊಳ್ಳುವುದು ಒಪ್ಪಿಗೆಯಾಗುವುದಿಲ್ಲ. ನಮ್ಮ ಶಿಕ್ಶಣದಲ್ಲಿ ಕನ್ನಡದ ಬಗೆಗಿನ ಇಂತಹ ವಿಶಯಗಳ ಬಗ್ಗೆ ಸಾಕಶ್ಟು ಹೇಳಿಕೊಡುವುದಿಲ್ಲ. ಒಂದು ವೇಳೆ ಹೇಳಿಕೊಟ್ಟರೆ, ಬಹಳಶ್ಟು ಕನ್ನಡಿಗರು ಪ್ರಾಂಕನ್‍ಸ್ಟಯ್ನ್ ಪದಗಳನ್ನು ಇಶ್ಟಪಡುವುದಿಲ್ಲ ಎನ್ನುವುದು ನನ್ನ ನಂಬಿಕೆ. ಇಶ್ಟೆಲ್ಲಾ ಹೇಳಿದ ಮೇಲೆ, ಕನ್ನಡ ಒಂದು ಬಾಳುನುಡಿ (ಜೀವಂತ ಬಾಶೆ) ಎನ್ನುವುದನ್ನು ಮರೆಯಲಾಗುವುದಿಲ್ಲ. ಅದರ ಮೇಲೆ ಯಾರಿಗೂ ’ಕಾಪಿ ರಯ್‍ಟ್ ’ ಇಲ್ಲ. ಮಂದಿಗೆ, ’ಈ ಪದಗಳನ್ನು ಬಳಸಿ, ಈ ಪದಗಳನ್ನು ಬಳಸಬೇಡಿ’ ಎಂದು ಒತ್ತಾಯಿಸುವ ಅದಿಕಾರ ಯಾರಿಗೂ ಇಲ್ಲ. ಸರಿಯಾದ ಶಿಕ್ಶಣದಿಂದ ಮಾತ್ರ ಅವರ ಮನ ಒಲಿಸಬೇಕು. ಸರಿಯಾದ ಶಿಕ್ಶಣ ಯಾವಾಗ ದೊರೆಯುತ್ತದೋ ಯಾರಿಗೆ ಗೊತ್ತು? ಅಲ್ಲಿಯವರೆಗೂ ಪ್ರಾಂಕನ್‍ಸ್ಟಯ್ನ್ ಪದಗಳ ಟಂಕಣೆ ನಿಲ್ಲುವುದಿಲ್ಲ, ಬಳಕೆ ನೀಗುವುದಿಲ್ಲ. ಸದ್ಯಕ್ಕೆ, ಎಂದಾದರೊಂದು ದಿನ ಪ್ರಾಂಕನ್‍ಸ್ಟಯ್ನ್ ಪದಗಳಿಂದ ಕನ್ನಡಕ್ಕೆ ಬಿಡುಗಡೆ ದೊರೆಯಬಹುದು ಎಂದುಕೊಳ್ಳೋಣ, ಅಶ್ಟೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಗುರುವಾರ, ಜುಲೈ 25, 2013

ಕನ್ನಡಿಗರಿಗೇಕೆ ಸಂಸ್ಕ್ರುತ ವಿಶವಿದ್ಯಾಲಯದ ಹೊರೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ಕೆಳಗಿನ ಓಲೆಯನ್ನು ಜುಲಯ್ ೨೪, ೨೦೧೩ ರಂದು ಮಾಗಡಿ ಕ್ಶೇತ್ರದ ಶಾಸಕರಾದ ಶ್ರೀ ಎಚ್.ಸಿ.ಬಾಲಕ್ರಿಶ್ಣರ ಕಯ್ಗಿತ್ತೆ. ಬಾಲಕ್ರಿಶ್ಣರು ಇತ್ತೀಚೆಗೆ ಸುದ್ದಿಗಾರರ ಬಳಿ ಮಾಗಡಿ ತಾಲೂಕಿನಲ್ಲಿ ತೆರೆಯಬೇಕೆಂದಿರುವ ಸಂಸ್ಕ್ರುತ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‍ನ ನಿರ‍್ಮಾಣವನ್ನು ವಿರೋದಿಸುವುದಾಗಿ ಹೇಳಿಕೆ ನೀಡಿದ್ದಾರೆ. ’ಇವರು ಬರಿಯ ಮಾತಿನ ಮಲ್ಲರಲ್ಲ!’ - ಇದು ಅವರನ್ನು ಕಂಡ ಬಳಿಕ ನನಗೆ ಅನಿಸಿದ್ದು. ಒಂದು ವೇಳೆ ಸಂಸ್ಕ್ರುತ ವಿಶ್ವವಿದ್ಯಾಲಯದ ವಿರುದ್ದ ಹೋರಾಟ ಮೊದಲಾದರೆ ನಾವೆಲ್ಲ ಬಾಲಕ್ರಿಶ್ಣರಿಗೆ ಬೆಂಬಲವನ್ನು ನೀಡೋಣ.


      ಜುಲಯ್ ೨೨, ೨೦೧೩

      ಮಾಗಡಿ ಕ್ಶೇತ್ರದ ಶಾಸಕರಾದ ಮಾನ್ಯ ಎಚ್.ಸಿ.ಬಾಲಕ್ರಿಶ್ಣರಿಗೆ ವಂದನೆಗಳು.
      ಕಳೆದ ಸರ‍್ಕಾರದ ಆದೇಶದ ಮೇರೆಗೆ ನಿಮ್ಮ ತಾಲೂಕಿನಲ್ಲಿ ತೆರೆಯಬೇಕೆಂದಿರುವ ಸಂಸ್ಕ್ರುತ ವಿಶ್ವವಿದ್ಯಾಲಯದ ಕ್ಯಾಂಪಸ್‍ನ ವಿರುದ್ದ ಹೋರಾಟ ನಡೆಸುವುದಾಗಿ ಇತ್ತೀಚೆಗೆ ನೀವು ಮಾದ್ಯಮದವರಿಗೆ ಹೇಳಿಕೆ ಕೊಟ್ಟಿದ್ದೀರಿ. ’ಈ ಯೋಜನೆಯಿಂದ ಸ್ತಳೀಯರಿಗೆ ಯಾವುದೇ ಪ್ರಯೋಜನವಿಲ್ಲ. ತಾಲೂಕಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡದ ಸಂಸ್ಕ್ರುತ ವಿಶ್ವವಿದ್ಯಾಲಯ ನಮಗೆ ಬೇಡ’ ಎಂದು ಸುದ್ದಿಗಾರರ ಬಳಿ ಹೇಳಿದ್ದೀರಿ. ಈ ಸಂಗತಿ ಜುಲಯ್ ೨, ೨೦೧೩ ತಾರೀಕಿನ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯಾಗಿದೆ.
      ಸಂಸ್ಕ್ರುತ ವಿಶ್ವವಿದ್ಯಾಲಯ ಸಣ್ಣ ಯೋಜನೆಯಲ್ಲ. ಅದು ನಿಮ್ಮ ಕ್ಶೇತ್ರದ ನೂರು ಎಕರೆಗಳಶ್ಟು ನೆಲವನ್ನು ಕಬಳಿಸಲಿದೆ. ನಿಮ್ಮ ಕ್ಶೇತ್ರದ ಇಶ್ಟೊಂದು ಸಂಪನ್ಮೂಲವನ್ನು ಬಳಸಿಕೊಂಡರೂ ಅದಕ್ಕೆ ಪ್ರತಿಯಾಗಿ ಈ ವಿಶ್ವವಿದ್ಯಾಲಯ ಸ್ತಳೀಯರಿಗೆ ಯಾವ ಉಪಯೋಗವನ್ನೂ ದೊರಕಿಸಿಕೊಡುವುದಿಲ್ಲ ಎಂಬ ನಿಮ್ಮ ಗ್ರಹಿಕೆ ಸರಿಯಾದುದೇ. ಹಾಗಾಗಿ, ಅದರ ನಿರ‍್ಮಾಣವನ್ನು ವಿರೋದಿಸುವ ನಿಮ್ಮ ನಿಲುವು ತಕ್ಕ ನಿಲುವೇ ಆಗಿದೆ. ನಿಮ್ಮ ನಿಲುವನ್ನು ಕೇವಲ ಸ್ತಳೀಯರಲ್ಲದೆ ಅಸಂಕ್ಯಾತ ಇತರ ಕನ್ನಡಿಗರೂ ಬೆಂಬಲಿಸುತ್ತಾರೆಂಬ ನಂಬಿಕೆ ನನಗಿದೆ.
      ನೀವು ಜನಪ್ರತಿನಿದಿಗಳಾಗಿರುವುದರಿಂದ, ನೀವು ಪ್ರತಿನಿದಿಸುವ ಜನಗಳ ಒಳಿತನ್ನು ಮುಂದಿಟ್ಟುಕೊಂಡು, ಸಹಜವಾಗಿಯೆ ಈ ವಿಶಯವನ್ನು ಸ್ತಳೀಯ ದ್ರುಶ್ಟಿಕೋನದಿಂದ ನೋಡಿ, ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದೀರಿ. ಆದರೆ, ಈ ವಿಶಯವನ್ನು ಕೇವಲ ಸ್ತಳೀಯ ದ್ರುಶ್ಟಿಕೋನದಿಂದಲ್ಲದೆ ಸಮಸ್ತ ಕನ್ನಡಿಗರ ದ್ರುಶ್ಟಿಕೋನದಿಂದಲೂ ಪರಿಗಣಿಸಬಹುದು. ಇದರ ಅರಿವು ನಿಮಗೂ ಇರುತ್ತದೆ. ಈ ವಿಶಾಲ ದ್ರುಶ್ಟಿಕೋನದ ಬಗ್ಗೆ ಸಂಕ್ಶಿಪ್ತವಾಗಿ ಇಲ್ಲಿ ಒಂದೆರಡು ವಿಶಯಗಳನ್ನು ಮಂಡಿಸಲು ನಾನು ಬಯಸುತ್ತೇನೆ.
      ಸಂಸ್ಕ್ರುತ ಬಾಶೆಯಿಂದ ಕನ್ನಡಿಗರಿಗೆ ಏನು ಪ್ರಯೋಜನ? ಇದು ಎಲ್ಲ ಕನ್ನಡಿಗರೂ ಕೇಳಬೇಕಾದ ಮೊತ್ತಮೊದಲ ಪ್ರಶ್ನೆ. ಏನೂ ಇಲ್ಲ. ಕಿಂಚಿತ್ತೂ ಇಲ್ಲ. ಎಳ್ಳಶ್ಟೂ ಇಲ್ಲ. ಇದು ಉತ್ತರ! ಸಂಸ್ಕ್ರುತ ಕಲಿಯುವುದರಿಂದ ಕನ್ನಡ ಯುವಕರಿಗೆ ಕೆಲಸ ದೊರೆಯುವುದೆ? ಇಲ್ಲ. ಕೆಲಸ ಕೊಡುವ ಯಾವ ಉದ್ಯಮದವರಾಗಲೀ ಸಂಸ್ತೆಯವರಾಗಲೀ, ’ನೀನು ಸಂಸ್ಕ್ರುತ ಕಲಿತಿದ್ದೀಯಾ?’ ಎಂದು ಉದ್ಯೋಗಾರ‍್ತಿಯನ್ನು ಕೇಳುತ್ತಾರೆಯೆ? ಎಂದೂ ಇಲ್ಲ. ಏಕೆಂದರೆ, ಸಂಸ್ಕ್ರುತದಿಂದ ನಿಜಪ್ರಪಂಚದ ವ್ಯವಹಾರದಲ್ಲಿ ಯಾವ ಉಪಯೋಗವೂ ಇಲ್ಲ.
      ವಾಸ್ತವ ಹೀಗಿದ್ದೂ ಸಂಸ್ಕ್ರುತ ವಿಶ್ವವಿದ್ಯಾಲಯವನ್ನು ತೆರೆಯುವ ಅವ್‍ಚಿತ್ಯವೇನು? ಈ ಪ್ರಶ್ನೆಯನ್ನು ಸಂಸ್ಕ್ರುತ ವಿಶ್ವವಿದ್ಯಾಲಯದ ಕುಲಪತಿ ಮಲ್ಲೇಪುರಮ್ ವೆಂಕಟೇಶರಿಗೆ ಈ ಹಿಂದೆ ಕೆಲ ಬುದ್ದಿಜೀವಿ ಕನ್ನಡಿಗರು ಕೇಳಿದ್ದರು. ಅದಕ್ಕೆ ಅವರು ಕೊಟ್ಟ ಒಟ್ಟಾರೆ ಉತ್ತರ ಹೀಗಿತ್ತು - ’ಹಳಗನ್ನಡದ ಕಾವ್ಯಗಳಲ್ಲಿ ಸಂಸ್ಕ್ರುತದ ಬಳಕೆ ಎಶ್ಟೊಂದು ವ್ಯಾಪಕವಾಗಿ ಆಗಿದೆ ಎಂದರೆ, ಸಂಸ್ಕ್ರುತದ ತಿಳಿವಳಿಕೆ ಇಲ್ಲದೆ ಅವುಗಳನ್ನು ಸರಿಯಾಗಿ ಅರ‍್ತ ಮಾಡಿಕೊಳ್ಳಲು ಆಗುವುದಿಲ್ಲ’. ಹೇಗಿದೆ ನೋಡಿ ಈ ಸಮರ‍್ತನೆ! ಹೆಚ್ಚುಕಡಿಮೆ ಇಂತಹ ವಾದವನ್ನೇ ಸಂಸ್ಕ್ರುತ ವಿಶ್ವವಿದ್ಯಾಲಯದ ಪರವಾಗಿರುವ ಎಲ್ಲರೂ ಸಾಮಾನ್ಯವಾಗಿ ಮುಂದಿಡುವುದು. ಇಂತಹ ಹುಲು ವಾದಕ್ಕೆ ಏನು ಹೇಳುವುದು? ಇವರ ವಾದ ಎಶ್ಟು ಪೊಳ್ಳು ಎನ್ನುವುದಕ್ಕೆ ಒಂದು ಸರಳ ಉದಾಹರಣೆ ಕೊಡುತ್ತೇನೆ, ಕೇಳಿ. ಯಾವಾಗಲಾದರೂ ಒಮ್ಮೆ ನಿಮಗೇನಾದರೂ ಕೊಂಚ ಹಾಲಿನ ಅಗತ್ಯ ಬಿದ್ದರೆ, ಅದನ್ನು ಅಂಗಡಿಗೆ ಹೋಗಿ ಕೊಂಡುಕೊಳ್ಳುತ್ತೀರೋ ಇಲ್ಲ ಕೊಟ್ಟಿಗೆ ಕಟ್ಟಿ, ಹಸುವನ್ನು ಸಾಕಿ ಕರೆದುಕೊಳ್ಳುತ್ತೀರೋ? ಕೊಟ್ಟಿಗೆ ಕಟ್ಟಿ, ಹಸುವನ್ನು ಸಾಕಿ ಕರೆದುಕೊಳ್ಳಬೇಕು ಎನ್ನುತ್ತಾರೆ ಸಂಸ್ಕ್ರುತ ವಿಶ್ವವಿದ್ಯಾಲಯ ಬೇಕು ಎನ್ನುವ ಸಂಸ್ಕ್ರುತದ ಒಣ ಅಬಿಮಾನಿಗಳು! ದೇಶದ ತುಂಬೆಲ್ಲಾ ಉತ್ಕ್ರುಶ್ಟವಾದ ಸಂಸ್ಕ್ರುತ ವಿಶ್ವವಿದ್ಯಾಲಯಗಳಿವೆ. ಕೆಲ ಪಂಡಿತರನ್ನು ಅಲ್ಲಿಗೇ ಕಳಿಸಿ, ಕನ್ನಡಕ್ಕೆ ಬೇಕಾಗುವಶ್ಟು ಸಂಸ್ಕ್ರುತದ ಅದ್ಯಯನವನ್ನು ಅವರಿಂದ ಮಾಡಿಸಿದರೆ ಸಾಕಾಗುವುದಿಲ್ಲವೆ? ಈ ಅಲ್ಪ ಕಾರಣಕ್ಕಾಗಿ ಒಂದು ಇಡಿಯ ಸಂಸ್ಕ್ರುತ ವಿಶ್ವವಿದ್ಯಾಲಯವನ್ನೇ ತೆರೆದು ನಡೆಸಬೇಕೆ? ಕನ್ನಡಿಗರ ಸಂಪನ್ಮೂಲಗಳನ್ನು ಇಂತಹ ಪ್ರಯೋಜನಕ್ಕೆ ಬಾರದ ಯೋಜನೆಗಳ ಸಲುವಾಗಿ ಪೋಲು ಮಾಡಬೇಕೆ?
      ಇಂದು ಕನ್ನಡಿಗರಿಗೆ ಬೇಕಾಗಿರುವುದು ಇಂಗ್ಲೀಶ್. ಸಂಸ್ಕ್ರುತವಲ್ಲ. ಇಂದು ಇಡೀ ಪ್ರಪಂಚವೇ ಇಂಗ್ಲೀಶ್ ಬಾಶೆಯನ್ನು ಕಲಿಯುತ್ತಿದೆ. ಇಂಗ್ಲೀಶನ್ನು ಅಶ್ಟಾಗಿ ಹಚ್ಚಿಕೊಂಡಿರದಿದ್ದ ಪ್ರಾನ್ಸ್, ಜಪಾನ್, ಚೀನಾ ಮುಂತಾದ ರಾಶ್ಟ್ರಗಳೇ ಇಂದು ಮುತುವರ‍್ಜಿಯಿಂದ ಇಂಗ್ಲೀಶ್ ಕಲಿಯುತ್ತಿವೆ. ಇಡೀ ಪ್ರಪಂಚಕ್ಕೇ ಒಂದು ವ್ಯಾವಹಾರಿಕ ಬಾಶೆಯಾಗಿ ಇಂದು ಇಂಗ್ಲೀಶ್ ತಲೆ ಎತ್ತಿ ನಿಂತಿದೆ. ಇಂದಿನ ಪ್ರಪಂಚದಲ್ಲಿ ಇಂಗ್ಲೀಶ್ ಕಲಿಯುವುದರಿಂದ ಆಗುವ ಲಾಬ ಕಡಿಮೆಯಲ್ಲ. ಇಂಗ್ಲೀಶ್ ಬಾರದಿದ್ದರೆ ನಶ್ಟ ಕಂಡಿತ. ಕನ್ನಡ ಮಾದ್ಯಮದಲ್ಲಿ ಓದುವವರೂ ಕೂಡ ಒಂದಲ್ಲಾ ಒಂದು ಹಂತದಲ್ಲಿ ಇಂಗ್ಲೀಶಿನಲ್ಲಿ ವ್ಯವಹರಿಸಲೇ ಬೇಕಾಗುತ್ತದೆ. ಸ್ವಾಬಿಮಾನಕ್ಕೂ ಇಂದು ಇಂಗ್ಲೀಶ್ ಬೇಕಾಗಿದೆ. ಇಂಗ್ಲೀಶಿನಲ್ಲಿ ಮಾತನಾಡಲು ಬಾರದೆ ಕೀಳರಿಮೆ ಅನುಬವಿಸುತ್ತಿರುವ ಲಕ್ಶಾಂತರ ಕನ್ನಡ ತರುಣರ ಪಾಡು ಯಾರಿಗೆ ತಿಳಿದಿಲ್ಲ? ಇಂಗ್ಲೀಶ್ ಬಾರದೆ ಬೇರೆ ದಾರಿ ಇಲ್ಲ ಎನ್ನುವಶ್ಟರಮಟ್ಟಿಗೆ ಇಂದು ಇಂಗ್ಲೀಶ್ ಅನಿವಾರ‍್ಯವಾಗಿದೆ. ಆದ್ದರಿಂದ, ಕನ್ನಡಿಗರು ಇಂದು ಕನ್ನಡದ ಜೊತೆ ಹೆಚ್ಚುವರಿಯಾಗಿ ಕಲಿಯಬೇಕಾಗಿರುವುದು ಇಂಗ್ಲೀಶನ್ನು. ಕನ್ನಡಿಗರ ಸಾರ‍್ವಜನಿಕ ಹಣ ಸಲ್ಲಬೇಕಾಗಿರುವುದು ಇಂಗ್ಲೀಶ್ ಕಲಿಕೆಗೆ. ಸಂಸ್ಕ್ರುತ ಕಲಿಕೆಗೆ ಅಲ್ಲ.
      ’ಕೋಟಿಗಟ್ಟಲೆ ಹಣ ನಿತ್ಯವೂ ಪೋಲಾಗುತ್ತಿರುತ್ತದೆ. ಸಂಸ್ಕ್ರುತ ಬಾಶೆಗೆ ಕೊಂಚ ಹಣ ಹೋದರೆ ಕೊಳ್ಳೆ ಹೋದುದು ಏನು?’ ಎಂದು ಸಂಸ್ಕ್ರುತ ದುರಬಿಮಾನಿಗಳು ಸಾಮಾನ್ಯವಾಗಿ ಸವಾಲು ಹಾಕುತ್ತಾರೆ. ಅವರಿಗೆ ನಾವು ಹೇಳಬೇಕಾದುದು ಇಶ್ಟೇ - ಪೋಲು ಪೋಲೇ. ವ್ಯರ‍್ತ ವ್ಯರ‍್ತವೇ. Wasting of resources is never justified!
     ಇವೆಲ್ಲ ಕಾರಣಗಳಿಂದಾಗಿ ಕನ್ನಡ ನಾಡಿನಲ್ಲಿ ಕನ್ನಡಿಗರ ಹಣ ಸುರಿದು ಸಂಸ್ಕ್ರುತ ವಿಶ್ವವಿದ್ಯಾಲಯವೊಂದನ್ನು ಸಾಕುವ ಆಲೋಚನೆ ತಕ್ಕುದಲ್ಲ. ಇದು ಅನೇಕ ಕನ್ನಡಿಗರಿಗೆ ತಿಳಿದಿದೆ. ತಕ್ಕ ಮುಂದಾಳ್ತನ ಇಲ್ಲದಿರುವುದರಿಂದ ಹಾಗೂ ತಕ್ಕ ಸನ್ನಿವೇಶ ಒದಗಿ ಬಂದಿಲ್ಲವಾದ್ದರಿಂದ, ಅವರು ಸದ್ಯಕ್ಕೆ ಸುಮ್ಮನೆ ಕುಳಿತಿದ್ದಾರೆ. ಗಂಬೀರವಾದ ಹೋರಾಟ ನಡೆಯುವ ಸೂಚನೆ ಕಂಡು ಬಂದರೆ ಅವರೆಲ್ಲರೂ ಎದ್ದು ತಮ್ಮ ಬೆಂಬಲವನ್ನು ವ್ಯಕ್ತಪಡಿಸುವುದರಲ್ಲಿ ಸಂದೇಹವಿಲ್ಲ. ಮಾನ್ಯ ಬಾಲಕ್ರಿಶ್ಣರೆ, ಅಂತಹ ಒಂದು ಹೋರಾಟಕ್ಕೆ ನಿಮ್ಮ ಕ್ಶೇತ್ರದಿಂದಲೇ, ನಿಮ್ಮಿಂದಲೇ ಚಾಲನೆ ದೊರಕಲಿ ಎಂದು ನಾನು ಹಾರಯ್ಸುತ್ತೇನೆ. ನಿಮ್ಮ ಹೋರಾಟಕ್ಕೆ ನನ್ನ ಯಾವತ್ತೂ ಬೆಂಬಲವಿರುತ್ತದೆಂಬ ಸಂಪೂರ್ಣ ನಂಬುಗೆಯನ್ನು ನಿಮಗೆ ನೀಡುತ್ತೇನೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಕನ್ನಡಿಗರೂ ದ್ರಾವಿಡರೆ ಗೆಳೆಯರ ಬಳಗ
(kannadigarudravidare.blogspot.in)
kannadigarudravidare@gmail.com

ಬುಧವಾರ, ಜುಲೈ 10, 2013

ಮಹಿಶಿ ವರದಿಗೆ ಸಂವಿದಾನದ ಅಡ್ಡಗಾಲು!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಮುಕ್ಯಮಂತ್ರಿ ಸಿದ್ದರಾಮಯ್ಯನವರು ಸರೋಜಿನಿ ಮಹಿಶಿ ವರದಿಯನ್ನು ಪರಿಶ್ಕರಿಸುವುದಕ್ಕೆ ಆದೇಶ ನೀಡುವುದಾಗಿ ಹೇಳಿದ್ದಾರೆ. ಹಾಗೆಂದು ಅವರು ಹೇಳಿರುವುದನ್ನು ಪತ್ರಿಕೆಗಳು ಕಳೆದ ತಿಂಗಳ ಹದಿನಾರರಂದು ವರದಿ ಮಾಡಿವೆ. ಪರಿಶ್ಕರಿಸುವುದು ಎಂದರೆ ತಕ್ಕ ಬಗೆಯ ಮಾರ‍್ಪಾಟುಗಳಿಂದ ಮೂರು ದಶಕಳಶ್ಟು ಹಳೆಯದಾದ ಈ ವರದಿಯನ್ನು ಇಂದಿನ ನೆಲೆನಡೆಗೆ ಹೊಂದಿಸುವುದು ಎಂದರ‍್ತ. ಹಾಗೆ ಮಾಡುವುದರಿಂದ ಅದರ ಅನುಶ್ಟಾನ ಹಗುರವೂ ಅರ‍್ತಪೂರ‍್ಣವೂ ಆಗಬಹುದೆಂಬುದು ಹೇಳಿಕೆಯ ಇಂಗಿತ. ಸಿದ್ದರಾಮಯ್ಯನವರಿಗಾದರೂ ಮಹಿಶಿ ವರದಿಯ ನೆನಪು ಇನ್ನೂ ಇದೆಯಲ್ಲಾ ಎನ್ನುವುದು ಒಂದು ಸಂತಸದ ಸಂಗತಿ.
      ವರದಿಗೆ ಮಾರ‍್ಪಾಟುಗಳೇನೋ ಆಗಲೇ ಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಎಂತಹ ಮಾರ‍್ಪಾಟುಗಳು ಆಗಬೇಕು? ಇದರ ಬಗ್ಗೆ ಸರ‍್ಕಾರ ಕೊಂಚ ಚಚ್ಚರದಿಂದ ಯೋಚಿಸಬೇಕು. ಮಾರ‍್ಪಾಡುಗಳು ತಕ್ಕವಲ್ಲದಿದ್ದರೆ ವರದಿಯ ಅನುಶ್ಟಾನಕ್ಕೆ ಸಂವಿದಾನದ ಅಡ್ಡಗಾಲು ಬೀಳುವುದು ಕಂಡಿತ. ನ್ಯಾಯಾಲಯಗಳು ಸಂವಿದಾನದ ಪರ ತೀರ‍್ಪುಗಳನ್ನು ಕೊಡುವುದೂ ಅಶ್ಟೇ ಕಂಡಿತ. ಹೀಗೆ ಏಕೆ ಹೇಳುತ್ತಿದ್ದೇನೆ ಎಂದರೆ, ನಮ್ಮ ಉಚ್ಚ ನ್ಯಾಯಾಲಯ ಈಗಾಗಲೇ ಈಗಿರುವ ಮಹಿಶಿ ವರದಿಯ ಬಗ್ಗೆ ತನ್ನ ಅನಿಚ್ಚೆಯನ್ನು ಕಡ್ಡಿ ಮುರಿದಂತೆ ವ್ಯಕ್ತಪಡಿಸಿದೆ. ಸಂವಿದಾನವನ್ನು ಮುಂದಿಟ್ಟುಕೊಂಡು ಮಹಿಶಿ ವರದಿಯನ್ನು ಹೊಡೆದುರುಳಿಸಿದೆ.
      ಕಳೆದ ವರ‍್ಶ ನಮ್ಮ ಹಿರಿಯ ನಾಗರೀಕರಾದ ವಿನುತ, ’ಕರ‍್ನಾಟಕದ ಅಯ್‍ಟೀ ಕಂಪನಿಗಳು ಕೆಲಸ ಕೊಡುವಲ್ಲಿ ಕನ್ನಡಿಗರನ್ನು ಬೇಕೆಂದೇ ಕಡೆಗಾಣಿಸುತ್ತಿವೆ. ಆದ್ದರಿಂದ ಮಹಿಶಿ ವರದಿಯ ಸಂಪೂರ‍್ಣ ಅನುಶ್ಟಾನ ನಮ್ಮ ನಾಡಿನ ಉದ್ಯಮಗಳಲ್ಲಿ ಆಗಬೇಕು’ ಎಂದು ಆಗ್ರಹಿಸಿ ಉಚ್ಚ ನ್ಯಾಯಾಲಯದಲ್ಲಿ ಸಾರ‍್ವಜನಿಕ ಹಿತಾಸಕ್ತಿಯ ದಾವೆ ಹೂಡಿದ್ದರು. ’ಬೆಂಗಳೂರಿನ ಅಯ್‍ಟೀ ಕಂಪನಿಗಳಲ್ಲಿ ಕೆಲಸ ಮಾಡುವ ಕನ್ನಡಿಗರ ಸಂಕ್ಯೆ ನೂರಕ್ಕೆ ಹತ್ತರಶ್ಟೂ ಇಲ್ಲ. ಅದೇ ಚೆನ್ನಯ್‍ನ ಅಯ್‍ಟೀ ಕಂಪನಿಗಳಲ್ಲಿ ದುಡಿಯುವ ತಮಿಳರ ಸಂಕ್ಯೆ ಮತ್ತು ಹಯ್ದರಾಬಾದಿನ ಅಯ್‍ಟೀ ಕಂಪನಿಗಳಲ್ಲಿ ಕೆಲಸ ಮಾಡುವ ತೆಲುಗರ ಸಂಕ್ಯೆ ನೂರಕ್ಕೆ ಎಪ್ಪತ್ತಕ್ಕೂ ಮಿಕ್ಕಿದೆ’ ಎಂದು ದಾವೆಯಲ್ಲಿ ವಾದಿಸಿದ್ದರು. ಇನ್ನೂ ಮುಂದುವರೆದು, ’ಕಾಲೇಜುಗಳಿಂದ ನೇರವಾಗಿ ಕಂಪನಿಗೆ ಪದವೀದರರನ್ನು ಸೇರಿಸಿಕೊಳ್ಳುವಾಗ ಮತ್ತು ಕಂಪನಿಯೊಳಗೆ ಬಡ್ತಿಗಳನ್ನು ಕೊಡುವಾಗಲೂ ಕನ್ನಡಿಗರ ಕಡೆಗಣನೆ ಉದ್ದೇಶಪೂರ‍್ವಕವಾಗೇ ಆಗುತ್ತಿದೆ’ ಎಂದೂ ಅವರು ದೂರಿದ್ದರು.
      ವಿನುತರ ಈ ದಾವೆಗೆ ಈ ವರ‍್ಶ ಹಯ್‍ಕೋರ‍್ಟಿನ ವಿಬಾಗೀಯ ಬೆಂಚ್ ತೀರ‍್ಪು ಕೊಟ್ಟಿತು. ಅದು ಹೀಗಿದೆ - ’ಉದ್ಯೋಗದ ವಿಶಯದಲ್ಲಿ ಬಾಶೆಯನ್ನು ಪರಿಗಣಿಸುವುದು ಅಕ್ರಮವಾಗುತ್ತದೆ. ಸಂವಿದಾನದ ಹದಿನಾಲ್ಕನೆಯ ಮತ್ತು ಹದಿನಾರನೆಯ ಆರ‍್ಟಿಕಲ್ಲುಗಳನ್ನು ಮೀರಿದಂತಾಗುತ್ತದೆ. ಬಾಶೆಯ ಆದಾರದ ಮೇಲೆ ಕೆಲಸಗಳನ್ನು ಕೊಡುವಂತೆ ಸರ‍್ಕಾರಕ್ಕೆ ನ್ಯಾಯಾಲಯಗಳು ಆದೇಶ ಮಾಡುವಂತಿಲ್ಲ. ಹಾಗೆ ಮಾಡುವುದಕ್ಕೆ ಸಂಸತ್ತಿಗೆ ಮಾತ್ರ ಅಳವಿರುತ್ತದೆ.’ ಸಂಸತ್ತಿಗೆ ಮಾತ್ರ ಅದಿಕಾರ ಇದೆ ಎಂದರೆ, ’ತಕ್ಕ ಕಾನೂನುಗಳನ್ನು ಜಾರಿ ಮಾಡುವುದೂ, ಸಂವಿದಾನವನ್ನು ಅದಕ್ಕಾಗಿ ತಿದ್ದುಪಡಿ ಮಾಡುವುದೂ - ಇವೇ ನಾಡಿನ ಮಕ್ಕಳಿಗೆ ಆದ್ಯತೆಯಿಂದ ಕೆಲಸ ದೊರಕಿಸಿ ಕೊಡುವುದಕ್ಕೆ ದಾರಿ.’ ಎಂದರ‍್ತ. ಈ ತೀರ‍್ಪನ್ನು ನೋಡಿದರೆ, ಮಹಿಶಿ ವರದಿಯನ್ನು ಬರೀ ಪರಿಶ್ಕರಿಸಿದ ಮಾತ್ರಕ್ಕೆ ಅದರ ಅನುಶ್ಟಾನ ನ್ಯಾಯಾಲಯದ ಅಡ್ಡಗಾಲನ್ನು ದಾಟುವುದೆ ಎಂಬ ಅನುಮಾನ ಮೂಡುತ್ತದೆ. ನುರಿತ ನ್ಯಾಯವಾದಿಗಳೇ ಈ ಸಂದೇಹವನ್ನು ಬಗೆಹರಿಸಬೇಕು.
      ಕಂಪನಿಗಳು ಇಂದು ಬರೀ ’ಪ್ರತಿಬೆಯ’ ಆದಾರದ ಮೇಲೆ ಕೆಲಸಗಳನ್ನು ಕೊಡುತ್ತಿರುವುದಾಗಿ ಹೇಳಿಕೊಳ್ಳುತ್ತಿವೆ.  ಬರೀ ’ಪ್ರತಿಬೆಗೆ’ ಮನ್ನಣೆ ಕೊಡುವ, ಕನ್ನಡಿಗರ ಸ್ತಳೀಯತೆಗೆ ಮನ್ನಣೆ ಕೊಡದ, ತಮ್ಮ ಒಳಿತನ್ನು ಮಾತ್ರ ಲೆಕ್ಕವಿಡುವ ಕಂಪನಿಗಳಿಗೆ ನಮ್ಮ ನಾಡಿನ ಸಂಪನ್ಮೂಲಗಳನ್ನು ಬಿಟ್ಟಿಯಾಗೋ ರಿಯಾಯತಿಯಲ್ಲೋ ಏಕೆ ಕೊಡಬೇಕು? ತೆರಿಗೆ ವಿನಾಯತಿಗಳನ್ನು ಏಕೆ ಕೊಡಬೇಕು? ಈ ಕಂಪನಿಗಳಿಂದ ನಮಗೇನು ವಿಶೇಶ ಲಾಬ? ಯಾವುದೇ ಹುದ್ದೆಗಾಗಲೀ, ಅದನ್ನು ನಿಬಾಯಿಸುವ ಕೌಶಲವಿರುವ ಕನ್ನಡಿಗ ಅಬ್ಯರ‍್ತಿಗಳಿದ್ದರೆ, ಅವರೇ ಅದಕ್ಕೆ ನೇಮಕವಾಗಬೇಕು. ಕನ್ನಡಿಗ ಅಬ್ಯರ‍್ತಿಗಳ ಕೊರತೆ ಇದ್ದರೆ ಮಾತ್ರ ಬೇರೆಯವರನ್ನು ನೇಮಕ ಮಾಡಿಕೊಳ್ಳಬಹುದು. ಈ ಬಗೆಯ ಒಟ್ಟಾರೆ ಶರತ್ತಿಗೆ ಒಪ್ಪದಿರುವ ಕಂಪನಿಗಳಿಗೆ ನಮ್ಮ ನಾಡಿನ ಸಂಪನ್ಮೂಲಗಳು ರಿಯಾಯತಿಯಲ್ಲಿ ಏಕೆ ದೊರೆಯಬೇಕು?
      ಇನ್ನು ಕನ್ನಡಿಗರ ಕೆಲಸಗಳನ್ನು ಕಸಿದುಕೊಳ್ಳುತ್ತಿರುವರಲ್ಲಿ ಎರಡು ಬಗೆ ಇದೆ. ಒಂದು, ಕನ್ನಡಿಗರಂತೆಯೆ ದ್ರಾವಿಡರಾದ ನೆರೆನಾಡವರಾದ ತಮಿಳರು, ತೆಲುಗರು ಮತ್ತು ಮಲಯಾಳರು. ಇನ್ನೊಂದು, ಲೆಕ್ಕವಿಲ್ಲದ ಸಂಕ್ಯೆಯಲ್ಲಿ ಬಂದು ಸೇರಿಕೊಳ್ಳುತ್ತಿರುವ ಉತ್ತರ ಬಾರತದವರು. ಈ ಉತ್ತರದವರ ವರಸೆಯೇ ಬೇರೆ. ದಕ್ಶಿಣದವರು ಸ್ತಳೀಯ ಬಾಶೆಯ ಸ್ತಿತಿಯಲ್ಲಿ ಏರುಪೇರು ಮಾಡುವುದು ಕಡಿಮೆ. ಆದರೆ ಉತ್ತರದವರು ಹೋದಲ್ಲೆಲ್ಲಾ ಹಿಂದೀ ಪತಾಕೆಯನ್ನು ನೆಡುತ್ತಾರೆ. ಈ ಹಿಂದೆ ಹೇಳಿದ ದಾವೆಯಲ್ಲಿ ವಿನುತರು ಹಿಂದೀ ಮಂದಿಗಳ ಬಗ್ಗೆಯೂ, ’ಅಯ್‍ಟೀ ಕಂಪನಿಗಳಲ್ಲಿ ಹಿಂದಿಯ ಹೇರಿಕೆ ನಡೆಯುತ್ತದೆ. ಕಂಪನಿ ಬಸ್ಸುಗಳಲ್ಲಿ ಬರೀ ಹಿಂದೀ ಹಾಡುಗಳನ್ನು ಮಾತ್ರ ಹಾಕುತ್ತಾರೆ. ಕನ್ನಡ ನಾಡಹಬ್ಬದ ಆಚರಣೆಗೆ ಅಡ್ಡಗಾಲು ಹಾಕುತ್ತಾರೆ.’ ಎಂದು ಅಳಲನ್ನು ತೋಡಿಕೊಂಡಿದ್ದರು. ಹಿಂದೀವಾಲರ ಈ ಬಗೆಯ ದಬ್ಬಾಳಿಕೆಯ ಬಗ್ಗೆ ಅಲ್ಲಲ್ಲಿ ಆಗಾಗ್ಗೆ ಪ್ರತ್ಯೇಕ ವರದಿಗಳೂ ಆಗಿವೆ. ಹಿಂದೀ ಮಂದಿಯೇ ಹೀಗೆ ಎನಿಸುತ್ತದೆ. ಮುಂಬಯ್ ಹೊಳಲನ್ನು ಹಿಂದೀಮಯ ಮಾಡಿದ ಇವರಿಗೆ ಬೆಂಗಳೂರನ್ನೂ ಹಾಗೇ ಮಾಡುವುದು ಕಶ್ಟವೆ?
      ಉದ್ಯೋಗ, ವಲಸೆ, ಆಡಳಿತ ಬಾಶೆ - ಇಂತಹ ಸಮಸ್ಯೆಗಳಿಗೆ ಸಂವಿದಾನದ ತಿದ್ದುಪಡಿ ಇಲ್ಲದೆ ಹುರುಳುಳ್ಳ ಬಗೆಹರಿಕೆ ಸಾದ್ಯವಿಲ್ಲವೇನೋ. ಹಾಗಾದರೆ, ಸಂವಿದಾನದ ತಿದ್ದುಪಡಿಗೆ ಅಳವನ್ನು ಬರಿಸಿಕೊಳ್ಳುವುದು ಹೇಗೆ? ಕನ್ನಡಿಗರು ಮಾತ್ರ ಪ್ರತ್ಯೇಕವಾಗಿ ಬೊಬ್ಬೆ ಹಾಕಿದರೆ ಆಗುತ್ತದೆಯೆ? ಕನ್ನಡಿಗರು ಮತ್ತು ಬೇರೆ ರಾಜ್ಯದವರು ಸೇರಿ ಪ್ರಯತ್ನಿಸಬೇಕು. ಮೊದಲು ದಕ್ಶಿಣದ ದ್ರಾವಿಡರು - ನಾವು, ತೆಲುಗರು, ತಮಿಳರು ಮತ್ತು ಮಲಯಾಳರು - ದ್ರಾವಿಡತನದ ಅಡಿಯಲ್ಲಿ ಒಂದಾಗಬೇಕು. ನಾವು ಒಗ್ಗೂಡಿದರೆ ನಮ್ಮೊಡನೆ ಕಯ್ ಸೇರಿಸಲು ದೇಶದ ಕೆಲ ಇತರೆ ರಾಜ್ಯದವರೂ ಮುಂದೆ ಬರಬಹುದು. ಹೀಗೆ ಎಲ್ಲರೂ ಒಟ್ಟಾಗಿ ಪ್ರಯತ್ನಪಟ್ಟರೆ ಸಂವಿದಾನದ ತಿದ್ದುಪಡಿ ಸಾದ್ಯವಾಗಬಹುದು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಮಂಗಳವಾರ, ಜೂನ್ 25, 2013

ಕನ್ನಡದಲ್ಲೂ ಮುದ್ದಾದ ಹೆಸರುಗಳಿವೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕನ್ನಡ ಟೀವಿ ಕಾಲುವೆಯೊಂದರಲ್ಲಿ ’ಚಿಣ್ಣರ ಚಿಲಿಪಿಲಿ’ಎಂಬ, ಪುಟ್ಟ ಮಕ್ಕಳು ಪಾಲ್ಗೊಳ್ಳುವ ಜನಪ್ರಿಯ ಕಾರ‍್ಯಕ್ರಮವೊಂದು ಪ್ರಸಾರವಾಗುತ್ತಿದೆ. ಅದರಲ್ಲಿ ಇತ್ತೀಚೆಗೆ ಕೇವಲ ಕೊಡವ ಮಕ್ಕಳಶ್ಟೇ ಪಾಲ್ಗೊಂಡ ವಿಶೇಶ ಸಂಚಿಕೆಯೊಂದು ಬಿತ್ತರವಾಯಿತು. ಆ ಮಕ್ಕಳಲ್ಲಿ ಒಬ್ಬ ಪುಟಾಣಿ ಹುಡುಗಿಗೆ ’ಬೆಳಕು’ ಎಂಬ ಮುದ್ದಾದ ಹೆಸರು. ’ಬೆಳಕು’ ಅಪ್ಪಟ ಕನ್ನಡ ಪದ. ಅದು ಕೊಡವ ಪದವೂ ಆಗಿರಬಹುದೇನೋ. ಒಟ್ಟಿನಲ್ಲಿ ದ್ರಾವಿಡ ಮೂಲದ ಪದ. ಸಾಮಾನ್ಯವಾಗಿ ಬರೀ ಸಂಸ್ಕ್ರುತ ಪದಗಳಿಂದಲೇ ಮಕ್ಕಳಿಗೆ ಹೆಸರಿಡುವ ನಮ್ಮಲ್ಲಿ ಈಗೀಗ ಕನ್ನಡ ಅತವ ದ್ರಾವಿಡ ಮೂಲದ ಹೆಸರುಗಳನ್ನಿಡುವ ಪ್ರವ್ರುತ್ತಿ ಕೂಡ ಶುರುವಾಗಿದೆ. ’ನಮ್ಮ ನುಡಿಯಲ್ಲೇ ಹೆಸರಿಡೋಣ, ಸಂಸ್ಕ್ರುತವೇನೂ ಬೇಕಾಗಿಲ್ಲ’ ಎಂಬ ನಿಲುವು ಇದಕ್ಕೆ ಕಾರಣವೋ, ಇಲ್ಲ, ’ಸಾಮಾನ್ಯ ಹೆಸರು ಬೇಡ, ಯುನೀಕ್ ಆದ ಹೆಸರು ಇರಲಿ’ ಎನ್ನುವ ದೋರಣೆ ಕಾರಣವೋ, ನನಗೆ ತಿಳಿಯದು. ಆದರೆ, ಕಾರಣ ಏನಾದರೂ ಇರಲಿ, ಮತ್ತೆ ಅಚ್ಚಗನ್ನಡ ಹೆಸರುಗಳು ಚಲಾವಣೆಗೆ ಹೇಗೋ ಬರುತ್ತಿರುವುದು ಅಚ್ಚಗನ್ನಡದ ಒಲವಿಯಾದ ನನ್ನ ಕಣ್ಣಿನಲ್ಲಿ ಒಂದು ಸಂತಸದ ಸಂಗತಿ.
      ಅಯ್ದಾರು ದಶಕಗಳ ಹಿಂದಿನವರೆಗೆ ಕನ್ನಡಿಗರ ಹೆಸರುಗಳು ಹೆಚ್ಚುಕಡಿಮೆ ಕನ್ನಡದ್ದೇ ಅಂದರೆ ದ್ರಾವಿಡ ಮೂಲದ ಹೆಸರುಗಳೇ ಆಗಿರುತ್ತಿದ್ದವು. ಚೆಲುವಯ್ಯ, ಕಲ್ಲಪ್ಪ, ಚೆನ್ನಣ್ಣ, ಕೆಂಪ, ಕರಿಯ, ತಾಯಕ್ಕ, ಪುಟ್ಟಮ್ಮ, ಚಿಕ್‍ತಾಯಿ, ಎಲ್ಲವ್ವ - ಹೀಗೆ ಕನ್ನಡದ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದುದೇ ರೂಡಿಯಲ್ಲಿತ್ತು. ಕೆಳಜಾತಿಯ ಮಂದಿಯಲ್ಲಿ ಇಂತಹ ಹೆಸರುಗಳೇ ಹೆಚ್ಚಾಗಿ ಕಾಣುತ್ತಿದ್ದವು. ಮೇಲುಜಾತಿಯವರಲ್ಲಿ ಸ್ವಲ್ಪ ಸಂಸ್ಕ್ರುತ ಮೂಲದ ಹೆಸರುಗಳು ಚಾಲ್ತಿಯಲ್ಲಿದ್ದು, ಆ ಹೆಸರುಗಳು ಸಾಮಾನ್ಯವಾಗಿ ನಾರಾಯಣ, ಶ್ರೀನಿವಾಸ, ರಾಮಕ್ರಿಶ್ಣ, ಸೀತಾಪತಿ ಮುಂತಾದ ದೇವರ ಹೆಸರುಗಳಾಗಿರುತ್ತಿದ್ದವು. ಬಳಿಕದ ದಿನಗಳಲ್ಲಿ ಕ್ರಮೇಣ ಕನ್ನಡದ ಹೆಸರುಗಳು ಮತ್ತು ದೇವರ ಹೆಸರುಗಳು ಕಾಣೆಯಾಗತೊಡಗಿದವು. ಸಂಸ್ಕ್ರುತ ಮೂಲದ ಪಶು, ಪಕ್ಶಿ, ವಸ್ತುಗಳ ಹೆಸರುಗಳು ಬಳಕೆಗೆ ಬರಲು ಶುರುವಾದವು. ’ಓದಿದ’ ಕನ್ನಡಿಗರು ಇಂತಹ ಸಂಸ್ಕ್ರುತ ಮೂಲದ ಹೆಸರುಗಳನ್ನು ಇಡುವುದರಲ್ಲಿ ಒಂದು ರೀತಿಯಲ್ಲಿ ಪಯ್‍ಪೋಟಿಗೇ ತೊಡಗಿದರು ಎನ್ನಬಹುದು. ಪವನ್, ಪರಾಗ್, ಕಿರಣ್, ವಸಂತ್, ಮಯೂರ್, ಸುನಿಲ್, ಸೀಮಾ, ಪುಶ್ಪ, ಸ್ನೇಹಾ, ಸಾಗರ್, ಪಂಚಮ್, ಶ್ರುತಿ, ಶ್ವೇತಾ ಮುಂತಾದ ಹೆಸರುಗಳೇ ಪುಟಿದಾಡತೊಡಗಿದವು. ಬರುಬರುತ್ತಾ ಕನ್ನಡಿಗರಲ್ಲಿ ’ತಮ್ಮ ಮಕ್ಕಳ ಹೆಸರುಗಳು ಬರೀ ಸಂಸ್ಕ್ರುತ ಮೂಲದ್ದಾದರೆ ಸಾಲದು, ಅವು ಸಾಮಾನ್ಯವಾಗಿರಬಾರದು, ಯುನೀಕ್ ಕೂಡಾ ಆಗಿರಬೇಕು’ ಎಂಬ ದೋರಣೆಯೂ ಮೂಡಿತು. ಅದರ ಪರಿಣಾಮವಾಗಿ ಆಕಾಂಕ್ಶಾ, ಪ್ರಜ್ನ್ಯಾ, ಸ್ರುಜನಾ, ಮನೋಜ್ನ್ಯಾ ಮುಂತಾದ ಕಂಡುಕೇಳದ ಹೆಸರುಗಳೂ ಚಲಾವಣೆಗೆ ಬಂದವು. ಎಶ್ಟೋ ಮಕ್ಕಳ ಹೆಸರುಗಳನ್ನು ಅವರ ತಾತ ಅಜ್ಜಿಯರಿಗೆ ಉಚ್ಚಾರಣೆ ಮಾಡುವುದೇ ಅಸಾದ್ಯವಾಯಿತು! ಒಟ್ಟಿನಲ್ಲಿ ಕನ್ನಡದ ಹಾಗೂ ದೇವರ ಹೆಸರುಗಳು ಯಾರಿಗೂ ಹಿಡಿಸದೆ ಮೂಲೆಗುಂಪಾದವು. ಸಂಸ್ಕ್ರುತದ ಹೆಸರುಗಳು ಮನೆಮನೆಯಲ್ಲೂ ಬಳಕೆಗೆ ಬಂದವು. ಸಂಸ್ಕ್ರುತದ ಹೆಸರಾದರೆ ಆಯಿತು, ಅದು ಹೇಗೇ ಇರಲಿ, ಅದಕ್ಕೆ ಸಮಾಜದ ಒಪ್ಪಿಗೆ ಕೂಡಲೇ ದೊರೆಯುವಂತಾಯಿತು. ಸಂಸ್ಕ್ರುತದ ಹೆಸರುಗಳ ಇಂತಹ ಜನಪ್ರಿಯತೆಯಿಂದಾಗಿ ’ಇನ್ನು ಕನ್ನಡದ ಹೆಸರುಗಳು ಮತ್ತೆ ಬರುವುದಿಲ್ಲ, ಅವು ಹೋಗೇ ಬಿಟ್ಟವು’ಎನ್ನುವಂತಾಯಿತು. ಆದರೂ ಅಚ್ಚರಿ ಎಂಬಂತೆ ಅಲ್ಲಲ್ಲಿ ಒಂದೊಂದು ಕನ್ನಡದ ಹೆಸರುಗಳು ಹೊಸ ರೂಪಗಳಲ್ಲಿ ತಲೆ ಎತ್ತಲು ಶುರುಮಾಡಿದವು! ಈಗೀಗ ಅವುಗಳ ಸಂಕ್ಯೆ ಹೆಚ್ಚುತ್ತಿರುವ ಹಾಗೆಯೂ ಕಾಣಿಸುತ್ತಿದೆ. ಕನ್ನಡದ ಹೆಸರುಗಳ ಬೇರು ಇನ್ನೂ ಜೀವಂತವಾಗಿರುವ ಹಾಗೆ ಕಾಣುತ್ತದೆ!
      ಕೆಲ ಕನ್ನಡಿಗರು ತಮ್ಮ ಮಕ್ಕಳಿಗೆ ಅಪ್ಪಟ ಕನ್ನಡದ ಹೆಸರುಗಳನ್ನು ಇಟ್ಟಿರುವುದಕ್ಕೆ ಕೆಲವು ಎತ್ತುಗೆಗಳನ್ನು (ಉದಾಹರಣೆಗಳನ್ನು) ಕೊಡುತ್ತೇನೆ. ರಯ್ತ ಸಂಗ ಕಟ್ಟಿದ ನಂಜುಂಡಸ್ವಾಮಿಯವರ ಮಗಳ ಹೆಸರು ಚುಕ್ಕಿ. ಹೆಸರಾಂತ ಸಾಹಿತಿಗಳಾದ ದಾರವಾಡದ ಪಟ್ಟಣಶೆಟ್ಟಿ ದಂಪತಿಗಳ ಮಗಳ ಹೆಸರು ಹೂ. ಸಾಹಿತಿ ಹಾಗು ಚಿತ್ರ ನಿರ‍್ದೇಶಕ ನಾಗತಿಹಳ್ಳಿಯವರ ಇಬ್ಬರು ಹೆಣ್ಣುಮಕ್ಕಳ ಹೆಸರು ಸಿಹಿ ಮತ್ತು ಕನಸು. ಈಗ ನಮ್ಮ ನಾಡಿನ ಅಡ್ವೊಕೇಟ್ ಜನರಲ್ ಆಗಿರುವ ಹಿರಿಯ ನ್ಯಾಯವಾದಿ ರವಿವರ‍್ಮ ಕುಮಾರರ ಮಗಳ ಹೆಸರು ಬೆಳ್ಳಿ. ಇವರೆಲ್ಲಾ ಸಾಮಾನ್ಯರಲ್ಲ. ತಮ್ಮ ತಮ್ಮ ಸಾದನೆಗಾಗಿ ಹೆಸರು ಪಡೆದುಕೊಂಡಂತವರು (ಮಕ್ಕಳಿಗೆ ಹೆಸರಿಡುವ ಕಾಲಕ್ಕೆ ಇವರಿಗೆ ಇನ್ನೂ ಹೆಸರು ಬಂದಿರಲಿಕ್ಕಿಲ್ಲ. ಆಗ ಮಂದಿಯ ಕಣ್ಣಲ್ಲಿ ಇವರೂ ಸಾಮಾನ್ಯರೇ ಆಗಿದ್ದಿರಬೇಕು). ಇಂತಹ ಸಾದಕರೇ ಹೆಮ್ಮೆಯಿಂದ ತುಳಿದಂತಹ ದಾರಿಯನ್ನು ತುಳಿಯಲು ಉಳಿದವರಿಗೆ ಹಿಂಜರಿಕೆ ಆಗಲೇ ಬಾರದು ತಾನೆ? ಅಂದಹಾಗೆ, ಬೇರೆ ಕೆಲ ಕನ್ನಡಿಗರೂ ಮಕ್ಕಳಿಗೆ ಕನ್ನಡದ ಹೆಸರುಗಳನ್ನು ಇಟ್ಟಿರುವುದನ್ನು ನಾನು ನೋಡಿದ್ದೇನೆ. ನುಡಿ, ನವಿಲ್, ಇಬ್ಬನಿ, ಇಂಪು ಮುಂತಾದವು ಈ ಹೆಸರುಗಳು.
      ಹಳಗನ್ನಡದಲ್ಲಿ ಕಣ್ಣಾಡಿಸಿದರೆ ’ಆದುನಿಕ’ ಎನಿಸುವ ಹಲವಾರು ಹೆಸರುಗಳು ದೊರೆಯುತ್ತವೆ. ಇನ್ನು ’ಬರೀ ಕನ್ನಡದ್ದೇ ಆಗಬೇಕಾಗಿಲ್ಲ, ಒಟ್ಟಾರೆ ದ್ರಾವಿಡ ಮೂಲದ್ದಾದರೆ ಸಾಕು’ ಎನ್ನುವುದಾದರೆ ಹೆಸರುಗಳ ಆಯ್ಕೆಗೆ ಕೊರತೆ ಇರುವುದಿಲ್ಲ. ತುಳು, ಕೊಡವ, ತಮಿಳು, ತೆಲುಗು ಮತ್ತು ಮಲಯಾಳ ಬಾಶೆಗಳಿಂದ ಹೇರಳವಾಗಿ ಹೆಸರುಗಳು ದೊರೆಯಬಹುದು. ಒಂದು ರೀತಿಯಲ್ಲಿ ಎಲ್ಲಾ ದ್ರಾವಿಡ ನುಡಿಗಳಿಂದ ಹೆಸರುಗಳನ್ನು ಹೆಕ್ಕಿಕೊಳ್ಳುವುದೇ ಒಳ್ಳೆಯದು. ಹಾಗೆ ಮಾಡುವುದರಿಂದ ’ದ್ರಾವಿಡ ನುಡಿಗಳನ್ನಾಡುವ ನಮ್ಮೆಲ್ಲರದು ಒಂದೇ ಸಮುದಾಯ’ ಎನ್ನುವ ಅರಿವಿಗೆ ಹೆಚ್ಚಿನ ಇಂಬು ಸಿಕ್ಕಂತಾಗುತ್ತದೆ.
      ಇಶ್ಟೆಲ್ಲಾ ಹೇಳಿದ ಮೇಲೆ ಒಂದು ಎಚ್ಚರಿಕೆಯ ಮಾತನ್ನೂ ಹೇಳಬೇಕಾಗುತ್ತದೆ. ’ದ್ರಾವಿಡ ಹೆಸರನ್ನೇ ಇಡುತ್ತೇನೆ’ಎಂದು ಹಟಕ್ಕೆ ಬಿದ್ದು ಮಕ್ಕಳಿಗೆ ಹೇಗೆ ಹೇಗೋ ಹೆಸರನ್ನಿಡುವುದು ಸರಿಯಲ್ಲ. ಹೆಸರನ್ನಿಡುವುದೇನೋ ತಂದೆತಾಯಿಗಳು. ಆದರೆ, ಅದರ ಹೊರೆಯನ್ನು ಹೊರುವುದು ಮಾತ್ರ ಬಡಪಾಯಿ ಮಕ್ಕಳು! ಆದ್ದರಿಂದ, ಮಕ್ಕಳಿಗೆ ಹೆಸರನ್ನಿಡುವಾಗ ಸಮಾಜ ಆ ಹೆಸರನ್ನು ಹೇಗೆ ನೋಡಬಹುದು ಎಂಬುದರ ಪರಿವೆಯೂ ನಮಗಿರಬೇಕು. ಜಾಗರೂಕತೆಯಿಂದ ಹೆಸರನ್ನಿಡಬೇಕು. ಒಟ್ಟಾರೆ ನನ್ನ ಈ ಬರಹದ ಉದ್ದೇಶ ಇಶ್ಟೆ - ’ಇಂಪಾದ ಇಲ್ಲ ಆದುನಿಕ ಎನಿಸುವ ಹೆಸರುಗಳು ಬರೀ ಸಂಸ್ಕ್ರುತದ ಸೊತ್ತಲ್ಲ. ದ್ರಾವಿಡ ನುಡಿಗಳಲ್ಲೂ ಅವು ಇವೆ. ಮಕ್ಕಳ ಹೆಸರನ್ನು ಆಯುವಾಗ ಕನ್ನಡ ಮತ್ತು ಉಳಿದ ದ್ರಾವಿಡ ನುಡಿಗಳಲ್ಲೂ ಒಮ್ಮೆ ಕಣ್ಣಾಡಿಸುವುದು ಒಳ್ಳೆಯದು. ಹಾಗೆ ಮಾಡುವುದರಿಂದ ಮುದ್ದಾದ ಹಾಗೂ ಸಾಮಾನ್ಯವಲ್ಲದ ಹೆಸರುಗಳು ನಮ್ಮ ನುಡಿಗಳಲ್ಲೇ ನಮಗೆ ಸಿಗಬಹುದು.’

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಸೋಮವಾರ, ಜೂನ್ 10, 2013

ಇಂಗ್ಲೀಶಿನೊಡನೆ ಕನ್ನಡದೊಲವನ್ನೂ ಕಲಿಸಬೇಕು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕಳೆದ ಏಪ್ರಿಲ್ಲಿನ ಎರಡನೇ ವಾರ ಇರಬೇಕು. ದೇವನಹಳ್ಳಿಯ ಬಸ್ ನಿಲ್ದಾಣದಲ್ಲಿ ಬೆಂಗಳೂರಿನ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಆಗ ಅಲ್ಲಿ ಅಯ್ದಾರು ಕಾಲೇಜು ಹುಡುಗರು ನನ್ನ ಹತ್ತಿರವೇ ನಿಂತುಕೊಂಡು ಹರಟೆ ಹೊಡೆಯುತ್ತಿದ್ದರು. "ಏನ್ರಪ್ಪಾ, ಏನ್ ಓತ್ತಾ ಇದ್ದೀರಿ?" ಎಂದು ಆತ್ಮೀಯತೆಯಿಂದ ಪ್ರಶ್ನೆ ಮಾಡಿ ನಾನೂ ಕೂಡ ಸ್ವಲ್ಪ ಹೊತ್ತಿನಲ್ಲಿ ಅವರೊಂದಿಗೆ ಮಾತಿಗೆ ಸೇರಿಕೊಂಡೆ. ಮಾತಿನ ನಡುವೆ ಅವರಲ್ಲಿ ಒಬ್ಬ ಹುಡುಗ, ಯಾರೋ ಒಬ್ಬರ ಬಗ್ಗೆ ಮಾತಾಡುತ್ತ, "ಅವರು ಲಾಂಗಾಗಿದಾರೆ" ಎಂದು ಹೇಳಿದ. ’ಅವರು ಎತ್ತರವಾಗಿದ್ದಾರೆ’ ಎಂದು ಹೇಳುವುದು ಅವನ ಉದ್ದೇಶವಾಗಿತ್ತು. ನಾನು ಕೂಡಲೇ, "ಲಾಂಗಾಗಿದಾರೆ ಅಂತ ಅನ್ನಬಾರದು. ಟಾಲಾಗಿದ್ದಾರೆ ಅಂತ ಅನ್ಬೇಕು. ಲಾಂಗಾಗಿದಾರೆ  ಅಂತಾನೂ ಹೇಳ್ಬೋದೇನೋ. ಆದರೆ, ಈಗೆಲ್ಲ ಸಾಮಾನ್ಯವಾಗಿ ಎಲ್ಲರೂ ಟಾಲ್ ಅಂತಾನೇ ಹೇಳೋದು" ಎಂದು ತಂತಾನೆ ಅವನಿಗೆ ಹೇಳಿಬಿಟ್ಟೆ. ನಾನು ಹೇಳಿದ್ದನ್ನು ಕೇಳಿ ಅವನ ಮುಕ ಕೊಂಚ ಮಂಕಾಯಿತು. ಅವನಿಗೆ ಬೇಸರವಾದದ್ದನ್ನು ನೋಡಿ, "ಬೇಜಾರ್ ಮಾಡ್ಕೋಬೇಡಪ್ಪಾ, ನಿನ್ನ ಇಂಗ್ಲೀಶ್ ಸರಿ ಆಗ್ಲಿ ಅನ್ನೋ ಒಳ್ಳೇ ಉದ್ದೇಶ್ದಿಂದ ಆಟೋಮ್ಯಾಟಿಕ್ಕಾಗಿ ಹೇಳ್ಬಿಟ್ಟೆ ಅಶ್ಟೇ. ಬೇರೆ ಇನ್ನೇನೂ ಅಲ್ಲ." ಎಂದು ನಾನು ತಕ್ಶಣವೇ ಕಳಕಳಿಯಿಂದ ಅವನಿಗೆ ಸಮಾದಾನ ಆಗುವಂತೆ ಹೇಳಿದೆ. ಹಾಗೆ ಮಾಡಿದ್ದರಿಂದ ಅವನ ಮುಕ ಮತ್ತೆ ಮೊದಲಿನಂತಾಯಿತು. ಬೇಗನೇ ಚೇತರಿಸಿಕೊಂಡ ಅವನು, "ಇಲ್ಲಿ ಎಲ್ರೂ ಲಾಂಗಾಗಿದಾರೆ ಅಂತಾನೇ ಹೇಳೋದು ಸಾರ್. ನೀವು ಬೆಂಗಳೂರಿನೋರು. ನಿಮ್ಮಶ್ಟ್ ಚನ್ನಾಗಿ ನಮಗೆ ಇಂಗ್ಲೀಶ್ ಬರ‍್ಲಿಕ್ಕೆ ಸಾದ್ಯಾನಾ?" ಎಂದು ’ಸಣ್ಣ ಊರಿನವರಿಗೆ ಇಂಗ್ಲೀಶ್ ಕಲಿಕೆಯಲ್ಲಿ ಅನ್ಯಾಯ ಆಗುತ್ತಿದೆ’ ಎನ್ನುವ ದಾಟಿಯಲ್ಲಿ ಕೇಳಿದ. "ಬೆಂಗ್ಳೂರ‍್ನವರಿಗೂ ಇಂಗ್ಲೀಶ್ ಸರಿಯಾಗಿ ಬರೋದಿಲ್ಲಪ್ಪ" ಎಂದು ಹೇಳಿ ನಾನು ಅವನಿಗೆ ಇನ್ನಶ್ಟು ಸಮದಾನ ಮಾಡಿದೆ. ಅಲ್ಲಿಂದ ನಮ್ಮ ಮಾತು ’ಇಂಗ್ಲೀಶ್ ಬೇಕೋ ಬೇಡವೋ, ಇಂಗ್ಲೀಶ್ ಎಶ್ಟು ಕಲೀಬೇಕು, ಯಾವ ವಯಸ್ಸಿನಿಂದ ಕಲೀಬೇಕು’ ಎಂದು ಮುಂತಾದ ವಿಶಯಗಳ ಕಡೆಗೆ ತಿರುಗಿತು.
      ’ಈಗ ಕೆಲಸ ಸಿಗಬೇಕು ಅಂದರೆ ಇಂಗ್ಲೀಶ್ ಬರಬೇಕು. ದೊಡ್ಡ ಊರುಗಳಲ್ಲಿ ಬೆಳೆದವರಿಗೆ ಇಂಗ್ಲೀಶ್ ಚೆನ್ನಾಗಿ ಬರುತ್ತದೆ. ಸಣ್ಣ ಊರಿನವರಿಗೆ ಇಂಗ್ಲೀಶ್ ಬರುವುದಿಲ್ಲ. ಇದರಿಂದಾಗಿ ಒಳ್ಳೆಯ ಕೆಲಸಗಳು ಪಟ್ಟಣದವರ ಪಾಲಾಗುತ್ತಿವೆ. ಕಡಿಮೆ ಸಂಬಳದ ಕೆಲಸಗಳು ಮಾತ್ರ ಹಳ್ಳಿಯವರಿಗೆ ಸಿಗುತ್ತಿವೆ. ಪಟ್ಟಣದ ಹುಡುಗರ ಜೊತೆ ಸ್ಪರ‍್ದಿಸುವುದು ಹಳ್ಳಿಯ ಹುಡುಗರಿಗೆ ತುಂಬಾ ಕಶ್ಟವಾಗಿದೆ. ಹಳ್ಳಿಯ ಹುಡುಗರಲ್ಲಿ ಕೀಳರಿಮೆ ಉಂಟಾಗಿದೆ. ಇಂಗ್ಲೀಶ್ ಬೇಕೇ ಬೇಕು. ಆದರೆ, ಚಿಕ್ಕ ಊರುಗಳಲ್ಲಿ ಇಂಗ್ಲೀಶನ್ನು ಅಶ್ಟು ಸರಿಯಾಗಿ ಕಲಿಸುತ್ತಿಲ್ಲ’ - ಒಟ್ಟಾರೆಯಾಗಿ ಹೀಗೆ, ಮಾತಿನ ವೇಳೆ ಆ ಹುಡುಗರು ಅವರ ಅಳಲನ್ನು ತೋಡಿಕೊಂಡರು. ಸರ‍್ಕಾರ ಪದವಿಗಾಗಿ ಓದುತ್ತಿರುವ ವಿದ್ಯಾರ‍್ತಿಗಳಿಗೆ ಇಂಗ್ಲೀಶಿನಲ್ಲಿ ಮಾತನಾಡುವುದನ್ನು ಕಲಿಸಲು ವಿಶೇಶವಾದ ಯೋಜನೆಗಳನ್ನು ಹಾಕಿಕೊಂಡಿರುವುದರ ಬಗ್ಗೆ ಇತ್ತೀಚೆಗೆ ನಾನು ಪತ್ರಿಕೆಯಲ್ಲಿ ಓದಿದ್ದೆ. ಅದರ ಬಗ್ಗೆ ಅವರನ್ನು ಕೇಳಿದೆ. ಆ ಯೋಜನೆಗಳ ಪರಿಚಯ ಅವರಿಗೆ ಇರಲಿಲ್ಲ. ’ಅಂತಹ ಯೋಜನೆ ಇದ್ದರೂ, ಇಂಗ್ಲೀಶಿನಲ್ಲಿ ಮಾತಾಡುವುದನ್ನು ಅಶ್ಟು ತಡವಾಗಿ ಕಲಿಸಿದರೆ ಹೆಚ್ಚು ಪ್ರಯೋಜನವಿಲ್ಲ. ಕಾನ್ವೆಂಟು ಶಾಲೆಗಳ ಹಾಗೆ ಚಿಕ್ಕ ವಯಸ್ಸಿನಿಂದಲೇ ಹೇಳಿಕೊಡಬೇಕು.’ ಎಂದು ಆ ಯೋಜನೆಯ ಬಗ್ಗೆ ಅವರು ಅಬಿಪ್ರಾಯ ಪಟ್ಟರು.
      ಅಶ್ಟರಲ್ಲಿ ಬಸ್ಸು ಬಂತು. ಎಲ್ಲರೂ ಬಸ್ ಹತ್ತಿಕೊಂಡೆವು. ಬಸ್ಸಿನಲ್ಲಿ ಕುಳಿತು, ಅದುವರೆಗೂ ಮಾತಾಡಿದ್ದರ ಬಗ್ಗೆ ಯೋಚನೆ ಮಾಡಿದೆ. ನಮ್ಮ ಸಮಾಜದಲ್ಲಿರುವ ’ಇಂಗ್ಲೀಶಿನಲ್ಲಿ ಮಾತಾಡುವುದನ್ನು ಕಲಿತವರೇ ವಿದ್ಯಾವಂತರು, ಇಂಗ್ಲೀಶ್ ಬಾರದವರು ಅವಿದ್ಯಾವಂತರು’ ಎನ್ನುವ ದೋರಣೆ ನಿಜಕ್ಕೂ ತುಂಬಾ ಹಳೆಯದು. ನಾನು ಚಿಕ್ಕವನಾಗಿದ್ದಾಗಲೂ ಅದು ಇತ್ತು. ಇಂಗ್ಲೀಶರ ಆಡಳಿತ ಶುರುವಾದಾಗಲಿಂದಲೂ ಇಂಗ್ಲೀಶಿನಲ್ಲಿ ಮಾತನಾಡಲು ಬರುವುದು ನಮಗೆ ಒಂದು ಪ್ರತಿಶ್ಟೆಯ ಕುರುಹು ಆಗಿ ಬಂದಿರುವ ಹಾಗೆ ಕಾಣುತ್ತದೆ. ಇಂಗ್ಲೀಶ್ ಬರುವವರು ಅದು ಬಾರದವರಿಗೆ ಬಹಳ ಹಿಂದಿನಿಂದಲೂ ಕೀಳರಿಮೆ ಬರಿಸಿದ್ದಾರೆ. ಆದರೂ, ಕೆಲಸ ಪಡೆದುಕೊಳ್ಳುವ ವಿಶಯದಲ್ಲಿ ಇಂಗ್ಲೀಶ್ ಬಾರದಿರುವುದು ಹಿಂದೆ ಅಶ್ಟು ದೊಡ್ದ ತೊಡಕು ಎನಿಸಿರಲಿಲ್ಲ ಎಂದು ತೋರುತ್ತದೆ. ಆದರೆ ಈಗ, ಅದರಲ್ಲೂ ಜಾಗತೀಕರಣ ಬಂದ ಮೇಲೆ, ಸಮಾಜ ಇಂಗ್ಲೀಶಿಗೂ ಕೆಲಸ ದೊರಕಿಸಿಕೊಳ್ಳುವುದಕ್ಕೂ ಬಿಗಿಯಾಗಿ ತಳುಕು ಹಾಕಿರುವಂತೆ ಕಾಣುತ್ತಿದೆ. ಸಮಾಜ ಹಾಗೆ ಮಾಡಿರುವುದಕ್ಕೆ ಸರಿಯಾದ ಕಾರಣಗಳೂ ಇವೆ. ಒಂದೇ ಎಡೆಯಲ್ಲಿ ಬೇರೆ ಬೇರೆ ನುಡಿಗಳನ್ನು ಆಡುವವರು ವಾಸ ಮಾಡುವುದು ಹೆಚ್ಚುತ್ತಿದೆ. ಹೆಚ್ಚು ಹೆಚ್ಚು ಕಂಪನಿಗಳ ವಹಿವಾಟುಗಳು ಅಂತರ ರಾಶ್ಟ್ರೀಯ ಹರವನ್ನು ಪಡೆದುಕೊಳ್ಳುತ್ತಿವೆ. ಪ್ರಪಂಚದಗಲಕ್ಕೂ ಈಗ ಇಂಗ್ಲೀಶ್ ಕಲಿಕೆ ಬಿರುಸಿನಿಂದ ಸಾಗಿದೆ. ಆದ್ದರಿಂದ, ಇಂಗ್ಲೀಶ್ ಕಲಿಯುವುದು ಅಗತ್ಯವೂ ಉಪಯುಕ್ತವೂ ಅಗುತ್ತಿದೆ. ಒಟ್ಟಿನಲ್ಲಿ, ಇಂಗ್ಲೀಶ್ ಮಾತಾಡುವುದು ಬಂದರೆ ಕೆಲಸ ಮತ್ತು ಮನ್ನಣೆ - ಎರಡೂ ಸಿಗುತ್ತವೆ ಈಗ ನಮ್ಮ ಸಮಾಜದಲ್ಲಿ. ಹಾಗಾಗಿ, ಹಳ್ಳಿಯಾಗಲೀ ಪಟ್ಟಣವಾಗಲೀ, ಎಲ್ಲಾ ಕಡೆ ಈಗ ತಂದೆತಾಯಿಗಳು ತಮ್ಮ ಮಕ್ಕಳು ಇಂಗ್ಲೀಶ್ ಮಾತಾಡುವುದನ್ನು ಕಲಿಯಬೇಕು, ಅದರಲ್ಲೂ ಚಿಕ್ಕ ವಯಸ್ಸಿನಿಂದಲೇ ಕಲಿಯಬೇಕು ಎಂದು ಕಾತರಿಸುತ್ತಿದ್ದಾರೆ. ಆದ್ದರಿಂದಲೇ ಇಂಗ್ಲೀಶ್ ಮಾದ್ಯಮದ ಶಾಲೆಗಳಿಗೆ ಅಶ್ಟೊಂದು ಬೇಡಿಕೆ.
      ಇಂಗ್ಲೀಶಿನಲ್ಲಿ ಮಾತನಾಡುವ ಆಸೆ ಬಾನಿಗೇರಿರುವುದು ಎಲ್ಲರಿಗೂ ಗೊತ್ತಿರುವ ವಿಶಯ. ಅದರಲ್ಲಿ ಹೊಸದೇನೂ ಇಲ್ಲ. ಇತ್ತೀಚೆಗೆ ಚುನಾವಣೆ ಸಂದರ‍್ಬದಲ್ಲಿ, ಜನತಾದಳ ಪಕ್ಶ ’ಬೆಂಗಳೂರಿನ ಪ್ರತಿ ವಾರ‍್ಡಿನಲ್ಲೂ ಒಂದು ಮಾದರಿ ಇಂಗ್ಲೀಶ್ ಶಾಲೆಯನ್ನು ತೆರೆಯುವುದಾಗಿ’ ಪ್ರಣಾಳಿಕೆಯಲ್ಲಿ ಹೇಳಿತು. ಶ್ರೀರಾಮುಲು ಅವರ ಪಕ್ಶ ಇನ್ನೂ ಮುಂದೆ ಹೋಗಿ ’ನಾಡಿನ ಎಲ್ಲಾ ಸರ‍್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲೀಶನ್ನು ಕಲಿಸಿಕೊಡುವುದಾಗಿ’ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತು. ನಾಡಿನ ಮಂದಿ ತಮ್ಮ ಮಕ್ಕಳಿಗೆ ಇಂಗ್ಲೀಶ್ ಕಲಿಸುವುದಕ್ಕೆ ಎಶ್ಟು ಹಾತೊರೆಯುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಆದಾರ ಬೇಡ. ಮಂದಿಗೆ ಏನು ಬೇಕೋ ಅದನ್ನು ಕೊಡುತ್ತೇವೆ ಎಂದು ಹೇಳಿ ಮತ ಪಡೆದುಕೊಳ್ಳುವುದೇ ತಾನೆ ಪುಡಾರಿಗಳ ಚಾಳಿ? ಅದೇನೆ ಇರಲಿ, ತಂದೆತಾಯಿಗಳಲ್ಲಿ ಇಂದು ಅವರ ಮಕ್ಕಳು ಇಂಗ್ಲೀಶಿನಲ್ಲಿ ಅರಳು ಹುರಿದಂತೆ ಮಾತನಾಡಬೇಕು ಎಂಬ ಹಂಬಲ ಎಶ್ಟು ಬಲವಾಗಿ ಬೇರೂರಿದೆ ಅಂದರೆ, ಮಕ್ಕಳಿಗೆ ಇಂಗ್ಲೀಶ್ ಮಾತನಾಡುವುದನ್ನು ಕಲಿಸದೇ ಬೇರೆ ದಾರಿಯೇ ಇಲ್ಲ, ಎನ್ನುವ ಹಾಗಾಗಿದೆ. ಹಾಗಾಗಿ, ಎಲ್ಲಾ ಮಕ್ಕಳೂ ಹೇಗೋ ಒಂದು ಬಗೆಯಲ್ಲಿ ಇಂಗ್ಲೀಶ್ ಕಲಿತು ಮಾತನಾಡುವ ಕಾಲ ಇನ್ನು ದೂರ ಉಳಿದಿಲ್ಲ. ಇದು ನನ್ನಿ! ಇದು, ಕನ್ನಡ ಉಳಿಯಬೇಕು ಎಂದು ಬಯಸುವ ನಮ್ಮಂತಹವರೆಲ್ಲ ತಪ್ಪದೆ ತಲೆಯಲ್ಲಿಟ್ಟುಕೊಳ್ಳಬೇಕಾದ ಕಡು ನನ್ನಿ.
      ಈಗ ಪ್ರಶ್ನೆ ಇದು - ಎಲ್ಲರೂ ಇಂಗ್ಲೀಶ್ ಮಾತನಾಡುವುದನ್ನು ಕಲಿತಾಗ ಕನ್ನಡ ಮಾತನಾಡುವವರು ಯಾರು? ಇಂಗ್ಲೀಶಿನ ವಾತಾವರಣದಲ್ಲಿ ಕನ್ನಡ ಮಾತಾಡುವುದನ್ನು ಉಳಿಸಿಕೊಳ್ಳುವುದು ಹೇಗೆ? ಎಲ್ಲರಿಗೂ ತಿಳಿದಂತೆ ಇಂಗ್ಲೀಶ್ ಬಲ್ಲವರಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ಇಂಗ್ಲೀಶನ್ನೇ ಆಡುತ್ತಾರೆ. ಇಂಗ್ಲೀಶ್ ಬಂದೂ ಕನ್ನಡವನ್ನೇ ಹೆಚ್ಚಾಗಿ ಆಡುವವರು ಕಡಿಮೆ. ಇಂಗ್ಲೀಶ್ ಆಡುವುದು ಹಲವು ವೇಳೆ ಪ್ರತಿಶ್ಟೆಗಾಗಿ ಮಾತ್ರ. ಪ್ರತಿಶ್ಟೆ ಮನುಶ್ಯರಿಗೆ ಅಶ್ಟು ಮುಕ್ಯ. ಆದರೆ, ಪ್ರತಿಶ್ಟೆ ಅಶ್ಟು ಮುಕ್ಯವಾದರೂ ಕೆಲವರಿಗಾದರೂ ಪ್ರತಿಶ್ಟೆಯನ್ನೂ ಮೀರಿದ ಕನ್ನಡದ ಒಲವು ಇರುತ್ತದೆ ಎನ್ನುವುದೂ ನಿಜ. ಇಂತಹವರನ್ನೂ ನಾವು ನೋಡುತ್ತೇವೆ. ಕನ್ನಡದ ಮೇಲೆ ಒಲವು ಮತ್ತು ಅಬಿಮಾನ ಇರುವವರು ಇಂಗ್ಲೀಶ್ ಬಂದರೂ ಕನ್ನಡವನ್ನೇ ಆಡುತ್ತಾರೆ. ಕನ್ನಡ ಮಾತಾಡುವುದನ್ನು ಉಳಿಸುವ ಸುಳುಹು ನಮಗೆ ಇಂತಹವರಿಂದ ಬಹುಶಹ ಸಿಗಬಹುದು.
      ಮುಕ್ಯವಾಗಿ ನಮ್ಮ ಮಂದಿಗೆ ಮತ್ತು ಮಕ್ಕಳಿಗೆ ಕನ್ನಡದ ಬಗ್ಗೆ ಒಲವು ಮತ್ತು ಅಬಿಮಾನಗಳನ್ನು ಮೂಡಿಸಬೇಕು. ’ತಾಯ್ನುಡಿಯ ಬಗ್ಗೆ ಒಲವನ್ನು ಯಾರೂ ಕಲಿಸಬೇಕಾಗಿಲ್ಲ. ಅದು ತಾನಾಗೇ ಬರುತ್ತದೆ’ ಎನ್ನುವ ನಂಬಿಕೆ ಸುಳ್ಳು. ಇದಕ್ಕೆ ಇಂದಿನ ಇಂಗ್ಲೀಶ್ ಬರುವ ಕನ್ನಡಿಗರ ನಡವಳಿಕೆಯೇ ಸಾಕ್ಶಿ. ತಾಯ್ನುಡಿಯ ಪ್ರೀತಿ ಮತ್ತು ಅಬಿಮಾನಗಳನ್ನೂ ಕೂಡ ಬೇರೆ ವಿದ್ಯೆಗಳನ್ನು ಕಲಿಸುವ ಹಾಗೆಯೆ ಕಲಿಸಬೇಕು. ಕನ್ನಡದ ಮಟ್ಟಿಗೆ ಹೇಳುವುದಾದರೆ, ಕನ್ನಡ ಒಂದು ದ್ರಾವಿಡ ನುಡಿ, ಕನ್ನಡ ಆಡುವ ಪ್ರದೇಶದ ಹರವು ಅರ‍್ದಕ್ಕಿಂತಲೂ ಹೆಚ್ಚು ಕುಗ್ಗಿದೆ, ಒಮ್ಮೆ ಇಡೀ ದೇಶದ ಅಗಲಕ್ಕೂ ಹರಡಿದ್ದ ದ್ರಾವಿಡ ನುಡಿಗಳು ಇಂದು ಎಲ್ಲವನ್ನೂ ಕಳೆದುಕೊಂಡು ತೆಂಕಣದ ಬಾಗದಲ್ಲಿ ಮಾತ್ರ ಉಳಿದುಕೊಂಡಿವೆ, ಹೀಗೆ ಪ್ರಪಂಚದಲ್ಲಿ ಉಳಿದುಕೊಂಡಿರುವ ಕೆಲವೇ ಕೆಲವು ದ್ರಾವಿಡ ನುಡಿಗಳಲ್ಲಿ ಕನ್ನಡ ನುಡಿ ಮುಕ್ಯ, ಕನ್ನಡದ ನುಡಿಪಿನ (ಸಾಹಿತ್ಯದ) ಸಂಪತ್ತು ಸಾವಿರ ವರ‍್ಶಗಳನ್ನೂ ಮೀರಿದೆ, ಕನ್ನಡ ನುಡಿಯನ್ನು ಆಡುವವರದು ದ್ರಾವಿಡ ಬುಡಕಟ್ಟಿನ ಹಿನ್ನೆಲೆ, ದ್ರಾವಿಡರಿಗೆ ಇತಿಹಾಸದ ಉದ್ದಕ್ಕೂ ಹಿನ್ನಡೆ ಆಗಿದೆ - ಹೀಗೆ ಕನ್ನಡದ ಬಗ್ಗೆ ಎಲ್ಲ ವಾಸ್ತವ ವಿಶಯಗಳ ಅರಿವನ್ನು ತಿಳಿಸಿಕೊಡುವುದರಿಂದ ಕನ್ನಡಿಗರಿಗೆ ಕನ್ನಡದ ಮೇಲೆ ಅಬಿಮಾನ ಮೂಡಿಸಬಹುದು ಎಂಬುದು ನನ್ನ ನಂಬಿಕೆ. ತ್ರಿಬಾಶಾ ಸೂತ್ರದಿಂದಾಗಿ ಕೆಲಸಕ್ಕೆ ಬಾರದ ಹಿಂದೀಯನ್ನು ಕಲಿಸುವುದರಲ್ಲಿ ಸಮಯವನ್ನು ಪೋಲು ಮಾಡುವ ಬದಲು, ಅದೇ ಸಮಯದಲ್ಲಿ ನಮ್ಮ ವಿದ್ಯಾರ‍್ತಿಗಳಿಗೆ ಇಂಗ್ಲೀಶ್ ಮಾತಾಡುವುದನ್ನೋ ಅತವ ಕನ್ನಡದ ಬಗ್ಗೆ ಅಬಿಮಾನ ಬೆಳೆಸಿಕೊಳ್ಳುವುದನ್ನೋ ಕಲಿಸಿದರೆ ಒಳ್ಳೆಯದು ಎನಿಸುತ್ತದೆ ನನಗೆ.
      ’ಕನ್ನಡ ಮಾತನಾಡಿದರೆ ಕೆಲಸ ದೊರೆಯುತ್ತದೆ, ಕನ್ನಡ ಮಾತನಾಡಿದರೆ ಜನ ಬೆಲೆ ಕೊಡುತ್ತಾರೆ, ಕನ್ನಡ ಮಾತನಾಡಿದರೆ ಲಾಬ ಉಂಟು, ಕನ್ನಡ ಮಾತಾಡದೆ ಬೇರೆ ದಾರಿಯೇ ಇಲ್ಲ’ ಎಂಬ ನೆಲೆಯನ್ನು ದಿನನಿತ್ಯದ ಬದುಕಿನಲ್ಲಿ ನಮಗೆ ಸ್ರುಶ್ಟಿ ಮಾಡಲಿಕ್ಕೆ ಸಾದ್ಯವಾದರೆ ಕನ್ನಡ ಮಾತಾಡುವುದು ತಾನಾಗೇ ಉಳಿಯುತ್ತದೆ. ಆದರೆ, ಅಂತಹ ನೆಲೆಯನ್ನು ಉಂಟುಮಾಡುವುದು ಇಂದಿನ ಸನ್ನಿವೇಶದಲ್ಲಿ ಸುಲಬದ ಮಾತೆ? ಹಾಗಾಗಿ, ಕನ್ನಡಿಗರು ಕನ್ನಡ ಮಾತನಾಡುವುದನ್ನು ಬಿಡಬಾರದೆಂದರೆ, ಕನ್ನಡದ ಬಗ್ಗೆ ಒಲವನ್ನು ನಿರ‍್ದಿಶ್ಟ ಪ್ರಯತ್ನಗಳಿಂದ ಅವರಲ್ಲಿ ಮೂಡಿಸುವುದು ಅವಶ್ಯವಾಗುತ್ತದೆ. ಕನ್ನಡಿಗರು ’ಕನ್ನಡದಿಂದ ನನಗೇನು ಲಾಬ?’ ಎನ್ನುವ ಬದಲು ’ನನ್ನಿಂದ ಕನ್ನಡಕ್ಕೇನು ಲಾಬ?’ ಎಂದು ಕೇಳುವಂತಾಗಬೇಕು. ಇಂತಹ ಬಾವನೆ ಬರುವುದು ನಾವು ನಮ್ಮ ಕನ್ನಡವನ್ನು ಪ್ರೀತಿಸಿದರೆ ಮಾತ್ರ. ಹಾಗಾಗಿ, ಕನ್ನಡದ ಬಗ್ಗೆ ಪ್ರೀತಿ ಮೂಡಿಸುವ ಕೆಲಸ ಕನ್ನಡವನ್ನೂ ಕನ್ನಡ ಮಾತಾಡುವುದನ್ನೂ ಉಳಿಸುವ ಪ್ರಯತ್ನದಲ್ಲಿ ಒಂದು ಮುಕ್ಯವಾದ ಉಪಾಯ. ಆದರೆ, ಪ್ರಶ್ನೆ ಇದು - ಈ ಪ್ರಯತ್ನದಲ್ಲಿ ಗಟ್ಟಿ ನಿರ‍್ದಾರದಿಂದ ತೊಡಗುವ ಚಲ ನಮಗಿದೆಯೆ? ಇದಕ್ಕೆ ಕಾಲವೇ ಉತ್ತರ ಹೇಳಬೇಕು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶನಿವಾರ, ಮೇ 25, 2013

ರಮ್ಯಾ ಮಾಡಿದ್ದು ತಪ್ಪೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕಳೆದ ತಿಂಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಶದ ಹುರಿಯಾಳಿಗಾಗಿ ಕನ್ನಡ ಚಿತ್ರರಂಗದ ತಾರೆ ರಮ್ಯಾ ಶಾಂತಿನಗರ ಕ್ಶೇತ್ರದಲ್ಲಿ ಪ್ರಚಾರ ಕೈಗೊಂಡಿದ್ದರು. ಶಾಂತಿನಗರ ಕ್ಶೇತ್ರದಲ್ಲಿ ತಮಿಳರ ಸಂಕ್ಯೆ ಹೆಚ್ಚು. ರಮ್ಯಾಗೆ ತಮಿಳಿನಲ್ಲಿ ಮಾತನಾಡುವುದು ಬರುತ್ತದೆ. ಒಂದು ಕಡೆ ಅವರ ಪ್ರಚಾರ ಮೆರವಣಿಗೆಯನ್ನು ನೋಡಲು ನೆರೆದಿದ್ದ ಮಂದಿಯಲ್ಲಿ ತಮಿಳರೇ ಹೆಚ್ಚು ಇದ್ದಿದ್ದರಿಂದ, ರಮ್ಯಾ ತಮಿಳಿನಲ್ಲೇ ಅವರನ್ನು ಉದ್ದೇಶಿಸಿ ಮಾತನಾಡಿದರು. ಪ್ರಚಾರದ ಹುರುಪಿನಲ್ಲಿದ್ದ ರಮ್ಯಾ ತಮಗೆ ಅರಿವಿಲ್ಲದಂತೆಯೇ ಹಾಗೆ ಸಹಜವಾಗಿ ತಮಿಳಿನಲ್ಲಿ ಮಾತನಾಡಿರಬಹುದು, ಇಲ್ಲ, ತಮಿಳರನ್ನು ಓಲಯ್ಸುವ ಸಲುವಾಗಿ ಉದ್ದೇಶಪೂರ‍್ವಕವಾಗೇ ತಮಿಳಿನಲ್ಲಿ ಮಾತನಾಡಿರಬಹುದು. ಕಾರಣ ಏನೇ ಇರಲಿ, ಚುನಾವಣಾ ಪ್ರಚಾರದಂತಹ ಹುರುಪಿನ ಸನ್ನಿವೇಶಗಳಲ್ಲಿ ಈ ರೀತಿ ಮತದಾರರನ್ನು ಪುಸಲಾಯಿಸುವುದು ತೀರಾ ಸಹಜ ಮತ್ತು ಸಾಮಾನ್ಯ. ಜನಸಾಮಾನ್ಯರು ಇಂತಹವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಕೆಲ ಟೀವಿ ಚಾನೆಲ್ಲುಗಳ ಪರಿಯೇ ಬೇರೆ. ಒಂದು ಕನ್ನಡ ಚಾನೆಲ್, ರಮ್ಯಾ ತಮಿಳಿನಲ್ಲಿ ಮಾತನಾಡಿದ ಈ ಸಾಸಿವೆಯಂತಹ ಸಣ್ಣ ವಿಶಯವನ್ನು ಎತ್ತಿಕೊಂಡು ಬೆಟ್ಟದಶ್ಟು ದೊಡ್ಡದು ಮಾಡಿ ಎರಡು-ಮೂರು ಗಂಟೆಗಳ ಕಾಲ ರಮ್ಯಾರ ಮೇಲೆ ಹಾಗೂ ಪರೋಕ್ಶವಾಗಿ ತಮಿಳರ ಮೇಲೆ ವಿಶ ಕಾರಿತು. ಜೊತೆಗೆ, ತಾವೇ ಕನ್ನಡ ಬಕ್ತರು ಎಂದು ತಿಳಿದುಕೊಂಡಿರುವ ಕೆಲ ಕನ್ನಡಿಗರಿಂದಲೂ ಟೆಲಿಫೋನ್ ಕರೆಗಳನ್ನು ತೆಗೆದುಕೊಂಡು, ಅವರಿಂದಲೂ ವಿಶ ಕಾರಿಸಿತು.
      ಚಾನೆಲ್ಲಿನವರ ಈ ’ಲಯ್‍ವ್’ ಕಾರ‍್ಯಕ್ರಮದ ಸುಳಿವು ಗೊತ್ತಾದಾಗ ಸ್ವತಹ ರಮ್ಯಾರೇ ಕರೆ ಮಾಡಿ ಸಮಜಾಯಿಶಿ ಕೊಡಲು ಪ್ರಯತ್ನಿಸಿದರು. ರಮ್ಯಾ ಕೊಂಚ ಯೋಚನೆ ಮಾಡಿದ್ದರೆ, ’ಪ್ರಚಾರದ ಗುಂಗಿನಲ್ಲಿದ್ದೆ. ತಮಿಳರ ಏರಿಯಾದಲ್ಲಿದ್ದೆ. ಸಹಜವಾಗೇ ನನಗೇ ಗೊತ್ತಿಲ್ಲದಂತೆ ತಮಿಳಿನಲ್ಲಿ ಮಾತನಾಡಿದೆ. ಕನ್ನಡವನ್ನು ಕಡೆಗಣಿಸಬೇಕೆಂಬ ಉದ್ದೇಶ ನನಗೆ ಇರಲಿಲ್ಲ. ನಾನು ಕನ್ನಡದವಳು. ಕನ್ನಡಿಗರಿಂದ ನಾನು ಈ ಸ್ತಿತಿಯಲ್ಲಿ ಇದ್ದೇನೆ. ನಾನು ತಮಿಳಿನಲ್ಲಿ ಮಾತನಾಡಿದ್ದರಿಂದ ಕನ್ನಡಿಗರಿಗೆ ನೋವಾಗಿದ್ದರೆ, ಅವರಲ್ಲಿ ಕ್ಶಮೆ ಕೇಳುತ್ತೇನೆ’ ಎಂದು ಸರಳವಾಗಿ, ನಡೆದುದನ್ನು ನಡೆದಂತೆ ಹೇಳಿ ಬೆಂಕಿಯನ್ನು ಆರಿಸಬಹುದಾಗಿತ್ತು. ಆದರೆ, ಹಾಗೆ ಮಾಡುವ ಬದಲು ಅವರು ’ಬಾರತದಲ್ಲಿ ಹಲವು ಬಾಶೆಗಳಿವೆ. ಎಲ್ಲಾ ಬಾಶೆಗಳನ್ನೂ ನಾವು ಗವ್‍ರವಿಸಬೇಕು’ ಎಂದು ಮುಂತಾಗಿ ಉಪದೇಶಕ್ಕೆ ತೊಡಗಿ, ಕೆಸರಿಗೆ ದೊಡ್ಡ ಕಲ್ಲನ್ನು ಹಾಕಿ ಇನ್ನಶ್ಟು ರಾಡಿಯನ್ನು ತಮ್ಮ ಮೇಲೆ ಸಿಡಿಸಿಕೊಂಡರು!
      ರಮ್ಯಾರ ಕರೆ ಮುಗಿದ ಬಳಿಕ ಚಾನೆಲ್ಲಿನವರ ಕನ್ನಡ ಕಳಕಳಿಯ ಕಾರ‍್ಯಕ್ರಮ ಇನ್ನಶ್ಟು ಜೋಶ್ ಪಡೆದುಕೊಂಡು ಮುಂದುವರೆಯಿತು. ಕಾರ‍್ಯಕ್ರಮ ನಡೆಸಿಕೊಡುತ್ತಿದ್ದ ’ಕನ್ನಡದ ಕಟ್ಟಾಳಿನ’ ಒಟ್ಟಾರೆ ತಕರಾರು ಇದಾಗಿತ್ತು - ’ನಮ್ಮ ನಾಡಿನಲ್ಲೇ ನಾವು ಕನ್ನಡವಲ್ಲದ ಬಾಶೆಯಲ್ಲಿ ಮತ ಕೇಳಲು ತೊಡಗಿದರೆ ಕನ್ನಡದ ಪಾಡೇನು?’. ಈ ಕಾರ‍್ಯಕ್ರಮ ನಡೆದ ಕೆಲ ದಿನಗಳ ಮುಂಚೆಯಶ್ಟೇ ಉತ್ತರದ ಬೀಜೇಪಿ ಮುಂದಾಳುಗಳು ಬಂದು ’ಕನ್ನಡ’ ನಾಡಿನಲ್ಲಿ ಹಿಂದೀಯಲ್ಲಿ ಬಾಶಣ ಬೊಗಳಿ ಹೋಗಿದ್ದರು. ಅದು ನಡೆದಿರುವುದು ಈ ನಮ್ಮ ಕಾರ‍್ಕ್ರಮ ನಡೆಸುತ್ತಿದ್ದ ಆಳಿನ ತಲೆಯೊಳಗಿತ್ತು. ಅದಕ್ಕಾಗಿಯೋ ಏನೋ, ಆತ, ’ನರೇಂದ್ರ ಮೋದಿಯಂತವರು ಹಿಂದೀಯಲ್ಲಿ ಬಾಶಣ ಮಾಡಿದರೆ ನಾವು ಅದನ್ನು ಮನ್ನಿಸುತ್ತೇವೆ. ಏಕೆಂದರೆ, ಅವರಿಗೆ ಕನ್ನಡ ಬರುವುದಿಲ್ಲ’ ಎಂದು ಪದೇ ಪದೇ ಹೇಳುತ್ತಿದ್ದರು. ಹೇಗಿದೆ ನೋಡಿ ಈ ವರಸೆ! ದೇಶದ ಎಲ್ಲೆಡೆಯಲ್ಲೂ ಹಿಂದೀಯ ಒಡೆತನವನ್ನು ಸ್ತಾಪಿಸಬೇಕು ಎಂದು ಟೊಂಕ ಕಟ್ಟಿರುವ ’ಕೇಸರಿಗಳು’ ಬಂದು, ಎಳ್ಳಶ್ಟೂ ಅಳುಕದೆ ಹಿಂದೀಯಲ್ಲಿ ನಮ್ಮ ಮುಂದೆ ಬೊಗಳಿ ಹೋಗುವುದನ್ನು ಕನ್ನಡದ ಕಳಕಳಿ ಇರುವ ಯಾರೇ ಆದರೂ ಕಂಡಿಸಬೇಕು. ಅದನ್ನು ಬಿಟ್ಟು ಈ ಮಹಾನುಬಾವರು ಕೇಸರಿಗಳ ದಬ್ಬಾಳಿಕೆಯನ್ನು ಸ್ವ ಇಚ್ಚೆಯಿಂದ ಸಮ್ರ‍್ತಿಸಿಕೊಳ್ಳುತ್ತಿದ್ದಾರೆ! ಇವರ ಪ್ರಕಾರ ಕನ್ನಡ ಬರದವರು ಬೇರೆ ಬಾಶೆಯಲ್ಲಿ ಬಾಶಣ ಮಾಡಿದರೆ ತೊಂದರೆ ಇಲ್ಲ ತಾನೆ? ಹಾಗಾದರೆ, ಕನ್ನಡ ಬಾರದ ಯಾರೋ ಒಬ್ಬ ತಮಿಳು ಮನ್ನನ್ ತಮಿಳುನಾಡಿನಿಂದ ಬಂದು ತಮಿಳು ಅರ‍್ತವಾಗುವ ಬೆಂಗಳೂರಿನ ಕನ್ನಡಿಗರನ್ನು ಉದ್ದೇಶಿಸಿ ತಮಿಳಿನಲ್ಲಿ ಬಾಶಣ ಮಾಡಿದರೆ, ಚಾನೆಲ್ಲಿನ ಈ ಮನುಶ್ಯ ಅದನ್ನು ಮನ್ನಿಸುತ್ತಾರೆಯೆ? ಕನ್ನಡಿಗರು ಮನ್ನಿಸುತ್ತಾರೆಯೆ? ಈ ಪ್ರಶ್ನೆಯನ್ನು ಚಾನೆಲ್ಲಿನವರಿಗೆ ನೇರವಾಗಿ ಕೇಳಿಬಿಡೋಣ ಎಂದು ಫೋನ್ ಎತ್ತಿಕೊಂಡೆ. ಆದರೆ, ಎಶ್ಟು ಪ್ರಯತ್ನಿಸಿದರೂ ಸಂಪರ‍್ಕ ಸಿಗಲಿಲ್ಲ.
      ಏನು ಹೇಳುವುದು ಸ್ವಾಮೀ ನಮ್ಮ ಅರಿವುಗೇಡಿತನಕ್ಕೆ! ಕನ್ನಡ ಮತ್ತು ತಮಿಳು - ಎರಡೂ ದ್ರಾವಿಡ ಬಾಶೆಗಳು. ಅಕ್ಕತಂಗಿಯರಿದ್ದ ಹಾಗೆ. ಕನ್ನಡಿಗರೂ ತಮಿಳರೂ ಒಟ್ಟಾರೆ ದ್ರಾವಿಡರೆ. ಒಬ್ಬರಲ್ಲೊಬ್ಬರಿಗೆ ಸಹಜ ಮಯ್‍ತ್ರಿ ಇರಬೇಕು. ಒಬ್ಬರ ನುಡಿಯನ್ನೊಬ್ಬರು ಆದರಿಸಬೇಕು. ಅದನ್ನು ಬಿಟ್ಟು, ನಮಗೆ ಸಂಬಂದವೇ ಇಲ್ಲದ ಉತ್ತರದ ಹಿಂದೀಗೆ ಮಣೆ ಹಾಕುತ್ತೇವೆ. ನಮ್ಮ ನಂಟಿರುವ ನಮ್ಮ ಪರಿವಾರದ್ದೇ ಆದ ತಮಿಳಿಗೆ ಕೆಂಗಣ್ಣು ಬಿಡುತ್ತೇವೆ! ಇದಕ್ಕೆ ಕಾರಣ ಏನು? ನಮ್ಮಲ್ಲಿ ಬಹುಮಂದಿಗೆ ನಮ್ಮ ದ್ರಾವಿಡತನದ ಅರಿವು ಇಲ್ಲದಿರುವುದೇ ಇದಕ್ಕೆ ಕಾರಣ. ಕನ್ನಡ ಸಮುದಾಯದ ಚುಕ್ಕಾಣಿ ಹಿಡಿದವರು ತಲತಲಾಂತರದಿಂದ ಕನ್ನಡಿಗರ ಸಹಜ ದ್ರಾವಿಡತನವನ್ನು ಮರೆಮಾಜಿ, ಕನ್ನಡಿಗರನ್ನು ಉತ್ತರದ ಸಂಸ್ಕ್ರುತಿಯ ಕಡೆಗೆ ಓಲಿಸುತ್ತಾ ಬಂದಿರುವುದು ಕಾರಣ. ಇನ್ನಾದರೂ ನಾವು ಕನ್ನಡಿಗರು ಇಂತಹ ದ್ರೋಹಿಗಳು ಎರಚಿರುವ ಮಂಕುಬೂದಿಯ ಪ್ರಬಾವದಿಂದ ಹೊರಬರುವುದು ಒಳ್ಳೆಯದು.
      ಕೆಲ ದಶಕಗಳ ಹಿಂದೆ ಬೆಂಗಳೂರಿನ ಕೆಲ ತಮಿಳು ಪ್ರದೇಶಗಳಲ್ಲಿ ಕನ್ನಡ ಬಾರದ ತಮಿಳರು ಇದ್ದುದು ದಿಟ. ಆದರೆ, ಈಗ ಸನ್ನಿವೇಶ ತುಂಬಾ ಮಾರ‍್ಪಟ್ಟಿದೆ. ಬೆಂಗಳೂರಿನಲ್ಲಿ ಬಹಳ ಕಾಲದಿಂದ ನೆಲೆಸಿರುವ ತಮಿಳರು ಕನ್ನಡವನ್ನು ಚೆನ್ನಾಗೇ ಮಾತಾಡುತ್ತಾರೆ. ಕನ್ನಡ ಮಾತಾಡುವುದಕ್ಕೆ ಅವರಿಗೆ ಬೇಸರವಿಲ್ಲ. ಅವರ ಪ್ರದೇಶಗಳಲ್ಲಿ ಕೂಡ ಅವರು ತಮಿಳಿನಲ್ಲೇ ನಾವು ಮಾತಾಡಬೇಕು ಎಂದು ಆಗ್ರಹಿಸುವುದಿಲ್ಲ. ತಮಿಳರು ಹೆಚ್ಚಾಗಿರುವ ಹಲಸೂರಿನಲ್ಲಿ ಮನೆಮಾಡಿಕೊಂಡಿರುವ ನನಗೆ ಇದು ಚೆನ್ನಾಗಿ ತಿಳಿದಿದೆ. ಬೆಂಗಳೂರಿನಲ್ಲಿ ಕೆಲ ಹಿಂದೀಯವರು ಮಾತ್ರ ಅವರ ಮಾತನ್ನೇ ಎಲ್ಲರೂ ಆಡಬೇಕೆಂದು ಬಯಸುವವರು. ತಮಿಳರಲ್ಲ. ತೆಲುಗರೂ ಮಲೆಯಾಳಿಗರೂ ಅಲ್ಲ. ಬೆಂಗಳೂರಿನಲ್ಲಿ ದ್ರಾವಿಡ ನುಡಿಗಳನ್ನಾಡುವ ಮಂದಿ ತಮ್ಮಶ್ಟಕ್ಕೆ ತಾವು ಒಬ್ಬರಿಗೊಬ್ಬರು ತೊಂದರೆ ಕೊಡದೆ ಬದುಕುತ್ತಿದ್ದಾರೆ. ಈ ಒಳ್ಳೆಯ ನೆಲೆಯನ್ನು ಇನ್ನೂ ಗಟ್ಟಿಗೊಳಿಸುವ ಬದಲು, ಅದಕ್ಕೆ ದಕ್ಕೆ ತರುವ ಕೇಡುಗ ಬುದ್ದಿಯನ್ನು ಕೆಲ ಅರಿವುಗೆಟ್ಟ ಸ್ವಾರ‍್ತಿಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕಾಗಿ ಆಗಾಗ್ಗೆ ತೋರಿಸುತ್ತಿರುತ್ತಾರೆ. ಅದಕ್ಕೆ ನಾವು ಸೊಪ್ಪು ಹಾಕುವ ದಡ್ಡತನ ತೋರಬಾರದು, ಅಶ್ಟೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಗುರುವಾರ, ಮೇ 09, 2013

ಬಲೇ ಅಮಿತಾಬ್ ಮತ್ತು ಸೋನಿಯಾ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಹಿಂದೀ ಚಿತ್ರರಂಗದ ಮೇರು ನಟ ಅಮಿತಾಬ್ ಬಚ್ಚನ್ ಇತ್ತೀಚಿನ ವರ‍್ಶಗಳಲ್ಲಿ ದೇಶದ ಒಳಿತಿಗಾಗಿ ಸರ‍್ಕಾರವೂ ಸಾರ‍್ವಜನಿಕರೂ ಹಮ್ಮಿಕೊಂಡಿರುವ ಹಲವಾರು ಯೋಜನೆಗಳಿಗೆ ರಾಯಬಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವುಗೊಂಡ ಹೆಸರಾಂತ ವ್ಯಕ್ತಿಗಳು ಹೇಗೆ ಸಮಾಜಕ್ಕೆ ಬೇರೆಬೇರೆ ಬಗೆಗಳಲ್ಲಿ ಒಳಿತು ಗಯ್ಯಬಹುದು ಎಂಬುದಕ್ಕೆ ಅವರು ಒಂದು ಬೆಳಗುವ ಆದರ‍್ಶವಾಗಿದ್ದಾರೆ. ನಮ್ಮ ದೇಶದ ಹುಲಿಗಳನ್ನು ಕಾಪಾಡುವ ಯೋಜನೆಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡು ಬಂದಿರುವ ರೀತಿಗೆ ಅವರನ್ನು ನಾನು ವಿಶೇಶವಾಗಿ ಮೆಚ್ಚಿದ್ದೇನೆ. ಇತ್ತೀಚೆಗೆ ಅವರನ್ನು ಇನ್ನಶ್ಟು ಮೆಚ್ಚುವ ಸಂಗತಿಯೊಂದು ನನ್ನ ಗಮನಕ್ಕೆ ಬಂತು. ಈ ಸಂಗತಿ ಬಹಳ ಮಂದಿಗೆ ವಿಶೇಶ ಎನಿಸದಿರಬಹುದು. ಆದರೆ, ಕನ್ನಡತನ ಹಾಗೂ ದ್ರಾವಿಡತನವನ್ನು ಮಯ್ಗೂಡಿಸಿಕೊಂಡಿರುವ ನನಗೆ ಅದರಲ್ಲಿ ಸೆರಪು (ವಿಶೇಶ) ಕಂಡದ್ದರಲ್ಲಿ ಸಂಶಯವಿಲ್ಲ. ಅದೇನೆಂದರೆ, ಟಯ್‍ಮ್ಸ್ ಆಫ್ ಇಂಡಿಯಾ ಪತ್ರಿಕೆಯ ಏಪ್ರಿಲ್ ೧೯ರ ಸಂಚಿಕೆಯಲ್ಲಿ ಬಚ್ಚನ್ ಅವರು ಇತ್ತೀಚೆಗೆ IPL ಕ್ರಿಕೆಟಿಗರ ಬಗ್ಗೆ ಕೊಟ್ಟ ಹೇಳಿಕೆಯನ್ನು ಪ್ರಕಟಿಸಿದ್ದಾರೆ. ಬಚ್ಚನ್ ಅವರ ಹೇಳಿಕೆ ಹೀಗಿದೆ - "Indian IPL players, you do not have to reply in English when questioned at the end of a game...reply in your mother tongue if uncomfortable.". ಈ ಹೇಳಿಕೆಯಲ್ಲಿ ಅದೇನು ಅಂತಾ ಸೆರಪು ಕಂಡಿತು ನನಗೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಇದು - ಬಚ್ಚನ್ ಅವರು, 'reply in your mother tongue' ಎನ್ನುವ ಬದಲು ’reply in Hindi’ ಎಂದು ಹಾಗೇ ಸುಮ್ಮನೆ ಹೇಳಿಬಿಡಬಹುದಾಗಿತ್ತು. ಹಾಗೊಂದು ವೇಳೆ ಅವರು ’reply in Hindi’ ಎಂದೇ ಹೇಳಿದ್ದರೆ, ಯಾರೂ ಅದಕ್ಕೆ ಹುಬ್ಬೇರಿಸುತ್ತಿರಲಿಲ್ಲ. ಯಾರೂ ಅದಕ್ಕೆ ಎದುರು ಹೇಳುತ್ತಿರಲಿಲ್ಲ. ಯಾರೂ ಅದನ್ನು ಗಮನಿಸುತ್ತಲೂ ಇರಲಿಲ್ಲ. ಹಾಗಿದ್ದರೂ, ಬಚ್ಚನ್ ಅವರು ಬಾಶಾಸೂಕ್ಶ್ಮತೆಗೆ ಕುಂದು ಬರದ ಹಾಗೆ, ಹಿಂದೀಯೇತರರನ್ನೂ ಒಳಗೊಳ್ಳುವ ಹಾಗೆ 'reply in your mother tongue' ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ. IPL ಆಟಗಾರರಲ್ಲಿ ಹಿಂದೀ ತಾಯ್ನುಡಿಯಲ್ಲದವರೂ ಇದ್ದಾರೆ ಎಂಬುದನ್ನು ಮರೆಯದೆ, ಪ್ರಜ್‍ನಾಪೂರ‍್ವಕವಾಗಿ ಕೊಟ್ಟ ಹೇಳಿಕೆ ಇದು ಎಂಬುದು ನನ್ನ ನಂಬಿಕೆ. ಬಡಗಣ ರಾಜ್ಯಗಳ ಕೋಟಿ ಕೋಟಿ ಹಿಂದೀವಾದಿಗಳೂ ಹೀಗೇ ಕೊಂಚ ನುಡಿನಣ್ಪನ್ನು ತೋರಿದರೆ, ನಮ್ಮಲ್ಲಿ ಬಾಶಾಕಲಹಕ್ಕೆ ಎಡೆಯೇ ಇರುವುದಿಲ್ಲ, ಅಲ್ಲವೆ?
      ಇನ್ನು ಈ ಕಳೆದ ಕೆಲ ನಾಳುಗಳಲ್ಲಿ ಬಾಶಾಸೂಕ್ಶ್ಮತೆ ತೋರಿದ ಇನ್ನೊಬ್ಬರು ಯಾರೆಂದರೆ ಕಾಂಗ್ರೆಸ್ ಪಕ್ಶದ ಮುಂದಾಳುಗಳು. ಚುನಾವಣೆಯ ಪ್ರಚಾರಕ್ಕೆಂದು ನಮ್ಮ ನಾಡಿನಲ್ಲಿ ಓಡಾಡಿದ ಕಾಂಗ್ರೆಸ್ ಪಕ್ಶದ ಮುಂದಾಳು ಸೋನಿಯಾ ಗಾಂದಿ, ಮಂಗಳೂರು ಬೆಂಗಳೂರುಗಳಂತಹ ಊರುಗಳಲ್ಲಿ ಇಂಗ್ಲೀಶಿನಲ್ಲಿ ಮಾತ್ರ ಪ್ರಚಾರ ಬಾಶಣಗಳನ್ನು ಮಾಡಿದರು. ಗುಲ್ಬರ‍್ಗದಲ್ಲಿ, ಬಹುಶಹ ಅಲ್ಲಿ ಹಿಂದೀ ಕೆಲಮಟ್ಟಿಗೆ ಚಲಾವಣೆಯಲ್ಲಿದೆ ಎಂಬ ಕಾರಣಕ್ಕೇನೋ, ಹಿಂದಿಯಲ್ಲಿ ಬಾಶಣ ಮಾಡಿದರು. ಒಟ್ಟಾರೆ, ಹೆಚ್ಚಿನ ಕಡೆ ಹಿಂದೀಯಲ್ಲಿ ಬಾಶಣ ಮಾಡದೇ ಇರುವ ಮೂಲಕ, ’ಕರ‍್ನಾಟಕ ತೆಂಕಣ ನಾಡು. ಕರ‍್ನಾಟಕದಲ್ಲಿ ಹಿಂದೀ ಆಡುವ ಉಡಾಫೆ ತೋರಿಸಬಾರದು’ ಎಂಬ ಬಾಶಾಸೂಕ್ಶ್ಮತೆಯನ್ನು ತೋರಿಕೆಗಾದರೂ ಅವರು ಮೆರೆದಿದ್ದಾರೆ. ’ನಾವೂ ಹಿಂದೊಮ್ಮೆ ಹಿಂದೀ ಹೇರಿಕೆಗೆ ವಿರೋದ ತೋರಿಸಿದ್ದೆವು, ನಮ್ಮ ದ್ರಾವಿಡತನವನ್ನೂ ಪ್ರಾದೇಶಿಕತೆಯನ್ನೂ ಮೆರೆದಿದ್ದೆವು’ ಎಂಬ ಸತ್ಯ ಅಲ್ಪಾವದಿ ನೆನಪಿನ ಶಕ್ತಿಯ ಕನ್ನಡಿಗರು ನಮಗೆ ಮರೆತು ಹೋಗಿರಬಹುದು. ಆದರೆ, ಕಾಂಗ್ರೆಸ್ ಪಕ್ಶಕ್ಕೆ ಇನ್ನೂ ಅದು ಮರೆತು ಹೋಗಿಲ್ಲ ಎನ್ನುವುದು ಸಮಾದಾನಕರ ಸಂಗತಿ.
      ಕಾಂಗ್ರೆಸ್ಸಿನವರು ಹೀಗೆ ನಮ್ಮ ದ್ರಾವಿಡತನಕ್ಕೆ ಕೊಂಚವಾದರೂ ಬೆಲೆ ಕೊಟ್ಟರೆ, ಕೊಬ್ಬಿನ ಮೊಟ್ಟೆಗಳಾದ ಬೀಜೇಪಿಯ ’ನೇತಾಗಳು’ ಏನು ಮಾಡಿದವು ನೋಡಿ. ಹೋದ ಕಡೆಯೆಲ್ಲಾ ಬರೀ ಹಿಂದಿಯಲ್ಲೇ ಬೊಗಳಾಟ! ಬಾಶಣವನ್ನು ಕನ್ನಡದಲ್ಲಿ ಶುರು ಮಾಡುವ ’ಸ್ಟಂಟ್’ ಹಾಕುವುದು, ಬಳಿಕ ಹಿಂದೀಯಲ್ಲಿ ಗಂಟೆಗಟ್ಟಲೆ ಜಡಿಯುವುದು! ಕರ‍್ನಾಟಕ ಹಿಂದೀಗೆ ಸೋತು ಶರಣಾದ ಇನ್ನೊಂದು ರಾಜ್ಯ ಎನ್ನುವ ಬಾವನೆ ಅವರ ಬಗೆಯಲ್ಲಿ ಎಶ್ಟು ಗಟ್ಟಿಯಾಗಿ ನಿಂತಿದೆ ಎಂದರೆ, ಅವರು ಇಲ್ಲಿಗೆ ಬಂದು ಹಿಂದೀಯಲ್ಲಿ ಬಾಶಣ ಮಾಡುವುದಕ್ಕೂ ವ್ಯವಹರಿಸುವುದಕ್ಕೂ ಎಳ್ಳಶ್ಟೂ ಅಳುಕು ತೋರಿಸುವುದಿಲ್ಲ. ಕೇಸರಿ ಬಣದವರಿಗೆ ಇಡೀ ದೇಶವನ್ನು ಹಿಂದೀಮಯ ಮಾಡದಿದ್ದರೆ ತಿಂದದ್ದು ಅರಗುವುದಿಲ್ಲ, ಇರುಳಲ್ಲಿ ನಿದ್ದೆ ಬರುವುದಿಲ್ಲ. ಇಂತಹ ದಬ್ಬಾಳಿಕೆ ನಡೆಸುವ ಗರ‍್ವಿಗಳು ಹಾಕುವ ತಾಳಕ್ಕೆ ಕಮಕ್ ಕಿಮಕ್ ಎನ್ನದೆ ಕುಣಿಯುತ್ತೇವೆ ನಾವು! ಇದೇನು ನಾವು ಅಮಾಯಕರೋ, ಇಲ್ಲ, ಬೆಪ್ಪು ತಕ್ಕಡಿಗಳೋ, ಇಲ್ಲ, ಹೇಡಿಗಳೋ, ನಮ್ಮನ್ನು ಪಡೆದ ಆ ಕನ್ನಡ ತಾಯಿಗೇ ಗೊತ್ತಿರಬೇಕು!
      ಇನ್ನು ಕಡೆಯದಾಗಿ, ಚುನಾವಣೆಯ ವೇಳೆಯಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ತಮಾಶೆಯ ವಿಶಯ. ಮತ ಹಾಕುವ ನಾಳು, ಬೀಜೇಪಿಯ ದೇಶಮಟ್ಟದ ’ನೇತಾ’ ವೆಂಕಯ್ಯ ನಾಯುಡು, ಸಾಲಿನಲ್ಲಿ ತಮ್ಮ ಸರದಿಗಾಗಿ ಕಾಯದೇ ನೇರವಾಗಿ ಅದಿಕಾರಿಗಳ ಬಳಿ ಹೋಗಿ, ’ನಾನು ಇಂತವನು. ನನಗೆ ಕೂಡಲೇ ಮತ ಹಾಕಲು ಬಿಡಿ’ ಎಂದು ಕೇಳಿಕೊಂಡರು. ಅದಿಕಾರಿಗಳು ಏನು ಮಾಡಿರುತ್ತಿದ್ದರೋ. ಆದರೆ, ಸಾಲಿನಲ್ಲಿ ಕಾಯುತ್ತಾ ನಿಂತಿದ್ದ ಮತದಾರರು ಅದಕ್ಕೆ ಅವಕಾಶ ಕೊಡಲಿಲ್ಲ. ಬೇರೆ ದಾರಿ ಇಲ್ಲದೆ, ನಾಯುಡು ಅವರು ತಮ್ಮ ಸರದಿಗಾಗಿ ಕಾದೇ ಮತ ಹಾಕಬೇಕಾಯಿತು. ಪೆಚ್ಚು ಮೋರೆ ಹಾಕಿಕೊಂಡು ಬಳಿಕ ಅವರು ಮಾದ್ಯಮದವರಿಗೆ ’ಏಕೆ ಹಾಗೆ ಸರದಿಗೆ ಕಾಯದಿರುವ ಆತುರ ತೋರಿಸಿದರು’ ಎಂಬುದನ್ನು ವಿವರಿಸಿದರು. ವಿವರಣೆ ಕೊಟ್ಟಿದ್ದು ಹಿಂದೀ ಮತ್ತು ಇಂಗ್ಲೀಶುಗಳಲ್ಲಿ. ಮತ್ತೆ ಅದೇ ಮೊಂಡಾಟ! ಬರೀ ಇಂಗ್ಲೀಶಿನಲ್ಲಿ ಬೊಗಳಿದ್ದರೆ ಸಾಕಿತ್ತಲ್ಲವೆ? ಹಿಂದೀ ಏಕೆ ಬೇಕಿತ್ತು?
      ಅದೇನೇದರೂ ಇರಲಿ. ಹಿಂದೀ ಬಾಶಣಗಳಿಗೆ ಮತ್ತೆ ಎದುರು ತೋರಿಸುವುದನ್ನು ನಾವು ರೂಡಿಸಿಕೊಳ್ಳಬೇಕು. ನಾವು ಕನ್ನಡಿಗರು. ನಾವು ದ್ರಾವಿಡರು. ನಮಗೆ ನಮ್ಮದೇ ಆದ ದ್ರಾವಿಡ ನುಡಿ ಇದೆ. ನಮಗೆ ಕೆಲಸಕ್ಕೆ ಬಾರದ ಹಿಂದೀ ಬೇಡ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಸೋಮವಾರ, ಮಾರ್ಚ್ 25, 2013

ಮಣಿಯಿತು UPSC!

ವಿ.ಸೂ.: ವಿದಾನ ಸಬೆಯ ಚುನಾವಣೆ ಮುಗಿಯುವವರೆಗೆ, ಅಂದರೆ, ಮೇ ತಿಂಗಳ ಮೊದಲ ವಾರದವರೆಗೆ, ಬ್ಲಾಗನ್ನು ಬರೆಯುವುದರಿಂದ ಬಿಡುವು ತೆಗೆದುಕೊಂಡಿದ್ದೇನೆ - ಎಚ್.ಎಸ್.ರಾಜ್

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕೋಟಿಗಟ್ಟಲೆ ಮಂದಿಗೆ ತಾಯ್‍ನುಡಿಗಳಾಗಿದ್ದರೂ ಕನ್ನಡ, ತಮಿಳು, ತೆಲುಗು, ಮರಾಟಿ ಮುಂತಾದ ನುಡಿಗಳಿಗೆ ಕೇವಲ ’ಪ್ರಾದೇಶಿಕ ಬಾಶೆ’ ಎಂಬ ಇಳಿಗೆಯ್ವ ಹಣೆಪಟ್ಟಿ ನಮ್ಮ ದೇಶದಲ್ಲಿ! ಸಾಲದುದಕ್ಕೆ ಅವುಗಳ ಮೇಲೆ ಹಿಂದೀ ಮತ್ತು ಇಂಗ್ಲಿಶ್ ನುಡಿಗಳ ಎಡೆಬಿಡದ ದಬ್ಬಾಳಿಕೆ ಬೇರೆ. ಯಾವಾಗ ಯಾವ ರೂಪದಲ್ಲಿ ಕುತ್ತುಗಳು ಬಂದು ಅವುಗಳ ಮೇಲೆ ಎರಗುತ್ತವೋ ಎಂದು ಹೇಳಲು ಬರುವುದಿಲ್ಲ. ’ಹೋದೆಯಾ ಪಿಶಾಚೀ ಎಂದರೆ, ಬಂದೆ ಗವಾಕ್ಶೀಲಿ!’ ಎನ್ನುವ ಹಾಗೆ, ಕನ್ನಡದಂತಹ ನುಡಿಗಳ ಮೇಲೆ ಹಿಂದೀ ಮತ್ತು ಇಂಗ್ಲೀಶುಗಳ ಹಾವಳಿ ತಪ್ಪಿದ್ದಲ್ಲ. ಕಳೆದ ಎರಡು ಮೂರು ವಾರಗಳಲ್ಲಿ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿದ ಕೆಂದ್ರ ಲೋಕಸೇವಾ ಸಮಿತಿಯ (UPSC) ಹೊಸ ಪರೀಕ್ಶಾ ಕಟ್ಟಳೆಗಳೇ ಇದಕ್ಕೆ ಒಂದು ಅತ್ಯುತ್ತಮ ನಿದರ‍್ಶನ.
      ಪ್ರಾದೇಶಿಕ ಬಾಶೆಗಳಲ್ಲಿ ಪ್ರಾವೀಣ್ಯತೆ ಇದ್ದು ಪ್ರಾದೇಶಿಕ ಬಾಶೆಗಳಲ್ಲೇ ಅಯ್. ಏ. ಎಸ್. ಮುಂತಾದ ಸೇವೆಗಳಿಗಾಗಿ ನಡೆಯುವ ಪರೀಕ್ಶೆಗಳಿಗೆ ಉತ್ತರಗಳನ್ನು ಬರೆಯಲು ಬಯಸುವ ಅಬ್ಯರ‍್ತಿಗಳಿಗೆ ಹಿನ್ನಡೆಯಾಗುವ ರೀತಿಯಲ್ಲಿ ಲೋಕಸೇವಾ ಸಮಿತಿ ತನ್ನ ಹೊಸ ಪರೀಕ್ಶಾ ವಿದಾನವನ್ನು ರೂಪಿಸಿ, ಜಾರಿಗೆ ತರಲು ಹೊರಟಿತ್ತು. ಸಹಜವಾಗೇ ಪ್ರಾದೇಶಿಕ ಬಾಶೆಗಳನ್ನಾಡುವವರಿಂದ ಇದಕ್ಕೆ ಎದಿರು ವ್ಯಕ್ತವಾಗಲು ತೊಡಗಿತು. ಲೋಕಸೇವಾ ಸಮಿತಿ ಬರೀ ಇಶ್ಟೇ ಬದಲಾವಣೆ ತಂದಿದ್ದರೆ, ಅಂದರೆ, ಪ್ರಾದೇಶಿಕ ಬಾಶೆಗಳ ಅಬ್ಯರ‍್ತಿಗಳಿಗೆ ಮಾತ್ರ ಹಿನ್ನಡೆಯಾಗುವ ಹಾಗೆ ಮಾರ‍್ಪಾಡುಗಳನ್ನು ತಂದಿದ್ದರೆ, ಅದರ ಎದುರು ಹೋರಾಡುವುದು ನಮ್ಮಂತಹ ಪ್ರಾದೇಶಿಕ ಬಾಶೆಗಳನ್ನಾಡುವವರಿಗೆ ದಿಟವಾಗಿಯೂ ಕಶ್ಟವಾಗುತ್ತಿತ್ತು. ಆದರೆ, ನಮ್ಮ ಅದ್ರುಶ್ಟ ಕೊಂಚ ಚೆನ್ನಾಗಿತ್ತು ಎಂದು ಕಾಣುತ್ತದೆ. ಏಕೆಂದರೆ, ಲೋಕಸೇವಾ ಸಮಿತಿ, ಪ್ರಾದೇಶಿಕ ಬಾಶೆಗಳ ಅಬ್ಯರ‍್ತಿಗಳಿಗೆ ಕೆಡುಕು ಮಾಡುವುದರ ಜೊತೆಗೆ, ಇಂಗ್ಲಿಶ್ ಬಾಶೆಗೆ ಒತ್ತು ಕೊಟ್ಟು, ಇಂಗ್ಲಿಶ್ ಬಾಶೆಯಲ್ಲಿ ಕುಶಲತೆ ಇರುವ ಅಬ್ಯರ‍್ತಿಗಳಿಗೆ ಒಳಿತಾಗುವ ಹಾಗೆ ಕೂಡ ಮಾರ‍್ಪಾಡುಗಳನ್ನು ಮಾಡಿತ್ತು. ಇದರಿಂದಾಗಿ, ಇಂಗ್ಲಿಶ್ ಅಶ್ಟಾಗಿ ಬಾರದ, ಹಿಂದಿಯಲ್ಲಿ ಮಾತ್ರ ಕುಶಲತೆ ಇರುವ ಮಂದಿಗೂ ಹಿನ್ನಡೆಯಾಗಿತ್ತು. ಹಾಗಾಗಿ, ಹಿಂದೀ ಆಡುಗರಿಂದಲೂ ಸಮಿತಿಯ ಹೊಸ ನೀತಿಗೆ ತೀವ್ರ ವಿರೋದ ವ್ಯಕ್ತವಾಯಿತು.
      ಒಟ್ಟಿನಲ್ಲಿ, ಸಂಸತ್ತಿನಲ್ಲಿ ಹೆಚ್ಚುಕಡಿಮೆ ಎಲ್ಲಾ ಪಕ್ಶಗಳಿಂದಲೂ ಲೋಕಸೇವಾ ಸಮಿತಿ ಹೊರಡಿಸಿದ್ದ ಹೊಸ ನೀತಿಯ ಅದಿಸೂಚನೆಗೆ ಒಗ್ಗಟ್ಟಿನಿಂದ ಕೂಡಿದ ವಿರೋದ ವ್ಯಕ್ತವಾಯಿತು. ಪ್ರತಿಬಟನೆಯ ಗದ್ದಲ ಎಶ್ಟು ಗಟ್ಟಿಯಾಗಿತ್ತೆಂದರೆ, ಕಲಾಪವನ್ನು ಮೂರು ಬಾರಿ ಮುಂದೂಡಬೇಕಾಯಿತು. ಲೋಕಸೇವಾ ಸಮಿತಿಯ ತಲೆಯವರನ್ನು ಕೂಡಲೇ ವಜಾ ಮಾಡಿ ಎಂದು ಜೆಡಿಯು ಮುಂದಾಳು ಶರದ್ ಯಾದವ್ ಒತ್ತಾಯಿಸಿದರು. ಲಾಲೂ ಪ್ರಸಾದ್ ಯಾದವರ ಪಕ್ಶದ ಸದಸ್ಯ ರಗುವಂಶ್ ಸಿಂಗರು ಎರಡು ಬಾರಿ ಸಬಾದ್ಯಕ್ಶರ ಪೀಟದ ಕಡೆ ನುಗ್ಗಿ ಅದಿಸೂಚನೆ ವಿರುದ್ದ ಗೋಶಣೆ ಕೂಗಿದರು! ಇಂತಹ ಕಟ್ಟಿದಿರಿಗೆ ಮಣಿದು ಸರ‍್ಕಾರ ಬೇರೆ ದಾರಿ ಇಲ್ಲದೆ ಲೋಕಸೇವಾ ಸಮಿತಿಯ ಅದಿಸೂಚನೆಯನ್ನು ತಡೆಹಿಡಿಯುವ ನಿರ‍್ದಾರವನ್ನು ಪ್ರಕಟಿಸಿತು. ಇದೆಲ್ಲಾ ನಡೆದ ಎರಡು ನಾಳುಗಳ ಬಳಿಕ ಲೋಕಸೇವಾ ಸಮಿತಿ ತನ್ನ ಪರೀಕ್ಶಾ ಮಾದರಿಯನ್ನು ಮತ್ತೆ ರೂಪಿಸುವುದಾಗಿ ಹೇಳಿಕೆ ಕೊಟ್ಟಿತು. ಮತ್ತೆರಡು ದಿನಗಳಲ್ಲಿ, ಇಂಗ್ಲೀಶಿಗೆ ಕೊಟ್ಟಿರುವ ಒತ್ತನ್ನಶ್ಟೇ ಅಲ್ಲದೆ ಪ್ರಾದೇಶಿಕ ನುಡಿಗಳ ಮೇಲೆ ಹಾಕಿದ್ದ ಎಲ್ಲ ಅಡ್ಡಿಗಳನ್ನೂ ತೆಗೆದು ಹಾಕಿರುವುದಾಗಿ ಕೂಡಾ ತಿಳಿಸಿತು.
      ಎಲ್ಲಾ ಪಕ್ಶಗಳೂ ಹೀಗೆ ಒಟ್ಟಿಗೆ ಎದುರು ತೋರಿಸಿದ್ದರಿಂದ ನಮ್ಮ ಕನ್ನಡಕ್ಕೆ ಕುತ್ತಾಗಿದ್ದ ಅದಿಸೂಚನೆಗೆ ಬೇಗನೇ ತಡೆ ಬಿದ್ದಿತು. ಈ ಗೆಲುವು ನಮಗೆ ಸಂತಸದ ವಿಶಯವೇನೋ ಸರಿ. ಆದರೆ, ಈ ಗೆಲುವಿಗೆ ಕಾರಣವಾದ ಹೋರಾಟದಲ್ಲಿ ನಮ್ಮ ಪಾಲು ಎಶ್ಟರ ಮಟ್ಟಿನದು ಎಂಬುದು ಸರಿಯಾಗಿ ತಿಳಿಯದು. ಏಕೆಂದರೆ, ನಾನು ನೋಡಿದ ಪತ್ರಿಕೆಗಳಲ್ಲಿ ನಮ್ಮ ಕನ್ನಡ ನಾಡಿನ ಸಂಸದರು ಹೋರಾಡಿದ ಬಗ್ಗೆ ನಿರ‍್ದಿಶ್ಟ ವರದಿಗಳಿರಲಿಲ್ಲ. ಅದೇನೇ ಇರಲಿ, ಕನ್ನಡದ ಸಂಗಟನೆಗಳಲ್ಲಾದರೂ ಕೆಲವು ಹಾಗೂ ಕನ್ನಡದ ಸಾಹಿತಿಗಳಲ್ಲಾದರೂ ಕೆಲವರು ಕಂಡಿತವಾಗಿಯೂ ಲೋಕಸೇವಾ ಸಮಿತಿಯ ಅದಿಸೂಚನೆಗೆ ಕಟುವಾದ ಪ್ರತಿಬಟನೆಯನ್ನು ಸೂಚಿಸಿದ್ದರು. ಅದೇ ವೇಳೆ ಬೆಂಗಳೂರಿನಲ್ಲಿ ನಡೆದ ತೆಲುಗು ವಿಜ್‍ನಾನ ಸಮಿತಿಯ ಸಮಾರಂಬದಲ್ಲೂ ಹಲವು ತೆಲುಗು ಗಣ್ಯರು ಅದಿಸೂಚನೆಯ ಬಗ್ಗೆ ವಿರೋದವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದರು. ಇದೆಲ್ಲಾ ನಮ್ಮಲ್ಲಿ ಆಶಾಬಾವನೆಯನ್ನು ಮೂಡಿಸುವ ಸಂಗತಿ.
      ಲೋಕಸೇವಾ ಸಮಿತಿಯ ಅದಿಸೂಚನೆಯ ಬಗ್ಗೆ ಕಂಡು ಬಂದ ಪ್ರತಿಬಟನೆಯಲ್ಲಿ ಗಮನಿಸಬೇಕಾದ ಒಂದು ಮುಕ್ಯ ಅಂಶವಿದೆ. ಅದೇನೆಂದರೆ, ಹಿಂದೀವಾಲರ ಪ್ರತಿನಿದಿಗಳು ನಿಜಕ್ಕೂ ಪ್ರತಿಬಟಿಸಿದ್ದು ಇಂಗ್ಲೀಶಿಗೆ ಹೆಚ್ಚಿನ ಒತ್ತು ಸಿಕ್ಕಿದುದಕ್ಕೇ ಹೊರತು ಪ್ರಾದೇಶಿಕ ಬಾಶೆಗಳಿಗೆ ತೊಡಕು ಉಂಟಾದುದಕ್ಕಲ್ಲ!  ಪರೀಕ್ಶೆಗಳ ಹೊಸ ಮಾದರಿಯಿಂದ ಪ್ರಾದೇಶಿಕ ಬಾಶೆಗಳಿಗೆ ಮಾತ್ರ ತೊಡಕು ಉಂಟಾಗಿದ್ದರೆ, ಹಿಂದೀ ನಾಡಿನ ಮುಂದಾಳುಗಳು ಚಕಾರವನ್ನಾದರೂ ಎತ್ತುತ್ತಿದ್ದರೆ? ಹಿಂದೀವಾಲರಿಗೆ ಪ್ರಾದೇಶಿಕ ಬಾಶೆಗಳ ಬಗ್ಗೆಯೂ ಸಹಾನುಬೂತಿ ಏನಾದರು ಇದೆಯೆ? ಇದು ಬಗೆದು ನೋಡಬೇಕಾದ ವಿಚಾರ.
      ಈ ಸಲವೇನೋ ಕಾರಣಾಂತರದಿಂದ ಹಿಂದೀವಾಲರ ನೆರವು ನಮಗೆ ದೊರೆಯಿತು. ಆದರೆ, ಎಲ್ಲ ಸಂದರ‍್ಬಗಳಲ್ಲೂ ಅದು ದೊರೆಯಲಾರದು. ಆದ್ದರಿಂದ, ಎಲ್ಲ ಸಂದರ‍್ಬಗಳಲ್ಲೂ ನೆರವು ದೊರೆಯುವತ್ತ ನಮ್ಮ ಕೆಳೆಯ ಕಯ್ಯನ್ನು ನಾವು ಚಾಚಿರಬೇಕು. ಅಂದರೆ, ನಮ್ಮ ಹಾಗೇ ಕಶ್ಟಗಳನ್ನು ಎದುರಿಸಬೇಕಾದ ಬೇರೆ ಪ್ರಾದೇಶಿಕ ನುಡಿಗರಿಗೆ ನಮ್ಮ ಬೆಂಬಲವನ್ನು ನೀಡುತ್ತಿರಬೇಕು ಮತ್ತು ಅವರಿಂದ ಬೆಂಬಲವನ್ನು ಪಡೆದುಕೊಳ್ಳುತ್ತಿರಬೇಕು. ಮುಕ್ಯವಾಗಿ, ನಡೆನುಡಿಗಳಲ್ಲಿ ಹಾಗೂ ಬುಡಕಟ್ಟಿನಲ್ಲಿ ನಮ್ಮವರೆನಿಸುವ ನಮ್ಮ ಸಹದ್ರಾವಿಡರಾದ ತಮಿಳರು, ತೆಲುಗರು ಮತ್ತು ಮಲೆಯಾಳರೊಂದಿಗೆ ಸವ್‍ಹಾರ‍್ದವನ್ನೂ ಒಗ್ಗಟ್ಟನ್ನೂ ಮೂಡಿಸಿಕೊಳ್ಳಬೇಕು. ತೆಂಕಣರು ನಾವೆಲ್ಲ ದ್ರಾವಿಡತನವೆಂಬ ನಮ್ಮ ನನ್ನಿ ಹಿನ್ನೆಲೆಯ ಬಲದಿಂದ ಒಗ್ಗೂಡಬೇಕು. ಹೀಗೆ ಒಗ್ಗೂಡಿದರೆ, ಮರಾಟಿ ಮತ್ತು ಬಂಗಾಲಿಗಳಂತಹ ಬೇರೆ ಪ್ರಾದೇಶಿಕ ನುಡಿಗರ ನೆರವನ್ನು ಪಡೆದುಕೊಳ್ಳುವುದೂ ಹಗುರಾಗಬಹುದು. ಆಗ, ಕೇಂದ್ರದಿಂದ ಆಗಾಗ್ಗೆ ಬರುವ ಲೋಕಸೇವಾ ಸಮಿತಿಯ ಕೆಡುಕ ನೀತಿಗಳಂತಹ ಕುತ್ತುಗಳ ವಿರುದ್ದ ಹೋರಾಡುವುದು ನಮಗೆ ಬಹುಮಟ್ಟಿಗೆ ಸುಲಬವಾಗಬಹುದು. ನಮ್ಮ ನಡೆನುಡಿಗಳು ಉಳಿದುಕೊಳ್ಳಬಹುದು.

ನಲ್‍ಮೆಯೊಡನೆ,
ಎಚ್.ಎಸ್.ರಾಜ್

ಗುರುವಾರ, ಮಾರ್ಚ್ 14, 2013

ಗೋಹತ್ಯಾನಿಶೇದವೆಂಬ ದೊಂಬರಾಟ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಬೆಳಗಾವಿಯ ಸುವರ‍್ಣ ಸವ್ದದಲ್ಲೂ ಶಾಸಕಸಬೆಯ ಅದಿವೇಶನ ನಡೆಯಿತು. ಅದಿವೇಶನದ ಕಡೆಯ ನಾಳು, ತರಾತುರಿಯಿಂದ ಆಡಳಿತ ಪಕ್ಶ ಆವುಗೊಲೆಗೆ ತಡೆ ಹಾಕುವ ಮಸೂದೆಯನ್ನು ಸದನದ ಮುಂದೆ ಚರ‍್ಚೆಗೆ ತಾರದೆ ಗುಟ್ಟುಗುಟ್ಟಾಗಿ ಅಂಗೀಕರಿಸಿತು. ಸ್ವಾಬಾವಿಕವಾಗಿಯೆ, ಸವರ‍್ಣೀಯ ಹಿಂದೂಗಳನ್ನು ಓಲಯ್ಸುವ ಆಡಳಿತ ಪಕ್ಶದ ಈ ನುಸುಳು ರಾಜಕಾರಣದ ನಡೆಯ ಬಗ್ಗೆ ಮರುದಿನಗಳಲ್ಲಿ ಟೀವೀ ಕಾಲುವೆಗಳಲ್ಲಿ ಪರ-ವಿರೋದಿ ಚರ‍್ಚೆಗಳು ನಡೆದವು. ಇಂತಹ ಒಂದು ಕಾರ‍್ಯಕ್ರಮದಲ್ಲಿ ಶಾಸಕ ಹಸನಬ್ಬನವರು, ’ಮುಸ್ಲಿಮರಲ್ಲಿ ಬಡವರೇ ಹೆಚ್ಚು. ಗೋಮಾಂಸ ಅಗ್ಗ. ಮುಸ್ಲಿಮರು ಗೋಹತ್ಯೆ ನಿಶೇದವನ್ನು ವಿರೋದಿಸುತ್ತಿರುವುದು ಬಡತನದ ಅನಿವಾರ‍್ಯತೆಯಿಂದಾಗಿ. ಒಂದು ವೇಳೆ, ಕುರಿಯಡಗು  ಗೋಮಾಂಸಕ್ಕಿಂತ ಅಗ್ಗವಾಗಿ ದೊರೆತರೆ, ಮುಸ್ಲಿಮರು ಗೋಹತ್ಯೆ ನಿಶೇದವನ್ನು ವಿರೋದಿಸುವುದಿಲ್ಲ. ಸರ‍್ಕಾರ ಕುರಿಮಾಂಸ ಬಡವರಿಗೆ ರಿಯಾಯತಿ ದರದಲ್ಲಿ ಸಿಗುವಂತೆ ಮಾಡಬೇಕು’ ಎಂದು ಹೇಳಿದರು. ಅವರ ಹೇಳಿಕೆಗೆ ಶ್ರೀರಾಮ ಸೇನೆಯ ಮುತಾಲಿಕರು, ’ಹವುದು. ಆಕಳ ಹತ್ಯೆ ನಿಲ್ಲುತ್ತದೆ ಎನ್ನುವುದಾದರೆ, ಕುರಿಮಾಂಸವನ್ನು ಅಗ್ಗದ ಬೆಲೆಗೆ ಒದಗಿಸುವ ಏರ‍್ಪಾಟು ಆಗಬೇಕು’ ಎಂದು ಒಪ್ಪಿಗೆ ಸೂಚಿಸಿದರು. ಇದನ್ನೆಲ್ಲಾ ಕೇಳಿ ನಾನು ’ಶಿವ ಶಿವಾ’ ಎಂದುಕೊಂಡೆ.
      ಇತ್ತೀಚೆಗೆ ಗೋಹತ್ಯೆಯ ಬಗ್ಗೆ ಇನ್ನೊಂದು ಕಾರ‍್ಯಕ್ರಮವನ್ನು ಟೀವೀಯಲ್ಲಿ ನೋಡಿದೆ. ಎಂಟನೇ ತರಗತಿಯ ಹಿಂದೀ ಪಟ್ಯಪುಸ್ತಕದಲ್ಲಿ ನಮ್ಮ ’ಗೋವಿನ ಹಾಡು’ ಒಂದು ಪಾಟದ ರೂಪದಲ್ಲಿ ಅಳವಟ್ಟಿದೆಯಂತೆ. ಆದರೆ, ಆ ಪಾಟದ ಕತೆಗೂ ನಮ್ಮ ಮೂಲ ಗೋವಿನ ಹಾಡಿನ ಕತೆಗೂ ಒಂದು ಆಕ್ಶೇಪಾರ‍್ಹ ವ್ಯತ್ಯಾಸವಿದೆಯಂತೆ. ಪಾಟದ ಕತೆಯಲ್ಲಿ, ಗೋವಿನ ಸತ್ಯಸಂದತೆಗೆ ಮೆಚ್ಚಿ, ಬಗೆನೊಂದು, ಹುಲಿ, ’ಇನ್ನೆಂದೂ ನಾನು ಗೋಮಾಂಸವನ್ನು ತಿನ್ನುವುದಿಲ್ಲ’ ಎಂದು ಪ್ರತಿಜ್ನೆ ಮಾಡುತ್ತದಂತೆ (ಮೂಲ ಗೋವಿನ ಹಾಡಿನಲ್ಲಿ ಹುಲಿ ಬೆಟ್ಟದ ತುದಿಯಿಂದ ಹಾರಿ ತಂಗೊಲೆ ಗೆಯ್ದುಕೊಳ್ಳುತ್ತದೆ). ಚರ‍್ಚೆಯಲ್ಲಿ ಪಾಲ್ಗೊಂಡಿದ್ದ ಕೆಲ ದಲಿತ ಮುಂದಾಳುಗಳ ಪ್ರಕಾರ, ಹೀಗೆ ಮೂಲ ಕತೆಯನ್ನು ತಿರುಚಿದ್ದು, ಹಿಂದುತ್ವಪರ ಸರ‍್ಕಾರದ ನುಸುಳು ರಾಜಕಾರಣ. ’ಗೋಮಾಂಸವನ್ನು ತಿನ್ನುವುದು ಕೆಟ್ಟದ್ದು’ ಎಂಬ ಪ್ರಜ್ನೆಯನ್ನು ಎಳೆಯ ಮಕ್ಕಳಲ್ಲಿ ಬರಿಸುವುದೇ ಇಲ್ಲಿನ ಉದ್ದೇಶ, ಎಂಬುದು ಅವರ ವಾದ.
      ಈ ಮೇಲಿನ ಎರಡೂ ಚರ‍್ಚೆಗಳನ್ನು ನೋಡಿದ ಮೇಲೆ ನನಗೆ ಅನ್ನಿಸಿದ್ದು ಇದು - ’ಹಸು ಎಮ್ಮೆಗಳನ್ನು ಕಾಪಾಡುವುದಕ್ಕೆ ಸಾವಿರಾರು ಮಂದಿ ಇದ್ದಾರೆ. ಆದರೆ, ಕುರಿ ಕೋಳಿಗಳನ್ನು ಕಾಪಾಡುವುದಕ್ಕೆ ಮಾತ್ರ ಒಬ್ಬನೂ ಇಲ್ಲ! ಹಸು ಎಮ್ಮೆಗಳನ್ನು ತಿನ್ನುವುದು ದೊಡ್ಡ ಪಾಪ. ಅದೇ ಕುರಿ ಕೋಳಿಗಳನ್ನು ತಿನ್ನುವುದು ಪಾಪವಲ್ಲ, ಅತವ ಕಡಿಮೆ ಪಾಪ! ಹಸು ಎಮ್ಮೆಗಳ ಹತ್ಯೆ ನಿಲ್ಲುತ್ತದೆ ಎನ್ನುವುದಾದರೆ, ಕುರಿ ಕೋಳಿಗಳನ್ನು ರಿಯಾಯಿತಿ ದರದಲ್ಲಿ ಮಾರಿಸಲಿಕ್ಕೂ ಕೆಲವರು ಸಿದ್ದರಿದ್ದಾರೆ!’. ಅದೇನು ಪಾಪ ಮಾಡಿದ್ದವು ಸ್ವಾಮೀ ಕುರಿ ಕೋಳಿಗಳು? ಅವುಗಳ ನೋವು ನೋವಲ್ಲವೆ? ಪ್ರಾಣಿಗಳಲ್ಲೂ ಮೇಲು-ಕೀಳು ಎಣಿಸುವುದೇ?
      ಪ್ರಾಣಿಗಳಲ್ಲಿ ಮೇಲು-ಕೀಳು ಎಣಿಸುವುದೂ, ಮಾನವರಲ್ಲಿ ಮೇಲು-ಕೀಳು ಎಣಿಸುವುದೂ, ಇಂತಹ ಅನ್ಯಾಯದ ಪರಿಕಲ್ಪನೆಗಳು ಸದ್ಯ ದಕ್ಶಿಣದ ನಾವು ದ್ರಾವಿಡರು ಹುಟ್ಟುಹಾಕಿದವಲ್ಲ. ಈ ವಿಶಯದಲ್ಲಿ ಅದೊಂದು ಸಮಾದಾನ ನನಗೆ. ಹಾಗೆಂದು ಉತ್ತರದಿಂದ ಬಂದ ಇಂತಹ ಕೀಳು ಆಚಾರಗಳನ್ನು ನಾವೇನೂ ನಡೆಸದೆ ಬಿಟ್ಟಿಲ್ಲ. ಇದು ನಿಶ್ಚಯವಾಗಿಯೂ ಒಂದು ಕೊರಗು ನನಗೆ. ಕೆಟ್ಟ ಪದ್ದತಿಗಳನ್ನು ಹುಟ್ಟುಹಾಕುವುದು ಎಶ್ಟು ಪಾಪವೋ, ಆ ಪಾಪಗಳನ್ನು ಒಪ್ಪಿ ಆಚರಿಸುವುದೂ ಅಶ್ಟೇ ಪಾಪ, ನನ್ನ ಕಣ್ಣಿನಲ್ಲಿ.
      ಪ್ರಾಣಿಗಳ ವಿಶಯದಲ್ಲಿ ದಕ್ಶಿಣದ ಸಾದುಸಂತರು ಎಂತೆಂತಹ ಕನಿಕರದ ಮಾತುಗಳನ್ನಾಡಿದ್ದಾರೆ. ’ಇನ್ನೊಂದರ ಮಾಂಸ ತಿಂದು ತನ್ನ ಮೆಯ್ಯ ಮಾಂಸ ಹೆಚ್ಚಿಸಿಕೊಳ್ಳುವವನು, ಅದು ಹೇಗೆ ತಾನೆ ಕನಿಕರ ಉಳ್ಳವನಾಗುತ್ತಾನೆ?’ ಎಂದು ತಮಿಳಿನ ತಿರುಕ್ಕುರಲ್‍ ಬರೆದ ಸಂತ ವಳ್ಳುವಾರ್ ಕೇಳುತ್ತಾನೆ. ನಮ್ಮವನೇ ಆದ ಕನ್ನಡಿಗ ಬಸವಣ್ಣ ಹೇಳುತ್ತಾನೆ, ’ದಯೆಯೇ ದರ‍್ಮದ ಮೂಲವಯ್ಯಾ, ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂದು. ದಯೆ ಇರಬೇಕಾದುದು ’ಸಕಲ’ ಪ್ರಾಣಿಗಳಲ್ಲಿ. ಬರೀ ಹಸು ಮತ್ತು ಎಮ್ಮೆಗಳಲ್ಲಿ ಮಾತ್ರವಲ್ಲ. ಪ್ರಾಣಿದಯೆ ಸಾರುವ ಮಾತುಗಳು ಉತ್ತರದ ನಾಡುಗಳಲ್ಲೂ ಇರಬಹುದು. ಆದರೆ, ಅವುಗಳೊಂದಿಗೆ, ’ಕೆಲವು ಪ್ರಾಣಿಗಳು ದೇವರಿಗೆ ಸಮಾನ. ಅವಕ್ಕೆ ವಿಶೇಶವಾಗಿ ದಯೆ ತೋರಿರಿ’ ಎಂಬ, ’ಕೆಲವು ಪ್ರಾಣಿಗಳು ಶ್ರೇಶ್ಟ, ಉಳಿದವು ಅಲ್ಲ’ ಎಂದು ತಾರತಮ್ಯ ಮಾಡುವ ಮಾತುಗಳೂ ಅಲ್ಲಿವೆ. ದ್ರಾವಿಡರ ನಾಡಾದ ದಕ್ಶಿಣದಲ್ಲಿ ಈ ಬಗೆಯ ಇಬ್ಬಂದಿ ನೀತಿಯ ಸಂದೇಶಗಳು ನನಗೆ ತಿಳಿದಂತೆ ಇಲ್ಲ.
      ನಮ್ಮ ದ್ರಾವಿಡ ಸಂತರು ಸಮತಾಬಾವದಿಂದ ಎಶ್ಟು ಮಾತು ಹೇಳಿದ್ದರೇನು? ನಾವಂತೂ ಅದನ್ನು ಪಾಲಿಸುತ್ತಿಲ್ಲ. ಸಮತಾಬಾವದ ಮಾತುಗಳು ಹೋಗಲಿ, ಅಸಮತೆಯೇ ಆದಾರವಾಗಿರುವ ಉತ್ತರದಿಂದ ಬಂದ ಆಚರಣೆಗಳಿಗೆ ಗಟ್ಟಿಯಾಗಿ ನಾವು ಜೋತುಬಿದ್ದಿದ್ದೇವೆ. ಮೇಲು-ಕೀಳಿನ ಎಣಿಕೆಯಿಂದ ಬಂದ ಉತ್ತರದ ನಂಬಿಕೆಗಳು ದಕ್ಶಿಣದ ದ್ರಾವಿಡರಾದ ನಮಗೆ ಎಂದೂ ಆದರ‍್ಶವಾಗಬಾರದು. ಆದರೂ, ಆಗಿವೆ. ಮುಂದೆ ಎಂದಾದರೊಂದು ದಿನ, ಬಸವಣ್ಣನ ’ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂಬ ಸಂದೇಶ ನಮಗೆಲ್ಲಾ ಆದರ‍್ಶಪ್ರಾಯವಾಗುತ್ತದೆ ಎಂದು ನಂಬೋಣ. ಆದರೆ, ಅಲ್ಲಿಯವರೆಗೆ, ’ಹಸು ಎಮ್ಮೆ ಮೇಲು, ಕುರಿ ಕೋಳಿ ಕೀಳು’ ಎನ್ನುವ ಇಬ್ಬಂದಿ ನೀತಿಯ ದೊಂಬರಾಟದಿಂದ ನಾವು ಹೊರಗಿರೋಣ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಸೋಮವಾರ, ಮಾರ್ಚ್ 04, 2013

ಮಹಿಶಿ ವರದಿ ಜಾರಿ ಮಾಡಿರಿ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ನಮ್ಮ ನೆಚ್ಚಿನ(?) ಮುಂದಾಳುಗಳೆ,
      ಕನ್ನಡ ನಾಡಿನಲ್ಲಿ ಕನ್ನಡಿಗರಾದ ನಮಗೆ ನಮ್ಮ ಕವ್‍ಶಲ್ಯಕ್ಕೆ ತಕ್ಕ ಉದ್ಯೋಗ ದೊರೆಯುವುದು ನಮ್ಮ ಹುಟ್ಟಿನಿಂದಲೇ ಬಂದ ಹಕ್ಕು! ಅದನ್ನು ದೊರಕಿಸಿಕೊಡುವುದು ನಾವು ಆರಿಸಿ ಕಳಿಸಿರುವ ನಮ್ಮ ಮುಂದಾಳುಗಳಾದ ನಿಮ್ಮ ಕನಿಶ್ಟ ಕರ‍್ತವ್ಯ! ಆದರೆ, ನ್ಯಾಯವಾಗಿ ನಮಗೆ ದೊರೆಯಬೇಕಾದ ಕೆಲಸಗಳನ್ನು ನೀವು ನಮ್ಮಿಂದ ದೂರ ಮಾಡಿ ಹೊರನಾಡಿಗರ ಪಾಲು ಮಾಡುತ್ತೀರಿ. ಹಾಗೆ ಮಾಡಿ ನಮ್ಮ ಬದುಕನ್ನೇ ಕಸಿದುಕೊಳ್ಳುತ್ತೀರಿ. ಸಂಬಳ ತರುವ ಕೆಲಸವೇ ಇಲ್ಲದಿದ್ದರೆ ನಾವು ಬದುಕುವುದಾದರೂ ಹೇಗೆ? ಚೆಂದದ ಬಾಳನ್ನು ಕಟ್ಟಿಕೊಳ್ಳುವುದಾದರೂ ಹೇಗೆ?
      ಮೊದಲಿಂದಲೂ ನಮ್ಮ ನಾಡನ್ನು ಮುನ್ನಡೆಸಿಕೊಂಡು(?) ಬಂದಿರುವ ಮುಂದಾಳುಗಳು ನೀವು, ನಮ್ಮ ಕೆಲಸಗಳನ್ನು ವಲಸಿಗರ ಮಡಿಲಿಗೆ ಹಾಕಿ, ನಮ್ಮ ಬದುಕಿಗೆ ಕತ್ತಲೆ ತುಂಬಿಸುತ್ತಾ ಬಂದಿದ್ದೀರಿ. ಇಪ್ಪತ್ತಯ್ದು ವರುಶಗಳ ಹಿಂದೆಯೇ ನಮ್ಮ ಉದ್ಯೋಗಗಳನ್ನು ಹೇಗೆ ಕಾಪಾಡಬೇಕು ಎಂದು ನಿಮಗೆ, ನೀವೇ ನೇಮಿಸಿದ ಸಮಿತಿಯೊಂದು ಸಲಹೆ ಮಾಡಿತ್ತು. ಅದರ ನೆನಪಿದೆ ತಾನೆ? ಸರೋಜಿನಿ ಮಹಿಶಿ ಸಮಿತಿ ಎಂದು ಅದರ ಹೆಸರು. ಅದರ ಸಲಹೆಗಳನ್ನು ನೀವು ತಡವಿಲ್ಲದೆ ಆಗಲೇ ಜಾರಿಗೆ ತರಬೇಕಾಗಿತ್ತು. ಆದರೆ, ತರಲಿಲ್ಲ. ಅದನ್ನು ಬಿಟ್ಟು, ನಮ್ಮ ಕೆಲಸಗಳನ್ನು ವಲಸಿಗರ ಕಯ್ಗಿಡುವ, ವಲಸಿಗರನ್ನು ಓಲಯ್ಸುವ ನಿಮ್ಮ ಎಂದಿನ ಚಾಳಿಯನ್ನು ತಡೆಯಿಲ್ಲದೆ ನಡೆಸಿಕೊಂಡು ಬಂದಿರಿ! ಅಶ್ಟು ಸಾಲದು ಎಂಬಂತೆ, ಈಗೀಗ, ’ಇಪ್ಪತ್ತಯ್ದು ವರುಶಗಳ ಹಿಂದಿನ ಹಾಗೆ ಇಂದಿನ ಪರಿಸ್ತಿತಿ ಇಲ್ಲ. ಹಾಗಾಗಿ, ಅಂದಿನ ಸಲಹೆಗಳನ್ನು ಇಂದು ಜಾರಿಗೆ ತರಲು ಬರುವುದಿಲ್ಲ’ ಎಂದು ಹೇಳುತ್ತಿದ್ದೀರಿ. ’ಕಳ್ಳನಿಗೊಂದು ಪಿಳ್ಳೆ ನೆವ’ ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದೀರಿ. ನಮ್ಮ ಜಾಣ್ಮೆಯ ಮಟ್ಟವನ್ನೇ ಅಣಕಿಸುತ್ತಿದ್ದೀರಿ. ನಮ್ಮ ತಾಳ್ಮೆಯನ್ನು ಕೆಣಕುತ್ತಿದ್ದೀರಿ. ಇಶ್ಟು ವರುಶ ನಮಗೆ ಗಾಯ ಮಾಡಿದ್ದಲ್ಲದೆ, ಈಗ ಗಾಯದ ಮೇಲೆ ಬರೆಯನ್ನೂ ಎಳೆಯಲು ಹೊರಟಿದ್ದೀರಿ.
      ನಮ್ಮ ಮುಂದಾಳುಗಳಾದ ನೀವು ಅಯ್‍ವತ್ತು ವರುಶಗಳ ಹಿಂದೆ ದೇಶದ ಒಗ್ಗಟ್ಟಿನ ಹೆಸರಿನಲ್ಲಿ ನಮ್ಮ ಮೇಲೆ ತಪ್ಪು ಬಾಶಾನೀತಿಯನ್ನು ಹೊರಿಸಿದಿರಿ. ’ಇಂತಹ ಕನ್ನಡಗುಲಿ ಬಾಶಾನೀತಿ ಬೇಡ’ ಎಂದ ಕುವೆಂಪು ಅಂತಹ ಮಹನೀಯರ ಎಚ್ಚರಿಕೆಗೆ ಜಾಣಕಿವುಡು ನಟಿಸಿದಿರಿ. ತ್ರಿಬಾಶಾ ಸೂತ್ರ ಎಂಬ ಉರುಳಿಗೆ ನಮ್ಮ ಕೊರಳನ್ನು ನೂಕಿದಿರಿ. ಹಿಂದೀ ಮಾರಿಗೆ ಕನ್ನಡದ ಕಂದಮ್ಮಗಳನ್ನು ಬಲಿಕೊಟ್ಟಿರಿ. ಅದರ ಪರಿಣಾಮ ಇಂದು ಏನಾಗಿದೆ ನೋಡಿ. ಜನಸಂಖ್ಯೆ ಮಿತಿ ಮೀರಿದ ಉತ್ತರದ ಹಿಂದೀ ನಾಡುಗಳಿಂದ ನಮ್ಮ ನಾಡಿಗೆ ವಲಸಿಗರ ಹೊಳೆಯೇ ಹರಿದು ಬರುತ್ತಿದೆ. ಲಕ್ಶಲಕ್ಶ ಹಿಂದೀಯರಿಗೆ ನಮ್ಮ ನಾಡಿನಲ್ಲಿ ಬಂದು ನೆಲೆಸುವುದೂ ನಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುವುದೂ ನಮ್ಮ ಬಾಯಲ್ಲೇ ಹಿಂದೀ ಆಡಿಸುವುದೂ ನೀರು ಕುಡಿದಷ್ಟು ಸರಾಗವಾಗಿದೆ. ಇದರಿಂದಾಗಿ, ನಾವು ಮತ್ತು ನಮ್ಮ ನಡೆನುಡಿಗಳು ನಮ್ಮ ನೆಲದಲ್ಲೇ ಮೂಲೆಗುಂಪಾಗುವ ಸ್ತಿತಿ ಬಂದೊದಗಿದೆ! ನಮ್ಮ ನಾಡಿನಲ್ಲೇ ನಾವು ಅಲ್ಪಸಂಕ್ಯಾತರೂ, ಎರಡನೇ ದರ‍್ಜೆಯ ಜನರೂ ಆಗುವ ಹೊತ್ತು ಹತ್ತಿರ ಬರುತ್ತಿದೆ. ಇಶ್ಟೆಲ್ಲಾ ಕೆಡುಕು ನಡೆಯುತ್ತಿದ್ದರೂ ಮುಂದಾಳುಗಳು ನೀವು ಏನು ಮಾಡುತ್ತಿದ್ದೀರಿ? ನಮಗಾಗಿ ಇರಬೇಕಾದ ಏರ‍್ಪಾಡುಗಳನ್ನು ವಲಸಿಗರಿಗೆ ಹೊಂದುವಂತೆ ಬದಲಾಯಿಸುತ್ತಿದ್ದೀರಿ. ನಮ್ಮ ಹಿರಿಯರು ನಮಗಾಗಿ ಕೂಡಿಟ್ಟ ನಮ್ಮ ನಾಡಿನ ಎಲ್ಲ ಸವಲತ್ತುಗಳನ್ನೂ ಸಂಪನ್ಮೂಲಗಳನ್ನೂ ವಲಸಿಗರ ಪಾಲು ಮಾಡುತ್ತಿದ್ದೀರಿ.
      ನಮ್ಮ ನೆಚ್ಚಿನ(?) ಮುಂದಾಳುಗಳೆ, ಇನ್ನಾದರೂ ನಿಮ್ಮನ್ನು ನಂಬಿ ಆರಿಸಿ ಕಳಿಸಿದ ಹುಲು ಕನ್ನಡಿಗರ ಬಗ್ಗೆ ಕೊಂಚ ಯೋಚಿಸಿರಿ. ಸುಳ್ಳು ದೇಶಯ್‍ಕ್ಯತೆಯ ಪೊಳ್ಳು ನೀತಿಗಳನ್ನು ಅತ್ತ ತಳ್ಳಿ. ಕನ್ನಡತನವನ್ನು ಕಲಿತುಕೊಳ್ಳಿ. ಕನ್ನಡತನವನ್ನು ಕಲಿಸಿ. ಕನ್ನಡಿಗರಲ್ಲಿರುವ ತಮ್ಮತನದ ಅರಿವಿನ ಕೊರತೆಯನ್ನು ನೀಗಿಸಿ. ಕನ್ನಡಿಗರಿಗೆ ಅವರ ನಿಜವಾದ ಹಿನ್ನೆಲೆಯ ಬಗ್ಗೆ ಅರಿವು ಕಾಣಿಸಿ. ಕನ್ನಡ ನಡೆನುಡಿಗಳನ್ನು ಕಾಪಾಡಿ. ಕನ್ನಡಿಗರ ಬದುಕಿನ ನಾಳೆಗಳನ್ನು ಬೆಳಗಿಸಿ. ಕನ್ನಡಿಗರು ಹೊನ್ನಿನ ಬಾಳನ್ನು ಕಟ್ಟಿಕೊಳ್ಳುವುದಕ್ಕೆ ನೆರವಾಗಿ.
ಇಂತೀ ನಿಮ್ಮನ್ನು ಮತ್ತೆ ಮತ್ತೆ ನಂಬಿ ಆರಿಸಿ ಕಳಿಸುವ,
ಬಡಪಾಯಿ ಕನ್ನಡಿಗರು
(ಬರೆದವರು: ಎಚ್.ಎಸ್.ರಾಜ್ ಮತ್ತು ಪ್ರಶಾಂತ ಸೊರಟೂರ)

ಗುರುವಾರ, ಫೆಬ್ರವರಿ 21, 2013

ಹಿಂದೀ ಹುಚ್ಚು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಇತ್ತೀಚೆಗೆ ಬಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊತ್ತಮೊದಲ ನಾಳು, ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕೆಲ ಗಣ್ಯರ ಮತ್ತು ವೇದಿಕೆಗೆ ಕಾವಲಾಗಿದ್ದ ಪೋಲೀಸರ ನಡುವೆ ಗದ್ದಲ ನಡೆಯಿತು ಎಂಬುದನ್ನು ನೀವು ಕೇಳಿರಬಹುದು. ಬರೀ ಗದ್ದಲವಲ್ಲದೆ, ಹಗುರಾಗಿ ನೂಕಾಟ ತಳ್ಳಾಟವೂ ನಡೆಯಿತು ಎಂದು ಮಾದ್ಯಮಗಳು ವರದಿ ಮಾಡಿದ್ದವು.
      ಮುಕ್ಯಮಂತ್ರಿಗಳು ವೇದಿಕೆಗೆ ಬರುವವರೆಗೆ ಗಣ್ಯರನ್ನಾಗಲೀ ಯಾರನ್ನೇ ಆಗಲಿ, ವೇದಿಕೆಯ ಮೇಲೆ ಹೋಗಲು ಬಿಡುವುದಿಲ್ಲ ಎಂದು ಅಲ್ಲಿ ಕಾರ‍್ಯ ನಿರ‍್ವಹಿಸುತ್ತಿದ್ದ ಅಯ್.ಪೀ.ಎಸ್. ಅದಿಕಾರಿ ಹಟ ಹಿಡಿದಿದ್ದರಂತೆ. ಅವರ ಹಟಮಾರಿತನಕ್ಕೆ ಮಾಜಿ ಕಸಾಪ ಅದ್ಯಕ್ಶ ನೆಲ್ಲೂರು ಪ್ರಸಾದರು ಕೊಂಚ ಕಟುವಾಗಿ ವಿರೋದ ತೋರಿಸಿದಾಗ, ’ಇವನನ್ನ ಕೂಡಲೇ ಅರೆಸ್ಟ್ ಮಾಡು’ ಎಂದು ಅದಿಕಾರಿ ಪಕ್ಕದಲ್ಲಿದ್ದ ಪೇದೆಗಳಿಗೆ ಆಜ್ನೆ ಮಾಡಿದರಂತೆ. ಅದರಿಂದ ಶುರುವಾಯಿತಂತೆ ನೂಕಾಟ ತಳ್ಳಾಟ. ಇಲ್ಲಿ ತಮಾಶೆ ಏನೆಂದರೆ, ಆ ಅಯ್.ಪೀ.ಎಸ್. ಅದಿಕಾರಿ, ’ಇವನನ್ನ ಕೂಡಲೇ ಅರೆಸ್ಟ್ ಮಾಡು’ ಎಂದು ಕೂಗಿದ್ದು ಹಿಂದೀ ಬಾಶೆಯಲ್ಲಿ. ಬಹುಶಹ ಅವರಿಗೆ ಕನ್ನಡ ಇನ್ನೂ ಬರುತ್ತಿಲ್ಲವೇನೋ, ಇಲ್ಲ,  ಅವರ ತಾಯ್ನುಡಿ ಹಿಂದೀ ಇರಬಹುದೇನೋ. ಆವೇಶದ ಬರದಲ್ಲಿ ಅವರ ಬಾಯಿಂದ ತಾಯ್ನುಡಿಯಲ್ಲಿ ಆಜ್ನೆ ಹೊರಟಿರಬಹುದೇನೋ. ಆದರೂ, ಕನ್ನಡ ನುಡಿ ಜಾತ್ರೆಯ ಮುಕ್ಯ ವೇದಿಕೆಯ ಬಳಿ ಹಿಂದಿಯಲ್ಲಿ ಕೂಗಬಾರದೆಂಬ ಪರಿಜ್ನಾನ ಅವರಿಗೆ ಇರಬೇಕಾಗಿತ್ತು. ಕರ‍್ನಾಟಕದ ಬದಲು ತಮಿಳುನಾಡಿನಲ್ಲಿ ಇಂತಹ ಒಂದು ಕಾರ‍್ಯಕ್ರಮ ನಡೆದಿದ್ದರೆ, ಅದಿಕಾರಿಗಳಿಗೆ, ಅವರೆಶ್ಟೇ ಹೊಸಬರಾಗಿರಲಿ,  ಒಬ್ಬ ತಮಿಳು ಗಣ್ಯನನ್ನು ಅರೆಸ್ಟ್ ಮಾಡು ಎಂದು ಹಿಂದೀಯಲ್ಲಿ ಕೂಗುವ ಎದೆಗಾರಿಕೆ ಬರುತ್ತಿತ್ತೆ? ಬರುತ್ತಿರಲಿಲ್ಲ. ಕರ‍್ನಾಟಕದಲ್ಲಿ ಮಾತ್ರ ಯಾರಿಗೇ ಆದರೂ ಯಾವ ಸಂದರ‍್ಬದಲ್ಲಾದರೂ ಆ ಎದೆಗಾರಿಕೆ ಸುಲಬವಾಗಿ ಬರುತ್ತದೆ. ಅಂದ ಹಾಗೆ, ಗಲಾಟೆಗೆ ಕಾರಣ ’ಅರೆಸ್ಟ್ ಮಾಡು’ ಎಂದದ್ದೋ, ಇಲ್ಲ, ಅದನ್ನು ಹಿಂದೀಯಲ್ಲಿ ಹೇಳಿದ್ದೋ ಎಂಬುದು ಇನ್ನೂ ತಿಳಿದಿಲ್ಲ.
      ತಮಿಳರು, ನಾವು, ಇಬ್ಬರೂ ಒಟ್ಟಾರೆ ದ್ರಾವಿಡರೇ. ಆದರೂ, ಹಿಂದಿಯ ಬಗೆಗಿನ ನಿಲುವಿನಲ್ಲಿ ಅವರಿಗೂ ನಮಗೂ ಎಶ್ಟೊಂದು ಬೇರ‍್ಮೆ! ಇತ್ತೀಚೆಗೆ, ಮದುರಯ್ ಜಿಲ್ಲೆಯ ಆಡಳಿತಾದಿಕಾರಿ, ’ಮದುರಯ್‍ನ ಹೆಸರಾಂತ ಗುಡಿಗಳನ್ನು ನೋಡಲು ಬಡಗ ಬಾರತದ ಬಹುಮಂದಿ ಬರುತ್ತಿರುತ್ತಾರೆ. ಅವರ ಅನುಕೂಲಕ್ಕಾಗಿ ಇನ್ನು ಮುಂದೆ ಹಿಂದೀಯಲ್ಲೂ ಪಲಕಗಳನ್ನು ಹಾಕೋಣ’ ಎಂದು ಕಾರಣ ಕೊಟ್ಟು, ಹಾಗೇ ಮಾಡುವುದಾಗಿ ಆದೇಶ ಹೊರಡಿಸಿದರು. ಕೂಡಲೇ ಅದಕ್ಕೆ ಮದುರೆಯ ತಮಿಳರಿಂದ ಎಂತಹ ಕಟ್ಟೆದಿರು ವ್ಯಕ್ತವಾಯಿತೆಂದರೆ, ಜಿಲ್ಲಾದಿಕಾರಿ ತಮ್ಮ ಆದೇಶವನ್ನು ತಕ್ಶಣವೇ ರದ್ದು ಮಾಡಬೇಕಾಯಿತು (ಈ ಸುದ್ದಿ ಫೆಬ್ರವರಿ ೭, ೨೦೧೩ರ ಪ್ರಜಾವಾಣಿಯಲ್ಲಿ ವರದಿಯಾಗಿದೆ). ತಮಿಳರ ಈ ನಡೆ, ನಮ್ಮ ಕಣ್ಣಿನಲ್ಲಿ, ಹಿಂದೀ ದ್ವೇಶ ಎನಿಸಬಹುದು. ಆದರೆ, ಹಿಂದೀಯಂತಹ ವಸಾಹತುಶಾಹಿ ಬಾಶೆಯನ್ನು ತಡೆಯಲು ತಮಿಳರು ಪಾಲಿಸುವ ನೀತಿಯೇ ಸರಿಯಾದ ನೀತಿ.
      ನಾವೂ ಹಿಂದೊಮ್ಮೆ ಹಿಂದಿಗೆ ಕಟ್ಟೆದಿರನ್ನು ತೋರಿಸಿದ್ದೆವು. ೧೯೬೮ರಲ್ಲಿ ಕೇಂದ್ರ ಸರ‍್ಕಾರ ಹಿಂದೀಯನ್ನು ರಾಶ್ಟ್ರಬಾಶೆಯನ್ನಾಗಿ ಮಾಡಲು ಹೊರಟಾಗ, ತಮಿಳರು ಮತ್ತು ಬಂಗಾಳಿಗಳ ಒಡನೆ ನಾವೂ ’ಆಗದು’ ಎಂದು ಕೂಗಿದ್ದೆವು. ಅಂದಿನ ವಿರೋದ ಇಂದು ಎಲ್ಲಿ ಹೋಯಿತೋ ತಿಳಿಯುವುದಿಲ್ಲ. ಬೆಳಗಾವಿಯಲ್ಲಿ ನಡೆದ ಕನ್ನಡ ವಿಶ್ವ ಸಮ್ಮೇಳನದಲ್ಲಿ ಅಯ್‍ಶ್ವರ‍್ಯಾ ರಯ್ ಹಿಂದೀಯಲ್ಲಿ ಬಾಶಣ ಬಿಗಿದಾಗ ನಮ್ಮಿಂದ ಆಕ್ಶೇಪಣೆ ಏಳಲಿಲ್ಲ. ಬಡಗ ಬಾರತದ ದುರೀಣರು ಬಂದು ನಮ್ಮೆದುರು ’ಕರ‍್ನಾಟಕದ ಬಾಶೆಯೇ ಹಿಂದಿ’ ಎನ್ನುವ ಹಾಗೆ ಹಿಂದೀಯಲ್ಲಿ ಬಾಶಣಗಳನ್ನು ಕಿರುಚುವಾಗ ನಾವು ತುಟಿಪಿಟಕ್ಕೆನ್ನುವುದಿಲ್ಲ. ಏನಾಯಿತು ನಮಗೆ? ತ್ರಿಬಾಶಾ ಸೂತ್ರಕ್ಕೆ ನಮ್ಮನ್ನು ನಾವೇ ಒಳಪಡಿಸಿಕೊಂಡದ್ದರ ಪರಿಣಾಮವೇ ಇದು?
      ಹಿಂದಿಯ ಮಟ್ಟಿಗೆ ವಿರೋದ ಹೋಗಿರುವುದಶ್ಟೇ ಅಲ್ಲ, ವಿರೋದದ ಬದಲು ಅಪ್ಪಟ ಉತ್ಸಾಹ ನಮ್ಮ ಮಂದಿಗೆ ಬಂದಿರುವಂತೆ ಕಾಣಿಸುತ್ತದೆ. ಎಶ್ಟೋ ಕಡೆ ನಾವೇ ಮೇಲೆ ಬಿದ್ದು ಹಿಂದೀ ಮಾತಾಡುತ್ತೇವೆ. ಗೇಟನ್ನು ಕಾಯುವ ಸೆಂಟ್ರೀಗಳಿಗೆ, ಲಿಫ್ಟುಗಳನ್ನು ನಡೆಸುವವರಿಗೆ ನಾವಾಗಿ ನಾವು ಹಿಂದಿಯಲ್ಲಿ ಮಾತಾಡಿಸುತ್ತೇವೆ. ಮಾಲುಗಳಲ್ಲಿ ಹಿಂದೀ ಗ್ರಾಹಕರಿಗೆ ಹಿಂದೀಯಲ್ಲೇ ಸೇವೆ ನೀಡುತ್ತೇವೆ. ಕನ್ನಡ ಸಿನಿಮಾಗಳಿಗೆ ಹಿಂದಿಯಲ್ಲಿ ಹೆಸರುಗಳನ್ನು ಇಡುತ್ತೇವೆ. ಕನ್ನಡ ಟೀವೀ ಕಾಲುವೆಗಳಲ್ಲಿ ಎಶ್ಟೋ ಬಾರಿ ಹಿಂದೀ  ಹಾಡುಗಳ ಕಾರ‍್ಯಕ್ರಮಗಳನ್ನು ನಡೆಸುತ್ತೇವೆ. ರೇಡಿಯೋದಲ್ಲೂ ಕನ್ನಡ ಮತ್ತು ಹಿಂದೀ ಹಾಡುಗಳನ್ನು ಬೆರೆಸಿ ಬಿತ್ತರ ಮಾಡುತ್ತೇವೆ. ಒಟ್ಟಿನಲ್ಲಿ ಹಿಂದಿಗೆ ಮಣೆಹಾಕಿ ಕೂರಿಸಿದ್ದೇವೆ. ಹಿಂದಿ ತಳವೂರಿದರೆ ಕನ್ನಡಕ್ಕೆ ಎಡೆ ಇರುವುದಿಲ್ಲ ಎನ್ನುವ ಅಂಜಿಕೆ ನಮಗಿದ್ದಂತೆ ಕಾಣುವುದಿಲ್ಲ.
      ಇಶ್ಟೆಲ್ಲಾ ನಿರಾಶಾವಾದದ ಕತ್ತಲೆಯಲ್ಲಿ ಒಂದು ಆಶಾವಾದದ ಬೆಳಕು ಈ ನಡುವೆ ಕಾಣಿಸಿಕೊಂಡಿದೆ. ಬನವಾಸಿ ಬಳಗ, ಕನ್ನಡ ಮತ್ತು ಇತರ ಎಡೆನುಡಿಗಳಿಗೆ ಹಿಂದಿಯಶ್ಟೇ ಮಾನ್ಯತೆ ದೊರಕಬೇಕೆಂದೂ, ಅದಕ್ಕೆ ತಕ್ಕಂತೆ ಸಂವಿದಾನದಲ್ಲಿ ತಿದ್ದುಪಡಿ ಆಗಬೇಕೆಂದೂ, ರಾಜ್ಯಪಾಲರ ಮೂಲಕ ಕೇಂದ್ರ ಸರ‍್ಕಾರವನ್ನು ಒತ್ತಾಯಿಸಲು ಪ್ರಯತ್ನ ನಡೆಸಿದೆ. ಪ್ರಯತ್ನಕ್ಕೆ ಒತ್ತಾಸೆಯಾಗಿ ಸಾವಿರಾರು ಸಹಿಗಳನ್ನು ಕಲೆಹಾಕಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಶತ್ತಿನ ಬೆಂಬಲವನ್ನು ಪಡೆದುಕೊಳ್ಳುವುದರಲ್ಲೂ ಯಶಸ್ವಿಯಾಗಿದೆ. ’ಅರೆಸ್ಟ್ ಮಾಡು’ ಎಂದು ಹಿಂದಿಯಲ್ಲಿ ಕೂಗು ಬಂದ ಬಿಜಾಪುರದ ಸಮ್ಮೇಳನದಲ್ಲೇ ’ಕನ್ನಡಕ್ಕೆ ಹಿಂದಿಯ ಸ್ತಾನಮಾನಗಳನ್ನು ಕೇಂದ್ರ ಸರ‍್ಕಾರ ನೀಡಬೇಕು’ ಎಂಬ ನಿರ‍್ಣಯವನ್ನು ಪ್ರಕಟಿಸುವಂತೆ ಮಾಡುವಶ್ಟು ಪ್ರಬಾವ ಬೀರಿದೆ. ಬನವಾಸಿ ಬಳಗದ ಈ ಪ್ರಯತ್ನದ ಸುದ್ದಿ ಹರಡುತ್ತದೆ ಎಂದು ಹಾರಯ್ಸೋಣ. ಇನ್ನಾದರೂ ಕನ್ನಡಿಗರು, ’ಕನ್ನಡನಾಡಿನಲ್ಲಿ ಕನ್ನಡಕ್ಕೆ ಎಡೆ, ಹಿಂದಿಗಲ್ಲ’ ಎಂಬ ನಿಲುವನ್ನು ತಾಳುತ್ತಾರೆ ಎಂದು ನಂಬೋಣ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ಹಾಗೂ ಅದರಿಂದ ಕನ್ನಡಕ್ಕೆ ಆಗುವ ಕೆಡುಕಿನ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.

ಸೋಮವಾರ, ಫೆಬ್ರವರಿ 11, 2013

ಬಾಶಾಂದತೆ ಬೇಡ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಹೇಸಿಗೆ ಬರಿಸುವ ಸುದ್ದಿಗಳಿಗೆ ಏನೂ ಕೊರತೆ ಇಲ್ಲ ಈ ದಿನಗಳಲ್ಲಿ. ಇತ್ತೀಚೆಗೆ ಟೀವೀಯಲ್ಲಿ ನೋಡಿದ ಒಂದು ಸುದ್ದಿ, ಬಾಶೆಯ ಹೆಸರಿನಲ್ಲಿ ನಡೆಯುವ ಕೇಡುಗತನದ ಕಟ್ಟೆದುರಿಯಾದ ನನ್ನಲ್ಲಿ ಅತೀವ ಕಳವಳ ಉಂಟುಮಾಡಿತು.
      ಸುಮಾರು ಹತ್ತು ವರ‍್ಶದ ಹುಡುಗನೊಬ್ಬನ ಬೆಂದು ಹೋಗಿದ್ದ ಎರಡೂ ಮುಂಗಯ್ಗಳನ್ನು ಮತ್ತೆ ಮತ್ತೆ ಟೀವೀ ತೆರೆಯ ಮೇಲೆ ತೋರಿಸುತ್ತಿದ್ದರು. ಹುಡುಗನ ಹೆಸರು ಮಹಮದ್ ಜಾವೆದ್. ಅವನ ಕಯ್ಗಳನ್ನು ಹಾಗೆ ಬೇಯಿಸಿದವನು ದಾದಾ ಪೀರ್ ಎಂಬ ಒಬ್ಬ ಮುಸ್ಲಿಮ್ ದರ‍್ಮಗುರು. ಈ ಅಮಾನವೀಯ ಆಗುಹ ನಡೆದದ್ದು ಆ ಹುಡುಗ ತಂಗಿಕೊಂಡು ಓದುತ್ತಿದ್ದ ಚಿಕ್ಕಮಗಳೂರಿನ ಒಂದು ಮುಸ್ಲಿಮ್ ವಸತಿ ಶಾಲೆಯಲ್ಲಿ. ಕುದಿವ ನೀರಿಂದ ಆ ಹುಡುಗನ ಕಯ್ಯನ್ನು ಆ ದರ‍್ಮಗುರು ಸುಟ್ಟದ್ದು ಯಾಕೆ ಗೊತ್ತೆ? ಆ ಹುಡುಗನ ಕುರಾನ್ ಕಲಿಕೆ ಆ ದರ‍್ಮಗುರು ಎಣಿಸಿದ ಹಾಗೆ ಸಾಗುತ್ತಿರಲಿಲ್ಲ ಎಂಬ ಕಾರಣಕ್ಕಾಗಿ!
      ಹುಡುಗನನ್ನೂ ಹುಡುಗನ ತಂದೆಯನ್ನೂ ವರದಿಗಾರರು ಮಾತಾಡಿಸುತ್ತಿದ್ದರು. ದರ‍್ಮಗುರು ವರದಿಗಾರರಿಂದ ತಲೆಮರೆಸಿಕೊಂಡಿದ್ದ. ವಿಶಯವನ್ನು ವರದಿಗಾರರು ಕೆದಕಿ ನೋಡಿದಾಗ ತಿಳಿದು ಬಂದದ್ದು ಇದು - ಅರಬ್ಬೀ ಬಾಶೆಯ ಅಡಚಣೆ ಆ ಹುಡುಗನಿಗೆ ಕುರಾನ್ ಕಲಿಯುವುದನ್ನು ಕಶ್ಟ ಮಾಡಿತ್ತು.
      ಹುಡುಗ ಮತ್ತು ಆತನ ತಂದೆ ಇಬ್ಬರೂ ಮಾಮೂಲಿ ತೆಂಕಣ ಬಾರತದವರಂತೆ ಕಾಣುತ್ತಿದ್ದರು. ಅವರದ್ದು ದ್ರಾವಿಡ ಮಯ್ಬಣ್ಣ ಮತ್ತು ದ್ರಾವಿಡ ಚಹರೆ. ಇಸ್ಲಾಮನ್ನು ಪಾಲಿಸುವ ದ್ರಾವಿಡರು ಎಂದು ಅವರನ್ನು ಯಾರು ಬೇಕಾದರೂ ಗುರುತಿಸಬಹುದಾಗಿತ್ತು. ಹಾಗಿತ್ತು ಅವರ ಮಯ್ಪರಿ.
      ಆ ಬಡಪಾಯಿ ಹುಡುಗನನ್ನು ನೋಡಿ, ’ಎತ್ತಣ ದ್ರಾವಿಡ ಹುಡುಗ, ಎತ್ತಣ ಅರಬ್ಬೀ ಬಾಶೆ?’ ಎಂದುಕೊಂಡೆ ನಾನು. ದ್ರಾವಿಡ ಹುಡುಗನೊಬ್ಬನಿಗೆ ಅರಬ್ಬೀ ಬಾಶೆ ಕೊಂಚ ತೊಡಕೆನಿಸಿದರೆ, ಅದೇನು ಮಹಾ ತಪ್ಪು ಸ್ವಾಮಿ? ಅಶ್ಟಕ್ಕೂ, ದರ‍್ಮದಲ್ಲಿ ಯಾವುದು ಮುಕ್ಯ? ಅದರ ತಿರುಳೋ, ಇಲ್ಲ, ಅದನ್ನು ಬರೆದಿಟ್ಟಿರುವ ಬಾಶೆಯೋ? ತಿರುಳನ್ನು ತೂರಿ ತವುಡನ್ನು ಬಾಚಿಕೊಳ್ಳುವ ಅರಿವುಗೇಡಿತನ ಯಾಕೆ? ಕ್ರಯ್‍ಸ್ತರು ಅವರ ಅರವೋದುಗೆಯನ್ನು ಅವರವರ ಬಾಶೆಗಳಲ್ಲೇ ಓದಿ ಪ್ರಾರ‍್ತನೆ ಸಲ್ಲಿಸುತ್ತಾರೆ. ಅದರಿಂದ ಕ್ರಯ್‍ಸ್ತ ದರ‍್ಮಕ್ಕೇನಾದರೂ ಕುಂದು ಬಂದಿದೆಯೆ? ಸಂಸ್ಕ್ರುತವನ್ನು ಬಿಟ್ಟು ಮಂದಿಯ ಆಡುನುಡಿಗಳಲ್ಲಿ ಬವ್‍ದ್ದ  ಬಿಕ್ಶುಗಳು ತಮ್ಮ ದರ‍್ಮದ ಪ್ರಚಾರ ಮಾಡಿದರು. ಹಾಗೆ ಮಾಡಿದ್ದಕ್ಕೆ ಬವ್‍ದ್ದ ದರ‍್ಮವೇನಾದರೂ ಮುರುಟಿ ಹೋಯಿತೆ? ಇನ್ನು ನಮ್ಮ ನಾಡಿನಲ್ಲೇ, ಶರಣರು ತಿಳಿಗನ್ನಡದಲ್ಲಿ ವಚನಗಳನ್ನು ಹಾಡಿದರು. ಅದರಿಂದೇನಾದರೂ ವೀರಶಯ್ವ ಮತ ಹರಡದೆ ಉಳಿಯಿತೆ?
      ದರ‍್ಮದ ಹೆಸರಿನಲ್ಲಿ, ಸಂಸ್ಕ್ರುತಿಯ ಹೆಸರಿನಲ್ಲಿ, ತಿಳಿಯದ ಬಾಶೆಯನ್ನು ಜನರ ನಡುವೆ ತೂರಿಸುವುದರಲ್ಲಿ ನಾವು ಹಿಂದೂಗಳು ಕೂಡ ಯಾರಿಗೂ ಕಡಿಮೆ ಇಲ್ಲ. ನಮ್ಮ ವಿಶಯದಲ್ಲಿ ಅರಬ್ಬಿಯ ಸ್ತಾನವನ್ನು ಸಂಸ್ಕ್ರುತ ತೆಗೆದುಕೊಳ್ಳುತ್ತದೆ, ಅಶ್ಟೆ.
      ನಮ್ಮ ಪೂಜೆ ಪುನಸ್ಕಾರಗಳು ನಡೆಯುವುದು ಸಂಸ್ಕ್ರುತದಲ್ಲಿ. ಹೋಮ ಹವನಗಳು ನಡೆಯುವುದು ಸಂಸ್ಕ್ರುತದಲ್ಲಿ. ಮದುವೆಯ ವಿದಿವಿದಾನಗಳು ನಡೆಯುವುದು ಸಂಸ್ಕ್ರುತದಲ್ಲಿ. ದಾರ‍್ಮಿಕ ಕಾರ‍್ಯಕ್ರಮಗಳು ಮೊದಲುಗೊಳ್ಳುವುದು ಸಂಸ್ಕ್ರುತದಲ್ಲಿ. ಎಶ್ಟೋ ಶಾಲೆಗಳಲ್ಲಿ ಮಕ್ಕಳು ಮೊದಲು ಪ್ರಾರ‍್ತನೆ ಸಲ್ಲಿಸುವುದು ಸಂಸ್ಕ್ರುತದಲ್ಲಿ. ಎಲ್ಲವೂ ನಮಗೆ ತಿಳಿಯದ ಸಂಸ್ಕ್ರುತದಲ್ಲಿ! ಸಂಸ್ಕ್ರುತವೇ ಯಾಕಾಗಬೇಕು? ಕನ್ನಡ ಯಾಕಾಗಬಾರದು?
      ನಾವು ಕನ್ನಡಿಗರು ದ್ರಾವಿಡರು, ನಮ್ಮ ಕನ್ನಡ ದ್ರಾವಿಡ ಬಾಶೆ, ಸಂಸ್ಕ್ರುತ ಬಡಗದ ಆರ‍್ಯ ಬಾಶೆ, ಕನ್ನಡಕ್ಕೂ ಅದಕ್ಕೂ ನೆತ್ತರ ನಂಟಿಲ್ಲ, ಸಂಸ್ಕ್ರುತ ನಮ್ಮದಲ್ಲ ಎಂದು ಮುಂತಾದ ಕಾರಣಗಳಿಗಾಗಿ ನಾನು ಸಂಸ್ಕ್ರುತದ ಇದಿರಾಗಿ ಮಾತಾಡುತ್ತಿಲ್ಲ. ನಮ್ಮ ಬದುಕಿಗೆ ಮುಕ್ಯವಾದ ವಿದಿವಿದಾನಗಳು ನಮಗೆ ತಿಳಿಯದ ಬಾಶೆಯಲ್ಲಿ ಯಾಕೆ ನಡೆಯಬೇಕು ಎಂಬ ಮೂಲಬೂತ ಕೇಳ್ವಿಯ ನೆಲೆಯಿಂದ ಮಾತಾಡುತ್ತಿದ್ದೇನೆ. ನಮ್ಮ ವಿದಿವಿದಾನಗಳು ನಮಗೆ ತಿಳಿಯುವ ಬಾಶೆಯಲ್ಲಿದ್ದರೆ ಸರಿಯಲ್ಲವೆ ಎಂಬ ಸಹಜ ತರ‍್ಕದ ನೆಲೆಯಿಂದ ಮಾತಾಡುತ್ತಿದ್ದೇನೆ.
     ಹಿಂದೆ, ಕುವೆಂಪು ಅವರು ಮದುವೆಯ ಸರಳ ವಿದಿಗಳನ್ನು ಕನ್ನಡದಲ್ಲೇ ರಚಿಸಿದ್ದರಂತೆ. ಅವರ ಮಾದರಿಯನ್ನು ಅನುಸರಿಸಿ ಹಲವು ಮದುವೆಗಳು ನಡೆದಿದ್ದವಂತೆ (ತೀರ ಇತ್ತೀಚೆಗೂ ಕುವೆಂಪು ವಿದಿಯಲ್ಲಿ ಮದುವೆಗಳು ನಡೆದಿವೆ ಎಂದೂ ಕೇಳಿದ್ದೇನೆ). ಇನ್ನು ನಮ್ಮ ಕಾಲದಲ್ಲಿ ಕೂಡ, ನಗೆಗಯ್ವಿ ಕ್ರಿಶ್ಣೇಗವ್ಡರ ಮಗಳ ಮದುವೆಯನ್ನು ಹಿರೇಮಗಳೂರು ಕಣ್ಣನ್ ಅವರು ಕನ್ನಡದಲ್ಲೇ ನಡೆಸಿಕೊಟ್ಟುದನ್ನು ಟೀವೀಯಲ್ಲಿ ಕಳೆದ ವರ‍್ಶ ನಾವು ನೋಡಿದ್ದೇವೆ. ಹೀಗೆ ಸಂಸ್ಕ್ರುತದ ಬದಲು ಕನ್ನಡದಲ್ಲೇ ನಡೆಸುವ ಶುಬ ಕಾರ‍್ಯಕ್ರಮಗಳು ಆಗಾಗ್ಗೆ ಜರುಗುತ್ತಿರುತ್ತವೆ.
      ಹಾಗಾಗಿ, ಸಂಸ್ಕ್ರುತವಿಲ್ಲದೆ ನಮ್ಮ ದರ‍್ಮ ಮತ್ತು ಸಂಸ್ಕ್ರುತಿ ನಡೆಯುವುದಿಲ್ಲ ಎಂದು ನಾವು ನಂಬಬೇಕಾಗಿಲ್ಲ. ನಮ್ಮ ಕನ್ನಡದಲ್ಲೇ ಅವು ನಡೆಯಬಲ್ಲವು. ಬರಿಯ ಮದುವೆ ಮುಂತಾದವುಗಳೇ ಏಕೆ, ನಮ್ಮ ಪರಮ ಗುರಿ ಮೋಕ್ಶ ಕೂಡ ಕನ್ನಡದ ಮೂಲಕವೇ ದೊರೆಯಬಲ್ಲುದು. ಶತಮಾನಗಳ ಹಿಂದೆಯೇ ಮಹಲಿಂಗ ರಂಗನೆಂಬ ಒಬ್ಬ ಕನ್ನಡದ ಕವಿ ಹೇಳಿದ್ದ - ಸುಲಿದ ಬಾಳೆಯ ಹಣ್ಣಿನಂದದಿ, ಕಳಿದ ಸಿಗುರಿನ ಕಬ್ಬಿನಂದದಿ, ... ಸುಲಬವಾಗಿರ‍್ಪ ಕನ್ನಡದ ನುಡಿಯಲ್ಲಿ ತಿಳಿದು ತನ್ನೊಳು ತನ್ನ ಮೋಕ್ಶವ ಗಳಿಸಿಕೊಂಡರೆ ಸಾಲದೇ, ಸಂಸ್ಕ್ರುತದಲಿನ್ನೇನು?
      ಮಹಲಿಂಗ ರಂಗಾ, ನಿನ್ನ ಮಾತಿಗೆ ನನ್ನ ನೆರೆಯೊಪ್ಪಿಗೆ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಬುಧವಾರ, ಜನವರಿ 30, 2013

ಗೋಕಾಕ್ ಚಳುವಳಿಯ ನೀತಿಪಾಟ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಗೋಕಾಕ್ ಚಳುವಳಿಯ ಹೆಸರು ಯಾರಿಗೆ ಗೊತ್ತಿಲ್ಲ? ’ಇನ್ನೊಂದು ಗೋಕಾಕ್ ಮಾದರಿ ಚಳುವಳಿ ನಡೀಬೇಕು ಕಣ್ರೀ’ ಎಂದು ಹೇಳುವುದು ಈಗ ಒಂದು ವಾಡಿಕೆ ಆಗಿಬಿಟ್ಟಿದೆ. ಅಶ್ಟು ಚೆನ್ನಾಗಿ ಎಲ್ಲರಿಗೂ ಗೊತ್ತಿದೆ ಗೋಕಾಕ್ ಚಳುವಳಿ. ಆದರೆ, ಗೋಕಾಕ್ ಚಳುವಳಿ ನಡೆದದ್ದು ಯಾಕೆ, ಅದರಿಂದ ನಿರ‍್ದಿಶ್ಟವಾಗಿ ಉಂಟಾದದ್ದು ಏನು ಎಂಬುದು ಬಹಳಶ್ಟು ಮಂದಿಗೆ ಗೊತ್ತಿಲ್ಲ.
      ಗೋಕಾಕ್ ಚಳುವಳಿ ನಡೆದು ಈಗ ಮೂವತ್ತು ವರ‍್ಶಗಳೇ ಕಳೆದಿವೆ. ಆ ದಿನಗಳಲ್ಲಿ ಕನ್ನಡಕ್ಕೆ ಅಪಾಯಕಾರಿ ಕುತ್ತೊಂದು ತಗುಲಿಕೊಂಡಿತ್ತು. ಗೋಕಾಕ್ ಚಳುವಳಿ ಆ ಕುತ್ತನ್ನು ಯಶಸ್ವಿಯಾಗಿ ತೊಡೆದು ಹಾಕಿತು. ಕುತ್ತನ್ನೇನೋ ತೊಡೆದು ಹಾಕಿತು. ಆದರೆ, ಆ ಕುತ್ತು ತಗುಲಿಕೊಳ್ಳುವುದಕ್ಕೆ ಕಾರಣವಾಗಿದ್ದ ಮೂಲ ಶಕ್ತಿಗಳನ್ನು ಅದು ತೊಡೆದು ಹಾಕಲಿಲ್ಲ. ಹಾಗಾಗಿ, ಆ ಶಕ್ತಿಗಳು ಈಗಲೂ ಜೀವಂತವಾಗೇ ಉಳಿದುಕೊಂಡಿವೆ. ಕೆಲ ಕಾಲ ಅಡಗಿ ಕುಳಿತಿದ್ದ ಅವು ಇತ್ತೀಚಿನ ವರ‍್ಶಗಳಲ್ಲಿ ಮತ್ತೆ ತಲೆ ಎತ್ತಿವೆ. ಆದ್ದರಿಂದ, ಗೋಕಾಕ್ ಚಳುವಳಿ ’ಯಾಕೆ’ ನಡೆಯಿತು ಎಂಬುದನ್ನು ನೆನಪಿಸಿಕೊಳ್ಳುವುದು ಇಂದು ಅಂದಿನಂತೆ ಪ್ರಸ್ತುತ.
      ಗೋಕಾಕ್ ಚಳುವಳಿಗೆ ಮುಂಚೆ ಕರ‍್ನಾಟಕದ ಬಹುಮಟ್ಟಿನ ವಿದ್ಯಾರ‍್ತಿಗಳು ಎಂಟರಿಂದ ಹನ್ನೆರಡನೆಯ ತರಗತಿಯವರೆಗೆ ’ಪ್ರತಮ ಬಾಶೆ’ ಎಂದು ಒಂದು ಬಾಶೆಯನ್ನು ಕಡ್ಡಾಯವಾಗಿ ಕಲಿಯಬೇಕಾಗಿತ್ತು. ಆ ಬಾಶೆ ಕನ್ನಡವೇ ಆಗಬೇಕಾಗಿರಲಿಲ್ಲ. ಕನ್ನಡದ ಬದಲು ಸಂಸ್ಕ್ರುತವನ್ನು ತೆಗೆದುಕೊಳ್ಳಬಹುದಾಗಿತ್ತು. ವಿಚಿತ್ರವೆಂಬಂತೆ ಕಾಲಕ್ರಮೇಣ ವಿದ್ಯಾರ‍್ತಿಗಳಿಗೆ ಸಂಸ್ಕ್ರುತವೇ ಹೆಚ್ಚು ಹೆಚ್ಚು ಪ್ರಿಯವಾಗ ತೊಡಗಿತು. ಕನ್ನಡದ ನೋಂದಣಿ ಸೊರಗತೊಡಗಿತು. ಇದೇ ಗೋಕಾಕ್ ಚಳುವಳಿಗೆ ಕಾರಣವಾದದ್ದು.
      ಒಂದು ತಿಳಿದ ಬಾಶೆ, ಇನ್ನೊಂದು ತಿಳಿದಿರದ ಬಾಶೆ - ಹೀಗೆ ಎರಡು ಬಾಶೆಗಳನ್ನು ಮುಂದಿಟ್ಟರೆ, ಯಾರೇ ಆಗಲಿ, ತಿಳಿದ ಬಾಶೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ಹೊರತು ತಿಳಿಯದ ಬಾಶೆಯನ್ನಲ್ಲ. ಯಾಕೆಂದರೆ, ತಿಳಿಯದ ಬಾಶೆಯನ್ನು ತೆಗೆದುಕೊಂಡರೆ ಓದು ಅನವಶ್ಯಕವಾಗಿ ಕಶ್ಟವಾಗುತ್ತದೆ. ಆದರೂ, ನಮ್ಮ ವಿದ್ಯಾರ‍್ತಿಗಳು ತಿಳಿದ ಕನ್ನಡವನ್ನು ಬಿಟ್ಟು ತಿಳಿಯದ ಸಂಸ್ಕ್ರುತವನ್ನೇ ತೆಗೆದುಕೊಳ್ಳಲು ಶುರುಮಾಡಿದರು, ಯಾಕೆ? ಕಾರಣ ತಿಳಿದುಕೊಂಡರೆ, ಕನ್ನಡದ ವಿರುದ್ದ ಎಂತಹ ಒಂದು ಮುಸುಕಿನ ಮರೆಯ ಸಂಚು ಆ ದಿನಗಳಲ್ಲಿ ನಡೆದಿತ್ತು ಎಂಬುದು ನಮಗೆ ಗೊತ್ತಾಗುತ್ತದೆ.
      ಆಗಿನ ದಿನಗಳಲ್ಲಿ ಮಕ್ಕಳು ಏಳನೇ ತರಗತಿಯವರೆಗೆ ಕನ್ನಡವನ್ನು ಓದಿಕೊಂಡು ಬರುತ್ತಿದ್ದರು. ಹಾಗಾಗಿ, ಎಂಟನೇ ತರಗತಿಯಿಂದ ಹಯ್‍ಸ್ಕೂಲು ಶುರುವಾದಾಗ, ಕನ್ನಡ ವಿಶಯದ ಮಟ್ಟ ಸಹಜವಾಗೇ ಹಯ್‍ಸ್ಕೂಲಿನ ಮಟ್ಟಕ್ಕೆ ಸರಿಹೊಂದುವಂತಿರುತ್ತಿತ್ತು. ಅಂದರೆ, ಕನ್ನಡವನ್ನು ಪ್ರತಮ ಬಾಶೆಯಾಗಿ ತೆಗೆದುಕೊಂಡರೆ, ಅದರಲ್ಲಿ ಉತ್ತೀರ‍್ಣರಾಗುವುದಕ್ಕೆ ವಿದ್ಯಾರ‍್ತಿಗಳು ತಕ್ಕಮಟ್ಟಿಗೆ ಕಶ್ಟಪಡಬೇಕಾಗಿತ್ತು. ಆದರೆ, ಸಂಸ್ಕ್ರುತವನ್ನು ಪ್ರತಮ ಬಾಶೆಯಾಗಿ ತೆಗೆದುಕೊಂಡರೆ,  ಕಶ್ಟಪಡುವ ಅವಶ್ಯಕತೆಯೇ ಇರಲಿಲ್ಲ. ಯಾಕೆಂದರೆ, ಎಂಟನೇ ತರಗತಿಯೇ ಸಂಸ್ಕ್ರುತ ಕಲಿಕೆಯ ಮೊದಲನೇ ವರ‍್ಶವಾದ್ದರಿಂದ, ಅದರ ಕ್ಲಿಶ್ಟತೆ, ಪ್ರಾತಮಿಕ ಶಾಲೆಯಲ್ಲಿ ಕನ್ನಡದ ಕಲಿಕೆಗೆ ಎಶ್ಟು ಕ್ಲಿಶ್ಟತೆ ಇತ್ತೋ ಅದಕ್ಕಿಂತ ಹೆಚ್ಚಿರಲಿಲ್ಲ.
      ಸಂಸ್ಕ್ರುತವನ್ನು ಆಯ್ಕೆ ಮಾಡಿಕೊಂಡರೆ, ಓದಬೇಕಾಗಿದ್ದುದು ತುಂಬಾ ಕಡಿಮೆ. ಪಾಟ ನಡೆಯುತ್ತಿದ್ದುದು ಕನ್ನಡದಲ್ಲೇ. ಪರೀಕ್ಶೆ ನಡೆಯುತ್ತಿದ್ದುದು ಕನ್ನಡದಲ್ಲೇ. ಉತ್ತರಗಳನ್ನು ಬರೆಯುತ್ತಿದ್ದುದು ಕನ್ನಡದಲ್ಲೇ. ಹೆಸರಿಗೆ ಸಂಸ್ಕ್ರುತ, ಆಶ್ಟೆ. ಎಲ್ಲಾ ನಡೆಯುತ್ತಿದ್ದುದು ಕನ್ನಡದಲ್ಲೇ. ಅಲ್ಲೊಂದು ಚೂರು ಸಂಸ್ಕ್ರುತದ ವ್ಯಾಕರಣ, ಇಲ್ಲೊಂದು ಚೂರು ಸಂಸ್ಕ್ರುತದ ತುಂಡು ಸಾಲುಗಳು, ಇಶ್ಟರ ಮೇಲೆ ಒಂದೆರಡು ಸಂಸ್ಕ್ರುತ ಸುಬಾಶಿತಗಳ ಕಂಟಪಾಟ. ಇಶ್ಟೇ, ಎಂಟನೇ ತರಗತಿಯ ಸಂಸ್ಕ್ರುತ ಕಲಿಕೆ!
      ಇನ್ನು ಅಂಕಗಳನ್ನು ಕೊಡುವ ಪರಿಯೋ! ಕನ್ನಡದಲ್ಲಿ ಪುಟಗಟ್ಟಲೆ ಬರೆದರೂ ನಿಮಗೆ ಶೇಕಡ ಅರವತ್ತೋ ಎಪ್ಪತ್ತೋ ಅಂಕಗಳು ಬಂದರೆ ಹೆಚ್ಚೆಚ್ಚು. ಸಂಸ್ಕ್ರುತದಲ್ಲಿ ನೋಡಿದರೆ ಗಣಿತದ ಹಾಗೆ ಅಂಕಗಳ ಕೊಡುತ್ತಿದ್ದರು! ಒಟ್ಟು ನೂರಯ್ವತ್ತು ಅಂಕಗಳಲ್ಲಿ ನೂರಯ್ವತ್ತನ್ನೂ ತೆಗೆದುಕೊಳ್ಳಬಹುದಾಗಿತ್ತು!
      ಹೀಗೆ, ಕನ್ನಡ ತೆಗೆದುಕೊಂಡವರಿಗೆ ಬೆಟ್ಟ ಏರಿದಶ್ಟು ಕಶ್ಟವಾಗಿದ್ದರೆ, ಸಂಸ್ಕ್ರುತ ತೆಗೆದುಕೊಂಡವರಿಗೆ ಮಳಲು ಗುಡ್ಡೆಯ ಮೇಲೆ ಆಡಿದಶ್ಟು ಹಗುರಾಗಿರುತ್ತಿತ್ತು. ವಸ್ತುಸ್ತಿತಿ ಹೀಗಿದ್ದಾಗ ಅದಾವ ಬುದ್ದಿ ಇರುವ ವಿದ್ಯಾರ‍್ತಿ ತಾನೆ ಸಂಸ್ಕ್ರುತವನ್ನು ಆಯ್ಕೆ ಮಾಡಿಕೊಳ್ಳದೆ ಇರುತ್ತಿದ್ದ? ಸಹಜವಾಗೇ, ಸುಲಬದ ದಾರಿ ಹುಡುಕುವ ವಿದ್ಯಾರ‍್ತಿಗಳು ಮತ್ತು ಅವರ ತಾಯಿತಂದೆಯರು ಕನ್ನಡವನ್ನು ಬದಿಗೆ ತಳ್ಳಿ ಸಂಸ್ಕ್ರುತವನ್ನು ಎತ್ತಿಕೊಳ್ಳುತ್ತಿದ್ದರು.
      ಈ ರೀತಿ, ಕನ್ನಡದ ನೆಲದಲ್ಲೇ ಕನ್ನಡಕ್ಕೆ ಬತ್ತಿ ಇಟ್ಟದ್ದು ಯಾವೊಂದು ಜಾತಿಯವರಲ್ಲ, ಯಾವೊಂದು ಪ್ರದೇಶದವರಲ್ಲ. ಹೊರಗಿನವರಂತೂ ಅಲ್ಲವೇ ಅಲ್ಲ. ನಮ್ಮವರಲ್ಲೇ ಸಂಸ್ಕ್ರುತದ ದುರಬಿಮಾನವಿದ್ದ ಕೆಲ ಕನ್ನಡದ್ರೋಹಿ ಕನ್ನಡಿಗರೇ ಈ ನಾಚಿಕೆಗೇಡಿನ ಕೆಲಸ ಮಾಡಿದ್ದು. ಈ ದ್ರೋಹಿಗಳು ತಮ್ಮ ಮಕ್ಕಳೊಂದಿಗೆ ಲಲ್ಲೆಗರೆಯುತ್ತಿದ್ದುದು ಕನ್ನಡದಲ್ಲಿ. ಹೆಂಡತಿಯರೊಡನೆ ಸರಸ ಸಲ್ಲಾಪವಾಡುತ್ತಿದ್ದುದು ಕನ್ನಡದಲ್ಲಿ. ಗೆಳೆಯರೊಟ್ಟಿಗೆ ಹರಟೆ ಕೊಚ್ಚುತ್ತಿದ್ದುದು ಕನ್ನಡದಲ್ಲಿ. ಎಲ್ಲರ ನಡುವೆ ವ್ಯವಹರಿಸುತ್ತಿದ್ದುದು ಕನ್ನಡದಲ್ಲಿ. ಆದರೆ, ಇವರ ನಿಶ್ಟೆ ಇದ್ದದ್ದೆಲ್ಲಾ ಸಂಸ್ಕ್ರುತದಲ್ಲಿ! ಏನಂತೀರಿ ಇಂತಹ ತಾಯಿಗುಲಿಗಳಿಗೆ?
      ಹಾಗೆ ನೋಡಿದರೆ, ಮೊತ್ತಮೊದಲು, ನಾಡ ಮಕ್ಕಳ ನುಡಿ ಕನ್ನಡಕ್ಕೆ ಸತ್ತನುಡಿ ಸಂಸ್ಕ್ರುತವನ್ನು ಸಮನಾಗಿ ನಿಲ್ಲಿಸುವ ಏರ‍್ಪಾಡೇ ನಡೆದಿರಬಾರದಾಗಿತ್ತು. ಆದರೂ ಅದು ನಡೆದು ಹೋಗಿತ್ತು. ಅದೇ ಒಂದು ಅಚ್ಚರಿ. ಅಶ್ಟು ಸಾಲದು ಎನ್ನುವಂತೆ, ಈ ನಾಚಿಕೆಗೇಡಿನ ಏರ‍್ಪಾಡನ್ನು ತೆಗೆದುಹಾಕುವುದಕ್ಕೆ ಹತ್ತು ವರ‍್ಶಗಳಿಗೂ ಹೆಚ್ಚು ಸಮಯ ಬೇಕಾಯಿತು. ಹೇಗಿತ್ತು ನೋಡಿ ಆಗ ಸಂಸ್ಕ್ರುತದ ದುರಬಿಮಾನಿಗಳ ವರ‍್ಚಸ್ಸು!
      ಈಗಲೂ ಕೂಡ ಅವರ ವರ‍್ಚಸ್ಸೇನೂ ಕಡಿಮೆಯಾಗಿಲ್ಲ. ಅವರ ಸಂಕ್ಯೆಯೂ ಕುಗ್ಗಿಲ್ಲ. ಕಳೆದ ನಾಲ್ಕಯ್ದು ವರ‍್ಶಗಳಲ್ಲಿ ಅವರ ಚಟುವಟಿಕೆ ಮತ್ತೆ ಹೆಚ್ಚಾಗಿದೆ. ಕನ್ನಡಿಗರ ತೆರಿಗೆ ಹಣದಲ್ಲಿ ಅವರು ಸಂಸ್ಕ್ರುತ ವಿಶ್ವವಿದ್ಯಾಲಯ ಮಾಡಿಕೊಂಡಿದ್ದಾರೆ. ಕನ್ನಡಿಗರ ತೆರಿಗೆ ಹಣದಲ್ಲಿ ಆಗಾಗ್ಗೆ ಅವರು ಸಂಸ್ಕ್ರುತ ಪುಸ್ತಕ ಮೇಳಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಸಚಿವ ರಾಮದಾಸ್ ಅವರು ದಂತವಯ್‍ದ್ಯಕೀಯ ವಿದ್ಯಾರ‍್ತಿಗಳಿಗೆ ಸಂಸ್ಕ್ರುತ ಕಲಿಕೆಯನ್ನು ಕಡ್ಡಾಯ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸಂಸ್ಕ್ರುತದ ದುರಬಿಮಾನಿಗಳ ಹಾವಳಿ ಬೆಳೆಗೆ ಎರಗುವ ಹಕ್ಕಿಗಳಂತೆ ಮತ್ತೆ ಮತ್ತೆ ಕನ್ನಡಿಗರ ಮೇಲೆ ಎರಗುತ್ತಲೇ ಇರುತ್ತದೆ.
      ಕನ್ನಡಿಗರು ನಾವು ದ್ರಾವಿಡ ಬುಡಕಟ್ಟಿಗೆ ಸೇರಿದವರು. ನಮ್ಮ ನುಡಿ ದ್ರಾವಿಡ ನುಡಿ. ಸಂಸ್ಕ್ರುತಕ್ಕೂ ಕನ್ನಡಕ್ಕೂ ನೆತ್ತರ ನಂಟಿಲ್ಲ. ವಾಸ್ತವ ಇದಾಗಿರುವಾಗ, ನಮಗೆ ಯಾಕೆ ಬೇಕು ಈ ಉತ್ತರದ ಸಂಸ್ಕ್ರುತವನ್ನು ಪೊರೆಯುವ ಹೊರೆ? ನಮ್ಮ ಕನ್ನಡವನ್ನೇ ಕಾಪಾಡಿಕೊಳ್ಳುವುದಕ್ಕೆ ಸಂಪನ್ಮೂಲದ ಕೊರತೆ ಇರುವಾಗ ಪರಕೀಯ ಸಂಸ್ಕ್ರುತಕ್ಕೆ ಯಾಕೆ ನಮ್ಮ ಸಾರ‍್ವಜನಿಕ ಹಣವನ್ನು ಪೋಲು ಮಾಡಬೇಕು? ಆರ‍್ಯ ಬಾಶೆಗಳನ್ನಾಡುವ ಮಂದಿ ನಮ್ಮ ಹತ್ತರಶ್ಟಿದ್ದಾರೆ ಈ ದೇಶದಲ್ಲಿ. ಸಂಸ್ಕ್ರುತದ ಲಾಲನೆ ಪಾಲನೆಯನ್ನು ಬೇಕಿದ್ದರೆ ಅವರು ಮಾಡಿಕೊಳ್ಳಲಿ. ದ್ರಾವಿಡರಾದ ನಮಗೇಕೆ ಸಂಸ್ಕ್ರುತವನ್ನು ಉಳಿಸುವ ಬೆಳೆಸುವ ಮುಟ್ಟಾಳ ಕೆಲಸ? ಹೀಗೆ, ಕನ್ನಡಿಗರು ನಾವು ದ್ರಾವಿಡ ಅರಿವನ್ನು ಮೂಡಿಸಿಕೊಳ್ಳಬೇಕು. ಅದೇ ಸಂಸ್ಕ್ರುತದ ದುರಬಿಮಾನಿಗಳ ಹಾವಳಿಗೆ ತಕ್ಕ ಪರಿಹಾರ.
      ಆದ್ದರಿಂದ, ಗೋಕಾಕ್ ಚಳುವಳಿಯನ್ನು ನಾವು ಹೇಗೆ ಮರೆಯುವುದಿಲ್ಲವೋ, ಹಾಗೆ, ಅದರ ಕಾರಣ ಏನಾಗಿತ್ತು ಎಂಬುದನ್ನೂ ನಾವು ಮರೆಯಬಾರದು. ನಮ್ಮ ಸಹಜ ದ್ರಾವಿಡತನವನ್ನು ನಾವು ಮಯ್ಗೂಡಿಸಿಕೊಳ್ಳದಿದ್ದರೆ, ನಮ್ಮ ನಡುವೆಯೇ ಇದ್ದುಕೊಂಡು ನಮಗೇ ಎರಡು ಬಗೆಯುವ ದ್ರೋಹಿಗಳಿಂದ ನಮ್ಮ ನಡೆನುಡಿಗಳಿಗೆ ಕುತ್ತು ಮೇಲಿಂದ ಮೇಲೆ ಬರುವುದು ತಪ್ಪುವುದಿಲ್ಲ ಎಂಬ ಪಾಟವನ್ನು ನಾವು ಗೋಕಾಕ್ ಚಳುವಳಿಯಿಂದ ಕಲಿತುಕೊಳ್ಳಬೇಕು.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಸೋಮವಾರ, ಜನವರಿ 21, 2013

ಬಿ.ಎಮ್.ಶ್ರೀಯವರ ಲಿಪಿ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ತಿಂಗಳು (ಜನವರಿ), ಅಚ್ಚಗನ್ನಡದ ಹಂಬಿಗೆ ನೀರೆರೆದು ಪೊರೆದ ಕನ್ನಡದ ಕಣ್ವ ಬಿ.ಎಮ್.ಶ್ರೀಯವರು ಹುಟ್ಟಿದ ತಿಂಗಳು. ಶ್ರೀಯವರ ವಿಶಯವಾಗಿ ನನಗೆ ಗೊತ್ತಿರುವುದು ಅವರನ್ನು ಹತ್ತಿರದಿಂದ ಬಲ್ಲವರು ಅವರ ಬಗ್ಗೆ ಬರೆದ ಬರಹಗಳಿಂದ ಮಾತ್ರ. ಶ್ರೀಯವರನ್ನು ಬಲ್ಲವರೆಲ್ಲರೂ ಅವರು ಕನ್ನಡದ ಏಳಿಗೆಗಾಗಿ ಅಕ್ಶರಶಹ ತಮ್ಮ ಒಡಲು ಒಡವೆ ಎರಡನ್ನೂ ಸವೆಸಿದರು ಎಂದು ಹೇಳಿದ್ದಾರೆ. ಅವರ ಕನ್ನಡ ನಾಡುನುಡಿಗಳ ಒಲವಿಗೆ ಎಣೆಯೇ ಇರಲಿಲ್ಲ ಎಂದಿದ್ದಾರೆ. ಶ್ರೀಯವರಿಗೆ ಕನ್ನಡ, ತಮಿಳು, ಸಂಸ್ಕ್ರುತ, ಆಂಗ್ಲ ಹಾಗೂ ಹಳೆಯ ಗ್ರೀಕ್ ಬಾಶೆಗಳಲ್ಲಿ ಪಂಡಿತರನ್ನೇ ಬೆರಗುಗೊಳಿಸುವಶ್ಟು ಪಾಂಡಿತ್ಯವಿತ್ತಂತೆ. ಇಂತಹ ಒಬ್ಬ ಕನ್ನಡದೊಲವಿ, ಇಂತಹ ಹಿರಿಯರಿಗ, ಕಳೆದ ಶತಮಾನದ ಮೂವತ್ತರ ದಶಕದಲ್ಲಿ ಕನ್ನಡದ ಲಿಪಿಯನ್ನು ನೇರ‍್ಪುಗೊಳಿಸಬೇಕು ಎಂಬ ಉದ್ದೇಶದಿಂದ ಬಳಕೆಯಲ್ಲಿದ್ದ ಲಿಪಿಗೆ ಕೆಲವು ಮಾರ‍್ಪಾಡುಗಳನ್ನು ಸೂಚಿಸಿದರು. ಅವರು ಕಾಣ್ಕೆಗೊಂಡ ನೇರ‍್ಪುಗೊಳಿಸಿದ ಲಿಪಿಯ ಬಗ್ಗೆ ಈಗಿನ ತಲೆಮಾರಿನವರಿಗೆ ಅಶ್ಟಾಗಿ ತಿಳಿದಿಲ್ಲ. ತಿಳಿದರೆ ಅದನ್ನು ಮೆಚ್ಚದೆ ಇರರು ಎನಿಸುತ್ತದೆ ನನಗೆ.
      ಶ್ರೀಲಿಪಿಯನ್ನು ನೆನಪಿಸಿಕೊಳ್ಳುವ ಮೊದಲು ಕೊಂಚ ಕನ್ನಡ ಲಿಪಿಯ ಅಂದದ ಬಗ್ಗೆ ಮಾತಾಡೋಣ. ಇತ್ತೀಚೆಗೆ ಟೀವೀ ಕಾರ‍್ಯಕ್ರಮ ಒಂದರಲ್ಲಿ ನಗೆಗಯ್ವಿ ಕ್ರಿಶ್ಣೇಗವ್ಡರು ಸಬೆಯೊಂದನ್ನು ಉದ್ದೇಶಿಸಿ ಮಾತಾಡುತ್ತ ಒಂದು ಸಂಗತಿಯನ್ನು ತಿಳಿಸಿದರು. ಹಿಂದೊಮ್ಮೆ ರಶ್ಯಾದ ಮಾಸ್ಕೋದಲ್ಲಿ ಪ್ರಪಂಚದ ಬೇರೆಬೇರೆ ಲಿಪಿಗಳ ಪ್ರದರ‍್ಶನವೊಂದು ನಡೆದಿತ್ತಂತೆ. ಅದರಲ್ಲಿ ಕನ್ನಡ ಲಿಪಿಯ ಅಂದ ಮಂದಿಗೆ ಎಶ್ಟು ಮೆಚ್ಚಿಗೆ ಆಯಿತೆಂದರೆ, ಅಶ್ಟೆಲ್ಲ ಲಿಪಿಗಳ ಮೇಲಾಟದಲ್ಲಿ ಅದು ಮೂರನೆಯ ಎಡೆಯನ್ನು ಗೆದ್ದುಕೊಂಡಿತಂತೆ! ಕ್ರಿಶ್ಣೇಗವ್ಡರ ಮಾತನ್ನು ಕೇಳಿ ಇಡೀ ಸಬೆ ಅಚ್ಚರಿಯ ಉದ್ಗಾರವನ್ನು ಹೊರಡಿಸಿತು. ನನಗಾದರೋ ಎಳ್ಳಶ್ಟೂ ಅಚ್ಚರಿಯಾಗಲಿಲ್ಲ. ಏಕೆಂದರೆ, ಕನ್ನಡ ಲಿಪಿ ತಾನೇತಾನಾಗಿ ಯಾರಿಗೇ ಆಗಲೀ ಮೆಚ್ಚುಗೆಯಾಗುತ್ತದೆ ಎನ್ನುವುದನ್ನು ನನ್ನ ಅನುಬವದಿಂದಲೇ ನಾನು ಆ ಮೊದಲೇ ತಿಳಿದುಕೊಂಡಿದ್ದೆ.
      ಅಮೆರಿಕದಲ್ಲಿ ಓದುತ್ತಿದ್ದಾಗ ಕನ್ನಡ, ತಮಿಳು, ತೆಲುಗು, ದೇವನಾಗರೀ, ಬಂಗಾಳಿ ಮುಂತಾದ ನಮ್ಮ ದೇಶದ ಲಿಪಿಗಳನ್ನು ನಾನು ಅಮೆರಿಕನ್ನರಿಗಶ್ಟೇ ಅಲ್ಲದೆ ಬೇರೆಬೇರೆ ದೇಶಗಳಿಂದ ಬಂದಿದ್ದ ವಿದ್ಯಾರ‍್ತಿಗಳಿಗೆ ಕೂಡ ತೋರಿಸಿ, ಅವರಿಗೆ ಅವುಗಳಲ್ಲಿ ಯಾವುದು ಇಶ್ಟ ಆಯಿತು ಎಂದು ಕೆಲವು ಸಲ ಕುತೂಹಲಕ್ಕಾಗಿ ಕೇಳಿದ್ದೆ. ಕನ್ನಡ ಸಾಮಾನ್ಯವಾಗಿ ಅದೆಶ್ಟು ಮಂದಿಗೆ ಇಶ್ಟವಾಗುತ್ತಿತ್ತು ಎಂದರೆ, ಅದರಿಂದ ನನಗೆ ಆಗುತ್ತಿದ್ದ ಅಚ್ಚರಿ ಅಶ್ಟಿಶ್ಟಲ್ಲ. ಕನ್ನಡ ನನ್ನ ನುಡಿ ಎಂದು ಅವರಿಗೆ ಗೊತ್ತಿರಲಿಲ್ಲ. ಹಾಗಾಗಿ, ಅವರು ಕನ್ನಡ ಲಿಪಿಯನ್ನು ಮೆಚ್ಚಿದ್ದು ಬರೀ ಸವ್‍ಜನ್ಯಕ್ಕಾಗಿ ಅಗಿರಲಿಲ್ಲ. ಕನ್ನಡ ಲಿಪಿಯ ಸಹಜ ಅಂದವೇ ಅವರ ಮೆಚ್ಚುಗೆಯನ್ನು ಗಳಿಸಿಕೊಂಡಿತ್ತು. ಆದರೆ, ಅವರಲ್ಲಿ ಅನೇಕರು, ಹೆಚ್ಚಾಗಿ ಅಮೆರಿಕನ್ನರು, ಅದರ ಒಂದು ಅಂಶವನ್ನು ಮಾತ್ರ ಅಶ್ಟಾಗಿ ಇಶ್ಟ ಪಟ್ಟಿರಲಿಲ್ಲ. ಒತ್ತಕ್ಶರ ಆ ಅಂಶ. What are those little squiggles along the bottom? ಎಂದು ಒತ್ತುಗಳನ್ನು ತೋರಿಸಿ, ’ಒತ್ತುಗಳಿರದಿದ್ದರೆ ಲಿಪಿ ಇನ್ನೂ ಎಶ್ಟು ಅಂದವಾಗಿರುತ್ತಿತ್ತು’ ಎನ್ನುವ ದಾಟಿಯಲ್ಲಿ ನನ್ನನ್ನು ಅವರು ಕೇಳುತ್ತಿದ್ದರು.
      ಒತ್ತಕ್ಶರಗಳ ಬಗ್ಗೆ ಶ್ರೀಯವರೂ ಹೀಗೇ ಅಬಿಪ್ರಾಯ ಪಟ್ಟಿದ್ದರು. ಯಾರಿಗೇ ಆಗಲೀ, ಶ್ರೀಯವರ ಈ ಅಬಿಪ್ರಾಯ ಒಪ್ಪಿಗೆ ಆಗದೆ ಇರದು. ಒತ್ತುಗಳನ್ನು ತೆಗೆದರೆ, ಕನ್ನಡದ ಸಾಲುಗಳಿಗೆ ಓರಂತೆ ಒಂದೇ ಎತ್ತರ ಬರುತ್ತದೆ. ಅದರ ಪರಿಣಾಮವಾಗಿ ಮೇಲೆ ಕೆಳಗೆ ಕೊಂಕುಗಳಿರದ ಮುತ್ತಿನ ಸರಗಳಂತೆ ಅವು ಕಾಣಿಸತೊಡಗುತ್ತವೆ. ನಂಬಿಕೆ ಬರದಿದ್ದರೆ, ಇನ್ನು ಮುಂದೆ ಕನ್ನಡದ ಸಾಲುಗಳನ್ನು ಓದುವಾಗ, ಒತ್ತಕ್ಶರ ಇರದ ಪದಗಳಿಗಿರುವ ಅಂದ ಒತ್ತಕ್ಶರ ಇರುವ ಪದಗಳಿಗೆ ಇದೆಯೆ ಎಂದು ಹೋಲಿಸಿ ನೋಡಿ.
      ಶ್ರೀಯವರು ಅಂದದ ಬಗ್ಗೆ ಮಾತ್ರ ಹೇಳಿ ನಿಲ್ಲಿಸಿರಲಿಲ್ಲ. ಕಾಗುಣಿತದ ಕಟ್ಟಳೆಗಳಲ್ಲಿರುವ ಏರುಪೇರುಗಳನ್ನು ಸರಿಮಾಡುವುದರ ಬಗ್ಗೆ ಮತ್ತು ಬೇಡದ ಕೆಲ ಅಕ್ಶರಗಳನ್ನು ತೆಗೆದು ಹಾಕುವ ಬಗ್ಗೆಯೂ ಹೇಳಿದ್ದರು. ಅವರು ಬೊಟ್ಟಿಟ್ಟು ತೋರಿಸಿದ ಕನ್ನಡ ಲಿಪಿ ಒಳಗೊಂಡಿರುವ ಕೆಲ ಸರಿಯಲ್ಲದ ಅಂಶಗಳು ಹೀಗಿವೆ.
      ದೀರ‍್ಗವನ್ನು ಸೂಚಿಸುವುದಕ್ಕೆ ’ಅಜ್ಜನ ಕೋಲು’ ಎಂದು ಕರೆಯುವ ಚಿನ್ನೆ ಇದೆ. ದೀರ‍್ಗ ಬೇಕಾದಲ್ಲೆಲ್ಲಾ ಅದನ್ನು ಮಾತ್ರ ಬಳಸಿದರೆ ಆಗುವುದಿಲ್ಲವೆ? ಬೇರೆ ಬೇರೆ ಬಗೆಯಲ್ಲಿ ದೀರ‍್ಗವನ್ನು ಸೂಚಿಸುವುದರ ಅವ್‍ಚಿತ್ಯವಾದರೂ ಏನು? ಆ, ಈ, ಊ, ೠ, ಏ, ಓ, ಕಾ, ಕೀ, ಕೂ, ಕೇ, ಕೋ - ಇವು ಹಾಗೂ ಇಂತಹವು ಕನ್ನಡದಲ್ಲಿ ದೀರ‍್ಗವನ್ನು ತೋರಿಸುವ ಬರಿಗೆಗಳು. ಅ, ಇ, ಉ, ಋ, ಎ, ಒ ಬರಿಗೆಗಳ ಮುಂದೆ ಅಜ್ಜನ ಕೋಲನ್ನು ಹಾಕಿ ದೀರ‍್ಗವನ್ನು ಸೂಚಿಸಿದರೆ ಸಾಕಲ್ಲವೆ? ಆ, ಈ, ಊ, ೠ, ಏ ಮತ್ತು ಓ ಎಂಬ ಹೆಚ್ಚುವರಿ ಪ್ರತ್ಯೇಕ ಬರಿಗೆಗಳಾದರೂ ಯಾಕೆ ಬೇಕು? ಅದೇ ರೀತಿ, ಕೀ, ಕೇ, ಕೋ ಬರೆದಂತೆಯೇ ಕ ಮುಂದೆ ಅಜ್ಜನ ಕೋಲನ್ನು ಹಾಕಿದರೆ ಕಾ ಆಗುವುದಿಲ್ಲವೇ? ಕು ಮುಂದೆ ಅಜ್ಜನ ಕೋಲನ್ನು ಹಾಕಿದರೆ ಕೂ ಆಗುವುದಿಲ್ಲವೇ? ಕಾ, ಕೂ ಎಂದು ಬೇರೆ ಬೇರೆ ರೀತಿಯಲ್ಲಿ ದೀರ‍್ಗವನ್ನು ತೋರಿಸುವ ಅಗತ್ಯವಾದರೂ ಎಲ್ಲಿದೆ?
      ಅಲ್ಪಪ್ರಾಣ ಮತ್ತು ಮಹಾಪ್ರಾಣದ ಬರಿಗೆಗಳ ಪರಸ್ಪರ ರೂಪಗಳಲ್ಲಿ ಇರುವ ಅರ‍್ತವಿಲ್ಲದ ಬೇರ‍್ಮೆಯನ್ನು ತೊಡೆದು ಹಾಕಬೇಕೆಂದೂ ಅವರು ಸಲಹೆ ನೀಡಿದ್ದರು. ಕ ಹೀಗಿದ್ದರೆ ಖ ಹೀಗೆ. ಜ ಹೀಗಿದ್ದರೆ ಝ ಹೀಗೆ! ಅಲ್ಪಪ್ರಾಣದ ಬರಿಗೆಯ ಬುಡದಲ್ಲೋ ತಲೆಯಲ್ಲೋ ಒಂದು ಬೊಟ್ಟು ಇಟ್ಟು ಮಹಾಪ್ರಾಣವನ್ನು ಸೂಚಿಸಿದರೆ ಆಗುವುದಿಲ್ಲವೆ? ಎಂದು ಅವರು ಕೇಳಿದ್ದರು.
      ಹೀಗೆ ಒತ್ತುಗಳನ್ನು ತೆಗೆಯುವುದರಿಂದ, ಎಲ್ಲೆಡೆ ದೀರ‍್ಗಕ್ಕಾಗಿ ಅಜ್ಜನ ಕೋಲೊಂದನ್ನೇ ಬಳಸುವುದರಿಂದ, ಬೇಡದ ಬರಿಗೆಗಳನ್ನು ತೊಲಗಿಸುವುದರಿಂದ, ಕನ್ನಡಕ್ಕೆ ಇನ್ನಶ್ಟು ಸರಳವೂ ಅಂದವೂ ಆದ ಹಾಗೂ ನೇರ‍್ಪಿನ ಕಾಗುಣಿತವಿರುವ ಹೊಸ ಲಿಪಿಯೊಂದು ದೊರೆಯುತ್ತದೆ ಎಂದು ತಮ್ಮ ವಾದವನ್ನು ತರ‍್ಕಬದ್ದವಾಗಿ ಅವರು ಮಂಡಿಸಿದ್ದರು. ಆದರೆ, ಆಗಿನ ಕಾಲದ ಜನ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ’ಈಗಾಗಲೇ ಬೆಟ್ಟದಶ್ಟು ಪುಸ್ತಕಗಳು ಇಂದಿನ ಲಿಪಿಯಲ್ಲಿ ಅಚ್ಚಾಗಿಬಿಟ್ಟಿವೆಯಲ್ಲ!’ ಎಂದು ಕೆಲವರು ಆಕ್‍ಶೇಪಣೆ ಎತ್ತಿದರು. ’ಈಗಿರುವ ಲಿಪಿ ಹೀಗೇ ಚೆನ್ನಾಗಿದೆ. ಬದಲು ಮಾಡುವ ಅಗತ್ಯ ಇಲ್ಲ’ ಎಂದು ಇನ್ನು ಕೆಲವರು ಉದಾಸೀನ ತೋರಿಸಿದರು. ಒಟ್ಟಿನಲ್ಲಿ ಶ್ರೀಯವರ ಹುರುಳುಳ್ಳ ಸಲಹೆ ಮೂಲೆಗುಂಪಾಯಿತು.
      ಆದರೆ, ಶ್ರೀಯವರ ಮಾರ‍್ಪಾಟುಗಳನ್ನು ಜನ ಒಪ್ಪಿಕೊಳ್ಳುವ ಕಾಲ ಈಗ ಹತ್ತಿರವಾಗಿದೆ ಎಂದು ಅನಿಸುತ್ತಿದೆ ನನಗೆ. ಏಕೆಂದರೆ, ಹೊಸ ತಲೆಮಾರಿನ ಕನ್ನಡದೊಲವಿಗಳು ಸ್ವತಂತ್ರವಾಗಿ ಯೋಚಿಸುವುದನ್ನು ಇಶ್ಟಪಡುತ್ತಿದ್ದಾರೆ. ತರ‍್ಕಕ್ಕೆ ಬೆಲೆ ಕೊಡುತ್ತಿದ್ದಾರೆ. ನಂಬಿದಂತೆ ನಡೆಯುವ ಕೆಚ್ಚು ತೋರಿಸುತ್ತಿದ್ದಾರೆ. ಅನುಮಾನವಿದ್ದರೆ, ಈ ಪುಟದ ಬಲಬದಿಯಲ್ಲಿರುವ ಕಯ್‍ಮರದ ಅಡಿಯಲ್ಲಿ ಕೊಟ್ಟಿರುವ ವೆಬ್ ತಾಣಗಳಿಗೊಮ್ಮೆ ಹೋಗಿ ನೋಡಿ. ಅರ‍್ತವುಳ್ಳ ಮಾರ‍್ಪಾಟುಗಳಿಗೆ ಎಳಗನ್ನಡಿಗರು ಹೇಗೆ ಮನಸ್ಸುಗಳನ್ನು ತೆರೆದುಕೊಳ್ಳುತ್ತಿದ್ದಾರೆ ಎಂಬುದರ ಸುಳುಹು ಅಲ್ಲಿ ನಿಮಗೆ ಡಾಳಾಗಿ ಸಿಗುತ್ತದೆ.
      ನಿಜ ಹೇಳುವುದಾದರೆ, ಕನ್ನಡದಲ್ಲಿ ಲಿಪಿಕ್ರಾಂತಿಯ ಗಾಳಿ ಆಗಲೇ ಬೀಸಲು ತೊಡಗಿದೆ. ಇದಕ್ಕೆ ನುಡಿಯರಿಗ ಶಂಕರ ಬಟ್ಟರ ’ಹೊಸಬರಹ’ ಜನಪ್ರಿಯವಾಗುತ್ತಿರುವುದೇ ಸಾಕ್‍ಶಿ. ಒತ್ತಕ್ಶರಗಳನ್ನು ಕಡಿಮೆ ಮಾಡಿ ಬರೆಯುವ ಪರಿಯೂ ಅಲ್ಲಲ್ಲಿ ಕಾಣಬರುತ್ತಿದೆ. ಇನ್ನು ಬೇಕಾಗಿರುವುದು, ಬರಹದ ಮೆಲ್‍ಪುರುಳುಗಳಲ್ಲಿ ಅಜ್ಜನ ಕೋಲನ್ನು ಬಿಡಿಯಾಗಿ ಬರೆಯಲು ಅನುವು ಮಾಡಿಕೊಡುವ ಸವ್ಲಬ್ಯ. ಈ ಸವ್ಲಬ್ಯ ಕೂಡ ಆಗಲೇ ಕೆಲವು ಮೆಲ್‍ಪುರುಳುಗಳಲ್ಲಿ ದೊರೆಯುತ್ತಿರಬಹುದು.
      ಕನ್ನಡಿಗನಾಗಿ, ದ್ರಾವಿಡನಾಗಿ, ಕಡೆಯದಾಗಿ ನಾನು ಲಿಪಿಯ ವಿಶಯದಲ್ಲಿ ಹೇಳುವುದಿಶ್ಟೆ. ನೆಲದಗಲ ಬಳಕೆಯಲ್ಲಿರುವ ಅದೆಶ್ಟೋ ಲಿಪಿಗಳಲ್ಲಿ, ದ್ರಾವಿಡ ನುಡಿಗಳಲ್ಲಿ ಒಂದು ಮುಕ್ಯ ನುಡಿಯಾದ ನಮ್ಮ ಕನ್ನಡ ನುಡಿಯ ಲಿಪಿ ಎಲ್ಲರೂ ಮೆಚ್ಚುವಂತಹ ಅಂದವನ್ನು ಪಡೆದಿದೆ. ಕನ್ನಡದ ಲಿಪಿ ದಿಟವಾಗಿಯೂ ಮುತ್ತು! ಇನ್ನು ಅದರಿಂದ ಶ್ರೀಯವರ ಕಿವಿಮಾತಿನಂತೆ ಕೆಲ ಕೊಂಕುಗಳನ್ನು ತೆಗೆದು ಹಾಕಿದರೆ, ಅದನ್ನು ಸರಿಗಟ್ಟುವ ಲಿಪಿ ನೆಲದಿ ಮತ್ತೊಂದಿರುವುದಿಲ್ಲ!

ನಲ್ಮೆಯೊಡನೆ,
ಎಚ್.ಎಸ್.ರಾಜ್