ಶುಕ್ರವಾರ, ಏಪ್ರಿಲ್ 25, 2014

ನಮ್ಮ ಮೆಟ್ರೋ ಮತ್ತು ಹಿಂದೀ ಹೇರಿಕೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕೆಲ ವಾರಗಳ ಹಿಂದೆ ಬೆಂಗಳೂರಿನ ಹೆಮ್ಮೆಯ ನಮ್ಮ(!?) ಮೆಟ್ರೋ ರಯಿಲು ತನ್ನ ಎರಡನೆಯ ಹಳಿವಳಿಯನ್ನು (track-route) ಸಾರ್‌ವಜನಿಕ ಸೇವೆಗೆ ತೆರೆದಾಗ ಡೇಜಾವೂ ಎಂಬಂತೆ ಹಳೆಯ ಕೆಲ ದ್ರುಶ್ಯಗಳು ಟೀವೀಯ ಮೇಲೆ ಮತ್ತೆ ಕಾಣಿಸಿಕೊಂಡುವು. ಮೆಟ್ರೋದಲ್ಲಿ ಹಿಂದಿಯಲ್ಲಿ ಸಂದೇಶಗಳನ್ನು ಕೊಡುವುದನ್ನು ವಿರೋದಿಸುವ ಒಂದು ಚರ್‌ಚಾ ಕಾರ್‌ಯಕ್ರಮ ನಡೆಯಿತು. ಬನವಾಸಿ ಬಳಗದ ಗೆಳೆಯರು ಅದರಲ್ಲಿ ಪಾಲ್ಗೊಂಡು, ಮೆಟ್ರೋದಲ್ಲಿ ಹಿಂದೀ ಹೇರಿರುವುದು ಹೇಗೆ ತಪ್ಪು ಎಂಬುವುದನ್ನು ತಕ್ಕ ಕಾರಣಗಳನ್ನು ಕೊಡುತ್ತ ನೋಡುಗರ ಮುಂದೆ ತೆರೆದಿಟ್ಟರು. ದಯ್‍ತ್ಯ ಅಳವನ್ನು ಹೊಂದಿರುವ ಕನ್ನಡ ಸಂಗಟನೆಯ ಮುಂದಾಳೊಬ್ಬರು ಸುದ್ದಿ ತುಣುಕೊಂದರಲ್ಲಿ, ’ನೆರೆಯ ತಮಿಳುನಾಡಿನಲ್ಲಿ ಯಾವ ಸಂಚಾರ ಏರ್‌ಪಾಡಿನಲ್ಲೂ ಹಿಂದಿಯ ಬಳಕೆ ಇಲ್ಲ. ನಮ್ಮ ಮೆಟ್ರೋದಲ್ಲಿ ಮಾತ್ರ ಯಾಕಿರಬೇಕು? ಇದರ ಬಗ್ಗೆ ಸಂಬಂದಪಟ್ಟವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ’ಎಂಬ ಹೇಳಿಕೆ ಕೊಟ್ಟರು. ನಿರಾಸೆಯ ಸಂಗತಿ ಏನೆಂದರೆ, ಇದೇ ಬಗೆಯ ಹೇಳಿಕೆಗಳೂ ಚರ್‌ಚೆಗಳೂ ಕೆಲ ವರ‍್ಶಗಳ ಹಿಂದೆ ನಮ್ಮ ಮೆಟ್ರೋ ತನ್ನ ಸೇವೆಯನ್ನು ಮೊತ್ತಮೊದಲು ತೊಡಗಿಸಿದಾಗ ಕೂಡ ಕೇಳಿ ಬಂದಿದ್ದವು. ಇದರ ಅರ್‌ತ ಏನೆಂದರೆ, ಈ ಎರಡು ಮೂರು ವರ್‌ಶಗಳಲ್ಲಿ ಹಿಂದೀ ಸಂದೇಶಗಳ ಬಗ್ಗೆ ನಮ್ಮಲ್ಲಿ ಕೆಲವರು ತೋರಿಸಿರುವ ವಿರೋದದ ವಿಶಯದಲ್ಲಿ ಮೆಟ್ರೋ ಸಂಸ್ತೆ ’ಕ್ಯಾರೆ’ಎಂದು ಕೂಡ ಅಂದಿಲ್ಲವೆಂಬುದು!
      ನಮ್ಮ ಮೆಟ್ರೋ ಸಂಸ್ತೆ ಈ ವಿಶಯದಲ್ಲಿ ಏನೂ ಗೊತ್ತಿಲ್ಲದಂತೆ ಇರುವುದು ಏಕೆ? ಹಿಂದೀ ಹೇರಿಕೆಯ ವಿಶಯವನ್ನು ಯಾರೂ ನೇರವಾಗಿ ಅದರ ಗಮನಕ್ಕೆ ತಂದಿಲ್ಲವೆಂದಲ್ಲ. ಬನವಾಸಿ ಬಳಗದ ವೆಬ್ ತಾಣಕ್ಕೆ ಹೋಗಿ ನೋಡಿದರೆ, ಅವರು ಮೆಟ್ರೋ ಸಂಸ್ತೆಯ ಮುಂದೆ ಆಗಾಗ್ಗೆ ಈ ವಿಶಯದಲ್ಲಿ ಆಕ್ಶೇಪಿಸಿಕೊಂಡು ಬಂದಿರುವುದು ಕಾಣುತ್ತದೆ. ಕಾನೂನು ಕೊಡಮಾಡಿರುವ ಸವುಲಬ್ಯಗಳನ್ನು ಬಳಸಿಕೊಂಡು ಬನವಾಸಿ ಬಳಗದವರು, ಹಿಂದೀ ಹೇರಿರುವ ತಪ್ಪಿನ ಬಗ್ಗೆ ಮೆಟ್ರೋ ಸಂಸ್ತೆಯ ಪಾರುಪತ್ಯೆಯವರಿಗೆ ಹಲವಾರು ಬಾರಿ ಎತ್ತಿ ತೋರಿಸಿದ್ದಾರೆ. ಸಾರ‍್ವಜನಿಕರ ಸಾವಿರಾರು ಎಲೆಕ್ಟ್ರಾನಿಕ್ ಸಹಿಗಳನ್ನು ಕೂಡ ಇದರ ಬಗ್ಗೆ ಬಳಗದ ಪರಿವಾರದವರು ಒಟ್ಟಯಿಸಿ, ಸಂಬಂದಪಟ್ಟವರಿಗೆ ರವಾನಿಸಿದ್ದಾರೆ. ಇಶ್ಟೆಲ್ಲ ಮಾಡಿದರೂ ಇಳುವರಿ ಮಾತ್ರ ಸೊನ್ನೆ! ಇದು ಹೀಗೇ ನಡೆದರೆ ಕನ್ನಡಿಗರ ’ನಮ್ಮ’ ಮೆಟ್ರೋದಲ್ಲಿ ಉತ್ತರದವರ ಹಿಂದಿ ನೆಲೆಯಾಗಿ ನಿಂತು ರಾರಾಜಿಸುವುದು ಗ್ಯಾರಂಟಿ.
      ಹಾಗಾದರೆ, ನಮ್ಮ ಮೆಟ್ರೋ ಸಂಸ್ತೆಯನ್ನು ಮಣಿಸಲು ಏನು ಮಾಡಬೇಕು? ಮುಕ್ಯವಾಗಿ, ನಾವು ಆರಿಸಿ ಕೂರಿಸಿರುವ ನಮ್ಮ ’ಪ್ರತಿನಿದಿಗಳ’ ಬಾಯಿಂದ ಮೆಟ್ರೋ ಸಂಸ್ತೆಗೆ ಹೇಳಿಸಬೇಕು. ಮೆಟ್ರೋ ಸೇವೆ ತೊಡಗಿದಂದಿನಿಂದ ಇಶ್ಟು ಕಾಲದವರೆಗೆ, ನಮ್ಮ ಒಬ್ಬ ಪ್ರತಿನಿದಿಯಾದರೂ ಈ ವಿಶಯದಲ್ಲಿ ತುಟಿಪಿಟಕ್ಕೆಂದಿದ್ದಾರೆಯೆ? ಇಲ್ಲ! ಹಿಂದೀ ಮಾತಾಡುವ ದಿಲ್ಲಿಯ ಹಯ್ ಕಮಾಂಡಿನವರಿಂದ ಮಾತು ಮಾತಿಗೆ ಅಣತಿಗಳನ್ನು ಹೇಳಿಸಿಕೊಳ್ಳುವ ಚಾಳಿಯನ್ನು ಮಯ್ಗೂಡಿಸಿಕೊಂಡಿರುವ ಇವರಿಂದ ಹಿಂದೀ ವಿರೋದದ ಹೇಳಿಕೆಗಳು ಎಲ್ಲಾದರೂ ಬರುವುದುಂಟೆ? ಹೇಗೋ ಮೊದಲು ಇವರ ಬಾಯಿಂದ ಮೆಟ್ರೋದಲ್ಲಿನ ಹಿಂದೀ ಸಂದೇಶಗಳನ್ನು ತೆಗೆದು ಹಾಕುವ ಹೇಳಿಕೆಗಳನ್ನು ನಾವು ಬರಿಸಬೇಕು. ಇದಕ್ಕಾಗಿ ಇವರ ಬಳಿ ಹೋಗಿ ಬರೀ ಕೋರಿಕೊಂಡರೆ ಆಗುವುದಿಲ್ಲ. ಜನಬಲವಿಲ್ಲದ ಯಾವ ಕೋರಿಕೆಗಳ ವಿಶಯದಲ್ಲೂ ಜನನಾಯಕರು ತಮ್ಮ ’ಬೆಲೆಕಟ್ಟಲಾಗದ’ ಸಮಯವನ್ನು ಹಾಳುಮಾಡಿಕೊಳ್ಳುವುದಿಲ್ಲ. ಆದ್ದರಿಂದ, ಎಲ್ಲಕ್ಕೂ ಮೊದಲು ನಾವು ನಮ್ಮ ಕೋರಿಕೆಗೆ ಜನಬಲವಿದೆ ಎಂಬುದನ್ನು ತೋರಿಸಬೇಕು.
      ಜನಬಲವನ್ನು ತೋರಿಸುವುದಕ್ಕೆ ಎಲೆಕ್ಟ್ರಾನಿಕ್ ಸಹಿಗಳು ನಮ್ಮ ದೇಶದ ವ್ಯವಸ್ತೆಯಲ್ಲಿ ಸಾಲುವುದಿಲ್ಲ ಎನ್ನುವುದು ನನ್ನ ನಂಬಿಕೆ. ಈ ಆದುನಿಕ ದಿನಗಳಲ್ಲೂ ನಮ್ಮಲ್ಲಿ, ಹತ್ತಾರು ಸಾವಿರ ಜನಗಳನ್ನು ಒಂದೆಡೆ ಸೇರಿಸಿ ಜನಬಲವನ್ನು ಪ್ರದರ್‌ಶಿಸುವುದೇ ಪರಿಣಾಮಕಾರಿ ಎನಿಸುತ್ತದೆ ನನಗೆ. ಆದರೆ, ಹತ್ತಾರು ಸಾವಿರ ಜನಗಳನ್ನು, ಅದರಲ್ಲೂ ಹಿಂದೀ ವಿರೋದಂತಹ ಜನಾಸಕ್ತಿ ಇರದ ವಿಶಯಗಳಲ್ಲಿ, ಒಂದೆಡೆ ಸೇರಿಸುವುದು ಹೇಗೆ? ಇದೇ ದೊಡ್ಡ ಪ್ರಶ್ನೆ. ಇದಕ್ಕೆ ಉತ್ತರ ಕಂಡುಕೊಂಡರೆ ಮಾತ್ರ ಹಿಂದೀ ಹೇರಿಕೆಯನ್ನು ಮೆಟ್ರೋದಿಂದ ತೆಗೆಯಲು ಆಗಬಹುದು ಎನಿಸುತ್ತದೆ.
      ಬೆಂಗಳೂರಲ್ಲದೆ ಬೇರೆ ಊರುಗಳಲ್ಲಿ ಬದುಕುವ ಒಟ್ಟಾರೆ ಕನ್ನಡಿಗರಿಗೆ ಮೆಟ್ರೋದಲ್ಲಿ ಹಿಂದಿ ತೂರಿಸಿರುವುದು ಒಂದು ಸಮಸ್ಯೆಯೇ ಎನಿಸಿಲ್ಲ. ಇದು ಸಹಜ. ಹೋಗಲಿ, ಬೆಂಗಳೂರಿನ ಕನ್ನಡಿಗರಿಗಾದರೂ ಇದು ಒಂದು ’ಇಶ್ಯೂ’ ಆಗಿದೆಯೆ? ಅನುಮಾನ. ಬೆಂಗಳೂರಿನ ಕನ್ನಡಿಗರು ತಾವೇ ಮೇಲೆ ಬಿದ್ದು ಹಿಂದೀ ಮಾತಾಡುವುದನ್ನು ನೋಡಿದರೆ, ಸಾರ್‌ವಜನಿಕ ಕಾರ್‌ಯಕ್ರಮಗಳಲ್ಲಿ ಹಿಂದೀ ಬಾಶಣಗಳನ್ನು ಆರಾಮಾಗಿ ಕುಳಿತು ಕೇಳುವುದನ್ನು ನೋಡಿದರೆ, ಅವರಿಗೆ ಹಿಂದೀ ಬಳಕೆಯ ಬಗ್ಗೆ ಬೇಸರವಿಲ್ಲದಂತೆ ಕಾಣುತ್ತದೆ. ಈ ಮಾತು, ಬರೀ ಬೆಂಗಳೂರಿನವರಿಗೇ ಏಕೆ, ಇಡೀ ಕರ್‌ನಾಟಕದ ಜನರಿಗೇ ಅನ್ವಯವಾಗುತ್ತದೆ ಎಂದರೂ ತಪ್ಪಾಗಲಾರದು. ಸಿನಿಮಾಗಳಲ್ಲಿ, ಟೀವೀಯಲ್ಲಿ, ಕನ್ನಡಿಗರೇ ಸಾಲು ಸಾಲು ಹಿಂದೀ ಮಾತಾಡುವುದನ್ನು ಈಗ ನೋಡುತ್ತಿದ್ದೇವೆ. ಪೂರ್‌ತಿ ಹಿಂದೀ ಬಾಶೆಯಲ್ಲೇ ಸಂದರ್‌ಶನಗಳನ್ನು ನಡೆಸುವುದನ್ನು ನೋಡುತ್ತಿದ್ದೇವೆ. ಕನ್ನಡ ಹಾಡುಗಳ ಕಾರ‍್ಯಕ್ರಮಗಳಲ್ಲಿ ಕನ್ನಡದ ಹಾಡುಗಾರರೇ ಉಬ್ಬಿನಿಂದ ಹಿಂದೀ ಹಾಡುಗಳನ್ನು ಹಾಡುವುದನ್ನು ನೋಡುತ್ತಿದ್ದೇವೆ. ಇದನ್ನೆಲ್ಲಾ ನೋಡಿದರೆ, ಕನ್ನಡಿಗರು ಹಿಂದೀಯನ್ನು ಆಗಲೇ ಹೆಚ್ಚುಕಡಿಮೆ ಒಪ್ಪಿಕೊಂಡಿರುವಂತೆ ಕಾಣುತ್ತದೆ. ಈ ಊಹೆ ನಿಜವಾದರೆ, ಹಿಂದೀಯನ್ನು ಮೆಟ್ರೋದಿಂದಾಗಲೀ, ಕರ್‌ನಾಟಕದಿಂದಾಗಲೀ ತೆಗೆದು ಹಾಕುವುದು ಹಿಮಾಲಯವನ್ನು ಹತ್ತುವಶ್ಟೇ ಅರಿದಾಗುತ್ತದೆ.
      ಆದ್ದರಿಂದ, ಮೊದಲು ನಾವು ಬೆಂಗಳೂರು ಕನ್ನಡಿಗರಲ್ಲಿ ಎಶ್ಟು ಮಂದಿಗೆ ಮೆಟ್ರೋದಿಂದ ಹಿಂದಿಯನ್ನು ತೆಗೆಸುವ ಆಸೆ ಇದೆ ಎಂಬುದನ್ನು ಕಂಡುಹಿಡಿಯಬೇಕು. ಬೆಂಗಳೂರಿನ ಬೇರೆ ಬೇರೆ ಬಾಗಗಳಲ್ಲಿ, ಬೇರೆ ಬೇರೆ ವರ್‌ಗಗಳ ಕನ್ನಡಿಗರನ್ನು ಬೇಟಿ ಮಾಡಿ, ಮಾತಾಡಿಸಿ, ಈ ವಿಶಯದಲ್ಲಿ ಅವರಿಗೆ ಎಶ್ಟರ ಮಟ್ಟಿನ ಆಸಕ್ತಿ ಇದೆ ಎಂಬುದನ್ನು ಅರಿತುಕೊಳ್ಳಬೇಕು. ಬರೀ ಇಂಟರ್‌ನೆಟ್ಟನ್ನು ನೆಚ್ಚಿಕೊಂಡರೆ ಸಾಲದು. ಸಾಕಶ್ಟು ಮಂದಿಯಲ್ಲಿ ಹಿಂದೀ ಬಗ್ಗೆ ವಿರೋದ ಇದೆ ಎಂದು ಕಂಡುಬಂದರೆ, ಬೆಂಗಳೂರಿನ ಉಳಿದ ತೆಂಕಣ ಬಾರತೀಯರ ಬೆಂಬಲವನ್ನು ಪಡೆದುಕೊಳ್ಳುವ ಮುಂದಿನ ಹೆಜ್ಜೆಯನ್ನು ಇಡಬಹುದು. ಬೆಂಗಳೂರಿನ ದ್ರಾವಿಡ ನುಡಿಗರು ಒಟ್ಟಾಗಿ ಸೇರಿದರೆ, ಹಿಂದೀಯನ್ನು ಬೆಂಗಳೂರಿಂದ ಒಂದೇ ನಾಳಿನಲ್ಲಿ ತೊಲಗಿಸಬಹುದು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಸಹಜವಾಗಿ ಕನ್ನಡಿಗರೇ ಇಡಬೇಕು. ಕನ್ನಡಿಗರು, ತಮಿಳರು, ತೆಲುಗರು ಮತ್ತು ಮಲಯಾಳಿಗರು ಒಂದಾದರೆ ಹಿಂದೀ ಆಟ ನಡೆಯುವುದಿಲ್ಲ. ಆದರೆ ನಾವೆಲ್ಲ ಹೀಗೆ ಒಂದಾಗುವುದಕ್ಕೆ ನಮ್ಮ ಕನ್ನಡ ಸಂಗಟನೆಗಳೇ ಅಡ್ಡ ಬಂದರೂ ಬರಬಹುದು. ಅಡಿಗಡಿಗೂ ತಮಿಳರನ್ನು ಬಯ್ದುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ನಮ್ಮ ಎಶ್ಟೋ ರೋಲ್ಕಾಲ್ ಸಂಗಟನೆಗಳಿಗೆ ದ್ರಾವಿಡರು ಒಂದಾಗುವುದು ಬೇಡ ಎನಿಸಿದರೆ ಅಚ್ಚರಿಯೇನೂ ಇರಬಾರದಶ್ಟೇ?
      ಒಟ್ಟಿನಲ್ಲಿ ನನ್ನ ಅನಿಸಿಕೆ ಇದು - ನಮ್ಮ ಮೆಟ್ರೋದಿಂದ ಹಿಂದಿಯನ್ನು ತೆಗೆಸುವುದಕ್ಕೆ, ಮೊದಲು ನಾವು ಮಾಡಬೇಕಾದುದು ಬೆಂಗಳೂರಿನ ಎಶ್ಟು ಮಂದಿ ಕನ್ನಡಿಗರಿಗೆ ಇದು ಬೇಕಾಗಿದೆ ಎಂದು ತಿಳಿದುಕೊಳ್ಳುವುದು. ಇಂಟರ್‌ನೆಟ್ ಒಂದೇ ಅಲ್ಲದೆ ಬೇರೆ ಇನ್ನು ಯಾವ ಯಾವ ಬಗೆಯಲ್ಲಿ ಇದನ್ನು ಮಾಡಬಹುದು ಎಂಬುದನ್ನು ನಾವು ಎಣಿಸಬೇಕು. ನಿಮಗೇನಾದರೂ ತೋಚಿದರೆ ಎಲ್ಲರೊಡನೆ ಈ ತಾಣದಲ್ಲಿ ಹಂಚಿಕೊಳ್ಳಿ. ನಾವೆಲ್ಲ ಒಬ್ಬಗೆಯಿಂದ ಒಟ್ಟಾಗಿ ನೆಗಳಿದರೆ ಗುರಿಯನ್ನು ಮುಟ್ಟುವುದು ಆಗದ ಮಾತೇನೂ ಅಲ್ಲ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಸೋಮವಾರ, ಮಾರ್ಚ್ 17, 2014

ತಿಪ್ಪಸಂದ್ರದಲ್ಲಿ "ಇಂಗ್ಲಿಶ್ ಕಲಿಸಿ - ಹಿಂದಿ ಕಳಿಸಿ" ಅರುಹುನಡೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಮಾಗಡಿ ತಾಲೂಕಿನ ತಿಪ್ಪಸಂದ್ರದಲ್ಲಿ "ಇಂಗ್ಲಿಶ್ ಕಲಿಸಿ - ಹಿಂದಿ ಕಳಿಸಿ" ಅರುಹುನಡೆಯ ಮೊತ್ತಮೊದಲ ಕಾರ‍್ಯಕ್ರಮವನ್ನು ಬಳಗ ನಡೆಸಿತು. ಕಾರ‍್ಯಕ್ರಮದ ಹೆಚ್ಚಿನ ಕೆಲವು ಚಿತ್ರಗಳನ್ನು ವಿವರಣೆಯೊಡನೆ ನಮ್ಮ Facebook  ತಾಣದ Photos ವಿಬಾಗದಲ್ಲಿ ಹಾಕಿದೆ (https://www.facebook.com/groups/kannadigarudravidare/photos/). ಅವನ್ನೂ ನೋಡಲು ಮರೆಯಬೇಡಿ. ಇನ್ನು, ಅರುಹುನಡೆಗೆ ಪ್ರೇರಣೆ ಏನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ತಾಣದ ಅರುಹುನಡೆ ಪುಟವನ್ನು ನೋಡಿ.

ಮೊದಲ ಚಿತ್ರದಲ್ಲಿರುವವರು, ಎಡದಿಂದ ಬಲಕ್ಕೆ, ಸುರೇಶ್, ಬಾಶಾ ಮತ್ತು ನಾನು (ಎಚ್. ಎಸ್. ರಾಜ್)














ನಾನು ಮತ್ತು ಗೆಳೆಯರಾದ ಸುರೇಶ್, ಬಾಶಾ, ನವಿಲ್ - ನಾವು ನಾಲ್ವರೂ ನಮ್ಮ ಓಮ್ನಿ ವ್ಯಾನಿನಲ್ಲಿ ಕಾರ‍್ಯಕ್ರಮದ ಸರಕನ್ನೆಲ್ಲಾ ತುಂಬಿಕೊಂಡು ಮದ್ಯಾಹ್ನ ಬೆಂಗಳೂರಿಂದ ಹೊರಟು ಸುಮಾರು ಮೂರು ಗಂಟೆಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯನ್ನು ತಲುಪಿದೆವು.
      ತಿಪ್ಪಸಂದ್ರದಲ್ಲಿ ಸರ‍್ಕಾರ ಕನ್ನಡಿಗರ ತೆರಿಗೆ ಹಣದಲ್ಲಿ ದೊಡ್ದದೊಂದು ಸಂಸ್ಕ್ರುತ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಕಟ್ಟಲಿದೆ. ನಮ್ಮ ಮಕ್ಕಳಿಗೆ ಬಾಳ್ತೆ ಇರುವ ಕನ್ನಡ ಇಂಗ್ಲೀಶುಗಳನ್ನು ಹೇಳಿಕೊಡುವುದನ್ನು ಬಿಟ್ಟು ಉಪಯೋಗವಿರದ ಸಂಸ್ಕ್ರುತಕ್ಕೆ ಸವಲತ್ತುಗಳನ್ನು ಪೋಲು ಮಾಡುವುದು ತಪ್ಪು ಎಂಬುದು ನಮ್ಮ ಅನಿಸಿಕೆ. ಆದ್ದರಿಂದ, ತಿಪ್ಪಸಂದ್ರದಲ್ಲೇ ನಮ್ಮ ಅರುಹುನಡೆಯನ್ನು ಸಾಂಕೇತಿಕ ಪ್ರತಿಬಟನೆ ಎಂಬಂತೆ ಶುರು ಮಾಡಿದೆವು.
      ನಮ್ಮ ಕಾರ‍್ಯಕ್ರಮ ನಡೆಸಿಕೊಡುವುದರ ಬಗ್ಗೆ ತಿಪ್ಪಸಂದ್ರದ ಪಂಚಾಯತಿಯವರಿಗೆ ನಾವು ಮೊದಲೇ ತಿಳಿಸಿದ್ದೆವು. ಊರನ್ನು ತಲುಪಿದ ಮೇಲೆ, ಮೊದಲು "ಇಂಗ್ಲಿಶ್ ಕಲಿಸಿ, ಹಿಂದಿ ಕಳಿಸಿ" ಎಂದು ಸಾರುವ ಅರುಹುನಡೆಯ ನಮ್ಮ ಬ್ಯಾನರನ್ನು ಹಿಡಿದು ಊರಿನ ಮುಕ್ಯ ಬೀದಿಗಳಲ್ಲಿ ಕಾರ‍್ಯಕ್ರಮಕ್ಕೆ ಜನರನ್ನು ಮೆಗಾಫೋನಿನ ಮೂಲಕ ಕರೆಯುತ್ತಾ ಒಮ್ಮೆ ಹೋಗಿ ಬಂದೆವು. ಬಂದೊಡನೆ, ಪಂಚಾಯತಿ ಕಚೇರಿಯ ಎದುರಿರುವ ನಾಗರಕಟ್ಟೆಯ ಬದಿ ನಮ್ಮ ಸವುಂಡ್ ಸಿಸ್ಟಮ್ಮನ್ನು ಅಣಿಗೊಳಿಸಿದೆವು. ಹಾಗೇ ಬ್ಯಾನರನ್ನೂ ಕಟ್ಟಿದೆವು. ಕೊಂಚ ಹೊತ್ತಿನಲ್ಲಿ ಮಂದಿ ಬರಲು ತೊಡಗಿದರು.
      ’ದೊಡ್ಡ ಊರುಗಳಲ್ಲಿ ಜನಕ್ಕೆ ಕಾರ‍್ಯಕ್ರಮಗಳಲ್ಲಿ ಆಸಕ್ತಿ ಇರುವುದಿಲ್ಲ. ಆದರೆ, ಚಿಕ್ಕ ಊರುಗಳಲ್ಲಿ ಹಾಗಲ್ಲ. ಕುತೂಹಲಕ್ಕಾಗಿಯಾದರೂ ಕಾರ‍್ಯಕ್ರಮಗಳಿಗೆ ಬರುತ್ತಾರೆ’ ಎಂಬುದು ನಮ್ಮ ಎಣಿಕೆಯಾಗಿತ್ತು. ನಮ್ಮ ಎಣಿಕೆ ಪೂರ್‌ತಿ ಸರಿಯಲ್ಲ ಎಂಬುದು ಬೇಗನೇ ಗೊತ್ತಾಯಿತು! ಸುಮಾರು ಅರುವತ್ತೋ ಎಪ್ಪತ್ತೋ ಮಂದಿ ಬಂದಿದ್ದರು. ಅದು ಅಲ್ಲಿನ ಒಟ್ಟು ವಯಸ್ಕ ಜನಸಂಕ್ಯೆಯ ಶೇಕಡಾ ಹತ್ತರಶ್ಟು ಮಾತ್ರ. ಹೆಂಗಸರಂತೂ ಬೆರಳೆಣಿಕೆಯಶ್ಟಟಿದ್ದರು, ಅಶ್ಟೇ. ಬಹುಮಂದಿ ಹೆಂಗಸರು ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಮುಂತಾದ ಮನೆ ಕೆಲಸಗಳನ್ನು ಮಾಡಿಕೊಂಡಿದ್ದರು. ಯುವಕರೂ ಹೆಚ್ಚಾಗಿ ಕಾಣಲಿಲ್ಲ. ಬಂದವರಲ್ಲಿ ಹೆಚ್ಚಿನವರು ನಡು ವಯಸ್ಸಿನವರಾಗಿದ್ದರು.
      ನಾವು ಕುರ್‌ಚಿಗಳ ಏರ‍್ಪಾಡು ಮಾಡಿರಲಿಲ್ಲ. ಹಾಗಾಗಿ, ಬಂದವರೆಲ್ಲಾ ಎಲ್ಲೆಲ್ಲಿ ಕಟ್ಟೆ ಕಲ್ಲುಗಳಿದ್ದವೋ, ಅಲ್ಲಲ್ಲಿ ಕುಳಿತುಕೊಂಡು ಬಾಶಣವನ್ನು ಕೇಳಿದರು. ಬಹಳಶ್ಟು ಜನ ಅಂಗಡಿಗಳ ಮುಂದಿನ ಬೆಂಚುಗಳ ಮೇಲೆ ಕುಳಿತಿದ್ದರು. ಗೆಳೆಯ ಸುರೇಶ್ ಬಹುದೂರಕ್ಕೆ ಕೇಳಿಸಲೆಂದೇ ಉದ್ದೇಶಿಸಿ ತಮ್ಮ ಕಯ್ಗಳಿಂದಲೇ ವಿಶೇಶವಾಗಿ ಮಾಡಿದ್ದ ನಮ್ಮ ಎರಡೂ ಸ್ಪೀಕರುಗಳೂ ಈ ಸಂದರ‍್ಬದಲ್ಲಿ ತುಂಬು ಉಪಯೋಗಕ್ಕೆ ಬಂದವು. ಸುರೇಶರ ಹಾಗೂ ಈ ಕೆಲಸದಲ್ಲಿ ನೆರವಾದ ಅವರ ಅಣ್ಣನವರ ಕವುಶಲ್ಯಕ್ಕೆ ನಾನು ರುಣಿ.
      ’ಮಕ್ಕಳ ಮೊದಲ ಕಲಿಕೆ ಕನ್ನಡದಲ್ಲೇ ಆಗಬೇಕು. ಆದರೆ, ಮೊದಲಿಂದಲೇ ಅವರಿಗೆ ಇಂಗ್ಲೀಶಿನಲ್ಲಿ ಮಾತನಾಡುವುದನ್ನು ಹೇಳಿಕೊಡಬೇಕು. ಹಾಗೆ ಹೇಳಿಕೊಡುವ ಸವುಲಬ್ಯ ಆಗಲೇ ಇದೆ. ಅದನ್ನು ಸರ‍್ಕಾರ ಎಲ್ಲಾ ಕನ್ನಡ ಮಾದ್ಯಮ ಶಾಲೆಗಳಲ್ಲಿ ಜಾರಿಗೆ ತರಬೇಕು. ಉಪಯೋಗಕ್ಕೆ ಬಾರದ ಹಿಂದೀ ಕಲಿಸುವುದರ ಬದಲು, ಅದೇ ಸಮಯಯವನ್ನು ಇಂಗ್ಲೀಶ್ ಕಲಿಸುವುದಕ್ಕೆ ಬಳಸಬೇಕು’ - ಇದು ನನ್ನ ಬಾಶಣದ ತಿರುಳು. ಬಾಶಣ ಅರ‍್ದ ಗಂಟೆ ಮೀರಲಿಲ್ಲ. ಬಾಶಣದ ಬಳಿಕ ಒಂದಿಬ್ಬರು ಮೂವರು ಕೇಳಿದ ಪ್ರಶ್ನೆಗಳಿಗೆ ತಕ್ಕ ಮಾರು ಹೇಳಿದೆ. ಅಲ್ಲಿಗೆ ನಮ್ಮ ಕಾರ‍್ಯಕ್ರಮ ಮುಗಿಯಿತು.
      ವಿಶೇಶ ಸಂಗತಿಗಳೇ ನಡೆಯದಂತೆ ಸಪ್ಪೆಯಾಗಿ ನಮ್ಮ ಕಾರ‍್ಯಕ್ರಮವೇನೂ ಮುಗಿದು ಹೋಗಲಿಲ್ಲ. ಕಾರ‍್ಯಕ್ರಮದ ಮುನ್ನ, "ಹಿಂದಿ ಕಳಿಸಿ" ಎಂಬ ನಮ್ಮ ಬ್ಯಾನರಿನ ಸಂದೇಶವನ್ನು ತಪ್ಪಾಗಿ ಅರ‍್ತ ಮಾಡಿಕೊಂಡ ಒಬ್ಬ ಹೆಣ್ಣುಮಗಳು, ’ಬೆಂಗ್ಳೂರ‍್ನಾಗೇ ಆಪಾಟಿ ಇಂದಿ ಜನ್‍ಗುಳು ತುಂಬ್ಕಂಡವ್ರೆ. ಅವ್ರುನ್ ಮದ್ಲ್ ಕಳ್ಸಿ, ಆಮೇಲ್ ಇಲ್ಲಿಗ್ ಬರ್ರಿ’ ಎಂದು ನಮಗೆ ತಾಕೀತು ಮಾಡಿದಳು! ಕಾರ‍್ಯಕ್ರಮದ ಬಳಿಕ, ಹಿಂದಿಯನ್ನು ’ಮಾತ್ರುಬಾಶೆ’ಎಂದು ತಪ್ಪಾಗಿ ತಿಳಿದುಕೊಂಡಿದ್ದ ಒಬ್ಬರು, ’ನಮ್ಮ ಮಾತ್ರುಬಾಶೆಯನ್ನೇ ಕಳಿಸಿ ಅಂತಿದ್ದೀರಲ್ಲಾ, ಸರೀನಾ?’ ಎಂದು ಕಳಕಳಿಯನ್ನು ನಟಿಸಿ ಆಕ್ಶೇಪಿಸಿದರು. ಅದಕ್ಕೆ ಅವರ ಒಡನಿದ್ದವರೇ ಅವರ ತಪ್ಪನ್ನು ತೋರಿಸಿ, ’ನಿನ್ನ ಪ್ರಶ್ನೆಗೆ ಅರ‍್ತವೇ ಇಲ್ಲ’ ಎಂದು ಹೇಳಿ ಅವರನ್ನು ಸುಮ್ಮನಿರಿಸಿದರು. ಸುತ್ತಮುತ್ತಲಿದ್ದವರಿಗೆ ಅವರ ಆ ಪ್ರಶ್ನೆಯಿಂದ ತುಂಬಾ ನಗು ಬಂತು. ಇನ್ನು ’ಕನ್ನಡಿಗರೂ ದ್ರಾವಿಡರೆ’ ಎನ್ನುವುದು ಕೆಲವರಿಗೆ ತಿಳಿದ ಸಂಗತಿಯಾಗಿದ್ದರೆ, ಹಲವರಿಗೆ ಹೊಸ ಸುದ್ದಿಯಂತಿತ್ತು. ಅರಸು ಎಂಬ ಸ್ತಳೀಯ ಹಿರಿಯಾಳೊಬ್ಬರು ’ದಕ್ಶಿಣ ಬಾರತದವರೆಲ್ಲಾ ದ್ರಾವಿಡರೇ’ ಎಂದು ಕಾರ‍್ಯಕ್ರಮದ ಬಳಿಕ ಜೊತೆಯಲ್ಲಿದ್ದವರಿಗೆ ಬಿಡಿಸಿ ಹೇಳಿದರು.
      ಬೆಂಗಳೂರಿಗೆ ನಾವು ಮರಳಿದಾಗ ಆಗ ತಾನೇ ಕತ್ತಲಾಗಿತ್ತು. ಒಟ್ಟಿನಲ್ಲಿ, ಕಾರ‍್ಯಕ್ರಮ ನಮಗೆ ತ್ರುಪ್ತಿ ಕೊಟ್ಟಿತ್ತು. ಬರೀ ದೊಡ್ಡ ಊರುಗಳಲ್ಲಿ ಕಾರ‍್ಯಕ್ರಮಗಳನ್ನು ನಡೆಸಿದರೆ ಸಾಲದು. ಸಣ್ಣ ಊರುಗಳಿಗೂ ಸಂದೇಶ ತಲುಪಬೇಕು. ಮೊದಮೊದಲು, ಬೆಂಗಳೂರಿನ ಸುತ್ತಮುತ್ತಲ ಊರುಗಳಲ್ಲಿ ನಮ್ಮ ಅರುಹುನಡೆ ಕಾರ‍್ಯಕ್ರಮಗಳನ್ನು ನಡೆಸಬೇಕೆಂಬುದು ನಮ್ಮ ತೀರ‍್ಮಾನ. ಈ ಕಾರ‍್ಯಕ್ರಮಗಳಲ್ಲಿ ನೀವೂ ಪಾಲ್ಗೊಳ್ಳಬೇಕು ಎಂಬುದು ನಮ್ಮ ಆಸೆ. ಮುಂದಿನ ಕಾರ‍್ಯಕ್ರಮದ ವಿವರಗಳಿಗೆ ಈ ತಾಣವನ್ನು ದಯವಿಟ್ಟು ಆಗಾಗ್ಗೆ ಗಮನಿಸುತ್ತಿರಿ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಮಂಗಳವಾರ, ಫೆಬ್ರವರಿ 18, 2014

ಸ್ವತಂತ್ರ ದ್ರಾವಿಡನಾಡು!?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ನೆರೆಯ ತೆಲುಗುನಾಡನ್ನು ಇರುಪೋಳು ಮಾಡುವ ಪ್ರಕ್ರಿಯೆಯ ಬಗ್ಗೆ ಗಲಾಟೆ ತುದಿಮುಟ್ಟುತ್ತಿರುವ ಈ ದಿನಗಳಲ್ಲಿ ಅಲ್ಲಿಯ ಕೆಲ ಮುಂದಾಳುಗಳಿಂದ ವಯ್ಪರೀತ್ಯದ ಕೂಗುಗಳು ಕೇಳಿಬರುತ್ತಿವೆ. ಇಡಿ ಆಂದ್ರವನ್ನು ಎರಡು ತುಂಡು ಮಾಡುವುದೇ ಆದರೆ, ಸೀಮಾಂದ್ರವನ್ನು ಒಂದು ಪ್ರತ್ಯೇಕ ದೇಶವನ್ನಾಗಿಸಬೇಕು ಎಂಬ ಗುಡುಗು ಅವರಿಂದ ಹೊರಡುತ್ತಿದೆ. ಇದು ಯಾರೋ ಒಬ್ಬಿಬ್ಬರು ಇಡುತ್ತಿರುವ ಬೊಬ್ಬೆಯಲ್ಲ. ಹಲವಾರು ತೆಲುಗು ದೇಶಮ್ ಪಕ್ಶದ ಮುಂದಾಳುಗಳಿಂದ ಬಂದಿರುವ ಆಗ್ರಹ.
      ’ನಮ್ಮದೇ ಸಂಸತ್ ನಮಗೆ ಕೊಡಿ. ದಿಲ್ಲಿಯ ಸಂಸತ್ತಿನಲ್ಲಿ ನಮಗೆ ನ್ಯಾಯವೂ ಇಲ್ಲ, ಬೆಲೆಯೂ ಇಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ಹಾಗೆ ನಮಗೆ ನಮ್ಮದೇ ಆದ ಸೀಮಾಂದ್ರ ದೇಶ ಕೊಡಿ’ ಎಂದು ಮೊದುಗುಲ ವೇಣುಗೋಪಾಲ ರೆಡ್ಡಿ ಎಂಬ ಸಂಸದರು ಅಬ್ಬರಿಸಿದ್ದಾರೆ. ’ಸೀಮಾಂದ್ರ - ಒಂದು ಪ್ರತ್ಯೇಕ ರಾಶ್ಟ್ರ’ ಎಂಬ ಸಮುದಾಯ ಪುಟವೊಂದನ್ನು ಫೇಸ್‍ಬುಕ್ಕಿನಲ್ಲಿ ತೆರೆಯಲಾಗಿದೆಯಂತೆ. ತೆಲುಗು ದೇಶಮ್ಮಿನ, ಒಮ್ಮೆ ಮಂತ್ರಿಯಾಗಿದ್ದ ಗಾಲಿ ಮುದ್ದುಕ್ರಿಶ್ಣಮ ನಾಯುಡು ಎಂಬವರು, ’ತೆಲುಗರಿಗೆ ಮನ್ನಣೆ ದಕ್ಕದು ಎಂದ ಮೇಲೆ, ತೆಲುಗುನಾಡು ಬಾರತದೊಳಗೆ ಏಕಿರಬೇಕು? ಪ್ರತ್ಯೇಕ ರಾಶ್ಟ್ರ ಏಕಾಗಬಾರದು?’ ಎಂದು ಕೇಳುತ್ತಿದ್ದಾರೆ. ಕಿಶ್ಣಾ ಜಿಲ್ಲೆಯ ತೆಲುಗು ದೇಶಮ್ಮಿನ ಅದ್ಯಕ್ಶ ನೂತಕ್ಕಿ ವೇಣುಗೋಪಾಲ ರಾವ್ ಎಂಬವರು ಕಳೆದ ಅಕ್ಟೋಬರಿನಲ್ಲೇ ತೆಲಂಗಾಣದ ವಿಶಯವಾಗಿ ’ಪ್ರತ್ಯೇಕ ಸೀಮಾಂದ್ರ ದೇಶ ಬೇಕು’ಎಂದು ಸಾರುವ ಪೋಸ್ಟರುಗಳನ್ನು ಮಾಡಿಸಿದ್ದರಂತೆ. ಮಾಜಿ ಮಂತ್ರಿ ಸೋಮಿರೆಡ್ಡಿ ಚಂದ್ರಮೋಹನ ರೆಡ್ಡಿ ಎಂಬವರು ಇನ್ನೂ ಮುಂದೆ ಹೋಗಿ, ’ಇಡೀ ತೆಂಕಣ ಬಾರತವೇ ಏಕೆ ಒಂದು ಸ್ವತಂತ್ರ ದೇಶವಾಗಬಾರದು?’ ಎಂದು ಗುಡುಗಿ, ’ಹಾಗಾಗುವ ದಿನಗಳು ದೂರವಿಲ್ಲ’ ಎಂದು ಆಶಾವಾದ ಬೆರೆತ ಬವಿಶ್ಯವನ್ನೂ ನುಡಿದಿದ್ದಾರೆ. ಇನ್ನೊಬ್ಬ ಮಾಜಿ ಮಂತ್ರಿ ಬೊಜ್ಜಲ ಗೋಪಾಲಕ್ರಿಶ್ಣ ರೆಡ್ಡಿ ಎಂಬವರು, ’ಬಾರತ ಯೂರೋಪಿನ ಹಾಗೆ ಸ್ವತಂತ್ರ ದೇಶಗಳ ಒಕ್ಕೂಟವಾಗಬೇಕು’ ಎಂದು ದನಿಗೂಡಿಸಿದ್ದಾರೆ. ಇವೆಲ್ಲಾ ಸಂಗತಿಗಳು ಫೆಬ್ರವರಿ ಹದಿನಾರರ ಟಯ್‍ಮ್ಸ್ ಆಫ್ ಇಂಡಿಯಾ ಸುದ್ದಿಹಾಳೆಯಲ್ಲಿ ಪ್ರಕಟವಾಗಿವೆ.
      ತಮಗೆ ನ್ಯಾಯ ದೊರಕುತ್ತಿಲ್ಲ ಎಂಬ ಹತಾಶೆ ತಟ್ಟಿದಾಗ ಮಂದಿ ಈ ರೀತಿ ಪ್ರತ್ಯೇಕತೆಯ ಕೂಗು ಹಾಕುವುದು ಆಗಾಗ್ಗೆ ನಡೆಯುತ್ತಾ ಬಂದಿದೆ. ಕಾವೇರಿ ನೀರಿನ ಗದ್ದಲದಲ್ಲಿ ನಮ್ಮ ನಡುವೆಯೂ ಪ್ರತ್ಯೇಕತೆಯ ಕ್ಶೀಣ ಕೊರಲು ಕಳೆದ ವರ‍್ಶ ಕೇಳಿಬಂದಿತ್ತು. ಆದರೆ, ಈಗ ಆಂದ್ರದಿಂದ ಬರುತ್ತಿರುವುದನ್ನು ಕ್ಶೀಣದನಿ ಎಂದು ಕಡೆಗಾಣಿಸುವಂತಿಲ್ಲ. ಇದು ತೆಲುಗು ದೇಶಂ ಪಕ್ಶದ ರಾಜಕೀಯ ನಡೆಯೇ ಆದರೂ, ಅದು ಸಾರುತ್ತಿರುವ ಸಂದೇಶಗಳಲ್ಲಿ ಅದರ ಮುಂದಾಳುಗಳಿಗೆ ಕೂಡ ದಿಟವಾದ ನಂಬಿಕೆ ಇರುವಂತೆಯೇ ಕಾಣಿಸುತ್ತಿದೆ. ಅಶ್ಟಕ್ಕೂ, ಚಿತ್ತೂರಿನಲ್ಲಿ ’ದ್ರಾವಿಡ ವಿಶವಿದ್ಯಾಲಯವನ್ನು’ ನಿರಿಸಿದ್ದು ತೆಲುಗು ದೇಶಮ್ ಪಕ್ಶವೇ. ಈ ಪಕ್ಶಕ್ಕೆ ಮೊದಲಿಂದಲೂ ದ್ರಾವಿಡ ಅರಿವು ಇದ್ದಂತೆ ಕಾಣುತ್ತದೆ. ಒಟ್ಟಿನಲ್ಲಿ ಮುಕ್ಯವಾಗಿ ಗಮನಿಸಬೇಕಾದದ್ದು ಏನೆಂದರೆ, ತೆಂಕಣ ಬಾರತದಲ್ಲಿ, ತಮಿಳುನಾಡಿನ ಹೊರಗೂ ಅಲ್ಲಲ್ಲಿ ಕೊಂಚಕೊಂಚ ದ್ರಾವಿಡತನದ ಅರಿವು ಇನ್ನೂ ಬದುಕಿಕೊಂಡಿದೆ ಎನ್ನುವುದು. ನಮ್ಮ ’ಕನ್ನಡಿಗರೂ ದ್ರಾವಿಡರೆ’ ಬಳಗ ಅಸ್ತಿತ್ವಕ್ಕೆ ಬಂದ ಅಲ್ಪಕಾಲದಲ್ಲೇ ಈ ಸತ್ಯ ನನಗೆ ಮನವರಿಕೆಯಾಗಿತ್ತು.
      ಪ್ರಶ್ನೆ ಇದು - ಪ್ರತ್ಯೇಕತೆ ಸರಿಯೆ? ಹತಾಶೆಯ ನೋವಿಂದ ಪ್ರೇರಿತವಾಗಿ ’ನಾವು ಬೇರೆಯಾಗಬೇಕು’ ಎಂಬ ಬಾವುಕತೆಯ ಕೂಗೇಳುವುದು ಸಹಜ. ಆದರೆ, ಪ್ರತ್ಯೇಕತೆಯಂತಹ ಗಂಬೀರವಾದ ಸಂಗತಿಯನ್ನು ವಿವೇಚನೆಯಿಂದ ನೋಡುವುದು ಒಳಿತು. ಬಾವುಕತೆಯ ಕಯ್ಗೆ ಜುಟ್ಟುಕೊಟ್ಟು ಒಂದೊಂದು ರಾಜ್ಯವೂ ಒಂದೊಂದು ಸ್ವತಂತ್ರ ದೇಶವಾಗಿ ಸಿಡಿದು ಚದುರಿದರೆ, ನಾವು ನೆಮ್ಮದಿಯಿಂದ ಬಾಳಲಿಕ್ಕಾಗುತ್ತದೆಯೆ? ಇದರ ಬಗ್ಗೆ ಆಳವಾಗಿ ಯೋಚಿಸಬೇಕು. ನಮ್ಮ ದೇಶದ ಇತಿಹಾಸವನ್ನು ನೋಡಿದರೆ, ಚದುರಿ ಬಾಳುವುದರಿಂದ ನಮಗೆ ನಶ್ಟವಾಗುವ ಸಾದ್ಯತೆಯೇ ಹೆಚ್ಚು ಎಂಬುದು ಎದ್ದು ಕಾಣುತ್ತದೆ. ಶತಮಾನಗಳ ಹಿಂದೆ, ಸಂಪನ್ಮೂಲಗಳ ಕೊರತೆ ಇಲ್ಲದಿದ್ದಾಗಲೂ ನಾವು ನಮ್ಮನಮ್ಮಲ್ಲೇ ಅರ‍್ತವಿಲ್ಲದ ಕಲಹಗಳನ್ನು ಮಾಡಿಕೊಂಡಿದ್ದೇವೆ. ಇನ್ನು ಸಂಪನ್ಮೂಲಗಳ ಕೊರತೆ ಹೇರಳವಾಗಿರುವ ಈ ದಿನಗಳಲ್ಲಿ ನಮ್ಮ ನಡವಳಿಕೆ ಹೇಗಾಗಬಹುದು? ಮೊದಲಿಂದಲೂ ನಮ್ಮಲ್ಲಿ ದಡ್ದತನಕ್ಕೇನೂ ಕೊರತೆ ಇಲ್ಲವಲ್ಲ? ನಮ್ಮ ಎಶ್ಟೋ ಹೊಳೆಗಳು ಎರಡು ಮೂರು ರಾಜ್ಯಗಳ ಮೂಲಕ ಹರಿಯುತ್ತವೆ. ನಾವು ಪ್ರತ್ಯೇಕ ರಾಶ್ಟ್ರಗಳಾದರೆ, ಅವುಗಳನ್ನು ನ್ಯಾಯಸಮ್ಮತವಾಗಿ ಹಂಚಿಕೊಳ್ಳುವಶ್ಟು ಎತ್ತರದ ತಿಳಿವಳಿಕೆಯ ಮಟ್ಟ ನಮಗಿದೆಯೆ? ಇದೆ ಎಂದು ಹೇಳುವ ಆರ‍್ಪು ಯಾರಿಗೂ ಇರದು. ವಾಸ್ತವ ಹೀಗಿರುವಾಗ ಪ್ರತ್ಯೇಕತೆಯ ಕೂಗು ಸಲ್ಲ.
      ಹಾಗಾದರೆ, ’ದಕ್ಶಿಣದ ನಮಗೆ ಬಾರತದ ಒಕ್ಕೂಟದಲ್ಲಿ ಬೆಲೆ ಸಿಗುತ್ತಿಲ್ಲ’ ಎಂಬ ಸಮಸ್ಯೆಗೆ ಬಗೆಹರಿವೇನು? ಬಗೆಹರಿವೇನೆಂದರೆ, ನಮ್ಮ ಮನೋಸ್ತಿತಿಯನ್ನು ಕೊಂಚ ಮಾರ‍್ಪಡಿಸಿಕೊಳ್ಳುವುದು. ದಿಲ್ಲಿಯ ಮಟ್ಟದಲ್ಲಿ, ’ನಾವು ಕನ್ನಡರು, ನಾವು ತಮಿಳರು, ನಾವು ತೆಲುಗರು’ ಎಂದು ನಮ್ಮನ್ನು ನಾವು ಬೇರೆಬೇರೆಯಾಗಿ ಗುರುತಿಸಿಕೊಳ್ಳದೇ, ’ದಕ್ಶಿಣದವರು ನಾವೆಲ್ಲ ದ್ರಾವಿಡರು’ ಎಂದು ಒಗ್ಗಟ್ಟಿನಿಂದ ನಡೆಯಬೇಕು. ನಮ್ಮ ಯಾವುದೇ ಒಂದು ರಾಜ್ಯಕ್ಕೆ ಅವಮಾನವಾದರೆ, ಅದು ನಮಗೆಲ್ಲರಿಗೂ ಆದ ಅವಮಾನ ಎಂದೇ ಬಾವಿಸಿಕೊಳ್ಳಬೇಕು. ಮೊನ್ನೆ ಮೊನ್ನೆ ಆಮ್ ಆದ್ಮಿ ಪಕ್ಶದ ಅರಿವುಗೆಟ್ಟವನೊಬ್ಬ ಮಲಯಾಳೀ ನರ‍್ಸುಗಳನ್ನು ಕಪ್ಪು ಕುರೂಪಿಗಳು ಎಂದು ಅಣಕಿಸಿದಾಗ, ಕೇರಳೀಯರನ್ನು ಬಿಟ್ಟರೆ, ಉಳಿದ ನಾವೆಲ್ಲ ಸುಮ್ಮನಿದ್ದೆವು. ಇದು ಸರಿಯಲ್ಲ. ಮುಕ್ಯವಾಗಿ, ನಮ್ಮ ಮುಂದಾಳುಗಳು ’ಪ್ರತ್ಯೇಕತೆ’ ಎಂದು ಕೂಗುವ ಬದಲು ನಮ್ಮ ದ್ರಾವಿಡತನದ ಅರಿವನ್ನು ನಮ್ಮ ಎಲ್ಲ ಸಮುದಾಯಗಳಲ್ಲೂ ಹರಡುವ ಪ್ರಯತ್ನವನ್ನು ಮಾಡಬೇಕು. ನಮ್ಮ ದ್ರಾವಿಡ ಒಗ್ಗಟ್ಟನ್ನು ನಾವು ಒಂದು ಗಟ್ಟಿನೆಲೆಯಲ್ಲಿ ಮೆರೆದರೆ, ತೆಲಂಗಾಣದಂತಹ ತೊಂದರೆಗಳು ಏಳುವುದೂ ಇಲ್ಲ, ನಮಗೆ ರಾಶ್ಟ್ರ ಮಟ್ಟದಲ್ಲಿ ಬೆಲೆ, ಮನ್ನಣೆ ಮತ್ತು ನ್ಯಾಯಗಳು ದೊರಕದೆ ಹೋಗುವುದೂ ಇಲ್ಲ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಸೋಮವಾರ, ಜನವರಿ 27, 2014

ಕಾಲೀ ಪೀಲೀ ಮಲಯಾಳೀ ನರ‍್ಸ್!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಆಮ್ ಆದ್ಮಿ ಪಕ್ಶದ ಮುಂದಾಳುಗಳಲ್ಲೊಬ್ಬನಾದ ಕುಮಾರ್ ವಿಶ್ವಾಸ್ ಎಂಬ ಮಹಾನುಬಾವನೊಬ್ಬ, ದಿಲ್ಲಿಯ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಮಲಯಾಳೀ ನರ‍್ಸುಗಳ ಬಗ್ಗೆ ಹೀನಾಯವಾಗಿ ಮಾತನಾಡಿದ್ದರ ವಿಡಿಯೋ ತುಣುಕೊಂದನ್ನು ಕಳೆದ ವಾರ ದೇಶದ ಜನಪ್ರಿಯ ಆಂಗ್ಲ ಟೀವೀ ಕಾಲುವೆಗಳು ಹಲವು ಬಾರಿ ಮತ್ತೆ ಮತ್ತೆ ತೋರಿಸಿದವು. ಈ ಕುಮಾರ್ ವಿಶ್ವಾಸ್ ಎಂಬ ಪುಣ್ಯಾತ್ಮ ಒಬ್ಬ ಕವಿಯಂತೆ! ಮಲಯಾಳೀ ನರ‍್ಸುಗಳ ಬಗ್ಗೆ ಈತ ಕವಿತೆಯೊಂದನ್ನು ಗೀಚಿ, ಅದರಲ್ಲಿ, ’ಮಲಯಾಳೀ ನರ‍್ಸುಗಳು ಎಶ್ಟು ಕಪ್ಪು ಹಾಗೂ ಕುರೂಪಿಗಳು ಅಂದರೆ, ಅವರನ್ನು ಕಂಡಾಗ ಆಕರ‍್ಶಣೆಯ ಬಾವ ಮೂಡುವ ಬದಲು ತಾನೇ ತಾನಾಗಿ ಸೋದರ ಬಾವ ಮೂಡುತ್ತದೆ!’ ಎಂದು ಅವಹೇಳನ ಮಾಡಿದ್ದಾನೆ. ಈ ಕವಿತೆಯ ಚುಟುಕನ್ನು ಕವಿಗೋಶ್ಟಿಯೊಂದರಲ್ಲಿ ರಸಿಕರ ಮುಂದಿಡುವಾಗ ಅವನು ಅನುಬವಿಸುತ್ತಿದ್ದ ಮೋಜಿನ ಆಸ್ವಾದವನ್ನು ನೋಡಬೇಕಾಗಿತ್ತು! ಎಂತಹ ಎತ್ತರದ ಮನಸ್ಸಿನ ಆಳಿರಬೇಕು ಈ ಕುಮಾರ್ ವಿಶ್ವಾಸ್!  ಇನ್ನು ಅವನ ಕೊಳಚೆ ಕವಿತೆಯನ್ನು ಕೇಳುತ್ತಿದ್ದ ರಸಿಕರೂ ಅಶ್ಟೆ, ಎತ್ತರದ ಮನಸ್ಸಿನವರೇ! ಸಾಲು ಸಾಲಿಗೂ ’ಗೊಳ್’ ಎಂದು ನಗುತ್ತಿದ್ದ ಅವರ ಕೇಕೆ ಮುಗಿಲು ಮುಟ್ಟುವಂತಿತ್ತು!
      ಯಾರೋ ಮಲಯಾಳಿಗಳನ್ನು ಆಡಿಕೊಂಡರೆ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಂತೀರಾ? ಮಲಯಾಳಿಗಳಾದರೇನು ಕನ್ನಡಿಗರಾದರೇನು, ನಾವೆಲ್ಲಾ ಒಟ್ಟಾರೆ ದ್ರಾವಿಡರೇ ಅಲ್ಲವೆ? ಇಡಿಯಾಗಿ ನೋಡಿದರೆ, ತಮಿಳರು, ಕನ್ನಡಿಗರು, ತೆಲುಗರು, ನಾವೆಲ್ಲ ಕಪ್ಪು ಬಣ್ಣದವರೇ ಅಲ್ಲವೆ? ಹಾಗಾಗಿ, ಯಾವೊಂದು ದಕ್ಶಿಣ ರಾಜ್ಯದವರ ರೂಪವನ್ನು ಅಣಕಿಸಿದರೂ ಇಡೀ ದಕ್ಶಿಣದವರನ್ನೇ ಅಣಕಿಸಿದಂತೆ ಆಗುವುದಿಲ್ಲವೆ?
      ಉತ್ತರದವರ ಕಣ್ಣಲ್ಲಿ ದಕ್ಶಿಣದವರೆಲ್ಲಾ ಒಂದೇ - ಮದ್ರಾಸಿಗಳು! ’ಉತ್ತರದವರು ನೋಡಲು ಬೆಳ್ಳಗೆ ಚೆಂದ. ದಕ್ಶಿಣದವರು ಕಪ್ಪು ಕುರೂಪಿಗಳು. ಉತ್ತರದವರ ನಡೆನುಡಿ ಚೆನ್ನ. ದಕ್ಶಿಣದವರ ನಡೆನುಡಿ ಕಳಪೆ’- ಇದು ಒಟ್ಟಾರೆ ಉತ್ತರದ ಮಂದಿಗಳ ಅಬಿಪ್ರಾಯ. ಇದು ಉತ್ತರದವರ ಬಗೆನೆಲೆಯನ್ನು ತಿಳಿದ ಹೆಚ್ಚುಕಡಿಮೆ ಎಲ್ಲ ತೆಂಕಣರಿಗೂ ಗೊತ್ತು. ನಾನು ಚಿಕ್ಕವನಾಗಿದ್ದಾಗ, ಉತ್ತರದವರು ದ್ರಾವಿಡ ನುಡಿಗಳ ಬಗ್ಗೆ, ’ರಂಡು ಗುಂಡು ನಾರೀಯಲ್ ಪಾನಿ!’ ಎಂದು ಕೀಳಾಗಿ ಅಣಕಿಸುತ್ತಿದ್ದರು ಎಂಬುದನ್ನು ಹಲವೆಡೆ ಪತ್ರಿಕೆಗಳಲ್ಲಿ ಓದಿದ್ದೇನೆ. ತೆಂಕಣರ ಬಗೆಗಿನ ಬಡಗರ ಈ ಕೀಳು ಅಬಿಪ್ರಾಯ ನೆನ್ನೆ ಮೊನ್ನೆಯದಲ್ಲ. ತುಂಬಾ ಹಿಂದಿನಿಂದಲೂ ಇದು ಇದ್ದುಕೊಂಡು ಬಂದಿದೆ. ಮಂದೂ ಇರುತ್ತದೆ. ಇದು ಒಂದೊಪ್ಪೊತ್ತಿನಲ್ಲಿ ಅಳಿದು ಹೋಗುವಂತಹುದಲ್ಲ.
      ಬಡಗರಿಗೆ ನಮ್ಮ ಮೇಲೆ ಇಂತಹ ಕೀಳು ಅನಿಸಿಕೆ ಇದೆ ಎಂದು ತಿಳಿದಿದ್ದರೂ, ಅದೇನು ಮಾಯವೋ, ನಾವು ಮಾತ್ರ ಅವರ ಬಗ್ಗೆ ಸಿಡುಕುವುದಿಲ್ಲ! ಸಿಡುಕುವುದಿರಲಿ, ಅವರನ್ನು ಪ್ರೋತ್ಸಾಹಿಸಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ! ನಮ್ಮ ಸಿನಿಮಾಗಳನ್ನೇ ನೋಡಿ. ನಾಯಕ ನಟ ನಮ್ಮ ಹಾಗೇ ಕಾಣಿಸುತ್ತಾನೆ. ಆದರೆ ನಾಯಕಿ, ಸಾಮಾನ್ಯವಾಗಿ ಉತ್ತರದ ಎಲ್ಲಿಂದಲೋ ಕರೆತಂದವಳು, ಬೇರೆ ಯಾವುದೋ ಲೋಕದಿಂದ ಬಂದವಳ ಹಾಗೆ ಕಾಣಿಸುತ್ತಾಳೆ. ಅಶ್ಟೇ ಅಲ್ಲ, ಅವಳು ನಮ್ಮ ಹಾಗೇ ಕಾಣುವ ತಂದೆತಾಯಿಗಳ ಮಗಳೂ ಆಗಿರುತ್ತಾಳೆ ಚಿತ್ರದಲ್ಲಿ! ಇದೆಂತಾ ಅಸಂಬದ್ದ ಸ್ವಾಮೀ!? ಆದರೂ, ನಮ್ಮ ಮಂದಿ ಇಂತಾ ಚಿತ್ರಗಳಿಗೆ ನುಗ್ಗುವುದನ್ನು ಬಿಡುವುದಿಲ್ಲ. ಯಾಕೆ, ನಮ್ಮಲ್ಲಿ ಅಂದವಾದ ನಟಿಯರೇ ಇಲ್ಲವೆ? ಇನ್ನು ಹಾಡಿನ ವಿಶಯ ತೆಗೆದುಕೊಳ್ಳಿ. ಸಿನಿಮಾದಲ್ಲಿ ಹಾಡುವವರೆಲ್ಲಾ ಉತ್ತರದವರೇ ಆಗಿರಬೇಕು ಎಂದು ಯಾರೋ ಕಟ್ಟಳೆಯನ್ನೇ ಮಾಡಿದಂತಿದೆ. ’ಕಂಪಿಸ್ಸುವ’, ’ಪಿಸ್ಸುಗುಡುವ’, ಹೀಗೆ ಮುಂತಾಗಿ ಹೇಗೆ ಹೇಗೋ ಇರುತ್ತದೆ ಈ ಹಾಡುಗಾರರ ಕನ್ನಡ ಪದಗಳ ಉಚ್ಚಾರಣೆ. ಆದರೂ, ನಮ್ಮ ನಿರ‍್ಮಾಪಕರಿಗೆ ಮತ್ತು ನಮ್ಮ ಸಿನಿಮಾ ನೋಡುವ ಮಂದಿಗೆ ಇವರೇ ಬೇಕು! ಎಂತೆಂತಹ ನುರಿತ ಹಾಡುಗಾರರಿದ್ದಾರೆ ನಮ್ಮಲ್ಲೇ. ಆದರೆ, ಅವರನ್ನೆಲ್ಲ ನಾವು ಮೂಲೆಗುಂಪು ಮಾಡಿದ್ದೇವೆ. ಇನ್ನು ಸಿನಿಮಾದ ಹೆಸರುಗಳು? ’ಪ್ರೇಮ್ ಕಹಾನಿ’, ’ಅಂದರ್ ಬಾಹರ್’, ’ದಿಲ್‍ವಾಲ’- ಹೀಗೆ ಅಪ್ಪಟ ಅಪರಂಜಿ ಕನ್ನಡ! ಉದ್ದಾರವಾದಳು ಕನ್ನಡ ತಾಯಿ! ಇಶ್ಟು ಸಾಲದು ಎಂಬಂತೆ, ಉತ್ತರದಿಂದ ಬರುವ ಪುಡಾರಿಗಳೆಲ್ಲ ಹಿಂದಿಯಲ್ಲೇ ಎಗ್ಗಿಲ್ಲದಂತೆ ಬಾಶಣ ಬಗುಳಿ ಹೋಗುತ್ತಾರೆ. ಅದನ್ನು ನಾವು ಕುರಿಗಳಂತೆ ತೆಪ್ಪಗೆ ಕುಳಿತು ಕೇಳುತ್ತೇವೆ. ಪುಡಾರಿಗಳಂತಹ ದೊಡ್ಡವರನ್ನು ಬಿಡಿ, ಉತ್ತರದಿಂದ ಬಂದು ತಳ ಊರಿರುವ ಪಿಳ್ಳೆ ಪಿಸುಕಗಳೆಲ್ಲ, ನಮ್ಮ ಮಾತನ್ನಾಡುವ ಬದಲು, ನಮ್ಮ ಬಾಯಲ್ಲಿ ದಿನನಿತ್ಯ ಅವರ ಹಿಂದಿಯನ್ನೇ ಆಡಿಸುತ್ತವೆ. ಏನು ಹೇಳುವುದು ಸ್ವಾಮೀ ನಮ್ಮ ದಕ್ಶಿಣದವರ, ಅದರಲ್ಲೂ ನಮ್ಮ ಕನ್ನಡಿಗರ, ಕೆಚ್ಚಿಗೆ, ಸ್ವಾಬಿಮಾನಕ್ಕೆ?
      ನಾವು ಯಾಕೆ ಹೀಗೆ? ನನ್ನ ಅಬಿಪ್ರಾಯದಲ್ಲಿ, ನಮಗೆ ನಮ್ಮ ದ್ರಾವಿಡತನದ ಅರಿವು ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ’ತಮಿಳರಿಗೆ ದ್ರಾವಿಡತನದ ಅರಿವಿದೆ. ಆದರೂ, ಅವರೂ ಕೂಡ ಚಿತ್ರರಂಗದಲ್ಲಿ ಉತ್ತರದವರಿಗೆ ಮಣೆ ಹಾಕುತ್ತಾರಲ್ಲ?’ ಎಂದು ಯಾರಾದರೂ ನನ್ನನ್ನು ಕೇಳಬಹುದು. ಅದಕ್ಕೆ ನನ್ನ ಮಾರು ಇಶ್ಟೆ - ತಮಿಳರಿಗೆ ದ್ರಾವಿಡ ಶಿಕ್ಶಣವಾಗಿದೆ ಎಂದು ಯಾರು ಹೇಳಿದರು? ಅವರಿಗೂ ಅದು ಸರಿಯಾದ ರೀತಿಯಲ್ಲಿ ಆಗಿಲ್ಲ. ’ದ್ರಾವಿಡ ಎಂದರೆ ತಮಿಳರು, ತಮಿಳರು ಎಂದರೆ ದ್ರಾವಿಡರು’ ಎಂಬ ಸ್ತೂಲ ತಿಳಿವಳಿಕೆಗೆ ಮೀರಿ ತಮಿಳರಲ್ಲೂ ಪರಿಣಾಮಕಾರಿ ದ್ರಾವಿಡ ಶಿಕ್ಶಣವಾಗಿಲ್ಲ. ಇನ್ನು ಉಳಿದ ದಕ್ಶಿಣದವರಿಗೋ, ದ್ರಾವಿಡ ಅರಿವಿನ ಸೋಂಕೇ ಇಲ್ಲ. ನನ್ನ ಅನಿಸಿಕೆ ಇದು - ’ನಮ್ಮ ದ್ರಾವಿಡತನದ ಬಗ್ಗೆ ನಮಗೆ ಸರಿಯಾದ ಶಿಕ್ಶಣ ದೊರೆಯಬೇಕು. ಆಗ ಮಾತ್ರ ನಾವು ದಕ್ಶಿಣದವರು ನಮ್ಮ ನಮ್ಮಲ್ಲಿ ಒಗ್ಗಟ್ಟನ್ನು ಕಂಡುಕೊಳ್ಳಬಹುದು. ನಮ್ಮನ್ನು ಕೀಳಾಗಿ ಕಾಣುವ ಉತ್ತರದವರ ನಿಲುವನ್ನು ಪರಿಣಾಮಕಾರಿಯಾಗಿ ಎದುರಿಸಬಹುದು’

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಸೋಮವಾರ, ಜನವರಿ 13, 2014

ಅಚ್ಚಗನ್ನಡದ ಬಗ್ಗೆ ರಾಜಿ ಬೇಡ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕಳೆದ ವಾರ ಮಡಿಕೇರಿಯಲ್ಲಿ ಕಸಾಪ ನಡೆಸಿದ ಸಾಹಿತ್ಯ ಪರಿಶತ್ತಿನ ಕಾರ‍್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಹಂಪನಾ ಅವರು ಬಾಶಣ ಮಾಡುತ್ತಾ ಒಂದು ಒಳ್ಳೆಯ ಕಿವಿಮಾತನ್ನು ಕನ್ನಡಿಗರಿಗೆ ನೀಡಿದ್ದಾರೆ. ಅದೇನೆಂದರೆ, ಮಾತಿನ ಕನ್ನಡದಲ್ಲಿ ಮಿತಿ ಮೀರಿ ಆಂಗ್ಲ ಸೊಲ್ಲುಗಳನ್ನು ತುರುಕಬಾರದು ಎಂದು. ಎತ್ತುಗೆಗಾಗಿ, ಗುಡ್ ಮಾರ್‌ನಿಂಗ್, ಗುಡ್ ಆಫ್ಟರ‍್ನೂನ್, ಗುಡ್ ಈವನಿಂಗ್ ಮತ್ತು ಗುಡ್ ನಯ್ಟ್ ಎಂಬುವನ್ನು ಇಂಗ್ಲೀಶಿನಲ್ಲೇ ಹೇಳದೆ, ಅವನ್ನು ಕನ್ನಡಕ್ಕೆ ತಿರುಗಿಸಿ, ನಲ್‍ಬೆಳಗು, ನಲ್‍ಮದ್ಯಾನ, ನಲ್‍ಸಂಜೆ ಮತ್ತು ನಲ್‍ರಾತ್ರಿ ಎಂದು ಹೇಳಿದರೆ ಒಳ್ಳೆಯದು ಎಂದು ಸಲಹೆ ಕೊಟ್ಟಿದ್ದಾರೆ. ಹೀಗೆಂದು ಜನವರಿ ೧೦, ೨೦೧೪ ರ ಪ್ರಜಾವಾಣಿ ಸುದ್ದಿಹಾಳೆಯಲ್ಲಿ ವರದಿಯಾಗಿದೆ. ಅಚ್ಚಗನ್ನಡದ ಒಲವಿಯಾದ ನನಗೆ ಇದನ್ನು ಓದಿ ತುಂಬಾ ಸಂತೋಶವಾಯಿತು. ’ಒಳ್ಳೆಯ, ಶುಬವಾದ’ ಎಂಬ ಹುರುಳುಗಳಿರುವ ನಮ್ಮದೇ ಆದ ’ನಲ್’ಎಂಬ ಇನಿದಾದ ಈ ಅಚ್ಚಗನ್ನಡ ಮುನ್ನೊಟ್ಟು ಕನ್ನಡದಲ್ಲಿ ಬಳಕೆಯೇ ಆಗುತ್ತಿಲ್ಲ ಎಂಬ ಕೊರಗು ನನಗೆ ಬಹು ಹಿಂದಿನಿಂದಲೂ ಇದೆ. ಇಂತಹ ’ನಲ್’ ಮುನ್ನೊಟ್ಟನ್ನು ಬಳಸಿರಿ ಎಂದು ಹಂಪನಾ ಅವರಂತಹ ಹಿರಿಯ ವಿದ್ವಾಂಸರೇ ಕರೆಕೊಟ್ಟರೆಂದ ಮೇಲೆ ನನ್ನಂತಹ ಅಚ್ಚಗನ್ನಡ ಪ್ರೇಮಿಗಳಿಗೆ ಹಿಗ್ಗು ಬಾರದಿರುತ್ತದೆಯೆ?
      ನಲ್‍ಮದ್ಯಾನ, ನಲ್‍ಸಂಜೆ ಮತ್ತು ನಲ್‍ರಾತ್ರಿ - ಈ ಪದಗಳನ್ನು ನಲ್ವಗಲು, ನಲ್ವಯ್ಗು ಮತ್ತು ನಲ್ಲಿರುಳು ಎಂದು, ಸಂಸ್ಕ್ರುತದ ಸೋಂಕೇ ಇಲ್ಲದೆ, ತನಿಯಾಗಿ ಅಚ್ಚಗನ್ನಡದಲ್ಲೇ ಹೇಳಬಹುದು. ಹಂಪನಾ ಅವರು ಹೀಗೇ ಹೇಳಿದ್ದರೆ ನಮಗೆ ಇನ್ನೂ ನಲಿವಾಗುತ್ತಿತ್ತು. ಬಹುಶಹ, ಮದ್ಯಾನ, ಸಂಜೆ ಮತ್ತು ರಾತ್ರಿ ಎಂಬ ಸಂಸ್ಕ್ರುತ ಮೂಲದ ಪದಗಳೇ ಕನ್ನಡಿಗರಿಗೆ ರೂಡಿಯಾಗಿರುವ ಕಾರಣಕ್ಕೋ ಏನೋ, ಹಂಪನಾ ಅವರು ಅವನ್ನೇ ಬಳಸಿ ಹೇಳಿದ್ದಾರೆ, ಎಂದು ನನಗೆ ಅನಿಸುತ್ತದೆ. ಏಕೆಂದರೆ, ಇದೇ ರೀತಿ, ಅಚ್ಚಗನ್ನಡದಲ್ಲೇ ಪದಗಳನ್ನು ಮಾಡುತ್ತೇವೆ ಎಂದು ಹೊರಟ ಹಲವರು, ಮಂದಿಗೆ ಏನು ರೂಡಿಯಾಗಿದೆಯೋ, ಇಲ್ಲ ಮಂದಿ ಒಪ್ಪುತ್ತಾರೆಯೋ ಇಲ್ಲವೋ ಎಂಬ ಹೆದರಿಕೆಯಿಂದ ಎಶ್ಟೋ ಬಾರಿ ಶುದ್ದ ಅಚ್ಚಗನ್ನಡವನ್ನು ಬಿಟ್ಟು ತದ್ಬವಗಳನ್ನು ಬಳಸುವ ’ರಾಜಿಯನ್ನು’ ಮಾಡಿಕೊಂಡಿರುವುದನ್ನು ನಾನು ಕಂಡಿದ್ದೇನೆ. ನನ್ನ ವಯ್ಯಕ್ತಿಕ ಅಬಿಪ್ರಾಯದಲ್ಲಿ ಹೀಗೆ ರಾಜಿ ಮಾಡಿಕೊಳ್ಳುವುದು ಸರಿಯಲ್ಲ. ಏಕೆಂದರೆ, ಮಂದಿಗೆ ನುಡಿಯ ತಿಳಿವಳಿಕೆ ಇರುವುದಿಲ್ಲ. ಅವರನ್ನು ಮೆಚ್ಚಿಸಲು ತಿಳಿವಳಿಕೆ ಇರುವ ಪಂಡಿತರು ನಿಲುವನ್ನು ಸಡಿಲಿಸಿ ರಾಜಿ ಮಾಡಿಕೊಂಡರೆ, ಅದು ಕುರಿಗಳಿಗೇ ದಾರಿ ಹುಡುಕಲು ಬಿಡುವ ಕುರಿಗಾಹಿಯ ಪಾಡಿನಂತಾಗುತ್ತದೆ. ತಿಳಿದವರು ತಿಳಿಯದವರಿಗೆ ಸರಿದಾರಿ ತೋರಬೇಕೇ ಹೊರತು ಅವರೊಡನೆ ತಾವೂ ದಾರಿತಪ್ಪಬಾರದು. ಮಂದಿಯನ್ನು ಓಲಯ್ಸುವುದು ಅಶ್ಟೊಂದು ಮುಕ್ಯವಾದರೆ, ’ಅಚ್ಚಗನ್ನಡದ’ ಹೆಸರಿನಲ್ಲಿ ಮಾರ‍್ಪಾಟುಗಳನ್ನು ಸೂಚಿಸುವುದಾಗಲೀ, ಹೊಸ ಪದಗಳನ್ನು ಮಾಡಿಕೊಳ್ಳುವುದಾಗಲೀ ಏಕೆ ಮಾಡಬೇಕು? ತಮಗೆ ಬಂದ ಹಾಗೆ ಬಾಶೆಯನ್ನು ಕುಲಗೆಡಿಸಿಕೊಂಡು ಹೋಗಲಿ ಬಿಡಿ ಈ ಹಾಳಾದ ಜನ, ಎಂದು ಸುಮ್ಮನೇ ಬಿಟ್ಟರಾಯಿತಲ್ಲ?
      ಟೀವಿಯಲ್ಲಿ ಕಾರ‍್ಯಕ್ರಮದ ಕೊನೆಯಲ್ಲಿ ನಿರೂಪಕರು, ’ಗುಡ್ ನಯ್ಟ್, ಶುಬರಾತ್ರಿ’ ಎಂದು ಇಂಗ್ಲೀಶಿನಲ್ಲಿ, ಬಳಿಕ ಕನ್ನಡದಲ್ಲಿ ಹೇಳಿ ಕಾರ‍್ಯಕ್ರಮ ಮುಗಿಸುವುದನ್ನು ನಾವೆಲ್ಲ ನೋಡಿರುತ್ತೇವೆ. ಈ ಪದ್ದತಿಯ ಬಗ್ಗೆ ನಾನು ಕೇಳುವ ಕೇಳ್ವಿ ಇದು - ’ಶುಬರಾತ್ರಿ’ ಎನ್ನುವುದು ಕನ್ನಡವಲ್ಲ. ಅದು ಸಂಸ್ಕ್ರುತ. ಕನ್ನಡದಲ್ಲಿ ಹೇಳಬೇಕೆಂದಿದ್ದರೆ ಕನ್ನಡದಲ್ಲೇ ’ನಲ್ಲಿರುಳು’ ಎಂದು ಹೇಳಿ. ಕನ್ನಡದ ಹೆಸರಲ್ಲಿ ಸಂಸ್ಕ್ರುತವನ್ನು ನುಡಿದು ಕನ್ನಡಕ್ಕೆ ಅವಮಾನ ಮಾಡಿದರೆ ಕನ್ನಡಕ್ಕೆ ಏನು ಲಾಬ? "ಶುಬರಾತ್ರಿ ಎನ್ನುವುದು ಸಂಸ್ಕ್ರುತದಿಂದಲೇ ಬಂದಿರಬಹುದು, ಆದರೆ, ಅದು ಬಳಕೆಯಿಂದ ಕನ್ನಡವೇ ಆಗಿಬಿಟ್ಟಿದೆ. ಆದ್ದರಿಂದ ಅದನ್ನು ಕನ್ನಡವೆಂದೇ ತೆಗೆದುಕೊಳ್ಳಬೇಕು", ಎಂದು ವಾದಿಸುವವರಿದ್ದಾರೆ. ಇಂತಹವರಿಗೆ ನನ್ನ ಪ್ರತಿವಾದ ಇದು - ನಿಮ್ಮ ತರ‍್ಕವನ್ನು ಒಪ್ಪಿಕೊಂಡರೆ, ’ಗುಡ್ ನಯ್ಟ್’ ಎನ್ನುವುದನ್ನೂ ಕನ್ನಡವೆಂದೇ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ, ಬಳಕೆಯಲ್ಲಿ ’ಗುಡ್ ನಯ್ಟ್’ಇದೆಯೇ ಹೊರತು ’ಶುಬರಾತ್ರಿ’ಇಲ್ಲ. ಜನ ಒಬ್ಬರಿಗೊಬ್ಬರು ’ಶುಬರಾತ್ರಿ’ ಎಂದು ಹೇಳುವುದನ್ನು ನಾನು ಇದುವರೆಗೂ ನೋಡೇ ಇಲ್ಲ. ಎಲ್ಲರೂ ಸಾಮಾನ್ಯವಾಗಿ ’ಗುಡ್ ನಯ್ಟ್’ ಎಂದೇ ಹೇಳುವುದು. ಆದ್ದರಿಂದ, ಅರ‍್ತವಿಲ್ಲದ ಕನ್ನಡತನವನ್ನು ತೋರಿಸುವ ಉದ್ದೇಶದಿಂದ, ’ಗುಡ್ ನಯ್ಟ್’ ಜೊತೆಗೆ ’ಶುಬರಾತ್ರಿ’ ಯನ್ನು ಸೇರಿಸಿ ಹೇಳುವ ತಲೆ ಪ್ರತಿಶ್ಟೆಯಾದರೂ ಏಕೆ? ಈ ದೊಂಬರಾಟ ಬಿಟ್ಟು ಬರೀ ’ಗುಡ್ ನಯ್ಟ್’ ಎಂದರೆ ಸಾಲದೆ?
      ಎರವಲು ಪದಗಳ ಬಳಕೆಯಲ್ಲಿ ನಮ್ಮ ಕನ್ನಡ ವಿದ್ವಾಂಸರಿಗೆ ಇಬ್ಬಂದಿ ನೀತಿಯ ಕಾಟ ಇದೆ ಎಂದು ನನಗೆ ಅನಿಸುತ್ತದೆ. ಬರೀ ಸಂಸ್ಕ್ರುತ ಪದಗಳೇ ತುಂಬಿ ಕನ್ನಡ ಸಂಪೂರ‍್ಣ ಸಂಸ್ಕ್ರುತಮಯವಾದರೂ ಅವರಿಗೆ ಅದು ತಪ್ಪೆನಿಸುವುದಿಲ್ಲ. ಆದರೆ, ಅಲ್ಲೊಂದು ಇಲ್ಲೊಂದು ಆಂಗ್ಲ ಪದ ಅಪ್ಪಿ ತಪ್ಪಿ ಬಳಕೆಯಾದರೆ, ಅದು ಸರಿಯಲ್ಲ ಇವರ ಕಣ್ಣಲ್ಲಿ! ದ್ರಾವಿಡ ನುಡಿಯಾದ ಕನ್ನಡಕ್ಕೆ ಇಂಗ್ಲೀಶ್ ಹೇಗೆ ಹೊರಗಿನದೋ ಹಾಗೇ ಸಂಸ್ಕ್ರುತ ಕೂಡ ಹೊರಗಿನದು ಎನ್ನುವ ನನ್ನಿ ಇವರಿಗೆ ಮುಕ್ಯವಲ್ಲ. ಸಾವಿರಾರು ವರ‍್ಶಗಳಿಂದ ಕನ್ನಡದೊಡನಾಟ ಮಾಡಿ, ನಮಗೆ ಹತ್ತಿರವಾಗಿರುವ ಸಂಸ್ಕ್ರುತವನ್ನು ಅದು ಹೇಗೆ ಬೇರೆಯದು ಎಂದು ಹೇಳಲಿಕ್ಕಾಗುತ್ತದೆ?, ಎಂಬುದು ಇವರ ವಾದ. ’ಯಾವುದು ಹತ್ತಿರ?’ ಎಂಬ ಪ್ರಶ್ನೆ ಬಂದರೆ, ಇಂದು ಇಂಗ್ಲೀಶ್ ನಮಗೆ ಹತ್ತಿರವಾಗಿರುವಶ್ಟು ಸಂಸ್ಕ್ರುತ ಎಂದೂ ಆಗಿರಲಿಲ್ಲ, ಆಗುವುದೂ ಇಲ್ಲ. ಆದ್ದರಿಂದ, ಕನ್ನಡ ಸಂಸ್ಕ್ರುತಮಯವಾಗುವುದು ತಪ್ಪಲ್ಲವೆಂದಾದರೆ, ಕನ್ನಡ ಆಂಗ್ಲಮಯವಾಗುವುದೂ ತಪ್ಪಾಗಬಾರದು ತಾನೆ? ಹುರುಳಿಲ್ಲದ ಇಬ್ಬಂದಿ ನೀತಿ ಏಕೆ?
      ಕನ್ನಡಕ್ಕೆ ಎಲ್ಲ ನುಡಿಗಳಿಂದಲೂ ಪದಗಳು ಬರಲಿ. ಮಡಿವಂತಿಕೆ ಬೇಡ. ಆದರೆ, ಬಂದ ಪದಗಳದ್ದೇ ರಾಜ್ಯಬಾರವಾಗಬಾರದು. ಕನ್ನಡದ ಸೊಗಡು ಅಳಿಯಬಾರದು. ಕನ್ನಡದ ಸವಿ ಇರುವುದೇ ಕನ್ನಡದ್ದೇ ಆದ ದ್ರಾವಿಡ ಮೂಲದ ಪದಗಳಲ್ಲಿ. ಅವನ್ನು ಹೊರಗೆ ತಳ್ಳಿ, ಬೇರೆಡೆಯ ಸೊಲ್ಲುಗಳನ್ನೇ ಕನ್ನಡದಲ್ಲಿ ಜಡಿದುಕೊಂಡರೆ ಕನ್ನಡ ಕನ್ನಡವಾಗಿ ಉಳಿಯುವುದಿಲ್ಲ. ಕನ್ನಡ ಒಂದು ದ್ರಾವಿಡ ನುಡಿ ಎಂಬುದನ್ನು ನಾವು ಮರೆಯಬಾರದು. ಪಂಡಿತರಲ್ಲೂ ಪಾಮರರಲ್ಲೂ ಕನ್ನಡದ ದ್ರಾವಿಡ ಹಿನ್ನೆಲೆಯ ಅರಿವು ಯಾವಾಗಲೂ ತುಡಿಯಬೇಕು. ನಮ್ಮ ಹಾಗೂ ನಮ್ಮ ನುಡಿಯ ದ್ರಾವಿಡತನವನ್ನು ನಾವು ಕಂಡುಕೊಂಡರೆ, ಕನ್ನಡದ ಹೆಸರಿನಲ್ಲಿ ಬೇರೆ ಬಾಶೆಯ ಪದಗಳನ್ನು ಮೆರೆಸುವುದೂ ತಪ್ಪುತ್ತದೆ, ಹೊಸ ಪದಗಳನ್ನು ಮಾಡಿಕೊಳ್ಳುವಾಗ, ರಾಜಿ ಮಾಡಿಕೊಂಡು ಅರೆಬರೆ ಕನ್ನಡ ಪದಗಳನ್ನು ಮಾಡಿಕೊಳ್ಳುವುದೂ ತಪ್ಪುತ್ತದೆ. ಆಗ ನೋಡಿ, ನಮ್ಮ ನಲ್ಗನ್ನಡ ಹೆಸರಿನಲ್ಲಿ ಮಾತ್ರವಲ್ಲ, ತಿರುಳಿನಲ್ಲೂ ನಲ್ಗನ್ನಡವಾಗೇ ಉಳಿದುಕೊಳ್ಳುತ್ತದೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಮಂಗಳವಾರ, ನವೆಂಬರ್ 12, 2013

ಸಂಸ್ಕ್ರುತಕ್ಕಾಗಿ ಸವಲತ್ತುಗಳ ಪೋಲು!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ಬಾರಿ ಸಂಸ್ಕ್ರುತಾಬಿಮಾನಿ ಕನ್ನಡಿಗರಿಗೆ ದೀಪಾವಳಿ ಹಬ್ಬದ ಸಡಗರ ಎರಡು ವಾರ ಮುಂದಾಗೇ ಬಂತು. ಒಂದೆಡೆ ಸಂಸ್ಕ್ರುತ ವಿಶ್ವವಿದ್ಯಾಲಯದಲ್ಲಿ ಸಂಸ್ಕ್ರುತ ಸಂಜೆ ಕಾಲೇಜಿನ ಉದ್ಗಾಟನೆ ಆದರೆ, ಇನ್ನೊಂದೆಡೆ ಶ್ರೀ ಶ್ರೀ ರವಿಶಂಕರರ Art of Living ಆಶ್ರಮದಲ್ಲಿ ಅಕಿಲ ಬಾರತ ಸಂಸ್ಕ್ರುತ ಅದಿವೇಶನ ಜರುಗಿತು (ವರದಿ : ಪ್ರಜಾವಾಣಿ, ಅಕ್ಟೋಬರ್ ೨೦, ೨೦೧೩). ಇದಾದ ಕೆಲವೇ ದಿನಗಳಲ್ಲಿ ನಮ್ಮ ಸರ‍್ಕಾರ, ಸಂಸ್ಕ್ರುತ ವಿಶ್ವವಿದ್ಯಾಲಯಕ್ಕೆ ಈ ಮೊದಲು ರಿಯಾಯತಿ ದರದಲ್ಲಿ ನೀಡಿದ್ದ ನೂರೆಕರೆ ನೆಲವನ್ನು ಸಂಪೂರ‍್ಣ ಬಿಟ್ಟಿಯಾಗಿ ಮತ್ತೆ ಮಂಜೂರು ಮಾಡಿತು (ವರದಿ : ಪ್ರಜಾವಾಣಿ, ಅಕ್ಟೋಬರ್ ೨೯, ೨೦೧೩). ಒಟ್ಟಿನಲ್ಲಿ ನಮ್ಮ ಸ್ತಳೀಯ ಸಂಸ್ಕ್ರುತಾಬಿಮಾನಿಗಳಿಗೆ ಒಂದು ದೊಡ್ಡ ಹ್ಯಾಟ್ರಿಕ್ಕೇ ದೊರೆಯಿತು. ಸಂಸ್ಕ್ರುತಾಬಿಮಾನಿಗಳಿಗೆ ಇದಕ್ಕಿಂತಾ ಬೇರೇನು ಬೇಕು ಹೇಳಿ?
      ನನ್ನ ಗಮನ ಸೆಳೆದದ್ದು ಈ ಆಗುಗಳಿಗಿಂತ ಹೆಚ್ಚಾಗಿ ಈ ಸಮಯದಲ್ಲಿ ಬಿಚ್ಚುಗೊರಲಿನಿಂದ ಹೊರಹೊಮ್ಮಿದ ಕೆಲವು ಸಂಸ್ಕ್ರುತವನ್ನು ಹೊಗಳುವ ನುಡಿಮುತ್ತುಗಳು. ಸಂಸ್ಕ್ರುತ ಸಂಜೆ ಕಾಲೇಜನ್ನು ಉದ್ಗಾಟಿಸಿದ ಮಹನೀಯರು ತಮ್ಮ ಬಾಶಣದಲ್ಲಿ, ಅಂತರರಾಶ್ಟ್ರೀಯ ಮಟ್ಟದಲ್ಲಿ ಸಂಸ್ಕ್ರುತ ಇಂಗ್ಲೀಶಿಗೆ ಸರಿಸಮನಾದ ಬಾಶೆ ಎಂದೂ, ಸಂಸ್ಕ್ರುತದ ಪುನರುಜ್ಜೀವನದಿಂದ ಜನರಲ್ಲಿ ನಯ್ತಿಕ ಮಟ್ಟ ಹೆಚ್ಚುತ್ತದೆ ಎಂದೂ ಸಬಿಕರಿಗೆ ತಿಳಿಸಿದರಂತೆ! ಅಂತರರಾಶ್ಟ್ರೀಯ ಮಟ್ಟದಲ್ಲಿ ಸಂಸ್ಕ್ರುತ ಇಂಗ್ಲೀಶಿಗೆ ಸರಿಸಮನಾದ ಬಾಶೆ! ಇದಕ್ಕೆ ಏನು ಹೇಳುವುದು ಸ್ವಾಮೀ? ವಿಶ್ವದ ಮೂಲೆಮೂಲೆಗಳಲ್ಲೂ ಬದುಕಿನ ಏಳಿಗೆಗಾಗಿ ಜನ ಮುಗಿಬಿದ್ದು ಕಲಿಯುತ್ತಿರುವ ಸರ‍್ವವ್ಯಾಪಿ ಇಂಗ್ಲೀಶ್ ಎಲ್ಲಿ, ಅಲ್ಲೊಬ್ಬ ಇಲ್ಲೊಬ್ಬ, ಅಬಿಮಾನಕ್ಕೋ ಕುತೂಹಲಕ್ಕೋ ಅರೆಬರೆಯಾಗಿ ಕಲಿಯುವ ಸಂಸ್ಕ್ರುತ ಎಲ್ಲಿ? ಇವೆರಡೂ ಹೇಗೆ ಅಂತರರಾಶ್ಟ್ರೀಯ ಮಟ್ಟದಲ್ಲಿ ಸರಿಸಮಾನ ಅಂತ? ಇರಲಿ ಬಿಡಿ. ಇನ್ನು ನಯ್ತಿಕ ಮಟ್ಟಕ್ಕೂ, ಸಂಸ್ಕ್ರುತ ಬಿಡಿ, ಯಾವುದೇ ಬಾಶೆಯ ಪುನರುಜ್ಜೀವನಕ್ಕೂ ಯಾವ ಬಾದರಾಯಣ ಸಂಬಂದ ಇರಲಿಕ್ಕೆ ಸಾದ್ಯ?
      ಇತ್ತ ಸಂಸ್ಕ್ರುತ ಅದಿವೇಶನದಲ್ಲಿ ರಾಜಕಾರಣಿ ಸುಬ್ರಮಣಿಯನ್ ಸ್ವಾಮಿಯವರು ಮಾತಾಡುತ್ತಾ, ಸಂಸ್ಕ್ರುತ ಬಾಶೆಯ ’ಉಚ್ಚಾರಣೆಯಿಂದ’ ಮಕ್ಕಳ ಬವುದ್ದಿಕ ಮಟ್ಟ ಹಾಗೂ ವ್ಯಕ್ತಿತ್ವ ವಿಕಸನ ಹೆಚ್ಚುತ್ತದೆ ಎಂದರಂತೆ! ಇದಕ್ಕೇನಂತೀರಿ? ಒಂದು ಬಾಶೆಯ ಉಚ್ಚಾರಣೆಯನ್ನು ಕಲಿಯುವುದರಿಂದ ಬವುದ್ದಿಕ ಮಟ್ಟ ಹಾಗೂ ವ್ಯಕ್ತಿತ್ವ ವಿಕಸನ ಹೆಚ್ಚುತ್ತದಂತೆ! ಬೇಶ್! ಮೆಚ್ಚಿದೆ! ಎಂತಾ ಒಂದು ನಿಗೂಡ ಮಾಂತ್ರಿಕ ಶಕ್ತಿಯ ಬಾಶೆ ಇರಬೇಕು ನಮ್ಮ ಸಂಸ್ಕ್ರುತ ಬಾಶೆ! ಇಂತಾ ಬಾಶೆಯನ್ನು ಹೊರಿಸಿಕೊಂಡಿರುವ ನಾವೇ ಬಾಗ್ಯವಂತರು ಬಿಡಿ!
      ಸಂಸ್ಕ್ರುತದ ಹುಚ್ಚು ಅಬಿಮಾನಿಗಳು ಇಂತಾ ಬಾಲಿಶ ಬುರುಡೆಗಳನ್ನು ಬಿಡುತ್ತಾರಲ್ಲಾ, ಇವರ ಹೇಳಿಕೆಗಳಿಗೆ ಅದಾವ ಸಂಶೋದನೆಗಳ ಆದಾರ ಇದೆ ಎಂದು ನನಗೆ ಅಚ್ಚರಿಯಾಗುತ್ತದೆ. ಸಾಹಿತಿ ಎಸ್. ಎಲ್. ಬಯ್ರಪ್ಪನವರು, ಕನ್ನಡದಲ್ಲಿ ಶೇಕಡ ಎಂಬತ್ತರಶ್ಟು ಸಂಸ್ಕ್ರುತವೇ ಇದೆ, ಆದ್ದರಿಂದ ಕನ್ನಡವನ್ನು ಸರಿಯಾಗಿ ಕಲಿತುಕೊಳ್ಳುವುದಕ್ಕೆ ಸಂಸ್ಕ್ರುತದ ಕಲಿಕೆ ಬೇಕೇ ಬೇಕು ಎಂದು ಇದೇ ಅದಿವೇಶನದಲ್ಲಿ ತಮ್ಮ ಅಬಿಪ್ರಾಯ ಕೊಟ್ಟರಂತೆ. ಇದರ ಬಗ್ಗೆಯೂ ಕೊಂಚ ಯೋಚನೆ ಮಾಡಿ ನೋಡಿ. ಕನ್ನಡ ಇಂದು ಸಂಸ್ಕ್ರುತಮಯವಾಗಿದ್ದರೆ ಅದಕ್ಕೆ ಕಾರಣ ಯಾರು? ತಲತಲಾಂತರದಿಂದ ಸಂಸ್ಕ್ರುತವನ್ನು ಕನ್ನಡದಲ್ಲಿ ಸಾರಾಸಗಟಾಗಿ ತುರುಕಿಕೊಂಡು ಬಂದ ಸಂಸ್ಕ್ರುತದ ದುರಬಿಮಾನಿ ಸಾಹಿತಿಗಳೇ ಕಾರಣರು. ಈ ಮಂದಿ ಮೊದಲು ಕನ್ನಡವನ್ನು ಸಂಸ್ಕ್ರುತಮಯ ಮಾಡುತ್ತಾರೆ. ಬಳಿಕ, ಸಂಸ್ಕ್ರುತ ಕಲಿಯದೇ ಕನ್ನಡ ಕಲಿಯಲು ಬರುವುದಿಲ್ಲ ಎಂದು ಡೋಂಗೀ ಬಿಟ್ಟು, ಸಂಸ್ಕ್ರುತ ವಿಶ್ವವಿದ್ಯಾಲಯ ಮುಂತಾದವು ಬೇಕೇ ಬೇಕು ಎಂದು ಅರಚಾಡಿ, ಬಡಪಾಯಿ ಕನ್ನಡಿಗರ ನೆಲ ಹಣ ಮುಂತಾದ ಸವಲತ್ತುಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಹೇಗಿದೆ ಈ ವರಸೆ?
      ಸಂಸ್ಕ್ರುತದ ದುರಬಿಮಾನಿಗಳು ಸಾಮಾನ್ಯರಲ್ಲ. ಹಿಂದೊಮ್ಮೆ, ’ಅ,ಆ, ಇ,ಈ’ ಕಲಿಯುವ ಒಂದನೇ ತರಗತಿಯ ಮಟ್ಟದ ಸಂಸ್ಕ್ರುತವನ್ನು ಹಯ್‍ಸ್ಕೂಲು ಮಟ್ಟದ ಕನ್ನಡಕ್ಕೆ ಸರಿಸಮನಾಗಿ ತಂದು ಕೂಡಿಸಿ, ಕನ್ನಡಕ್ಕೇ ಬತ್ತಿ ಇಟ್ಟಿದ್ದರು ಈ ಉಂಡ ಮನೆಗೆ ಎರಡು ಬಗೆಯುವ ಮಂದಿ! ಇವರ ಕುತಂತ್ರವನ್ನು ತೆಗೆದುಹಾಕುವುದಕ್ಕೆ ಆಗ ಒಂದು ದೊಡ್ಡ ಹೋರಾಟವನ್ನೇ (ಗೋಕಾಕ್ ಹೋರಾಟ) ನಡೆಸಬೇಕಾಯಿತು ಕನ್ನಡಿಗರು. ಈಗಿನ ದಿನಗಳಲ್ಲಿ ಗೋಕಾಕ್ ಚಳುವಳಿಗೆ ಕಾರಣ ಏನು ಎಂಬುದೇ ಜನಕ್ಕೆ ನೆನಪಿಲ್ಲ. ಇದರ ಜೊತೆಗೆ, ಸಂಸ್ಕ್ರುತಪರ ರಾಜಕೀಯ ಶಕ್ತಿಗಳೂ ಬಲಗೊಂಡಿವೆ. ಹಾಗಾಗಿ, ಸಂಸ್ಕ್ರುತದ ಕಿಡಿಗೇಡಿಗಳು ಮತ್ತೆ ನಮ್ಮ ನಡುವೆ ಗರಿಗೆದರಿಕೊಂಡು ಹಾರಾಡಲು ಶುರುಮಾಡಿವೆ.
      ಸಂಸ್ಕ್ರುತದ ದುರಬಿಮಾನಿಗಳು ಎಶ್ಟೇ ಬಡಾಯಿ ಕೊಚ್ಚಿಕೊಳ್ಳಬಹುದು. ಆದರೆ, ಸತ್ಯ ಏನು? ಸಂಸ್ಕ್ರುತ ಒಂದು ಸತ್ತ ಬಾಶೆ. ಅದರಿಂದ ’ಪ್ರಾಕ್ಟಿಕಲ್’ ಉಪಯೋಗವಿಲ್ಲ. ಕೆಲಸ ಕೊಡುವವರು ಎಂದಾದರೂ, ’ನಿನಗೆ ಸಂಸ್ಕ್ರುತ ಬರುತ್ತದೆಯೆ?’ ಎಂದು ಕೇಳುತ್ತಾರೆಯೆ? ನಿಮಗೆ ಕೆಲಸ ಬೇಕು ಎಂದರೆ, ಇಂಗ್ಲೀಶ್ ಬೇಕು, ನಮ್ಮ ರಾಜ್ಯದಲ್ಲಿ ಕನ್ನಡ ಬೇಕು. ಬರೀ ಸಂಸ್ಕ್ರುತವನ್ನೇ ನೆಚ್ಚಿಕೊಂಡರೆ ಜನಸಾಮಾನ್ಯರಿಗೆ ಒಂದು ಪಯ್ಸೆಯೂ ಹುಟ್ಟುವುದಿಲ್ಲ.
      ಹೀಗೆ ಸಂಸ್ಕ್ರುತದಿಂದ ಯಾವ ಪ್ರಯೋಜನ ಇಲ್ಲದಿದ್ದರೂ, ಅದರ ಅಬಿಮಾನಿಗಳು ಸರ‍್ಕಾರದಿಂದ ಮೇಲಿಂದ ಮೇಲೆ ಸಾರ‍್ವಜನಿಕರ ಸವಲತ್ತುಗಳನ್ನು ಹೇಗೆ ಗಿಟ್ಟಿಸಿಕೊಳ್ಳುತ್ತಾರೆ? ಇದರ ಬಗ್ಗೆ ಸಾಮಾನ್ಯ ಕನ್ನಡಿಗರು ಏಕೆ ಚಕಾರ ಎತ್ತುವುದಿಲ್ಲ? ನನಗನ್ನಿಸುವುದು ಇದು - ಕನ್ನಡಿಗರಿಗೆ ಅವರ ದ್ರಾವಿಡತನದ ಅರಿವಿಲ್ಲದಿರುವುದೇ ಇದಕ್ಕೆ ಕಾರಣ. ಬಹಳಶ್ಟು ಕನ್ನಡಿಗರಿಗೆ, ಸಂಸ್ಕ್ರುತ ಇಂಡೋ-ಯೂರೋಪಿಯನ್ ವರ‍್ಗಕ್ಕೆ ಸೇರಿದ ಒಂದು ಪರಕೀಯ ಬಾಶೆ ಎಂಬುದರ ಅರಿವಿಲ್ಲ. ಕನ್ನಡ, ಸಂಸ್ಕ್ರುತದ ನೆತ್ತರನಂಟಿರದ ಒಂದು ದ್ರಾವಿಡ ಬಾಶೆ ಎಂಬುದರ ಅರಿವಿಲ್ಲ. ಸಂಸ್ಕ್ರುತದ ಅತಿಯಾದ ಬಳಕೆಯಿಂದ ಕನ್ನಡದ ದ್ರಾವಿಡತನವೇ ಅಳಿದು ಹೋಗಿರುವ ಸಂಗತಿಯಂತೂ ಗೊತ್ತೇ ಇಲ್ಲ. ದಾರ್‍ಮಿಕ ಕಾರ‍್ಯಗಳೆಲ್ಲ ಸಂಸ್ಕ್ರುತ ಮಂತ್ರಪಟನೆಯಿಂದಲೇ ಆಗುವುದರಿಂದ, ಸಂಸ್ಕ್ರುತವೆಂದರೆ ನಮ್ಮದೇ ಬಾಶೆ ಎಂದು ತಿಳಿದುಕೊಂಡಿದ್ದಾರೆ ಹಲವರು. ಹಾಗಾಗಿ, ಸಂಸ್ಕ್ರುತಕ್ಕೆ ಸರ‍್ಕಾರದ ಹಣ ಹರಿದಾಗ, ಕನ್ನಡಿಗರಿಗೆ ಅದು ಪರಕೀಯ ಬಾಶೆಯೊಂದಕ್ಕೆ ಹರಿದ ಹಣ ಎನ್ನಿಸುವುದಿಲ್ಲ. ಇದರಿಂದಾಗಿ, ಕನ್ನಡಿಗರ ಮಟ್ಟಿಗೆ ನಿಜಕ್ಕೂ ಕೆಲಸಕ್ಕೆ ಬಾರದ ಈ ಸಂಸ್ಕ್ರುತ ಬಾಶೆಗೆ ಕನ್ನಡಿಗರದೇ ಹಣ ಪೋಲಾಗುತ್ತಿದೆ!
      ಆದ್ದರಿಂದ, ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಕನ್ನಡಿಗರು ನಾವು ಒಟ್ಟಾರೆ ದ್ರಾವಿಡರು ಎನ್ನುವ ನನ್ನಿಯನ್ನು ಕಂಡುಕೊಳ್ಳಬೇಕು. ನಮ್ಮ ಮಕ್ಕಳಿಗೆ ಬದುಕಿನಲ್ಲಿ ಏಳಿಗೆಯನ್ನು ಪಡೆಯಲು ನೆರವಾಗುವ ಕನ್ನಡ ಮತ್ತು ಇಂಗ್ಲೀಶ್ ಬಾಶೆಗಳನ್ನು ಕಲಿಸುವುದಕ್ಕೆ ಮಾತ್ರ ಹಣವನ್ನು ಎರೆಯಬೇಕು. ಉಪಯೋಗಕ್ಕೆ ಬಾರದ ಸಂಸ್ಕ್ರುತದಂತಹ ಹೆರನುಡಿಗಳಿಗೆ ನಮ್ಮ ಸಮಯವನ್ನೂ ದುಡಿಮೆಯನ್ನೂ ಪೋಲು ಮಾಡಬಾರದು. ಕನ್ನಡಕ್ಕೆ ಬೇಕಾಗುವ ಪದಗಳನ್ನು ಕನ್ನಡದಲ್ಲೇ ಮಾಡಿಕೊಂಡು ಕ್ರಮೇಣ ಸಂಸ್ಕ್ರುತದ ಬಳಕೆಯನ್ನು ಕಡಿಮೆ ಮಾಡಬೇಕು. ಕನ್ನಡಕ್ಕೆ ಕನ್ನಡತನವನ್ನೂ ದ್ರಾವಿಡತನವನ್ನೂ ಮತ್ತೆ ತಂದುಕೊಡಬೇಕು. ಕನ್ನಡಕ್ಕೆ, ಸಂಸ್ಕ್ರುತವಾಗಲೀ ಇಲ್ಲ ಬೇರೆ ಯಾವುದೇ ಬಾಶೆಯಾಗಲೀ, ಕೇವಲ ಪೂರಕವೇ ಹೊರತು ಅನಿವಾರ‍್ಯವಲ್ಲ, ಹಾಗಾಗಿ ಅವುಗಳಿಗೆ ನಮ್ಮ ಸವಲತ್ತುಗಳನ್ನು ಸುರಿಯುವುದು ಸಲ್ಲ, ಎಂಬ ಸತ್ಯವನ್ನು ಎತ್ತಿ ತೋರಬೇಕು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶುಕ್ರವಾರ, ಅಕ್ಟೋಬರ್ 25, 2013

ಮಯ್ಬಣ್ಣ ಮತ್ತು ಕೀಳರಿಮೆ

ಕೆಲ ವಾರಗಳ ಹಿಂದೆ NDTV ಕಾಲುವೆಯಲ್ಲಿ ಬರ‍್ಕಾ ದತ್ ಎಂಬವರು ಚರ‍್ಚೆಯ ಕಾರ‍್ಯಕ್ರಮವೊಂದನ್ನು ನಡೆಸಿಕೊಟ್ಟರು. ಮಯ್ಬಣ್ಣವನ್ನು ಬಿಳುಪುಗೊಳಿಸುವ ಕ್ರೀಮುಗಳನ್ನು ಮಾರಾಟ ಮಾಡಲು ಬಳಸಲಾಗುತ್ತಿರುವ ಜಾಹೀರಾತುಗಳ ಬಗ್ಗೆ ಆ ಕಾರ‍್ಯಕ್ರಮದಲ್ಲಿ ಒಂದು ಚರ‍್ಚೆ ನಡೆಯಿತು. ಕಪ್ಪುಚೆಲುವಿನ ನಟಿ ನಂದಿತಾ ದಾಸ್, ಜಾಹೀರಾತುಗಳನ್ನು ತಯಾರಿಸುವ ರಂಗಕರ‍್ಮಿ ಪದಮ್‍ಸೀ ಮುಂತಾದವರು ಚರ‍್ಚೆಯಲ್ಲಿ ಪಾಲ್ಗೊಂಡಿದ್ದರು. ’ಕಪ್ಪು ಮಯ್ಬಣ್ಣದ ಎಳೆಯರಿಗೆ ತಮ್ಮ ಕಪ್ಪು ಬಣ್ಣದಿಂದಾಗಿ ಆತ್ಮವಿಶ್ವಾಸ ಕಡಿಮೆ. ಹಾಗಾಗಿ ಸಮಾಜದಲ್ಲಿ ಅವರು ಮುನ್ನಡೆ ಸಾದಿಸುವುದು ಕಶ್ಟ’ - ಹೀಗೆಂದು ಬಿಳುಪಿಸುವ ಕ್ರೀಮುಗಳ ಜಾಹೀರಾತುಗಳಲ್ಲಿ ಕಪ್ಪು ಬಣ್ಣದ ತರುಣರನ್ನು ಕೀಳಾಗಿ ಬಿಂಬಿಸಲಾಗುತ್ತಿದೆ. ಹೀಗೆ ಬಿಂಬಿಸುವುದು ತಪ್ಪು. ಇಂತಹ ಜಾಹೀರಾತುಗಳನ್ನು ತಯಾರಿಸಕೂಡದು, ಎಂಬುದು ನಂದಿತಾ ದಾಸ್ ಮತ್ತು ಅವರ ಪರ ಮಾತಾಡಿದವರ ವಾದವಾಗಿತ್ತು. ಕಪ್ಪು ಬಣ್ಣದವರಿಗೆ ಕೀಳರಿಮೆ ಇರುವುದು ಸಾಮಾಜಿಕ ಸತ್ಯ. ಇದ್ದುದನ್ನು ಇದ್ದ ಹಾಗೆ ಹೇಳಿದರೆ ತಪ್ಪೇನು? ಎಂಬುದು ಜಾಹೀರಾತುಗಳ ಪರದವರ ಪ್ರತಿವಾದವಾಗಿತ್ತು.
      ಅರ‍್ದ ಗಂಟೆಯ ಆ ಕಾರ‍್ಯಕ್ರಮದುದ್ದಕ್ಕೂ ಕಪ್ಪು ಬಣ್ಣದ ಬಗೆಗಿನ ಹಲವಾರು ಅಂಶಗಳ ಪ್ರಸ್ತಾಪವೇನೋ ಆಯಿತು. ಆದರೆ, ಕಪ್ಪು ಬಣ್ಣಕ್ಕೆ ಹಾಗೂ ಅದರ ಕೀಳುಗಾಣ್ಮೆಗೆ ಮೂಲ ಕಾರಣ ಏನು ಎಂಬುದರ ಬಗ್ಗೆ ಮಾತ್ರ ಹೆಚ್ಚು ಮಾತು ಹೊರಬರಲಿಲ್ಲ. ಒಬ್ಬ ಅತಿತಿಗಳು ಮಾತ್ರ ಕಪ್ಪು ಬಣ್ಣವನ್ನು ಕೀಳಾಗಿ ಕಾಣುವುದಕ್ಕೆ ಮೂಲ ಕಾರಣವನ್ನು ಪರೋಕ್ಶವಾಗಿ ಸೂಚಿಸಿದರು. ಆದರೆ, ಆ ಎಳೆಯನ್ನು ಉಳಿದವರು ಕಯ್ಗೆತ್ತಿಕೊಳ್ಳಲಿಲ್ಲ. ಹಾಗಾಗಿ ಆ ಎಳೆ ಅಲ್ಲಿಗೇ ನಿಂತು ಹೋಯಿತು. ನನ್ನ ಪ್ರಕಾರ, ಯಾವುದೇ ಸಮಸ್ಯೆಯಾಗಲಿ, ಆ ಸಮಸ್ಯೆಗೆ ಮೂಲ ಕಾರಣ ಏನೆಂದು ತಿಳಿದುಕೊಳ್ಳಬೇಕು. ಹಾಗೆ ತಿಳಿದುಕೊಳ್ಳುವುದು ಸಮಸ್ಯೆಯ ಬಗೆಹರಿವಿಗೆ ಸಾಕಶ್ಟು ನೆರವಾಗುತ್ತದೆ.
      ಬಿಳುಪಿಸುವ ಉತ್ಪನ್ನಗಳ ಜಾಹೀರಾತುಗಳು ಸಮಾಜದಲ್ಲಿ ವಾಸ್ತವವಾಗಿ ನಡೆಯುತ್ತಿರುವುದನ್ನೇ ಬಿಂಬಿಸುತ್ತಿವೆ. ನಮ್ಮ ಸಮಾಜದಲ್ಲಿ ಕಪ್ಪು ಬಣ್ಣದವರು ಉಳಿದವರಿಗಿಂತ ಕೊಂಚ ಹೆಚ್ಚು ಅಡೆತಡೆಗಳನ್ನು ಎದುರಿಸುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಶಯ. ಹೆಸರಾಂತ ನಟರಾದ ದುನಿಯಾ ವಿಜಯ್, ಮುರಳಿ ಮುಂತಾದವರೇ ಮೊದಮೊದಲು ಕಪ್ಪು ಬಣ್ಣದ ಕೀಳುಗಾಣ್ಮೆಯಿಂದಾಗಿ ತಮಗಾದ ತೊಂದರೆಗಳ ಬಗ್ಗೆ ಆಗಾಗ್ಗೆ ಹೇಳಿಕೊಂಡಿದ್ದಾರೆ. ಮದುವೆಗಾಗಿ ಗಂಡು ಹೆಣ್ಣುಗಳನ್ನು ಹೊಂದಿಸುವ ’ಮೇಟ್ರಿಮೋನಿಯಲ್’ ಕಾಲಮ್ಮುಗಳಲ್ಲಿನ ಬೇಡಿಕೆಗಳನ್ನು ನೋಡಿದರೆ, ಕಪ್ಪು ಬಣ್ಣ ಯಾರಿಗೂ ಬೇಡ ಎನ್ನುವುದಕ್ಕೆ ಪುರಾವೆ ಕೂಡಲೇ ದೊರೆಯುತ್ತದೆ. ವಾಸ್ತವ ಹೀಗಿರುವಾಗ ಕಪ್ಪು ಬಣ್ಣದ ಮಂದಿಯಲ್ಲಿ ಕೀಳರಿಮೆ ಹೇಗೆ ಮೂಡದೇ ಇದ್ದೀತು? ಈಗ ಕೇಳ್ವಿ ಇದು - ಈ ಕೀಳರಿಮೆಗೆ ಪರಿಹಾರ ಏನು?
      ಬಿಳಿಗೆಯ್ವ ಉತ್ಪನ್ನಗಳ ಬಳಕೆಯಿಂದ ಕೀಳರಿಮೆ ಕೊಂಚ ತಗ್ಗಬಹುದು. ಆದರೆ, ಕೊಂಚ ಮಾತ್ರ. ಅದೂ ಅಲ್ಲದೆ, ಒಂದೇ ಸವನೆ ಅವನ್ನು ಬಳಸುವುದರಿಂದ ಆರೋಗ್ಯ ಕೆಡಬಹುದು. ಒಳ್ಳೆಯ ಶಿಕ್ಶಣ ಹಾಗೂ ದುಡಿಯುವ ಆರ‍್ಪನ್ನು ಪಡೆದುಕೊಳ್ಳುವುದು ಇನ್ನೊಂದು ಪರಿಹಾರ. ಏಕೆಂದರೆ, ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವ ಸಾಮರ‍್ತ್ಯ, ಯಾರಿಗೇ ಆಗಲಿ, ಒಟ್ಟಾರೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇನ್ನೂ ಒಂದು ಪರಿಹಾರ ಇದೆ. ಆದರೆ, ಅದರ ಬಳಕೆ ನಮ್ಮ ದೇಶದಲ್ಲಿ ಆಗುತ್ತಿಲ್ಲ. ಏಕೆಂದರೆ, ಅದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅದು ತಿಳಿಯದಂತೆ ಮಾಡುವ ಪ್ರಯತ್ನ ಕೆಲವರಿಂದ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗಿನ ದಿನಗಳಲ್ಲಿ ಈ ಕೆಲವರಿಗೆ ರಾಜಕೀಯ ಬೆಂಬಲವೂ ದೊರಕುತ್ತಿದೆ. ಅದೇನೇ ಇರಲಿ, ಆ ಇನ್ನೊಂದು ಪರಿಹಾರ ಏನೆಂದರೆ, ಕೆಲವರಿಗೆ ಕಪ್ಪು ಕೆಲವರಿಗೆ ಬಿಳುಪು ಬಣ್ಣ ಇರುವುದಕ್ಕೆ ವಾಸ್ತವ ಕಾರಣ ಏನು ಎಂಬುದರ ಅರಿವು. ಈ ಅರಿವು ಅಮೆರಿಕದ ಕಪ್ಪು ಸಮುದಾಯಕ್ಕೆ ತಿಳಿದಿದೆ. ನಮ್ಮಲ್ಲಿ ಬಹುತೇಕ ಮಂದಿಗೆ ಈ ಅರಿವಿಲ್ಲ. ಈ ಅರಿವಿರುವುದರಿಂದ ಹಾಗೂ ತಮ್ಮ ಚರಿತ್ರೆಯ ಅರಿವೂ ಇರುವುದರಿಂದ ಅಮೆರಿಕದ ಬಹುತೇಕ ಕಪ್ಪು ಜನಾಂಗೀಯರು ಸಾಮಾಜಿಕ ಹಾಗೂ ರಾಜಕೀಯ ವಿಶಯಗಳಲ್ಲಿ ಒಗ್ಗಟ್ಟಿನಿಂದ ನಡೆದುಕೊಳ್ಳುತ್ತಾರೆ. ಅವರಲ್ಲಿ ಕೂಡ ನಮ್ಮಲ್ಲಿರುವಂತೆಯೆ ಕಪ್ಪು ಬಣ್ಣದ ಕೀಳರಿಮೆ ಇದೆ. ಆದರೆ, ಅರಿವು ಮತ್ತು ಅರಿವಿನಿಂದಾದ ಒಗ್ಗಟ್ಟು, ಅವರಲ್ಲಿ ಕೀಳರಿಮೆಯನ್ನು ಸಾಕಶ್ಟು ಮಟ್ಟಿಗೆ ತಗ್ಗಿಸಿದೆ. ಹಾಗೆ ನೋಡಿದರೆ, ಅವರು ಅಲ್ಲಿ ಅಲ್ಪಸಂಕ್ಯಾತರು. ನಮ್ಮ ನಾಡಿನಲ್ಲಿ ಕಪ್ಪು ಬಣ್ಣದವರೇ ಹೆಚ್ಚು. ಆದ್ದರಿಂದ, ನಮ್ಮ ಕಪ್ಪು ಬಣ್ಣಕ್ಕೆ ಸರಿಯಾದ ಕಾರಣವನ್ನು ತಿಳಿದುಕೊಳ್ಳುವುದರಿಂದ ಅದರ ಬಗೆಗಿನ ಕೀಳರಿಮೆಯನ್ನು ಇನ್ನೂ ಹೆಚ್ಚಿನ ಮಟ್ಟಿಗೆ ನಾವು ಕಡಿಮೆಗೊಳಿಸಬಹುದು. ಹಾಗಾದರೆ, ಯಾವುದು ಈ ಸರಿಯಾದ ತಿಳಿವಳಿಕೆ?
      ಹಿಂದಣ ಜನ್ಮದ ಕರ‍್ಮ, ಯಾವುದೋ ಶಾಪದ ಪಲ, ದುರದ್ರುಶ್ಟ, ದೇವರ ಇಚ್ಚೆ - ಹೀಗೇ ಮುಂತಾದುವು ನಮ್ಮ ಮಂದಿ, ’ಮಯ್ಬಣ್ಣ ಏಕೆ ಕಪ್ಪಾಗಿರುತ್ತದೆ?’ ಎನ್ನುವುದಕ್ಕೆ ಕೊಡುವ ಉತ್ತರಗಳು! ಬಸುರಿ ಹೆಣ್ಣುಮಗಳು ಕೇಸರಿ ಬೆರೆಸಿದ ಹಾಲನ್ನು ನಾಳುನಾಳೂ ಕುಡಿಯುತ್ತಿದ್ದರೆ ಹುಟ್ಟುವ ಮಗು ಬೆಳ್ಳಗಿರುತ್ತದೆ ಎಂಬ ನಂಬಿಕೆಯೂ ಇದೆಯಂತೆ! ಹೀಗೆಂದು ಶ್ರೀಮತಿ ಸಿ.ಜಿ.ಮಂಜುಳಾ ಅವರು ಪ್ರಜಾವಾಣಿಯ (ಸೆಪ್ಟಂಬರ್ ೨೪, ೨೦೧೩) ಅವರ ’ಕಡೆಗೋಲು’ ಅಂಕಣದಲ್ಲಿ ಬರೆದಿದ್ದಾರೆ. ಇಂತಹ ಅರಿವಿಲಿ ನಂಬಿಕೆಗಳಿದ್ದರೆ ಕಪ್ಪು ಬಣ್ಣದವರಿಗೆ ಕೀಳರಿಮೆ ಬರದೇ ಇನ್ನೇನು? ವಾಸ್ತವವಾಗಿ, ನಮ್ಮ ದೇಶದಲ್ಲಿ ಕಪ್ಪು ಮತ್ತು ಬಿಳಿ ಮಯ್ಬಣ್ಣಗಳು ಕಂಡುಬರುವುದಕ್ಕೆ ಕಾರಣ ಕಪ್ಪು ಮತ್ತು ಬಿಳಿಯ ಬೇರೆಬೇರೆ ಬುಡಕಟ್ಟುಗಳು ನೆಲೆಸಿರುವುದರಿಂದ. ಕಪ್ಪು ಚಾಯೆಗೆ ಕಾರಣ ನೆಗ್ರಿಟೋ, ಮುಂಡ ಮತ್ತು ದ್ರಾವಿಡ ಜನಾಂಗಗಳು. ಬಿಳಿ ಚಾಯೆಗೆ ಕಾರಣ ಆರ‍್ಯ ಮತ್ತು ಮಂಗೋಲ ಬುಡಕಟ್ಟುಗಳು. ವಿದ್ವಾಂಸರು ನಡೆಸಿದ ಸಂಶೋದನೆಯಿಂದ ತಿಳಿದು ಬಂದ ಈ ಅರಿವನ್ನು ಇತ್ತೀಚಿನ DNA ಅದ್ಯಯನಗಳೂ ಎತ್ತಿ ಹಿಡಿದಿವೆ.
      ಇನ್ನು ಕನ್ನಡಿಗರೂ ಸೇರಿದಂತೆ ತೆಂಕಣ ಬಾರತೀಯರ ಬಗ್ಗೆ ಹೇಳುವುದಾದರೆ, ನಮ್ಮಲ್ಲಿನ ಮಯ್ಬಣ್ಣ ವಯ್ವಿದ್ಯಕ್ಕೆ ಹೆಚ್ಚಾಗಿ ದ್ರಾವಿಡ ಮತ್ತು ಆರ‍್ಯ ಬುಡಕಟ್ಟುಗಳ ಬೆರಕೆಯೇ ಕಾರಣ. ಇದಕ್ಕೆ ಹೇರಳವಾದ ವಯ್‍ಜ್ನಾನಿಕ ಆದಾರವನ್ನು ನಮ್ಮ ಬಳಗದ ಕಯ್ಪಿಡಿ - ಕನ್ನಡಿಗರೂ ದ್ರಾವಿಡರೆ - ಓದುಗೆಯಲ್ಲಿ ಒದಗಿಸಲಾಗಿದೆ. ಇದು ನಮ್ಮ ಮಯ್ಬಣ್ಣದ ಸತ್ಯ. ತೆಂಕಣದವರಲ್ಲಿ, ಕನ್ನಡಿಗರೂ ಸೇರಿದಂತೆ, ದ್ರಾವಿಡ ಲಕ್ಶಣದ ಕಪ್ಪು ಬಣ್ಣದವರೇ ಹೆಚ್ಚು (ಇದೇ ಕಾರಣಕ್ಕಾಗೇ ತೆಂಕಣದವರು ಆಡುವ ನುಡಿಗಳು ದ್ರಾವಿಡ ನುಡಿಗಳಾಗಿರುವುದು). ಆದರೆ, ಅವರಲ್ಲಿ ಹೆಚ್ಚು ಮಂದಿಗೆ ಈ ಸತ್ಯ ತಿಳಿದಿಲ್ಲ. ಅಶ್ಟೇ ಅಲ್ಲ, ಸಾವಿರಾರು ವರ‍್ಶಗಳಿಂದ ಆರ‍್ಯ ನಡೆನುಡಿಗಳ ಅಟ್ಟುಳಿಯಿಂದ ತಮ್ಮ ನಡೆನುಡಿಗಳಿಗೆ ಆಗಿರುವ ಕೆಡುಕಿನ ಬಗ್ಗೆಯೂ ತಿಳಿದಿಲ್ಲ, ಈ ಎರಡೂ ವಿಶಯಗಳನ್ನು ಅರಿತುಕೊಂಡರೆ, ದ್ರಾವಿಡರಲ್ಲಿ ಒಗ್ಗಟ್ಟು ಮೂಡುತ್ತದೆ. ಒಗ್ಗಟ್ಟಿನಿಂದ ಸಾಮಾಜಿಕ ಮತ್ತು ರಾಜಕೀಯ ಕಸುವು ಹೆಚ್ಚುತ್ತದೆ. ನಾವೇ ಬಹುಸಂಕ್ಯಾತರೆಂಬ ನೆಮ್ಮದಿಯ ಬಲ ಬೆಳೆಯುತ್ತದೆ. ಮಯ್ಬಣ್ಣವೂ ಸೇರಿದಂತೆ ಎಲ್ಲಾ ಬಗೆಯ ಕೀಳರಿಮೆಗಳೂ ತಾವಾಗೇ ಕಡಿಮೆಯಾಗುತ್ತವೆ. ಇದು ನನ್ನ ನಂಬುಗೆ.
      ಕಪ್ಪು ಬಣ್ಣದ ಕೀಳರಿಮೆ ಎಂದೂ ನೆರೆಯಾಗಿ ಅಳಿಯದಿರಬಹುದು. ಮಾನವರ ಕಣ್ಣಿಗೆ ಸ್ವಾಬಾವಿಕವಾಗಿಯೇ ಬಿಳಿ ಮಯ್ಬಣ್ಣ ಒಟ್ಟಾರೆ ರುಚಿಸಬಹುದು. ಆ ಸಾದ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗೆಯೇ, DNA ಅರಿವು ನಾಗಾಲೋಟದಲ್ಲಿ ಬೆಳೆಯುತ್ತಿರುವ ಈ ದಿನಗಳಲ್ಲಿ, ಬೇಕೆನಿಸಿದ ಮಯ್ಪರಿ ಇರುವ designer ಮಕ್ಕಳನ್ನು ಪಡೆದುಕೊಳ್ಳುವ ಕಾಲ ದೂರವಿರದ ಆದುನಿಕ ಯುಗದಲ್ಲಿ, ಮಯ್ಬಣ್ಣ, ಬವಿಶ್ಯದಲ್ಲಿ ಒಂದು ಸಮಸ್ಯೆಯೇ ಆಗದಿರುವ ಇನ್ನೊಂದು ಸಾದ್ಯತೆಯೂ ಇದೆ. ಅದೇನೇ ಇರಲಿ, ಈಗಿನ ಮಟ್ಟಿಗಂತೂ, ನಮ್ಮ ಬಗ್ಗೆ ನಾವು ಸರಿಯಾಗಿ ತಿಳಿದುಕೊಂಡು, ಆ ತಿಳಿವಿನ ಬಲದಿಂದ ನಮ್ಮನ್ನು ಕಾಡುವ ದವುರ‍್ಬಲ್ಯಗಳನ್ನು ಕಳೆದುಕೊಳ್ಳುವುದು ಒಳ್ಳೆಯದೆನಿಸುತ್ತದೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್