ಸೋಮವಾರ, ಜನವರಿ 27, 2014

ಕಾಲೀ ಪೀಲೀ ಮಲಯಾಳೀ ನರ‍್ಸ್!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಆಮ್ ಆದ್ಮಿ ಪಕ್ಶದ ಮುಂದಾಳುಗಳಲ್ಲೊಬ್ಬನಾದ ಕುಮಾರ್ ವಿಶ್ವಾಸ್ ಎಂಬ ಮಹಾನುಬಾವನೊಬ್ಬ, ದಿಲ್ಲಿಯ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಮಲಯಾಳೀ ನರ‍್ಸುಗಳ ಬಗ್ಗೆ ಹೀನಾಯವಾಗಿ ಮಾತನಾಡಿದ್ದರ ವಿಡಿಯೋ ತುಣುಕೊಂದನ್ನು ಕಳೆದ ವಾರ ದೇಶದ ಜನಪ್ರಿಯ ಆಂಗ್ಲ ಟೀವೀ ಕಾಲುವೆಗಳು ಹಲವು ಬಾರಿ ಮತ್ತೆ ಮತ್ತೆ ತೋರಿಸಿದವು. ಈ ಕುಮಾರ್ ವಿಶ್ವಾಸ್ ಎಂಬ ಪುಣ್ಯಾತ್ಮ ಒಬ್ಬ ಕವಿಯಂತೆ! ಮಲಯಾಳೀ ನರ‍್ಸುಗಳ ಬಗ್ಗೆ ಈತ ಕವಿತೆಯೊಂದನ್ನು ಗೀಚಿ, ಅದರಲ್ಲಿ, ’ಮಲಯಾಳೀ ನರ‍್ಸುಗಳು ಎಶ್ಟು ಕಪ್ಪು ಹಾಗೂ ಕುರೂಪಿಗಳು ಅಂದರೆ, ಅವರನ್ನು ಕಂಡಾಗ ಆಕರ‍್ಶಣೆಯ ಬಾವ ಮೂಡುವ ಬದಲು ತಾನೇ ತಾನಾಗಿ ಸೋದರ ಬಾವ ಮೂಡುತ್ತದೆ!’ ಎಂದು ಅವಹೇಳನ ಮಾಡಿದ್ದಾನೆ. ಈ ಕವಿತೆಯ ಚುಟುಕನ್ನು ಕವಿಗೋಶ್ಟಿಯೊಂದರಲ್ಲಿ ರಸಿಕರ ಮುಂದಿಡುವಾಗ ಅವನು ಅನುಬವಿಸುತ್ತಿದ್ದ ಮೋಜಿನ ಆಸ್ವಾದವನ್ನು ನೋಡಬೇಕಾಗಿತ್ತು! ಎಂತಹ ಎತ್ತರದ ಮನಸ್ಸಿನ ಆಳಿರಬೇಕು ಈ ಕುಮಾರ್ ವಿಶ್ವಾಸ್!  ಇನ್ನು ಅವನ ಕೊಳಚೆ ಕವಿತೆಯನ್ನು ಕೇಳುತ್ತಿದ್ದ ರಸಿಕರೂ ಅಶ್ಟೆ, ಎತ್ತರದ ಮನಸ್ಸಿನವರೇ! ಸಾಲು ಸಾಲಿಗೂ ’ಗೊಳ್’ ಎಂದು ನಗುತ್ತಿದ್ದ ಅವರ ಕೇಕೆ ಮುಗಿಲು ಮುಟ್ಟುವಂತಿತ್ತು!
      ಯಾರೋ ಮಲಯಾಳಿಗಳನ್ನು ಆಡಿಕೊಂಡರೆ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಂತೀರಾ? ಮಲಯಾಳಿಗಳಾದರೇನು ಕನ್ನಡಿಗರಾದರೇನು, ನಾವೆಲ್ಲಾ ಒಟ್ಟಾರೆ ದ್ರಾವಿಡರೇ ಅಲ್ಲವೆ? ಇಡಿಯಾಗಿ ನೋಡಿದರೆ, ತಮಿಳರು, ಕನ್ನಡಿಗರು, ತೆಲುಗರು, ನಾವೆಲ್ಲ ಕಪ್ಪು ಬಣ್ಣದವರೇ ಅಲ್ಲವೆ? ಹಾಗಾಗಿ, ಯಾವೊಂದು ದಕ್ಶಿಣ ರಾಜ್ಯದವರ ರೂಪವನ್ನು ಅಣಕಿಸಿದರೂ ಇಡೀ ದಕ್ಶಿಣದವರನ್ನೇ ಅಣಕಿಸಿದಂತೆ ಆಗುವುದಿಲ್ಲವೆ?
      ಉತ್ತರದವರ ಕಣ್ಣಲ್ಲಿ ದಕ್ಶಿಣದವರೆಲ್ಲಾ ಒಂದೇ - ಮದ್ರಾಸಿಗಳು! ’ಉತ್ತರದವರು ನೋಡಲು ಬೆಳ್ಳಗೆ ಚೆಂದ. ದಕ್ಶಿಣದವರು ಕಪ್ಪು ಕುರೂಪಿಗಳು. ಉತ್ತರದವರ ನಡೆನುಡಿ ಚೆನ್ನ. ದಕ್ಶಿಣದವರ ನಡೆನುಡಿ ಕಳಪೆ’- ಇದು ಒಟ್ಟಾರೆ ಉತ್ತರದ ಮಂದಿಗಳ ಅಬಿಪ್ರಾಯ. ಇದು ಉತ್ತರದವರ ಬಗೆನೆಲೆಯನ್ನು ತಿಳಿದ ಹೆಚ್ಚುಕಡಿಮೆ ಎಲ್ಲ ತೆಂಕಣರಿಗೂ ಗೊತ್ತು. ನಾನು ಚಿಕ್ಕವನಾಗಿದ್ದಾಗ, ಉತ್ತರದವರು ದ್ರಾವಿಡ ನುಡಿಗಳ ಬಗ್ಗೆ, ’ರಂಡು ಗುಂಡು ನಾರೀಯಲ್ ಪಾನಿ!’ ಎಂದು ಕೀಳಾಗಿ ಅಣಕಿಸುತ್ತಿದ್ದರು ಎಂಬುದನ್ನು ಹಲವೆಡೆ ಪತ್ರಿಕೆಗಳಲ್ಲಿ ಓದಿದ್ದೇನೆ. ತೆಂಕಣರ ಬಗೆಗಿನ ಬಡಗರ ಈ ಕೀಳು ಅಬಿಪ್ರಾಯ ನೆನ್ನೆ ಮೊನ್ನೆಯದಲ್ಲ. ತುಂಬಾ ಹಿಂದಿನಿಂದಲೂ ಇದು ಇದ್ದುಕೊಂಡು ಬಂದಿದೆ. ಮಂದೂ ಇರುತ್ತದೆ. ಇದು ಒಂದೊಪ್ಪೊತ್ತಿನಲ್ಲಿ ಅಳಿದು ಹೋಗುವಂತಹುದಲ್ಲ.
      ಬಡಗರಿಗೆ ನಮ್ಮ ಮೇಲೆ ಇಂತಹ ಕೀಳು ಅನಿಸಿಕೆ ಇದೆ ಎಂದು ತಿಳಿದಿದ್ದರೂ, ಅದೇನು ಮಾಯವೋ, ನಾವು ಮಾತ್ರ ಅವರ ಬಗ್ಗೆ ಸಿಡುಕುವುದಿಲ್ಲ! ಸಿಡುಕುವುದಿರಲಿ, ಅವರನ್ನು ಪ್ರೋತ್ಸಾಹಿಸಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ! ನಮ್ಮ ಸಿನಿಮಾಗಳನ್ನೇ ನೋಡಿ. ನಾಯಕ ನಟ ನಮ್ಮ ಹಾಗೇ ಕಾಣಿಸುತ್ತಾನೆ. ಆದರೆ ನಾಯಕಿ, ಸಾಮಾನ್ಯವಾಗಿ ಉತ್ತರದ ಎಲ್ಲಿಂದಲೋ ಕರೆತಂದವಳು, ಬೇರೆ ಯಾವುದೋ ಲೋಕದಿಂದ ಬಂದವಳ ಹಾಗೆ ಕಾಣಿಸುತ್ತಾಳೆ. ಅಶ್ಟೇ ಅಲ್ಲ, ಅವಳು ನಮ್ಮ ಹಾಗೇ ಕಾಣುವ ತಂದೆತಾಯಿಗಳ ಮಗಳೂ ಆಗಿರುತ್ತಾಳೆ ಚಿತ್ರದಲ್ಲಿ! ಇದೆಂತಾ ಅಸಂಬದ್ದ ಸ್ವಾಮೀ!? ಆದರೂ, ನಮ್ಮ ಮಂದಿ ಇಂತಾ ಚಿತ್ರಗಳಿಗೆ ನುಗ್ಗುವುದನ್ನು ಬಿಡುವುದಿಲ್ಲ. ಯಾಕೆ, ನಮ್ಮಲ್ಲಿ ಅಂದವಾದ ನಟಿಯರೇ ಇಲ್ಲವೆ? ಇನ್ನು ಹಾಡಿನ ವಿಶಯ ತೆಗೆದುಕೊಳ್ಳಿ. ಸಿನಿಮಾದಲ್ಲಿ ಹಾಡುವವರೆಲ್ಲಾ ಉತ್ತರದವರೇ ಆಗಿರಬೇಕು ಎಂದು ಯಾರೋ ಕಟ್ಟಳೆಯನ್ನೇ ಮಾಡಿದಂತಿದೆ. ’ಕಂಪಿಸ್ಸುವ’, ’ಪಿಸ್ಸುಗುಡುವ’, ಹೀಗೆ ಮುಂತಾಗಿ ಹೇಗೆ ಹೇಗೋ ಇರುತ್ತದೆ ಈ ಹಾಡುಗಾರರ ಕನ್ನಡ ಪದಗಳ ಉಚ್ಚಾರಣೆ. ಆದರೂ, ನಮ್ಮ ನಿರ‍್ಮಾಪಕರಿಗೆ ಮತ್ತು ನಮ್ಮ ಸಿನಿಮಾ ನೋಡುವ ಮಂದಿಗೆ ಇವರೇ ಬೇಕು! ಎಂತೆಂತಹ ನುರಿತ ಹಾಡುಗಾರರಿದ್ದಾರೆ ನಮ್ಮಲ್ಲೇ. ಆದರೆ, ಅವರನ್ನೆಲ್ಲ ನಾವು ಮೂಲೆಗುಂಪು ಮಾಡಿದ್ದೇವೆ. ಇನ್ನು ಸಿನಿಮಾದ ಹೆಸರುಗಳು? ’ಪ್ರೇಮ್ ಕಹಾನಿ’, ’ಅಂದರ್ ಬಾಹರ್’, ’ದಿಲ್‍ವಾಲ’- ಹೀಗೆ ಅಪ್ಪಟ ಅಪರಂಜಿ ಕನ್ನಡ! ಉದ್ದಾರವಾದಳು ಕನ್ನಡ ತಾಯಿ! ಇಶ್ಟು ಸಾಲದು ಎಂಬಂತೆ, ಉತ್ತರದಿಂದ ಬರುವ ಪುಡಾರಿಗಳೆಲ್ಲ ಹಿಂದಿಯಲ್ಲೇ ಎಗ್ಗಿಲ್ಲದಂತೆ ಬಾಶಣ ಬಗುಳಿ ಹೋಗುತ್ತಾರೆ. ಅದನ್ನು ನಾವು ಕುರಿಗಳಂತೆ ತೆಪ್ಪಗೆ ಕುಳಿತು ಕೇಳುತ್ತೇವೆ. ಪುಡಾರಿಗಳಂತಹ ದೊಡ್ಡವರನ್ನು ಬಿಡಿ, ಉತ್ತರದಿಂದ ಬಂದು ತಳ ಊರಿರುವ ಪಿಳ್ಳೆ ಪಿಸುಕಗಳೆಲ್ಲ, ನಮ್ಮ ಮಾತನ್ನಾಡುವ ಬದಲು, ನಮ್ಮ ಬಾಯಲ್ಲಿ ದಿನನಿತ್ಯ ಅವರ ಹಿಂದಿಯನ್ನೇ ಆಡಿಸುತ್ತವೆ. ಏನು ಹೇಳುವುದು ಸ್ವಾಮೀ ನಮ್ಮ ದಕ್ಶಿಣದವರ, ಅದರಲ್ಲೂ ನಮ್ಮ ಕನ್ನಡಿಗರ, ಕೆಚ್ಚಿಗೆ, ಸ್ವಾಬಿಮಾನಕ್ಕೆ?
      ನಾವು ಯಾಕೆ ಹೀಗೆ? ನನ್ನ ಅಬಿಪ್ರಾಯದಲ್ಲಿ, ನಮಗೆ ನಮ್ಮ ದ್ರಾವಿಡತನದ ಅರಿವು ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ’ತಮಿಳರಿಗೆ ದ್ರಾವಿಡತನದ ಅರಿವಿದೆ. ಆದರೂ, ಅವರೂ ಕೂಡ ಚಿತ್ರರಂಗದಲ್ಲಿ ಉತ್ತರದವರಿಗೆ ಮಣೆ ಹಾಕುತ್ತಾರಲ್ಲ?’ ಎಂದು ಯಾರಾದರೂ ನನ್ನನ್ನು ಕೇಳಬಹುದು. ಅದಕ್ಕೆ ನನ್ನ ಮಾರು ಇಶ್ಟೆ - ತಮಿಳರಿಗೆ ದ್ರಾವಿಡ ಶಿಕ್ಶಣವಾಗಿದೆ ಎಂದು ಯಾರು ಹೇಳಿದರು? ಅವರಿಗೂ ಅದು ಸರಿಯಾದ ರೀತಿಯಲ್ಲಿ ಆಗಿಲ್ಲ. ’ದ್ರಾವಿಡ ಎಂದರೆ ತಮಿಳರು, ತಮಿಳರು ಎಂದರೆ ದ್ರಾವಿಡರು’ ಎಂಬ ಸ್ತೂಲ ತಿಳಿವಳಿಕೆಗೆ ಮೀರಿ ತಮಿಳರಲ್ಲೂ ಪರಿಣಾಮಕಾರಿ ದ್ರಾವಿಡ ಶಿಕ್ಶಣವಾಗಿಲ್ಲ. ಇನ್ನು ಉಳಿದ ದಕ್ಶಿಣದವರಿಗೋ, ದ್ರಾವಿಡ ಅರಿವಿನ ಸೋಂಕೇ ಇಲ್ಲ. ನನ್ನ ಅನಿಸಿಕೆ ಇದು - ’ನಮ್ಮ ದ್ರಾವಿಡತನದ ಬಗ್ಗೆ ನಮಗೆ ಸರಿಯಾದ ಶಿಕ್ಶಣ ದೊರೆಯಬೇಕು. ಆಗ ಮಾತ್ರ ನಾವು ದಕ್ಶಿಣದವರು ನಮ್ಮ ನಮ್ಮಲ್ಲಿ ಒಗ್ಗಟ್ಟನ್ನು ಕಂಡುಕೊಳ್ಳಬಹುದು. ನಮ್ಮನ್ನು ಕೀಳಾಗಿ ಕಾಣುವ ಉತ್ತರದವರ ನಿಲುವನ್ನು ಪರಿಣಾಮಕಾರಿಯಾಗಿ ಎದುರಿಸಬಹುದು’

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಕಾಮೆಂಟ್‌ಗಳಿಲ್ಲ: