ಸೋಮವಾರ, ಜನವರಿ 13, 2014

ಅಚ್ಚಗನ್ನಡದ ಬಗ್ಗೆ ರಾಜಿ ಬೇಡ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕಳೆದ ವಾರ ಮಡಿಕೇರಿಯಲ್ಲಿ ಕಸಾಪ ನಡೆಸಿದ ಸಾಹಿತ್ಯ ಪರಿಶತ್ತಿನ ಕಾರ‍್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಹಂಪನಾ ಅವರು ಬಾಶಣ ಮಾಡುತ್ತಾ ಒಂದು ಒಳ್ಳೆಯ ಕಿವಿಮಾತನ್ನು ಕನ್ನಡಿಗರಿಗೆ ನೀಡಿದ್ದಾರೆ. ಅದೇನೆಂದರೆ, ಮಾತಿನ ಕನ್ನಡದಲ್ಲಿ ಮಿತಿ ಮೀರಿ ಆಂಗ್ಲ ಸೊಲ್ಲುಗಳನ್ನು ತುರುಕಬಾರದು ಎಂದು. ಎತ್ತುಗೆಗಾಗಿ, ಗುಡ್ ಮಾರ್‌ನಿಂಗ್, ಗುಡ್ ಆಫ್ಟರ‍್ನೂನ್, ಗುಡ್ ಈವನಿಂಗ್ ಮತ್ತು ಗುಡ್ ನಯ್ಟ್ ಎಂಬುವನ್ನು ಇಂಗ್ಲೀಶಿನಲ್ಲೇ ಹೇಳದೆ, ಅವನ್ನು ಕನ್ನಡಕ್ಕೆ ತಿರುಗಿಸಿ, ನಲ್‍ಬೆಳಗು, ನಲ್‍ಮದ್ಯಾನ, ನಲ್‍ಸಂಜೆ ಮತ್ತು ನಲ್‍ರಾತ್ರಿ ಎಂದು ಹೇಳಿದರೆ ಒಳ್ಳೆಯದು ಎಂದು ಸಲಹೆ ಕೊಟ್ಟಿದ್ದಾರೆ. ಹೀಗೆಂದು ಜನವರಿ ೧೦, ೨೦೧೪ ರ ಪ್ರಜಾವಾಣಿ ಸುದ್ದಿಹಾಳೆಯಲ್ಲಿ ವರದಿಯಾಗಿದೆ. ಅಚ್ಚಗನ್ನಡದ ಒಲವಿಯಾದ ನನಗೆ ಇದನ್ನು ಓದಿ ತುಂಬಾ ಸಂತೋಶವಾಯಿತು. ’ಒಳ್ಳೆಯ, ಶುಬವಾದ’ ಎಂಬ ಹುರುಳುಗಳಿರುವ ನಮ್ಮದೇ ಆದ ’ನಲ್’ಎಂಬ ಇನಿದಾದ ಈ ಅಚ್ಚಗನ್ನಡ ಮುನ್ನೊಟ್ಟು ಕನ್ನಡದಲ್ಲಿ ಬಳಕೆಯೇ ಆಗುತ್ತಿಲ್ಲ ಎಂಬ ಕೊರಗು ನನಗೆ ಬಹು ಹಿಂದಿನಿಂದಲೂ ಇದೆ. ಇಂತಹ ’ನಲ್’ ಮುನ್ನೊಟ್ಟನ್ನು ಬಳಸಿರಿ ಎಂದು ಹಂಪನಾ ಅವರಂತಹ ಹಿರಿಯ ವಿದ್ವಾಂಸರೇ ಕರೆಕೊಟ್ಟರೆಂದ ಮೇಲೆ ನನ್ನಂತಹ ಅಚ್ಚಗನ್ನಡ ಪ್ರೇಮಿಗಳಿಗೆ ಹಿಗ್ಗು ಬಾರದಿರುತ್ತದೆಯೆ?
      ನಲ್‍ಮದ್ಯಾನ, ನಲ್‍ಸಂಜೆ ಮತ್ತು ನಲ್‍ರಾತ್ರಿ - ಈ ಪದಗಳನ್ನು ನಲ್ವಗಲು, ನಲ್ವಯ್ಗು ಮತ್ತು ನಲ್ಲಿರುಳು ಎಂದು, ಸಂಸ್ಕ್ರುತದ ಸೋಂಕೇ ಇಲ್ಲದೆ, ತನಿಯಾಗಿ ಅಚ್ಚಗನ್ನಡದಲ್ಲೇ ಹೇಳಬಹುದು. ಹಂಪನಾ ಅವರು ಹೀಗೇ ಹೇಳಿದ್ದರೆ ನಮಗೆ ಇನ್ನೂ ನಲಿವಾಗುತ್ತಿತ್ತು. ಬಹುಶಹ, ಮದ್ಯಾನ, ಸಂಜೆ ಮತ್ತು ರಾತ್ರಿ ಎಂಬ ಸಂಸ್ಕ್ರುತ ಮೂಲದ ಪದಗಳೇ ಕನ್ನಡಿಗರಿಗೆ ರೂಡಿಯಾಗಿರುವ ಕಾರಣಕ್ಕೋ ಏನೋ, ಹಂಪನಾ ಅವರು ಅವನ್ನೇ ಬಳಸಿ ಹೇಳಿದ್ದಾರೆ, ಎಂದು ನನಗೆ ಅನಿಸುತ್ತದೆ. ಏಕೆಂದರೆ, ಇದೇ ರೀತಿ, ಅಚ್ಚಗನ್ನಡದಲ್ಲೇ ಪದಗಳನ್ನು ಮಾಡುತ್ತೇವೆ ಎಂದು ಹೊರಟ ಹಲವರು, ಮಂದಿಗೆ ಏನು ರೂಡಿಯಾಗಿದೆಯೋ, ಇಲ್ಲ ಮಂದಿ ಒಪ್ಪುತ್ತಾರೆಯೋ ಇಲ್ಲವೋ ಎಂಬ ಹೆದರಿಕೆಯಿಂದ ಎಶ್ಟೋ ಬಾರಿ ಶುದ್ದ ಅಚ್ಚಗನ್ನಡವನ್ನು ಬಿಟ್ಟು ತದ್ಬವಗಳನ್ನು ಬಳಸುವ ’ರಾಜಿಯನ್ನು’ ಮಾಡಿಕೊಂಡಿರುವುದನ್ನು ನಾನು ಕಂಡಿದ್ದೇನೆ. ನನ್ನ ವಯ್ಯಕ್ತಿಕ ಅಬಿಪ್ರಾಯದಲ್ಲಿ ಹೀಗೆ ರಾಜಿ ಮಾಡಿಕೊಳ್ಳುವುದು ಸರಿಯಲ್ಲ. ಏಕೆಂದರೆ, ಮಂದಿಗೆ ನುಡಿಯ ತಿಳಿವಳಿಕೆ ಇರುವುದಿಲ್ಲ. ಅವರನ್ನು ಮೆಚ್ಚಿಸಲು ತಿಳಿವಳಿಕೆ ಇರುವ ಪಂಡಿತರು ನಿಲುವನ್ನು ಸಡಿಲಿಸಿ ರಾಜಿ ಮಾಡಿಕೊಂಡರೆ, ಅದು ಕುರಿಗಳಿಗೇ ದಾರಿ ಹುಡುಕಲು ಬಿಡುವ ಕುರಿಗಾಹಿಯ ಪಾಡಿನಂತಾಗುತ್ತದೆ. ತಿಳಿದವರು ತಿಳಿಯದವರಿಗೆ ಸರಿದಾರಿ ತೋರಬೇಕೇ ಹೊರತು ಅವರೊಡನೆ ತಾವೂ ದಾರಿತಪ್ಪಬಾರದು. ಮಂದಿಯನ್ನು ಓಲಯ್ಸುವುದು ಅಶ್ಟೊಂದು ಮುಕ್ಯವಾದರೆ, ’ಅಚ್ಚಗನ್ನಡದ’ ಹೆಸರಿನಲ್ಲಿ ಮಾರ‍್ಪಾಟುಗಳನ್ನು ಸೂಚಿಸುವುದಾಗಲೀ, ಹೊಸ ಪದಗಳನ್ನು ಮಾಡಿಕೊಳ್ಳುವುದಾಗಲೀ ಏಕೆ ಮಾಡಬೇಕು? ತಮಗೆ ಬಂದ ಹಾಗೆ ಬಾಶೆಯನ್ನು ಕುಲಗೆಡಿಸಿಕೊಂಡು ಹೋಗಲಿ ಬಿಡಿ ಈ ಹಾಳಾದ ಜನ, ಎಂದು ಸುಮ್ಮನೇ ಬಿಟ್ಟರಾಯಿತಲ್ಲ?
      ಟೀವಿಯಲ್ಲಿ ಕಾರ‍್ಯಕ್ರಮದ ಕೊನೆಯಲ್ಲಿ ನಿರೂಪಕರು, ’ಗುಡ್ ನಯ್ಟ್, ಶುಬರಾತ್ರಿ’ ಎಂದು ಇಂಗ್ಲೀಶಿನಲ್ಲಿ, ಬಳಿಕ ಕನ್ನಡದಲ್ಲಿ ಹೇಳಿ ಕಾರ‍್ಯಕ್ರಮ ಮುಗಿಸುವುದನ್ನು ನಾವೆಲ್ಲ ನೋಡಿರುತ್ತೇವೆ. ಈ ಪದ್ದತಿಯ ಬಗ್ಗೆ ನಾನು ಕೇಳುವ ಕೇಳ್ವಿ ಇದು - ’ಶುಬರಾತ್ರಿ’ ಎನ್ನುವುದು ಕನ್ನಡವಲ್ಲ. ಅದು ಸಂಸ್ಕ್ರುತ. ಕನ್ನಡದಲ್ಲಿ ಹೇಳಬೇಕೆಂದಿದ್ದರೆ ಕನ್ನಡದಲ್ಲೇ ’ನಲ್ಲಿರುಳು’ ಎಂದು ಹೇಳಿ. ಕನ್ನಡದ ಹೆಸರಲ್ಲಿ ಸಂಸ್ಕ್ರುತವನ್ನು ನುಡಿದು ಕನ್ನಡಕ್ಕೆ ಅವಮಾನ ಮಾಡಿದರೆ ಕನ್ನಡಕ್ಕೆ ಏನು ಲಾಬ? "ಶುಬರಾತ್ರಿ ಎನ್ನುವುದು ಸಂಸ್ಕ್ರುತದಿಂದಲೇ ಬಂದಿರಬಹುದು, ಆದರೆ, ಅದು ಬಳಕೆಯಿಂದ ಕನ್ನಡವೇ ಆಗಿಬಿಟ್ಟಿದೆ. ಆದ್ದರಿಂದ ಅದನ್ನು ಕನ್ನಡವೆಂದೇ ತೆಗೆದುಕೊಳ್ಳಬೇಕು", ಎಂದು ವಾದಿಸುವವರಿದ್ದಾರೆ. ಇಂತಹವರಿಗೆ ನನ್ನ ಪ್ರತಿವಾದ ಇದು - ನಿಮ್ಮ ತರ‍್ಕವನ್ನು ಒಪ್ಪಿಕೊಂಡರೆ, ’ಗುಡ್ ನಯ್ಟ್’ ಎನ್ನುವುದನ್ನೂ ಕನ್ನಡವೆಂದೇ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ, ಬಳಕೆಯಲ್ಲಿ ’ಗುಡ್ ನಯ್ಟ್’ಇದೆಯೇ ಹೊರತು ’ಶುಬರಾತ್ರಿ’ಇಲ್ಲ. ಜನ ಒಬ್ಬರಿಗೊಬ್ಬರು ’ಶುಬರಾತ್ರಿ’ ಎಂದು ಹೇಳುವುದನ್ನು ನಾನು ಇದುವರೆಗೂ ನೋಡೇ ಇಲ್ಲ. ಎಲ್ಲರೂ ಸಾಮಾನ್ಯವಾಗಿ ’ಗುಡ್ ನಯ್ಟ್’ ಎಂದೇ ಹೇಳುವುದು. ಆದ್ದರಿಂದ, ಅರ‍್ತವಿಲ್ಲದ ಕನ್ನಡತನವನ್ನು ತೋರಿಸುವ ಉದ್ದೇಶದಿಂದ, ’ಗುಡ್ ನಯ್ಟ್’ ಜೊತೆಗೆ ’ಶುಬರಾತ್ರಿ’ ಯನ್ನು ಸೇರಿಸಿ ಹೇಳುವ ತಲೆ ಪ್ರತಿಶ್ಟೆಯಾದರೂ ಏಕೆ? ಈ ದೊಂಬರಾಟ ಬಿಟ್ಟು ಬರೀ ’ಗುಡ್ ನಯ್ಟ್’ ಎಂದರೆ ಸಾಲದೆ?
      ಎರವಲು ಪದಗಳ ಬಳಕೆಯಲ್ಲಿ ನಮ್ಮ ಕನ್ನಡ ವಿದ್ವಾಂಸರಿಗೆ ಇಬ್ಬಂದಿ ನೀತಿಯ ಕಾಟ ಇದೆ ಎಂದು ನನಗೆ ಅನಿಸುತ್ತದೆ. ಬರೀ ಸಂಸ್ಕ್ರುತ ಪದಗಳೇ ತುಂಬಿ ಕನ್ನಡ ಸಂಪೂರ‍್ಣ ಸಂಸ್ಕ್ರುತಮಯವಾದರೂ ಅವರಿಗೆ ಅದು ತಪ್ಪೆನಿಸುವುದಿಲ್ಲ. ಆದರೆ, ಅಲ್ಲೊಂದು ಇಲ್ಲೊಂದು ಆಂಗ್ಲ ಪದ ಅಪ್ಪಿ ತಪ್ಪಿ ಬಳಕೆಯಾದರೆ, ಅದು ಸರಿಯಲ್ಲ ಇವರ ಕಣ್ಣಲ್ಲಿ! ದ್ರಾವಿಡ ನುಡಿಯಾದ ಕನ್ನಡಕ್ಕೆ ಇಂಗ್ಲೀಶ್ ಹೇಗೆ ಹೊರಗಿನದೋ ಹಾಗೇ ಸಂಸ್ಕ್ರುತ ಕೂಡ ಹೊರಗಿನದು ಎನ್ನುವ ನನ್ನಿ ಇವರಿಗೆ ಮುಕ್ಯವಲ್ಲ. ಸಾವಿರಾರು ವರ‍್ಶಗಳಿಂದ ಕನ್ನಡದೊಡನಾಟ ಮಾಡಿ, ನಮಗೆ ಹತ್ತಿರವಾಗಿರುವ ಸಂಸ್ಕ್ರುತವನ್ನು ಅದು ಹೇಗೆ ಬೇರೆಯದು ಎಂದು ಹೇಳಲಿಕ್ಕಾಗುತ್ತದೆ?, ಎಂಬುದು ಇವರ ವಾದ. ’ಯಾವುದು ಹತ್ತಿರ?’ ಎಂಬ ಪ್ರಶ್ನೆ ಬಂದರೆ, ಇಂದು ಇಂಗ್ಲೀಶ್ ನಮಗೆ ಹತ್ತಿರವಾಗಿರುವಶ್ಟು ಸಂಸ್ಕ್ರುತ ಎಂದೂ ಆಗಿರಲಿಲ್ಲ, ಆಗುವುದೂ ಇಲ್ಲ. ಆದ್ದರಿಂದ, ಕನ್ನಡ ಸಂಸ್ಕ್ರುತಮಯವಾಗುವುದು ತಪ್ಪಲ್ಲವೆಂದಾದರೆ, ಕನ್ನಡ ಆಂಗ್ಲಮಯವಾಗುವುದೂ ತಪ್ಪಾಗಬಾರದು ತಾನೆ? ಹುರುಳಿಲ್ಲದ ಇಬ್ಬಂದಿ ನೀತಿ ಏಕೆ?
      ಕನ್ನಡಕ್ಕೆ ಎಲ್ಲ ನುಡಿಗಳಿಂದಲೂ ಪದಗಳು ಬರಲಿ. ಮಡಿವಂತಿಕೆ ಬೇಡ. ಆದರೆ, ಬಂದ ಪದಗಳದ್ದೇ ರಾಜ್ಯಬಾರವಾಗಬಾರದು. ಕನ್ನಡದ ಸೊಗಡು ಅಳಿಯಬಾರದು. ಕನ್ನಡದ ಸವಿ ಇರುವುದೇ ಕನ್ನಡದ್ದೇ ಆದ ದ್ರಾವಿಡ ಮೂಲದ ಪದಗಳಲ್ಲಿ. ಅವನ್ನು ಹೊರಗೆ ತಳ್ಳಿ, ಬೇರೆಡೆಯ ಸೊಲ್ಲುಗಳನ್ನೇ ಕನ್ನಡದಲ್ಲಿ ಜಡಿದುಕೊಂಡರೆ ಕನ್ನಡ ಕನ್ನಡವಾಗಿ ಉಳಿಯುವುದಿಲ್ಲ. ಕನ್ನಡ ಒಂದು ದ್ರಾವಿಡ ನುಡಿ ಎಂಬುದನ್ನು ನಾವು ಮರೆಯಬಾರದು. ಪಂಡಿತರಲ್ಲೂ ಪಾಮರರಲ್ಲೂ ಕನ್ನಡದ ದ್ರಾವಿಡ ಹಿನ್ನೆಲೆಯ ಅರಿವು ಯಾವಾಗಲೂ ತುಡಿಯಬೇಕು. ನಮ್ಮ ಹಾಗೂ ನಮ್ಮ ನುಡಿಯ ದ್ರಾವಿಡತನವನ್ನು ನಾವು ಕಂಡುಕೊಂಡರೆ, ಕನ್ನಡದ ಹೆಸರಿನಲ್ಲಿ ಬೇರೆ ಬಾಶೆಯ ಪದಗಳನ್ನು ಮೆರೆಸುವುದೂ ತಪ್ಪುತ್ತದೆ, ಹೊಸ ಪದಗಳನ್ನು ಮಾಡಿಕೊಳ್ಳುವಾಗ, ರಾಜಿ ಮಾಡಿಕೊಂಡು ಅರೆಬರೆ ಕನ್ನಡ ಪದಗಳನ್ನು ಮಾಡಿಕೊಳ್ಳುವುದೂ ತಪ್ಪುತ್ತದೆ. ಆಗ ನೋಡಿ, ನಮ್ಮ ನಲ್ಗನ್ನಡ ಹೆಸರಿನಲ್ಲಿ ಮಾತ್ರವಲ್ಲ, ತಿರುಳಿನಲ್ಲೂ ನಲ್ಗನ್ನಡವಾಗೇ ಉಳಿದುಕೊಳ್ಳುತ್ತದೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಕಾಮೆಂಟ್‌ಗಳಿಲ್ಲ: