ಶನಿವಾರ, ಡಿಸೆಂಬರ್ 22, 2012

ಹಿಂದಿಯಿಂದ ಕನ್ನಡಕ್ಕೆ ಕುತ್ತು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

’ಹಿಂದಿ ಅದಿಕ್ರುತ ರಾಶ್ಟ್ರಬಾಶೆಯೋ ಅನದಿಕ್ರುತ ರಾಶ್ಟ್ರಬಾಶೆಯೋ ಎನ್ನುವುದು ಮುಕ್ಯವೇ ಅಲ್ಲ. ನಿಜಪ್ರಪಂಚದಲ್ಲಿ ಹಿಂದಿಯ ವರ‍್ಚಸ್ಸಿಗೆ ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ’ - ಹಿಂದೀವಾದಿಗಳ ಈ ಜಂಬದ ಹೇಳಿಕೆಯನ್ನು ನಂಬುವುದು ’ಕನ್ನಡದಂತಹ ಬಾಶೆಗಳನ್ನು ತಳವೇ ಇಲ್ಲದ ಒಂದು ಪ್ರಪಾತಕ್ಕೆ ತಳ್ಳಿದ ಹಾಗೆ’ ಎಂಬ ಅಬಿಪ್ರಾಯದೊಂದಿಗೆ ’ಹಿಂದೀ ಕಲಿಕೆಯಿಂದ ಯಾರಿಗೆ ಲಾಬ?’ ಎಂಬ ಕಳೆದ ವಾರದ ಕಂತನ್ನು ಮುಗಿಸಿದೆ. ಈ ವಾರದ ಕಂತಿನಲ್ಲಿ ನನ್ನ ಈ ಅಬಿಪ್ರಾಯಕ್ಕೆ ಕಾರಣ ಏನು ಎಂಬುದನ್ನು ಹೇಳುತ್ತೇನೆ.
      ಲೆಕ್ಕದ ಪ್ರಕಾರ ನಮ್ಮ ದೇಶ ಒಂದು federal ಏರ‍್ಪಾಡಿನ ಒಕ್ಕೂಟ. ನಿಜವಾದ federal ಏರ‍್ಪಾಡಿನಲ್ಲಿ ಬಹುಮಟ್ಟಿನ ಅದಿಕಾರ ಮತ್ತು ಹೊಣೆಗಾರಿಕೆ ಅಂಗ ರಾಜ್ಯಗಳು ಮತ್ತು ಆ ರಾಜ್ಯಗಳ ಪ್ರಜೆಗಳ ಕಯ್ಯಲ್ಲಿರುತ್ತದೆ. ಮಿಲಿಟರಿ ಮತ್ತು ವಿದೇಶಾಂಗ ನೀತಿ ಮುಂತಾದ, ರಾಜ್ಯಗಳಿಗೆ ಮೀರಿದ ಕೆಲವೇ ಕೆಲವು ಹೊಣೆಗಾರಿಕೆಗಳು ಮಾತ್ರ ಕೇಂದ್ರ ಸರ‍್ಕಾರದ ಕಯ್ಯಲ್ಲಿರುತ್ತವೆ. ಅಮೆರಿಕ ಇಂತಹ ಏರ‍್ಪಾಡಿಗೆ ಒಂದು ಒಳ್ಳೆಯ ಉದಾಹರಣೆ. ನಮ್ಮ ದೇಶದ ಏರ‍್ಪಾಡಾದರೋ ನಿಜವಾದ federalismನಿಂದ ಸಾಕಶ್ಟು ದೂರವಿದೆ. ನಮ್ಮ ದೇಶ ಅಸ್ತಿತ್ವಕ್ಕೆ ಬಂದ ಸನ್ನಿವೇಶದಿಂದಾಗಿ ಹಾಗೂ ಮೊದಮೊದಲು ’ಸಮಾಜವಾದ’ ನಮ್ಮ ದೇಶದ ಗುರಿಯಾದದ್ದರಿಂದ, ಬಹುಮಟ್ಟಿನ ಅದಿಕಾರಗಳು ಕೇಂದ್ರ ಸರ‍್ಕಾರದ ಕಯ್ಯಲ್ಲೇ ಉಳಿದುಕೊಂಡಿವೆ. ಸಾರಿಗೆ, ಸಂಪರ‍್ಕ, ಗಣಿಗಾರಿಕೆ, ಬ್ಯಾಂಕಿಂಗ್, ಉತ್ಪಾದನೆ - ಹೀಗೆ ಕೇಂದ್ರ ಸರ‍್ಕಾರದ ಕಯ್ವಾಡ ಅನೇಕ ಕ್ಶೇತ್ರಗಳಲ್ಲಿ ಸೇರಿಕೊಂಡಿದೆ. ದೇಶದ ಒಳಗಿನ ಕಾರ‍್ಯನೀತಿಯನ್ನು ರೂಪಿಸುವ ವಿಶಯದಲ್ಲಂತೂ ಕೇಂದ್ರಕ್ಕೆ ಮಿತಿಮೀರಿದ ಅದಿಕಾರವಿದೆ (ಕೆಲ ವರ‍್ಶಗಳ ಹಿಂದೆ ಜಸ್ವಂತ್ ಸಿಂಗ್ ಎಂಬ ರಾಜನೀತಿ ಅರಿಗರು, ’ನಮ್ಮ ದೇಶದಲ್ಲಿ ನಿಜವಾದ federal ಏರ್‍ಪಾಡು ಇದ್ದಿದ್ದರೆ ಪಾಕಿಸ್ತಾನದ ನಿರ‍್ಮಾಣಕ್ಕೆ ಆಸ್ಪದವಿರುತ್ತಿರಲಿಲ್ಲ’ ಎಂದು ಪ್ರತಿಪಾದಿಸಿ ವಿವಾದ ಎಬ್ಬಿಸಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು).
      ಹೀಗೆ ರಾಜ್ಯಗಳ ಅದಿಕಾರ ಕಡಿಮೆ ಇದ್ದು ಕೇಂದ್ರದ ಅದಿಕಾರ ಹೆಚ್ಚಿರುವುದರಿಂದ, ಹಿಂದಿಯನ್ನೇನಾದರೂ ಅದಿಕ್ರುತವಾಗಿ ರಾಶ್ಟ್ರಬಾಶೆಯನ್ನಾಗಿ ಮಾಡಿದರೆ, ಇರುಳೋಇರುಳು ಕೆಂದ್ರ ತನ್ನ ಕಯ್ವಾಡವಿರುವ ಎಲ್ಲಾ ಕ್ಶೇತ್ರಗಳಲ್ಲಿ ಹಿಂದಿಯೊಂದೇ ಆಡಳಿತ ಬಾಶೆ ಎಂದು ಸಾರಿಬಿಡುತ್ತದೆ. ಹಾಗೆ ಮಾಡಲು ಅದಕ್ಕೆ ಯಾರ ಒಪ್ಪಿಗೆಯೂ ಬೇಕಾಗುವುದಿಲ್ಲ. ಸಂಸತ್ತಿನ ಕಲಾಪಗಳು ಹಿಂದಿಯೊಂದರಲ್ಲೇ ನಡೆಯತೊಡಗುತ್ತವೆ. ಉಚ್ಚ ನ್ಯಾಯಾಲಯಗಳ ವ್ಯವಹಾರ ಹಿಂದೀಮಯವಾಗುತ್ತದೆ. ಅಲ್ಲಿಗೇ ನಿಲ್ಲದೆ, ಕಾರ‍್ಯನೀತಿಯನ್ನು ರೂಪಿಸುವುದರಲ್ಲಿ ತನಗಿರುವ ಅದಿಕಾರವನ್ನು ಬಳಸಿಕೊಂಡು ಕೇಂದ್ರ ಸರ‍್ಕಾರ ರಾಜ್ಯಗಳ ವ್ಯವಹಾರಗಳಲ್ಲೂ ಹಿಂದಿಯನ್ನು ಕ್ರಮೇಣ ಕಡ್ಡಾಯಗೊಳಿಸುತ್ತದೆ. ಇದನ್ನು ವಿಪರೀತ ಕಲ್ಪನೆ ಎಂದುಕೊಳ್ಳಬೇಡಿ. ಏಕೆಂದರೆ, ಕೆಲ ವರ‍್ಶಗಳ ಹಿಂದೆ, ಕರ‍್ನಾಟಕದಲ್ಲಿ ರಾಜ್ಯಪಾಲರ ಆಡಳಿತ ಬಂದಿದ್ದಾಗ, ಮುಂಗಡಪತ್ರವನ್ನು ಹಿಂದಿಯಲ್ಲೂ ಪ್ರಕಟಿಸುವುದಾಗಿ ಸರ‍್ಕಾರ ಹೇಳಿಕೆ ಕೊಟ್ಟಿತ್ತು.
      ಹೀಗೆ, ಹಿಂದಿಗೆ ರಾಶ್ಟ್ರಬಾಶೆ ಎಂಬ ’ಅದಿಕ್ರುತ’ ಸ್ತಾನಮಾನ ಸಿಕ್ಕಿದರೆ, ಸ್ವಲ್ಪಕಾಲದಲ್ಲೇ ಎಲ್ಲೆಡೆಯಲ್ಲೂ ಅದರ ಕಲಿಕೆ ಹಾಗೂ ಬಳಕೆ ಕಡ್ಡಾಯವಾಗುತ್ತದೆ. ಬಳಕೆ ಕಡ್ಡಾಯವಾಗುವುದರಿಂದ ಅದು ಅನಿವಾರ‍್ಯವಾಗಿ ಉಪಯುಕ್ತವೂ ಆಗಿಬಿಡುತ್ತದೆ. ಇನ್ನು ಕಾಸಗಿ ಮತ್ತು ಸಾರ‍್ವಜನಿಕ ಕಣಗಳಲ್ಲಿ ಇಂಗ್ಲೀಶ್ ಹೇಗೂ ಅನದಿಕ್ರುತವಾಗಿ ಕಡ್ಡಾಯ ನುಡಿಯಾಗುತ್ತಲಿದೆ. ಈ ರೀತಿ ಎರಡು ಕಡ್ಡಾಯದ ಬಾಶೆಗಳನ್ನು ಕಲಿತು ಪಳಗಬೇಕಾದ ಪರಿಸ್ತಿತಿ ಒದಗಿ ಬಂದಾಗ, ತಮ್ಮ ತಾಯ್ನುಡಿಯನ್ನೂ ಎತ್ತಿಹಿಡಿಯುವುದು ಎಶ್ಟು ಮಂದಿಗೆ ಹೊರೆ ಎನಿಸದೆ ಇರುತ್ತದೆ? ಇಂತಹ ಒಂದು ಕೆಟ್ಟ ನೆಲೆಯಲ್ಲಿ ಸ್ತಳೀಯ ತಾಯ್ನುಡಿಗಳು ಹೇಳದೆ ಕೇಳದೆ ಮೂಲೆಗುಂಪಾಗುವುದಿಲ್ಲವೆ?
      ’ರಾಜ್ಯಗಳು ಒಪ್ಪಿದರೆ ತಾನೆ ಹಿಂದೀ ಅದಿಕ್ರುತ ರಾಶ್ಟ್ರಬಾಶೆ ಆಗುವುದು? ತಮ್ಮ ಬಾಶೆಗಳಿಗೇ ಕುತ್ತು ಉಂಟಾಗುತ್ತದೆ ಎಂದು ತಿಳಿದೂ ತಿಳಿದೂ ರಾಜ್ಯಗಳು ಏಕೆ ಒಪ್ಪುತ್ತವೆ?’ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ, ’ಒಪ್ಪುತ್ತವೆ! ತಿಳಿದೂ ತಿಳಿದೂ ಒಪ್ಪುತ್ತವೆ!’. ಉದಾಹರಣೆಗೆ, ತ್ರಿಬಾಶಾ ಸೂತ್ರಕ್ಕೆ ನಾವು ಒಪ್ಪಿದ್ದೇವಲ್ಲ? ತ್ರಿಬಾಶಾ ಸೂತ್ರವನ್ನು ಒಪ್ಪುವ ಸಮಯದಲ್ಲಿ ಕುವೆಂಪು ಅದನ್ನು ಬಲವಾಗಿ ವಿರೋದಿಸಿದ್ದರು. ’ತ್ರಿಬಾಶಾ ಸೂತ್ರ ಒಂದು  ಸೂತ್ರವಲ್ಲ. ಅದು ಮೊನೆಗಳಲ್ಲಿ ತಿಂಡಿ ಸಿಕ್ಕಿಸಿಕೊಂಡು ಬಂದಿರುವ ಒಂದು ತ್ರಿಶೂಲ’ ಎಂದು ಅದರ ನಿಜಬಣ್ಣವನ್ನು ಬಯಲು ಮಾಡಿದ್ದರು. ತ್ರಿಬಾಶಾ ಸೂತ್ರದಿಂದ ಮುಂದೆ ಹಿಂದೀ ಕೂಡ ಇಂಗ್ಲೀಶಿನಂತೆ ಒಂದು ಕಡ್ಡಾಯ ಬಾಶೆಯಾಗುತ್ತದೆ ಎಂದು ಮುಂದಾಗೇ ನಮಗೆ ತಿಳಿಸಿದ್ದರು. ಕನ್ನಡಕ್ಕೆ ಉಸಿರುಗಟ್ಟಿಸುವ ನೆಲೆಯೊದಗುತ್ತದೆ ಎಂದು ಎಚ್ಚರಿಸಿದ್ದರು. ಆದರೆ, ಅವರ ಎಚ್ಚರಿಕೆಯನ್ನು ಯಾರು ಕಿವಿಗೆ ಹಾಕಿಕೊಂಡರು?
      ರಾಶ್ಟ್ರಾಬಿಮಾನದ ಹೆಸರಿನಲ್ಲಿ, ಕೇಸರೀಕರಣದ ಕಾತರದಲ್ಲಿ, ನಮ್ಮ ನಡೆನುಡಿಗಳನ್ನೇ ಬಲಿಕೊಡಲು ಮುಂದಾಗಿರುವ ಮುಂದಾಳುಗಳು ನಮ್ಮಲ್ಲಿ ಬೇಕಾದಶ್ಟಿದ್ದಾರೆ. ಹಾಗಾಗಿ, ನಾವು ಎಚ್ಚರ ತಪ್ಪಿದರೆ, ಒಂದು ನಾಳು, ಹಿಂದೀ ’ಅದಿಕ್ರುತ ರಾಶ್ಟ್ರಬಾಶೆ’ ಆಗಿಬಿಡುವುದೇನೂ ಅಸಾದ್ಯವಲ್ಲ. ಆದ್ದರಿಂದ ನಾವು, ’ಹಿಂದೀ ಅದಿಕ್ರುತವೋ ಅನದಿಕ್ರುತವೋ ಎನ್ನುವುದು ಮುಕ್ಯವಲ್ಲ’ ಎಂಬ ಹಿಂದೀವಾಲರ ವಾದಕ್ಕೆ ಪಕ್ಕಾಗಬಾರದು. ಅದಿಕ್ರುತ ಹಿಂದಿಗೂ ಅನದಿಕ್ರುತ ಹಿಂದಿಗೂ ಹಗಲು ಇರುಳಿನಶ್ಟು ವ್ಯತ್ಯಾಸ ಇದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಹಿಂದೀಯನ್ನು ಅದಿಕ್ರುತ ಮಾಡುವುದಕ್ಕೆ ಎದಿರು ತೋರಿಸಬೇಕು. ಇದಕ್ಕೆ ಮುನ್ನಿನ ನಡೆಯಾಗಿ, ತ್ರಿಬಾಶಾ ಸೂತ್ರದಿಂದ ಕೂಡಲೆ ಹೊರಬರಬೇಕು.
      ಒಂದು ಕಾಲಕ್ಕೆ ಬಾರತದ ಬಹುಬಾಗದಲ್ಲಿ ದ್ರಾವಿಡ ನುಡಿಗಳು ಬಳಕೆಯಲ್ಲಿದ್ದವು. ಈಗ ನೋಡಿದರೆ, ದಕ್ಶಿಣದಲ್ಲಿ ಮಾತ್ರ ಕೆಲವೇ ಕೆಲವು ಉಳಿದಿವೆ. ಹೀಗೆ ಉಳಿದಿರುವ ನುಡಿಗಳಲ್ಲಿ ನಮ್ಮ ಕನ್ನಡ ನುಡಿ ಒಂದು ಮುಕ್ಯ ನುಡಿ. ಹಾಗಾಗಿ, ಕನ್ನಡವನ್ನು ಕಾಪಾಡಿಕೊಳ್ಳುವುದು ನಮಗೆ ತುಂಬಾ ಮುಕ್ಯ.
      ಇಂದು ಹಿಂದಿ ಅದಿಕ್ರುತ ರಾಶ್ಟ್ರಬಾಶೆಯಾಗಿ ಕನ್ನಡವನ್ನು ಇನ್ನೂ ನುಂಗಿ ಹಾಕದೇ ಇರುವುದಕ್ಕೆ ಕಾರಣ, ನಮ್ಮ ಸಹದ್ರಾವಿಡರಾದ ತಮಿಳರ ಬಲಿದಾನ ಮತ್ತು ಹೋರಾಟ. ಅದಕ್ಕಾಗಿ ನಾವು ತಮಿಳರಿಗೆ ರುಣಿಗಳಾಗಿರಬೇಕು. ತಮಿಳರ ಹಿಂದೀ ವಿರುದ್ದದ ಹೋರಾಟದಲ್ಲಿ ನಾವೂ ಕಯ್ ಸೇರಿಸಬೇಕು. ನಮ್ಮ ನುಡಿಗಳಾದ ಕನ್ನಡ, ತುಳು, ಕೊಡವ, ತಮಿಳು, ತೆಲುಗು ಮತ್ತು ಮಲಯಾಳಗಳನ್ನು ಕಾಪಾಡಿಕೊಳ್ಳುವುದರಲ್ಲಿ ದ್ರಾವಿಡರು ನಾವೆಲ್ಲ ಒಟ್ಟಾಗಿ ನಿಲ್ಲಬೇಕು. ಹೀಗೆ ಒಟ್ಟಾಗಿ ನಿಂತರೇನೆ ನಮ್ಮ ನುಡಿಗಳ ಉಳಿವು, ನಮ್ಮತನದ ಉಳಿವು.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ಹಾಗೂ ಅದರಿಂದ ಕನ್ನಡಕ್ಕೆ ಆಗುವ ಕೆಡುಕಿನ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.

ಶನಿವಾರ, ಡಿಸೆಂಬರ್ 15, 2012

ಹಿಂದೀ ಕಲಿಕೆಯಿಂದ ಲಾಬವಿದೆಯೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

’ಹಿಂದಿ ನಮ್ಮ ರಾಶ್ಟ್ರಬಾಶೆ. ಆದ್ದರಿಂದ ಎಲ್ಲಾ ಬಾರತೀಯರೂ ಹಿಂದಿ ಕಲಿಯಬೇಕು’ - ಇದು ಹಿಂದೀವಾದಿಗಳ ಆಗ್ರಹ. ’ಹಿಂದಿ ರಾಶ್ಟ್ರಬಾಶೆಯಲ್ಲ. ನಮ್ಮ ದೇಶಕ್ಕೆಲ್ಲಾ ಹಿಂದಿ ಒಂದೇ ರಾಶ್ಟ್ರಬಾಶೆ ಎಂದು ಸಂವಿದಾನದಲ್ಲಿ ಎಲ್ಲೂ ಹೇಳಿಲ್ಲ. ಹಿಂದಿಯನ್ನು ರಾಶ್ಟ್ರಬಾಶೆ ಎಂದು ಕರೆಯುವುದು ಒಂದು ಸುಳ್ಳು ಪ್ರಚಾರ’ - ಇದು ಹಿಂದಿ ಹೇರಿಕೆಯನ್ನು ಒಲ್ಲದ ದಕ್ಶಿಣದವರು ನಾವು ಹಿಂದೀವಾದಿಗಳ ಸುಳ್ಳನ್ನು ಬಯಲಿಗೆಳೆಯುವ ಸಲುವಾಗಿ ನೀಡುವ ಪ್ರತಿಕ್ರಿಯೆ. ವಾಸ್ತವವಾಗಿ ನಾವು ಹೇಳುವುದೇ ಸತ್ಯ. ಹಿಂದಿ ರಾಶ್ಟ್ರಬಾಶೆಯಲ್ಲ. ಇಸವಿ ೨೦೧೦ರಲ್ಲಿ ಗುಜರಾತಿನ ಉಚ್ಚ ನ್ಯಾಯಾಲಯವೇ ಹಾಗೆಂದು ತೀರ್ಪು ಕೊಟ್ಟಿದೆ.
      ಆದರೆ, ಇಂತಹ ಸತ್ಯಾದಾರಿತ ಆಕ್ಶೇಪಣೆಗಳಿಗೆಲ್ಲಾ ಜಗ್ಗುವವರಲ್ಲ ಹಿಂದೀವಾದಿಗಳು. ’ಅದಿಕ್ರುತವಾಗಿ ರಾಶ್ಟ್ರಬಾಶೆ ಅಲ್ಲದಿದ್ದರೇನು? ಅನದಿಕ್ರುತವಾಗಿ ಹಿಂದಿ ರಾಶ್ಟ್ರಬಾಶೆಯೆ. ಅದಿಕ್ರುತ ಎನ್ನುವುದು ಬರೀ ಲೇಬಲ್ಲು, ಅಶ್ಟೆ. ದಕ್ಶಿಣದ ನಿಮ್ಮನ್ನು ಬಿಟ್ಟರೆ, ದೇಶದ ಉಳಿದೆಲ್ಲಾ ಮಂದಿಗೆ ಹಿಂದಿ ಆಗಲೇ ಬರುತ್ತದೆ. ನಿಮಗೆ ಕಾಮನ್ ಸೆನ್ಸ್ ಇದ್ದರೆ ನೀವೂ ಹಿಂದಿ ಕಲಿಯುತ್ತೀರಿ. ಹಿಂದಿ ಕಲಿಯದಿದ್ದರೆ ನಿಮಗೇ ನಶ್ಟ’ - ಇದು ’ದಕ್ಶಿಣದ ನೀವು ದಡ್ಡರು. ನಿಮ್ಮನ್ನು ಕಂಡರೆ ಅಯ್ಯೋ ಪಾಪ ಎನಿಸುತ್ತದೆ’ ಎಂಬ ದಾಟಿಯಲ್ಲಿ ಅವರಿಂದ ಬರುವ ಮರುಮಾತು. ಮೇಲುನೋಟಕ್ಕೆ ಅವರ ಮಾತು ಸರಿ ಇರುವಂತೆಯೇ ಕಾಣಿಸುತ್ತದೆ. ಆದರೆ, ಕೊಂಚ ಬಿಡಿಸಿ ನೋಡಿದರೆ, ಅದರಲ್ಲಿರುವ ಹುಳುಕು ಹೊರಬರುತ್ತದೆ.
      ಹಿಂದೀಪರರ ವಾದದಲ್ಲಿ ಮುಕ್ಯವಾಗಿ ಎರಡು ಅಂಶಗಳಿವೆ. ಒಂದು - ’ಹಿಂದಿ ಕಲಿಯುವುದರಿಂದ ಹಿಂದಿಯೇತರರಿಗೆ ಲಾಬ ಇದೆ. ಹಾನಿ ಇಲ್ಲ’. ಎರಡು - ’ಹಿಂದಿ ಅದಿಕ್ರುತ ರಾಶ್ಟ್ರಬಾಶೆಯೋ ಅನದಿಕ್ರುತ ರಾಶ್ಟ್ರಬಾಶೆಯೋ ಎನ್ನುವುದು ಮುಕ್ಯವೇ ಅಲ್ಲ. ನಿಜಪ್ರಪಂಚದಲ್ಲಿ ಹಿಂದಿಯ ವರ್ಚಸ್ಸಿಗೆ ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ’. ಈಗ ಎರಡು ಅಂಶಗಳನ್ನೂ ಕೊಂಚ ಕೆದಕಿ ನೋಡೋಣ.
      ಮೊದಲು, ಹಿಂದಿ ಕಲಿಯುವುದರಿಂದ ಎಶ್ಟು ಲಾಬ ಇದೆ ಎಂಬುದರ ಬಗ್ಗೆ ಯೋಚಿಸೋಣ. ಹಿಂದೀವಾದಿಗಳು ಕೊಚ್ಚಿಕೊಳ್ಳುವ ಹಾಗೆ ದೇಶದ ಮುಕ್ಕಾಲುವಾಸಿ ಬಾಗದಲ್ಲಿ ಹಿಂದಿಯ ಬಳಕೆ ಆಗುತ್ತಿದೆ ಎಂದೇ ಒಪ್ಪಿಕೊಳ್ಳೋಣ. ಇದರಿಂದ ತಲೆಗೆ ತಟ್ಟನೆ ಹೊಳೆಯುವ ಒಂದು ಲಾಬ ಇದು - ನಾವೇನಾದರೂ ದಕ್ಶಿಣವನ್ನು ಬಿಟ್ಟು ಬಾರತದ ಉಳಿದೆಡೆಗಳಲ್ಲಿ ಪ್ರಯಾಣ ಮಾಡಬೇಕಾಗಿ ಬಂದಾಗ, ಹಿಂದಿ ಕಲಿತಿದ್ದರೆ, ಸಂಪರ‍್ಕದ ತೊಂದರೆ ಆಗುವುದಿಲ್ಲ ಎನ್ನುವುದು. ಆದರೆ, ಇದು ಒಂದು ತೀರಾ ಸಣ್ಣ ಲಾಬ. ಏಕೆಂದರೆ, ನಾವು ಪ್ರಯಾಣ ಮಾಡಿದರೆ, ಅದು ಸಾಮಾನ್ಯವಾಗಿ ದೊಡ್ಡ ದೊಡ್ಡ ಊರುಗಳಿಗೇ. ಈಗಿನ ದಿನಗಳಲ್ಲಿ ಎಲ್ಲಾ ದೊಡ್ಡ ಊರುಗಳಲ್ಲಿ ಇಂಗ್ಲೀಶ್ ಸಾಕಶ್ಟು ಚಾಲ್ತಿಯಲ್ಲಿದೆ. ಹಾಗಾಗಿ, ಹಿಂದಿಯನ್ನೇ ಬಳಸಬೇಕೆಂಬ ಅಗತ್ಯ ನಮಗೆ ಬೀಳುವುದಿಲ್ಲ.
      ಹಿಂದಿ ಕಲಿಯುವುದರಿಂದ ದಕ್ಶಿಣೇತರ ರಾಜ್ಯಗಳಲ್ಲಿ ನಮಗೆ ಆಗುವ ಇನ್ನೊಂದು ಲಾಬ ಉದ್ಯೋಗಾವಕಾಶ. ಇದರಲ್ಲಿ ಎರಡು ಬಗೆ ಇದೆ. ಮೊದಲನೆಯದು, ಹಳ್ಳಿಗಾಡಿನ ಬಡವರು ಹೊಟ್ಟೆಪಾಡಿಗಾಗಿ ಗುಳೆ ಹೊರಟು ಕೂಲಿ ಕೆಲಸಗಳನ್ನು ಪಡೆದುಕೊಳ್ಳುವುದು. ಇದಕ್ಕೆ ಹರುಕು ಮುರುಕು ಹಿಂದಿ ಬಂದರೂ ಸಾಕು. ಇದಕ್ಕೆಂದೇ ಅವ್‍ಪಚಾರಿಕವಾಗಿ ಶಾಲೆಯಲ್ಲಿ ಹಿಂದಿ ಕಲಿಯಬೇಕಾಗಿಲ್ಲ. ಎರಡನೆಯದು, ’ವಯ್ಟ್ ಕಾಲರ್’ ಕೆಲಸಗಳು. ಇದರಲ್ಲಿ ಮತ್ತೆ ಎರಡು ಬಗೆ - ಕಾಸಗಿ ವಲಯ ಮತ್ತು ಸರ‍್ಕಾರೀ ವಲಯ. ಕಾಸಗಿ ವಲಯದ ಕೆಲಸಗಳಿಗೆ ಹಿಂದೀ ಬೇಡ. ಅಲ್ಲಿ ಬಹುಮಟ್ಟಿಗೆ ಬೇಕಿರುವುದು ಇಂಗ್ಲೀಶ್. ಸರ‍್ಕಾರೀ ವಲಯದಲ್ಲಿ ಮಾತ್ರ ಅನೇಕ ಕಡೆ ಹಿಂದಿಯ ತಿಳಿವಳಿಕೆ ಬೇಕು. ಅದೂ ಅಲ್ಲದೆ, ಅಲ್ಲಿ ಹರುಕು ಮುರುಕು ಹಿಂದಿ ಸಲ್ಲುವುದಿಲ್ಲ. ಹಲವಾರು ವರ‍್ಶ ಅವ್‍ಪಚಾರಿಕವಾಗಿ ಕಲಿತು ಪಡೆದುಕೊಂಡ ಹಿಂದಿಯ ಅರಿವೇ ಅಲ್ಲಿ ನಡೆಯುವುದು.
      ಹಾಗಾಗಿ, ಅವ್‍ಪಚಾರಿಕವಾಗಿ ಹಿಂದಿ ಕಲಿಯುವುದರಿಂದ, ಕೇಂದ್ರ ಸರ‍್ಕಾರೀ ವಲಯದ ಕೆಲವು ಕೆಲಸಗಳನ್ನು ನಮ್ಮಲ್ಲಿ ಕೆಲವೇ ಕೆಲವರು ಪಡೆದುಕೊಳ್ಳುವಂತಹ ಒಂದು ಲಾಬವಿದೆ ಎಂದು ಒಟ್ಟಾರೆಯಾಗಿ ನಾವು ಹೇಳಬಹುದು, ಅಶ್ಟೆ.
      ಹೀಗೆ ಬಿಡಿಸಿ ನೋಡಿದರೆ, ಶಾಲೆಯಲ್ಲಿ ವರ‍್ಶಗಟ್ಟಲೆ ಹಿಂದೀ ಕಲಿಯುವುದರಿಂದ ಹಿಂದೀಯೇತರರಿಗೆ ಲಾಬವಿದೆ ಎಂಬ ವಾದ ಒಂದು ಅಣಕದಂತೆ ಕಾಣುತ್ತದೆ. ಅಬ್ಬಬ್ಬ ಎಂದರೆ, ನಮ್ಮ ನೂರರಲ್ಲಿ ಒಬ್ಬನಿಗೆ, ಇಲ್ಲ ಇಬ್ಬರಿಗೆ, ಹೋಗಲಿ ಮೂವರಿಗೆ ಅದರಿಂದ ಅರ‍್ತಪೂರ‍್ಣ ಲಾಬವಾಗಬಹುದೆ? ಅದಕ್ಕಿಂತ ಹೆಚ್ಚಿನ ಮಂದಿಗೆ ಲಾಬವಾಗುವುದು ಕಾಣೆ. ಈ ಸಂಪತ್ತಿಗೆ ’ನಾವೆಲ್ಲರೂ’ ಯಾಕೆ ಹಿಂದೀ ಕಲಿಯಬೇಕು? ಹೀಗೆ ಸರಿಯಾದ ಕಣ್ಣೋಲಿನಿಂದ ನೋಡಿದರೆ, ತ್ರಿಬಾಶಾ ಸೂತ್ರ ಎಂತಹ ಒಂದು ಕೆಲಸಕ್ಕೆ ಬಾರದ ಸೂತ್ರ ಎಂಬುದು ಕೂಡಲೆ ಗೊತ್ತಾಗುತ್ತದೆ. ಆದ್ದರಿಂದ, ಏನಾದರೂ ನಮಗೆ ಚೂರುಪಾರು ಬುದ್ದಿ ಇದ್ದರೆ, ನಾವು ಕೂಡಲೇ ಈ ಸೂತ್ರದಿಂದ ಹೊರಕ್ಕೆ ಬರಬೇಕು.
      ಹಾಗಾದರೆ, ಹಿಂದಿ ಕಲಿಯುವುದರಿಂದ ಏನೂ ಉಪಯೋಗ ಇಲ್ಲ ಎಂದು ಹೇಳುತ್ತಿದ್ದೀರೇನು? ಎಂದು ನೀವು ಕೇಳಬಹುದು. ಇಲ್ಲ ಇಲ್ಲ. ಉಪಯೋಗ ಇಲ್ಲ ಎಂದು ನಾನು ಹೇಳುತ್ತಿಲ್ಲ. ಉಪಯೋಗ ಇದೆ. ಆದರೆ, ನಮಗಲ್ಲ. ನಾವು ಹಿಂದಿ ಕಲಿಯುವುದರಿಂದ ಹಿಂದೀವಾಲರಿಗೆ ಬೇಕಾದಶ್ಟು ಉಪಯೋಗ ಇದೆ! ಹಿಂದಿಯೇತರರು ಹಿಂದಿ ಕಲಿಯುವುದರಿಂದ ಒಂದು ಹನಿ ಬೆವರು ಕೂಡ ಸುರಿಸದೆ ಇಡೀ ದೇಶವೇ ಹಿಂದೀವಾಲರಿಗೆ ಒಂದು ಆಟದ ಬಯಲಾಗುತ್ತದೆ.
      ’ಹೋಗಲಿ ಬಿಡಿ. ಅವರಿಗೆ ಲಾಬ ಆದರೆ ನಾವ್ಯಾಕೆ ಕರುಬಬೇಕು? ನಮಗೇನೂ ನಶ್ಟ ಇಲ್ಲ ತಾನೆ?’ ಎಂದು ಕೆಲವರು ಕೇಳಬಹುದು. ಸತ್ಯವಾಗಿಯೂ ನಶ್ಟ ಇದೆ ಸ್ವಾಮೀ. ಅದಕ್ಕಾಗೇ ನಾವು ತಲೆ ಕೆಡಿಸಿಕೊಳ್ಳಬೇಕಾಗಿರುವುದು. ನಾವು ಹಿಂದಿ ಕಲಿತರೆ ನಮ್ಮ ನುಡಿ ಬರೀ ಮನೆಯ ನುಡಿಯಾಗುತ್ತದೆ. ಹೊರಗೆ ಎಲ್ಲಾ ಕಡೆ ಹಿಂದಿಯೇ ಮೊದಲ ನುಡಿಯಾಗಿ ರಾರಾಜಿಸುತ್ತದೆ. ನನ್ನ ಮಾತಿನಲ್ಲಿ ನಿಮಗೆ ನಂಬಿಕೆ ಬರದಿದ್ದರೆ ಒಮ್ಮೆ ಬಾಂಬೆ ಕಡೆ ನೋಡಿ. ಅಲ್ಲಿ ಹಿಂದಿಯೇ ಮನೆಮಾತಾಗಿರುವ ಅಸಲೀ ಹಿಂದೀವಾಲರು ನಿಜಕ್ಕೂ ಅಲ್ಪಸಂಕ್ಯಾತರು. ಆದರೂ ಬಾಂಬೆಯ ವ್ಯಾವಹಾರಿಕ ನುಡಿ, ಎಲ್ಲರೂ ಬಳಸುವ ಮೊದಲ ನುಡಿ, ಹಿಂದಿಯೇ!
      ಬಾಂಬೆಯ ಚಾಯೆ ಬೆಂಗಳೂರಿನಲ್ಲೂ ಈಗ ಡಾಳಾಗಿ ಕಾಣತೊಡಗಿದೆ. ಹಿಂದೀವಾಲರು ಎಲ್ಲಾ ಕಡೆ ಹಿಂದಿಯಲ್ಲೇ ಮಾತಾಡಿ ಜಯಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬೆಂಗಳೂರಿನಲ್ಲಿ ವಾಸ ಮಾಡುವುದು ಅವರ ರಾಜ್ಯದಲ್ಲೇ ಇನ್ನೊಂದು ಊರಿನಲ್ಲಿ ವಾಸ ಮಾಡಿದಶ್ಟು ಹಗುರ ಆಗಿದೆ. ಇದು ಹೀಗೇ ಮುಂದುವರಿದರೆ, ಬಾಂಬೆಯ ಹಾಗೇ, ಬೆಂಗಳೂರಿನ ಮೊದಲ ನುಡಿ ಕೂಡ ಹಿಂದಿ ಆಗುವುದರಲ್ಲಿ ಸಂದೇಹವಿಲ್ಲ. ಇದು ಇಶ್ಟಕ್ಕೇ ನಿಲ್ಲುವುದಿಲ್ಲ. ಕಾಲ ಸರಿದಂತೆ, ನಮ್ಮ ಎಲ್ಲ ದೊಡ್ಡ ಊರುಗಳಲ್ಲೂ ಇದೇ ಸನ್ನಿವೇಶ ಏರ‍್ಪಡುತ್ತದೆ. ಹೀಗಾದರೆ ನಶ್ಟವಲ್ಲದೆ ಇನ್ನೇನು? ಕನ್ನಡ ನಾಡಿನಲ್ಲಿ ಎಲ್ಲೆಡೆ ಕನ್ನಡವಲ್ಲದೆ ಇನ್ನಾವುದೋ ಬಾಶೆ ಮೆರೆಯುವಂತಾದರೆ ಅದು ನಶ್ಟವಲ್ಲದೆ ಮತ್ತಿನ್ನೇನು?
      ’ಈ ರೀತಿ ಹಿಂದಿ ಎಲ್ಲ ದೊಡ್ಡ ಊರುಗಳಲ್ಲಿ ಚಾಲ್ತಿಗೆ ಬರುವುದು ಹೇಗೂ ಆಗೇ ಆಗುತ್ತದೆ. ಅದನ್ನು ತಡೆಯಲಿಕ್ಕೆ ಆಗುವುದಿಲ್ಲ’ ಎಂದು ಕೆಲವರು ಹೇಳಬಹುದು. ಅಂತಹವರಿಗೆ ನಾನು ಹೇಳುವುದಿಶ್ಟೆ - ಒಮ್ಮೆ ತಮಿಳುನಾಡಿನ ದೊಡ್ಡ ಊರುಗಳಲ್ಲಿ ಸುತ್ತಾಡಿಕೊಂಡು ಬನ್ನಿ ಎಂದು. ತಮಿಳರು ಹಿಂದಿಯನ್ನು ಕಲಿಯಲಿಕ್ಕೇ ಹೋಗಲಿಲ್ಲ. ಅದರಿಂದ ಅವರಿಗೇನೂ ನಶ್ಟವಾಗಲಿಲ್ಲ. ಬದಲಾಗಿ ಅವರಿಗೆ, ’ಹಿಂದಿ ಬಂದು ವಕ್ಕರಿಸಿಕೊಂಡರೆ ಹೇಗಪ್ಪಾ?’ ಎಂದು ಅಂಜುವ ಅಗತ್ಯವೇ ಇರದ ಒಂದು ಸನ್ನಿವೇಶ ನಿರ‍್ಮಾಣದ ಲಾಬವೇ ಆಯಿತು. ಈ ವಿಶಯದಲ್ಲಿ ಅಹಂಬಾವ ಬದಿಗೊತ್ತಿ ತಮಿಳರಿಂದ ನಾವು ಕಲಿಯಬೇಕು.
    ಒಟ್ಟಾರೆ ಹೇಳಬೇಕೆಂದರೆ, ಹಿಂದೀಪರರ ’ಹಿಂದಿ ಕಲಿತರೆ ನಿಮಗೇ ಲಾಬ’ ಎನ್ನುವ ವಾದವನ್ನು ಒಪ್ಪುವುದೂ ನಮ್ಮ ತಾಯ್ನುಡಿಯನ್ನು ಹಳ್ಳಕ್ಕೆ ತಳ್ಳುವುದೂ, ಎರಡೂ ಒಂದೆ. ಇನ್ನು ಅವರ ಇನ್ನೊಂದು ವಾದ, ’ಹಿಂದಿ ಅದಿಕ್ರುತ ರಾಶ್ಟ್ರಬಾಶೆಯೋ ಅನದಿಕ್ರುತ ರಾಶ್ಟ್ರಬಾಶೆಯೋ ಎನ್ನುವುದು ಮುಕ್ಯವಲ್ಲ’ ಎನ್ನುವುದನ್ನು ಒಪ್ಪುವುದಂತೂ ಕನ್ನಡದಂತಹ ಬಾಶೆಗಳನ್ನು ತಳವೇ ಇಲ್ಲದ ಒಂದು ಪ್ರಪಾತಕ್ಕೆ ತಳ್ಳಿದ ಹಾಗೆ. ಅದರ ಬಗ್ಗೆ ಮುಂದಿನ ಕಂತಿನಲ್ಲಿ ಮಾತಾಡೋಣ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ಹಾಗೂ ಅದರಿಂದ ಕನ್ನಡಕ್ಕೆ ಆಗುವ ಕೆಡುಕಿನ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.

ಶನಿವಾರ, ಡಿಸೆಂಬರ್ 08, 2012

ದ್ರಾವಿಡರ ಇರುವಿಕೆ ಸುಳ್ಳೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಗಣೇಶನ ಹಬ್ಬದ ನಾಳು ಟೀವಿ ಕಾರ‍್ಯಕ್ರಮವೊಂದರಲ್ಲಿ ಗಣೇಶನ ಬಗ್ಗೆ ಚರ‍್ಚೆ ಮಾಡಲಿಕ್ಕೆಂದು ಇಬ್ಬರು ವಿದ್ವಾಂಸರು ಬಂದಿದ್ದರು - ಒಬ್ಬರು ಡಾ. ಕೆ.ಎನ್. ಗಣೇಶಯ್ಯನವರು, ಇನ್ನೊಬ್ಬರು ಡಾ. ಆರ್. ಗಣೇಶ್ ಶತಾವದಾನಿಗಳು. ಗಣೇಶನ ಹಬ್ಬ, ಗಣೇಶನ ಮೇಲೆ ಚರ‍್ಚೆ, ಚರ‍್ಚೆಗೆ ಬಂದವರು ಗಣೇಶಯ್ಯ ಮತ್ತು ಗಣೇಶ್! ಚೆನ್ನಾಗಿದೆ ತಾನೆ? ಸರ‍್ವಂ ಗಣೇಶಮಯಂ :)
      ತಮಾಶೆ ಹಾಗಿರಲಿ ಬಿಡಿ. ಚರ‍್ಚೆ ಕುತೂಹಲಕಾರಿಯಾಗಿತ್ತು. ಚರ‍್ಚೆಯ ನಡುವೆ ಗಣೇಶಯ್ಯನವರು ಒಂದುಕಡೆ ಸಾಂದರ‍್ಬಿಕವಾಗಿ ’ದ್ರಾವಿಡ’ ಎಂಬ ಪದವನ್ನು ಎತ್ತಿದರು. ದ್ರಾವಿಡ ಎಂಬ ಪದ ಕೇಳಿದ ಕೂಡಲೆ ಅವದಾನಿಗಳು, ’ಆರ‍್ಯ ದ್ರಾವಿಡ ಅಂತೆಲ್ಲಾ ಯಾಕೆ ತರ‍್ತೀರಿ? ಅದೆಲ್ಲಾ ಅವಯ್‍ಜ್ನಾನಿಕ’ ಎಂದುಬಿಟ್ಟರು. ಗಣೇಶಯ್ಯನವರು ಅದಕ್ಕೆ ಪ್ರತಿಯಾಗಿ ಏನೂ ಹೇಳಲಿಲ್ಲ. ಅದು ಅಲ್ಲಿಗೆ ಹಾಗೇ ಮುಗಿಯಿತು.
      ಆರ‍್ಯ-ದ್ರಾವಿಡ ಸಿದ್ದಾಂತವನ್ನು ಅವಯ್‍ಜ್ನಾನಿಕ ಎಂದು ಕರೆದಿರುವುದು ಗಣೇಶ್ ಅವದಾನಿಗಳು ಮಾತ್ರವಲ್ಲ. ಇನ್ನೂ  ಕೆಲವರು ಅದನ್ನು ಹಾಗೇ ವರ‍್ಗೀಕರಿಸಿದ್ದಾರೆ. ಬರೀ ಅವಯ್‍ಜ್ನಾನಿಕ ಎಂದು ಕರೆಯುವುದಶ್ಟೇ ಏಕೆ, ’ಆರ‍್ಯ-ದ್ರಾವಿಡ ಎನ್ನುವುದೆಲ್ಲ ಬರಿ ಸುಳ್ಳು. ಬ್ರಿಟಿಶರು ನಮ್ಮನ್ನು ಒಡೆದು ಆಳುವುದಕ್ಕೆಂದು ಗುಳ್ಳೆನರಿಗಳಂತೆ ಹುಟ್ಟುಹಾಕಿದ ಕಟ್ಟುಕತೆ ಅದು’ ಎಂದು ತುಂಬು ನಂಬಿಕೆಯಿಂದ ವಾದಿಸುವವರೂ ಇದ್ದಾರೆ.
      ಚರಿತ್ರೆಯನ್ನು ನೋಡಿದರೆ, ಬ್ರಿಟಿಶರು ನಮ್ಮನ್ನು ಹೊಸದಾಗಿ ಒಡೆಯುವುದಕ್ಕಿಂತ ಹೆಚ್ಚಾಗಿ ನಮ್ಮಲ್ಲಿ ಆಗಲೇ ಇದ್ದ ಒಡಕುಗಳನ್ನು ಸಮರ‍್ತವಾಗಿ ಬಳಸಿಕೊಂಡಹಾಗೆ ಕಾಣುತ್ತದೆ. ಬ್ರಿಟಿಶರು ಗುಳ್ಳೆನರಿಗಳೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಎಶ್ಟರ ಮಟ್ಟಿನ ಗುಳ್ಳೆನರಿಗಳು? ನಮ್ಮ ರಕ್ತದೊಳಗೇ ಹೊಕ್ಕು ನಮ್ಮ 'DNA code' ಅನ್ನೇ ಮಾರ‍್ಪಡಿಸುವಶ್ಟರ ಮಟ್ಟಿನ ಗುಳ್ಳೆನರಿಗಳೆ? ಯಾಕೆ ಹೀಗೆ ಕೇಳುತ್ತಿದ್ದೇನೆಂದರೆ, ಕೆಲವರ‍್ಶಗಳಿಂದೀಚೆಗೆ ಮಾನವಶಾಸ್ತ್ರಜ್ನರು ಜನರ ಬುಡಕಟ್ಟಿನ ಹಿನ್ನೆಲೆಯನ್ನು ಪತ್ತೆ ಹಚ್ಚುವುದಕ್ಕೆ DNA codeಅನ್ನು ಬಿಡಿಸಿ ನೋಡುತ್ತಿದ್ದಾರೆ. ಅದರಲ್ಲಿ ಹಿಂದೆಂದೂ ಕಂಡಿರದಂತಹ ಯಶಸ್ಸನ್ನೂ ಕಾಣುತ್ತಿದ್ದಾರೆ (ಅಂದ ಹಾಗೆ, DNA ಕೋಡಿನಿಂದ ಜನಾಂಗೀಯ ಹಿನ್ನೆಲೆಯನ್ನು ಕಂಡುಹಿಡಿಯುವ ಪ್ರಕ್ರಿಯೆಯನ್ನು ’ಅವಯ್‍ಜ್ನಾನಿಕ’ ಎಂದು ಕರೆದು, ಅದನ್ನು ಒಪ್ಪುವಂತೆ ಸಮರ‍್ತಿಸಿಕೊಂಡವರ ಬಗ್ಗೆ ನಾನು ಇದುವರೆಗೂ ಕೇಳಿಲ್ಲ).
      ಇಲ್ಲಿಯವರೆಗೆ ಬಾರತೀಯ ಸಮುದಾಯಗಳ ಮೇಲೆ ನಡೆಸಿರುವ DNA ಅದ್ಯಯನಗಳು ಬಾರತೀಯರಲ್ಲಿ ಬುಡಕಟ್ಟುಗಳ ಬೆರಕೆ ಆಗಿದೆ ಎಂದೇ ಹೇಳುತ್ತಿವೆ. ಆರ‍್ಯ ಮತ್ತು ದ್ರಾವಿಡ ಜನಾಂಗಗಳ ಒಟ್ಟಾರೆ ಇರುವಿಕೆಯನ್ನು ನಂಬತಕ್ಕಂತೆ ಎತ್ತಿ ಹಿಡಿದಿವೆ (ಇದು ನನ್ನ ಸ್ವಂತ ಅಬಿಪ್ರಾಯವಲ್ಲ. ವಿದ್ವಾಂಸರ ಅಬಿಪ್ರಾಯ. ಇದಕ್ಕೆ ವಿವರವಾಗಿ ಆದಾರಗಳನ್ನು ಕೊಡುವುದು ಈ ಬ್ಲಾಗಿನ ವ್ಯಾಪ್ತಿಗೆ ಮೀರಿದುದು. ಆಸಕ್ತಿ ಇರುವವರಿಗೆ ಇಂಟರ‍್ನೆಟ್ಟಿನಲ್ಲಿ ಇದರ ಬಗ್ಗೆ ಹೇರಳವಾದ ಆದಾರ ದೊರೆಯುತ್ತದೆ). ಆದರೂ ಆರ‍್ಯ-ದ್ರಾವಿಡ ಸಿದ್ದಾಂತವನ್ನು ’ಅವಯ್‍ಜ್ನಾನಿಕ’, ’ಬ್ರಿಟಿಶರ ಕಿಡಿಗೇಡಿತನದ ಪರಿಣಾಮ’ ಎಂದು ಮುಂತಾಗಿ ಕರೆದು ಅಲ್ಲಗಳೆಯುವುದು ಕೆಲವರಿಂದ ನಡೆದೇ ಇದೆ.
      ಆರ‍್ಯ-ದ್ರಾವಿಡ ಸಿದ್ದಾಂತದಲ್ಲಿ ಎರಡು ಮುಕ್ಯ ಅಂಶಗಳಿವೆ. ಒಂದು - ಬಾರತದಲ್ಲಿ ಆರ‍್ಯ ಮತ್ತು ದ್ರಾವಿಡ ಎಂಬ ಜನಾಂಗಗಳ ಅಸ್ತಿತ್ವ. ಎರಡನೆಯದು - ಆ ಜನಾಂಗಗಳ ಹುಟ್ಟು ಹಾಗೂ ಅವುಗಳ ನಡುವೆ ಮೊತ್ತಮೊದಲು ಉಂಟಾದ ಸಂಪರ‍್ಕದ ಕಾಲ ಮತ್ತು ಬಗೆ. ಇದರಲ್ಲಿ ಎರಡನೆಯದು ಉಪಯುಕ್ತತೆಯ ಲೆಕ್ಕದಲ್ಲಿ ದೊಡ್ಡದಲ್ಲ. ಆರ‍್ಯರು ಮತ್ತು ದ್ರಾವಿಡರು ಬಾನಿಂದ ಬಿದ್ದಿದ್ದರೇನು, ನೆಲದಿಂದ ಎದ್ದಿದ್ದರೇನು - ಅದರಿಂದ ಬಾಳ್ತೆಯಿಲ್ಲ. ಹಾಗೇ, ಅವರಿಬ್ಬರೂ ಎಶ್ಟು ಹಿಂದೆ ಮೊತ್ತಮೊದಲ ಬಾರಿಗೆ ಒಬ್ಬರನ್ನೊಬ್ಬರು ಎದುರಾದರು ಎಂಬುದೂ ದೊಡ್ಡದಲ್ಲ. ಯಾವುದು ದೊಡ್ಡದು ಎಂದರೆ, ಅವರಿಬ್ಬರೂ ಇರುವುದು ನಿಜವೆ ಎನ್ನುವುದು. ಅದಕ್ಕಿಂತಲೂ ದೊಡ್ಡದು, ಅವರಿಬ್ಬರ ನಡುವೆ ತಾಕಲಾಟ ನಡೆಯುತ್ತ ಬಂದಿದೆಯೆ ಎನ್ನುವುದು. ಇದುವರೆಗಿನ DNA ಅದ್ಯಯನಗಳು ಬಾರತದಲ್ಲಿ ಅವರಿಬ್ಬರೂ ಇರುವುದು ಹಾಗೂ ಬೆರೆತಿರುವುದು ಸತ್ಯ ಎಂದೇ ತೋರಿಸುತ್ತಿವೆ. ಇದೇ ಮುಕ್ಯ. ಇದೇ ನಮಗೆ ಉಪಯೋಗಕ್ಕೆ ಬರುವ ಕಂಡುಹಿಡಿಕೆ. ಏಕೆಂದರೆ, ಆರ‍್ಯರ ಮತ್ತು ದ್ರಾವಿಡರ ಇರುವಿಕೆ ಸತ್ಯವೆಂದಾದರೆ ಮಾತ್ರ ಅವರಿಬ್ಬರ ನಡುವಿನ ತಾಕಲಾಟದಿಂದ ಆಗಿರುವ ಪರಿಣಾಮಗಳ ಬಗ್ಗೆ ನಾವು ಕಂಡುಕೊಂಡಿರುವ ಅರಿವಿಗೆ ಒಂದು ಅರ‍್ತ ಎನ್ನುವುದು ಇರುತ್ತದೆ.
     ಆರ‍್ಯರ ಪ್ರವೇಶ ಸರಿಸುಮಾರು ಮೂರೂವರೆ ಸಾವಿರ ವರ‍್ಶಗಳ ಹಿಂದೆ ಆಯಿತು ಎನ್ನುವುದು ಬಹುಮಟ್ಟಿನ ಪಂಡಿತರು ಒಪ್ಪಿರುವ ಅಂದಾಜು. ಅಂದರೆ, ಆರ‍್ಯರ ಮತ್ತು ದ್ರಾವಿಡರ ಬೆರಕೆ ಮೂರೂವರೆ ಸಾವಿರ ವರ‍್ಶಗಳಿಗಿಂತ ಹಳೆಯದಲ್ಲ ಎಂದು ಅದರ ಅರ‍್ತ. ಆದರೆ, ಇಸವಿ ೨೦೦೯ರಲ್ಲಿ ಅಮೆರಿಕದ ಹಾರ‍್ವರ‍್ಡ್ ಮೆಡಿಕಲ್ ಸ್ಕೂಲಿನ David Reich ಮತ್ತು ಅವರ ಸಹೋದ್ಯೋಗಿಗಳು ಬಾರತೀಯರ ಮೇಲೆ DNA ಅದ್ಯಯನಗಳನ್ನು ನಡೆಸಿ, ಬಾರತೀಯರಲ್ಲಿ ಕಂಡು ಬರುವ ಜನಾಂಗೀಯ ಬೆರಕೆ ಮೂರೂವರೆ ಸಾವಿರ ವರ‍್ಶಗಳಿಗಿಂತ ಗಣನೀಯವಾಗಿ ಹಿಂದಿನದು ಎಂಬ ತೀರ‍್ಮಾನವನ್ನು ಪ್ರಕಟಿಸಿದರು. ಅದನ್ನು ನೋಡಿದ ಕೂಡಲೆ, ನಮ್ಮಲ್ಲಿ ಆರ‍್ಯ-ದ್ರಾವಿಡ ಸಿದ್ದಾಂತವನ್ನು ಅಲ್ಲಗಳೆಯುತ್ತ ಬಂದಿರುವ ಕೆಲವರು ಹಿಗ್ಗಿನಿಂದ ಕುಣಿದಾಡಿದರು. ಆರ‍್ಯ-ದ್ರಾವಿಡ ಸಿದ್ದಾಂತ ಬರೀ ಸುಳ್ಳು ಎಂದು ಸಾಬೀತಾಯಿತಲ್ಲ? ಎಂದು ಬೀಗಿದರು. ಇದರ ಬಗ್ಗೆ ಪತ್ರಿಕೆಗಳಲ್ಲಿ ಮುಕಪುಟದ ಸುದ್ದಿಗಳೂ ವರದಿಯಾದವು. ಆದರೆ, ಹಾರ‍್ವರ‍್ಡಿನವರ ಅದ್ಯಯನ, ’ಬಾರತೀಯರಲ್ಲಿ ಬುಡಕಟ್ಟುಗಳ ಬೆರಕೆ ಆಗಿದೆ’ ಎಂಬ ಸಿದ್ದಾಂತವನ್ನು ಅಲ್ಲಗಳೆಯದೆ ಇರುವ ಅಂಶದ ಬಗ್ಗೆ ಮಾತ್ರ ಯಾರೂ ಹೆಚ್ಚಾಗಿ ಮಾತಾಡಲಿಲ್ಲ. ಎಲ್ಲರೂ, ಯಾವುದು ಮುಕ್ಯವೋ ಅದನ್ನು ತಮಗೆ ಬೇಡವಾದ್ದರಿಂದ ಕಯ್ಬಿಟ್ಟು, ಮುಕ್ಯವಲ್ಲದ್ದನ್ನು ಮಾತ್ರ, ಅದು ತಮಗೆ ಬೇಕಾದ್ದರಿಂದ, ಎತ್ತಿ ಆಡಿತೋರಿಸಿದರು, ಅಶ್ಟೆ. ಸರಿಯಾಗಿ ನೋಡಿದರೆ, ಆರ‍್ಯ ಮತ್ತು ದ್ರಾವಿಡ ಎಂಬ ಜನಾಂಗಗಳ ಅಸ್ತಿತ್ವ ಇದೆ ಎಂಬ ಅಂಶ, ಅದು ಯಾವ ಕಾಲದಿಂದ ಇದೆ ಎನ್ನುವುದಕ್ಕಿಂತ ಮುಕ್ಯ.
      ಆದ್ದರಿಂದ, ಆರ‍್ಯ-ದ್ರಾವಿಡ ಸಿದ್ದಾಂತ ಸುಳ್ಳು ಎನ್ನುವ ಕೆಲವರ ಪೊಳ್ಳು ಪ್ರಚಾರಕ್ಕೆ ನಾವು ಬಲಿಯಾಗಬಾರದು. ಆರ‍್ಯ ಮತ್ತು ದ್ರಾವಿಡ ಎಂಬ ಜನಾಂಗಗಳ ಇರುವಿಕೆ ಮತ್ತು ಬೆರಕೆ ಒಂದು ವಾಸ್ತವಾಂಶ. ಎರಡು ಸಮುದಾಯಗಳ ನಡುವೆ ನಡೆದ ಮತ್ತು ಈಗಲೂ ನಡೆಯುತ್ತಿರುವ ತಾಕಲಾಟವೂ ಒಂದು ವಾಸ್ತವಾಂಶ. ತಾಕಲಾಟದಲ್ಲಿ ಸೋಲು ಆಗುತ್ತ ಬಂದಿರುವುದು ದ್ರಾವಿಡರಾದ ನಮಗೇ ಎಂಬುದು ಕೂಡ ಒಂದು ವಾಸ್ತವಾಂಶ. ಈ ವಾಸ್ತವದ ಅರಿವನ್ನು ದಕ್ಶಿಣದವರಾದ ನಾವು ಈಗಲಾದರೂ ಪಡೆದುಕೊಳ್ಳಬೇಕು. ಈ ಅರಿವಿನ ಹಿನ್ನೆಲೆಯಲ್ಲಿ ನಾವೆಲ್ಲ ಒಗ್ಗೂಡಬೇಕು. ಆರ‍್ಯಪರ ಶಕ್ತಿಗಳಿಂದ ನಮ್ಮ ನಡೆನುಡಿಗಳ ಮೇಲೆ ನಡೆಯುತ್ತಿರುವ ಒತ್ತುವರಿಯ ಎದುರು ಒಗ್ಗಟ್ಟಿನಿಂದ ಹೋರಾಡಬೇಕು. ಹೀಗೆ ನಡೆದುಕೊಂಡರೆ ಮಾತ್ರ ನಮ್ಮ ನಡೆನುಡಿಗಳು ಉಳಿದಾವು.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಶನಿವಾರ, ಡಿಸೆಂಬರ್ 01, 2012

ರಾಶ್ಟ್ರಬಾಶೆ ಎಂಬುದೊಂದು ಬೇಕೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

’ಕನ್ನಡಿಗರು ಕನ್ನಡ ಮಾತಾಡಿದರೆ, ಮರಾಟಿಗರು ಮರಾಟಿ ಮಾತಾಡಿದರೆ, ಪಂಜಾಬಿಗಳು ಪಂಜಾಬಿ ಮಾತಾಡಿದರೆ, ಹೀಗೆ ಆಯಾ ರಾಜ್ಯದವರು ಆಯಾ ಬಾಶೆಗಳನ್ನು ಮಾತಾಡಿದರೆ, ಬಾರತೀಯ ಎನಿಸಿಕೊಂಡವನು ಯಾವ ಬಾಶೆ ಮಾತಾಡುತ್ತಾನೆ? ಇಂಗ್ಲೆಂಡಿನವರಿಗೆ ಇಂಗ್ಲಿಶ್ ಇರುವಂತೆ, ಜರ‍್ಮನರಿಗೆ ಜರ‍್ಮನ್ ಇರುವಂತೆ, ಇಟಲಿಯವರಿಗೆ ಇಟಾಲಿಯನ್ ಇರುವಂತೆ, ಬಾರತದವರಿಗೆ ಬಾರತೀಯ ಬಾಶೆಯೊಂದು ಇರಬಾರದೆ? ಇರಬೇಕು. ಇರಲೇಬೇಕು. ಆದ್ದರಿಂದ, ಬಾರತೀಯರು ನಾವೆಲ್ಲ ಒಂದು ’ರಾಶ್ಟ್ರಬಾಶೆ’ ಎಂಬುದನ್ನು ಅಳವಡಿಸಿಕೊಳ್ಳಬೇಕು. ನಮ್ಮ ನಮ್ಮಲ್ಲಿನ ಸಂಪರ‍್ಕಕ್ಕೆ ಅದನ್ನೇ ಬಳಸಬೇಕು. ಹಿಂದಿ ಹೇಗೂ ಹೆಚ್ಚು ಜನರಿಗೆ ತಿಳಿದಿರುವುದರಿಂದ ಹಿಂದಿಯೇ ರಾಶ್ಟ್ರಬಾಶೆ ಆಗಬೇಕು’ - ಇದು ’ರಾಶ್ಟ್ರಾಬಿಮಾನಿಗಳು’ ಎಂದು ಕರೆದುಕೊಳ್ಳುವ, ಅದರಲ್ಲೂ ಹಿಂದಿಯೇ ಮನೆಮಾತಾಗಿರುವ ಕೋಟ್ಯಂತರ ಬಾರತೀಯರ ವಾದ. ಇವರ ವಾದದಲ್ಲಿ ಏನಾದರೂ ಹುರುಳಿದೆಯೆ? ನೋಡೋಣ.
      ಮೊದಲು, ’ಇಂಗ್ಲೆಂಡಿನವರಿಗೆ ಇಂಗ್ಲಿಶ್ ಇರುವಂತೆ, ಜರ‍್ಮನರಿಗೆ ಜರ‍್ಮನ್ ಇರುವಂತೆ, ಇಟಲಿಯವರಿಗೆ ಇಟಾಲಿಯನ್ ಇರುವಂತೆ...’ ವಾದದ ಬಗ್ಗೆ ಕೊಂಚ ಬಗೆದು ನೋಡೋಣ. ಇಡೀ ಇಂಗ್ಲೆಂಡ್ ತುಂಬ ಬಹುತೇಕ ಮಂದಿ ಆಡುತ್ತಿದ್ದುದು ಇಂಗ್ಲಿಶ್ ಒಂದೇ. ಅದೇ ರೀತಿ, ಜರ‍್ಮನಿಯಲ್ಲಿ ಜರ‍್ಮನ್ ಬಾಶೆ ಒಂದೇ. ಅಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಬಾಶೆ ಮಾತಾಡುತ್ತಿರಲಿಲ್ಲ. ಇಟಲೀ ದೇಶದಲ್ಲೂ ಹಾಗೇ. ದೇಶಕ್ಕೆಲ್ಲಾ ಇದ್ದುದು ಒಂದೇ ಬಾಶೆ. ಇಂಗ್ಲೆಂಡ್, ಜರ‍್ಮನಿ, ಇಟಲಿ ಮುಂತಾದ ದೇಶಗಳಲ್ಲಿ ಇದ್ದದ್ದು ಬಹುತೇಕ ಒಂದೇ ಜನಾಂಗ, ಒಂದೇ ಬಾಶೆ ಮತ್ತು ಒಂದೇ ಸಂಸ್ಕ್ರುತಿ.  ಹಾಗಾಗಿ ಆ ದೇಶಗಳಲ್ಲಿ, ಅಲ್ಲಿದ್ದ ಒಂದೇ ಬಾಶೆ ತನ್ನಶ್ಟಕ್ಕೆ ತಾನೇ ’ದೇಶಬಾಶೆ’ ಆಯಿತು. ನಮಗೊಂದು ದೇಶಬಾಶೆ ಬೇಕು ಎಂದು ಪ್ರತ್ಯೇಕವಾಗಿ ಆಲೋಚಿಸುವ ಅಗತ್ಯವೇ ಅವರಿಗೆ ಬೀಳಲಿಲ್ಲ.
      ಆದರೆ, ನಮ್ಮ ದೇಶ ಹಾಗಿಲ್ಲ. ನಮ್ಮ ದೇಶದ ಉದ್ದಗಲದಲ್ಲಿ ಒಂದೇ ಬಗೆಯ ಮಂದಿ ವಾಸವಾಗಿಲ್ಲ. ಬೇರೆಬೇರೆ ಬುಡಕಟ್ಟಿನ ಜನ, ಬೇರೆಬೇರೆ ಬಾಶಾವರ್ಗದ ಜನ, ಬೇರೆಬೇರೆ ನಡವಳಿಕೆಯ ಜನ - ಹೀಗೆ ವಯ್ವಿದ್ಯಮಯವಾದ ಸಮುದಾಯಗಳು ಬದುಕುತ್ತಿರುವ ಒಂದು ಒಕ್ಕೂಟ ನಮ್ಮ ದೇಶ. ಈ ಸಮುದಾಯಗಳು ಕೂಡ ಒಂದರಲ್ಲಿ ಒಂದು ಬೆರೆತು ಹೋಗಿಲ್ಲ. ಪ್ರತಿ ಸಮುದಾಯಕ್ಕೂ ಅದರದ್ದೇ ಆದ ಪ್ರತ್ಯೇಕ ಪ್ರದೇಶ ಇದೆ. ಅಶ್ಟೇ ಅಲ್ಲ, ಒಂದು ಸಮುದಾಯ ಮಾತ್ರ ಬಹಳ ದೊಡ್ಡದು, ಉಳಿದವೆಲ್ಲ ಲೆಕ್ಕಕ್ಕೆ ಬಾರದ ಪುಟ್ಟ ಸಮುದಾಯಗಳು ಎಂದೂ ಹೇಳುವ ಹಾಗಿಲ್ಲ. ಅದೇ ರೀತಿ, ಒಂದು ಬಾಶೆ ಮಾತ್ರ ಬೆಳವಣಿಗೆ ಹೊಂದಿದೆ, ಇನ್ನುಳಿದವೆಲ್ಲ ಕೇವಲ ಬಾಯ್ನುಡಿಗಳು ಎಂದೂ ಅನ್ನುವಂತಿಲ್ಲ. ಹಾಗೆ ನೋಡಿದರೆ ಬಾರತದಲ್ಲಿ, ಹಲವಾರು ಸಮುದಾಯಗಳಿಗೆ ಕೋಟಿ ಕೋಟಿ ಸಂಕ್ಯೆಯ ಜನಬಲವಿದೆ. ಅವುಗಳು ಆಡುವ ಬಾಶೆಗಳಿಗೆ ಸಾವಿರ ವರ‍್ಶಗಳನ್ನು ಮೀರಿದ ಸಾಹಿತ್ಯಿಕ ಚರಿತ್ರೆ ಕೂಡ ಇದೆ.
      ಹಾಗಾಗಿ, ಸರಿಗಣ್ಣಿನಿಂದ ನೋಡಿದರೆ, ಬಾರತ ’ಒಂದು’ ದೇಶವಲ್ಲ, ವಾಸ್ತವವಾಗಿ ಅದು ಒಂದು ’ದೇಶಗಳ ಒಕ್ಕೂಟ’ ಎಂಬುದು ಯಾರಿಗಾದರೂ ತಿಳಿಯುತ್ತದೆ. ಅಶ್ಟೇ ಅಲ್ಲದೆ, ಪ್ರಜಾಪ್ರಬುತ್ವ ಬಾರತದಲ್ಲಿರುವ ರಾಜಕೀಯ ಏರ‍್ಪಾಡು. ಅಂದರೆ, ಹೆಚ್ಚಿನ ಸಂಕ್ಯಾಬಲ ಯಾರಿಗಿರುತ್ತದೋ ಅವರಿಗೇ ರಾಜಕೀಯ ಬಲ ಕೂಡ. ಇಂತಹ ಒಂದು ವ್ಯವಸ್ತೆಯಲ್ಲಿ, ದೊಡ್ಡದೊಂದು ಸಮುದಾಯದ ಬಾಶೆಯನ್ನು ಉಳಿದೆಲ್ಲ ಸಮುದಾಯಗಳ ಮೇಲೆ ಹೇರಿದರೆ, ಅದರಿಂದ ದೊಡ್ಡ ಸಮುದಾಯಕ್ಕೆ ಮೇಲುಗಯ್ ಕೊಟ್ಟು, ಉಳಿದ ಸಮುದಾಯಗಳ ಮುಂದೆ ಬೇಕೇ ಇರದ ಒಂದು ಹೊಸ ತೊಡಕನ್ನು ತಂದಿಟ್ಟಂತಾಗುವುದಿಲ್ಲವೆ? ಇದರಿಂದ ಸಮುದಾಯಗಳ ನಡುವೆ ಮನಸ್ತಾಪಗಳು ಉಂಟಾಗದೆ ಇರುತ್ತದೆಯೆ?
      ಒಂದು ಸಮುದಾಯದ ಬಾಶೆಯನ್ನು ಇನ್ನೊಂದು ಸಮುದಾಯದ ಮೇಲೆ ಕಡ್ಡಾಯವಾಗಿ ಹೇರಿದರೆ, ಅವುಗಳ ನಡುವೆ ಮನಸ್ತಾಪ ಉಂಟಾಗೇ ಆಗುತ್ತದೆ. ಉದಾಹರಣೆಗೆ, ಸೋವಿಯತ್ ಒಕ್ಕೂಟ ಅಸ್ತಿತ್ವದಲ್ಲಿ ಇದ್ದಾಗ, ಅದರ ಎಲ್ಲ ಅಂಗ ರಾಜ್ಯಗಳ ಮೇಲೆ ರಶ್ಯನ್ ಬಾಶೆಯ ಕಲಿಕೆಯನ್ನು ಕಡ್ಡಾಯ ಮಾಡಲಾಗಿತ್ತು. ಮುಚ್ಚುಮರೆ ಏರ‍್ಪಾಡಿನ ಕಮ್ಯುನಿಸ್ಟ್ ಸರ‍್ಕಾರ, ಹೇಗೆ ತನ್ನ ಸೋವಿಯತ್ ಒಕ್ಕೂಟದಲ್ಲಿ ಎಲ್ಲ ಪ್ರಜೆಗಳೂ ರಶ್ಯನ್ ಬಾಶೆಯ ಕಲಿಕೆಯಿಂದ,  ಒಗ್ಗೂಡಿ, ಸಾಮರಸ್ಯದಿಂದ ಬದುಕುತ್ತಿದ್ದಾರೆ ಎಂದು ಸುಳ್ಳು ಜಂಬ ಕೊಚ್ಚಿಕೊಳ್ಳುತ್ತಿತ್ತು. ಆದರೆ, ಸೋವಿಯತ್ ಒಕ್ಕೂಟ ಮುರಿದು ಬಿದ್ದ ಕೂಡಲೇ ಅದರ ನಿಜಬಣ್ಣ ಬಯಲಾಯಿತು. ಬಾರತದಂತೆಯೇ ಬೇರೆಬೇರೆ ಬುಡಕಟ್ಟಿನ, ಬೇರೆಬೇರೆ ನುಡಿಗಳ ಒಕ್ಕೂಟವಾಗಿದ್ದ ಸೋವಿಯತ್ ಯೂನಿಯನ್ನಿನಲ್ಲಿ ರಶ್ಯನ್ ಕಲಿಕೆಯ ಮೇಲಿದ್ದ ಅಸಮಾದಾನ ಪ್ರಪಂಚಕ್ಕೆಲ್ಲಾ ತಿಳಿದು ಬಂತು. ಅದೇ ರೀತಿ, ಚೀನಾದಲ್ಲೂ ಈಗ ಸೋವಿಯತ್ ಒಕ್ಕೂಟದಲ್ಲಿ ಇದ್ದ ಪರಿಸ್ತಿತಿಯೇ ಇದೆ. ಮುಂದೊಂದು ದಿನ, ಚೀನಾದಲ್ಲಿ ಜನಕ್ಕೆ ವಾಕ್ ಸ್ವಾತಂತ್ರ್ಯ ದೊರೆತರೆ, ಅಲ್ಲೂ ಅಶ್ಟೆ, ಚೀನೀಯೇತರ ಸಮುದಾಯಗಳಲ್ಲಿ ಮ್ಯಾಂಡರಿನ್ ಬಾಶೆಯ ಕಡ್ಡಾಯ ಕಲಿಕೆಯ ಬಗ್ಗೆ ಇರುವ ಒಳಗುದಿ ಬಯಲಾದೆ ಇರುವುದಿಲ್ಲ.
      ಆದ್ದರಿಂದ, ಬಾರತದಂತಹ ಅಪಾರ ಬೇರ್‍ಮೆ ಇರುವ ದೇಶಗಳಲ್ಲಿ ಒಂದು ಸಮುದಾಯದ ಬಾಶೆಯನ್ನು ಇಡೀ ದೇಶದ ಮೇಲೆ ’ರಾಶ್ಟ್ರಬಾಶೆ’ ಎಂಬ ಹಣೆಪಟ್ಟಿಯಿಂದ ಹೇರುವ ಪರಿಕಲ್ಪನೆಯೇ ಸರಿಯಲ್ಲ. ಇದುವರೆಗೇನೋ ಹಿಂದೀ ಹೇರಿಕೆ, ಆಗ್ರಹದಿಂದ ಆಗಿಲ್ಲ. ಜೊತೆಗೆ, ದೇಶದ ತುಂಬೆಲ್ಲಾ ಬಾಲಿವುಡ್ ಸಿನಿಮಾಗಳು ಜನಪ್ರಿಯವಾಗಿವೆ. ಹಾಗಾಗಿ, ಹಿಂದಿಯ ಬಗ್ಗೆ ಅಶ್ಟು ವಿರೋದ ಕಂಡುಬರುತ್ತಿಲ್ಲ. ಆದರೆ, ಮುಂದೆ ಎಂದಾದರೊಮ್ಮೆ, ಹಿಂದೀಯನ್ನು ಕಡ್ಡಾಯ ಮಾಡುವುದಕ್ಕೆ ಸಕಾಲ ಬಂದಿದೆ ಎಂದು ತಪ್ಪಾಗಿ ಎಣಿಸಿ, ಹಿಂದೀವಾಲರು ಆಗ್ರಹದಿಂದ ಅದನ್ನು ಕಡ್ಡಾಯ ಮಾಡಲು ಹೋದರೆ, ಅದಕ್ಕೆ ಪ್ರಜಾಪ್ರಬುತ್ವದ ನಮ್ಮ ವ್ಯವಸ್ತೆಯಲ್ಲಿ ಕಟ್ಟೆದುರು ಏಳುವುದರಲ್ಲಿ ಸಂದೇಹವಿಲ್ಲ.
      ದೇಶದ ಒಗ್ಗಟ್ಟಿಗೆ ರಾಶ್ಟ್ರಬಾಶೆ ಎಂಬುದು ಬೇಕೇ ಬೇಕು ಎನ್ನುವುದು ದೇಶಾಬಿಮಾನಿಗಳ ಇನ್ನೊಂದು ವಾದ. ಈ ವಾದವನ್ನೂ ಅಶ್ಟೆ. ಕೂಡಲೇ ಒಪ್ಪಲಿಕ್ಕಾಗುವುದಿಲ್ಲ. ಅಶ್ಟಕ್ಕೂ ಬಾಶೆಯಿಂದ ಮಾತ್ರ ಒಗ್ಗಟ್ಟು ಸಾದ್ಯ ಎಂದು ಹೇಳುವುದೇ ಸರಿ ಎನಿಸುವುದಿಲ್ಲ. ಉದಾಹರಣೆಗೆ, ಒಂದೇ ಬಾಶೆ ಆಡುತ್ತಿದ್ದ ಉತ್ತರದ ಹಾಗೂ ಪೂರ್ವದ ಹಿಂದುಗಳ ಮತ್ತು ಮುಸ್ಲಿಮರ ನಡುವೆ ಒಗ್ಗಟ್ಟು ಎಲ್ಲಿತ್ತು? ಇರಲಿಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳ ನಿರ‍್ಮಾಣವೇ ಅದಕ್ಕೆ ಸಾಕ್ಶಿ. ನಿಜವಾದ ಒಗ್ಗಟ್ಟು ಬರುವುದು,  ’ಒಗ್ಗಟ್ಟಿನಿಂದ ನಮಗೆ ಲಾಬವಿದೆ, ನಮ್ಮ ನೆಲಜಲಗಳಿಗೆ ಹಾನಿ ಇಲ್ಲ, ನಮ್ಮ ನಡೆನುಡಿಗಳಿಗೆ ಕೇಡಿಲ್ಲ’ ಎಂದು ಎಲ್ಲ ಸಮುದಾಯಗಳಿಗೂ ಎನಿಸುವಂತಹ ಏರ‍್ಪಾಡಿದ್ದರೆ ಮಾತ್ರ. ಆದ್ದರಿಂದ, ಬಾರತದಂತಹ ದೇಶದಲ್ಲಿ ಎಲ್ಲರ ಮೇಲೆ ’ಒಬ್ಬರ’ ಬಾಶೆಯನ್ನು ಹೇರಲು ಹೊರಟರೆ, ಒಗ್ಗಟ್ಟಿಗೆ ಬಲ ಬರುವುದಕ್ಕಿಂತ ದಕ್ಕೆ ಆಗುವ ಸಾದ್ಯತೆಯೇ ಹೆಚ್ಚು.
      ಆದ್ದರಿಂದ, ಕನ್ನಡಿಗರು ನಾವು ’ರಾಶ್ಟ್ರಬಾಶೆಯಿಂದ ಒಗ್ಗಟ್ಟು’ ಎಂಬ ಪೊಳ್ಳು ವಾದಗಳಿಗೆ ಬಲಿಬೀಳಬಾರದು. ಬುಡಕಟ್ಟು ಮತ್ತು ನಡೆನುಡಿಗಳಲ್ಲಿ ದ್ರಾವಿಡ ಹಿನ್ನೆಲೆಯವರಾದ ನಾವು ಹಿಂದಿಯ ಹೇರಿಕೆಗೆ ಒಪ್ಪಕೂಡದು. ಈಗ ಒಪ್ಪಿಕೊಂಡಿರುವ ತ್ರಿಬಾಶಾ ಸೂತ್ರದಿಂದ ಮೊದಲು ಹೊರಬರಬೇಕು. ನಮ್ಮ ನಾಡಿನಲ್ಲಿ ಕನ್ನಡಕ್ಕೇ ಮೊದಲೆಡೆ ಮಾಡಿಕೊಡಬೇಕು. ಉಳಿದ ಬಾರತೀಯರೊಂದಿಗೆ ವ್ಯವಹರಿಸುವುದಕ್ಕೆ ನಾವು ಇಂಗ್ಲಿಶ್ ಕಲಿತರೆ ಸಾಕು. ಇಂಗ್ಲಿಶ್ ಕಲಿಯುವುದು ಇಡೀ ಪ್ರಪಂಚದಲ್ಲೇ ಹೇಗೂ ತನ್ನಶ್ಟಕ್ಕೆ ತಾನೆ ಈಗ ಕಡ್ಡಾಯವಾಗಿಬಿಟ್ಟಿರುವುದರಿಂದ, ಇಂಗ್ಲಿಶ್ ಕಲಿಕೆ ನಮಗೆ ಪ್ರಯೋಜನವಿಲ್ಲದ ಹೊರೆಯಾಗುವುದಿಲ್ಲ. ವಾಸ್ತವವಾಗಿ ಇಂಗ್ಲಿಶ್ ಕಲಿಕೆ ಇಂದಿನ ಒಂದು ಅಗತ್ಯ. ಆದರೆ, ಹಿಂದಿ ಕಲಿಕೆ ಮಾತ್ರ ಕಂಡಿತವಾಗಿಯೂ ಒಂದು ಬಾಳ್ತೆಯೇ ಇಲ್ಲದ ಹೊರೆ. ಇದು ನನ್ನಿ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ಹಾಗೂ ಅದರಿಂದ ಕನ್ನಡಕ್ಕೆ ಆಗುವ ಕೆಡುಕಿನ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.

ಮಂಗಳವಾರ, ನವೆಂಬರ್ 27, 2012

ಕನ್ನಡಿಗರು ಕೋತಿಗಳೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಕೆಲ ದಿನಗಳ ಹಿಂದೆ ಹಿರಿಯ ರಾಜಕಾರಿಣಿ ರಾಮ್ ಜೇಟ್‍ಮಲಾನಿ ಅವರು ’ರಾಮಾಯಣದ ಶ್ರೀರಾಮ ಒಬ್ಬ ಕೆಟ್ಟ ಗಂಡ’ ಎಂದು ನುಡಿದು ತಮ್ಮ ಪಕ್ಶ ಬೀಜೇಪಿಗೆ ಇನ್ನಿಲ್ಲದ ಮುಜುಗರ ಉಂಟುಮಾಡಿದರು! ಶ್ರೀರಾಮನನ್ನೇ ಬಂಡವಾಳ ಮಾಡಿಕೊಂಡಿರುವ ಬೀಜೇಪಿಗೆ ಇಂತಹ ಕಸಿವಿಸಿ ಆಗಬಾರದಿತ್ತು, ಪಾಪ!
      ಜೇಟ್‍ಮಲಾನಿಯವರ ಅನಿಸಿಕೆಗೆ ಸಹಜವಾಗೇ ದೇಶದ ತುಂಬೆಲ್ಲ ಕೂಡಲೆ ಪ್ರತಿಕ್ರಿಯೆಗಳು ಬಂದವು. ನಮ್ಮ ಟೀವಿ ಕಾಲುವೆಗಳಲ್ಲೂ ಈ ವಿಶಯದ ಮೇಲೆ ಕೆಲ ಬಿಸಿ ಚರ‍್ಚೆಗಳು ನಡೆದವು. ಕೇಸರಿಪರ ಕಟ್ಟಾಳುಗಳು, ’ರಾಮ ತ್ಯಾಗಮಯಿ, ಆದರ‍್ಶ ದೊರೆ, ಆದರ್‍ಶ ಪತಿ. ಜೇಟ್‍ಮಲಾನಿಯವರು ಎಲ್ಲೋ ಬಾಯ್ತಪ್ಪಿ ಏನೋ ಹೇಳಿದ್ದಾರೆ’ ಎಂದು ತಿಪ್ಪೆ ಸಾರಿಸಿಕೊಂಡರು. ’ಇವತ್ತೇನಾದ್ರು ರಾಮ ತುಂಬು ಬಸಿರಿ ಸೀತೇನ ಕಾಡಿಗೆ ಕಳಿಸಿದ್ದರೆ ಜಯ್ಲಿಗೆ ಹೋಗುತ್ತಿದ್ದ’ ಎನ್ನುವ ದಾಟಿಯಲ್ಲಿ ಎದುರುವಾದಿಗಳು ಕೇಸರಿಪರದವರಿಗೆ ವಿಕ್ರುತ ಹಿಗ್ಗಿನಿಂದ ಮತ್ತೆ ಮತ್ತೆ ತೀಡಿದರು.
      ’ರಾಮ ಒಳ್ಳೆ ಗಂಡನೋ ಕೆಟ್ಟ ಗಂಡನೋ, ಅದರ ತಂಟೆ ನಮಗೆ ಯಾಕೆ ಬಿಡಿ. ಅದೊಂದು ಉಪಯೋಗಕ್ಕೆ ಬಾರದ ವಾದವಿವಾದ’, ಎನ್ನುವುದು ಈ ವಿಶಯದಲ್ಲಿ ನನ್ನ ವಯ್ಯಕ್ತಿಕ ಅನಿಸಿಕೆ. ಹಾಗಾಗಿ, ಟೀವೀಯಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟವನ್ನು ’ಇದೂ ಒಂದು ಮನರಂಜನೆ’ ಎಂದು ಮನಸ್ಸಿನಲ್ಲೇ ಅಂದುಕೊಂಡು ಹಗುರಾಗಿ ನೋಡುತ್ತಿದ್ದೆ. ಆಗ, ವಾದವಿವಾದದ ನಡುವೆ ಒಬ್ಬರು ಹೇಳಿದ ಮಾತೊಂದು ನನ್ನ ಗಮನ ಸೆಳೆಯಿತು. ರಾಮಾಯಣದಲ್ಲಿ ಕನ್ನಡಿಗರನ್ನು ’ವಾನರರು’ ಎಂದು ಕರೆದು ಅವಹೇಳನ ಮಾಡಲಾಗಿದೆಯಂತೆ - ಇದು ಅವರು ಹೇಳಿದ್ದು. ಇದನ್ನು ಕೇಳಿದ ಕೂಡಲೆ ನನ್ನ ನೆನಪಿನ ಅಂಗಳದಲ್ಲಿ ಕೊಂಚ ಸಂಚಲನ ಉಂಟಾಯಿತು. ಈ ಅಬಿಪ್ರಾಯವನ್ನು ಬಹು ಹಿಂದಿನಿಂದಲೂ ನಾನು ಆಗಾಗ್ಗೆ ಕೆಲವರ ಬಾಯಲ್ಲಿ ಕೇಳಿದ್ದೆ. ಕೇಳಿದಾಗಲೆಲ್ಲ ಅದರ ಬಗ್ಗೆ ನನಗೆ ಏನನ್ನಿಸಿತ್ತು ಎಂಬುದನ್ನು ಕೊಂಚ ಮೆಲುಕು ಹಾಕಿದೆ.
      ರಾಮನಿಗೆ ಅವನ ಬೆಂಬಲಕ್ಕೆ ನಿಂತ ’ವಾನರರು’ ಸಿಕ್ಕಿದ್ದು ದಕ್ಶಿಣದಲ್ಲೇ. ಅದರ ಮೇಲೆ, ’... ಆ ಜಲದಿಯನೆ ಜಿಗಿದ ಹನುಮ ಪುಟ್ಟಿದ ನಾಡು... ’ ಎಂದು ಬೇರೆ ನಾವು ಹೆಮ್ಮೆಯಿಂದ ನಮ್ಮ ನಾಡಿನ ಬಗ್ಗೆ ಹೇಳಿಕೊಳ್ಳುತ್ತೇವೆ. ಆದ್ದರಿಂದ, ರಾಮಾಯಣದ ವಾನರರು ಕನ್ನಡ ನಾಡಿನವರು ಎನ್ನುವುದರಲ್ಲಿ ಅನುಮಾನವಿಲ್ಲ. ಆಗಿನ ಕಾಲದಲ್ಲಿ ನಮ್ಮ ನಾಡಿನಲ್ಲಿ ಬರೀ ವಾನರರು ಮಾತ್ರ ಇದ್ದರೋ, ಇಲ್ಲ ಅವರ ಜೊತೆ ಬೇರೆ ಸಾಮಾನ್ಯ ಮನುಶ್ಯರೂ ಇದ್ದರೋ, ಇದ್ದರೂ ಆವರ ಬಗ್ಗೆ ರಾಮಾಯಣದಲ್ಲಿ ಏನಾದರೂ ಪ್ರಸ್ತಾಪವಾಗಿದೆಯೋ ಎಂಬುದು ತಿಳಿದಿಲ್ಲ. ಇದರ ಬಗ್ಗೆ ನಮಗೆ ತಿಳಿದವರೇ ಹೇಳಬೇಕು.
      ಅದೇನಾದರೂ ಇರಲಿ. ’ರಾಮಾಯಣದ ವಾನರರು ನಿಜವಾಗಿಯೂ ಕೋತಿಗಳಲ್ಲ. ಮನುಶ್ಯರೇ. ಅದರಲ್ಲೂ ಕನ್ನಡಿಗರು. ಬಹುತೇಕ ಕನ್ನಡಿಗರು ಕಪ್ಪು ಮಯ್ಬಣ್ಣದವರಾದದ್ದರಿಂದ, ಬಿಳಿ ಚಾಯೆಯ ಉತ್ತರದ ಆರ‍್ಯರು ಕರಿ ಚಾಯೆಯ ದಕ್ಶಿಣದ ದ್ರಾವಿಡರನ್ನು ತುಚ್ಚವಾಗಿ ಕಾಣುವ ಉದ್ದೇಶದಿಂದ ಅವರನ್ನು ವಾನರರಿಗೆ ಹೋಲಿಸಿದ್ದಾರೆ’ - ಇದು ಒಟ್ಟಾರೆ ದೂರು. ಈ ದೂರನ್ನು ದಕ್ಶಿಣದ ಕೆಲವರು ಆಗ್ಗಾಗ್ಗೆ ಮಾಡುತ್ತಾ ಬಂದಿದ್ದಾರೆ. ಈ ದೂರಿನಲ್ಲಿ ಏನಾದರು ಹುರುಳಿದೆಯೆ? ಇದು ನಾವು ಕೇಳಬೇಕಾದ ಕೇಳ್ಕೆ.
      ವಯ್ಯಕ್ತಿಕವಾಗಿ ನನಗನ್ನಿಸುವುದು, ’ಈ ದೂರಿನಲ್ಲಿ ಹುರುಳಿಲ್ಲ’ ಎಂದೇ. ಏಕೆಂದರೆ, ರಾಮಾಯಣದಲ್ಲಿ ಹನುಮಂತ ಎಂಟ್ರಿ ಕೊಟ್ಟ ಕ್ಶಣದಿಂದಲೇ ಅದರ ಚಹರೆಯೇ ಬದಲಾಗಿಬಿಡುತ್ತದೆ. ರಾವಣ ಅಳಿಯುವವರೆಗೆ ಹನುಮಂತನೇ ಕತಾನಾಯಕನಾಗುತ್ತಾನೆ. ವಾನರರದೇ ಪ್ರದಾನ ಪಾತ್ರವಾಗುತ್ತದೆ. ಹೀಗೆ, ಒಂದು ಕತೆಯಲ್ಲಿ ಒಂದು ಸಮುದಾಯವನ್ನು ಕೀಳೆಂದು ಗುರುತಿಸಿ, ಅದೇ ಕತೆಯಲ್ಲಿ ಅದೇ ಸಮುದಾಯವನ್ನು ಏಕಕಾಲಕ್ಕೆ ವಯ್ಬವೀಕರಿಸುವುದು ಅಸಮಂಜಸ ಎನಿಸುವುದಿಲ್ಲವೆ? ರಾಮಾಯಣದಲ್ಲಿ ಹೇರಳವಾಗಿ ಕಾಲ್ಪನಿಕ ಅಂಶಗಳು ಸೇರಿಕೊಂಡಿವೆ. ಅವುಗಳಲ್ಲಿ ’ವಾನರರ’ ಸಂಗತಿಯೂ ಒಂದು ಕಾಲ್ಪನಿಕ ಅಂಶ ಎನಿಸುತ್ತದೆ ನನಗೆ. ಅಶ್ಟಕ್ಕೂ ರಾಮಾಯಣಕ್ಕೆ ಒಂದೇ ಆವ್ರುತ್ತಿ ಇಲ್ಲ. ಹಲವಾರು ಬೇರೆಬೇರೆ ರಾಮಾಯಣದ ಆವ್ರುತ್ತಿಗಳಿವೆ. ರಾಮಾಯಣದ ಕೆಲವು ಬಗೆಗಳಲ್ಲಿ ವಾನರರ ಪ್ರಸ್ತಾಪವೇ ಇಲ್ಲ. ಉದಾಹರಣೆಗೆ, ಹಳಗನ್ನಡದ ಕವಿ ನಾಗಚಂದ್ರನ ರಾಮಾಯಣದಲ್ಲಿ ಹನುಮಂತ ಕೋತಿಯೂ ಅಲ್ಲ, ರಾವಣ ರಾಕ್ಶಸನೂ ಅಲ್ಲ. ಅಶ್ಟೇ ಏಕೆ, ಅದರಲ್ಲಿ ಅವರಿಬ್ಬರೂ ನಂಟರು ಬೇರೆ! ಹಾಗಾಗಿ, ಬರಿಯ ಕಲ್ಪನೆಯ ಒಂದು ಅಂಶಕ್ಕೆ ವಿಪರೀತ ಅರ‍್ತ ಕೊಟ್ಟು, ನಾವು ಕನ್ನಡಿಗರು ರಾಮಾಯಣದ ಬಗ್ಗೆ ಅಲರ‍್ಜಿ ಬರಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ನನಗೆ ಅನ್ನಿಸುತ್ತದೆ.
      ಹಾಗೆ ನೋಡಿದರೆ, ಉತ್ತರದವರು ನಮ್ಮನ್ನು ರಾಮಾಯಣದಲ್ಲಿ ಕೀಳಾಗಿ ಕಂಡಿದ್ದಾರಾ ಎನ್ನುವುದಕ್ಕಿಂತ ಅವರು ಈಗಲೂ ಹಾಗೇ ಮಾಡುತ್ತಿದ್ದಾರಾ ಎನ್ನುವುದು ಮುಕ್ಯ. ಸತ್ಯವಾಗಿಯೂ ಹಾಗೇ ಮಾಡುತ್ತಿದ್ದಾರೆ! ಇದೇ ಮುಕ್ಯ. ಜೊತೆಗೆ, ಇದು ಎಲ್ಲರಿಗೂ ಗೊತ್ತಿರುವ ವಿಶಯ ಕೂಡ. ಬಡಗರು, ನಾವು ತೆಂಕಣರನ್ನು ’ಮದ್ರಾಸಿ’ ಎಂಬ ಒಂದೇ ಪದದಿಂದ, ನಾಯಿಕುನ್ನಿಯನ್ನು ಎತ್ತಿ ಪಕ್ಕಕ್ಕೆ ಹಾಕುವ ಹಾಗೆ ಹಾಕಿಬಿಡುತ್ತಾರೆ. ತೆಂಕಣರಲ್ಲಿ ಕನ್ನಡಿಗರು, ತಮಿಳರು, ತೆಲುಗರು ಮುಂತಾದ ಬೇರೆಬೇರೆ ಸಮುದಾಯಗಳಿವೆ ಎನ್ನುವುದು ಅವರಿಗೆ ಮುಕ್ಯವಲ್ಲ. ಅವರಿಗೆ ಅದು ಬೇಕಾಗೂ ಇಲ್ಲ. ಅವರು ಮದ್ರಾಸಿ ಎಂದು ಹೇಳುವಾಗ ಉಚ್ಚಾರಣೆಯ ದಾಟಿಯನ್ನು ಗಮನಿಸಬೇಕು. ದಕ್ಶಿಣದವರ ಬಗ್ಗೆ ಅವರಿಗೆ ಇರುವ ’ಆದರ’ ಅದರಲ್ಲಿ ಹಾಗೇ ತೊಟ್ಟಿಕ್ಕುತ್ತದೆ!
      ಉತ್ತರದ ಜನಸಾಮಾನ್ಯರು ಹಾಳಾಗಿ ಹೋಗಲಿ ಬಿಡಿ. ಕವಿವರ‍್ಯ ಟಾಗೋರರ ’ಜನಗಣಮನ’ ಗೀತೆಯಲ್ಲೂ ದಕ್ಶಿಣದವರಿಗೆ ತಕ್ಕ ಗೌರವ ಸಿಕ್ಕಿಲ್ಲ. ಪಂಜಾಬ ಸಿಂದ ಗುಜರಾತ ಮರಾಟ ’ದ್ರಾವಿಡ’ ಉತ್ಕಲ ವಂಗ! ತೆಂಕಣಿಗರಿಗೆಲ್ಲ ದ್ರಾವಿಡ ಎಂಬ ಒಂದೇ ಹೆಸರಿನ ಹಣೆಪಟ್ಟಿ! ಟಾಗೋರರಿಗೆ ದಕ್ಶಿಣದವರನ್ನು ಕಡೆಗಣಿಸುವ ಉದ್ದೇಶ ಇದ್ದಿರಲಿಕ್ಕಿಲ್ಲ. ಅನುಕೂಲಕ್ಕಾಗಿ ಎಲ್ಲರನ್ನೂ ದ್ರಾವಿಡ ಎಂದು ಒಟ್ಟುಸೇರಿಸಿ ಅವರು ಕರೆದಿರಬಹುದು. ಆದರೂ, ಸಂಸ್ಕ್ರುತಜನ್ಯ ಬಾಶೆಗಳನ್ನಾಡುವವರನ್ನೆಲ್ಲ ಬಿಡಿಬಿಡಿಯಾಗಿ ಗುರುತಿಸಿ, ದ್ರಾವಿಡ ನುಡಿಗಳನ್ನಾಡುವವರನ್ನು ಮಾತ್ರ ಒಟ್ಟಾರೆಯಾಗಿ ದ್ರಾವಿಡರು ಎಂದು ಕರೆದಿರುವುದು ಸರಿಯಲ್ಲ. ದೇಶದ ಕೆಲವು ಸಮುದಾಯಗಳನ್ನಂತೂ ಟಾಗೋರರು ಸಂಪೂರ‍್ಣವಾಗಿ ಕಯ್ಬಿಟ್ಟಿದ್ದಾರೆ. ಆ ಸಮುದಾಯಗಳಿಗೆ ಹೋಲಿಸಿದರೆ ನಮ್ಮ ಪಾಡು ಉತ್ತಮ ಎನ್ನಬಹುದು.
      ದಕ್ಶಿಣದಲ್ಲಿ ನಮ್ಮನ್ನು ನಾವು, ’ನಾವು ಕನ್ನಡಿಗರು, ನಾವು ತಮಿಳರು, ನಾವು ತೆಲುಗರು’, ಹೀಗೆ ಸಹಜವಾಗೇ ಬೇರೆಬೇರೆಯಾಗಿ ಗುರುತಿಸಿಕೊಳ್ಳುತ್ತೇವೆ. ಆದ್ದರಿಂದ, ಯಾರಾದರೂ ನಮ್ಮನ್ನು ಮದ್ರಾಸಿ ಎಂದೋ, ದ್ರಾವಿಡ ಎಂದೋ ಇಲ್ಲ ಸವ್‍ತಿ ಎಂದೋ ಒಂದೇ ಹೆಸರಿನಿಂದ ಕರೆದರೆ ನಮಗೆ ಬೇಸರವಾಗುವುದು ಸ್ವಾಬಾವಿಕ (ಅಂದ ಹಾಗೆ, ಈಗಿನ ತಲೆಮಾರಿನ ನಮ್ಮ ಹುಡುಗರು ’ನಾರ‍್ತಿ’ ಎಂದು ಉತ್ತರದವರನ್ನು ಅವರ ದಾಟಿಯಲ್ಲೇ ಕರೆಯುತ್ತಾರೆ. ಆದರೆ, ಅದು ಬೇರೆ ಮಾತು). ಹೀಗೆ ಸುಮ್ಮನೆ ಬೇಸರಪಟ್ಟುಕೊಳ್ಳುವ ಬದಲು, ಉತ್ತರದವರು ನಮ್ಮನ್ನು ಮದ್ರಾಸಿ ಎಂದು ಕೀಳಾಗಿ ಕರೆಯುವುದರ ಹಿನ್ನೆಲೆ ಏನು ಎಂಬುದರ ಬಗ್ಗೆ ಸ್ವಲ್ಪ ಯೋಚಿಸಿ, ಅದರ ಬಗ್ಗೆ ತಕ್ಕ ದೋರಣೆಯನ್ನು ನಾವು ಬೆಳೆಸಿಕೊಳ್ಳುವುದು ಒಳ್ಳೆಯದು.
      ಉತ್ತರದವರು ದಕ್ಶಿಣದವರನ್ನು ಕೀಳಾಗಿ ಕಾಣುವುದು ನಿನ್ನೆ ಮೊನ್ನೆಯ ಚಾಳಿಯಲ್ಲ. ತುಂಬಾ ಹಿಂದಿನಿಂದಲೂ ಅವರು ಹೀಗೇ ಮಾಡುತ್ತಾ ಬಂದಿದ್ದಾರೆ. ’ದಕ್ಶಿಣದವರು ದಡ್ಡರು’ ಎಂಬ ಉಕ್ತಿಯೇ ಇದೆ ಸಂಸ್ಕ್ರುತದಲ್ಲಿ. ಆದ್ದರಿಂದ, ಉತ್ತರದವರ ಮೇಲೆ ಸುಮ್ಮನೆ ಕೆರಳುವ ಬದಲು, ಅವರ ಮೇಲೆ ಉಂಟಾಗುವ ಮುನಿಸನ್ನು ನಾವು ಸರಿಯಾದ ನಿಟ್ಟಿನಲ್ಲಿ ಹರಿಸಬೇಕು. ನಮ್ಮ ಒಳಿತಿಗಾಗಿ ಆ ಸಿಟ್ಟನ್ನು ಬಳಸಿಕೊಳ್ಳಬೇಕು. ’ನಮ್ಮನ್ನೆಲ್ಲ ಮದ್ರಾಸಿ ಎಂಬ ಒಂದೇ ಹಣೆಪಟ್ಟಿಯಿಂದ ಕಡೆಗಣಿಸುತ್ತೀರಿ ತಾನೆ? ನಾವೂ ಅಶ್ಟೆ. ನಿಮ್ಮ ಜೊತೆ ವ್ಯವಹರಿಸಬೇಕಾಗಿ ಬಂದಾಗಲೆಲ್ಲ ನಾವು, ಮದ್ರಾಸಿ ಎಂಬ ಒಂದೇ ಹಣೆಪಟ್ಟಿಯಿಂದಲೇ ಒಗ್ಗಟ್ಟಿನಿಂದಲೇ ವ್ಯವಹರಿಸುತ್ತೇವೆ’ ಎನ್ನುವ ಚಲವನ್ನು ನಾವು ತೋರಿಸಬೇಕು. ’ರಾಶ್ಟ್ರಗೀತೆಯಲ್ಲಿ ನಮ್ಮನ್ನೆಲ್ಲ ದ್ರಾವಿಡರು ಎಂದು ಒಟ್ಟಾಗಿ ಕರೆದಿದ್ದೀರಿ ತಾನೆ? ರಾಶ್ಟ್ರಗೀತೆಯಲ್ಲಿರುವುದೇ ಸರಿ. ನಾವೆಲ್ಲ ದ್ರಾವಿಡರೆ. ನಿಮ್ಮ ಕಿರುಕುಳಗಳನ್ನು ಎದುರಿಸುವ ಸನ್ನಿವೇಶ ಬಂದಾಗಲೆಲ್ಲ ನಾವೆಲ್ಲ ಒಂದೇ’ ಎಂದು ದ್ರಾವಿಡೇತರರಿಗೆ ಮನದಟ್ಟಾಗುವ ಹಾಗೆ ನಾವು ನಡೆದುಕೊಳ್ಳಬೇಕು.
      ಹೀಗೆ ನಮ್ಮನ್ನು ನಾವು ಗುರುತಿಸಿಕೊಳ್ಳುವುದರಲ್ಲಿ ಮಾರ‍್ಪಾಟನ್ನು ತಂದುಕೊಳ್ಳಬೇಕು. ಆದರೆ, ಇಂತಹ ಕಣ್ಣೋಲಿನ ಮಾರ‍್ಪಾಟು ಬೇಕಾಗಿರುವುದು ಬರೀ ಸೇಡು ತೀರಿಸಿಕೊಳ್ಳುವುದಕ್ಕೆಂದಲ್ಲ. ಇಂತಹ ಮಾರ‍್ಪಾಟು ನಿಜಕ್ಕೂ ಬೇಕಾಗಿರುವುದು ಉತ್ತರದಿಂದ ತಡೆಯಿಲ್ಲದೆ ನಮ್ಮೆಡೆಗೆ ಬರುವ ಕಿರುಕುಳಗಳನ್ನು ಸಮರ‍್ತವಾಗಿ ಎದುರಿಸುವುದಕ್ಕಾಗಿ. ಏಕೆಂದರೆ, ಉತ್ತರದಿಂದ ಬರುವ ಕಿರುಕುಳಗಳು ಕನ್ನಡಿಗರಿಗೆ ಮಾತ್ರ ಕಿರುಕುಳಗಳಾಗಿರುವುದಿಲ್ಲ. ಸಾಮಾನ್ಯವಾಗಿ ಅವು ದಕ್ಶಿಣದವರೆಲ್ಲರಿಗೂ ಕಿರುಕುಳಗಳಾಗಿರುತ್ತವೆ. ಆದ್ದರಿಂದ ಉತ್ತರದವರ ಕಿರುಕುಳಗಳನ್ನು ಎದುರಿಸುವಾಗ ’ಮದ್ರಾಸಿಗಳು’ ನಾವು ಒಗ್ಗಟ್ಟಿನಿಂದ ಕಯ್ ಕಯ್ ಸೇರಿಸಿ ನಿಲ್ಲಬೇಕು.  ಹಾಗೆ ನಿಂತರೇ ನಮಗೆ ಒಳಿತು.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಗುರುವಾರ, ನವೆಂಬರ್ 15, 2012

ಬೇರಾಗುವುದೇ ಸರಿದಾರಿಯೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಮೊನ್ನೆ ಕಾವೇರಿ ನೀರಿನ ಗಲಾಟೆಯ ಬಿಸಿ ಏರಿ ಇನ್ನೇನು ಬೆಂಕಿ ಬುಗಿಲೆಂದು ಹೊತ್ತಿಕೊಳ್ಳುತ್ತದೆ ಎಂಬ ಮಟ್ಟಕ್ಕೆ ತಲುಪಿದಾಗ ಹೋರಾಟದ ಮುಂಚೂಣಿಯಲ್ಲಿದ್ದ(?) ಕೆಲ ಮುಂದಾಳುಗಳು, ’ಪ್ರದಾನ ಮಂತ್ರಿಗಳೇ, ಕರ‍್ನಾಟಕಕ್ಕೆ ನ್ಯಾಯ ಒದಗಿಸಿ, ಇಲ್ಲ ಒಕ್ಕೂಟದಿಂದ ಹೊರಹೋಗಲು ಬಿಡಿ’ ಎಂದು ಗುಡುಗಿದರು.  ’ಒಕ್ಕೂಟದಿಂದ ಹೊರಹೋಗಲು ಬಿಡಿ’ ಎನ್ನುವುದು, ’ನಮಗೆ ನಿಮ್ಮ ದೇಶದಲ್ಲಿರುವುದು ಬೇಕಾಗಿಲ್ಲ. ನಾವೇ ಒಂದು ಪ್ರತ್ಯೇಕ ದೇಶವನ್ನು ಮಾಡಿಕೊಳ್ಳುತ್ತೇವೆ’ ಎಂದು ಮುಸುಡಿಗೆ ಹೊಡೆದಂತೆ ಹೇಳುವುದರ ಮೆಲ್ಮೆಯ ರೂಪ. ಇದೇನು ಮುಂದಾಳುಗಳ ಎದೆಯಲ್ಲಿ ನನ್ನಿಯಾಗಿ ಹೊಮ್ಮಿದ ಬಾವನೆಯೋ ಇಲ್ಲ ಕೆರಳಿದ್ದ ಕನ್ನಡಿಗರಿಂದ ಮೆಚ್ಚುಗೆ ಪಡೆಯುವ ಹುನ್ನಾರವೋ, ಆ ಮುಂದಾಳುಗಳಿಗೇ ಗೊತ್ತು. ಅದು ಹಾಗಿರಲಿ. ಏಕೆಂದರೆ ಇಲ್ಲಿ, ಮುಂದಾಳುಗಳ ಹಂಚಿಕೆ ಏನಿತ್ತು ಎನ್ನುವುದು ಅಶ್ಟು ಮುಕ್ಯವಲ್ಲ. ಒಂದುವೇಳೆ ನಮ್ಮ ದೇಶದ ರಾಜ್ಯಗಳು ’ನಾವೇ ಒಂದು ಪ್ರತ್ಯೇಕ ದೇಶವನ್ನು ಮಾಡಿಕೊಳ್ಳುತ್ತೇವೆ’ ಎಂದು ದಂಗೆ ಎದ್ದು ಹಾಗೇ ಮಾಡಿಬಿಟ್ಟರೆ, ಅದರಿಂದಾಗುವ ಪರಿಣಾಮಗಳೇನು ಎಂದು ಕೊಂಚ ಯೋಚಿಸುವುದು ಮುಕ್ಯ.
    ನಮ್ಮ ದೇಶ ಒಗ್ಗಟ್ಟಿಗೆ ಎಂದೂ ಹೆಸರಾಗಿರಲಿಲ್ಲ. ನಮಗೆ ’ರಾಶ್ಟ್ರ’ ಎಂಬ ಪರಿಕಲ್ಪನೆಯೇ ಇರಲಿಲ್ಲ. ನಮ್ಮ ನಮ್ಮಲ್ಲೆ ನಾವು ಎಶ್ಟು ಕಚ್ಚಾಡುತ್ತಿದ್ದೆವೆಂದರೆ, ಅದರಿಂದಾಗಿ ಹೊರಗಿನಿಂದ ಬಂದ ಚಿಲ್ಲರೆ ಪಲ್ಲರೆ ಜನರೆಲ್ಲಾ ನಮ್ಮನ್ನು ಸುಲಬವಾಗಿ ತುಳಿದು ಆಳಿದರು. ಹಾಗೆ ನೋಡಿದರೆ, ನಮ್ಮನ್ನು ಒಂದು ದೇಶ ಎಂದು ಮಾಡಿದ್ದೂ ಕೂಡ ಹೊರನಾಡಿಗರೇ. ಕಚ್ಚಾಡುವ ನಮ್ಮ ಹಳೆಯ ಚಾಳಿ ಈಗಲೂ ನಮ್ಮನ್ನು ಬಿಟ್ಟಿಲ್ಲ ಎಂಬುದೂ ಎಲ್ಲರಿಗೂ ಗೊತ್ತಿದೆ. ನನ್ನಿನೆಲೆ ಹೀಗಿರುವಾಗ, ರಾಜ್ಯಗಳೆಲ್ಲ ಸಿಡಿದು ಬೇರೆಬೇರೆ ದೇಶಗಳಾದರೆ ಜನರ ಗತಿ ಏನು?
    ಕಾವೇರಿಯಲ್ಲಿ ನೀರಿನ ಕೊರತೆ ಬೀಳುವುದು ಆಗಾಗ್ಗೆ ಆಗುತ್ತಲೇ ಇರುತ್ತದೆ. ಅದನ್ನು ತಡೆಯಲಿಕ್ಕಾಗುವುದಿಲ್ಲ. ಈಗಲಾದರೋ, ನೀರಿನ ಕೊರತೆ ಆದಾಗ, ಪ್ರತಿಬಟನೆಗಳು ಎದುರಿಗಳ ಅಣಕುಬೊಂಬೆಗಳನ್ನು ಸುಡುವುದರಲ್ಲೋ, ಹೆದ್ದಾರಿಗಳನ್ನು ತಡೆಯುವುದರಲ್ಲೋ, ಸಾರ್ವಜನಿಕರ ಸ್ವತ್ತುಗಳಿಗೆ ಕೊಂಚ ಜಕಮ್ ಮಾಡುವುದರಲ್ಲೋ - ಹೀಗೆ ಕಡಿಮೆ ಕೇಡಿನಲ್ಲೇ ಕೊನೆಗೊಳ್ಳುತ್ತವೆ. ಆದರೆ, ಕರ‍್ನಾಟಕ ಮತ್ತು ತಮಿಳುನಾಡುಗಳು ಬೇರೆಬೇರೆ ದೇಶಗಳೇ ಆಗಿಬಿಟ್ಟರೆ,  ಇಬ್ಬರ ನಡುವಿನ ತಕರಾರುಗಳು ಅಲ್ಪದರಲ್ಲೇ ತೀರುತ್ತವೆಯೆ? ಎರಡೂ ಕಡೆ ಮುಟ್ಟಾಳತನ ಎಶ್ಟು ದಂಡಿಯಾಗಿದೆ ಎಂದರೆ, ಒಂದೊಂದು ತಕರಾರಿಗೂ ಒಂದೊಂದು ಕಾಳಗವೇ ನಡೆಯಬಹುದು, ಬಾರತ ಮತ್ತು ಪಾಕಿಸ್ತಾನದ ನಡುವೆ ಇದುವರೆಗೆ ನಡೆದಿರುವ ಮೂರು ಯುದ್ದಗಳ ಹಾಗೆ. ಇದರಿಂದ ಜನರಿಗೆ ಲಾಬವಂತೂ ಆಗುವುದಿಲ್ಲ. ಜನರ ಸ್ತಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ, ಅಶ್ಟೆ. ಹಾಗಾಗಿ, ’ನಾವೇ ಬೇರೆ ದೇಶ ಮಾಡಿಕೊಳ್ಳುತ್ತೇವೆ’ ಎನ್ನುವುದು ಜಾಣ್ಮೆಯ ನಡೆಯಲ್ಲ. ಅದು ಅರಿವುಗೇಡಿನ ಕುರುಹು.
    ಜಾಣ್ಮೆಯ ನಡೆ ಯಾವುದೆಂದರೆ, ಒಕ್ಕೂಟದಲ್ಲಿ ಉಳಿದುಕೊಂಡೇ ನಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದು. ನಾವು ಮೊದಲು ಕೇಳಬೇಕಾದ ಕೇಳ್ವಿ ಇದು - ಪ್ರದಾನ ಮಂತ್ರಿಗಳು ತಮಿಳುನಾಡಿನ ಕಡೆಗೆ ಏಕೆ ವಾಲಿದರು?. ಈ ಕೇಳ್ವಿಗೆ ಮಾರು ಎಲ್ಲರಿಗೂ ಗೊತ್ತಿದೆ - ಪ್ರದಾನಿಗಳು ತಮಿಳುನಾಡಿನ ಕಡೆಗೆ ಏಕೆ ವಾಲಿದರು? ಏಕೆಂದರೆ, ಅವರ ಸಮ್ಮಿಶ್ರ ಸರ‍್ಕಾರದ ಉಳಿವಿಗೆ ತಮಿಳು ಪಕ್ಶದ ಬೆಂಬಲ ಬೇಕು, ಅದಕ್ಕೆ. ಕೆಲ ದಶಕಗಳಿಂದ ತಮಿಳರು ಇಂತಹ ಒಂದು ಒಳ್ಳೆಯ ಆಯಕಟ್ಟಿನ ಎಡೆಯಲ್ಲಿ ತಮ್ಮನ್ನು ತಾವು ಇರಿಸಿಕೊಂಡು ಬಂದಿದ್ದಾರೆ. ಇದೂ ಕೂಡ ಎಲ್ಲರಿಗೂ ಗೊತ್ತಿರುವುದೇ.
    ಕೆಂದ್ರದಲ್ಲಿ ಆಳಿಕೆ ಹೂಡುವುದಕ್ಕೆ ರಾಶ್ಟ್ರೀಯ ಪಕ್ಶಗಳಿಗೆ ಅವುಗಳದ್ದೇ ಬಹುಮತ ದೊರಕುತ್ತಿಲ್ಲ. ಹಾಗಾಗಿ, ಪ್ರಾದೇಶಿಕ ಪಕ್ಶಗಳ ನೆರವಿನಿಂದಲೇ ಅವು ಅದಿಕಾರಕ್ಕೆ ಬರಬೇಕು. ಇಂತಹ ನೆಲೆಯಲ್ಲಿ ಅದಿಕಾರದಲ್ಲಿರುವ ಪಕ್ಶಕ್ಕೆ ಬೆಂಬಲಿಗ ಪಕ್ಶಗಳು ಹೇಳಿದಂತೆ ಕುಣಿಯುವುದು ಅನಿವಾರ‍್ಯ ಆಗೇ ಆಗುತ್ತದೆ. ತಮಿಳರು ಸಾಮಾನ್ಯವಾಗಿ ಪ್ರಾದೇಶಿಕ ಪಕ್ಶಗಳನ್ನೇ ಗೆಲ್ಲಿಸಿ ಕಳಿಸುವುದರಿಂದ, ಅವರ ಹಂಗಿನಲ್ಲಿ ಆಡಳಿತ ಪಕ್ಶ ಇರಲೇಬೇಕಾಗುತ್ತದೆ.
    ಹಾಗಾದರೆ ನಾವೂ ಏಕೆ ತಮಿಳರಂತೆ ಆಯಕಟ್ಟಿನ ಎಡೆಯಲ್ಲಿ ನಮ್ಮನ್ನು ನಾವು ಇರಿಸಿಕೊಳ್ಳಬಾರದು? ನಾವೂ ಏಕೆ ಪ್ರಾದೇಶಿಕ ಪಕ್ಶಗಳನ್ನು ಕಟ್ಟಿ ಗೆಲ್ಲಿಸಬಾರದು? ಸರಿಯಾಗಿ ಬಗೆದು ನೋಡಿದರೆ, ಇದು ನಾವು ಹಿಡಿಯಬೇಕಾದ ದಾರಿ; ’ಬೇರೆ ಹೋಗುತ್ತೇವೆ’ ಎನ್ನುವುದಲ್ಲ.
    ಆದ್ದರಿಂದ, ನಮ್ಮದೇ ಆದ ಕೆಚ್ಚಿನ ನೆಚ್ಚಿನ ಪಕ್ಶಗಳನ್ನು ನಾವು ಕಟ್ಟಿಕೊಳ್ಳಬೇಕು. ಹಾಗೂ, ’ಕರುನಾಡವರು ಹುಟ್ಟಿನಲ್ಲಿ ಮತ್ತು ನಡೆನುಡಿಯಲ್ಲಿ ದ್ರಾವಿಡ ಹಿನ್ನೆಲೆಯವರು’ ಎಂಬ ನನ್ನಿ ಈ ಪಕ್ಶಗಳ ದೋರಣೆಯಲ್ಲಿ ಎದ್ದು ಕಾಣಬೇಕು. ನಮಗೆ, ’ಕೇಂದ್ರದಲ್ಲಿ ನಮ್ಮ ಮಾತು ನಡೆದರಶ್ಟೇ ಸಾಲದು, ದಕ್ಶಿಣದ ನಮ್ಮ ನೆರೆನಾಡುಗಳ  ನಣ್ಪು ಕೂಡ ದೊರೆಯಬೇಕು’ ಎಂಬ ಗುರಿ ಇರಬೇಕು. ಏಕೆಂದರೆ, ಉತ್ತರದ ಕಡೆಯಿಂದಲೂ ನಮಗೆ ಸಮಸ್ಯೆಗಳು ಬರುತ್ತವೆ. ವಾಸ್ತವವಾಗಿ,  ದೇಶದ ಜನಸಂಕ್ಯೆಯ ಮಾಹಿತಿಯನ್ನು ಗಮನಿಸಿದರೆ, ಕಾವೇರಿ ಸಮಸ್ಯೆಯನ್ನು ಮೀರಿಸುವ ಸಮಸ್ಯೆಗಳು ಬಡಗಿನಿಂದ  ಮುಂಬರುವ ನಾಳುಗಳಲ್ಲಿ ನಮ್ಮ ಕಡೆಗೆ ಬರುವಂತೆ ತೋರುತ್ತಿದೆ. ಹೀಗೆ ಬೇರೆಬೇರೆ ಕಾರಣಗಳಿಂದಾಗಿ ಇಂದು, ನಾವು ನಮ್ಮ ಪ್ರಾದೇಶಿಕತೆಯನ್ನು ಎತ್ತಿಹಿಡಿಯಬೇಕಾಗಿದೆ. ನಮ್ಮ ದ್ರಾವಿಡತನವನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಉಳಿವಿಗಾಗಿ ನಾವು ಹೊಣೆವೆತ್ತು ನಡೆದುಕೊಳ್ಳಬೇಕಾಗಿದೆ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಗುರುವಾರ, ನವೆಂಬರ್ 08, 2012

ಹಿಂದೀವಾಲರ ಪೊಗರು!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಹನ್ನೆರಡು ವರ‍್ಶಗಳ ಹಿಂದಿನ ಮಾತು. ಅಮೆರಿಕದಲ್ಲಿ ಇದ್ದುದು ಸಾಕು ಎಂದು, ಮರಳಿ ಬಂದು ಮಯ್ಸೂರಿನಲ್ಲಿ ಬೀಡು ಬಿಟ್ಟೆ. ಆದರೆ, ಕಾರಣಾಂತರಗಳಿಂದ ಎರಡು ವರ‍್ಶಗಳೊಳಗೇ ಅಮೆರಿಕಕ್ಕೆ ತಿರುಗಿ ಹೋಗಬೇಕಾಯಿತು. ಹೋಗುವಾಗ ನನ್ನ ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲ ಮಾರಾಟಕ್ಕೆ ಹಚ್ಚಿದೆ. ಅವುಗಳನ್ನು ಹಿಂದೀವಾಲನೊಬ್ಬ ಕೊಂಡುಕೊಳ್ಳುವುದಕ್ಕೆಂದು ಬಂದ. ಸಾಮಾನುಗಳನ್ನು ಬಿಡಿಬಿಡಿಯಾಗಿ ಸೂಕ್ಶ್ಮವಾಗಿ ನೋಡುವುದಕ್ಕೇ ನನ್ನ ಮನೆಗೆ ಮೂರ‍್ನಾಲ್ಕು ಬಾರಿ ಬೇಟಿ ಕೊಟ್ಟ. ಪ್ರತಿ ಬೇಟಿಯಲ್ಲೂ ನನ್ನೊಂದಿಗೆ ಹಿಂದಿಯಲ್ಲೇ ಮಾತಾಡಲು ಪದೇ ಪದೇ ಪ್ರಯತ್ನ ಪಟ್ಟ. ಅವನಿಗೆ ಇಂಗ್ಲಿಶ್ ಚೆನ್ನಾಗೇ ಬರುತ್ತಿತ್ತು. ನನಗೆ ಹಿಂದಿ ಬರುವುದು ತುಂಬಾ ಕಡಿಮೆ. ಅಶ್ಟೇ ಅಲ್ಲದೆ, ಹಿಂದಿಯಲ್ಲಿ ಮಾತಾಡುವ ಇಶ್ಟವೂ ಇಲ್ಲ. ಹಾಗಾಗಿ ಅವನೊಂದಿಗೆ ಹಿಂದಿಯಲ್ಲಿ ಮಾತಾಡಲು ನಾನು ಹೋಗಲಿಲ್ಲ. ನನಗೆ ಹಿಂದಿ ಬರುವುದಿಲ್ಲ ಎಂದು ಮೊದಲೇ ಅವನಿಗೆ ಹೇಳಿಬಿಟ್ಟೆ. ಆದರೂ ಆತ ನನಗೆ ಹಿಂದಿಯಲ್ಲೇ ಮಾತನಾಡಿಸಲು ಅನೇಕ ಸಲ ಪ್ರಯತ್ನಿಸಿದ. ನಾನು ಸುಳ್ಳು ಹೇಳುತ್ತಿದ್ದೇನೆ, ಹಿಂದಿ ಬಾರದವನಂತೆ ನಟಿಸುತ್ತಿದ್ದೇನೆ ಎಂದು ಅವನಿಗೆ ಸಂದೇಹ. ’ನಿನಗೆ ಚೂರೂ ಹಿಂದಿ ಬರುವುದಿಲ್ಲವೆ?’ ಎಂದು ಹತ್ತು ಬಾರಿಯಾದರೂ ನನ್ನನ್ನು ಬಿಟ್ಟು ಬಿಟ್ಟು ಕೇಳಿದ. ಕಡೆಯ ದಿನ ಸಾಮಾನನ್ನು ಸಾಗಿಸಲು ಆಳುಗಳನ್ನು ಕರೆದುಕೊಂಡು ಬಂದ. ಆಳುಗಳೆಲ್ಲ ಕನ್ನಡಿಗರೇ ಆಗಿದ್ದರು. ಆದರೂ ಅವರಿಗೆ ಅವನು ಹಿಂದಿಯಲ್ಲಿ ಅಪ್ಪಣೆ ಕೊಡುತ್ತಿದ್ದ. ಅವರೂ ಅವನೊಡನೆ ಹರುಕುಮುರುಕು ಹಿಂದಿಯಲ್ಲೇ ಮಾತಾಡುತ್ತಿದ್ದರು. ಕಡೆಗೂ ಸಾಮಾನುಗಳನ್ನೆಲ್ಲ ಸಾಗಿಸಿಕೊಂಡು ಹೋದ. ಅವನ ನಡವಳಿಕೆ ನನ್ನನ್ನು ಕೊಂಚ ಯೋಚನೆಗೆ ಹಚ್ಚಿತು. ನಾನೋ, ಒಬ್ಬ ಹುಟ್ಟು ಕನ್ನಡಿಗ. ಕನ್ನಡ ಮಣ್ಣಲ್ಲೇ ಬೆಳೆದ ಕನ್ನಡ ಮಣ್ಣಿನ ಮಗ. ಹಾಗಾಗಿ, ’ಇವನು ಯಾರೋ ಎಲ್ಲಿಂದಲೋ ಬಂದು ನನ್ನ ಊರಿನಲ್ಲೇ ನನಗೆ ಹಿಂದಿಯಲ್ಲಿ ಮಾತಾಡಲು ಒತ್ತಾಯ ಮಾಡಿದನಲ್ಲ. ನಾನು ಹಿಂದಿ ಮಾತಾಡದಿದ್ದುದು ನನ್ನದೇ ತಪ್ಪು ಎನ್ನುವ ಹಾಗೆ ಆಡಿದನಲ್ಲ. ಎಶ್ಟಿದೆ ನೋಡು ಇವನ ಪೊಗರು!’ ಎಂದುಕೊಂಡೆ.
      ಈಗ, ಮತ್ತೆ ಮರಳಿಬಂದು, ಕಳೆದ ಎರಡು ವರ‍್ಶಗಳಿಂದ ಬೆಂಗಳೂರಿನಲ್ಲಿ ಬಿಡಾರ ಹೂಡಿದ್ದೇನೆ. ಮೇಲಿನ ಗಟನೆಯನ್ನು ಮೇಲಿಂದ ಮೇಲೆ ನೆನಪಿಸಿಕೊಳ್ಳುತ್ತಿದ್ದೇನೆ. ಏಕೆಂದರೆ, ಹಾಗಾಗಿದೆ ಇಲ್ಲಿನ ಸ್ತಿತಿ. ಬೆಂಗಳೂರಿನಲ್ಲಿ ಎಲ್ಲಾ ಕಡೆಯೂ ಈಗ ಹಿಂದೀವಾಲರು ತುಂಬಿಹೋಗಿದ್ದಾರೆ. ಎಲ್ಲಾ ಕಡೆಯೂ ರಾಜಾರೋಶವಾಗಿ ಹಿಂದಿಯಲ್ಲೇ ಮಾತಾಡುತ್ತಾರೆ. ಹೋಟೆಲುಗಳಲ್ಲಿ, ಮಾಲುಗಳಲ್ಲಿ ಕೆಲಸಗಾರರನ್ನು ಹಿಂದಿಯಲ್ಲೇ ಕೂಗಿ ಕರೆಯುತ್ತಾರೆ. ಹಿಂದಿಯಲ್ಲೇ ಪ್ರಶ್ನೆ ಕೇಳುತ್ತಾರೆ. ಹಿಂದಿಯಲ್ಲೇ ವಾದ ಮಾಡುತ್ತಾರೆ. ಬೆಂಗಳೂರಿಗರು ಹಿಂದಿ ಕಲಿತಿರಬೇಕು, ಹಿಂದಿಯಲ್ಲಿ ಮಾತಾಡಬೇಕು, ಹಿಂದಿ ಗೊತ್ತಿಲ್ಲದಿದ್ದರೆ ಬೆಂಗಳೂರಿಗರದೇ ತಪ್ಪು ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ನಮ್ಮವರೂ ಅಶ್ಟೆ. ಅವರು ಹಾಕಿದ ತಾಳಕ್ಕೆ ಕುರಿಗಳಂತೆ ಕುಣಿಯುತ್ತಿದ್ದಾರೆ. ಏನೆನ್ನುವುದು ಇದಕ್ಕೆ? ಕನ್ನಡಿಗರ ತಲೆಯೂರಿನಲ್ಲೇ ಬಡಗರಿಂದ ಕನ್ನಡಿಗರ ಮೇಲೆ ಹಿಂದೀ ಹೇರಿಕೆ ನಡೆಯುತ್ತಿದೆ. ಆದರೆ ವೀರ ಕನ್ನಡಿಗರು ಮಾತ್ರ ಅದಕ್ಕೆ ಎಳ್ಳಶ್ಟೂ ಎದುರು ತೋರಿಸುತ್ತಿಲ್ಲ!
      ಯಾಕೆ ನಾವು ಹೀಗೆ? ನಮ್ಮ ನೆರೆಯ ತಮಿಳರು ಚೆನ್ನಯ್ನಲ್ಲಿ ಹೀಗಾಗಲಿಕ್ಕೆ ಬಿಟ್ಟಿದ್ದಾರೆಯೆ? ಅಲ್ಲೂ ದಂಡಿಯಾಗಿ ಹಿಂದೀಗಳು ಸೇರಿಕೊಂಡಿದ್ದಾರೆ. ಆದರೆ ತೆಪ್ಪಗೆ ತಮಿಳು ಕಲಿತು ತಮಿಳಿನಲ್ಲೇ ಮಾತಾಡುತ್ತಾರೆ. ಅಲ್ಲಿ ಹಿಂದಿಯಲ್ಲಿ ಮಾತಾಡಲಿಕ್ಕೆ ಆಸ್ಪದವೇ ಇಲ್ಲ. ಏಕೆಂದರೆ, ತಮಿಳರು ದ್ರಾವಿಡತನ ಮೆರೆದು ಹಿಂದಿಯನ್ನು ಕಲಿಯುವ ತಂಟೆಗೇ ಹೋಗಲಿಲ್ಲ. ಅವರು ಹಿಂದಿ ಕಲಿಯದೇ ಹೋದುದರಿಂದ ಅವರ ತಾಯ್ನುಡಿ ತಮಿಳಿಗಿದ್ದ ಮೊದಲೆಡೆ ಹಾಗೇ ಉಳಿಯಿತು. ಆದರೆ ನಾವು ಮಾಡಿದ್ದೇನು? ಅವರಂತೆ ನಾವು ಕೂಡ ದ್ರಾವಿಡ ನುಡಿಯನ್ನೇ ಆಡಿದರೂ ದ್ರಾವಿಡತನವನ್ನು ಮಾತ್ರ ಮಯ್ಗೂಡಿಸಿಕೊಳ್ಳಲಿಲ್ಲ. ದ್ರಾವಿಡತನವನ್ನು ಕಡೆಗಣಿಸಿ ’ತ್ರಿಬಾಶಾ’ ಸೂತ್ರಕ್ಕೆ ಒಪ್ಪಿ ಟೋಪಿ ಹಾಕಿಸಿಕೊಂಡೆವು. ಕುವೆಂಪು ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿದೆವು. ಹಿಂದಿ ಕಲಿತು ಎಡವೆಟ್ಟು ಮಾಡಿಕೊಂಡೆವು. ಎಡವೆಟ್ಟಿನ ಪಲವನ್ನು ಈಗ ಉಣ್ಣುತ್ತಿದ್ದೇವೆ. ನಮ್ಮ ಮಣ್ಣಿನಲ್ಲೇ ನಾವು ಹಿಂದೀಗಳ ಒಡನೆ ಹಿಂದಿಯಲ್ಲೇ ತೊತ್ತುಗಳ ಹಾಗೆ ಮಾತಾಡುತ್ತಿದ್ದೇವೆ. ನಾವು ಹಿಂದಿ ಕಲಿತದ್ದು ನಮಗೇ ಮುಳುವಾಗಿದೆ; ಹಿಂದೀಗಳಿಗೆ ಅನುಕೂಲವಾಗಿದೆ!
      ಆದರೆ ಇನ್ನೂ ಕಾಲ ಮಿಂಚಿಲ್ಲ. ಬೆಂಗಳೂರು ಇನ್ನೂ ಬಾಂಬೆ ಆಗಿಲ್ಲ. ಈಗಲೂ ನಾವು ಹಿಂದೀಗಳಿಗೆ, ’ಕರ‍್ನಾಟಕ ದ್ರಾವಿಡ ನೆಲ. ಕನ್ನಡ ದ್ರಾವಿಡ ನುಡಿ. ಇಲ್ಲಿ ಕನ್ನಡವೇ ಮೊದಲು. ಹಿಂದೀ ಬಾಲ ಇಲ್ಲಿ ಬಿಚ್ಚಬೇಡಿ’ ಎಂಬ ತಿಳಿವಳಿಕೆ ಕೊಡುವ ಕೆಚ್ಚು ತೋರಿಸಬೇಕು. ನಮ್ಮ ದ್ರಾವಿಡತನವನ್ನು ಮೆರೆಯಬೇಕು. ತ್ರಿಬಾಶಾ ಸೂತ್ರದಿಂದ ಹೊರಗೆ ಬರಬೇಕು. ಹಿಂದಿಯನ್ನು ಅಸಡ್ಡೆಯಿಂದ ಕಾಣಬೇಕು. ಹಿಂದಿಯಲ್ಲಿ ಮಾತಾಡಲಿಕ್ಕೇ ಹೋಗಬಾರದು. ಹಿಂದಿಯಲ್ಲಿ ಮಾತಾಡಿದರೆ ಕನ್ನಡಕ್ಕೆ ಕುತ್ತು ಎನ್ನುವುದನ್ನು ಅರಿತುಕೊಳ್ಳಬೇಕು. ಹಿಂದಿಯಲ್ಲಿ ಮಾತಾಡದಿದ್ದರೆ ನಶ್ಟವೇನೂ ಇಲ್ಲ ಎಂಬುದನ್ನು ಕಂಡುಕೊಳ್ಳಬೇಕು.
      ಅಂದ ಹಾಗೆ, ನಾನು ಬರೀ ಉಪದೇಶ ಮಾಡುತ್ತಿಲ್ಲ. ಮೇಲೆ ಹೇಳಿದ ಹಾಗೇ ನಡೆದುಕೊಂಡು ಬಂದಿದ್ದೇನೆ. ಎಂದೂ ನಾನು ಹಿಂದಿಗೆ ಸೊಪ್ಪು ಹಾಕಿಲ್ಲ. ಅದರಿಂದ ನನಗೆ ಏನೂ ನಶ್ಟವಾಗಿಲ್ಲ. ನಂಬಿ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.