ಸೋಮವಾರ, ಮಾರ್ಚ್ 25, 2013

ಮಣಿಯಿತು UPSC!

ವಿ.ಸೂ.: ವಿದಾನ ಸಬೆಯ ಚುನಾವಣೆ ಮುಗಿಯುವವರೆಗೆ, ಅಂದರೆ, ಮೇ ತಿಂಗಳ ಮೊದಲ ವಾರದವರೆಗೆ, ಬ್ಲಾಗನ್ನು ಬರೆಯುವುದರಿಂದ ಬಿಡುವು ತೆಗೆದುಕೊಂಡಿದ್ದೇನೆ - ಎಚ್.ಎಸ್.ರಾಜ್

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕೋಟಿಗಟ್ಟಲೆ ಮಂದಿಗೆ ತಾಯ್‍ನುಡಿಗಳಾಗಿದ್ದರೂ ಕನ್ನಡ, ತಮಿಳು, ತೆಲುಗು, ಮರಾಟಿ ಮುಂತಾದ ನುಡಿಗಳಿಗೆ ಕೇವಲ ’ಪ್ರಾದೇಶಿಕ ಬಾಶೆ’ ಎಂಬ ಇಳಿಗೆಯ್ವ ಹಣೆಪಟ್ಟಿ ನಮ್ಮ ದೇಶದಲ್ಲಿ! ಸಾಲದುದಕ್ಕೆ ಅವುಗಳ ಮೇಲೆ ಹಿಂದೀ ಮತ್ತು ಇಂಗ್ಲಿಶ್ ನುಡಿಗಳ ಎಡೆಬಿಡದ ದಬ್ಬಾಳಿಕೆ ಬೇರೆ. ಯಾವಾಗ ಯಾವ ರೂಪದಲ್ಲಿ ಕುತ್ತುಗಳು ಬಂದು ಅವುಗಳ ಮೇಲೆ ಎರಗುತ್ತವೋ ಎಂದು ಹೇಳಲು ಬರುವುದಿಲ್ಲ. ’ಹೋದೆಯಾ ಪಿಶಾಚೀ ಎಂದರೆ, ಬಂದೆ ಗವಾಕ್ಶೀಲಿ!’ ಎನ್ನುವ ಹಾಗೆ, ಕನ್ನಡದಂತಹ ನುಡಿಗಳ ಮೇಲೆ ಹಿಂದೀ ಮತ್ತು ಇಂಗ್ಲೀಶುಗಳ ಹಾವಳಿ ತಪ್ಪಿದ್ದಲ್ಲ. ಕಳೆದ ಎರಡು ಮೂರು ವಾರಗಳಲ್ಲಿ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿದ ಕೆಂದ್ರ ಲೋಕಸೇವಾ ಸಮಿತಿಯ (UPSC) ಹೊಸ ಪರೀಕ್ಶಾ ಕಟ್ಟಳೆಗಳೇ ಇದಕ್ಕೆ ಒಂದು ಅತ್ಯುತ್ತಮ ನಿದರ‍್ಶನ.
      ಪ್ರಾದೇಶಿಕ ಬಾಶೆಗಳಲ್ಲಿ ಪ್ರಾವೀಣ್ಯತೆ ಇದ್ದು ಪ್ರಾದೇಶಿಕ ಬಾಶೆಗಳಲ್ಲೇ ಅಯ್. ಏ. ಎಸ್. ಮುಂತಾದ ಸೇವೆಗಳಿಗಾಗಿ ನಡೆಯುವ ಪರೀಕ್ಶೆಗಳಿಗೆ ಉತ್ತರಗಳನ್ನು ಬರೆಯಲು ಬಯಸುವ ಅಬ್ಯರ‍್ತಿಗಳಿಗೆ ಹಿನ್ನಡೆಯಾಗುವ ರೀತಿಯಲ್ಲಿ ಲೋಕಸೇವಾ ಸಮಿತಿ ತನ್ನ ಹೊಸ ಪರೀಕ್ಶಾ ವಿದಾನವನ್ನು ರೂಪಿಸಿ, ಜಾರಿಗೆ ತರಲು ಹೊರಟಿತ್ತು. ಸಹಜವಾಗೇ ಪ್ರಾದೇಶಿಕ ಬಾಶೆಗಳನ್ನಾಡುವವರಿಂದ ಇದಕ್ಕೆ ಎದಿರು ವ್ಯಕ್ತವಾಗಲು ತೊಡಗಿತು. ಲೋಕಸೇವಾ ಸಮಿತಿ ಬರೀ ಇಶ್ಟೇ ಬದಲಾವಣೆ ತಂದಿದ್ದರೆ, ಅಂದರೆ, ಪ್ರಾದೇಶಿಕ ಬಾಶೆಗಳ ಅಬ್ಯರ‍್ತಿಗಳಿಗೆ ಮಾತ್ರ ಹಿನ್ನಡೆಯಾಗುವ ಹಾಗೆ ಮಾರ‍್ಪಾಡುಗಳನ್ನು ತಂದಿದ್ದರೆ, ಅದರ ಎದುರು ಹೋರಾಡುವುದು ನಮ್ಮಂತಹ ಪ್ರಾದೇಶಿಕ ಬಾಶೆಗಳನ್ನಾಡುವವರಿಗೆ ದಿಟವಾಗಿಯೂ ಕಶ್ಟವಾಗುತ್ತಿತ್ತು. ಆದರೆ, ನಮ್ಮ ಅದ್ರುಶ್ಟ ಕೊಂಚ ಚೆನ್ನಾಗಿತ್ತು ಎಂದು ಕಾಣುತ್ತದೆ. ಏಕೆಂದರೆ, ಲೋಕಸೇವಾ ಸಮಿತಿ, ಪ್ರಾದೇಶಿಕ ಬಾಶೆಗಳ ಅಬ್ಯರ‍್ತಿಗಳಿಗೆ ಕೆಡುಕು ಮಾಡುವುದರ ಜೊತೆಗೆ, ಇಂಗ್ಲಿಶ್ ಬಾಶೆಗೆ ಒತ್ತು ಕೊಟ್ಟು, ಇಂಗ್ಲಿಶ್ ಬಾಶೆಯಲ್ಲಿ ಕುಶಲತೆ ಇರುವ ಅಬ್ಯರ‍್ತಿಗಳಿಗೆ ಒಳಿತಾಗುವ ಹಾಗೆ ಕೂಡ ಮಾರ‍್ಪಾಡುಗಳನ್ನು ಮಾಡಿತ್ತು. ಇದರಿಂದಾಗಿ, ಇಂಗ್ಲಿಶ್ ಅಶ್ಟಾಗಿ ಬಾರದ, ಹಿಂದಿಯಲ್ಲಿ ಮಾತ್ರ ಕುಶಲತೆ ಇರುವ ಮಂದಿಗೂ ಹಿನ್ನಡೆಯಾಗಿತ್ತು. ಹಾಗಾಗಿ, ಹಿಂದೀ ಆಡುಗರಿಂದಲೂ ಸಮಿತಿಯ ಹೊಸ ನೀತಿಗೆ ತೀವ್ರ ವಿರೋದ ವ್ಯಕ್ತವಾಯಿತು.
      ಒಟ್ಟಿನಲ್ಲಿ, ಸಂಸತ್ತಿನಲ್ಲಿ ಹೆಚ್ಚುಕಡಿಮೆ ಎಲ್ಲಾ ಪಕ್ಶಗಳಿಂದಲೂ ಲೋಕಸೇವಾ ಸಮಿತಿ ಹೊರಡಿಸಿದ್ದ ಹೊಸ ನೀತಿಯ ಅದಿಸೂಚನೆಗೆ ಒಗ್ಗಟ್ಟಿನಿಂದ ಕೂಡಿದ ವಿರೋದ ವ್ಯಕ್ತವಾಯಿತು. ಪ್ರತಿಬಟನೆಯ ಗದ್ದಲ ಎಶ್ಟು ಗಟ್ಟಿಯಾಗಿತ್ತೆಂದರೆ, ಕಲಾಪವನ್ನು ಮೂರು ಬಾರಿ ಮುಂದೂಡಬೇಕಾಯಿತು. ಲೋಕಸೇವಾ ಸಮಿತಿಯ ತಲೆಯವರನ್ನು ಕೂಡಲೇ ವಜಾ ಮಾಡಿ ಎಂದು ಜೆಡಿಯು ಮುಂದಾಳು ಶರದ್ ಯಾದವ್ ಒತ್ತಾಯಿಸಿದರು. ಲಾಲೂ ಪ್ರಸಾದ್ ಯಾದವರ ಪಕ್ಶದ ಸದಸ್ಯ ರಗುವಂಶ್ ಸಿಂಗರು ಎರಡು ಬಾರಿ ಸಬಾದ್ಯಕ್ಶರ ಪೀಟದ ಕಡೆ ನುಗ್ಗಿ ಅದಿಸೂಚನೆ ವಿರುದ್ದ ಗೋಶಣೆ ಕೂಗಿದರು! ಇಂತಹ ಕಟ್ಟಿದಿರಿಗೆ ಮಣಿದು ಸರ‍್ಕಾರ ಬೇರೆ ದಾರಿ ಇಲ್ಲದೆ ಲೋಕಸೇವಾ ಸಮಿತಿಯ ಅದಿಸೂಚನೆಯನ್ನು ತಡೆಹಿಡಿಯುವ ನಿರ‍್ದಾರವನ್ನು ಪ್ರಕಟಿಸಿತು. ಇದೆಲ್ಲಾ ನಡೆದ ಎರಡು ನಾಳುಗಳ ಬಳಿಕ ಲೋಕಸೇವಾ ಸಮಿತಿ ತನ್ನ ಪರೀಕ್ಶಾ ಮಾದರಿಯನ್ನು ಮತ್ತೆ ರೂಪಿಸುವುದಾಗಿ ಹೇಳಿಕೆ ಕೊಟ್ಟಿತು. ಮತ್ತೆರಡು ದಿನಗಳಲ್ಲಿ, ಇಂಗ್ಲೀಶಿಗೆ ಕೊಟ್ಟಿರುವ ಒತ್ತನ್ನಶ್ಟೇ ಅಲ್ಲದೆ ಪ್ರಾದೇಶಿಕ ನುಡಿಗಳ ಮೇಲೆ ಹಾಕಿದ್ದ ಎಲ್ಲ ಅಡ್ಡಿಗಳನ್ನೂ ತೆಗೆದು ಹಾಕಿರುವುದಾಗಿ ಕೂಡಾ ತಿಳಿಸಿತು.
      ಎಲ್ಲಾ ಪಕ್ಶಗಳೂ ಹೀಗೆ ಒಟ್ಟಿಗೆ ಎದುರು ತೋರಿಸಿದ್ದರಿಂದ ನಮ್ಮ ಕನ್ನಡಕ್ಕೆ ಕುತ್ತಾಗಿದ್ದ ಅದಿಸೂಚನೆಗೆ ಬೇಗನೇ ತಡೆ ಬಿದ್ದಿತು. ಈ ಗೆಲುವು ನಮಗೆ ಸಂತಸದ ವಿಶಯವೇನೋ ಸರಿ. ಆದರೆ, ಈ ಗೆಲುವಿಗೆ ಕಾರಣವಾದ ಹೋರಾಟದಲ್ಲಿ ನಮ್ಮ ಪಾಲು ಎಶ್ಟರ ಮಟ್ಟಿನದು ಎಂಬುದು ಸರಿಯಾಗಿ ತಿಳಿಯದು. ಏಕೆಂದರೆ, ನಾನು ನೋಡಿದ ಪತ್ರಿಕೆಗಳಲ್ಲಿ ನಮ್ಮ ಕನ್ನಡ ನಾಡಿನ ಸಂಸದರು ಹೋರಾಡಿದ ಬಗ್ಗೆ ನಿರ‍್ದಿಶ್ಟ ವರದಿಗಳಿರಲಿಲ್ಲ. ಅದೇನೇ ಇರಲಿ, ಕನ್ನಡದ ಸಂಗಟನೆಗಳಲ್ಲಾದರೂ ಕೆಲವು ಹಾಗೂ ಕನ್ನಡದ ಸಾಹಿತಿಗಳಲ್ಲಾದರೂ ಕೆಲವರು ಕಂಡಿತವಾಗಿಯೂ ಲೋಕಸೇವಾ ಸಮಿತಿಯ ಅದಿಸೂಚನೆಗೆ ಕಟುವಾದ ಪ್ರತಿಬಟನೆಯನ್ನು ಸೂಚಿಸಿದ್ದರು. ಅದೇ ವೇಳೆ ಬೆಂಗಳೂರಿನಲ್ಲಿ ನಡೆದ ತೆಲುಗು ವಿಜ್‍ನಾನ ಸಮಿತಿಯ ಸಮಾರಂಬದಲ್ಲೂ ಹಲವು ತೆಲುಗು ಗಣ್ಯರು ಅದಿಸೂಚನೆಯ ಬಗ್ಗೆ ವಿರೋದವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದರು. ಇದೆಲ್ಲಾ ನಮ್ಮಲ್ಲಿ ಆಶಾಬಾವನೆಯನ್ನು ಮೂಡಿಸುವ ಸಂಗತಿ.
      ಲೋಕಸೇವಾ ಸಮಿತಿಯ ಅದಿಸೂಚನೆಯ ಬಗ್ಗೆ ಕಂಡು ಬಂದ ಪ್ರತಿಬಟನೆಯಲ್ಲಿ ಗಮನಿಸಬೇಕಾದ ಒಂದು ಮುಕ್ಯ ಅಂಶವಿದೆ. ಅದೇನೆಂದರೆ, ಹಿಂದೀವಾಲರ ಪ್ರತಿನಿದಿಗಳು ನಿಜಕ್ಕೂ ಪ್ರತಿಬಟಿಸಿದ್ದು ಇಂಗ್ಲೀಶಿಗೆ ಹೆಚ್ಚಿನ ಒತ್ತು ಸಿಕ್ಕಿದುದಕ್ಕೇ ಹೊರತು ಪ್ರಾದೇಶಿಕ ಬಾಶೆಗಳಿಗೆ ತೊಡಕು ಉಂಟಾದುದಕ್ಕಲ್ಲ!  ಪರೀಕ್ಶೆಗಳ ಹೊಸ ಮಾದರಿಯಿಂದ ಪ್ರಾದೇಶಿಕ ಬಾಶೆಗಳಿಗೆ ಮಾತ್ರ ತೊಡಕು ಉಂಟಾಗಿದ್ದರೆ, ಹಿಂದೀ ನಾಡಿನ ಮುಂದಾಳುಗಳು ಚಕಾರವನ್ನಾದರೂ ಎತ್ತುತ್ತಿದ್ದರೆ? ಹಿಂದೀವಾಲರಿಗೆ ಪ್ರಾದೇಶಿಕ ಬಾಶೆಗಳ ಬಗ್ಗೆಯೂ ಸಹಾನುಬೂತಿ ಏನಾದರು ಇದೆಯೆ? ಇದು ಬಗೆದು ನೋಡಬೇಕಾದ ವಿಚಾರ.
      ಈ ಸಲವೇನೋ ಕಾರಣಾಂತರದಿಂದ ಹಿಂದೀವಾಲರ ನೆರವು ನಮಗೆ ದೊರೆಯಿತು. ಆದರೆ, ಎಲ್ಲ ಸಂದರ‍್ಬಗಳಲ್ಲೂ ಅದು ದೊರೆಯಲಾರದು. ಆದ್ದರಿಂದ, ಎಲ್ಲ ಸಂದರ‍್ಬಗಳಲ್ಲೂ ನೆರವು ದೊರೆಯುವತ್ತ ನಮ್ಮ ಕೆಳೆಯ ಕಯ್ಯನ್ನು ನಾವು ಚಾಚಿರಬೇಕು. ಅಂದರೆ, ನಮ್ಮ ಹಾಗೇ ಕಶ್ಟಗಳನ್ನು ಎದುರಿಸಬೇಕಾದ ಬೇರೆ ಪ್ರಾದೇಶಿಕ ನುಡಿಗರಿಗೆ ನಮ್ಮ ಬೆಂಬಲವನ್ನು ನೀಡುತ್ತಿರಬೇಕು ಮತ್ತು ಅವರಿಂದ ಬೆಂಬಲವನ್ನು ಪಡೆದುಕೊಳ್ಳುತ್ತಿರಬೇಕು. ಮುಕ್ಯವಾಗಿ, ನಡೆನುಡಿಗಳಲ್ಲಿ ಹಾಗೂ ಬುಡಕಟ್ಟಿನಲ್ಲಿ ನಮ್ಮವರೆನಿಸುವ ನಮ್ಮ ಸಹದ್ರಾವಿಡರಾದ ತಮಿಳರು, ತೆಲುಗರು ಮತ್ತು ಮಲೆಯಾಳರೊಂದಿಗೆ ಸವ್‍ಹಾರ‍್ದವನ್ನೂ ಒಗ್ಗಟ್ಟನ್ನೂ ಮೂಡಿಸಿಕೊಳ್ಳಬೇಕು. ತೆಂಕಣರು ನಾವೆಲ್ಲ ದ್ರಾವಿಡತನವೆಂಬ ನಮ್ಮ ನನ್ನಿ ಹಿನ್ನೆಲೆಯ ಬಲದಿಂದ ಒಗ್ಗೂಡಬೇಕು. ಹೀಗೆ ಒಗ್ಗೂಡಿದರೆ, ಮರಾಟಿ ಮತ್ತು ಬಂಗಾಲಿಗಳಂತಹ ಬೇರೆ ಪ್ರಾದೇಶಿಕ ನುಡಿಗರ ನೆರವನ್ನು ಪಡೆದುಕೊಳ್ಳುವುದೂ ಹಗುರಾಗಬಹುದು. ಆಗ, ಕೇಂದ್ರದಿಂದ ಆಗಾಗ್ಗೆ ಬರುವ ಲೋಕಸೇವಾ ಸಮಿತಿಯ ಕೆಡುಕ ನೀತಿಗಳಂತಹ ಕುತ್ತುಗಳ ವಿರುದ್ದ ಹೋರಾಡುವುದು ನಮಗೆ ಬಹುಮಟ್ಟಿಗೆ ಸುಲಬವಾಗಬಹುದು. ನಮ್ಮ ನಡೆನುಡಿಗಳು ಉಳಿದುಕೊಳ್ಳಬಹುದು.

ನಲ್‍ಮೆಯೊಡನೆ,
ಎಚ್.ಎಸ್.ರಾಜ್

ಗುರುವಾರ, ಮಾರ್ಚ್ 14, 2013

ಗೋಹತ್ಯಾನಿಶೇದವೆಂಬ ದೊಂಬರಾಟ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಬೆಳಗಾವಿಯ ಸುವರ‍್ಣ ಸವ್ದದಲ್ಲೂ ಶಾಸಕಸಬೆಯ ಅದಿವೇಶನ ನಡೆಯಿತು. ಅದಿವೇಶನದ ಕಡೆಯ ನಾಳು, ತರಾತುರಿಯಿಂದ ಆಡಳಿತ ಪಕ್ಶ ಆವುಗೊಲೆಗೆ ತಡೆ ಹಾಕುವ ಮಸೂದೆಯನ್ನು ಸದನದ ಮುಂದೆ ಚರ‍್ಚೆಗೆ ತಾರದೆ ಗುಟ್ಟುಗುಟ್ಟಾಗಿ ಅಂಗೀಕರಿಸಿತು. ಸ್ವಾಬಾವಿಕವಾಗಿಯೆ, ಸವರ‍್ಣೀಯ ಹಿಂದೂಗಳನ್ನು ಓಲಯ್ಸುವ ಆಡಳಿತ ಪಕ್ಶದ ಈ ನುಸುಳು ರಾಜಕಾರಣದ ನಡೆಯ ಬಗ್ಗೆ ಮರುದಿನಗಳಲ್ಲಿ ಟೀವೀ ಕಾಲುವೆಗಳಲ್ಲಿ ಪರ-ವಿರೋದಿ ಚರ‍್ಚೆಗಳು ನಡೆದವು. ಇಂತಹ ಒಂದು ಕಾರ‍್ಯಕ್ರಮದಲ್ಲಿ ಶಾಸಕ ಹಸನಬ್ಬನವರು, ’ಮುಸ್ಲಿಮರಲ್ಲಿ ಬಡವರೇ ಹೆಚ್ಚು. ಗೋಮಾಂಸ ಅಗ್ಗ. ಮುಸ್ಲಿಮರು ಗೋಹತ್ಯೆ ನಿಶೇದವನ್ನು ವಿರೋದಿಸುತ್ತಿರುವುದು ಬಡತನದ ಅನಿವಾರ‍್ಯತೆಯಿಂದಾಗಿ. ಒಂದು ವೇಳೆ, ಕುರಿಯಡಗು  ಗೋಮಾಂಸಕ್ಕಿಂತ ಅಗ್ಗವಾಗಿ ದೊರೆತರೆ, ಮುಸ್ಲಿಮರು ಗೋಹತ್ಯೆ ನಿಶೇದವನ್ನು ವಿರೋದಿಸುವುದಿಲ್ಲ. ಸರ‍್ಕಾರ ಕುರಿಮಾಂಸ ಬಡವರಿಗೆ ರಿಯಾಯತಿ ದರದಲ್ಲಿ ಸಿಗುವಂತೆ ಮಾಡಬೇಕು’ ಎಂದು ಹೇಳಿದರು. ಅವರ ಹೇಳಿಕೆಗೆ ಶ್ರೀರಾಮ ಸೇನೆಯ ಮುತಾಲಿಕರು, ’ಹವುದು. ಆಕಳ ಹತ್ಯೆ ನಿಲ್ಲುತ್ತದೆ ಎನ್ನುವುದಾದರೆ, ಕುರಿಮಾಂಸವನ್ನು ಅಗ್ಗದ ಬೆಲೆಗೆ ಒದಗಿಸುವ ಏರ‍್ಪಾಟು ಆಗಬೇಕು’ ಎಂದು ಒಪ್ಪಿಗೆ ಸೂಚಿಸಿದರು. ಇದನ್ನೆಲ್ಲಾ ಕೇಳಿ ನಾನು ’ಶಿವ ಶಿವಾ’ ಎಂದುಕೊಂಡೆ.
      ಇತ್ತೀಚೆಗೆ ಗೋಹತ್ಯೆಯ ಬಗ್ಗೆ ಇನ್ನೊಂದು ಕಾರ‍್ಯಕ್ರಮವನ್ನು ಟೀವೀಯಲ್ಲಿ ನೋಡಿದೆ. ಎಂಟನೇ ತರಗತಿಯ ಹಿಂದೀ ಪಟ್ಯಪುಸ್ತಕದಲ್ಲಿ ನಮ್ಮ ’ಗೋವಿನ ಹಾಡು’ ಒಂದು ಪಾಟದ ರೂಪದಲ್ಲಿ ಅಳವಟ್ಟಿದೆಯಂತೆ. ಆದರೆ, ಆ ಪಾಟದ ಕತೆಗೂ ನಮ್ಮ ಮೂಲ ಗೋವಿನ ಹಾಡಿನ ಕತೆಗೂ ಒಂದು ಆಕ್ಶೇಪಾರ‍್ಹ ವ್ಯತ್ಯಾಸವಿದೆಯಂತೆ. ಪಾಟದ ಕತೆಯಲ್ಲಿ, ಗೋವಿನ ಸತ್ಯಸಂದತೆಗೆ ಮೆಚ್ಚಿ, ಬಗೆನೊಂದು, ಹುಲಿ, ’ಇನ್ನೆಂದೂ ನಾನು ಗೋಮಾಂಸವನ್ನು ತಿನ್ನುವುದಿಲ್ಲ’ ಎಂದು ಪ್ರತಿಜ್ನೆ ಮಾಡುತ್ತದಂತೆ (ಮೂಲ ಗೋವಿನ ಹಾಡಿನಲ್ಲಿ ಹುಲಿ ಬೆಟ್ಟದ ತುದಿಯಿಂದ ಹಾರಿ ತಂಗೊಲೆ ಗೆಯ್ದುಕೊಳ್ಳುತ್ತದೆ). ಚರ‍್ಚೆಯಲ್ಲಿ ಪಾಲ್ಗೊಂಡಿದ್ದ ಕೆಲ ದಲಿತ ಮುಂದಾಳುಗಳ ಪ್ರಕಾರ, ಹೀಗೆ ಮೂಲ ಕತೆಯನ್ನು ತಿರುಚಿದ್ದು, ಹಿಂದುತ್ವಪರ ಸರ‍್ಕಾರದ ನುಸುಳು ರಾಜಕಾರಣ. ’ಗೋಮಾಂಸವನ್ನು ತಿನ್ನುವುದು ಕೆಟ್ಟದ್ದು’ ಎಂಬ ಪ್ರಜ್ನೆಯನ್ನು ಎಳೆಯ ಮಕ್ಕಳಲ್ಲಿ ಬರಿಸುವುದೇ ಇಲ್ಲಿನ ಉದ್ದೇಶ, ಎಂಬುದು ಅವರ ವಾದ.
      ಈ ಮೇಲಿನ ಎರಡೂ ಚರ‍್ಚೆಗಳನ್ನು ನೋಡಿದ ಮೇಲೆ ನನಗೆ ಅನ್ನಿಸಿದ್ದು ಇದು - ’ಹಸು ಎಮ್ಮೆಗಳನ್ನು ಕಾಪಾಡುವುದಕ್ಕೆ ಸಾವಿರಾರು ಮಂದಿ ಇದ್ದಾರೆ. ಆದರೆ, ಕುರಿ ಕೋಳಿಗಳನ್ನು ಕಾಪಾಡುವುದಕ್ಕೆ ಮಾತ್ರ ಒಬ್ಬನೂ ಇಲ್ಲ! ಹಸು ಎಮ್ಮೆಗಳನ್ನು ತಿನ್ನುವುದು ದೊಡ್ಡ ಪಾಪ. ಅದೇ ಕುರಿ ಕೋಳಿಗಳನ್ನು ತಿನ್ನುವುದು ಪಾಪವಲ್ಲ, ಅತವ ಕಡಿಮೆ ಪಾಪ! ಹಸು ಎಮ್ಮೆಗಳ ಹತ್ಯೆ ನಿಲ್ಲುತ್ತದೆ ಎನ್ನುವುದಾದರೆ, ಕುರಿ ಕೋಳಿಗಳನ್ನು ರಿಯಾಯಿತಿ ದರದಲ್ಲಿ ಮಾರಿಸಲಿಕ್ಕೂ ಕೆಲವರು ಸಿದ್ದರಿದ್ದಾರೆ!’. ಅದೇನು ಪಾಪ ಮಾಡಿದ್ದವು ಸ್ವಾಮೀ ಕುರಿ ಕೋಳಿಗಳು? ಅವುಗಳ ನೋವು ನೋವಲ್ಲವೆ? ಪ್ರಾಣಿಗಳಲ್ಲೂ ಮೇಲು-ಕೀಳು ಎಣಿಸುವುದೇ?
      ಪ್ರಾಣಿಗಳಲ್ಲಿ ಮೇಲು-ಕೀಳು ಎಣಿಸುವುದೂ, ಮಾನವರಲ್ಲಿ ಮೇಲು-ಕೀಳು ಎಣಿಸುವುದೂ, ಇಂತಹ ಅನ್ಯಾಯದ ಪರಿಕಲ್ಪನೆಗಳು ಸದ್ಯ ದಕ್ಶಿಣದ ನಾವು ದ್ರಾವಿಡರು ಹುಟ್ಟುಹಾಕಿದವಲ್ಲ. ಈ ವಿಶಯದಲ್ಲಿ ಅದೊಂದು ಸಮಾದಾನ ನನಗೆ. ಹಾಗೆಂದು ಉತ್ತರದಿಂದ ಬಂದ ಇಂತಹ ಕೀಳು ಆಚಾರಗಳನ್ನು ನಾವೇನೂ ನಡೆಸದೆ ಬಿಟ್ಟಿಲ್ಲ. ಇದು ನಿಶ್ಚಯವಾಗಿಯೂ ಒಂದು ಕೊರಗು ನನಗೆ. ಕೆಟ್ಟ ಪದ್ದತಿಗಳನ್ನು ಹುಟ್ಟುಹಾಕುವುದು ಎಶ್ಟು ಪಾಪವೋ, ಆ ಪಾಪಗಳನ್ನು ಒಪ್ಪಿ ಆಚರಿಸುವುದೂ ಅಶ್ಟೇ ಪಾಪ, ನನ್ನ ಕಣ್ಣಿನಲ್ಲಿ.
      ಪ್ರಾಣಿಗಳ ವಿಶಯದಲ್ಲಿ ದಕ್ಶಿಣದ ಸಾದುಸಂತರು ಎಂತೆಂತಹ ಕನಿಕರದ ಮಾತುಗಳನ್ನಾಡಿದ್ದಾರೆ. ’ಇನ್ನೊಂದರ ಮಾಂಸ ತಿಂದು ತನ್ನ ಮೆಯ್ಯ ಮಾಂಸ ಹೆಚ್ಚಿಸಿಕೊಳ್ಳುವವನು, ಅದು ಹೇಗೆ ತಾನೆ ಕನಿಕರ ಉಳ್ಳವನಾಗುತ್ತಾನೆ?’ ಎಂದು ತಮಿಳಿನ ತಿರುಕ್ಕುರಲ್‍ ಬರೆದ ಸಂತ ವಳ್ಳುವಾರ್ ಕೇಳುತ್ತಾನೆ. ನಮ್ಮವನೇ ಆದ ಕನ್ನಡಿಗ ಬಸವಣ್ಣ ಹೇಳುತ್ತಾನೆ, ’ದಯೆಯೇ ದರ‍್ಮದ ಮೂಲವಯ್ಯಾ, ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂದು. ದಯೆ ಇರಬೇಕಾದುದು ’ಸಕಲ’ ಪ್ರಾಣಿಗಳಲ್ಲಿ. ಬರೀ ಹಸು ಮತ್ತು ಎಮ್ಮೆಗಳಲ್ಲಿ ಮಾತ್ರವಲ್ಲ. ಪ್ರಾಣಿದಯೆ ಸಾರುವ ಮಾತುಗಳು ಉತ್ತರದ ನಾಡುಗಳಲ್ಲೂ ಇರಬಹುದು. ಆದರೆ, ಅವುಗಳೊಂದಿಗೆ, ’ಕೆಲವು ಪ್ರಾಣಿಗಳು ದೇವರಿಗೆ ಸಮಾನ. ಅವಕ್ಕೆ ವಿಶೇಶವಾಗಿ ದಯೆ ತೋರಿರಿ’ ಎಂಬ, ’ಕೆಲವು ಪ್ರಾಣಿಗಳು ಶ್ರೇಶ್ಟ, ಉಳಿದವು ಅಲ್ಲ’ ಎಂದು ತಾರತಮ್ಯ ಮಾಡುವ ಮಾತುಗಳೂ ಅಲ್ಲಿವೆ. ದ್ರಾವಿಡರ ನಾಡಾದ ದಕ್ಶಿಣದಲ್ಲಿ ಈ ಬಗೆಯ ಇಬ್ಬಂದಿ ನೀತಿಯ ಸಂದೇಶಗಳು ನನಗೆ ತಿಳಿದಂತೆ ಇಲ್ಲ.
      ನಮ್ಮ ದ್ರಾವಿಡ ಸಂತರು ಸಮತಾಬಾವದಿಂದ ಎಶ್ಟು ಮಾತು ಹೇಳಿದ್ದರೇನು? ನಾವಂತೂ ಅದನ್ನು ಪಾಲಿಸುತ್ತಿಲ್ಲ. ಸಮತಾಬಾವದ ಮಾತುಗಳು ಹೋಗಲಿ, ಅಸಮತೆಯೇ ಆದಾರವಾಗಿರುವ ಉತ್ತರದಿಂದ ಬಂದ ಆಚರಣೆಗಳಿಗೆ ಗಟ್ಟಿಯಾಗಿ ನಾವು ಜೋತುಬಿದ್ದಿದ್ದೇವೆ. ಮೇಲು-ಕೀಳಿನ ಎಣಿಕೆಯಿಂದ ಬಂದ ಉತ್ತರದ ನಂಬಿಕೆಗಳು ದಕ್ಶಿಣದ ದ್ರಾವಿಡರಾದ ನಮಗೆ ಎಂದೂ ಆದರ‍್ಶವಾಗಬಾರದು. ಆದರೂ, ಆಗಿವೆ. ಮುಂದೆ ಎಂದಾದರೊಂದು ದಿನ, ಬಸವಣ್ಣನ ’ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂಬ ಸಂದೇಶ ನಮಗೆಲ್ಲಾ ಆದರ‍್ಶಪ್ರಾಯವಾಗುತ್ತದೆ ಎಂದು ನಂಬೋಣ. ಆದರೆ, ಅಲ್ಲಿಯವರೆಗೆ, ’ಹಸು ಎಮ್ಮೆ ಮೇಲು, ಕುರಿ ಕೋಳಿ ಕೀಳು’ ಎನ್ನುವ ಇಬ್ಬಂದಿ ನೀತಿಯ ದೊಂಬರಾಟದಿಂದ ನಾವು ಹೊರಗಿರೋಣ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಸೋಮವಾರ, ಮಾರ್ಚ್ 04, 2013

ಮಹಿಶಿ ವರದಿ ಜಾರಿ ಮಾಡಿರಿ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ನಮ್ಮ ನೆಚ್ಚಿನ(?) ಮುಂದಾಳುಗಳೆ,
      ಕನ್ನಡ ನಾಡಿನಲ್ಲಿ ಕನ್ನಡಿಗರಾದ ನಮಗೆ ನಮ್ಮ ಕವ್‍ಶಲ್ಯಕ್ಕೆ ತಕ್ಕ ಉದ್ಯೋಗ ದೊರೆಯುವುದು ನಮ್ಮ ಹುಟ್ಟಿನಿಂದಲೇ ಬಂದ ಹಕ್ಕು! ಅದನ್ನು ದೊರಕಿಸಿಕೊಡುವುದು ನಾವು ಆರಿಸಿ ಕಳಿಸಿರುವ ನಮ್ಮ ಮುಂದಾಳುಗಳಾದ ನಿಮ್ಮ ಕನಿಶ್ಟ ಕರ‍್ತವ್ಯ! ಆದರೆ, ನ್ಯಾಯವಾಗಿ ನಮಗೆ ದೊರೆಯಬೇಕಾದ ಕೆಲಸಗಳನ್ನು ನೀವು ನಮ್ಮಿಂದ ದೂರ ಮಾಡಿ ಹೊರನಾಡಿಗರ ಪಾಲು ಮಾಡುತ್ತೀರಿ. ಹಾಗೆ ಮಾಡಿ ನಮ್ಮ ಬದುಕನ್ನೇ ಕಸಿದುಕೊಳ್ಳುತ್ತೀರಿ. ಸಂಬಳ ತರುವ ಕೆಲಸವೇ ಇಲ್ಲದಿದ್ದರೆ ನಾವು ಬದುಕುವುದಾದರೂ ಹೇಗೆ? ಚೆಂದದ ಬಾಳನ್ನು ಕಟ್ಟಿಕೊಳ್ಳುವುದಾದರೂ ಹೇಗೆ?
      ಮೊದಲಿಂದಲೂ ನಮ್ಮ ನಾಡನ್ನು ಮುನ್ನಡೆಸಿಕೊಂಡು(?) ಬಂದಿರುವ ಮುಂದಾಳುಗಳು ನೀವು, ನಮ್ಮ ಕೆಲಸಗಳನ್ನು ವಲಸಿಗರ ಮಡಿಲಿಗೆ ಹಾಕಿ, ನಮ್ಮ ಬದುಕಿಗೆ ಕತ್ತಲೆ ತುಂಬಿಸುತ್ತಾ ಬಂದಿದ್ದೀರಿ. ಇಪ್ಪತ್ತಯ್ದು ವರುಶಗಳ ಹಿಂದೆಯೇ ನಮ್ಮ ಉದ್ಯೋಗಗಳನ್ನು ಹೇಗೆ ಕಾಪಾಡಬೇಕು ಎಂದು ನಿಮಗೆ, ನೀವೇ ನೇಮಿಸಿದ ಸಮಿತಿಯೊಂದು ಸಲಹೆ ಮಾಡಿತ್ತು. ಅದರ ನೆನಪಿದೆ ತಾನೆ? ಸರೋಜಿನಿ ಮಹಿಶಿ ಸಮಿತಿ ಎಂದು ಅದರ ಹೆಸರು. ಅದರ ಸಲಹೆಗಳನ್ನು ನೀವು ತಡವಿಲ್ಲದೆ ಆಗಲೇ ಜಾರಿಗೆ ತರಬೇಕಾಗಿತ್ತು. ಆದರೆ, ತರಲಿಲ್ಲ. ಅದನ್ನು ಬಿಟ್ಟು, ನಮ್ಮ ಕೆಲಸಗಳನ್ನು ವಲಸಿಗರ ಕಯ್ಗಿಡುವ, ವಲಸಿಗರನ್ನು ಓಲಯ್ಸುವ ನಿಮ್ಮ ಎಂದಿನ ಚಾಳಿಯನ್ನು ತಡೆಯಿಲ್ಲದೆ ನಡೆಸಿಕೊಂಡು ಬಂದಿರಿ! ಅಶ್ಟು ಸಾಲದು ಎಂಬಂತೆ, ಈಗೀಗ, ’ಇಪ್ಪತ್ತಯ್ದು ವರುಶಗಳ ಹಿಂದಿನ ಹಾಗೆ ಇಂದಿನ ಪರಿಸ್ತಿತಿ ಇಲ್ಲ. ಹಾಗಾಗಿ, ಅಂದಿನ ಸಲಹೆಗಳನ್ನು ಇಂದು ಜಾರಿಗೆ ತರಲು ಬರುವುದಿಲ್ಲ’ ಎಂದು ಹೇಳುತ್ತಿದ್ದೀರಿ. ’ಕಳ್ಳನಿಗೊಂದು ಪಿಳ್ಳೆ ನೆವ’ ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದೀರಿ. ನಮ್ಮ ಜಾಣ್ಮೆಯ ಮಟ್ಟವನ್ನೇ ಅಣಕಿಸುತ್ತಿದ್ದೀರಿ. ನಮ್ಮ ತಾಳ್ಮೆಯನ್ನು ಕೆಣಕುತ್ತಿದ್ದೀರಿ. ಇಶ್ಟು ವರುಶ ನಮಗೆ ಗಾಯ ಮಾಡಿದ್ದಲ್ಲದೆ, ಈಗ ಗಾಯದ ಮೇಲೆ ಬರೆಯನ್ನೂ ಎಳೆಯಲು ಹೊರಟಿದ್ದೀರಿ.
      ನಮ್ಮ ಮುಂದಾಳುಗಳಾದ ನೀವು ಅಯ್‍ವತ್ತು ವರುಶಗಳ ಹಿಂದೆ ದೇಶದ ಒಗ್ಗಟ್ಟಿನ ಹೆಸರಿನಲ್ಲಿ ನಮ್ಮ ಮೇಲೆ ತಪ್ಪು ಬಾಶಾನೀತಿಯನ್ನು ಹೊರಿಸಿದಿರಿ. ’ಇಂತಹ ಕನ್ನಡಗುಲಿ ಬಾಶಾನೀತಿ ಬೇಡ’ ಎಂದ ಕುವೆಂಪು ಅಂತಹ ಮಹನೀಯರ ಎಚ್ಚರಿಕೆಗೆ ಜಾಣಕಿವುಡು ನಟಿಸಿದಿರಿ. ತ್ರಿಬಾಶಾ ಸೂತ್ರ ಎಂಬ ಉರುಳಿಗೆ ನಮ್ಮ ಕೊರಳನ್ನು ನೂಕಿದಿರಿ. ಹಿಂದೀ ಮಾರಿಗೆ ಕನ್ನಡದ ಕಂದಮ್ಮಗಳನ್ನು ಬಲಿಕೊಟ್ಟಿರಿ. ಅದರ ಪರಿಣಾಮ ಇಂದು ಏನಾಗಿದೆ ನೋಡಿ. ಜನಸಂಖ್ಯೆ ಮಿತಿ ಮೀರಿದ ಉತ್ತರದ ಹಿಂದೀ ನಾಡುಗಳಿಂದ ನಮ್ಮ ನಾಡಿಗೆ ವಲಸಿಗರ ಹೊಳೆಯೇ ಹರಿದು ಬರುತ್ತಿದೆ. ಲಕ್ಶಲಕ್ಶ ಹಿಂದೀಯರಿಗೆ ನಮ್ಮ ನಾಡಿನಲ್ಲಿ ಬಂದು ನೆಲೆಸುವುದೂ ನಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುವುದೂ ನಮ್ಮ ಬಾಯಲ್ಲೇ ಹಿಂದೀ ಆಡಿಸುವುದೂ ನೀರು ಕುಡಿದಷ್ಟು ಸರಾಗವಾಗಿದೆ. ಇದರಿಂದಾಗಿ, ನಾವು ಮತ್ತು ನಮ್ಮ ನಡೆನುಡಿಗಳು ನಮ್ಮ ನೆಲದಲ್ಲೇ ಮೂಲೆಗುಂಪಾಗುವ ಸ್ತಿತಿ ಬಂದೊದಗಿದೆ! ನಮ್ಮ ನಾಡಿನಲ್ಲೇ ನಾವು ಅಲ್ಪಸಂಕ್ಯಾತರೂ, ಎರಡನೇ ದರ‍್ಜೆಯ ಜನರೂ ಆಗುವ ಹೊತ್ತು ಹತ್ತಿರ ಬರುತ್ತಿದೆ. ಇಶ್ಟೆಲ್ಲಾ ಕೆಡುಕು ನಡೆಯುತ್ತಿದ್ದರೂ ಮುಂದಾಳುಗಳು ನೀವು ಏನು ಮಾಡುತ್ತಿದ್ದೀರಿ? ನಮಗಾಗಿ ಇರಬೇಕಾದ ಏರ‍್ಪಾಡುಗಳನ್ನು ವಲಸಿಗರಿಗೆ ಹೊಂದುವಂತೆ ಬದಲಾಯಿಸುತ್ತಿದ್ದೀರಿ. ನಮ್ಮ ಹಿರಿಯರು ನಮಗಾಗಿ ಕೂಡಿಟ್ಟ ನಮ್ಮ ನಾಡಿನ ಎಲ್ಲ ಸವಲತ್ತುಗಳನ್ನೂ ಸಂಪನ್ಮೂಲಗಳನ್ನೂ ವಲಸಿಗರ ಪಾಲು ಮಾಡುತ್ತಿದ್ದೀರಿ.
      ನಮ್ಮ ನೆಚ್ಚಿನ(?) ಮುಂದಾಳುಗಳೆ, ಇನ್ನಾದರೂ ನಿಮ್ಮನ್ನು ನಂಬಿ ಆರಿಸಿ ಕಳಿಸಿದ ಹುಲು ಕನ್ನಡಿಗರ ಬಗ್ಗೆ ಕೊಂಚ ಯೋಚಿಸಿರಿ. ಸುಳ್ಳು ದೇಶಯ್‍ಕ್ಯತೆಯ ಪೊಳ್ಳು ನೀತಿಗಳನ್ನು ಅತ್ತ ತಳ್ಳಿ. ಕನ್ನಡತನವನ್ನು ಕಲಿತುಕೊಳ್ಳಿ. ಕನ್ನಡತನವನ್ನು ಕಲಿಸಿ. ಕನ್ನಡಿಗರಲ್ಲಿರುವ ತಮ್ಮತನದ ಅರಿವಿನ ಕೊರತೆಯನ್ನು ನೀಗಿಸಿ. ಕನ್ನಡಿಗರಿಗೆ ಅವರ ನಿಜವಾದ ಹಿನ್ನೆಲೆಯ ಬಗ್ಗೆ ಅರಿವು ಕಾಣಿಸಿ. ಕನ್ನಡ ನಡೆನುಡಿಗಳನ್ನು ಕಾಪಾಡಿ. ಕನ್ನಡಿಗರ ಬದುಕಿನ ನಾಳೆಗಳನ್ನು ಬೆಳಗಿಸಿ. ಕನ್ನಡಿಗರು ಹೊನ್ನಿನ ಬಾಳನ್ನು ಕಟ್ಟಿಕೊಳ್ಳುವುದಕ್ಕೆ ನೆರವಾಗಿ.
ಇಂತೀ ನಿಮ್ಮನ್ನು ಮತ್ತೆ ಮತ್ತೆ ನಂಬಿ ಆರಿಸಿ ಕಳಿಸುವ,
ಬಡಪಾಯಿ ಕನ್ನಡಿಗರು
(ಬರೆದವರು: ಎಚ್.ಎಸ್.ರಾಜ್ ಮತ್ತು ಪ್ರಶಾಂತ ಸೊರಟೂರ)

ಗುರುವಾರ, ಫೆಬ್ರವರಿ 21, 2013

ಹಿಂದೀ ಹುಚ್ಚು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಇತ್ತೀಚೆಗೆ ಬಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊತ್ತಮೊದಲ ನಾಳು, ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕೆಲ ಗಣ್ಯರ ಮತ್ತು ವೇದಿಕೆಗೆ ಕಾವಲಾಗಿದ್ದ ಪೋಲೀಸರ ನಡುವೆ ಗದ್ದಲ ನಡೆಯಿತು ಎಂಬುದನ್ನು ನೀವು ಕೇಳಿರಬಹುದು. ಬರೀ ಗದ್ದಲವಲ್ಲದೆ, ಹಗುರಾಗಿ ನೂಕಾಟ ತಳ್ಳಾಟವೂ ನಡೆಯಿತು ಎಂದು ಮಾದ್ಯಮಗಳು ವರದಿ ಮಾಡಿದ್ದವು.
      ಮುಕ್ಯಮಂತ್ರಿಗಳು ವೇದಿಕೆಗೆ ಬರುವವರೆಗೆ ಗಣ್ಯರನ್ನಾಗಲೀ ಯಾರನ್ನೇ ಆಗಲಿ, ವೇದಿಕೆಯ ಮೇಲೆ ಹೋಗಲು ಬಿಡುವುದಿಲ್ಲ ಎಂದು ಅಲ್ಲಿ ಕಾರ‍್ಯ ನಿರ‍್ವಹಿಸುತ್ತಿದ್ದ ಅಯ್.ಪೀ.ಎಸ್. ಅದಿಕಾರಿ ಹಟ ಹಿಡಿದಿದ್ದರಂತೆ. ಅವರ ಹಟಮಾರಿತನಕ್ಕೆ ಮಾಜಿ ಕಸಾಪ ಅದ್ಯಕ್ಶ ನೆಲ್ಲೂರು ಪ್ರಸಾದರು ಕೊಂಚ ಕಟುವಾಗಿ ವಿರೋದ ತೋರಿಸಿದಾಗ, ’ಇವನನ್ನ ಕೂಡಲೇ ಅರೆಸ್ಟ್ ಮಾಡು’ ಎಂದು ಅದಿಕಾರಿ ಪಕ್ಕದಲ್ಲಿದ್ದ ಪೇದೆಗಳಿಗೆ ಆಜ್ನೆ ಮಾಡಿದರಂತೆ. ಅದರಿಂದ ಶುರುವಾಯಿತಂತೆ ನೂಕಾಟ ತಳ್ಳಾಟ. ಇಲ್ಲಿ ತಮಾಶೆ ಏನೆಂದರೆ, ಆ ಅಯ್.ಪೀ.ಎಸ್. ಅದಿಕಾರಿ, ’ಇವನನ್ನ ಕೂಡಲೇ ಅರೆಸ್ಟ್ ಮಾಡು’ ಎಂದು ಕೂಗಿದ್ದು ಹಿಂದೀ ಬಾಶೆಯಲ್ಲಿ. ಬಹುಶಹ ಅವರಿಗೆ ಕನ್ನಡ ಇನ್ನೂ ಬರುತ್ತಿಲ್ಲವೇನೋ, ಇಲ್ಲ,  ಅವರ ತಾಯ್ನುಡಿ ಹಿಂದೀ ಇರಬಹುದೇನೋ. ಆವೇಶದ ಬರದಲ್ಲಿ ಅವರ ಬಾಯಿಂದ ತಾಯ್ನುಡಿಯಲ್ಲಿ ಆಜ್ನೆ ಹೊರಟಿರಬಹುದೇನೋ. ಆದರೂ, ಕನ್ನಡ ನುಡಿ ಜಾತ್ರೆಯ ಮುಕ್ಯ ವೇದಿಕೆಯ ಬಳಿ ಹಿಂದಿಯಲ್ಲಿ ಕೂಗಬಾರದೆಂಬ ಪರಿಜ್ನಾನ ಅವರಿಗೆ ಇರಬೇಕಾಗಿತ್ತು. ಕರ‍್ನಾಟಕದ ಬದಲು ತಮಿಳುನಾಡಿನಲ್ಲಿ ಇಂತಹ ಒಂದು ಕಾರ‍್ಯಕ್ರಮ ನಡೆದಿದ್ದರೆ, ಅದಿಕಾರಿಗಳಿಗೆ, ಅವರೆಶ್ಟೇ ಹೊಸಬರಾಗಿರಲಿ,  ಒಬ್ಬ ತಮಿಳು ಗಣ್ಯನನ್ನು ಅರೆಸ್ಟ್ ಮಾಡು ಎಂದು ಹಿಂದೀಯಲ್ಲಿ ಕೂಗುವ ಎದೆಗಾರಿಕೆ ಬರುತ್ತಿತ್ತೆ? ಬರುತ್ತಿರಲಿಲ್ಲ. ಕರ‍್ನಾಟಕದಲ್ಲಿ ಮಾತ್ರ ಯಾರಿಗೇ ಆದರೂ ಯಾವ ಸಂದರ‍್ಬದಲ್ಲಾದರೂ ಆ ಎದೆಗಾರಿಕೆ ಸುಲಬವಾಗಿ ಬರುತ್ತದೆ. ಅಂದ ಹಾಗೆ, ಗಲಾಟೆಗೆ ಕಾರಣ ’ಅರೆಸ್ಟ್ ಮಾಡು’ ಎಂದದ್ದೋ, ಇಲ್ಲ, ಅದನ್ನು ಹಿಂದೀಯಲ್ಲಿ ಹೇಳಿದ್ದೋ ಎಂಬುದು ಇನ್ನೂ ತಿಳಿದಿಲ್ಲ.
      ತಮಿಳರು, ನಾವು, ಇಬ್ಬರೂ ಒಟ್ಟಾರೆ ದ್ರಾವಿಡರೇ. ಆದರೂ, ಹಿಂದಿಯ ಬಗೆಗಿನ ನಿಲುವಿನಲ್ಲಿ ಅವರಿಗೂ ನಮಗೂ ಎಶ್ಟೊಂದು ಬೇರ‍್ಮೆ! ಇತ್ತೀಚೆಗೆ, ಮದುರಯ್ ಜಿಲ್ಲೆಯ ಆಡಳಿತಾದಿಕಾರಿ, ’ಮದುರಯ್‍ನ ಹೆಸರಾಂತ ಗುಡಿಗಳನ್ನು ನೋಡಲು ಬಡಗ ಬಾರತದ ಬಹುಮಂದಿ ಬರುತ್ತಿರುತ್ತಾರೆ. ಅವರ ಅನುಕೂಲಕ್ಕಾಗಿ ಇನ್ನು ಮುಂದೆ ಹಿಂದೀಯಲ್ಲೂ ಪಲಕಗಳನ್ನು ಹಾಕೋಣ’ ಎಂದು ಕಾರಣ ಕೊಟ್ಟು, ಹಾಗೇ ಮಾಡುವುದಾಗಿ ಆದೇಶ ಹೊರಡಿಸಿದರು. ಕೂಡಲೇ ಅದಕ್ಕೆ ಮದುರೆಯ ತಮಿಳರಿಂದ ಎಂತಹ ಕಟ್ಟೆದಿರು ವ್ಯಕ್ತವಾಯಿತೆಂದರೆ, ಜಿಲ್ಲಾದಿಕಾರಿ ತಮ್ಮ ಆದೇಶವನ್ನು ತಕ್ಶಣವೇ ರದ್ದು ಮಾಡಬೇಕಾಯಿತು (ಈ ಸುದ್ದಿ ಫೆಬ್ರವರಿ ೭, ೨೦೧೩ರ ಪ್ರಜಾವಾಣಿಯಲ್ಲಿ ವರದಿಯಾಗಿದೆ). ತಮಿಳರ ಈ ನಡೆ, ನಮ್ಮ ಕಣ್ಣಿನಲ್ಲಿ, ಹಿಂದೀ ದ್ವೇಶ ಎನಿಸಬಹುದು. ಆದರೆ, ಹಿಂದೀಯಂತಹ ವಸಾಹತುಶಾಹಿ ಬಾಶೆಯನ್ನು ತಡೆಯಲು ತಮಿಳರು ಪಾಲಿಸುವ ನೀತಿಯೇ ಸರಿಯಾದ ನೀತಿ.
      ನಾವೂ ಹಿಂದೊಮ್ಮೆ ಹಿಂದಿಗೆ ಕಟ್ಟೆದಿರನ್ನು ತೋರಿಸಿದ್ದೆವು. ೧೯೬೮ರಲ್ಲಿ ಕೇಂದ್ರ ಸರ‍್ಕಾರ ಹಿಂದೀಯನ್ನು ರಾಶ್ಟ್ರಬಾಶೆಯನ್ನಾಗಿ ಮಾಡಲು ಹೊರಟಾಗ, ತಮಿಳರು ಮತ್ತು ಬಂಗಾಳಿಗಳ ಒಡನೆ ನಾವೂ ’ಆಗದು’ ಎಂದು ಕೂಗಿದ್ದೆವು. ಅಂದಿನ ವಿರೋದ ಇಂದು ಎಲ್ಲಿ ಹೋಯಿತೋ ತಿಳಿಯುವುದಿಲ್ಲ. ಬೆಳಗಾವಿಯಲ್ಲಿ ನಡೆದ ಕನ್ನಡ ವಿಶ್ವ ಸಮ್ಮೇಳನದಲ್ಲಿ ಅಯ್‍ಶ್ವರ‍್ಯಾ ರಯ್ ಹಿಂದೀಯಲ್ಲಿ ಬಾಶಣ ಬಿಗಿದಾಗ ನಮ್ಮಿಂದ ಆಕ್ಶೇಪಣೆ ಏಳಲಿಲ್ಲ. ಬಡಗ ಬಾರತದ ದುರೀಣರು ಬಂದು ನಮ್ಮೆದುರು ’ಕರ‍್ನಾಟಕದ ಬಾಶೆಯೇ ಹಿಂದಿ’ ಎನ್ನುವ ಹಾಗೆ ಹಿಂದೀಯಲ್ಲಿ ಬಾಶಣಗಳನ್ನು ಕಿರುಚುವಾಗ ನಾವು ತುಟಿಪಿಟಕ್ಕೆನ್ನುವುದಿಲ್ಲ. ಏನಾಯಿತು ನಮಗೆ? ತ್ರಿಬಾಶಾ ಸೂತ್ರಕ್ಕೆ ನಮ್ಮನ್ನು ನಾವೇ ಒಳಪಡಿಸಿಕೊಂಡದ್ದರ ಪರಿಣಾಮವೇ ಇದು?
      ಹಿಂದಿಯ ಮಟ್ಟಿಗೆ ವಿರೋದ ಹೋಗಿರುವುದಶ್ಟೇ ಅಲ್ಲ, ವಿರೋದದ ಬದಲು ಅಪ್ಪಟ ಉತ್ಸಾಹ ನಮ್ಮ ಮಂದಿಗೆ ಬಂದಿರುವಂತೆ ಕಾಣಿಸುತ್ತದೆ. ಎಶ್ಟೋ ಕಡೆ ನಾವೇ ಮೇಲೆ ಬಿದ್ದು ಹಿಂದೀ ಮಾತಾಡುತ್ತೇವೆ. ಗೇಟನ್ನು ಕಾಯುವ ಸೆಂಟ್ರೀಗಳಿಗೆ, ಲಿಫ್ಟುಗಳನ್ನು ನಡೆಸುವವರಿಗೆ ನಾವಾಗಿ ನಾವು ಹಿಂದಿಯಲ್ಲಿ ಮಾತಾಡಿಸುತ್ತೇವೆ. ಮಾಲುಗಳಲ್ಲಿ ಹಿಂದೀ ಗ್ರಾಹಕರಿಗೆ ಹಿಂದೀಯಲ್ಲೇ ಸೇವೆ ನೀಡುತ್ತೇವೆ. ಕನ್ನಡ ಸಿನಿಮಾಗಳಿಗೆ ಹಿಂದಿಯಲ್ಲಿ ಹೆಸರುಗಳನ್ನು ಇಡುತ್ತೇವೆ. ಕನ್ನಡ ಟೀವೀ ಕಾಲುವೆಗಳಲ್ಲಿ ಎಶ್ಟೋ ಬಾರಿ ಹಿಂದೀ  ಹಾಡುಗಳ ಕಾರ‍್ಯಕ್ರಮಗಳನ್ನು ನಡೆಸುತ್ತೇವೆ. ರೇಡಿಯೋದಲ್ಲೂ ಕನ್ನಡ ಮತ್ತು ಹಿಂದೀ ಹಾಡುಗಳನ್ನು ಬೆರೆಸಿ ಬಿತ್ತರ ಮಾಡುತ್ತೇವೆ. ಒಟ್ಟಿನಲ್ಲಿ ಹಿಂದಿಗೆ ಮಣೆಹಾಕಿ ಕೂರಿಸಿದ್ದೇವೆ. ಹಿಂದಿ ತಳವೂರಿದರೆ ಕನ್ನಡಕ್ಕೆ ಎಡೆ ಇರುವುದಿಲ್ಲ ಎನ್ನುವ ಅಂಜಿಕೆ ನಮಗಿದ್ದಂತೆ ಕಾಣುವುದಿಲ್ಲ.
      ಇಶ್ಟೆಲ್ಲಾ ನಿರಾಶಾವಾದದ ಕತ್ತಲೆಯಲ್ಲಿ ಒಂದು ಆಶಾವಾದದ ಬೆಳಕು ಈ ನಡುವೆ ಕಾಣಿಸಿಕೊಂಡಿದೆ. ಬನವಾಸಿ ಬಳಗ, ಕನ್ನಡ ಮತ್ತು ಇತರ ಎಡೆನುಡಿಗಳಿಗೆ ಹಿಂದಿಯಶ್ಟೇ ಮಾನ್ಯತೆ ದೊರಕಬೇಕೆಂದೂ, ಅದಕ್ಕೆ ತಕ್ಕಂತೆ ಸಂವಿದಾನದಲ್ಲಿ ತಿದ್ದುಪಡಿ ಆಗಬೇಕೆಂದೂ, ರಾಜ್ಯಪಾಲರ ಮೂಲಕ ಕೇಂದ್ರ ಸರ‍್ಕಾರವನ್ನು ಒತ್ತಾಯಿಸಲು ಪ್ರಯತ್ನ ನಡೆಸಿದೆ. ಪ್ರಯತ್ನಕ್ಕೆ ಒತ್ತಾಸೆಯಾಗಿ ಸಾವಿರಾರು ಸಹಿಗಳನ್ನು ಕಲೆಹಾಕಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಶತ್ತಿನ ಬೆಂಬಲವನ್ನು ಪಡೆದುಕೊಳ್ಳುವುದರಲ್ಲೂ ಯಶಸ್ವಿಯಾಗಿದೆ. ’ಅರೆಸ್ಟ್ ಮಾಡು’ ಎಂದು ಹಿಂದಿಯಲ್ಲಿ ಕೂಗು ಬಂದ ಬಿಜಾಪುರದ ಸಮ್ಮೇಳನದಲ್ಲೇ ’ಕನ್ನಡಕ್ಕೆ ಹಿಂದಿಯ ಸ್ತಾನಮಾನಗಳನ್ನು ಕೇಂದ್ರ ಸರ‍್ಕಾರ ನೀಡಬೇಕು’ ಎಂಬ ನಿರ‍್ಣಯವನ್ನು ಪ್ರಕಟಿಸುವಂತೆ ಮಾಡುವಶ್ಟು ಪ್ರಬಾವ ಬೀರಿದೆ. ಬನವಾಸಿ ಬಳಗದ ಈ ಪ್ರಯತ್ನದ ಸುದ್ದಿ ಹರಡುತ್ತದೆ ಎಂದು ಹಾರಯ್ಸೋಣ. ಇನ್ನಾದರೂ ಕನ್ನಡಿಗರು, ’ಕನ್ನಡನಾಡಿನಲ್ಲಿ ಕನ್ನಡಕ್ಕೆ ಎಡೆ, ಹಿಂದಿಗಲ್ಲ’ ಎಂಬ ನಿಲುವನ್ನು ತಾಳುತ್ತಾರೆ ಎಂದು ನಂಬೋಣ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ಹಾಗೂ ಅದರಿಂದ ಕನ್ನಡಕ್ಕೆ ಆಗುವ ಕೆಡುಕಿನ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.

ಸೋಮವಾರ, ಫೆಬ್ರವರಿ 11, 2013

ಬಾಶಾಂದತೆ ಬೇಡ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಹೇಸಿಗೆ ಬರಿಸುವ ಸುದ್ದಿಗಳಿಗೆ ಏನೂ ಕೊರತೆ ಇಲ್ಲ ಈ ದಿನಗಳಲ್ಲಿ. ಇತ್ತೀಚೆಗೆ ಟೀವೀಯಲ್ಲಿ ನೋಡಿದ ಒಂದು ಸುದ್ದಿ, ಬಾಶೆಯ ಹೆಸರಿನಲ್ಲಿ ನಡೆಯುವ ಕೇಡುಗತನದ ಕಟ್ಟೆದುರಿಯಾದ ನನ್ನಲ್ಲಿ ಅತೀವ ಕಳವಳ ಉಂಟುಮಾಡಿತು.
      ಸುಮಾರು ಹತ್ತು ವರ‍್ಶದ ಹುಡುಗನೊಬ್ಬನ ಬೆಂದು ಹೋಗಿದ್ದ ಎರಡೂ ಮುಂಗಯ್ಗಳನ್ನು ಮತ್ತೆ ಮತ್ತೆ ಟೀವೀ ತೆರೆಯ ಮೇಲೆ ತೋರಿಸುತ್ತಿದ್ದರು. ಹುಡುಗನ ಹೆಸರು ಮಹಮದ್ ಜಾವೆದ್. ಅವನ ಕಯ್ಗಳನ್ನು ಹಾಗೆ ಬೇಯಿಸಿದವನು ದಾದಾ ಪೀರ್ ಎಂಬ ಒಬ್ಬ ಮುಸ್ಲಿಮ್ ದರ‍್ಮಗುರು. ಈ ಅಮಾನವೀಯ ಆಗುಹ ನಡೆದದ್ದು ಆ ಹುಡುಗ ತಂಗಿಕೊಂಡು ಓದುತ್ತಿದ್ದ ಚಿಕ್ಕಮಗಳೂರಿನ ಒಂದು ಮುಸ್ಲಿಮ್ ವಸತಿ ಶಾಲೆಯಲ್ಲಿ. ಕುದಿವ ನೀರಿಂದ ಆ ಹುಡುಗನ ಕಯ್ಯನ್ನು ಆ ದರ‍್ಮಗುರು ಸುಟ್ಟದ್ದು ಯಾಕೆ ಗೊತ್ತೆ? ಆ ಹುಡುಗನ ಕುರಾನ್ ಕಲಿಕೆ ಆ ದರ‍್ಮಗುರು ಎಣಿಸಿದ ಹಾಗೆ ಸಾಗುತ್ತಿರಲಿಲ್ಲ ಎಂಬ ಕಾರಣಕ್ಕಾಗಿ!
      ಹುಡುಗನನ್ನೂ ಹುಡುಗನ ತಂದೆಯನ್ನೂ ವರದಿಗಾರರು ಮಾತಾಡಿಸುತ್ತಿದ್ದರು. ದರ‍್ಮಗುರು ವರದಿಗಾರರಿಂದ ತಲೆಮರೆಸಿಕೊಂಡಿದ್ದ. ವಿಶಯವನ್ನು ವರದಿಗಾರರು ಕೆದಕಿ ನೋಡಿದಾಗ ತಿಳಿದು ಬಂದದ್ದು ಇದು - ಅರಬ್ಬೀ ಬಾಶೆಯ ಅಡಚಣೆ ಆ ಹುಡುಗನಿಗೆ ಕುರಾನ್ ಕಲಿಯುವುದನ್ನು ಕಶ್ಟ ಮಾಡಿತ್ತು.
      ಹುಡುಗ ಮತ್ತು ಆತನ ತಂದೆ ಇಬ್ಬರೂ ಮಾಮೂಲಿ ತೆಂಕಣ ಬಾರತದವರಂತೆ ಕಾಣುತ್ತಿದ್ದರು. ಅವರದ್ದು ದ್ರಾವಿಡ ಮಯ್ಬಣ್ಣ ಮತ್ತು ದ್ರಾವಿಡ ಚಹರೆ. ಇಸ್ಲಾಮನ್ನು ಪಾಲಿಸುವ ದ್ರಾವಿಡರು ಎಂದು ಅವರನ್ನು ಯಾರು ಬೇಕಾದರೂ ಗುರುತಿಸಬಹುದಾಗಿತ್ತು. ಹಾಗಿತ್ತು ಅವರ ಮಯ್ಪರಿ.
      ಆ ಬಡಪಾಯಿ ಹುಡುಗನನ್ನು ನೋಡಿ, ’ಎತ್ತಣ ದ್ರಾವಿಡ ಹುಡುಗ, ಎತ್ತಣ ಅರಬ್ಬೀ ಬಾಶೆ?’ ಎಂದುಕೊಂಡೆ ನಾನು. ದ್ರಾವಿಡ ಹುಡುಗನೊಬ್ಬನಿಗೆ ಅರಬ್ಬೀ ಬಾಶೆ ಕೊಂಚ ತೊಡಕೆನಿಸಿದರೆ, ಅದೇನು ಮಹಾ ತಪ್ಪು ಸ್ವಾಮಿ? ಅಶ್ಟಕ್ಕೂ, ದರ‍್ಮದಲ್ಲಿ ಯಾವುದು ಮುಕ್ಯ? ಅದರ ತಿರುಳೋ, ಇಲ್ಲ, ಅದನ್ನು ಬರೆದಿಟ್ಟಿರುವ ಬಾಶೆಯೋ? ತಿರುಳನ್ನು ತೂರಿ ತವುಡನ್ನು ಬಾಚಿಕೊಳ್ಳುವ ಅರಿವುಗೇಡಿತನ ಯಾಕೆ? ಕ್ರಯ್‍ಸ್ತರು ಅವರ ಅರವೋದುಗೆಯನ್ನು ಅವರವರ ಬಾಶೆಗಳಲ್ಲೇ ಓದಿ ಪ್ರಾರ‍್ತನೆ ಸಲ್ಲಿಸುತ್ತಾರೆ. ಅದರಿಂದ ಕ್ರಯ್‍ಸ್ತ ದರ‍್ಮಕ್ಕೇನಾದರೂ ಕುಂದು ಬಂದಿದೆಯೆ? ಸಂಸ್ಕ್ರುತವನ್ನು ಬಿಟ್ಟು ಮಂದಿಯ ಆಡುನುಡಿಗಳಲ್ಲಿ ಬವ್‍ದ್ದ  ಬಿಕ್ಶುಗಳು ತಮ್ಮ ದರ‍್ಮದ ಪ್ರಚಾರ ಮಾಡಿದರು. ಹಾಗೆ ಮಾಡಿದ್ದಕ್ಕೆ ಬವ್‍ದ್ದ ದರ‍್ಮವೇನಾದರೂ ಮುರುಟಿ ಹೋಯಿತೆ? ಇನ್ನು ನಮ್ಮ ನಾಡಿನಲ್ಲೇ, ಶರಣರು ತಿಳಿಗನ್ನಡದಲ್ಲಿ ವಚನಗಳನ್ನು ಹಾಡಿದರು. ಅದರಿಂದೇನಾದರೂ ವೀರಶಯ್ವ ಮತ ಹರಡದೆ ಉಳಿಯಿತೆ?
      ದರ‍್ಮದ ಹೆಸರಿನಲ್ಲಿ, ಸಂಸ್ಕ್ರುತಿಯ ಹೆಸರಿನಲ್ಲಿ, ತಿಳಿಯದ ಬಾಶೆಯನ್ನು ಜನರ ನಡುವೆ ತೂರಿಸುವುದರಲ್ಲಿ ನಾವು ಹಿಂದೂಗಳು ಕೂಡ ಯಾರಿಗೂ ಕಡಿಮೆ ಇಲ್ಲ. ನಮ್ಮ ವಿಶಯದಲ್ಲಿ ಅರಬ್ಬಿಯ ಸ್ತಾನವನ್ನು ಸಂಸ್ಕ್ರುತ ತೆಗೆದುಕೊಳ್ಳುತ್ತದೆ, ಅಶ್ಟೆ.
      ನಮ್ಮ ಪೂಜೆ ಪುನಸ್ಕಾರಗಳು ನಡೆಯುವುದು ಸಂಸ್ಕ್ರುತದಲ್ಲಿ. ಹೋಮ ಹವನಗಳು ನಡೆಯುವುದು ಸಂಸ್ಕ್ರುತದಲ್ಲಿ. ಮದುವೆಯ ವಿದಿವಿದಾನಗಳು ನಡೆಯುವುದು ಸಂಸ್ಕ್ರುತದಲ್ಲಿ. ದಾರ‍್ಮಿಕ ಕಾರ‍್ಯಕ್ರಮಗಳು ಮೊದಲುಗೊಳ್ಳುವುದು ಸಂಸ್ಕ್ರುತದಲ್ಲಿ. ಎಶ್ಟೋ ಶಾಲೆಗಳಲ್ಲಿ ಮಕ್ಕಳು ಮೊದಲು ಪ್ರಾರ‍್ತನೆ ಸಲ್ಲಿಸುವುದು ಸಂಸ್ಕ್ರುತದಲ್ಲಿ. ಎಲ್ಲವೂ ನಮಗೆ ತಿಳಿಯದ ಸಂಸ್ಕ್ರುತದಲ್ಲಿ! ಸಂಸ್ಕ್ರುತವೇ ಯಾಕಾಗಬೇಕು? ಕನ್ನಡ ಯಾಕಾಗಬಾರದು?
      ನಾವು ಕನ್ನಡಿಗರು ದ್ರಾವಿಡರು, ನಮ್ಮ ಕನ್ನಡ ದ್ರಾವಿಡ ಬಾಶೆ, ಸಂಸ್ಕ್ರುತ ಬಡಗದ ಆರ‍್ಯ ಬಾಶೆ, ಕನ್ನಡಕ್ಕೂ ಅದಕ್ಕೂ ನೆತ್ತರ ನಂಟಿಲ್ಲ, ಸಂಸ್ಕ್ರುತ ನಮ್ಮದಲ್ಲ ಎಂದು ಮುಂತಾದ ಕಾರಣಗಳಿಗಾಗಿ ನಾನು ಸಂಸ್ಕ್ರುತದ ಇದಿರಾಗಿ ಮಾತಾಡುತ್ತಿಲ್ಲ. ನಮ್ಮ ಬದುಕಿಗೆ ಮುಕ್ಯವಾದ ವಿದಿವಿದಾನಗಳು ನಮಗೆ ತಿಳಿಯದ ಬಾಶೆಯಲ್ಲಿ ಯಾಕೆ ನಡೆಯಬೇಕು ಎಂಬ ಮೂಲಬೂತ ಕೇಳ್ವಿಯ ನೆಲೆಯಿಂದ ಮಾತಾಡುತ್ತಿದ್ದೇನೆ. ನಮ್ಮ ವಿದಿವಿದಾನಗಳು ನಮಗೆ ತಿಳಿಯುವ ಬಾಶೆಯಲ್ಲಿದ್ದರೆ ಸರಿಯಲ್ಲವೆ ಎಂಬ ಸಹಜ ತರ‍್ಕದ ನೆಲೆಯಿಂದ ಮಾತಾಡುತ್ತಿದ್ದೇನೆ.
     ಹಿಂದೆ, ಕುವೆಂಪು ಅವರು ಮದುವೆಯ ಸರಳ ವಿದಿಗಳನ್ನು ಕನ್ನಡದಲ್ಲೇ ರಚಿಸಿದ್ದರಂತೆ. ಅವರ ಮಾದರಿಯನ್ನು ಅನುಸರಿಸಿ ಹಲವು ಮದುವೆಗಳು ನಡೆದಿದ್ದವಂತೆ (ತೀರ ಇತ್ತೀಚೆಗೂ ಕುವೆಂಪು ವಿದಿಯಲ್ಲಿ ಮದುವೆಗಳು ನಡೆದಿವೆ ಎಂದೂ ಕೇಳಿದ್ದೇನೆ). ಇನ್ನು ನಮ್ಮ ಕಾಲದಲ್ಲಿ ಕೂಡ, ನಗೆಗಯ್ವಿ ಕ್ರಿಶ್ಣೇಗವ್ಡರ ಮಗಳ ಮದುವೆಯನ್ನು ಹಿರೇಮಗಳೂರು ಕಣ್ಣನ್ ಅವರು ಕನ್ನಡದಲ್ಲೇ ನಡೆಸಿಕೊಟ್ಟುದನ್ನು ಟೀವೀಯಲ್ಲಿ ಕಳೆದ ವರ‍್ಶ ನಾವು ನೋಡಿದ್ದೇವೆ. ಹೀಗೆ ಸಂಸ್ಕ್ರುತದ ಬದಲು ಕನ್ನಡದಲ್ಲೇ ನಡೆಸುವ ಶುಬ ಕಾರ‍್ಯಕ್ರಮಗಳು ಆಗಾಗ್ಗೆ ಜರುಗುತ್ತಿರುತ್ತವೆ.
      ಹಾಗಾಗಿ, ಸಂಸ್ಕ್ರುತವಿಲ್ಲದೆ ನಮ್ಮ ದರ‍್ಮ ಮತ್ತು ಸಂಸ್ಕ್ರುತಿ ನಡೆಯುವುದಿಲ್ಲ ಎಂದು ನಾವು ನಂಬಬೇಕಾಗಿಲ್ಲ. ನಮ್ಮ ಕನ್ನಡದಲ್ಲೇ ಅವು ನಡೆಯಬಲ್ಲವು. ಬರಿಯ ಮದುವೆ ಮುಂತಾದವುಗಳೇ ಏಕೆ, ನಮ್ಮ ಪರಮ ಗುರಿ ಮೋಕ್ಶ ಕೂಡ ಕನ್ನಡದ ಮೂಲಕವೇ ದೊರೆಯಬಲ್ಲುದು. ಶತಮಾನಗಳ ಹಿಂದೆಯೇ ಮಹಲಿಂಗ ರಂಗನೆಂಬ ಒಬ್ಬ ಕನ್ನಡದ ಕವಿ ಹೇಳಿದ್ದ - ಸುಲಿದ ಬಾಳೆಯ ಹಣ್ಣಿನಂದದಿ, ಕಳಿದ ಸಿಗುರಿನ ಕಬ್ಬಿನಂದದಿ, ... ಸುಲಬವಾಗಿರ‍್ಪ ಕನ್ನಡದ ನುಡಿಯಲ್ಲಿ ತಿಳಿದು ತನ್ನೊಳು ತನ್ನ ಮೋಕ್ಶವ ಗಳಿಸಿಕೊಂಡರೆ ಸಾಲದೇ, ಸಂಸ್ಕ್ರುತದಲಿನ್ನೇನು?
      ಮಹಲಿಂಗ ರಂಗಾ, ನಿನ್ನ ಮಾತಿಗೆ ನನ್ನ ನೆರೆಯೊಪ್ಪಿಗೆ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಬುಧವಾರ, ಜನವರಿ 30, 2013

ಗೋಕಾಕ್ ಚಳುವಳಿಯ ನೀತಿಪಾಟ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಗೋಕಾಕ್ ಚಳುವಳಿಯ ಹೆಸರು ಯಾರಿಗೆ ಗೊತ್ತಿಲ್ಲ? ’ಇನ್ನೊಂದು ಗೋಕಾಕ್ ಮಾದರಿ ಚಳುವಳಿ ನಡೀಬೇಕು ಕಣ್ರೀ’ ಎಂದು ಹೇಳುವುದು ಈಗ ಒಂದು ವಾಡಿಕೆ ಆಗಿಬಿಟ್ಟಿದೆ. ಅಶ್ಟು ಚೆನ್ನಾಗಿ ಎಲ್ಲರಿಗೂ ಗೊತ್ತಿದೆ ಗೋಕಾಕ್ ಚಳುವಳಿ. ಆದರೆ, ಗೋಕಾಕ್ ಚಳುವಳಿ ನಡೆದದ್ದು ಯಾಕೆ, ಅದರಿಂದ ನಿರ‍್ದಿಶ್ಟವಾಗಿ ಉಂಟಾದದ್ದು ಏನು ಎಂಬುದು ಬಹಳಶ್ಟು ಮಂದಿಗೆ ಗೊತ್ತಿಲ್ಲ.
      ಗೋಕಾಕ್ ಚಳುವಳಿ ನಡೆದು ಈಗ ಮೂವತ್ತು ವರ‍್ಶಗಳೇ ಕಳೆದಿವೆ. ಆ ದಿನಗಳಲ್ಲಿ ಕನ್ನಡಕ್ಕೆ ಅಪಾಯಕಾರಿ ಕುತ್ತೊಂದು ತಗುಲಿಕೊಂಡಿತ್ತು. ಗೋಕಾಕ್ ಚಳುವಳಿ ಆ ಕುತ್ತನ್ನು ಯಶಸ್ವಿಯಾಗಿ ತೊಡೆದು ಹಾಕಿತು. ಕುತ್ತನ್ನೇನೋ ತೊಡೆದು ಹಾಕಿತು. ಆದರೆ, ಆ ಕುತ್ತು ತಗುಲಿಕೊಳ್ಳುವುದಕ್ಕೆ ಕಾರಣವಾಗಿದ್ದ ಮೂಲ ಶಕ್ತಿಗಳನ್ನು ಅದು ತೊಡೆದು ಹಾಕಲಿಲ್ಲ. ಹಾಗಾಗಿ, ಆ ಶಕ್ತಿಗಳು ಈಗಲೂ ಜೀವಂತವಾಗೇ ಉಳಿದುಕೊಂಡಿವೆ. ಕೆಲ ಕಾಲ ಅಡಗಿ ಕುಳಿತಿದ್ದ ಅವು ಇತ್ತೀಚಿನ ವರ‍್ಶಗಳಲ್ಲಿ ಮತ್ತೆ ತಲೆ ಎತ್ತಿವೆ. ಆದ್ದರಿಂದ, ಗೋಕಾಕ್ ಚಳುವಳಿ ’ಯಾಕೆ’ ನಡೆಯಿತು ಎಂಬುದನ್ನು ನೆನಪಿಸಿಕೊಳ್ಳುವುದು ಇಂದು ಅಂದಿನಂತೆ ಪ್ರಸ್ತುತ.
      ಗೋಕಾಕ್ ಚಳುವಳಿಗೆ ಮುಂಚೆ ಕರ‍್ನಾಟಕದ ಬಹುಮಟ್ಟಿನ ವಿದ್ಯಾರ‍್ತಿಗಳು ಎಂಟರಿಂದ ಹನ್ನೆರಡನೆಯ ತರಗತಿಯವರೆಗೆ ’ಪ್ರತಮ ಬಾಶೆ’ ಎಂದು ಒಂದು ಬಾಶೆಯನ್ನು ಕಡ್ಡಾಯವಾಗಿ ಕಲಿಯಬೇಕಾಗಿತ್ತು. ಆ ಬಾಶೆ ಕನ್ನಡವೇ ಆಗಬೇಕಾಗಿರಲಿಲ್ಲ. ಕನ್ನಡದ ಬದಲು ಸಂಸ್ಕ್ರುತವನ್ನು ತೆಗೆದುಕೊಳ್ಳಬಹುದಾಗಿತ್ತು. ವಿಚಿತ್ರವೆಂಬಂತೆ ಕಾಲಕ್ರಮೇಣ ವಿದ್ಯಾರ‍್ತಿಗಳಿಗೆ ಸಂಸ್ಕ್ರುತವೇ ಹೆಚ್ಚು ಹೆಚ್ಚು ಪ್ರಿಯವಾಗ ತೊಡಗಿತು. ಕನ್ನಡದ ನೋಂದಣಿ ಸೊರಗತೊಡಗಿತು. ಇದೇ ಗೋಕಾಕ್ ಚಳುವಳಿಗೆ ಕಾರಣವಾದದ್ದು.
      ಒಂದು ತಿಳಿದ ಬಾಶೆ, ಇನ್ನೊಂದು ತಿಳಿದಿರದ ಬಾಶೆ - ಹೀಗೆ ಎರಡು ಬಾಶೆಗಳನ್ನು ಮುಂದಿಟ್ಟರೆ, ಯಾರೇ ಆಗಲಿ, ತಿಳಿದ ಬಾಶೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ಹೊರತು ತಿಳಿಯದ ಬಾಶೆಯನ್ನಲ್ಲ. ಯಾಕೆಂದರೆ, ತಿಳಿಯದ ಬಾಶೆಯನ್ನು ತೆಗೆದುಕೊಂಡರೆ ಓದು ಅನವಶ್ಯಕವಾಗಿ ಕಶ್ಟವಾಗುತ್ತದೆ. ಆದರೂ, ನಮ್ಮ ವಿದ್ಯಾರ‍್ತಿಗಳು ತಿಳಿದ ಕನ್ನಡವನ್ನು ಬಿಟ್ಟು ತಿಳಿಯದ ಸಂಸ್ಕ್ರುತವನ್ನೇ ತೆಗೆದುಕೊಳ್ಳಲು ಶುರುಮಾಡಿದರು, ಯಾಕೆ? ಕಾರಣ ತಿಳಿದುಕೊಂಡರೆ, ಕನ್ನಡದ ವಿರುದ್ದ ಎಂತಹ ಒಂದು ಮುಸುಕಿನ ಮರೆಯ ಸಂಚು ಆ ದಿನಗಳಲ್ಲಿ ನಡೆದಿತ್ತು ಎಂಬುದು ನಮಗೆ ಗೊತ್ತಾಗುತ್ತದೆ.
      ಆಗಿನ ದಿನಗಳಲ್ಲಿ ಮಕ್ಕಳು ಏಳನೇ ತರಗತಿಯವರೆಗೆ ಕನ್ನಡವನ್ನು ಓದಿಕೊಂಡು ಬರುತ್ತಿದ್ದರು. ಹಾಗಾಗಿ, ಎಂಟನೇ ತರಗತಿಯಿಂದ ಹಯ್‍ಸ್ಕೂಲು ಶುರುವಾದಾಗ, ಕನ್ನಡ ವಿಶಯದ ಮಟ್ಟ ಸಹಜವಾಗೇ ಹಯ್‍ಸ್ಕೂಲಿನ ಮಟ್ಟಕ್ಕೆ ಸರಿಹೊಂದುವಂತಿರುತ್ತಿತ್ತು. ಅಂದರೆ, ಕನ್ನಡವನ್ನು ಪ್ರತಮ ಬಾಶೆಯಾಗಿ ತೆಗೆದುಕೊಂಡರೆ, ಅದರಲ್ಲಿ ಉತ್ತೀರ‍್ಣರಾಗುವುದಕ್ಕೆ ವಿದ್ಯಾರ‍್ತಿಗಳು ತಕ್ಕಮಟ್ಟಿಗೆ ಕಶ್ಟಪಡಬೇಕಾಗಿತ್ತು. ಆದರೆ, ಸಂಸ್ಕ್ರುತವನ್ನು ಪ್ರತಮ ಬಾಶೆಯಾಗಿ ತೆಗೆದುಕೊಂಡರೆ,  ಕಶ್ಟಪಡುವ ಅವಶ್ಯಕತೆಯೇ ಇರಲಿಲ್ಲ. ಯಾಕೆಂದರೆ, ಎಂಟನೇ ತರಗತಿಯೇ ಸಂಸ್ಕ್ರುತ ಕಲಿಕೆಯ ಮೊದಲನೇ ವರ‍್ಶವಾದ್ದರಿಂದ, ಅದರ ಕ್ಲಿಶ್ಟತೆ, ಪ್ರಾತಮಿಕ ಶಾಲೆಯಲ್ಲಿ ಕನ್ನಡದ ಕಲಿಕೆಗೆ ಎಶ್ಟು ಕ್ಲಿಶ್ಟತೆ ಇತ್ತೋ ಅದಕ್ಕಿಂತ ಹೆಚ್ಚಿರಲಿಲ್ಲ.
      ಸಂಸ್ಕ್ರುತವನ್ನು ಆಯ್ಕೆ ಮಾಡಿಕೊಂಡರೆ, ಓದಬೇಕಾಗಿದ್ದುದು ತುಂಬಾ ಕಡಿಮೆ. ಪಾಟ ನಡೆಯುತ್ತಿದ್ದುದು ಕನ್ನಡದಲ್ಲೇ. ಪರೀಕ್ಶೆ ನಡೆಯುತ್ತಿದ್ದುದು ಕನ್ನಡದಲ್ಲೇ. ಉತ್ತರಗಳನ್ನು ಬರೆಯುತ್ತಿದ್ದುದು ಕನ್ನಡದಲ್ಲೇ. ಹೆಸರಿಗೆ ಸಂಸ್ಕ್ರುತ, ಆಶ್ಟೆ. ಎಲ್ಲಾ ನಡೆಯುತ್ತಿದ್ದುದು ಕನ್ನಡದಲ್ಲೇ. ಅಲ್ಲೊಂದು ಚೂರು ಸಂಸ್ಕ್ರುತದ ವ್ಯಾಕರಣ, ಇಲ್ಲೊಂದು ಚೂರು ಸಂಸ್ಕ್ರುತದ ತುಂಡು ಸಾಲುಗಳು, ಇಶ್ಟರ ಮೇಲೆ ಒಂದೆರಡು ಸಂಸ್ಕ್ರುತ ಸುಬಾಶಿತಗಳ ಕಂಟಪಾಟ. ಇಶ್ಟೇ, ಎಂಟನೇ ತರಗತಿಯ ಸಂಸ್ಕ್ರುತ ಕಲಿಕೆ!
      ಇನ್ನು ಅಂಕಗಳನ್ನು ಕೊಡುವ ಪರಿಯೋ! ಕನ್ನಡದಲ್ಲಿ ಪುಟಗಟ್ಟಲೆ ಬರೆದರೂ ನಿಮಗೆ ಶೇಕಡ ಅರವತ್ತೋ ಎಪ್ಪತ್ತೋ ಅಂಕಗಳು ಬಂದರೆ ಹೆಚ್ಚೆಚ್ಚು. ಸಂಸ್ಕ್ರುತದಲ್ಲಿ ನೋಡಿದರೆ ಗಣಿತದ ಹಾಗೆ ಅಂಕಗಳ ಕೊಡುತ್ತಿದ್ದರು! ಒಟ್ಟು ನೂರಯ್ವತ್ತು ಅಂಕಗಳಲ್ಲಿ ನೂರಯ್ವತ್ತನ್ನೂ ತೆಗೆದುಕೊಳ್ಳಬಹುದಾಗಿತ್ತು!
      ಹೀಗೆ, ಕನ್ನಡ ತೆಗೆದುಕೊಂಡವರಿಗೆ ಬೆಟ್ಟ ಏರಿದಶ್ಟು ಕಶ್ಟವಾಗಿದ್ದರೆ, ಸಂಸ್ಕ್ರುತ ತೆಗೆದುಕೊಂಡವರಿಗೆ ಮಳಲು ಗುಡ್ಡೆಯ ಮೇಲೆ ಆಡಿದಶ್ಟು ಹಗುರಾಗಿರುತ್ತಿತ್ತು. ವಸ್ತುಸ್ತಿತಿ ಹೀಗಿದ್ದಾಗ ಅದಾವ ಬುದ್ದಿ ಇರುವ ವಿದ್ಯಾರ‍್ತಿ ತಾನೆ ಸಂಸ್ಕ್ರುತವನ್ನು ಆಯ್ಕೆ ಮಾಡಿಕೊಳ್ಳದೆ ಇರುತ್ತಿದ್ದ? ಸಹಜವಾಗೇ, ಸುಲಬದ ದಾರಿ ಹುಡುಕುವ ವಿದ್ಯಾರ‍್ತಿಗಳು ಮತ್ತು ಅವರ ತಾಯಿತಂದೆಯರು ಕನ್ನಡವನ್ನು ಬದಿಗೆ ತಳ್ಳಿ ಸಂಸ್ಕ್ರುತವನ್ನು ಎತ್ತಿಕೊಳ್ಳುತ್ತಿದ್ದರು.
      ಈ ರೀತಿ, ಕನ್ನಡದ ನೆಲದಲ್ಲೇ ಕನ್ನಡಕ್ಕೆ ಬತ್ತಿ ಇಟ್ಟದ್ದು ಯಾವೊಂದು ಜಾತಿಯವರಲ್ಲ, ಯಾವೊಂದು ಪ್ರದೇಶದವರಲ್ಲ. ಹೊರಗಿನವರಂತೂ ಅಲ್ಲವೇ ಅಲ್ಲ. ನಮ್ಮವರಲ್ಲೇ ಸಂಸ್ಕ್ರುತದ ದುರಬಿಮಾನವಿದ್ದ ಕೆಲ ಕನ್ನಡದ್ರೋಹಿ ಕನ್ನಡಿಗರೇ ಈ ನಾಚಿಕೆಗೇಡಿನ ಕೆಲಸ ಮಾಡಿದ್ದು. ಈ ದ್ರೋಹಿಗಳು ತಮ್ಮ ಮಕ್ಕಳೊಂದಿಗೆ ಲಲ್ಲೆಗರೆಯುತ್ತಿದ್ದುದು ಕನ್ನಡದಲ್ಲಿ. ಹೆಂಡತಿಯರೊಡನೆ ಸರಸ ಸಲ್ಲಾಪವಾಡುತ್ತಿದ್ದುದು ಕನ್ನಡದಲ್ಲಿ. ಗೆಳೆಯರೊಟ್ಟಿಗೆ ಹರಟೆ ಕೊಚ್ಚುತ್ತಿದ್ದುದು ಕನ್ನಡದಲ್ಲಿ. ಎಲ್ಲರ ನಡುವೆ ವ್ಯವಹರಿಸುತ್ತಿದ್ದುದು ಕನ್ನಡದಲ್ಲಿ. ಆದರೆ, ಇವರ ನಿಶ್ಟೆ ಇದ್ದದ್ದೆಲ್ಲಾ ಸಂಸ್ಕ್ರುತದಲ್ಲಿ! ಏನಂತೀರಿ ಇಂತಹ ತಾಯಿಗುಲಿಗಳಿಗೆ?
      ಹಾಗೆ ನೋಡಿದರೆ, ಮೊತ್ತಮೊದಲು, ನಾಡ ಮಕ್ಕಳ ನುಡಿ ಕನ್ನಡಕ್ಕೆ ಸತ್ತನುಡಿ ಸಂಸ್ಕ್ರುತವನ್ನು ಸಮನಾಗಿ ನಿಲ್ಲಿಸುವ ಏರ‍್ಪಾಡೇ ನಡೆದಿರಬಾರದಾಗಿತ್ತು. ಆದರೂ ಅದು ನಡೆದು ಹೋಗಿತ್ತು. ಅದೇ ಒಂದು ಅಚ್ಚರಿ. ಅಶ್ಟು ಸಾಲದು ಎನ್ನುವಂತೆ, ಈ ನಾಚಿಕೆಗೇಡಿನ ಏರ‍್ಪಾಡನ್ನು ತೆಗೆದುಹಾಕುವುದಕ್ಕೆ ಹತ್ತು ವರ‍್ಶಗಳಿಗೂ ಹೆಚ್ಚು ಸಮಯ ಬೇಕಾಯಿತು. ಹೇಗಿತ್ತು ನೋಡಿ ಆಗ ಸಂಸ್ಕ್ರುತದ ದುರಬಿಮಾನಿಗಳ ವರ‍್ಚಸ್ಸು!
      ಈಗಲೂ ಕೂಡ ಅವರ ವರ‍್ಚಸ್ಸೇನೂ ಕಡಿಮೆಯಾಗಿಲ್ಲ. ಅವರ ಸಂಕ್ಯೆಯೂ ಕುಗ್ಗಿಲ್ಲ. ಕಳೆದ ನಾಲ್ಕಯ್ದು ವರ‍್ಶಗಳಲ್ಲಿ ಅವರ ಚಟುವಟಿಕೆ ಮತ್ತೆ ಹೆಚ್ಚಾಗಿದೆ. ಕನ್ನಡಿಗರ ತೆರಿಗೆ ಹಣದಲ್ಲಿ ಅವರು ಸಂಸ್ಕ್ರುತ ವಿಶ್ವವಿದ್ಯಾಲಯ ಮಾಡಿಕೊಂಡಿದ್ದಾರೆ. ಕನ್ನಡಿಗರ ತೆರಿಗೆ ಹಣದಲ್ಲಿ ಆಗಾಗ್ಗೆ ಅವರು ಸಂಸ್ಕ್ರುತ ಪುಸ್ತಕ ಮೇಳಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಸಚಿವ ರಾಮದಾಸ್ ಅವರು ದಂತವಯ್‍ದ್ಯಕೀಯ ವಿದ್ಯಾರ‍್ತಿಗಳಿಗೆ ಸಂಸ್ಕ್ರುತ ಕಲಿಕೆಯನ್ನು ಕಡ್ಡಾಯ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸಂಸ್ಕ್ರುತದ ದುರಬಿಮಾನಿಗಳ ಹಾವಳಿ ಬೆಳೆಗೆ ಎರಗುವ ಹಕ್ಕಿಗಳಂತೆ ಮತ್ತೆ ಮತ್ತೆ ಕನ್ನಡಿಗರ ಮೇಲೆ ಎರಗುತ್ತಲೇ ಇರುತ್ತದೆ.
      ಕನ್ನಡಿಗರು ನಾವು ದ್ರಾವಿಡ ಬುಡಕಟ್ಟಿಗೆ ಸೇರಿದವರು. ನಮ್ಮ ನುಡಿ ದ್ರಾವಿಡ ನುಡಿ. ಸಂಸ್ಕ್ರುತಕ್ಕೂ ಕನ್ನಡಕ್ಕೂ ನೆತ್ತರ ನಂಟಿಲ್ಲ. ವಾಸ್ತವ ಇದಾಗಿರುವಾಗ, ನಮಗೆ ಯಾಕೆ ಬೇಕು ಈ ಉತ್ತರದ ಸಂಸ್ಕ್ರುತವನ್ನು ಪೊರೆಯುವ ಹೊರೆ? ನಮ್ಮ ಕನ್ನಡವನ್ನೇ ಕಾಪಾಡಿಕೊಳ್ಳುವುದಕ್ಕೆ ಸಂಪನ್ಮೂಲದ ಕೊರತೆ ಇರುವಾಗ ಪರಕೀಯ ಸಂಸ್ಕ್ರುತಕ್ಕೆ ಯಾಕೆ ನಮ್ಮ ಸಾರ‍್ವಜನಿಕ ಹಣವನ್ನು ಪೋಲು ಮಾಡಬೇಕು? ಆರ‍್ಯ ಬಾಶೆಗಳನ್ನಾಡುವ ಮಂದಿ ನಮ್ಮ ಹತ್ತರಶ್ಟಿದ್ದಾರೆ ಈ ದೇಶದಲ್ಲಿ. ಸಂಸ್ಕ್ರುತದ ಲಾಲನೆ ಪಾಲನೆಯನ್ನು ಬೇಕಿದ್ದರೆ ಅವರು ಮಾಡಿಕೊಳ್ಳಲಿ. ದ್ರಾವಿಡರಾದ ನಮಗೇಕೆ ಸಂಸ್ಕ್ರುತವನ್ನು ಉಳಿಸುವ ಬೆಳೆಸುವ ಮುಟ್ಟಾಳ ಕೆಲಸ? ಹೀಗೆ, ಕನ್ನಡಿಗರು ನಾವು ದ್ರಾವಿಡ ಅರಿವನ್ನು ಮೂಡಿಸಿಕೊಳ್ಳಬೇಕು. ಅದೇ ಸಂಸ್ಕ್ರುತದ ದುರಬಿಮಾನಿಗಳ ಹಾವಳಿಗೆ ತಕ್ಕ ಪರಿಹಾರ.
      ಆದ್ದರಿಂದ, ಗೋಕಾಕ್ ಚಳುವಳಿಯನ್ನು ನಾವು ಹೇಗೆ ಮರೆಯುವುದಿಲ್ಲವೋ, ಹಾಗೆ, ಅದರ ಕಾರಣ ಏನಾಗಿತ್ತು ಎಂಬುದನ್ನೂ ನಾವು ಮರೆಯಬಾರದು. ನಮ್ಮ ಸಹಜ ದ್ರಾವಿಡತನವನ್ನು ನಾವು ಮಯ್ಗೂಡಿಸಿಕೊಳ್ಳದಿದ್ದರೆ, ನಮ್ಮ ನಡುವೆಯೇ ಇದ್ದುಕೊಂಡು ನಮಗೇ ಎರಡು ಬಗೆಯುವ ದ್ರೋಹಿಗಳಿಂದ ನಮ್ಮ ನಡೆನುಡಿಗಳಿಗೆ ಕುತ್ತು ಮೇಲಿಂದ ಮೇಲೆ ಬರುವುದು ತಪ್ಪುವುದಿಲ್ಲ ಎಂಬ ಪಾಟವನ್ನು ನಾವು ಗೋಕಾಕ್ ಚಳುವಳಿಯಿಂದ ಕಲಿತುಕೊಳ್ಳಬೇಕು.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಸೋಮವಾರ, ಜನವರಿ 21, 2013

ಬಿ.ಎಮ್.ಶ್ರೀಯವರ ಲಿಪಿ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ತಿಂಗಳು (ಜನವರಿ), ಅಚ್ಚಗನ್ನಡದ ಹಂಬಿಗೆ ನೀರೆರೆದು ಪೊರೆದ ಕನ್ನಡದ ಕಣ್ವ ಬಿ.ಎಮ್.ಶ್ರೀಯವರು ಹುಟ್ಟಿದ ತಿಂಗಳು. ಶ್ರೀಯವರ ವಿಶಯವಾಗಿ ನನಗೆ ಗೊತ್ತಿರುವುದು ಅವರನ್ನು ಹತ್ತಿರದಿಂದ ಬಲ್ಲವರು ಅವರ ಬಗ್ಗೆ ಬರೆದ ಬರಹಗಳಿಂದ ಮಾತ್ರ. ಶ್ರೀಯವರನ್ನು ಬಲ್ಲವರೆಲ್ಲರೂ ಅವರು ಕನ್ನಡದ ಏಳಿಗೆಗಾಗಿ ಅಕ್ಶರಶಹ ತಮ್ಮ ಒಡಲು ಒಡವೆ ಎರಡನ್ನೂ ಸವೆಸಿದರು ಎಂದು ಹೇಳಿದ್ದಾರೆ. ಅವರ ಕನ್ನಡ ನಾಡುನುಡಿಗಳ ಒಲವಿಗೆ ಎಣೆಯೇ ಇರಲಿಲ್ಲ ಎಂದಿದ್ದಾರೆ. ಶ್ರೀಯವರಿಗೆ ಕನ್ನಡ, ತಮಿಳು, ಸಂಸ್ಕ್ರುತ, ಆಂಗ್ಲ ಹಾಗೂ ಹಳೆಯ ಗ್ರೀಕ್ ಬಾಶೆಗಳಲ್ಲಿ ಪಂಡಿತರನ್ನೇ ಬೆರಗುಗೊಳಿಸುವಶ್ಟು ಪಾಂಡಿತ್ಯವಿತ್ತಂತೆ. ಇಂತಹ ಒಬ್ಬ ಕನ್ನಡದೊಲವಿ, ಇಂತಹ ಹಿರಿಯರಿಗ, ಕಳೆದ ಶತಮಾನದ ಮೂವತ್ತರ ದಶಕದಲ್ಲಿ ಕನ್ನಡದ ಲಿಪಿಯನ್ನು ನೇರ‍್ಪುಗೊಳಿಸಬೇಕು ಎಂಬ ಉದ್ದೇಶದಿಂದ ಬಳಕೆಯಲ್ಲಿದ್ದ ಲಿಪಿಗೆ ಕೆಲವು ಮಾರ‍್ಪಾಡುಗಳನ್ನು ಸೂಚಿಸಿದರು. ಅವರು ಕಾಣ್ಕೆಗೊಂಡ ನೇರ‍್ಪುಗೊಳಿಸಿದ ಲಿಪಿಯ ಬಗ್ಗೆ ಈಗಿನ ತಲೆಮಾರಿನವರಿಗೆ ಅಶ್ಟಾಗಿ ತಿಳಿದಿಲ್ಲ. ತಿಳಿದರೆ ಅದನ್ನು ಮೆಚ್ಚದೆ ಇರರು ಎನಿಸುತ್ತದೆ ನನಗೆ.
      ಶ್ರೀಲಿಪಿಯನ್ನು ನೆನಪಿಸಿಕೊಳ್ಳುವ ಮೊದಲು ಕೊಂಚ ಕನ್ನಡ ಲಿಪಿಯ ಅಂದದ ಬಗ್ಗೆ ಮಾತಾಡೋಣ. ಇತ್ತೀಚೆಗೆ ಟೀವೀ ಕಾರ‍್ಯಕ್ರಮ ಒಂದರಲ್ಲಿ ನಗೆಗಯ್ವಿ ಕ್ರಿಶ್ಣೇಗವ್ಡರು ಸಬೆಯೊಂದನ್ನು ಉದ್ದೇಶಿಸಿ ಮಾತಾಡುತ್ತ ಒಂದು ಸಂಗತಿಯನ್ನು ತಿಳಿಸಿದರು. ಹಿಂದೊಮ್ಮೆ ರಶ್ಯಾದ ಮಾಸ್ಕೋದಲ್ಲಿ ಪ್ರಪಂಚದ ಬೇರೆಬೇರೆ ಲಿಪಿಗಳ ಪ್ರದರ‍್ಶನವೊಂದು ನಡೆದಿತ್ತಂತೆ. ಅದರಲ್ಲಿ ಕನ್ನಡ ಲಿಪಿಯ ಅಂದ ಮಂದಿಗೆ ಎಶ್ಟು ಮೆಚ್ಚಿಗೆ ಆಯಿತೆಂದರೆ, ಅಶ್ಟೆಲ್ಲ ಲಿಪಿಗಳ ಮೇಲಾಟದಲ್ಲಿ ಅದು ಮೂರನೆಯ ಎಡೆಯನ್ನು ಗೆದ್ದುಕೊಂಡಿತಂತೆ! ಕ್ರಿಶ್ಣೇಗವ್ಡರ ಮಾತನ್ನು ಕೇಳಿ ಇಡೀ ಸಬೆ ಅಚ್ಚರಿಯ ಉದ್ಗಾರವನ್ನು ಹೊರಡಿಸಿತು. ನನಗಾದರೋ ಎಳ್ಳಶ್ಟೂ ಅಚ್ಚರಿಯಾಗಲಿಲ್ಲ. ಏಕೆಂದರೆ, ಕನ್ನಡ ಲಿಪಿ ತಾನೇತಾನಾಗಿ ಯಾರಿಗೇ ಆಗಲೀ ಮೆಚ್ಚುಗೆಯಾಗುತ್ತದೆ ಎನ್ನುವುದನ್ನು ನನ್ನ ಅನುಬವದಿಂದಲೇ ನಾನು ಆ ಮೊದಲೇ ತಿಳಿದುಕೊಂಡಿದ್ದೆ.
      ಅಮೆರಿಕದಲ್ಲಿ ಓದುತ್ತಿದ್ದಾಗ ಕನ್ನಡ, ತಮಿಳು, ತೆಲುಗು, ದೇವನಾಗರೀ, ಬಂಗಾಳಿ ಮುಂತಾದ ನಮ್ಮ ದೇಶದ ಲಿಪಿಗಳನ್ನು ನಾನು ಅಮೆರಿಕನ್ನರಿಗಶ್ಟೇ ಅಲ್ಲದೆ ಬೇರೆಬೇರೆ ದೇಶಗಳಿಂದ ಬಂದಿದ್ದ ವಿದ್ಯಾರ‍್ತಿಗಳಿಗೆ ಕೂಡ ತೋರಿಸಿ, ಅವರಿಗೆ ಅವುಗಳಲ್ಲಿ ಯಾವುದು ಇಶ್ಟ ಆಯಿತು ಎಂದು ಕೆಲವು ಸಲ ಕುತೂಹಲಕ್ಕಾಗಿ ಕೇಳಿದ್ದೆ. ಕನ್ನಡ ಸಾಮಾನ್ಯವಾಗಿ ಅದೆಶ್ಟು ಮಂದಿಗೆ ಇಶ್ಟವಾಗುತ್ತಿತ್ತು ಎಂದರೆ, ಅದರಿಂದ ನನಗೆ ಆಗುತ್ತಿದ್ದ ಅಚ್ಚರಿ ಅಶ್ಟಿಶ್ಟಲ್ಲ. ಕನ್ನಡ ನನ್ನ ನುಡಿ ಎಂದು ಅವರಿಗೆ ಗೊತ್ತಿರಲಿಲ್ಲ. ಹಾಗಾಗಿ, ಅವರು ಕನ್ನಡ ಲಿಪಿಯನ್ನು ಮೆಚ್ಚಿದ್ದು ಬರೀ ಸವ್‍ಜನ್ಯಕ್ಕಾಗಿ ಅಗಿರಲಿಲ್ಲ. ಕನ್ನಡ ಲಿಪಿಯ ಸಹಜ ಅಂದವೇ ಅವರ ಮೆಚ್ಚುಗೆಯನ್ನು ಗಳಿಸಿಕೊಂಡಿತ್ತು. ಆದರೆ, ಅವರಲ್ಲಿ ಅನೇಕರು, ಹೆಚ್ಚಾಗಿ ಅಮೆರಿಕನ್ನರು, ಅದರ ಒಂದು ಅಂಶವನ್ನು ಮಾತ್ರ ಅಶ್ಟಾಗಿ ಇಶ್ಟ ಪಟ್ಟಿರಲಿಲ್ಲ. ಒತ್ತಕ್ಶರ ಆ ಅಂಶ. What are those little squiggles along the bottom? ಎಂದು ಒತ್ತುಗಳನ್ನು ತೋರಿಸಿ, ’ಒತ್ತುಗಳಿರದಿದ್ದರೆ ಲಿಪಿ ಇನ್ನೂ ಎಶ್ಟು ಅಂದವಾಗಿರುತ್ತಿತ್ತು’ ಎನ್ನುವ ದಾಟಿಯಲ್ಲಿ ನನ್ನನ್ನು ಅವರು ಕೇಳುತ್ತಿದ್ದರು.
      ಒತ್ತಕ್ಶರಗಳ ಬಗ್ಗೆ ಶ್ರೀಯವರೂ ಹೀಗೇ ಅಬಿಪ್ರಾಯ ಪಟ್ಟಿದ್ದರು. ಯಾರಿಗೇ ಆಗಲೀ, ಶ್ರೀಯವರ ಈ ಅಬಿಪ್ರಾಯ ಒಪ್ಪಿಗೆ ಆಗದೆ ಇರದು. ಒತ್ತುಗಳನ್ನು ತೆಗೆದರೆ, ಕನ್ನಡದ ಸಾಲುಗಳಿಗೆ ಓರಂತೆ ಒಂದೇ ಎತ್ತರ ಬರುತ್ತದೆ. ಅದರ ಪರಿಣಾಮವಾಗಿ ಮೇಲೆ ಕೆಳಗೆ ಕೊಂಕುಗಳಿರದ ಮುತ್ತಿನ ಸರಗಳಂತೆ ಅವು ಕಾಣಿಸತೊಡಗುತ್ತವೆ. ನಂಬಿಕೆ ಬರದಿದ್ದರೆ, ಇನ್ನು ಮುಂದೆ ಕನ್ನಡದ ಸಾಲುಗಳನ್ನು ಓದುವಾಗ, ಒತ್ತಕ್ಶರ ಇರದ ಪದಗಳಿಗಿರುವ ಅಂದ ಒತ್ತಕ್ಶರ ಇರುವ ಪದಗಳಿಗೆ ಇದೆಯೆ ಎಂದು ಹೋಲಿಸಿ ನೋಡಿ.
      ಶ್ರೀಯವರು ಅಂದದ ಬಗ್ಗೆ ಮಾತ್ರ ಹೇಳಿ ನಿಲ್ಲಿಸಿರಲಿಲ್ಲ. ಕಾಗುಣಿತದ ಕಟ್ಟಳೆಗಳಲ್ಲಿರುವ ಏರುಪೇರುಗಳನ್ನು ಸರಿಮಾಡುವುದರ ಬಗ್ಗೆ ಮತ್ತು ಬೇಡದ ಕೆಲ ಅಕ್ಶರಗಳನ್ನು ತೆಗೆದು ಹಾಕುವ ಬಗ್ಗೆಯೂ ಹೇಳಿದ್ದರು. ಅವರು ಬೊಟ್ಟಿಟ್ಟು ತೋರಿಸಿದ ಕನ್ನಡ ಲಿಪಿ ಒಳಗೊಂಡಿರುವ ಕೆಲ ಸರಿಯಲ್ಲದ ಅಂಶಗಳು ಹೀಗಿವೆ.
      ದೀರ‍್ಗವನ್ನು ಸೂಚಿಸುವುದಕ್ಕೆ ’ಅಜ್ಜನ ಕೋಲು’ ಎಂದು ಕರೆಯುವ ಚಿನ್ನೆ ಇದೆ. ದೀರ‍್ಗ ಬೇಕಾದಲ್ಲೆಲ್ಲಾ ಅದನ್ನು ಮಾತ್ರ ಬಳಸಿದರೆ ಆಗುವುದಿಲ್ಲವೆ? ಬೇರೆ ಬೇರೆ ಬಗೆಯಲ್ಲಿ ದೀರ‍್ಗವನ್ನು ಸೂಚಿಸುವುದರ ಅವ್‍ಚಿತ್ಯವಾದರೂ ಏನು? ಆ, ಈ, ಊ, ೠ, ಏ, ಓ, ಕಾ, ಕೀ, ಕೂ, ಕೇ, ಕೋ - ಇವು ಹಾಗೂ ಇಂತಹವು ಕನ್ನಡದಲ್ಲಿ ದೀರ‍್ಗವನ್ನು ತೋರಿಸುವ ಬರಿಗೆಗಳು. ಅ, ಇ, ಉ, ಋ, ಎ, ಒ ಬರಿಗೆಗಳ ಮುಂದೆ ಅಜ್ಜನ ಕೋಲನ್ನು ಹಾಕಿ ದೀರ‍್ಗವನ್ನು ಸೂಚಿಸಿದರೆ ಸಾಕಲ್ಲವೆ? ಆ, ಈ, ಊ, ೠ, ಏ ಮತ್ತು ಓ ಎಂಬ ಹೆಚ್ಚುವರಿ ಪ್ರತ್ಯೇಕ ಬರಿಗೆಗಳಾದರೂ ಯಾಕೆ ಬೇಕು? ಅದೇ ರೀತಿ, ಕೀ, ಕೇ, ಕೋ ಬರೆದಂತೆಯೇ ಕ ಮುಂದೆ ಅಜ್ಜನ ಕೋಲನ್ನು ಹಾಕಿದರೆ ಕಾ ಆಗುವುದಿಲ್ಲವೇ? ಕು ಮುಂದೆ ಅಜ್ಜನ ಕೋಲನ್ನು ಹಾಕಿದರೆ ಕೂ ಆಗುವುದಿಲ್ಲವೇ? ಕಾ, ಕೂ ಎಂದು ಬೇರೆ ಬೇರೆ ರೀತಿಯಲ್ಲಿ ದೀರ‍್ಗವನ್ನು ತೋರಿಸುವ ಅಗತ್ಯವಾದರೂ ಎಲ್ಲಿದೆ?
      ಅಲ್ಪಪ್ರಾಣ ಮತ್ತು ಮಹಾಪ್ರಾಣದ ಬರಿಗೆಗಳ ಪರಸ್ಪರ ರೂಪಗಳಲ್ಲಿ ಇರುವ ಅರ‍್ತವಿಲ್ಲದ ಬೇರ‍್ಮೆಯನ್ನು ತೊಡೆದು ಹಾಕಬೇಕೆಂದೂ ಅವರು ಸಲಹೆ ನೀಡಿದ್ದರು. ಕ ಹೀಗಿದ್ದರೆ ಖ ಹೀಗೆ. ಜ ಹೀಗಿದ್ದರೆ ಝ ಹೀಗೆ! ಅಲ್ಪಪ್ರಾಣದ ಬರಿಗೆಯ ಬುಡದಲ್ಲೋ ತಲೆಯಲ್ಲೋ ಒಂದು ಬೊಟ್ಟು ಇಟ್ಟು ಮಹಾಪ್ರಾಣವನ್ನು ಸೂಚಿಸಿದರೆ ಆಗುವುದಿಲ್ಲವೆ? ಎಂದು ಅವರು ಕೇಳಿದ್ದರು.
      ಹೀಗೆ ಒತ್ತುಗಳನ್ನು ತೆಗೆಯುವುದರಿಂದ, ಎಲ್ಲೆಡೆ ದೀರ‍್ಗಕ್ಕಾಗಿ ಅಜ್ಜನ ಕೋಲೊಂದನ್ನೇ ಬಳಸುವುದರಿಂದ, ಬೇಡದ ಬರಿಗೆಗಳನ್ನು ತೊಲಗಿಸುವುದರಿಂದ, ಕನ್ನಡಕ್ಕೆ ಇನ್ನಶ್ಟು ಸರಳವೂ ಅಂದವೂ ಆದ ಹಾಗೂ ನೇರ‍್ಪಿನ ಕಾಗುಣಿತವಿರುವ ಹೊಸ ಲಿಪಿಯೊಂದು ದೊರೆಯುತ್ತದೆ ಎಂದು ತಮ್ಮ ವಾದವನ್ನು ತರ‍್ಕಬದ್ದವಾಗಿ ಅವರು ಮಂಡಿಸಿದ್ದರು. ಆದರೆ, ಆಗಿನ ಕಾಲದ ಜನ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ’ಈಗಾಗಲೇ ಬೆಟ್ಟದಶ್ಟು ಪುಸ್ತಕಗಳು ಇಂದಿನ ಲಿಪಿಯಲ್ಲಿ ಅಚ್ಚಾಗಿಬಿಟ್ಟಿವೆಯಲ್ಲ!’ ಎಂದು ಕೆಲವರು ಆಕ್‍ಶೇಪಣೆ ಎತ್ತಿದರು. ’ಈಗಿರುವ ಲಿಪಿ ಹೀಗೇ ಚೆನ್ನಾಗಿದೆ. ಬದಲು ಮಾಡುವ ಅಗತ್ಯ ಇಲ್ಲ’ ಎಂದು ಇನ್ನು ಕೆಲವರು ಉದಾಸೀನ ತೋರಿಸಿದರು. ಒಟ್ಟಿನಲ್ಲಿ ಶ್ರೀಯವರ ಹುರುಳುಳ್ಳ ಸಲಹೆ ಮೂಲೆಗುಂಪಾಯಿತು.
      ಆದರೆ, ಶ್ರೀಯವರ ಮಾರ‍್ಪಾಟುಗಳನ್ನು ಜನ ಒಪ್ಪಿಕೊಳ್ಳುವ ಕಾಲ ಈಗ ಹತ್ತಿರವಾಗಿದೆ ಎಂದು ಅನಿಸುತ್ತಿದೆ ನನಗೆ. ಏಕೆಂದರೆ, ಹೊಸ ತಲೆಮಾರಿನ ಕನ್ನಡದೊಲವಿಗಳು ಸ್ವತಂತ್ರವಾಗಿ ಯೋಚಿಸುವುದನ್ನು ಇಶ್ಟಪಡುತ್ತಿದ್ದಾರೆ. ತರ‍್ಕಕ್ಕೆ ಬೆಲೆ ಕೊಡುತ್ತಿದ್ದಾರೆ. ನಂಬಿದಂತೆ ನಡೆಯುವ ಕೆಚ್ಚು ತೋರಿಸುತ್ತಿದ್ದಾರೆ. ಅನುಮಾನವಿದ್ದರೆ, ಈ ಪುಟದ ಬಲಬದಿಯಲ್ಲಿರುವ ಕಯ್‍ಮರದ ಅಡಿಯಲ್ಲಿ ಕೊಟ್ಟಿರುವ ವೆಬ್ ತಾಣಗಳಿಗೊಮ್ಮೆ ಹೋಗಿ ನೋಡಿ. ಅರ‍್ತವುಳ್ಳ ಮಾರ‍್ಪಾಟುಗಳಿಗೆ ಎಳಗನ್ನಡಿಗರು ಹೇಗೆ ಮನಸ್ಸುಗಳನ್ನು ತೆರೆದುಕೊಳ್ಳುತ್ತಿದ್ದಾರೆ ಎಂಬುದರ ಸುಳುಹು ಅಲ್ಲಿ ನಿಮಗೆ ಡಾಳಾಗಿ ಸಿಗುತ್ತದೆ.
      ನಿಜ ಹೇಳುವುದಾದರೆ, ಕನ್ನಡದಲ್ಲಿ ಲಿಪಿಕ್ರಾಂತಿಯ ಗಾಳಿ ಆಗಲೇ ಬೀಸಲು ತೊಡಗಿದೆ. ಇದಕ್ಕೆ ನುಡಿಯರಿಗ ಶಂಕರ ಬಟ್ಟರ ’ಹೊಸಬರಹ’ ಜನಪ್ರಿಯವಾಗುತ್ತಿರುವುದೇ ಸಾಕ್‍ಶಿ. ಒತ್ತಕ್ಶರಗಳನ್ನು ಕಡಿಮೆ ಮಾಡಿ ಬರೆಯುವ ಪರಿಯೂ ಅಲ್ಲಲ್ಲಿ ಕಾಣಬರುತ್ತಿದೆ. ಇನ್ನು ಬೇಕಾಗಿರುವುದು, ಬರಹದ ಮೆಲ್‍ಪುರುಳುಗಳಲ್ಲಿ ಅಜ್ಜನ ಕೋಲನ್ನು ಬಿಡಿಯಾಗಿ ಬರೆಯಲು ಅನುವು ಮಾಡಿಕೊಡುವ ಸವ್ಲಬ್ಯ. ಈ ಸವ್ಲಬ್ಯ ಕೂಡ ಆಗಲೇ ಕೆಲವು ಮೆಲ್‍ಪುರುಳುಗಳಲ್ಲಿ ದೊರೆಯುತ್ತಿರಬಹುದು.
      ಕನ್ನಡಿಗನಾಗಿ, ದ್ರಾವಿಡನಾಗಿ, ಕಡೆಯದಾಗಿ ನಾನು ಲಿಪಿಯ ವಿಶಯದಲ್ಲಿ ಹೇಳುವುದಿಶ್ಟೆ. ನೆಲದಗಲ ಬಳಕೆಯಲ್ಲಿರುವ ಅದೆಶ್ಟೋ ಲಿಪಿಗಳಲ್ಲಿ, ದ್ರಾವಿಡ ನುಡಿಗಳಲ್ಲಿ ಒಂದು ಮುಕ್ಯ ನುಡಿಯಾದ ನಮ್ಮ ಕನ್ನಡ ನುಡಿಯ ಲಿಪಿ ಎಲ್ಲರೂ ಮೆಚ್ಚುವಂತಹ ಅಂದವನ್ನು ಪಡೆದಿದೆ. ಕನ್ನಡದ ಲಿಪಿ ದಿಟವಾಗಿಯೂ ಮುತ್ತು! ಇನ್ನು ಅದರಿಂದ ಶ್ರೀಯವರ ಕಿವಿಮಾತಿನಂತೆ ಕೆಲ ಕೊಂಕುಗಳನ್ನು ತೆಗೆದು ಹಾಕಿದರೆ, ಅದನ್ನು ಸರಿಗಟ್ಟುವ ಲಿಪಿ ನೆಲದಿ ಮತ್ತೊಂದಿರುವುದಿಲ್ಲ!

ನಲ್ಮೆಯೊಡನೆ,
ಎಚ್.ಎಸ್.ರಾಜ್