ಸೋಮವಾರ, ಮಾರ್ಚ್ 25, 2013

ಮಣಿಯಿತು UPSC!

ವಿ.ಸೂ.: ವಿದಾನ ಸಬೆಯ ಚುನಾವಣೆ ಮುಗಿಯುವವರೆಗೆ, ಅಂದರೆ, ಮೇ ತಿಂಗಳ ಮೊದಲ ವಾರದವರೆಗೆ, ಬ್ಲಾಗನ್ನು ಬರೆಯುವುದರಿಂದ ಬಿಡುವು ತೆಗೆದುಕೊಂಡಿದ್ದೇನೆ - ಎಚ್.ಎಸ್.ರಾಜ್

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕೋಟಿಗಟ್ಟಲೆ ಮಂದಿಗೆ ತಾಯ್‍ನುಡಿಗಳಾಗಿದ್ದರೂ ಕನ್ನಡ, ತಮಿಳು, ತೆಲುಗು, ಮರಾಟಿ ಮುಂತಾದ ನುಡಿಗಳಿಗೆ ಕೇವಲ ’ಪ್ರಾದೇಶಿಕ ಬಾಶೆ’ ಎಂಬ ಇಳಿಗೆಯ್ವ ಹಣೆಪಟ್ಟಿ ನಮ್ಮ ದೇಶದಲ್ಲಿ! ಸಾಲದುದಕ್ಕೆ ಅವುಗಳ ಮೇಲೆ ಹಿಂದೀ ಮತ್ತು ಇಂಗ್ಲಿಶ್ ನುಡಿಗಳ ಎಡೆಬಿಡದ ದಬ್ಬಾಳಿಕೆ ಬೇರೆ. ಯಾವಾಗ ಯಾವ ರೂಪದಲ್ಲಿ ಕುತ್ತುಗಳು ಬಂದು ಅವುಗಳ ಮೇಲೆ ಎರಗುತ್ತವೋ ಎಂದು ಹೇಳಲು ಬರುವುದಿಲ್ಲ. ’ಹೋದೆಯಾ ಪಿಶಾಚೀ ಎಂದರೆ, ಬಂದೆ ಗವಾಕ್ಶೀಲಿ!’ ಎನ್ನುವ ಹಾಗೆ, ಕನ್ನಡದಂತಹ ನುಡಿಗಳ ಮೇಲೆ ಹಿಂದೀ ಮತ್ತು ಇಂಗ್ಲೀಶುಗಳ ಹಾವಳಿ ತಪ್ಪಿದ್ದಲ್ಲ. ಕಳೆದ ಎರಡು ಮೂರು ವಾರಗಳಲ್ಲಿ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿದ ಕೆಂದ್ರ ಲೋಕಸೇವಾ ಸಮಿತಿಯ (UPSC) ಹೊಸ ಪರೀಕ್ಶಾ ಕಟ್ಟಳೆಗಳೇ ಇದಕ್ಕೆ ಒಂದು ಅತ್ಯುತ್ತಮ ನಿದರ‍್ಶನ.
      ಪ್ರಾದೇಶಿಕ ಬಾಶೆಗಳಲ್ಲಿ ಪ್ರಾವೀಣ್ಯತೆ ಇದ್ದು ಪ್ರಾದೇಶಿಕ ಬಾಶೆಗಳಲ್ಲೇ ಅಯ್. ಏ. ಎಸ್. ಮುಂತಾದ ಸೇವೆಗಳಿಗಾಗಿ ನಡೆಯುವ ಪರೀಕ್ಶೆಗಳಿಗೆ ಉತ್ತರಗಳನ್ನು ಬರೆಯಲು ಬಯಸುವ ಅಬ್ಯರ‍್ತಿಗಳಿಗೆ ಹಿನ್ನಡೆಯಾಗುವ ರೀತಿಯಲ್ಲಿ ಲೋಕಸೇವಾ ಸಮಿತಿ ತನ್ನ ಹೊಸ ಪರೀಕ್ಶಾ ವಿದಾನವನ್ನು ರೂಪಿಸಿ, ಜಾರಿಗೆ ತರಲು ಹೊರಟಿತ್ತು. ಸಹಜವಾಗೇ ಪ್ರಾದೇಶಿಕ ಬಾಶೆಗಳನ್ನಾಡುವವರಿಂದ ಇದಕ್ಕೆ ಎದಿರು ವ್ಯಕ್ತವಾಗಲು ತೊಡಗಿತು. ಲೋಕಸೇವಾ ಸಮಿತಿ ಬರೀ ಇಶ್ಟೇ ಬದಲಾವಣೆ ತಂದಿದ್ದರೆ, ಅಂದರೆ, ಪ್ರಾದೇಶಿಕ ಬಾಶೆಗಳ ಅಬ್ಯರ‍್ತಿಗಳಿಗೆ ಮಾತ್ರ ಹಿನ್ನಡೆಯಾಗುವ ಹಾಗೆ ಮಾರ‍್ಪಾಡುಗಳನ್ನು ತಂದಿದ್ದರೆ, ಅದರ ಎದುರು ಹೋರಾಡುವುದು ನಮ್ಮಂತಹ ಪ್ರಾದೇಶಿಕ ಬಾಶೆಗಳನ್ನಾಡುವವರಿಗೆ ದಿಟವಾಗಿಯೂ ಕಶ್ಟವಾಗುತ್ತಿತ್ತು. ಆದರೆ, ನಮ್ಮ ಅದ್ರುಶ್ಟ ಕೊಂಚ ಚೆನ್ನಾಗಿತ್ತು ಎಂದು ಕಾಣುತ್ತದೆ. ಏಕೆಂದರೆ, ಲೋಕಸೇವಾ ಸಮಿತಿ, ಪ್ರಾದೇಶಿಕ ಬಾಶೆಗಳ ಅಬ್ಯರ‍್ತಿಗಳಿಗೆ ಕೆಡುಕು ಮಾಡುವುದರ ಜೊತೆಗೆ, ಇಂಗ್ಲಿಶ್ ಬಾಶೆಗೆ ಒತ್ತು ಕೊಟ್ಟು, ಇಂಗ್ಲಿಶ್ ಬಾಶೆಯಲ್ಲಿ ಕುಶಲತೆ ಇರುವ ಅಬ್ಯರ‍್ತಿಗಳಿಗೆ ಒಳಿತಾಗುವ ಹಾಗೆ ಕೂಡ ಮಾರ‍್ಪಾಡುಗಳನ್ನು ಮಾಡಿತ್ತು. ಇದರಿಂದಾಗಿ, ಇಂಗ್ಲಿಶ್ ಅಶ್ಟಾಗಿ ಬಾರದ, ಹಿಂದಿಯಲ್ಲಿ ಮಾತ್ರ ಕುಶಲತೆ ಇರುವ ಮಂದಿಗೂ ಹಿನ್ನಡೆಯಾಗಿತ್ತು. ಹಾಗಾಗಿ, ಹಿಂದೀ ಆಡುಗರಿಂದಲೂ ಸಮಿತಿಯ ಹೊಸ ನೀತಿಗೆ ತೀವ್ರ ವಿರೋದ ವ್ಯಕ್ತವಾಯಿತು.
      ಒಟ್ಟಿನಲ್ಲಿ, ಸಂಸತ್ತಿನಲ್ಲಿ ಹೆಚ್ಚುಕಡಿಮೆ ಎಲ್ಲಾ ಪಕ್ಶಗಳಿಂದಲೂ ಲೋಕಸೇವಾ ಸಮಿತಿ ಹೊರಡಿಸಿದ್ದ ಹೊಸ ನೀತಿಯ ಅದಿಸೂಚನೆಗೆ ಒಗ್ಗಟ್ಟಿನಿಂದ ಕೂಡಿದ ವಿರೋದ ವ್ಯಕ್ತವಾಯಿತು. ಪ್ರತಿಬಟನೆಯ ಗದ್ದಲ ಎಶ್ಟು ಗಟ್ಟಿಯಾಗಿತ್ತೆಂದರೆ, ಕಲಾಪವನ್ನು ಮೂರು ಬಾರಿ ಮುಂದೂಡಬೇಕಾಯಿತು. ಲೋಕಸೇವಾ ಸಮಿತಿಯ ತಲೆಯವರನ್ನು ಕೂಡಲೇ ವಜಾ ಮಾಡಿ ಎಂದು ಜೆಡಿಯು ಮುಂದಾಳು ಶರದ್ ಯಾದವ್ ಒತ್ತಾಯಿಸಿದರು. ಲಾಲೂ ಪ್ರಸಾದ್ ಯಾದವರ ಪಕ್ಶದ ಸದಸ್ಯ ರಗುವಂಶ್ ಸಿಂಗರು ಎರಡು ಬಾರಿ ಸಬಾದ್ಯಕ್ಶರ ಪೀಟದ ಕಡೆ ನುಗ್ಗಿ ಅದಿಸೂಚನೆ ವಿರುದ್ದ ಗೋಶಣೆ ಕೂಗಿದರು! ಇಂತಹ ಕಟ್ಟಿದಿರಿಗೆ ಮಣಿದು ಸರ‍್ಕಾರ ಬೇರೆ ದಾರಿ ಇಲ್ಲದೆ ಲೋಕಸೇವಾ ಸಮಿತಿಯ ಅದಿಸೂಚನೆಯನ್ನು ತಡೆಹಿಡಿಯುವ ನಿರ‍್ದಾರವನ್ನು ಪ್ರಕಟಿಸಿತು. ಇದೆಲ್ಲಾ ನಡೆದ ಎರಡು ನಾಳುಗಳ ಬಳಿಕ ಲೋಕಸೇವಾ ಸಮಿತಿ ತನ್ನ ಪರೀಕ್ಶಾ ಮಾದರಿಯನ್ನು ಮತ್ತೆ ರೂಪಿಸುವುದಾಗಿ ಹೇಳಿಕೆ ಕೊಟ್ಟಿತು. ಮತ್ತೆರಡು ದಿನಗಳಲ್ಲಿ, ಇಂಗ್ಲೀಶಿಗೆ ಕೊಟ್ಟಿರುವ ಒತ್ತನ್ನಶ್ಟೇ ಅಲ್ಲದೆ ಪ್ರಾದೇಶಿಕ ನುಡಿಗಳ ಮೇಲೆ ಹಾಕಿದ್ದ ಎಲ್ಲ ಅಡ್ಡಿಗಳನ್ನೂ ತೆಗೆದು ಹಾಕಿರುವುದಾಗಿ ಕೂಡಾ ತಿಳಿಸಿತು.
      ಎಲ್ಲಾ ಪಕ್ಶಗಳೂ ಹೀಗೆ ಒಟ್ಟಿಗೆ ಎದುರು ತೋರಿಸಿದ್ದರಿಂದ ನಮ್ಮ ಕನ್ನಡಕ್ಕೆ ಕುತ್ತಾಗಿದ್ದ ಅದಿಸೂಚನೆಗೆ ಬೇಗನೇ ತಡೆ ಬಿದ್ದಿತು. ಈ ಗೆಲುವು ನಮಗೆ ಸಂತಸದ ವಿಶಯವೇನೋ ಸರಿ. ಆದರೆ, ಈ ಗೆಲುವಿಗೆ ಕಾರಣವಾದ ಹೋರಾಟದಲ್ಲಿ ನಮ್ಮ ಪಾಲು ಎಶ್ಟರ ಮಟ್ಟಿನದು ಎಂಬುದು ಸರಿಯಾಗಿ ತಿಳಿಯದು. ಏಕೆಂದರೆ, ನಾನು ನೋಡಿದ ಪತ್ರಿಕೆಗಳಲ್ಲಿ ನಮ್ಮ ಕನ್ನಡ ನಾಡಿನ ಸಂಸದರು ಹೋರಾಡಿದ ಬಗ್ಗೆ ನಿರ‍್ದಿಶ್ಟ ವರದಿಗಳಿರಲಿಲ್ಲ. ಅದೇನೇ ಇರಲಿ, ಕನ್ನಡದ ಸಂಗಟನೆಗಳಲ್ಲಾದರೂ ಕೆಲವು ಹಾಗೂ ಕನ್ನಡದ ಸಾಹಿತಿಗಳಲ್ಲಾದರೂ ಕೆಲವರು ಕಂಡಿತವಾಗಿಯೂ ಲೋಕಸೇವಾ ಸಮಿತಿಯ ಅದಿಸೂಚನೆಗೆ ಕಟುವಾದ ಪ್ರತಿಬಟನೆಯನ್ನು ಸೂಚಿಸಿದ್ದರು. ಅದೇ ವೇಳೆ ಬೆಂಗಳೂರಿನಲ್ಲಿ ನಡೆದ ತೆಲುಗು ವಿಜ್‍ನಾನ ಸಮಿತಿಯ ಸಮಾರಂಬದಲ್ಲೂ ಹಲವು ತೆಲುಗು ಗಣ್ಯರು ಅದಿಸೂಚನೆಯ ಬಗ್ಗೆ ವಿರೋದವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದರು. ಇದೆಲ್ಲಾ ನಮ್ಮಲ್ಲಿ ಆಶಾಬಾವನೆಯನ್ನು ಮೂಡಿಸುವ ಸಂಗತಿ.
      ಲೋಕಸೇವಾ ಸಮಿತಿಯ ಅದಿಸೂಚನೆಯ ಬಗ್ಗೆ ಕಂಡು ಬಂದ ಪ್ರತಿಬಟನೆಯಲ್ಲಿ ಗಮನಿಸಬೇಕಾದ ಒಂದು ಮುಕ್ಯ ಅಂಶವಿದೆ. ಅದೇನೆಂದರೆ, ಹಿಂದೀವಾಲರ ಪ್ರತಿನಿದಿಗಳು ನಿಜಕ್ಕೂ ಪ್ರತಿಬಟಿಸಿದ್ದು ಇಂಗ್ಲೀಶಿಗೆ ಹೆಚ್ಚಿನ ಒತ್ತು ಸಿಕ್ಕಿದುದಕ್ಕೇ ಹೊರತು ಪ್ರಾದೇಶಿಕ ಬಾಶೆಗಳಿಗೆ ತೊಡಕು ಉಂಟಾದುದಕ್ಕಲ್ಲ!  ಪರೀಕ್ಶೆಗಳ ಹೊಸ ಮಾದರಿಯಿಂದ ಪ್ರಾದೇಶಿಕ ಬಾಶೆಗಳಿಗೆ ಮಾತ್ರ ತೊಡಕು ಉಂಟಾಗಿದ್ದರೆ, ಹಿಂದೀ ನಾಡಿನ ಮುಂದಾಳುಗಳು ಚಕಾರವನ್ನಾದರೂ ಎತ್ತುತ್ತಿದ್ದರೆ? ಹಿಂದೀವಾಲರಿಗೆ ಪ್ರಾದೇಶಿಕ ಬಾಶೆಗಳ ಬಗ್ಗೆಯೂ ಸಹಾನುಬೂತಿ ಏನಾದರು ಇದೆಯೆ? ಇದು ಬಗೆದು ನೋಡಬೇಕಾದ ವಿಚಾರ.
      ಈ ಸಲವೇನೋ ಕಾರಣಾಂತರದಿಂದ ಹಿಂದೀವಾಲರ ನೆರವು ನಮಗೆ ದೊರೆಯಿತು. ಆದರೆ, ಎಲ್ಲ ಸಂದರ‍್ಬಗಳಲ್ಲೂ ಅದು ದೊರೆಯಲಾರದು. ಆದ್ದರಿಂದ, ಎಲ್ಲ ಸಂದರ‍್ಬಗಳಲ್ಲೂ ನೆರವು ದೊರೆಯುವತ್ತ ನಮ್ಮ ಕೆಳೆಯ ಕಯ್ಯನ್ನು ನಾವು ಚಾಚಿರಬೇಕು. ಅಂದರೆ, ನಮ್ಮ ಹಾಗೇ ಕಶ್ಟಗಳನ್ನು ಎದುರಿಸಬೇಕಾದ ಬೇರೆ ಪ್ರಾದೇಶಿಕ ನುಡಿಗರಿಗೆ ನಮ್ಮ ಬೆಂಬಲವನ್ನು ನೀಡುತ್ತಿರಬೇಕು ಮತ್ತು ಅವರಿಂದ ಬೆಂಬಲವನ್ನು ಪಡೆದುಕೊಳ್ಳುತ್ತಿರಬೇಕು. ಮುಕ್ಯವಾಗಿ, ನಡೆನುಡಿಗಳಲ್ಲಿ ಹಾಗೂ ಬುಡಕಟ್ಟಿನಲ್ಲಿ ನಮ್ಮವರೆನಿಸುವ ನಮ್ಮ ಸಹದ್ರಾವಿಡರಾದ ತಮಿಳರು, ತೆಲುಗರು ಮತ್ತು ಮಲೆಯಾಳರೊಂದಿಗೆ ಸವ್‍ಹಾರ‍್ದವನ್ನೂ ಒಗ್ಗಟ್ಟನ್ನೂ ಮೂಡಿಸಿಕೊಳ್ಳಬೇಕು. ತೆಂಕಣರು ನಾವೆಲ್ಲ ದ್ರಾವಿಡತನವೆಂಬ ನಮ್ಮ ನನ್ನಿ ಹಿನ್ನೆಲೆಯ ಬಲದಿಂದ ಒಗ್ಗೂಡಬೇಕು. ಹೀಗೆ ಒಗ್ಗೂಡಿದರೆ, ಮರಾಟಿ ಮತ್ತು ಬಂಗಾಲಿಗಳಂತಹ ಬೇರೆ ಪ್ರಾದೇಶಿಕ ನುಡಿಗರ ನೆರವನ್ನು ಪಡೆದುಕೊಳ್ಳುವುದೂ ಹಗುರಾಗಬಹುದು. ಆಗ, ಕೇಂದ್ರದಿಂದ ಆಗಾಗ್ಗೆ ಬರುವ ಲೋಕಸೇವಾ ಸಮಿತಿಯ ಕೆಡುಕ ನೀತಿಗಳಂತಹ ಕುತ್ತುಗಳ ವಿರುದ್ದ ಹೋರಾಡುವುದು ನಮಗೆ ಬಹುಮಟ್ಟಿಗೆ ಸುಲಬವಾಗಬಹುದು. ನಮ್ಮ ನಡೆನುಡಿಗಳು ಉಳಿದುಕೊಳ್ಳಬಹುದು.

ನಲ್‍ಮೆಯೊಡನೆ,
ಎಚ್.ಎಸ್.ರಾಜ್

ಗುರುವಾರ, ಮಾರ್ಚ್ 14, 2013

ಗೋಹತ್ಯಾನಿಶೇದವೆಂಬ ದೊಂಬರಾಟ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಬೆಳಗಾವಿಯ ಸುವರ‍್ಣ ಸವ್ದದಲ್ಲೂ ಶಾಸಕಸಬೆಯ ಅದಿವೇಶನ ನಡೆಯಿತು. ಅದಿವೇಶನದ ಕಡೆಯ ನಾಳು, ತರಾತುರಿಯಿಂದ ಆಡಳಿತ ಪಕ್ಶ ಆವುಗೊಲೆಗೆ ತಡೆ ಹಾಕುವ ಮಸೂದೆಯನ್ನು ಸದನದ ಮುಂದೆ ಚರ‍್ಚೆಗೆ ತಾರದೆ ಗುಟ್ಟುಗುಟ್ಟಾಗಿ ಅಂಗೀಕರಿಸಿತು. ಸ್ವಾಬಾವಿಕವಾಗಿಯೆ, ಸವರ‍್ಣೀಯ ಹಿಂದೂಗಳನ್ನು ಓಲಯ್ಸುವ ಆಡಳಿತ ಪಕ್ಶದ ಈ ನುಸುಳು ರಾಜಕಾರಣದ ನಡೆಯ ಬಗ್ಗೆ ಮರುದಿನಗಳಲ್ಲಿ ಟೀವೀ ಕಾಲುವೆಗಳಲ್ಲಿ ಪರ-ವಿರೋದಿ ಚರ‍್ಚೆಗಳು ನಡೆದವು. ಇಂತಹ ಒಂದು ಕಾರ‍್ಯಕ್ರಮದಲ್ಲಿ ಶಾಸಕ ಹಸನಬ್ಬನವರು, ’ಮುಸ್ಲಿಮರಲ್ಲಿ ಬಡವರೇ ಹೆಚ್ಚು. ಗೋಮಾಂಸ ಅಗ್ಗ. ಮುಸ್ಲಿಮರು ಗೋಹತ್ಯೆ ನಿಶೇದವನ್ನು ವಿರೋದಿಸುತ್ತಿರುವುದು ಬಡತನದ ಅನಿವಾರ‍್ಯತೆಯಿಂದಾಗಿ. ಒಂದು ವೇಳೆ, ಕುರಿಯಡಗು  ಗೋಮಾಂಸಕ್ಕಿಂತ ಅಗ್ಗವಾಗಿ ದೊರೆತರೆ, ಮುಸ್ಲಿಮರು ಗೋಹತ್ಯೆ ನಿಶೇದವನ್ನು ವಿರೋದಿಸುವುದಿಲ್ಲ. ಸರ‍್ಕಾರ ಕುರಿಮಾಂಸ ಬಡವರಿಗೆ ರಿಯಾಯತಿ ದರದಲ್ಲಿ ಸಿಗುವಂತೆ ಮಾಡಬೇಕು’ ಎಂದು ಹೇಳಿದರು. ಅವರ ಹೇಳಿಕೆಗೆ ಶ್ರೀರಾಮ ಸೇನೆಯ ಮುತಾಲಿಕರು, ’ಹವುದು. ಆಕಳ ಹತ್ಯೆ ನಿಲ್ಲುತ್ತದೆ ಎನ್ನುವುದಾದರೆ, ಕುರಿಮಾಂಸವನ್ನು ಅಗ್ಗದ ಬೆಲೆಗೆ ಒದಗಿಸುವ ಏರ‍್ಪಾಟು ಆಗಬೇಕು’ ಎಂದು ಒಪ್ಪಿಗೆ ಸೂಚಿಸಿದರು. ಇದನ್ನೆಲ್ಲಾ ಕೇಳಿ ನಾನು ’ಶಿವ ಶಿವಾ’ ಎಂದುಕೊಂಡೆ.
      ಇತ್ತೀಚೆಗೆ ಗೋಹತ್ಯೆಯ ಬಗ್ಗೆ ಇನ್ನೊಂದು ಕಾರ‍್ಯಕ್ರಮವನ್ನು ಟೀವೀಯಲ್ಲಿ ನೋಡಿದೆ. ಎಂಟನೇ ತರಗತಿಯ ಹಿಂದೀ ಪಟ್ಯಪುಸ್ತಕದಲ್ಲಿ ನಮ್ಮ ’ಗೋವಿನ ಹಾಡು’ ಒಂದು ಪಾಟದ ರೂಪದಲ್ಲಿ ಅಳವಟ್ಟಿದೆಯಂತೆ. ಆದರೆ, ಆ ಪಾಟದ ಕತೆಗೂ ನಮ್ಮ ಮೂಲ ಗೋವಿನ ಹಾಡಿನ ಕತೆಗೂ ಒಂದು ಆಕ್ಶೇಪಾರ‍್ಹ ವ್ಯತ್ಯಾಸವಿದೆಯಂತೆ. ಪಾಟದ ಕತೆಯಲ್ಲಿ, ಗೋವಿನ ಸತ್ಯಸಂದತೆಗೆ ಮೆಚ್ಚಿ, ಬಗೆನೊಂದು, ಹುಲಿ, ’ಇನ್ನೆಂದೂ ನಾನು ಗೋಮಾಂಸವನ್ನು ತಿನ್ನುವುದಿಲ್ಲ’ ಎಂದು ಪ್ರತಿಜ್ನೆ ಮಾಡುತ್ತದಂತೆ (ಮೂಲ ಗೋವಿನ ಹಾಡಿನಲ್ಲಿ ಹುಲಿ ಬೆಟ್ಟದ ತುದಿಯಿಂದ ಹಾರಿ ತಂಗೊಲೆ ಗೆಯ್ದುಕೊಳ್ಳುತ್ತದೆ). ಚರ‍್ಚೆಯಲ್ಲಿ ಪಾಲ್ಗೊಂಡಿದ್ದ ಕೆಲ ದಲಿತ ಮುಂದಾಳುಗಳ ಪ್ರಕಾರ, ಹೀಗೆ ಮೂಲ ಕತೆಯನ್ನು ತಿರುಚಿದ್ದು, ಹಿಂದುತ್ವಪರ ಸರ‍್ಕಾರದ ನುಸುಳು ರಾಜಕಾರಣ. ’ಗೋಮಾಂಸವನ್ನು ತಿನ್ನುವುದು ಕೆಟ್ಟದ್ದು’ ಎಂಬ ಪ್ರಜ್ನೆಯನ್ನು ಎಳೆಯ ಮಕ್ಕಳಲ್ಲಿ ಬರಿಸುವುದೇ ಇಲ್ಲಿನ ಉದ್ದೇಶ, ಎಂಬುದು ಅವರ ವಾದ.
      ಈ ಮೇಲಿನ ಎರಡೂ ಚರ‍್ಚೆಗಳನ್ನು ನೋಡಿದ ಮೇಲೆ ನನಗೆ ಅನ್ನಿಸಿದ್ದು ಇದು - ’ಹಸು ಎಮ್ಮೆಗಳನ್ನು ಕಾಪಾಡುವುದಕ್ಕೆ ಸಾವಿರಾರು ಮಂದಿ ಇದ್ದಾರೆ. ಆದರೆ, ಕುರಿ ಕೋಳಿಗಳನ್ನು ಕಾಪಾಡುವುದಕ್ಕೆ ಮಾತ್ರ ಒಬ್ಬನೂ ಇಲ್ಲ! ಹಸು ಎಮ್ಮೆಗಳನ್ನು ತಿನ್ನುವುದು ದೊಡ್ಡ ಪಾಪ. ಅದೇ ಕುರಿ ಕೋಳಿಗಳನ್ನು ತಿನ್ನುವುದು ಪಾಪವಲ್ಲ, ಅತವ ಕಡಿಮೆ ಪಾಪ! ಹಸು ಎಮ್ಮೆಗಳ ಹತ್ಯೆ ನಿಲ್ಲುತ್ತದೆ ಎನ್ನುವುದಾದರೆ, ಕುರಿ ಕೋಳಿಗಳನ್ನು ರಿಯಾಯಿತಿ ದರದಲ್ಲಿ ಮಾರಿಸಲಿಕ್ಕೂ ಕೆಲವರು ಸಿದ್ದರಿದ್ದಾರೆ!’. ಅದೇನು ಪಾಪ ಮಾಡಿದ್ದವು ಸ್ವಾಮೀ ಕುರಿ ಕೋಳಿಗಳು? ಅವುಗಳ ನೋವು ನೋವಲ್ಲವೆ? ಪ್ರಾಣಿಗಳಲ್ಲೂ ಮೇಲು-ಕೀಳು ಎಣಿಸುವುದೇ?
      ಪ್ರಾಣಿಗಳಲ್ಲಿ ಮೇಲು-ಕೀಳು ಎಣಿಸುವುದೂ, ಮಾನವರಲ್ಲಿ ಮೇಲು-ಕೀಳು ಎಣಿಸುವುದೂ, ಇಂತಹ ಅನ್ಯಾಯದ ಪರಿಕಲ್ಪನೆಗಳು ಸದ್ಯ ದಕ್ಶಿಣದ ನಾವು ದ್ರಾವಿಡರು ಹುಟ್ಟುಹಾಕಿದವಲ್ಲ. ಈ ವಿಶಯದಲ್ಲಿ ಅದೊಂದು ಸಮಾದಾನ ನನಗೆ. ಹಾಗೆಂದು ಉತ್ತರದಿಂದ ಬಂದ ಇಂತಹ ಕೀಳು ಆಚಾರಗಳನ್ನು ನಾವೇನೂ ನಡೆಸದೆ ಬಿಟ್ಟಿಲ್ಲ. ಇದು ನಿಶ್ಚಯವಾಗಿಯೂ ಒಂದು ಕೊರಗು ನನಗೆ. ಕೆಟ್ಟ ಪದ್ದತಿಗಳನ್ನು ಹುಟ್ಟುಹಾಕುವುದು ಎಶ್ಟು ಪಾಪವೋ, ಆ ಪಾಪಗಳನ್ನು ಒಪ್ಪಿ ಆಚರಿಸುವುದೂ ಅಶ್ಟೇ ಪಾಪ, ನನ್ನ ಕಣ್ಣಿನಲ್ಲಿ.
      ಪ್ರಾಣಿಗಳ ವಿಶಯದಲ್ಲಿ ದಕ್ಶಿಣದ ಸಾದುಸಂತರು ಎಂತೆಂತಹ ಕನಿಕರದ ಮಾತುಗಳನ್ನಾಡಿದ್ದಾರೆ. ’ಇನ್ನೊಂದರ ಮಾಂಸ ತಿಂದು ತನ್ನ ಮೆಯ್ಯ ಮಾಂಸ ಹೆಚ್ಚಿಸಿಕೊಳ್ಳುವವನು, ಅದು ಹೇಗೆ ತಾನೆ ಕನಿಕರ ಉಳ್ಳವನಾಗುತ್ತಾನೆ?’ ಎಂದು ತಮಿಳಿನ ತಿರುಕ್ಕುರಲ್‍ ಬರೆದ ಸಂತ ವಳ್ಳುವಾರ್ ಕೇಳುತ್ತಾನೆ. ನಮ್ಮವನೇ ಆದ ಕನ್ನಡಿಗ ಬಸವಣ್ಣ ಹೇಳುತ್ತಾನೆ, ’ದಯೆಯೇ ದರ‍್ಮದ ಮೂಲವಯ್ಯಾ, ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂದು. ದಯೆ ಇರಬೇಕಾದುದು ’ಸಕಲ’ ಪ್ರಾಣಿಗಳಲ್ಲಿ. ಬರೀ ಹಸು ಮತ್ತು ಎಮ್ಮೆಗಳಲ್ಲಿ ಮಾತ್ರವಲ್ಲ. ಪ್ರಾಣಿದಯೆ ಸಾರುವ ಮಾತುಗಳು ಉತ್ತರದ ನಾಡುಗಳಲ್ಲೂ ಇರಬಹುದು. ಆದರೆ, ಅವುಗಳೊಂದಿಗೆ, ’ಕೆಲವು ಪ್ರಾಣಿಗಳು ದೇವರಿಗೆ ಸಮಾನ. ಅವಕ್ಕೆ ವಿಶೇಶವಾಗಿ ದಯೆ ತೋರಿರಿ’ ಎಂಬ, ’ಕೆಲವು ಪ್ರಾಣಿಗಳು ಶ್ರೇಶ್ಟ, ಉಳಿದವು ಅಲ್ಲ’ ಎಂದು ತಾರತಮ್ಯ ಮಾಡುವ ಮಾತುಗಳೂ ಅಲ್ಲಿವೆ. ದ್ರಾವಿಡರ ನಾಡಾದ ದಕ್ಶಿಣದಲ್ಲಿ ಈ ಬಗೆಯ ಇಬ್ಬಂದಿ ನೀತಿಯ ಸಂದೇಶಗಳು ನನಗೆ ತಿಳಿದಂತೆ ಇಲ್ಲ.
      ನಮ್ಮ ದ್ರಾವಿಡ ಸಂತರು ಸಮತಾಬಾವದಿಂದ ಎಶ್ಟು ಮಾತು ಹೇಳಿದ್ದರೇನು? ನಾವಂತೂ ಅದನ್ನು ಪಾಲಿಸುತ್ತಿಲ್ಲ. ಸಮತಾಬಾವದ ಮಾತುಗಳು ಹೋಗಲಿ, ಅಸಮತೆಯೇ ಆದಾರವಾಗಿರುವ ಉತ್ತರದಿಂದ ಬಂದ ಆಚರಣೆಗಳಿಗೆ ಗಟ್ಟಿಯಾಗಿ ನಾವು ಜೋತುಬಿದ್ದಿದ್ದೇವೆ. ಮೇಲು-ಕೀಳಿನ ಎಣಿಕೆಯಿಂದ ಬಂದ ಉತ್ತರದ ನಂಬಿಕೆಗಳು ದಕ್ಶಿಣದ ದ್ರಾವಿಡರಾದ ನಮಗೆ ಎಂದೂ ಆದರ‍್ಶವಾಗಬಾರದು. ಆದರೂ, ಆಗಿವೆ. ಮುಂದೆ ಎಂದಾದರೊಂದು ದಿನ, ಬಸವಣ್ಣನ ’ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂಬ ಸಂದೇಶ ನಮಗೆಲ್ಲಾ ಆದರ‍್ಶಪ್ರಾಯವಾಗುತ್ತದೆ ಎಂದು ನಂಬೋಣ. ಆದರೆ, ಅಲ್ಲಿಯವರೆಗೆ, ’ಹಸು ಎಮ್ಮೆ ಮೇಲು, ಕುರಿ ಕೋಳಿ ಕೀಳು’ ಎನ್ನುವ ಇಬ್ಬಂದಿ ನೀತಿಯ ದೊಂಬರಾಟದಿಂದ ನಾವು ಹೊರಗಿರೋಣ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಸೋಮವಾರ, ಮಾರ್ಚ್ 04, 2013

ಮಹಿಶಿ ವರದಿ ಜಾರಿ ಮಾಡಿರಿ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ನಮ್ಮ ನೆಚ್ಚಿನ(?) ಮುಂದಾಳುಗಳೆ,
      ಕನ್ನಡ ನಾಡಿನಲ್ಲಿ ಕನ್ನಡಿಗರಾದ ನಮಗೆ ನಮ್ಮ ಕವ್‍ಶಲ್ಯಕ್ಕೆ ತಕ್ಕ ಉದ್ಯೋಗ ದೊರೆಯುವುದು ನಮ್ಮ ಹುಟ್ಟಿನಿಂದಲೇ ಬಂದ ಹಕ್ಕು! ಅದನ್ನು ದೊರಕಿಸಿಕೊಡುವುದು ನಾವು ಆರಿಸಿ ಕಳಿಸಿರುವ ನಮ್ಮ ಮುಂದಾಳುಗಳಾದ ನಿಮ್ಮ ಕನಿಶ್ಟ ಕರ‍್ತವ್ಯ! ಆದರೆ, ನ್ಯಾಯವಾಗಿ ನಮಗೆ ದೊರೆಯಬೇಕಾದ ಕೆಲಸಗಳನ್ನು ನೀವು ನಮ್ಮಿಂದ ದೂರ ಮಾಡಿ ಹೊರನಾಡಿಗರ ಪಾಲು ಮಾಡುತ್ತೀರಿ. ಹಾಗೆ ಮಾಡಿ ನಮ್ಮ ಬದುಕನ್ನೇ ಕಸಿದುಕೊಳ್ಳುತ್ತೀರಿ. ಸಂಬಳ ತರುವ ಕೆಲಸವೇ ಇಲ್ಲದಿದ್ದರೆ ನಾವು ಬದುಕುವುದಾದರೂ ಹೇಗೆ? ಚೆಂದದ ಬಾಳನ್ನು ಕಟ್ಟಿಕೊಳ್ಳುವುದಾದರೂ ಹೇಗೆ?
      ಮೊದಲಿಂದಲೂ ನಮ್ಮ ನಾಡನ್ನು ಮುನ್ನಡೆಸಿಕೊಂಡು(?) ಬಂದಿರುವ ಮುಂದಾಳುಗಳು ನೀವು, ನಮ್ಮ ಕೆಲಸಗಳನ್ನು ವಲಸಿಗರ ಮಡಿಲಿಗೆ ಹಾಕಿ, ನಮ್ಮ ಬದುಕಿಗೆ ಕತ್ತಲೆ ತುಂಬಿಸುತ್ತಾ ಬಂದಿದ್ದೀರಿ. ಇಪ್ಪತ್ತಯ್ದು ವರುಶಗಳ ಹಿಂದೆಯೇ ನಮ್ಮ ಉದ್ಯೋಗಗಳನ್ನು ಹೇಗೆ ಕಾಪಾಡಬೇಕು ಎಂದು ನಿಮಗೆ, ನೀವೇ ನೇಮಿಸಿದ ಸಮಿತಿಯೊಂದು ಸಲಹೆ ಮಾಡಿತ್ತು. ಅದರ ನೆನಪಿದೆ ತಾನೆ? ಸರೋಜಿನಿ ಮಹಿಶಿ ಸಮಿತಿ ಎಂದು ಅದರ ಹೆಸರು. ಅದರ ಸಲಹೆಗಳನ್ನು ನೀವು ತಡವಿಲ್ಲದೆ ಆಗಲೇ ಜಾರಿಗೆ ತರಬೇಕಾಗಿತ್ತು. ಆದರೆ, ತರಲಿಲ್ಲ. ಅದನ್ನು ಬಿಟ್ಟು, ನಮ್ಮ ಕೆಲಸಗಳನ್ನು ವಲಸಿಗರ ಕಯ್ಗಿಡುವ, ವಲಸಿಗರನ್ನು ಓಲಯ್ಸುವ ನಿಮ್ಮ ಎಂದಿನ ಚಾಳಿಯನ್ನು ತಡೆಯಿಲ್ಲದೆ ನಡೆಸಿಕೊಂಡು ಬಂದಿರಿ! ಅಶ್ಟು ಸಾಲದು ಎಂಬಂತೆ, ಈಗೀಗ, ’ಇಪ್ಪತ್ತಯ್ದು ವರುಶಗಳ ಹಿಂದಿನ ಹಾಗೆ ಇಂದಿನ ಪರಿಸ್ತಿತಿ ಇಲ್ಲ. ಹಾಗಾಗಿ, ಅಂದಿನ ಸಲಹೆಗಳನ್ನು ಇಂದು ಜಾರಿಗೆ ತರಲು ಬರುವುದಿಲ್ಲ’ ಎಂದು ಹೇಳುತ್ತಿದ್ದೀರಿ. ’ಕಳ್ಳನಿಗೊಂದು ಪಿಳ್ಳೆ ನೆವ’ ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದೀರಿ. ನಮ್ಮ ಜಾಣ್ಮೆಯ ಮಟ್ಟವನ್ನೇ ಅಣಕಿಸುತ್ತಿದ್ದೀರಿ. ನಮ್ಮ ತಾಳ್ಮೆಯನ್ನು ಕೆಣಕುತ್ತಿದ್ದೀರಿ. ಇಶ್ಟು ವರುಶ ನಮಗೆ ಗಾಯ ಮಾಡಿದ್ದಲ್ಲದೆ, ಈಗ ಗಾಯದ ಮೇಲೆ ಬರೆಯನ್ನೂ ಎಳೆಯಲು ಹೊರಟಿದ್ದೀರಿ.
      ನಮ್ಮ ಮುಂದಾಳುಗಳಾದ ನೀವು ಅಯ್‍ವತ್ತು ವರುಶಗಳ ಹಿಂದೆ ದೇಶದ ಒಗ್ಗಟ್ಟಿನ ಹೆಸರಿನಲ್ಲಿ ನಮ್ಮ ಮೇಲೆ ತಪ್ಪು ಬಾಶಾನೀತಿಯನ್ನು ಹೊರಿಸಿದಿರಿ. ’ಇಂತಹ ಕನ್ನಡಗುಲಿ ಬಾಶಾನೀತಿ ಬೇಡ’ ಎಂದ ಕುವೆಂಪು ಅಂತಹ ಮಹನೀಯರ ಎಚ್ಚರಿಕೆಗೆ ಜಾಣಕಿವುಡು ನಟಿಸಿದಿರಿ. ತ್ರಿಬಾಶಾ ಸೂತ್ರ ಎಂಬ ಉರುಳಿಗೆ ನಮ್ಮ ಕೊರಳನ್ನು ನೂಕಿದಿರಿ. ಹಿಂದೀ ಮಾರಿಗೆ ಕನ್ನಡದ ಕಂದಮ್ಮಗಳನ್ನು ಬಲಿಕೊಟ್ಟಿರಿ. ಅದರ ಪರಿಣಾಮ ಇಂದು ಏನಾಗಿದೆ ನೋಡಿ. ಜನಸಂಖ್ಯೆ ಮಿತಿ ಮೀರಿದ ಉತ್ತರದ ಹಿಂದೀ ನಾಡುಗಳಿಂದ ನಮ್ಮ ನಾಡಿಗೆ ವಲಸಿಗರ ಹೊಳೆಯೇ ಹರಿದು ಬರುತ್ತಿದೆ. ಲಕ್ಶಲಕ್ಶ ಹಿಂದೀಯರಿಗೆ ನಮ್ಮ ನಾಡಿನಲ್ಲಿ ಬಂದು ನೆಲೆಸುವುದೂ ನಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುವುದೂ ನಮ್ಮ ಬಾಯಲ್ಲೇ ಹಿಂದೀ ಆಡಿಸುವುದೂ ನೀರು ಕುಡಿದಷ್ಟು ಸರಾಗವಾಗಿದೆ. ಇದರಿಂದಾಗಿ, ನಾವು ಮತ್ತು ನಮ್ಮ ನಡೆನುಡಿಗಳು ನಮ್ಮ ನೆಲದಲ್ಲೇ ಮೂಲೆಗುಂಪಾಗುವ ಸ್ತಿತಿ ಬಂದೊದಗಿದೆ! ನಮ್ಮ ನಾಡಿನಲ್ಲೇ ನಾವು ಅಲ್ಪಸಂಕ್ಯಾತರೂ, ಎರಡನೇ ದರ‍್ಜೆಯ ಜನರೂ ಆಗುವ ಹೊತ್ತು ಹತ್ತಿರ ಬರುತ್ತಿದೆ. ಇಶ್ಟೆಲ್ಲಾ ಕೆಡುಕು ನಡೆಯುತ್ತಿದ್ದರೂ ಮುಂದಾಳುಗಳು ನೀವು ಏನು ಮಾಡುತ್ತಿದ್ದೀರಿ? ನಮಗಾಗಿ ಇರಬೇಕಾದ ಏರ‍್ಪಾಡುಗಳನ್ನು ವಲಸಿಗರಿಗೆ ಹೊಂದುವಂತೆ ಬದಲಾಯಿಸುತ್ತಿದ್ದೀರಿ. ನಮ್ಮ ಹಿರಿಯರು ನಮಗಾಗಿ ಕೂಡಿಟ್ಟ ನಮ್ಮ ನಾಡಿನ ಎಲ್ಲ ಸವಲತ್ತುಗಳನ್ನೂ ಸಂಪನ್ಮೂಲಗಳನ್ನೂ ವಲಸಿಗರ ಪಾಲು ಮಾಡುತ್ತಿದ್ದೀರಿ.
      ನಮ್ಮ ನೆಚ್ಚಿನ(?) ಮುಂದಾಳುಗಳೆ, ಇನ್ನಾದರೂ ನಿಮ್ಮನ್ನು ನಂಬಿ ಆರಿಸಿ ಕಳಿಸಿದ ಹುಲು ಕನ್ನಡಿಗರ ಬಗ್ಗೆ ಕೊಂಚ ಯೋಚಿಸಿರಿ. ಸುಳ್ಳು ದೇಶಯ್‍ಕ್ಯತೆಯ ಪೊಳ್ಳು ನೀತಿಗಳನ್ನು ಅತ್ತ ತಳ್ಳಿ. ಕನ್ನಡತನವನ್ನು ಕಲಿತುಕೊಳ್ಳಿ. ಕನ್ನಡತನವನ್ನು ಕಲಿಸಿ. ಕನ್ನಡಿಗರಲ್ಲಿರುವ ತಮ್ಮತನದ ಅರಿವಿನ ಕೊರತೆಯನ್ನು ನೀಗಿಸಿ. ಕನ್ನಡಿಗರಿಗೆ ಅವರ ನಿಜವಾದ ಹಿನ್ನೆಲೆಯ ಬಗ್ಗೆ ಅರಿವು ಕಾಣಿಸಿ. ಕನ್ನಡ ನಡೆನುಡಿಗಳನ್ನು ಕಾಪಾಡಿ. ಕನ್ನಡಿಗರ ಬದುಕಿನ ನಾಳೆಗಳನ್ನು ಬೆಳಗಿಸಿ. ಕನ್ನಡಿಗರು ಹೊನ್ನಿನ ಬಾಳನ್ನು ಕಟ್ಟಿಕೊಳ್ಳುವುದಕ್ಕೆ ನೆರವಾಗಿ.
ಇಂತೀ ನಿಮ್ಮನ್ನು ಮತ್ತೆ ಮತ್ತೆ ನಂಬಿ ಆರಿಸಿ ಕಳಿಸುವ,
ಬಡಪಾಯಿ ಕನ್ನಡಿಗರು
(ಬರೆದವರು: ಎಚ್.ಎಸ್.ರಾಜ್ ಮತ್ತು ಪ್ರಶಾಂತ ಸೊರಟೂರ)