ಬುಧವಾರ, ಜನವರಿ 30, 2013

ಗೋಕಾಕ್ ಚಳುವಳಿಯ ನೀತಿಪಾಟ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಗೋಕಾಕ್ ಚಳುವಳಿಯ ಹೆಸರು ಯಾರಿಗೆ ಗೊತ್ತಿಲ್ಲ? ’ಇನ್ನೊಂದು ಗೋಕಾಕ್ ಮಾದರಿ ಚಳುವಳಿ ನಡೀಬೇಕು ಕಣ್ರೀ’ ಎಂದು ಹೇಳುವುದು ಈಗ ಒಂದು ವಾಡಿಕೆ ಆಗಿಬಿಟ್ಟಿದೆ. ಅಶ್ಟು ಚೆನ್ನಾಗಿ ಎಲ್ಲರಿಗೂ ಗೊತ್ತಿದೆ ಗೋಕಾಕ್ ಚಳುವಳಿ. ಆದರೆ, ಗೋಕಾಕ್ ಚಳುವಳಿ ನಡೆದದ್ದು ಯಾಕೆ, ಅದರಿಂದ ನಿರ‍್ದಿಶ್ಟವಾಗಿ ಉಂಟಾದದ್ದು ಏನು ಎಂಬುದು ಬಹಳಶ್ಟು ಮಂದಿಗೆ ಗೊತ್ತಿಲ್ಲ.
      ಗೋಕಾಕ್ ಚಳುವಳಿ ನಡೆದು ಈಗ ಮೂವತ್ತು ವರ‍್ಶಗಳೇ ಕಳೆದಿವೆ. ಆ ದಿನಗಳಲ್ಲಿ ಕನ್ನಡಕ್ಕೆ ಅಪಾಯಕಾರಿ ಕುತ್ತೊಂದು ತಗುಲಿಕೊಂಡಿತ್ತು. ಗೋಕಾಕ್ ಚಳುವಳಿ ಆ ಕುತ್ತನ್ನು ಯಶಸ್ವಿಯಾಗಿ ತೊಡೆದು ಹಾಕಿತು. ಕುತ್ತನ್ನೇನೋ ತೊಡೆದು ಹಾಕಿತು. ಆದರೆ, ಆ ಕುತ್ತು ತಗುಲಿಕೊಳ್ಳುವುದಕ್ಕೆ ಕಾರಣವಾಗಿದ್ದ ಮೂಲ ಶಕ್ತಿಗಳನ್ನು ಅದು ತೊಡೆದು ಹಾಕಲಿಲ್ಲ. ಹಾಗಾಗಿ, ಆ ಶಕ್ತಿಗಳು ಈಗಲೂ ಜೀವಂತವಾಗೇ ಉಳಿದುಕೊಂಡಿವೆ. ಕೆಲ ಕಾಲ ಅಡಗಿ ಕುಳಿತಿದ್ದ ಅವು ಇತ್ತೀಚಿನ ವರ‍್ಶಗಳಲ್ಲಿ ಮತ್ತೆ ತಲೆ ಎತ್ತಿವೆ. ಆದ್ದರಿಂದ, ಗೋಕಾಕ್ ಚಳುವಳಿ ’ಯಾಕೆ’ ನಡೆಯಿತು ಎಂಬುದನ್ನು ನೆನಪಿಸಿಕೊಳ್ಳುವುದು ಇಂದು ಅಂದಿನಂತೆ ಪ್ರಸ್ತುತ.
      ಗೋಕಾಕ್ ಚಳುವಳಿಗೆ ಮುಂಚೆ ಕರ‍್ನಾಟಕದ ಬಹುಮಟ್ಟಿನ ವಿದ್ಯಾರ‍್ತಿಗಳು ಎಂಟರಿಂದ ಹನ್ನೆರಡನೆಯ ತರಗತಿಯವರೆಗೆ ’ಪ್ರತಮ ಬಾಶೆ’ ಎಂದು ಒಂದು ಬಾಶೆಯನ್ನು ಕಡ್ಡಾಯವಾಗಿ ಕಲಿಯಬೇಕಾಗಿತ್ತು. ಆ ಬಾಶೆ ಕನ್ನಡವೇ ಆಗಬೇಕಾಗಿರಲಿಲ್ಲ. ಕನ್ನಡದ ಬದಲು ಸಂಸ್ಕ್ರುತವನ್ನು ತೆಗೆದುಕೊಳ್ಳಬಹುದಾಗಿತ್ತು. ವಿಚಿತ್ರವೆಂಬಂತೆ ಕಾಲಕ್ರಮೇಣ ವಿದ್ಯಾರ‍್ತಿಗಳಿಗೆ ಸಂಸ್ಕ್ರುತವೇ ಹೆಚ್ಚು ಹೆಚ್ಚು ಪ್ರಿಯವಾಗ ತೊಡಗಿತು. ಕನ್ನಡದ ನೋಂದಣಿ ಸೊರಗತೊಡಗಿತು. ಇದೇ ಗೋಕಾಕ್ ಚಳುವಳಿಗೆ ಕಾರಣವಾದದ್ದು.
      ಒಂದು ತಿಳಿದ ಬಾಶೆ, ಇನ್ನೊಂದು ತಿಳಿದಿರದ ಬಾಶೆ - ಹೀಗೆ ಎರಡು ಬಾಶೆಗಳನ್ನು ಮುಂದಿಟ್ಟರೆ, ಯಾರೇ ಆಗಲಿ, ತಿಳಿದ ಬಾಶೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ಹೊರತು ತಿಳಿಯದ ಬಾಶೆಯನ್ನಲ್ಲ. ಯಾಕೆಂದರೆ, ತಿಳಿಯದ ಬಾಶೆಯನ್ನು ತೆಗೆದುಕೊಂಡರೆ ಓದು ಅನವಶ್ಯಕವಾಗಿ ಕಶ್ಟವಾಗುತ್ತದೆ. ಆದರೂ, ನಮ್ಮ ವಿದ್ಯಾರ‍್ತಿಗಳು ತಿಳಿದ ಕನ್ನಡವನ್ನು ಬಿಟ್ಟು ತಿಳಿಯದ ಸಂಸ್ಕ್ರುತವನ್ನೇ ತೆಗೆದುಕೊಳ್ಳಲು ಶುರುಮಾಡಿದರು, ಯಾಕೆ? ಕಾರಣ ತಿಳಿದುಕೊಂಡರೆ, ಕನ್ನಡದ ವಿರುದ್ದ ಎಂತಹ ಒಂದು ಮುಸುಕಿನ ಮರೆಯ ಸಂಚು ಆ ದಿನಗಳಲ್ಲಿ ನಡೆದಿತ್ತು ಎಂಬುದು ನಮಗೆ ಗೊತ್ತಾಗುತ್ತದೆ.
      ಆಗಿನ ದಿನಗಳಲ್ಲಿ ಮಕ್ಕಳು ಏಳನೇ ತರಗತಿಯವರೆಗೆ ಕನ್ನಡವನ್ನು ಓದಿಕೊಂಡು ಬರುತ್ತಿದ್ದರು. ಹಾಗಾಗಿ, ಎಂಟನೇ ತರಗತಿಯಿಂದ ಹಯ್‍ಸ್ಕೂಲು ಶುರುವಾದಾಗ, ಕನ್ನಡ ವಿಶಯದ ಮಟ್ಟ ಸಹಜವಾಗೇ ಹಯ್‍ಸ್ಕೂಲಿನ ಮಟ್ಟಕ್ಕೆ ಸರಿಹೊಂದುವಂತಿರುತ್ತಿತ್ತು. ಅಂದರೆ, ಕನ್ನಡವನ್ನು ಪ್ರತಮ ಬಾಶೆಯಾಗಿ ತೆಗೆದುಕೊಂಡರೆ, ಅದರಲ್ಲಿ ಉತ್ತೀರ‍್ಣರಾಗುವುದಕ್ಕೆ ವಿದ್ಯಾರ‍್ತಿಗಳು ತಕ್ಕಮಟ್ಟಿಗೆ ಕಶ್ಟಪಡಬೇಕಾಗಿತ್ತು. ಆದರೆ, ಸಂಸ್ಕ್ರುತವನ್ನು ಪ್ರತಮ ಬಾಶೆಯಾಗಿ ತೆಗೆದುಕೊಂಡರೆ,  ಕಶ್ಟಪಡುವ ಅವಶ್ಯಕತೆಯೇ ಇರಲಿಲ್ಲ. ಯಾಕೆಂದರೆ, ಎಂಟನೇ ತರಗತಿಯೇ ಸಂಸ್ಕ್ರುತ ಕಲಿಕೆಯ ಮೊದಲನೇ ವರ‍್ಶವಾದ್ದರಿಂದ, ಅದರ ಕ್ಲಿಶ್ಟತೆ, ಪ್ರಾತಮಿಕ ಶಾಲೆಯಲ್ಲಿ ಕನ್ನಡದ ಕಲಿಕೆಗೆ ಎಶ್ಟು ಕ್ಲಿಶ್ಟತೆ ಇತ್ತೋ ಅದಕ್ಕಿಂತ ಹೆಚ್ಚಿರಲಿಲ್ಲ.
      ಸಂಸ್ಕ್ರುತವನ್ನು ಆಯ್ಕೆ ಮಾಡಿಕೊಂಡರೆ, ಓದಬೇಕಾಗಿದ್ದುದು ತುಂಬಾ ಕಡಿಮೆ. ಪಾಟ ನಡೆಯುತ್ತಿದ್ದುದು ಕನ್ನಡದಲ್ಲೇ. ಪರೀಕ್ಶೆ ನಡೆಯುತ್ತಿದ್ದುದು ಕನ್ನಡದಲ್ಲೇ. ಉತ್ತರಗಳನ್ನು ಬರೆಯುತ್ತಿದ್ದುದು ಕನ್ನಡದಲ್ಲೇ. ಹೆಸರಿಗೆ ಸಂಸ್ಕ್ರುತ, ಆಶ್ಟೆ. ಎಲ್ಲಾ ನಡೆಯುತ್ತಿದ್ದುದು ಕನ್ನಡದಲ್ಲೇ. ಅಲ್ಲೊಂದು ಚೂರು ಸಂಸ್ಕ್ರುತದ ವ್ಯಾಕರಣ, ಇಲ್ಲೊಂದು ಚೂರು ಸಂಸ್ಕ್ರುತದ ತುಂಡು ಸಾಲುಗಳು, ಇಶ್ಟರ ಮೇಲೆ ಒಂದೆರಡು ಸಂಸ್ಕ್ರುತ ಸುಬಾಶಿತಗಳ ಕಂಟಪಾಟ. ಇಶ್ಟೇ, ಎಂಟನೇ ತರಗತಿಯ ಸಂಸ್ಕ್ರುತ ಕಲಿಕೆ!
      ಇನ್ನು ಅಂಕಗಳನ್ನು ಕೊಡುವ ಪರಿಯೋ! ಕನ್ನಡದಲ್ಲಿ ಪುಟಗಟ್ಟಲೆ ಬರೆದರೂ ನಿಮಗೆ ಶೇಕಡ ಅರವತ್ತೋ ಎಪ್ಪತ್ತೋ ಅಂಕಗಳು ಬಂದರೆ ಹೆಚ್ಚೆಚ್ಚು. ಸಂಸ್ಕ್ರುತದಲ್ಲಿ ನೋಡಿದರೆ ಗಣಿತದ ಹಾಗೆ ಅಂಕಗಳ ಕೊಡುತ್ತಿದ್ದರು! ಒಟ್ಟು ನೂರಯ್ವತ್ತು ಅಂಕಗಳಲ್ಲಿ ನೂರಯ್ವತ್ತನ್ನೂ ತೆಗೆದುಕೊಳ್ಳಬಹುದಾಗಿತ್ತು!
      ಹೀಗೆ, ಕನ್ನಡ ತೆಗೆದುಕೊಂಡವರಿಗೆ ಬೆಟ್ಟ ಏರಿದಶ್ಟು ಕಶ್ಟವಾಗಿದ್ದರೆ, ಸಂಸ್ಕ್ರುತ ತೆಗೆದುಕೊಂಡವರಿಗೆ ಮಳಲು ಗುಡ್ಡೆಯ ಮೇಲೆ ಆಡಿದಶ್ಟು ಹಗುರಾಗಿರುತ್ತಿತ್ತು. ವಸ್ತುಸ್ತಿತಿ ಹೀಗಿದ್ದಾಗ ಅದಾವ ಬುದ್ದಿ ಇರುವ ವಿದ್ಯಾರ‍್ತಿ ತಾನೆ ಸಂಸ್ಕ್ರುತವನ್ನು ಆಯ್ಕೆ ಮಾಡಿಕೊಳ್ಳದೆ ಇರುತ್ತಿದ್ದ? ಸಹಜವಾಗೇ, ಸುಲಬದ ದಾರಿ ಹುಡುಕುವ ವಿದ್ಯಾರ‍್ತಿಗಳು ಮತ್ತು ಅವರ ತಾಯಿತಂದೆಯರು ಕನ್ನಡವನ್ನು ಬದಿಗೆ ತಳ್ಳಿ ಸಂಸ್ಕ್ರುತವನ್ನು ಎತ್ತಿಕೊಳ್ಳುತ್ತಿದ್ದರು.
      ಈ ರೀತಿ, ಕನ್ನಡದ ನೆಲದಲ್ಲೇ ಕನ್ನಡಕ್ಕೆ ಬತ್ತಿ ಇಟ್ಟದ್ದು ಯಾವೊಂದು ಜಾತಿಯವರಲ್ಲ, ಯಾವೊಂದು ಪ್ರದೇಶದವರಲ್ಲ. ಹೊರಗಿನವರಂತೂ ಅಲ್ಲವೇ ಅಲ್ಲ. ನಮ್ಮವರಲ್ಲೇ ಸಂಸ್ಕ್ರುತದ ದುರಬಿಮಾನವಿದ್ದ ಕೆಲ ಕನ್ನಡದ್ರೋಹಿ ಕನ್ನಡಿಗರೇ ಈ ನಾಚಿಕೆಗೇಡಿನ ಕೆಲಸ ಮಾಡಿದ್ದು. ಈ ದ್ರೋಹಿಗಳು ತಮ್ಮ ಮಕ್ಕಳೊಂದಿಗೆ ಲಲ್ಲೆಗರೆಯುತ್ತಿದ್ದುದು ಕನ್ನಡದಲ್ಲಿ. ಹೆಂಡತಿಯರೊಡನೆ ಸರಸ ಸಲ್ಲಾಪವಾಡುತ್ತಿದ್ದುದು ಕನ್ನಡದಲ್ಲಿ. ಗೆಳೆಯರೊಟ್ಟಿಗೆ ಹರಟೆ ಕೊಚ್ಚುತ್ತಿದ್ದುದು ಕನ್ನಡದಲ್ಲಿ. ಎಲ್ಲರ ನಡುವೆ ವ್ಯವಹರಿಸುತ್ತಿದ್ದುದು ಕನ್ನಡದಲ್ಲಿ. ಆದರೆ, ಇವರ ನಿಶ್ಟೆ ಇದ್ದದ್ದೆಲ್ಲಾ ಸಂಸ್ಕ್ರುತದಲ್ಲಿ! ಏನಂತೀರಿ ಇಂತಹ ತಾಯಿಗುಲಿಗಳಿಗೆ?
      ಹಾಗೆ ನೋಡಿದರೆ, ಮೊತ್ತಮೊದಲು, ನಾಡ ಮಕ್ಕಳ ನುಡಿ ಕನ್ನಡಕ್ಕೆ ಸತ್ತನುಡಿ ಸಂಸ್ಕ್ರುತವನ್ನು ಸಮನಾಗಿ ನಿಲ್ಲಿಸುವ ಏರ‍್ಪಾಡೇ ನಡೆದಿರಬಾರದಾಗಿತ್ತು. ಆದರೂ ಅದು ನಡೆದು ಹೋಗಿತ್ತು. ಅದೇ ಒಂದು ಅಚ್ಚರಿ. ಅಶ್ಟು ಸಾಲದು ಎನ್ನುವಂತೆ, ಈ ನಾಚಿಕೆಗೇಡಿನ ಏರ‍್ಪಾಡನ್ನು ತೆಗೆದುಹಾಕುವುದಕ್ಕೆ ಹತ್ತು ವರ‍್ಶಗಳಿಗೂ ಹೆಚ್ಚು ಸಮಯ ಬೇಕಾಯಿತು. ಹೇಗಿತ್ತು ನೋಡಿ ಆಗ ಸಂಸ್ಕ್ರುತದ ದುರಬಿಮಾನಿಗಳ ವರ‍್ಚಸ್ಸು!
      ಈಗಲೂ ಕೂಡ ಅವರ ವರ‍್ಚಸ್ಸೇನೂ ಕಡಿಮೆಯಾಗಿಲ್ಲ. ಅವರ ಸಂಕ್ಯೆಯೂ ಕುಗ್ಗಿಲ್ಲ. ಕಳೆದ ನಾಲ್ಕಯ್ದು ವರ‍್ಶಗಳಲ್ಲಿ ಅವರ ಚಟುವಟಿಕೆ ಮತ್ತೆ ಹೆಚ್ಚಾಗಿದೆ. ಕನ್ನಡಿಗರ ತೆರಿಗೆ ಹಣದಲ್ಲಿ ಅವರು ಸಂಸ್ಕ್ರುತ ವಿಶ್ವವಿದ್ಯಾಲಯ ಮಾಡಿಕೊಂಡಿದ್ದಾರೆ. ಕನ್ನಡಿಗರ ತೆರಿಗೆ ಹಣದಲ್ಲಿ ಆಗಾಗ್ಗೆ ಅವರು ಸಂಸ್ಕ್ರುತ ಪುಸ್ತಕ ಮೇಳಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಸಚಿವ ರಾಮದಾಸ್ ಅವರು ದಂತವಯ್‍ದ್ಯಕೀಯ ವಿದ್ಯಾರ‍್ತಿಗಳಿಗೆ ಸಂಸ್ಕ್ರುತ ಕಲಿಕೆಯನ್ನು ಕಡ್ಡಾಯ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸಂಸ್ಕ್ರುತದ ದುರಬಿಮಾನಿಗಳ ಹಾವಳಿ ಬೆಳೆಗೆ ಎರಗುವ ಹಕ್ಕಿಗಳಂತೆ ಮತ್ತೆ ಮತ್ತೆ ಕನ್ನಡಿಗರ ಮೇಲೆ ಎರಗುತ್ತಲೇ ಇರುತ್ತದೆ.
      ಕನ್ನಡಿಗರು ನಾವು ದ್ರಾವಿಡ ಬುಡಕಟ್ಟಿಗೆ ಸೇರಿದವರು. ನಮ್ಮ ನುಡಿ ದ್ರಾವಿಡ ನುಡಿ. ಸಂಸ್ಕ್ರುತಕ್ಕೂ ಕನ್ನಡಕ್ಕೂ ನೆತ್ತರ ನಂಟಿಲ್ಲ. ವಾಸ್ತವ ಇದಾಗಿರುವಾಗ, ನಮಗೆ ಯಾಕೆ ಬೇಕು ಈ ಉತ್ತರದ ಸಂಸ್ಕ್ರುತವನ್ನು ಪೊರೆಯುವ ಹೊರೆ? ನಮ್ಮ ಕನ್ನಡವನ್ನೇ ಕಾಪಾಡಿಕೊಳ್ಳುವುದಕ್ಕೆ ಸಂಪನ್ಮೂಲದ ಕೊರತೆ ಇರುವಾಗ ಪರಕೀಯ ಸಂಸ್ಕ್ರುತಕ್ಕೆ ಯಾಕೆ ನಮ್ಮ ಸಾರ‍್ವಜನಿಕ ಹಣವನ್ನು ಪೋಲು ಮಾಡಬೇಕು? ಆರ‍್ಯ ಬಾಶೆಗಳನ್ನಾಡುವ ಮಂದಿ ನಮ್ಮ ಹತ್ತರಶ್ಟಿದ್ದಾರೆ ಈ ದೇಶದಲ್ಲಿ. ಸಂಸ್ಕ್ರುತದ ಲಾಲನೆ ಪಾಲನೆಯನ್ನು ಬೇಕಿದ್ದರೆ ಅವರು ಮಾಡಿಕೊಳ್ಳಲಿ. ದ್ರಾವಿಡರಾದ ನಮಗೇಕೆ ಸಂಸ್ಕ್ರುತವನ್ನು ಉಳಿಸುವ ಬೆಳೆಸುವ ಮುಟ್ಟಾಳ ಕೆಲಸ? ಹೀಗೆ, ಕನ್ನಡಿಗರು ನಾವು ದ್ರಾವಿಡ ಅರಿವನ್ನು ಮೂಡಿಸಿಕೊಳ್ಳಬೇಕು. ಅದೇ ಸಂಸ್ಕ್ರುತದ ದುರಬಿಮಾನಿಗಳ ಹಾವಳಿಗೆ ತಕ್ಕ ಪರಿಹಾರ.
      ಆದ್ದರಿಂದ, ಗೋಕಾಕ್ ಚಳುವಳಿಯನ್ನು ನಾವು ಹೇಗೆ ಮರೆಯುವುದಿಲ್ಲವೋ, ಹಾಗೆ, ಅದರ ಕಾರಣ ಏನಾಗಿತ್ತು ಎಂಬುದನ್ನೂ ನಾವು ಮರೆಯಬಾರದು. ನಮ್ಮ ಸಹಜ ದ್ರಾವಿಡತನವನ್ನು ನಾವು ಮಯ್ಗೂಡಿಸಿಕೊಳ್ಳದಿದ್ದರೆ, ನಮ್ಮ ನಡುವೆಯೇ ಇದ್ದುಕೊಂಡು ನಮಗೇ ಎರಡು ಬಗೆಯುವ ದ್ರೋಹಿಗಳಿಂದ ನಮ್ಮ ನಡೆನುಡಿಗಳಿಗೆ ಕುತ್ತು ಮೇಲಿಂದ ಮೇಲೆ ಬರುವುದು ತಪ್ಪುವುದಿಲ್ಲ ಎಂಬ ಪಾಟವನ್ನು ನಾವು ಗೋಕಾಕ್ ಚಳುವಳಿಯಿಂದ ಕಲಿತುಕೊಳ್ಳಬೇಕು.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಸೋಮವಾರ, ಜನವರಿ 21, 2013

ಬಿ.ಎಮ್.ಶ್ರೀಯವರ ಲಿಪಿ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ತಿಂಗಳು (ಜನವರಿ), ಅಚ್ಚಗನ್ನಡದ ಹಂಬಿಗೆ ನೀರೆರೆದು ಪೊರೆದ ಕನ್ನಡದ ಕಣ್ವ ಬಿ.ಎಮ್.ಶ್ರೀಯವರು ಹುಟ್ಟಿದ ತಿಂಗಳು. ಶ್ರೀಯವರ ವಿಶಯವಾಗಿ ನನಗೆ ಗೊತ್ತಿರುವುದು ಅವರನ್ನು ಹತ್ತಿರದಿಂದ ಬಲ್ಲವರು ಅವರ ಬಗ್ಗೆ ಬರೆದ ಬರಹಗಳಿಂದ ಮಾತ್ರ. ಶ್ರೀಯವರನ್ನು ಬಲ್ಲವರೆಲ್ಲರೂ ಅವರು ಕನ್ನಡದ ಏಳಿಗೆಗಾಗಿ ಅಕ್ಶರಶಹ ತಮ್ಮ ಒಡಲು ಒಡವೆ ಎರಡನ್ನೂ ಸವೆಸಿದರು ಎಂದು ಹೇಳಿದ್ದಾರೆ. ಅವರ ಕನ್ನಡ ನಾಡುನುಡಿಗಳ ಒಲವಿಗೆ ಎಣೆಯೇ ಇರಲಿಲ್ಲ ಎಂದಿದ್ದಾರೆ. ಶ್ರೀಯವರಿಗೆ ಕನ್ನಡ, ತಮಿಳು, ಸಂಸ್ಕ್ರುತ, ಆಂಗ್ಲ ಹಾಗೂ ಹಳೆಯ ಗ್ರೀಕ್ ಬಾಶೆಗಳಲ್ಲಿ ಪಂಡಿತರನ್ನೇ ಬೆರಗುಗೊಳಿಸುವಶ್ಟು ಪಾಂಡಿತ್ಯವಿತ್ತಂತೆ. ಇಂತಹ ಒಬ್ಬ ಕನ್ನಡದೊಲವಿ, ಇಂತಹ ಹಿರಿಯರಿಗ, ಕಳೆದ ಶತಮಾನದ ಮೂವತ್ತರ ದಶಕದಲ್ಲಿ ಕನ್ನಡದ ಲಿಪಿಯನ್ನು ನೇರ‍್ಪುಗೊಳಿಸಬೇಕು ಎಂಬ ಉದ್ದೇಶದಿಂದ ಬಳಕೆಯಲ್ಲಿದ್ದ ಲಿಪಿಗೆ ಕೆಲವು ಮಾರ‍್ಪಾಡುಗಳನ್ನು ಸೂಚಿಸಿದರು. ಅವರು ಕಾಣ್ಕೆಗೊಂಡ ನೇರ‍್ಪುಗೊಳಿಸಿದ ಲಿಪಿಯ ಬಗ್ಗೆ ಈಗಿನ ತಲೆಮಾರಿನವರಿಗೆ ಅಶ್ಟಾಗಿ ತಿಳಿದಿಲ್ಲ. ತಿಳಿದರೆ ಅದನ್ನು ಮೆಚ್ಚದೆ ಇರರು ಎನಿಸುತ್ತದೆ ನನಗೆ.
      ಶ್ರೀಲಿಪಿಯನ್ನು ನೆನಪಿಸಿಕೊಳ್ಳುವ ಮೊದಲು ಕೊಂಚ ಕನ್ನಡ ಲಿಪಿಯ ಅಂದದ ಬಗ್ಗೆ ಮಾತಾಡೋಣ. ಇತ್ತೀಚೆಗೆ ಟೀವೀ ಕಾರ‍್ಯಕ್ರಮ ಒಂದರಲ್ಲಿ ನಗೆಗಯ್ವಿ ಕ್ರಿಶ್ಣೇಗವ್ಡರು ಸಬೆಯೊಂದನ್ನು ಉದ್ದೇಶಿಸಿ ಮಾತಾಡುತ್ತ ಒಂದು ಸಂಗತಿಯನ್ನು ತಿಳಿಸಿದರು. ಹಿಂದೊಮ್ಮೆ ರಶ್ಯಾದ ಮಾಸ್ಕೋದಲ್ಲಿ ಪ್ರಪಂಚದ ಬೇರೆಬೇರೆ ಲಿಪಿಗಳ ಪ್ರದರ‍್ಶನವೊಂದು ನಡೆದಿತ್ತಂತೆ. ಅದರಲ್ಲಿ ಕನ್ನಡ ಲಿಪಿಯ ಅಂದ ಮಂದಿಗೆ ಎಶ್ಟು ಮೆಚ್ಚಿಗೆ ಆಯಿತೆಂದರೆ, ಅಶ್ಟೆಲ್ಲ ಲಿಪಿಗಳ ಮೇಲಾಟದಲ್ಲಿ ಅದು ಮೂರನೆಯ ಎಡೆಯನ್ನು ಗೆದ್ದುಕೊಂಡಿತಂತೆ! ಕ್ರಿಶ್ಣೇಗವ್ಡರ ಮಾತನ್ನು ಕೇಳಿ ಇಡೀ ಸಬೆ ಅಚ್ಚರಿಯ ಉದ್ಗಾರವನ್ನು ಹೊರಡಿಸಿತು. ನನಗಾದರೋ ಎಳ್ಳಶ್ಟೂ ಅಚ್ಚರಿಯಾಗಲಿಲ್ಲ. ಏಕೆಂದರೆ, ಕನ್ನಡ ಲಿಪಿ ತಾನೇತಾನಾಗಿ ಯಾರಿಗೇ ಆಗಲೀ ಮೆಚ್ಚುಗೆಯಾಗುತ್ತದೆ ಎನ್ನುವುದನ್ನು ನನ್ನ ಅನುಬವದಿಂದಲೇ ನಾನು ಆ ಮೊದಲೇ ತಿಳಿದುಕೊಂಡಿದ್ದೆ.
      ಅಮೆರಿಕದಲ್ಲಿ ಓದುತ್ತಿದ್ದಾಗ ಕನ್ನಡ, ತಮಿಳು, ತೆಲುಗು, ದೇವನಾಗರೀ, ಬಂಗಾಳಿ ಮುಂತಾದ ನಮ್ಮ ದೇಶದ ಲಿಪಿಗಳನ್ನು ನಾನು ಅಮೆರಿಕನ್ನರಿಗಶ್ಟೇ ಅಲ್ಲದೆ ಬೇರೆಬೇರೆ ದೇಶಗಳಿಂದ ಬಂದಿದ್ದ ವಿದ್ಯಾರ‍್ತಿಗಳಿಗೆ ಕೂಡ ತೋರಿಸಿ, ಅವರಿಗೆ ಅವುಗಳಲ್ಲಿ ಯಾವುದು ಇಶ್ಟ ಆಯಿತು ಎಂದು ಕೆಲವು ಸಲ ಕುತೂಹಲಕ್ಕಾಗಿ ಕೇಳಿದ್ದೆ. ಕನ್ನಡ ಸಾಮಾನ್ಯವಾಗಿ ಅದೆಶ್ಟು ಮಂದಿಗೆ ಇಶ್ಟವಾಗುತ್ತಿತ್ತು ಎಂದರೆ, ಅದರಿಂದ ನನಗೆ ಆಗುತ್ತಿದ್ದ ಅಚ್ಚರಿ ಅಶ್ಟಿಶ್ಟಲ್ಲ. ಕನ್ನಡ ನನ್ನ ನುಡಿ ಎಂದು ಅವರಿಗೆ ಗೊತ್ತಿರಲಿಲ್ಲ. ಹಾಗಾಗಿ, ಅವರು ಕನ್ನಡ ಲಿಪಿಯನ್ನು ಮೆಚ್ಚಿದ್ದು ಬರೀ ಸವ್‍ಜನ್ಯಕ್ಕಾಗಿ ಅಗಿರಲಿಲ್ಲ. ಕನ್ನಡ ಲಿಪಿಯ ಸಹಜ ಅಂದವೇ ಅವರ ಮೆಚ್ಚುಗೆಯನ್ನು ಗಳಿಸಿಕೊಂಡಿತ್ತು. ಆದರೆ, ಅವರಲ್ಲಿ ಅನೇಕರು, ಹೆಚ್ಚಾಗಿ ಅಮೆರಿಕನ್ನರು, ಅದರ ಒಂದು ಅಂಶವನ್ನು ಮಾತ್ರ ಅಶ್ಟಾಗಿ ಇಶ್ಟ ಪಟ್ಟಿರಲಿಲ್ಲ. ಒತ್ತಕ್ಶರ ಆ ಅಂಶ. What are those little squiggles along the bottom? ಎಂದು ಒತ್ತುಗಳನ್ನು ತೋರಿಸಿ, ’ಒತ್ತುಗಳಿರದಿದ್ದರೆ ಲಿಪಿ ಇನ್ನೂ ಎಶ್ಟು ಅಂದವಾಗಿರುತ್ತಿತ್ತು’ ಎನ್ನುವ ದಾಟಿಯಲ್ಲಿ ನನ್ನನ್ನು ಅವರು ಕೇಳುತ್ತಿದ್ದರು.
      ಒತ್ತಕ್ಶರಗಳ ಬಗ್ಗೆ ಶ್ರೀಯವರೂ ಹೀಗೇ ಅಬಿಪ್ರಾಯ ಪಟ್ಟಿದ್ದರು. ಯಾರಿಗೇ ಆಗಲೀ, ಶ್ರೀಯವರ ಈ ಅಬಿಪ್ರಾಯ ಒಪ್ಪಿಗೆ ಆಗದೆ ಇರದು. ಒತ್ತುಗಳನ್ನು ತೆಗೆದರೆ, ಕನ್ನಡದ ಸಾಲುಗಳಿಗೆ ಓರಂತೆ ಒಂದೇ ಎತ್ತರ ಬರುತ್ತದೆ. ಅದರ ಪರಿಣಾಮವಾಗಿ ಮೇಲೆ ಕೆಳಗೆ ಕೊಂಕುಗಳಿರದ ಮುತ್ತಿನ ಸರಗಳಂತೆ ಅವು ಕಾಣಿಸತೊಡಗುತ್ತವೆ. ನಂಬಿಕೆ ಬರದಿದ್ದರೆ, ಇನ್ನು ಮುಂದೆ ಕನ್ನಡದ ಸಾಲುಗಳನ್ನು ಓದುವಾಗ, ಒತ್ತಕ್ಶರ ಇರದ ಪದಗಳಿಗಿರುವ ಅಂದ ಒತ್ತಕ್ಶರ ಇರುವ ಪದಗಳಿಗೆ ಇದೆಯೆ ಎಂದು ಹೋಲಿಸಿ ನೋಡಿ.
      ಶ್ರೀಯವರು ಅಂದದ ಬಗ್ಗೆ ಮಾತ್ರ ಹೇಳಿ ನಿಲ್ಲಿಸಿರಲಿಲ್ಲ. ಕಾಗುಣಿತದ ಕಟ್ಟಳೆಗಳಲ್ಲಿರುವ ಏರುಪೇರುಗಳನ್ನು ಸರಿಮಾಡುವುದರ ಬಗ್ಗೆ ಮತ್ತು ಬೇಡದ ಕೆಲ ಅಕ್ಶರಗಳನ್ನು ತೆಗೆದು ಹಾಕುವ ಬಗ್ಗೆಯೂ ಹೇಳಿದ್ದರು. ಅವರು ಬೊಟ್ಟಿಟ್ಟು ತೋರಿಸಿದ ಕನ್ನಡ ಲಿಪಿ ಒಳಗೊಂಡಿರುವ ಕೆಲ ಸರಿಯಲ್ಲದ ಅಂಶಗಳು ಹೀಗಿವೆ.
      ದೀರ‍್ಗವನ್ನು ಸೂಚಿಸುವುದಕ್ಕೆ ’ಅಜ್ಜನ ಕೋಲು’ ಎಂದು ಕರೆಯುವ ಚಿನ್ನೆ ಇದೆ. ದೀರ‍್ಗ ಬೇಕಾದಲ್ಲೆಲ್ಲಾ ಅದನ್ನು ಮಾತ್ರ ಬಳಸಿದರೆ ಆಗುವುದಿಲ್ಲವೆ? ಬೇರೆ ಬೇರೆ ಬಗೆಯಲ್ಲಿ ದೀರ‍್ಗವನ್ನು ಸೂಚಿಸುವುದರ ಅವ್‍ಚಿತ್ಯವಾದರೂ ಏನು? ಆ, ಈ, ಊ, ೠ, ಏ, ಓ, ಕಾ, ಕೀ, ಕೂ, ಕೇ, ಕೋ - ಇವು ಹಾಗೂ ಇಂತಹವು ಕನ್ನಡದಲ್ಲಿ ದೀರ‍್ಗವನ್ನು ತೋರಿಸುವ ಬರಿಗೆಗಳು. ಅ, ಇ, ಉ, ಋ, ಎ, ಒ ಬರಿಗೆಗಳ ಮುಂದೆ ಅಜ್ಜನ ಕೋಲನ್ನು ಹಾಕಿ ದೀರ‍್ಗವನ್ನು ಸೂಚಿಸಿದರೆ ಸಾಕಲ್ಲವೆ? ಆ, ಈ, ಊ, ೠ, ಏ ಮತ್ತು ಓ ಎಂಬ ಹೆಚ್ಚುವರಿ ಪ್ರತ್ಯೇಕ ಬರಿಗೆಗಳಾದರೂ ಯಾಕೆ ಬೇಕು? ಅದೇ ರೀತಿ, ಕೀ, ಕೇ, ಕೋ ಬರೆದಂತೆಯೇ ಕ ಮುಂದೆ ಅಜ್ಜನ ಕೋಲನ್ನು ಹಾಕಿದರೆ ಕಾ ಆಗುವುದಿಲ್ಲವೇ? ಕು ಮುಂದೆ ಅಜ್ಜನ ಕೋಲನ್ನು ಹಾಕಿದರೆ ಕೂ ಆಗುವುದಿಲ್ಲವೇ? ಕಾ, ಕೂ ಎಂದು ಬೇರೆ ಬೇರೆ ರೀತಿಯಲ್ಲಿ ದೀರ‍್ಗವನ್ನು ತೋರಿಸುವ ಅಗತ್ಯವಾದರೂ ಎಲ್ಲಿದೆ?
      ಅಲ್ಪಪ್ರಾಣ ಮತ್ತು ಮಹಾಪ್ರಾಣದ ಬರಿಗೆಗಳ ಪರಸ್ಪರ ರೂಪಗಳಲ್ಲಿ ಇರುವ ಅರ‍್ತವಿಲ್ಲದ ಬೇರ‍್ಮೆಯನ್ನು ತೊಡೆದು ಹಾಕಬೇಕೆಂದೂ ಅವರು ಸಲಹೆ ನೀಡಿದ್ದರು. ಕ ಹೀಗಿದ್ದರೆ ಖ ಹೀಗೆ. ಜ ಹೀಗಿದ್ದರೆ ಝ ಹೀಗೆ! ಅಲ್ಪಪ್ರಾಣದ ಬರಿಗೆಯ ಬುಡದಲ್ಲೋ ತಲೆಯಲ್ಲೋ ಒಂದು ಬೊಟ್ಟು ಇಟ್ಟು ಮಹಾಪ್ರಾಣವನ್ನು ಸೂಚಿಸಿದರೆ ಆಗುವುದಿಲ್ಲವೆ? ಎಂದು ಅವರು ಕೇಳಿದ್ದರು.
      ಹೀಗೆ ಒತ್ತುಗಳನ್ನು ತೆಗೆಯುವುದರಿಂದ, ಎಲ್ಲೆಡೆ ದೀರ‍್ಗಕ್ಕಾಗಿ ಅಜ್ಜನ ಕೋಲೊಂದನ್ನೇ ಬಳಸುವುದರಿಂದ, ಬೇಡದ ಬರಿಗೆಗಳನ್ನು ತೊಲಗಿಸುವುದರಿಂದ, ಕನ್ನಡಕ್ಕೆ ಇನ್ನಶ್ಟು ಸರಳವೂ ಅಂದವೂ ಆದ ಹಾಗೂ ನೇರ‍್ಪಿನ ಕಾಗುಣಿತವಿರುವ ಹೊಸ ಲಿಪಿಯೊಂದು ದೊರೆಯುತ್ತದೆ ಎಂದು ತಮ್ಮ ವಾದವನ್ನು ತರ‍್ಕಬದ್ದವಾಗಿ ಅವರು ಮಂಡಿಸಿದ್ದರು. ಆದರೆ, ಆಗಿನ ಕಾಲದ ಜನ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ’ಈಗಾಗಲೇ ಬೆಟ್ಟದಶ್ಟು ಪುಸ್ತಕಗಳು ಇಂದಿನ ಲಿಪಿಯಲ್ಲಿ ಅಚ್ಚಾಗಿಬಿಟ್ಟಿವೆಯಲ್ಲ!’ ಎಂದು ಕೆಲವರು ಆಕ್‍ಶೇಪಣೆ ಎತ್ತಿದರು. ’ಈಗಿರುವ ಲಿಪಿ ಹೀಗೇ ಚೆನ್ನಾಗಿದೆ. ಬದಲು ಮಾಡುವ ಅಗತ್ಯ ಇಲ್ಲ’ ಎಂದು ಇನ್ನು ಕೆಲವರು ಉದಾಸೀನ ತೋರಿಸಿದರು. ಒಟ್ಟಿನಲ್ಲಿ ಶ್ರೀಯವರ ಹುರುಳುಳ್ಳ ಸಲಹೆ ಮೂಲೆಗುಂಪಾಯಿತು.
      ಆದರೆ, ಶ್ರೀಯವರ ಮಾರ‍್ಪಾಟುಗಳನ್ನು ಜನ ಒಪ್ಪಿಕೊಳ್ಳುವ ಕಾಲ ಈಗ ಹತ್ತಿರವಾಗಿದೆ ಎಂದು ಅನಿಸುತ್ತಿದೆ ನನಗೆ. ಏಕೆಂದರೆ, ಹೊಸ ತಲೆಮಾರಿನ ಕನ್ನಡದೊಲವಿಗಳು ಸ್ವತಂತ್ರವಾಗಿ ಯೋಚಿಸುವುದನ್ನು ಇಶ್ಟಪಡುತ್ತಿದ್ದಾರೆ. ತರ‍್ಕಕ್ಕೆ ಬೆಲೆ ಕೊಡುತ್ತಿದ್ದಾರೆ. ನಂಬಿದಂತೆ ನಡೆಯುವ ಕೆಚ್ಚು ತೋರಿಸುತ್ತಿದ್ದಾರೆ. ಅನುಮಾನವಿದ್ದರೆ, ಈ ಪುಟದ ಬಲಬದಿಯಲ್ಲಿರುವ ಕಯ್‍ಮರದ ಅಡಿಯಲ್ಲಿ ಕೊಟ್ಟಿರುವ ವೆಬ್ ತಾಣಗಳಿಗೊಮ್ಮೆ ಹೋಗಿ ನೋಡಿ. ಅರ‍್ತವುಳ್ಳ ಮಾರ‍್ಪಾಟುಗಳಿಗೆ ಎಳಗನ್ನಡಿಗರು ಹೇಗೆ ಮನಸ್ಸುಗಳನ್ನು ತೆರೆದುಕೊಳ್ಳುತ್ತಿದ್ದಾರೆ ಎಂಬುದರ ಸುಳುಹು ಅಲ್ಲಿ ನಿಮಗೆ ಡಾಳಾಗಿ ಸಿಗುತ್ತದೆ.
      ನಿಜ ಹೇಳುವುದಾದರೆ, ಕನ್ನಡದಲ್ಲಿ ಲಿಪಿಕ್ರಾಂತಿಯ ಗಾಳಿ ಆಗಲೇ ಬೀಸಲು ತೊಡಗಿದೆ. ಇದಕ್ಕೆ ನುಡಿಯರಿಗ ಶಂಕರ ಬಟ್ಟರ ’ಹೊಸಬರಹ’ ಜನಪ್ರಿಯವಾಗುತ್ತಿರುವುದೇ ಸಾಕ್‍ಶಿ. ಒತ್ತಕ್ಶರಗಳನ್ನು ಕಡಿಮೆ ಮಾಡಿ ಬರೆಯುವ ಪರಿಯೂ ಅಲ್ಲಲ್ಲಿ ಕಾಣಬರುತ್ತಿದೆ. ಇನ್ನು ಬೇಕಾಗಿರುವುದು, ಬರಹದ ಮೆಲ್‍ಪುರುಳುಗಳಲ್ಲಿ ಅಜ್ಜನ ಕೋಲನ್ನು ಬಿಡಿಯಾಗಿ ಬರೆಯಲು ಅನುವು ಮಾಡಿಕೊಡುವ ಸವ್ಲಬ್ಯ. ಈ ಸವ್ಲಬ್ಯ ಕೂಡ ಆಗಲೇ ಕೆಲವು ಮೆಲ್‍ಪುರುಳುಗಳಲ್ಲಿ ದೊರೆಯುತ್ತಿರಬಹುದು.
      ಕನ್ನಡಿಗನಾಗಿ, ದ್ರಾವಿಡನಾಗಿ, ಕಡೆಯದಾಗಿ ನಾನು ಲಿಪಿಯ ವಿಶಯದಲ್ಲಿ ಹೇಳುವುದಿಶ್ಟೆ. ನೆಲದಗಲ ಬಳಕೆಯಲ್ಲಿರುವ ಅದೆಶ್ಟೋ ಲಿಪಿಗಳಲ್ಲಿ, ದ್ರಾವಿಡ ನುಡಿಗಳಲ್ಲಿ ಒಂದು ಮುಕ್ಯ ನುಡಿಯಾದ ನಮ್ಮ ಕನ್ನಡ ನುಡಿಯ ಲಿಪಿ ಎಲ್ಲರೂ ಮೆಚ್ಚುವಂತಹ ಅಂದವನ್ನು ಪಡೆದಿದೆ. ಕನ್ನಡದ ಲಿಪಿ ದಿಟವಾಗಿಯೂ ಮುತ್ತು! ಇನ್ನು ಅದರಿಂದ ಶ್ರೀಯವರ ಕಿವಿಮಾತಿನಂತೆ ಕೆಲ ಕೊಂಕುಗಳನ್ನು ತೆಗೆದು ಹಾಕಿದರೆ, ಅದನ್ನು ಸರಿಗಟ್ಟುವ ಲಿಪಿ ನೆಲದಿ ಮತ್ತೊಂದಿರುವುದಿಲ್ಲ!

ನಲ್ಮೆಯೊಡನೆ,
ಎಚ್.ಎಸ್.ರಾಜ್

ಶನಿವಾರ, ಜನವರಿ 12, 2013

ಕನ್ನಡಿಗರಿಗೊಂದು ಕಯ್‍ಪಿಡಿ


ಪುಟಗಳು:    ೧೪೩
ಇಸವಿ:        ೨೦೧೨
ಹೊರತರಿಕೆ: ಬಾಶಾ ಪ್ರಕಾಶನ, ಸಾಗರ ೫೭೭೪೧೭
ಹಂಚಿಕೆ:      ನವಕರ‍್ನಾಟಕ ಪ್ರಕಾಶನ, ಬೆಂಗಳೂರು ೫೬೦೦೦೧

ಕನ್ನಡಿಗರೂ ದ್ರಾವಿಡರೆ. ಹೀಗೆ ಒಂದು ಸಲ ಹೇಳಿ ಸುಮ್ಮನೆ ಕುಳಿತರೆ ಆಗುವುದಿಲ್ಲ. ಕನ್ನಡಿಗರು ಹೇಗೆ ದ್ರಾವಿಡರು ಎಂಬುದಕ್ಕೆ ನಂಬುವಂತಹ ವಯ್‍ಜ್ನಾನಿಕ ಇಂಬುಗಳನ್ನು ಕೊಡಬೇಕು. ’ದ್ರಾವಿಡ’ ಎಂಬ ನುಡಿಯ ಸರಿಯಾದ ಹುರುಳನ್ನು ಗುರುತಿಸಿ ತೋರಿಸಬೇಕು. ಕನ್ನಡಿಗರ ಮಟ್ಟಿಗೆ ’ದ್ರಾವಿಡ’ ಎಂದರೇನು ಎಂಬುದನ್ನು ಬಿಡಿಸಿ ಹೇಳಬೇಕು. ಕನ್ನಡಿಗರ ದ್ರಾವಿಡತನದ ಚರಿತ್ರೆಯನ್ನು ವಿವರಿಸಬೇಕು. ಬಹುಮಟ್ಟಿನ ಕನ್ನಡಿಗರಿಗೆ ಅವರ ದ್ರಾವಿಡತನದ ಅರಿವು ಇಲ್ಲದಿರುವುದಕ್ಕೆ ಕಾರಣಗಳನ್ನು ಹೊರಗೆಡವಬೇಕು. ಕನ್ನಡಿಗರ ನಡೆನುಡಿಗಳ ದ್ರಾವಿಡತನದ ಮೇಲೆ ಇದುವರೆಗೆ ನಡೆದಿರುವ ಮತ್ತು ಈಗಲೂ ನಡೆಯುತ್ತಿರುವ ಹೊರಗಣ ನಡೆನುಡಿಗಳ ಆಕ್ರಮಣದ ಬಗ್ಗೆ ಗಮನವನ್ನು ಸೆಳೆಯಬೇಕು. ಕನ್ನಡಿಗರ ದ್ರಾವಿಡತನವನ್ನು ಮರೆಮಾಚುವ ಕೆಲವರ ಪೊಳ್ಳು ಪ್ರಚಾರದ ಬಗ್ಗೆ ಕನ್ನಡಿಗರನ್ನು ಎಚ್ಚರಿಸಬೇಕು. ಮುಂದೆ ಬರಲಿರುವ ಕುತ್ತುಗಳ ಬಗ್ಗೆ ಕನ್ನಡಿಗರಿಗೆ ಮುಂಗಾಣ್ಕೆಯನ್ನು ಕೊಡಬೇಕು. ಕುತ್ತುಗಳನ್ನು ತಡೆಯುವುದಕ್ಕೂ ತೊಡೆಯುವುದಕ್ಕೂ ದಾರಿ ಏನು ಎಂಬುದನ್ನು ಅರುಹಬೇಕು. ಎಲ್ಲಕ್ಕೂ ಮಿಗಿಲಾಗಿ ಇಶ್ಟೆಲ್ಲಾ ವಿಶಯವನ್ನು ವಯ್ಯಕ್ತಿಕ ಅಬಿಪ್ರಾಯಗಳನ್ನು ತೂರಿಸದೆ ಓದುಗರ ಮುಂದಿಡಬೇಕು!
      ಮೇಲಿನ ಎಲ್ಲ ಉದ್ದೇಶಗಳನ್ನು ತಲೆಯಲ್ಲಿಟ್ಟುಕೊಂಡು ಬರೆದ ಓದುಗೆ ’ಕನ್ನಡಿಗರೂ ದ್ರಾವಿಡರೆ’. ಕನ್ನಡಿಗರ ದ್ರಾವಿಡತನದ ಬಗ್ಗೆ ಪ್ರಚಾರ ಮಾಡುವುದಕ್ಕೆ ನಮ್ಮ ಗೆಳೆಯರಿಗೆ ಬೇಕಾಗುವ ಎಲ್ಲಾ ತಿಳಿವೂ ಈ ಪುಸ್ತಕದಲ್ಲಿ ಅಡಕವಾಗಿದೆ. ವಿಶಯಗಳನ್ನು ಎಲ್ಲರಿಗೂ ಸುಲಬವಾಗಿ ಅರ‍್ತವಾಗುವಂತೆ ಸರಳ ಕನ್ನಡದಲ್ಲಿ ಬರೆಯಲಾಗಿದೆ. ಓದುಗರು ಆಕಳಿಸಿ ಪುಸ್ತಕವನ್ನು ಎಸೆಯದಿರಲಿ ಎಂದು ನಿರೂಪಣೆಯನ್ನು ಚುರುಕಾಗಿ ಓಡುವಂತೆ ಮಾಡಲಾಗಿದೆ. ಒಮ್ಮೆ ಈ ಪುಸ್ತಕವನ್ನು ಓದಿದರೆ, ಕನ್ನಡಿಗರ ದ್ರಾವಿಡತನವನ್ನು ಅಲ್ಲಗಳೆಯುವವರ ಬಾಯಿ ಮುಚ್ಚಿಸಲು ಬೇಕಾಗುವ ಎಲ್ಲಾ ಮಾಹಿತಿ ನಿಮಗೆ ದೊರೆಯುತ್ತದೆ. ಉಳಿದಂತೆ, ಸಾಮಾನ್ಯ ಕನ್ನಡಿಗರಿಗೂ ಈ ಓದುಗೆಯಿಂದ ನಿಜವಾದ ಕನ್ನಡತನದ ಪರಿಚಯ ಉಂಟಾಗುತ್ತದೆ. ಹಾಗಾಗಿ, ಕನ್ನಡದ ಎಲ್ಲ ಒಲವಿಗಳು ಮತ್ತು ಹೋರಾಟಗಾರರು ಈ ಪುಸ್ತಕವನ್ನು ಒಮ್ಮೆ ಓದಬೇಕು ಎಂಬುದು ನನ್ನ ಆಸೆ.

ಈ ಓದುಗೆಯನ್ನು ಹೇಗೆ ಪಡೆದುಕೊಳ್ಳಬಹುದು?

ಮೊದಲನೆಯದಾಗಿ, ಎಂದಿನಂತೆ ಬೆಲೆ ತೆತ್ತು ಕೊಂಡುಕೊಳ್ಳಬಹುದು. ಸದ್ಯಕ್ಕೆ ಈ ಪುಸ್ತಕ ನವಕರ‍್ನಾಟಕ ಪ್ರಕಾಶನದವರ ಹಾಗೂ ಸಪ್ನ ಬುಕ್ ಹವ್‍ಸ್ ಅವರ ಅಂಗಡಿಗಳಲ್ಲಿ ದೊರೆಯುತ್ತಿದೆ. ಹೆಚ್ಚುವರಿಯಾಗಿ, ಮಯ್ಸೂರಿನಲ್ಲಿ ಡಿ.ವಿ.ಕೆ. ಮೂರ‍್ತಿ ಮತ್ತು ಚೇತನ ಪುಸ್ತಕ ಅಂಗಡಿಗಳಲ್ಲೂ ದೊರೆಯುತ್ತಿದೆ.

ಎರಡನೆಯದಾಗಿ, ಈ ಪುಸ್ತಕವನ್ನು ಉಚಿತವಾಗಿ ಕೆಳಕಂಡ ಬಗೆಯಲ್ಲಿ ಪಡೆದುಕೊಳ್ಳಬಹುದು:

ಈ ಬ್ಲಾಗಿನಲ್ಲಿ ಪತ್ತಿಸಲು ಮುನ್ನೂರು ಪದಗಳಿಗೆ ಕಡಿಮೆ ಇರದ, ಆರುನೂರು ಪದಗಳನ್ನು ಮೀರದ, ಕನ್ನಡಿಗರ ದ್ರಾವಿಡತನದ ಕುರಿತಾಗಿ ತಕ್ಕದಾದ ಕನ್ನಡ ಬರಹವೊಂದನ್ನು kannadigarudravidare@gmail.com ಗೆ ಕಳಿಸಿಕೊಡುವುದರಿಂದ. (ಇದು ಎಲ್ಲರಿಗೂ ಕೊಟ್ಟಿರುವ ತೆರೆದ ಆಹ್ವಾನ. ಹೆಚ್ಚು ಹೆಚ್ಚು ಕನ್ನಡಿಗರು ದ್ರಾವಿಡತನದ ಅನಿಸಿಕೆಗಳ ಕೊಡು-ಕೊಳುವಿನಲ್ಲಿ ಪಾಲ್ಗೊಳ್ಳಲಿ ಎಂಬುದು ಇದರ ಉದ್ದೇಶ)
ಬರಹಗಳು ಹೇಗಿರಬೇಕೆಂದರೆ, ಅವು ಮಾದ್ಯಮಗಳಲ್ಲಿ ವರದಿಯಾದ ಯಾವುದಾದರೂ ಸಂಗತಿಯಿಂದ ಪ್ರೇರಿತವಾಗಿರಬಹುದು, ಇಲ್ಲ, ನಿಮ್ಮ ಅನುಬವಗಳಿಂದ ಅತವ ಚಿಂತನೆಯಿಂದ ಮೂಡಿದುವಾಗಿರಬಹುದು, ಇಲ್ಲ, ನಿಮ್ಮ ಓದಿನಿಂದ ಒದಗಿಬಂದವಾಗಿರಬಹುದು - ಒಟ್ಟಿನಲ್ಲಿ ಅವು ಕನ್ನಡಿಗರ ದ್ರಾವಿಡತನಕ್ಕೆ ಸಂಬಂದಿಸುವಂತೆಯೋ, ಹೊಂದಿಸುವಂತೆಯೋ ಇರಬೇಕು, ಅಶ್ಟೆ. ಉದಾಹರಣೆಗಳಿಗಾಗಿ, ಇದುವರೆಗೆ ಈ ತಾಣದಲ್ಲಿ ಪತ್ತಿಸಲಾಗಿರುವ ಬರಹಗಳನ್ನು ಒಮ್ಮೆ ಓದಿ ನೋಡಿ.

’ಕನ್ನಡಿಗರೂ ದ್ರಾವಿಡರೆ’ ಓದುಗೆಯನ್ನು ದಯವಿಟ್ಟು ಪಡೆದುಕೊಂಡು ಓದಿ ಎಂದು ಎಲ್ಲರಲ್ಲಿ ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ. ಹಾಗೆಯೇ, ’ಕನ್ನಡಿಗರೂ ದ್ರಾವಿಡರೆ’ ಗೆಳೆಯರ ಬಳಗಕ್ಕೂ ಸೇರಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ. ಗೆಳೆಯರ ಬಳಗವನ್ನು ಸೇರುವುದೂ ಕೂಡ ಸಂಪೂರ‍್ಣ ಉಚಿತ (ಸೇರುವುದು ಹೇಗೆಂಬುದಕ್ಕೆ ಬಳಗ ಪುಟವನ್ನು ನೋಡಿ). ಬಳಗವನ್ನು ಸೇರುವುದರಿಂದ ಯಾವುದೇ ಬಗೆಯ ತೊಂದರೆಯಾಗಲೀ, ಕಿರಿಕಿರಿಯಾಗಲೀ ನಿಮಗೆ ಎಂದೂ ಉಂಟಾಗುವುದಿಲ್ಲ.
ಇನ್ನು ಪುಸ್ತಕದ ಬಗ್ಗೆ ನಿಮಗೇನಾದರೂ ಕೇಳ್ವಿಗಳಿದ್ದರೆ kannadigarudravidare@gmail.com ಗೆ ಸಂದೇಶ ಕಳಿಸಿ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಶುಕ್ರವಾರ, ಜನವರಿ 04, 2013

ಕಪ್ಪು ಕನ್ನಡಿಗರು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಪಂಜಾಬಿ ಮೂಲದ ಕನ್ನಡ ನಟಿ ಪೂಜಾ ಗಾಂದಿಯವರ ತಾಯಿಗೆ ಕಪ್ಪು ಅಳಿಯ ಬೇಡವಂತೆ. ಹೀಗೆ ದೂರಿರುವವರು ಸ್ವತಹ ಪೂಜಾ ಗಾಂದಿಯವರ ಕಯ್ ಹಿಡಿಯಬೇಕಾಗಿದ್ದ ಆನಂದ ಗವ್‍ಡ ಎಂಬ ಕಪ್ಪು ಕನ್ನಡಿಗ. ಹೀಗೆಂದು ಎರಡು ವಾರಗಳ ಹಿಂದೆ ರಂಗುರಂಗಾಗಿ ಪ್ರಸಾರ ಮಾಡಿ ಟೀವಿ ಮಾದ್ಯಮಗಳು ಗುಲ್ಲುಪ್ರಿಯ ನೋಡುಗರ ಬಾಯಿಗೆ ಕಡಲೆ ಬೆಲ್ಲವನ್ನು ಒದಗಿಸಿದವು. ಆನಂದ ಗವ್‍ಡರು ನಿಜವಾಗಿಯೂ ಕಪ್ಪೋ, ಕಪ್ಪಿದ್ದರೂ ಎಶ್ಟು ಕಪ್ಪು ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಇಶ್ಟು ಮಾತ್ರ ಹೇಳಬಲ್ಲೆ. ಟೊಮೇಟೋದಂತಹ ಪಂಜಾಬಿಗಳಿಗೆ ಹೋಲಿಸಿದರೆ ಬರೀ ಆನಂದ ಗವ್‍ಡರಶ್ಟೇ ಅಲ್ಲ, ಹೆಚ್ಚುಕಡಿಮೆ ನಾವೆಲ್ಲ ಕನ್ನಡಿಗರೂ ಕಪ್ಪೇ.
      ಕನ್ನಡಿಗರನ್ನು ’ಕಪ್ಪು’ ಎಂದು ಬೀಳುಗರೆಯುವುದಕ್ಕೆ ಪಂಜಾಬಿಗಳಂತಹ ಬಡಗ ಮಂದಿಯೇ ಬೇಕಾಗಿಲ್ಲ. ಕನ್ನಡಿಗರೇ ತಮ್ಮತಮ್ಮಲ್ಲಿ ’ಕಪ್ಪು-ಬಿಳಿ’ ಎಂಬ ತಾರತಮ್ಯವನ್ನು ದಿನನಿತ್ಯ ಮಾಡುತ್ತಾರೆ. ಇದು ಎಲ್ಲರಿಗೂ ತಿಳಿದ ವಿಶಯ.
      ಇತ್ತೀಚೆಗೆ ಟೀವಿ ಕಾಲುವೆಯೊಂದರಲ್ಲಿ ’ಹಾಸ್ಯ ಹಬ್ಬ’ ಎಂಬ ಕಾರ‍್ಯಕ್ರಮವನ್ನು ನೋಡುತ್ತಿದ್ದೆ. ಅದರಲ್ಲಿ ಹೆಸರಾಂತ ನಗೆಗಾರ‍್ತಿ ಇಂದುಮತಿ ಸಾಲಿಮಟ್ ಅವರು ತಮ್ಮ ಬದುಕಿನಲ್ಲಿ ನಡೆದ ಒಂದು ತಮಾಶೆಯ ಸಂಗತಿಯ ಬಗ್ಗೆ ಹೇಳುತ್ತಿದ್ದರು. ಅವರ ಬಣ್ಣ ಕಪ್ಪಂತೆ. ಆದರೆ, ಅವರ ಮಕ್ಕಳಿಬ್ಬರ ಬಣ್ಣ ತಂದೆಯಂತೆ ಬಿಳಿಯಂತೆ. ಬಿಜಾಪುರದಲ್ಲಿದ್ದಾಗ ಮಕ್ಕಳನ್ನು ದಿನವೂ  ಶಾಲೆಗೆ ಬಿಡುವುದನ್ನೂ, ಮತ್ತೆ ಅಲ್ಲಿಂದ ಕರೆತರುವುದನ್ನೂ ಅವರೇ ಮಾಡುತ್ತಿದ್ದರಂತೆ. ಒಂದು ದಿನ ಶಾಲೆಯ ಮಾಸ್ತರರು ಅವರಿಗೆ ಹೇಳಿದರಂತೆ, "ಈ ಮಕ್ಕಳ ತಾಯಿಗೆ ನನ್ನನ್ನು ನಾಳೆ ಬಂದು ಕಾಣಲು ಹೇಳು" ಎಂದು! ಆಗ, "ಈ ಮಕ್ಕಳ ತಾಯಿ ನಾನೇ" ಎಂದು ಇಂದುಮತಿಯವರು ಹೇಳಿದರಂತೆ. ಅದನ್ನು ಕೇಳಿ ಮಾಸ್ತರರಿಗೆ ತುಂಬಾ ಅಚ್ಚರಿಯಾಯಿತಂತೆ. ಅದಕ್ಕೆ ಕಾರಣ, ಮಕ್ಕಳ ಮಯ್ಬಣ್ಣ ಬಿಳಿ ಇದ್ದುದರಿಂದ, ಇಂದುಮತಿಯವರ ಮಯ್ಬಣ್ಣ ಕರಿ ಇದ್ದುದರಿಂದ, ಇಂದುಮತಿಯವರು ಮನೆಗೆಲಸದಾಕೆ ಇರಬೇಕೆಂದು ಮಾಸ್ತರರು ಮನಸ್ಸಿನಲ್ಲಿ ಮುಂದಾಗೇ ತೀರ‍್ಮಾನಿಸಿಕೊಂಡುಬಿಟ್ಟಿದ್ದರಂತೆ!
      ಅಮೆರಿಕ, ಬ್ರೆಜಿಲ್, ಬಾರತ - ಹೀಗೆ ಎಲ್ಲೆಲ್ಲಿ ಕರಿ ಮತ್ತು ಬಿಳಿ ಮಯ್ಬಣ್ಣದವರು ಕಾಣಬರುತ್ತಾರೋ, ಅಲ್ಲೆಲ್ಲ ಸಮಾಜ ಮಯ್ಬಣ್ಣದಿಂದ ಮಂದಿಯ ಅಂತಸ್ತನ್ನು ಅಳೆಯುವುದು ಒಂದು ದಿನನಿತ್ಯದ ಸತ್ಯವಾಗಿಬಿಟ್ಟಿದೆ. ಬಿಳಿ ಮಯ್ಬಣ್ಣದವರಿಗೆ ಸಿಗುವ ಅವಕಾಶಗಳು ಕರಿ ಬಣ್ಣದವರಿಗೆ ಸುಲಬವಾಗಿ ಸಿಗುವುದಿಲ್ಲ. ಅಂಕಿ-ಅಂಶಗಳ ಪ್ರಕಾರ ಕರಿ ಬಣ್ಣದವರ ಒಟ್ಟಾರೆ ಸಾಮಾಜಿಕ ಮತ್ತು ಆರ‍್ತಿಕ ಮಟ್ಟ, ಬಿಳಿ ಬಣ್ಣದವರ ಮಟ್ಟಕ್ಕಿಂತ ಎದ್ದುತೋರುವಶ್ಟು ಕೆಳಗಿರುತ್ತದೆ.
      ನಮ್ಮಲ್ಲಂತೂ ಈ ಬಿಳಿ-ಕರಿ, ಮೇಲು-ಕೀಳು ವ್ಯವಹಾರ ಅಡೆತಡೆಯಿಲ್ಲದೆ ನಡೆದುಕೊಂಡು ಬಂದಿದೆ. ಸಿನಿಮಾ ಮತ್ತು ಟೀವಿಯ ದಾರಾವಾಹಿಗಳನ್ನು ಕೊಂಚ ಗಮನಿಸಿ ನೋಡಿ. ಕಲಿತವರ ಹಾಗೂ ಸಮಾಜದ ಮೇಲು ಪದರದವರ ಪಾತ್ರದಾರಿಗಳು ಸಾಮಾನ್ಯವಾಗಿ ಬಿಳಿ. ಅವಿದ್ಯಾವಂತರ, ಕೂಲಿಗಳ, ಹಳ್ಳಿಗರ ಹಾಗೂ ಕಳ್ಳಕಾಕರ ಪಾತ್ರದಾರಿಗಳು ಸಾಮಾನ್ಯವಾಗಿ ಕರಿ. ದ್ರುಶ್ಯಮಾದ್ಯಮಗಳಲ್ಲಿ ಸಮಾಜ ಹೀಗೆ ಬಿಂಬಿತವಾಗುವುದು ಆಕಸ್ಮಿಕವಲ್ಲ. ವಾಸ್ತವವಾಗಿ ಕನ್ನಡಿಗರಲ್ಲಿ ಬಹುಮಟ್ಟಿನ ಮಂದಿಗೆ ಮಯ್ಬಣ್ಣ ಕಪ್ಪೇ. ಆದರೆ, ದ್ರುಶ್ಯಮಾದ್ಯಮಗಳನ್ನು ನೋಡಿದರೆ, ಬಹುಮಟ್ಟಿನ ಕನ್ನಡಿಗರ ಮಯ್ಬಣ್ಣ ಬಿಳಿಯೇ ಇರಬೇಕು ಎನ್ನುವಂತೆ ಬಾಸವಾಗುತ್ತದೆ!
      ’ಬಿಳಿ ಬಣ್ಣ ಮೇಲು, ಕಪ್ಪು ಬಣ್ಣ ಕೀಳು’ ಎನ್ನುವ ಈ ದೋರಣೆಯಿಂದ ಕಪ್ಪು ಬಣ್ಣದವರಿಗೆ ಸಮಾಜ ಎಳವೆಯಿಂದಲೇ ಕೀಳರಿಮೆಯನ್ನು ತರಿಸುತ್ತದೆ. ಜೊತೆಗೆ, ಮಯ್ಬಣ್ಣದ ವ್ಯತ್ಯಾಸಕ್ಕೆ ಮೂಲ ಕಾರಣ ಏನು ಎಂಬುದರ ಬಗ್ಗೆ ಯಾರಿಗೂ ಶಾಲೆಗಳಲ್ಲಾಗಲೀ ಬೇರಿನ್ನೆಲ್ಲಾಗಲೀ ಕಲಿಸಲಾಗುವುದಿಲ್ಲ. ಇದರಿಂದಾಗಿ ಬಹಳಶ್ಟು ಜನರಿಗೆ ಕಪ್ಪು ಬಣ್ಣ ಯಾವುದೋ ಒಂದು ಕೆಟ್ಟ ಶಾಪದ ಪರಿಣಾಮ ಎನಿಸಿರುತ್ತದೆ.
      ಬಾರತೀಯರಲ್ಲಿ ಮಯ್ಬಣ್ಣ ಕೆಲವರಿಗೆ ಕಪ್ಪಾಗಿಯೂ, ಕೆಲವರಿಗೆ ಬಿಳಿಯಾಗಿಯೂ ಇರುವುದಕ್ಕೆ ಕಾರಣ, ಅವರಲ್ಲಿ ಆಗಿರುವ ಬಿಳಿ ಬಣ್ಣದ ಮತ್ತು ಕಪ್ಪು ಬಣ್ಣದ ಬುಡಕಟ್ಟುಗಳ ಬೆರಕೆ. ಬಹುಕಾಲದ ಈ ಊಹೆಯನ್ನು ಇತ್ತೀಚಿನ DNA ಅದ್ಯಯನಗಳೂ ಎತ್ತಿಹಿಡಿದಿವೆ. ಕನ್ನಡಿಗರ ಮಟ್ಟಿಗೆ ಹೇಳುವುದಾದರೆ, ಕನ್ನಡಿಗರಲ್ಲಿರುವ ಕರಿ-ಬಿಳಿ ಬಣ್ಣಕ್ಕೆ ಒಟ್ಟಾರೆ ಕಾರಣ ಬಿಳಿಯ ಆರ‍್ಯರ ಮತ್ತು ಕಪ್ಪು ದ್ರಾವಿಡರ ಬೆರಕೆ (ಬಾರತೀಯರ ಜನಾಂಗೀಯ ಬೆರಕೆಗಳ ಬಗ್ಗೆ ಇಂಟರ‍್ನೆಟ್ಟಿನಲ್ಲಿ ಹೇರಳವಾದ ವಯ್‍ಜ್ನಾನಿಕ ಮಾಹಿತಿ ದೊರೆಯುತ್ತದೆ. ಆಸಕ್ತರು ಅದನ್ನು ನೋಡಬಹುದು). ಅಶ್ಟೇ ಅಲ್ಲದೆ, ಕನ್ನಡಿಗರಲ್ಲಿ ಕಪ್ಪು ಬಣ್ಣದವರ ಸಂಕ್ಯೆಯೇ ಹೆಚ್ಚು. ಇದು ವಾಸ್ತವಾಂಶ. ಇಶ್ಟನ್ನು ತಿಳಿದುಕೊಂಡರೇ ಸಾಕು, ಕಪ್ಪು ಕನ್ನಡಿಗರ ಕೀಳರಿಮೆ ತನ್ನಶ್ಟಕ್ಕೆ ತಾನೇ ತಕ್ಕಮಟ್ಟಿಗೆ ನೀಗುತ್ತದೆ. ಏಕೆಂದರೆ, ಸಂಕ್ಯಾಬಲದ ಅರಿವು ಸಹಜವಾಗೇ ಶಕ್ತಿಯನ್ನು ತಂದುಕೊಡುತ್ತದೆ.
      ಆದ್ದರಿಂದ, ಕಪ್ಪು ಮಯ್ಬಣ್ಣದ ಕನ್ನಡಿಗರು ತಾವು ಕಪ್ಪಾಗಿರುವುದು ತಮ್ಮಲ್ಲಿರುವ ದ್ರಾವಿಡ ರಕ್ತದಿಂದ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ದ್ರಾವಿಡ ರಕ್ತದವರೇ ಕನ್ನಡಿಗರಲ್ಲಿ ಹೆಚ್ಚು ಮಂದಿ ಎನ್ನುವುದನ್ನೂ ಅರಿತುಕೊಳ್ಳಬೇಕು. ಅರಿತುಕೊಂಡು ಸುಮ್ಮನೆ ಕುಳಿತಿರದೆ ಉಳಿದವರಲ್ಲೂ ಈ ಅರಿವನ್ನು ಹಂಚಿಕೊಳ್ಳಬೇಕು. ದ್ರಾವಿಡ ಪರಿವೆಯನ್ನು ಹರಡಬೇಕು. ಹೀಗೆ ಮಾಡಿದರೆ, ಬರೀ ಕೀಳರಿಮೆಯನ್ನು ಹೋಗಿಸಿಕೊಳ್ಳುವುದೊಂದೇ ಅಲ್ಲ, ಬಹುಸಂಕ್ಯಾಬಲದಿಂದ ಸಮಾಜದಲ್ಲಿ ಒಳ್ಳೆಯ ಸ್ತಾನಮಾನಗಳನ್ನೂ ಕಪ್ಪು ಕನ್ನಡಿಗರು ಪಡೆದುಕೊಳ್ಳಬಹುದು.
     ನಿಜ ಹೇಳಬೇಕೆಂದರೆ, ಮೇಲಿನ ಮಾತು ಇಡೀ ಕನ್ನಡ ಸಮುದಾಯಕ್ಕೂ ಅನ್ವಯವಾಗುತ್ತದೆ. ಏಕೆಂದರೆ, ಪಂಜಾಬಿ, ಸಿಂದಿ, ಕಶ್ಮೀರಿ ಮುಂತಾದ ಬಡಗ ಸಮುದಾಯಗಳಿಗೆ ಹೋಲಿಸಿದರೆ ಇಡೀ ಕನ್ನಡ ಸಮುದಾಯನ್ನೇ ಒಟ್ಟಾರೆಯಾಗಿ ಕಪ್ಪು ಎನ್ನಬೇಕಾಗುತ್ತದೆ. ಹಾಗಾಗಿ, ನಮ್ಮ ಕಪ್ಪು ಬಣ್ಣ ನಮ್ಮ ದ್ರಾವಿಡ ಹಿನ್ನೆಲೆಯ ಪರಿಣಾಮ ಎನ್ನುವುದನ್ನು ಕನ್ನಡಿಗರು ನಾವೆಲ್ಲರೂ ಒಟ್ಟಾಗಿಯೂ ತಿಳಿದುಕೊಳ್ಳಬೇಕು. ಅಶ್ಟಕ್ಕೇ ನಿಲ್ಲದೆ, ನಮ್ಮ ನೆರೆಹೊರೆಯವರಾದ ತಮಿಳರು, ತೆಲುಗರು, ಕೇರಳೀಯರು ಮತ್ತು ಮರಾಟಿಗರು ಕೂಡ ಒಟ್ಟಾರೆ ದ್ರಾವಿಡರು, ಹಾಗಾಗಿ, ನಮ್ಮೆಲ್ಲರದು ಒಂದು ಹಿರಿದಾದ ದ್ರಾವಿಡ ಸಮುದಾಯ ಎಂಬ ಅರಿಮೆಯನ್ನೂ ಮೂಡಿಸಿಕೊಳ್ಳಬೇಕು (ಮರಾಟಿಗರ ನುಡಿ ದ್ರಾವಿಡವಲ್ಲದಿದ್ದರೂ ಅವರ ಬುಡಕಟ್ಟಿನ ಹಿನ್ನೆಲೆ ಬಹುಮಟ್ಟಿಗೆ ದ್ರಾವಿಡವೆ). ಹೀಗೆ ದ್ರಾವಿಡತನದಲ್ಲಿ ನಾವೆಲ್ಲ ಒಗ್ಗೂಡಿದರೆ ನಮಗೇ ಒಳಿತು.

ನಲ್ಮೆಯೊಡನೆ,
ಎಚ್.ಎಸ್.ರಾಜ್