ಸೋಮವಾರ, ಫೆಬ್ರವರಿ 11, 2013

ಬಾಶಾಂದತೆ ಬೇಡ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಹೇಸಿಗೆ ಬರಿಸುವ ಸುದ್ದಿಗಳಿಗೆ ಏನೂ ಕೊರತೆ ಇಲ್ಲ ಈ ದಿನಗಳಲ್ಲಿ. ಇತ್ತೀಚೆಗೆ ಟೀವೀಯಲ್ಲಿ ನೋಡಿದ ಒಂದು ಸುದ್ದಿ, ಬಾಶೆಯ ಹೆಸರಿನಲ್ಲಿ ನಡೆಯುವ ಕೇಡುಗತನದ ಕಟ್ಟೆದುರಿಯಾದ ನನ್ನಲ್ಲಿ ಅತೀವ ಕಳವಳ ಉಂಟುಮಾಡಿತು.
      ಸುಮಾರು ಹತ್ತು ವರ‍್ಶದ ಹುಡುಗನೊಬ್ಬನ ಬೆಂದು ಹೋಗಿದ್ದ ಎರಡೂ ಮುಂಗಯ್ಗಳನ್ನು ಮತ್ತೆ ಮತ್ತೆ ಟೀವೀ ತೆರೆಯ ಮೇಲೆ ತೋರಿಸುತ್ತಿದ್ದರು. ಹುಡುಗನ ಹೆಸರು ಮಹಮದ್ ಜಾವೆದ್. ಅವನ ಕಯ್ಗಳನ್ನು ಹಾಗೆ ಬೇಯಿಸಿದವನು ದಾದಾ ಪೀರ್ ಎಂಬ ಒಬ್ಬ ಮುಸ್ಲಿಮ್ ದರ‍್ಮಗುರು. ಈ ಅಮಾನವೀಯ ಆಗುಹ ನಡೆದದ್ದು ಆ ಹುಡುಗ ತಂಗಿಕೊಂಡು ಓದುತ್ತಿದ್ದ ಚಿಕ್ಕಮಗಳೂರಿನ ಒಂದು ಮುಸ್ಲಿಮ್ ವಸತಿ ಶಾಲೆಯಲ್ಲಿ. ಕುದಿವ ನೀರಿಂದ ಆ ಹುಡುಗನ ಕಯ್ಯನ್ನು ಆ ದರ‍್ಮಗುರು ಸುಟ್ಟದ್ದು ಯಾಕೆ ಗೊತ್ತೆ? ಆ ಹುಡುಗನ ಕುರಾನ್ ಕಲಿಕೆ ಆ ದರ‍್ಮಗುರು ಎಣಿಸಿದ ಹಾಗೆ ಸಾಗುತ್ತಿರಲಿಲ್ಲ ಎಂಬ ಕಾರಣಕ್ಕಾಗಿ!
      ಹುಡುಗನನ್ನೂ ಹುಡುಗನ ತಂದೆಯನ್ನೂ ವರದಿಗಾರರು ಮಾತಾಡಿಸುತ್ತಿದ್ದರು. ದರ‍್ಮಗುರು ವರದಿಗಾರರಿಂದ ತಲೆಮರೆಸಿಕೊಂಡಿದ್ದ. ವಿಶಯವನ್ನು ವರದಿಗಾರರು ಕೆದಕಿ ನೋಡಿದಾಗ ತಿಳಿದು ಬಂದದ್ದು ಇದು - ಅರಬ್ಬೀ ಬಾಶೆಯ ಅಡಚಣೆ ಆ ಹುಡುಗನಿಗೆ ಕುರಾನ್ ಕಲಿಯುವುದನ್ನು ಕಶ್ಟ ಮಾಡಿತ್ತು.
      ಹುಡುಗ ಮತ್ತು ಆತನ ತಂದೆ ಇಬ್ಬರೂ ಮಾಮೂಲಿ ತೆಂಕಣ ಬಾರತದವರಂತೆ ಕಾಣುತ್ತಿದ್ದರು. ಅವರದ್ದು ದ್ರಾವಿಡ ಮಯ್ಬಣ್ಣ ಮತ್ತು ದ್ರಾವಿಡ ಚಹರೆ. ಇಸ್ಲಾಮನ್ನು ಪಾಲಿಸುವ ದ್ರಾವಿಡರು ಎಂದು ಅವರನ್ನು ಯಾರು ಬೇಕಾದರೂ ಗುರುತಿಸಬಹುದಾಗಿತ್ತು. ಹಾಗಿತ್ತು ಅವರ ಮಯ್ಪರಿ.
      ಆ ಬಡಪಾಯಿ ಹುಡುಗನನ್ನು ನೋಡಿ, ’ಎತ್ತಣ ದ್ರಾವಿಡ ಹುಡುಗ, ಎತ್ತಣ ಅರಬ್ಬೀ ಬಾಶೆ?’ ಎಂದುಕೊಂಡೆ ನಾನು. ದ್ರಾವಿಡ ಹುಡುಗನೊಬ್ಬನಿಗೆ ಅರಬ್ಬೀ ಬಾಶೆ ಕೊಂಚ ತೊಡಕೆನಿಸಿದರೆ, ಅದೇನು ಮಹಾ ತಪ್ಪು ಸ್ವಾಮಿ? ಅಶ್ಟಕ್ಕೂ, ದರ‍್ಮದಲ್ಲಿ ಯಾವುದು ಮುಕ್ಯ? ಅದರ ತಿರುಳೋ, ಇಲ್ಲ, ಅದನ್ನು ಬರೆದಿಟ್ಟಿರುವ ಬಾಶೆಯೋ? ತಿರುಳನ್ನು ತೂರಿ ತವುಡನ್ನು ಬಾಚಿಕೊಳ್ಳುವ ಅರಿವುಗೇಡಿತನ ಯಾಕೆ? ಕ್ರಯ್‍ಸ್ತರು ಅವರ ಅರವೋದುಗೆಯನ್ನು ಅವರವರ ಬಾಶೆಗಳಲ್ಲೇ ಓದಿ ಪ್ರಾರ‍್ತನೆ ಸಲ್ಲಿಸುತ್ತಾರೆ. ಅದರಿಂದ ಕ್ರಯ್‍ಸ್ತ ದರ‍್ಮಕ್ಕೇನಾದರೂ ಕುಂದು ಬಂದಿದೆಯೆ? ಸಂಸ್ಕ್ರುತವನ್ನು ಬಿಟ್ಟು ಮಂದಿಯ ಆಡುನುಡಿಗಳಲ್ಲಿ ಬವ್‍ದ್ದ  ಬಿಕ್ಶುಗಳು ತಮ್ಮ ದರ‍್ಮದ ಪ್ರಚಾರ ಮಾಡಿದರು. ಹಾಗೆ ಮಾಡಿದ್ದಕ್ಕೆ ಬವ್‍ದ್ದ ದರ‍್ಮವೇನಾದರೂ ಮುರುಟಿ ಹೋಯಿತೆ? ಇನ್ನು ನಮ್ಮ ನಾಡಿನಲ್ಲೇ, ಶರಣರು ತಿಳಿಗನ್ನಡದಲ್ಲಿ ವಚನಗಳನ್ನು ಹಾಡಿದರು. ಅದರಿಂದೇನಾದರೂ ವೀರಶಯ್ವ ಮತ ಹರಡದೆ ಉಳಿಯಿತೆ?
      ದರ‍್ಮದ ಹೆಸರಿನಲ್ಲಿ, ಸಂಸ್ಕ್ರುತಿಯ ಹೆಸರಿನಲ್ಲಿ, ತಿಳಿಯದ ಬಾಶೆಯನ್ನು ಜನರ ನಡುವೆ ತೂರಿಸುವುದರಲ್ಲಿ ನಾವು ಹಿಂದೂಗಳು ಕೂಡ ಯಾರಿಗೂ ಕಡಿಮೆ ಇಲ್ಲ. ನಮ್ಮ ವಿಶಯದಲ್ಲಿ ಅರಬ್ಬಿಯ ಸ್ತಾನವನ್ನು ಸಂಸ್ಕ್ರುತ ತೆಗೆದುಕೊಳ್ಳುತ್ತದೆ, ಅಶ್ಟೆ.
      ನಮ್ಮ ಪೂಜೆ ಪುನಸ್ಕಾರಗಳು ನಡೆಯುವುದು ಸಂಸ್ಕ್ರುತದಲ್ಲಿ. ಹೋಮ ಹವನಗಳು ನಡೆಯುವುದು ಸಂಸ್ಕ್ರುತದಲ್ಲಿ. ಮದುವೆಯ ವಿದಿವಿದಾನಗಳು ನಡೆಯುವುದು ಸಂಸ್ಕ್ರುತದಲ್ಲಿ. ದಾರ‍್ಮಿಕ ಕಾರ‍್ಯಕ್ರಮಗಳು ಮೊದಲುಗೊಳ್ಳುವುದು ಸಂಸ್ಕ್ರುತದಲ್ಲಿ. ಎಶ್ಟೋ ಶಾಲೆಗಳಲ್ಲಿ ಮಕ್ಕಳು ಮೊದಲು ಪ್ರಾರ‍್ತನೆ ಸಲ್ಲಿಸುವುದು ಸಂಸ್ಕ್ರುತದಲ್ಲಿ. ಎಲ್ಲವೂ ನಮಗೆ ತಿಳಿಯದ ಸಂಸ್ಕ್ರುತದಲ್ಲಿ! ಸಂಸ್ಕ್ರುತವೇ ಯಾಕಾಗಬೇಕು? ಕನ್ನಡ ಯಾಕಾಗಬಾರದು?
      ನಾವು ಕನ್ನಡಿಗರು ದ್ರಾವಿಡರು, ನಮ್ಮ ಕನ್ನಡ ದ್ರಾವಿಡ ಬಾಶೆ, ಸಂಸ್ಕ್ರುತ ಬಡಗದ ಆರ‍್ಯ ಬಾಶೆ, ಕನ್ನಡಕ್ಕೂ ಅದಕ್ಕೂ ನೆತ್ತರ ನಂಟಿಲ್ಲ, ಸಂಸ್ಕ್ರುತ ನಮ್ಮದಲ್ಲ ಎಂದು ಮುಂತಾದ ಕಾರಣಗಳಿಗಾಗಿ ನಾನು ಸಂಸ್ಕ್ರುತದ ಇದಿರಾಗಿ ಮಾತಾಡುತ್ತಿಲ್ಲ. ನಮ್ಮ ಬದುಕಿಗೆ ಮುಕ್ಯವಾದ ವಿದಿವಿದಾನಗಳು ನಮಗೆ ತಿಳಿಯದ ಬಾಶೆಯಲ್ಲಿ ಯಾಕೆ ನಡೆಯಬೇಕು ಎಂಬ ಮೂಲಬೂತ ಕೇಳ್ವಿಯ ನೆಲೆಯಿಂದ ಮಾತಾಡುತ್ತಿದ್ದೇನೆ. ನಮ್ಮ ವಿದಿವಿದಾನಗಳು ನಮಗೆ ತಿಳಿಯುವ ಬಾಶೆಯಲ್ಲಿದ್ದರೆ ಸರಿಯಲ್ಲವೆ ಎಂಬ ಸಹಜ ತರ‍್ಕದ ನೆಲೆಯಿಂದ ಮಾತಾಡುತ್ತಿದ್ದೇನೆ.
     ಹಿಂದೆ, ಕುವೆಂಪು ಅವರು ಮದುವೆಯ ಸರಳ ವಿದಿಗಳನ್ನು ಕನ್ನಡದಲ್ಲೇ ರಚಿಸಿದ್ದರಂತೆ. ಅವರ ಮಾದರಿಯನ್ನು ಅನುಸರಿಸಿ ಹಲವು ಮದುವೆಗಳು ನಡೆದಿದ್ದವಂತೆ (ತೀರ ಇತ್ತೀಚೆಗೂ ಕುವೆಂಪು ವಿದಿಯಲ್ಲಿ ಮದುವೆಗಳು ನಡೆದಿವೆ ಎಂದೂ ಕೇಳಿದ್ದೇನೆ). ಇನ್ನು ನಮ್ಮ ಕಾಲದಲ್ಲಿ ಕೂಡ, ನಗೆಗಯ್ವಿ ಕ್ರಿಶ್ಣೇಗವ್ಡರ ಮಗಳ ಮದುವೆಯನ್ನು ಹಿರೇಮಗಳೂರು ಕಣ್ಣನ್ ಅವರು ಕನ್ನಡದಲ್ಲೇ ನಡೆಸಿಕೊಟ್ಟುದನ್ನು ಟೀವೀಯಲ್ಲಿ ಕಳೆದ ವರ‍್ಶ ನಾವು ನೋಡಿದ್ದೇವೆ. ಹೀಗೆ ಸಂಸ್ಕ್ರುತದ ಬದಲು ಕನ್ನಡದಲ್ಲೇ ನಡೆಸುವ ಶುಬ ಕಾರ‍್ಯಕ್ರಮಗಳು ಆಗಾಗ್ಗೆ ಜರುಗುತ್ತಿರುತ್ತವೆ.
      ಹಾಗಾಗಿ, ಸಂಸ್ಕ್ರುತವಿಲ್ಲದೆ ನಮ್ಮ ದರ‍್ಮ ಮತ್ತು ಸಂಸ್ಕ್ರುತಿ ನಡೆಯುವುದಿಲ್ಲ ಎಂದು ನಾವು ನಂಬಬೇಕಾಗಿಲ್ಲ. ನಮ್ಮ ಕನ್ನಡದಲ್ಲೇ ಅವು ನಡೆಯಬಲ್ಲವು. ಬರಿಯ ಮದುವೆ ಮುಂತಾದವುಗಳೇ ಏಕೆ, ನಮ್ಮ ಪರಮ ಗುರಿ ಮೋಕ್ಶ ಕೂಡ ಕನ್ನಡದ ಮೂಲಕವೇ ದೊರೆಯಬಲ್ಲುದು. ಶತಮಾನಗಳ ಹಿಂದೆಯೇ ಮಹಲಿಂಗ ರಂಗನೆಂಬ ಒಬ್ಬ ಕನ್ನಡದ ಕವಿ ಹೇಳಿದ್ದ - ಸುಲಿದ ಬಾಳೆಯ ಹಣ್ಣಿನಂದದಿ, ಕಳಿದ ಸಿಗುರಿನ ಕಬ್ಬಿನಂದದಿ, ... ಸುಲಬವಾಗಿರ‍್ಪ ಕನ್ನಡದ ನುಡಿಯಲ್ಲಿ ತಿಳಿದು ತನ್ನೊಳು ತನ್ನ ಮೋಕ್ಶವ ಗಳಿಸಿಕೊಂಡರೆ ಸಾಲದೇ, ಸಂಸ್ಕ್ರುತದಲಿನ್ನೇನು?
      ಮಹಲಿಂಗ ರಂಗಾ, ನಿನ್ನ ಮಾತಿಗೆ ನನ್ನ ನೆರೆಯೊಪ್ಪಿಗೆ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಕಾಮೆಂಟ್‌ಗಳಿಲ್ಲ: