ಮಂಗಳವಾರ, ಸೆಪ್ಟೆಂಬರ್ 10, 2013

ನನ್ನಿಯೋ ಇಲ್ಲ ಬರೀ ಆಶಾವಾದವೋ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಆಗಸ್ಟ್ ಹತ್ತರ The Times of India ಪತ್ರಿಕೆಯಲ್ಲಿ, ಕನ್ನಡ ನುಡಿಯ ಬವಿಶ್ಯದ ಬಗ್ಗೆ ನಡೆದ ಕಾರ‍್ಯಕ್ರಮವೊಂದರ ಸುದ್ದಿ ಪ್ರಕಟವಾಗಿದೆ. ಆ ಕಾರ‍್ಯಕ್ರಮದಲ್ಲಿ ಕನ್ನಡ ನುಡಿವೊಲದಲ್ಲಿ  ಹೆಸರು ಮಾಡಿರುವ ಶ್ರೀಯುತರಾದ ಜಿ.ವೆಂಕಟಸುಬ್ಬಯ್ಯ, ಕೆ.ವಿ.ನಾರಾಯಣ್, ಗಣೇಶ್ ದೇವಿ ಮುಂತಾದವರು ಬಾಶಣ ಮಾಡಿದ್ದಾರೆ. ಸುದ್ದಿ ಬರಹ ಅವರ ಬಾಶಣಗಳಿಂದ ಕೆಲ ಮುಕ್ಯ ಅಬಿಪ್ರಾಯಗಳನ್ನು ಎತ್ತಿ ಓದುಗರ ಮುಂದಿಟ್ಟಿದೆ. ಬಾಶಣಗಳ ಒಟ್ಟಾರೆ ತೀರ‍್ಮಾನ ಕನ್ನಡದೊಲವಿಗಳಿಗೆ ಹಿಗ್ಗು ತರುವಂತಹುದೇ ಆಗಿದೆ. ಏಕೆಂದರೆ, ’ಕನ್ನಡ ನುಡಿಗೆ ಕುಂದಿಲ್ಲ. ಬರುವ ನೂರಾರು ವರ‍್ಶ ಕನ್ನಡ ನುಡಿ ಏಳಿಗೆವೆತ್ತು ಸಂಬ್ರಮದಿಂದ ಬಾಳಿ ಬದುಕಲಿದೆ’ - ಇದು ಬಾಶಣಗಳು ಒಮ್ಮತದಿಂದ ವ್ಯಕ್ತಪಡಿಸಿದ ಅಬಿಪ್ರಾಯ.
      ಈ ಬಗೆಯ ಗೆಲುನೋಟಕ್ಕೆ ಬಾಶಣಕಾರರು ಕೊಟ್ಟ ಆದಾರಗಳನ್ನು ಸುದ್ದಿ ಉದ್ದರಿಸಿದೆ. ’ಕನ್ನಡಕ್ಕೆ ಎರಡು ಸಾವಿರ ವರ‍್ಶಗಳ ಇತಿಹಾಸವೂ ಮೇಲುನುಡಿಪಿನ (ಶ್ರೇಶ್ಟಸಾಹಿತ್ಯದ) ಬೆಳೆಯೂ ಇದೆ. ಅಂದದ ಲಿಪಿ ಇದೆ. ಬಗೆಗೊಳುವ ಇನಿದಾದ ದನಿ ಇದೆ. ಮುಕ್ಯವಾಗಿ, ಅದನ್ನಾಡುವ ಕೋಟಿಕೋಟಿ ಮಂದಿಯ ಸಂಕ್ಯಾಬಲದ ಅಡಿಗಲ್ಲೂ ಇದೆ’ - ಇದು ನಡೆದಾಡುವ ನಿಗಂಟು ವೆಂಕಟಸುಬ್ಬಯ್ಯನವರ ಅನಿಸಿಕೆಯಾದರೆ, ನುಡಿಯರಿಗ ಕೆ.ವಿ.ನಾರಾಯಣ್ ಅವರು ಹೇಳಿರುವುದು ಹೀಗೆ - ’ಯಾವುದೇ ನುಡಿ ಅಳಿಯುವುದು ಅದನ್ನಾಡುವವರು ಅಳಿದರೆ ಮಾತ್ರ. ಕನ್ನಡಕ್ಕೆ ಅಳಿಯುವ ಬಯವಿಲ್ಲ. ಆದರೆ, ಒಂದೇ ನುಡಿ ಚಲಾವಣೆಯಲ್ಲಿರುವಂತಹ ಪರಿಸರಗಳು ಇನ್ನು ಮುಂದೆ ಇರುವ ಹಾಗಿಲ್ಲ. ಒಂದೇ ಪರಿಸರದಲ್ಲಿ ಹಲನುಡಿಗಳ ಬಳಕೆಯಾಗುವುದೇ ಬವಿಶ್ಯದ ವಾಸ್ತವ. ಸಂಕ್ಯಾಬಲ ಅಶ್ಟೊಂದು ಮುಕ್ಯವಲ್ಲ. ಏಕೆಂದರೆ, ಕೊಂಕಣಿ ಆಡುವರಿಗಿಂತ ಹಲವುಪಟ್ಟು ಹೆಚ್ಚು ಮಂದಿ ಗೋಂಡೀ ನುಡಿಯನ್ನು ಆಡುತ್ತಾರೆ. ಆದರೆ, ಸಂವಿದಾನದಲ್ಲಿ ಕೊಂಕಣಿಯನ್ನು ಹೆಸರಿಸಿದ್ದಾರೆಯೇ ಹೊರತು ಗೋಂಡೀಯನ್ನಲ್ಲ’. ಇನ್ನು ಮತ್ತೊಬ್ಬ ನುಡಿಯರಿಗರಾದ ಗಣೇಶ್ ದೇವಿ ಅವರು ಅಬಿಪ್ರಾಯಪಟ್ಟದ್ದು ಹೀಗೆ - ’ಕನ್ನಡಕ್ಕೆ ಎಲ್ಲ ನುಡಿಗಳಿಂದಲೂ ಪದಸಂಪತ್ತನ್ನು ತಂದುಕೊಳ್ಳುವ ಯುಕ್ತಿ ಇದೆ. ಬಾಶೆಗಳು ಅಳಿಯುತ್ತವೆ ಎನ್ನುವುದೇ ಸುಳ್ಳು. ಬಾಶೆಗಳು ಕಲುಶಿತವಾಗುತ್ತವೆ ಎನ್ನುವುದೂ ಸುಳ್ಳು. ಬಾಶೆಗಳು ಹೊಳೆಗಳ ಹಾಗೆ. ಹಲವು ಮೂಲಗಳಿಂದ ಕಸುವನ್ನು ಪಡೆದುಕೊಂಡು ನಿರಂತರವಾಗಿ ಹರಿಯುತ್ತವೆ, ಸಾಯುವುದಿಲ್ಲ. ಕನ್ನಡವೇ ಇದಕ್ಕೆ ಒಂದು ಒಳ್ಳೆಯ ಎತ್ತುಗೆ (ಉದಾಹರಣೆ)’.
      ಈ ಅನಿಸಿಕೆಗಳನ್ನು ಕೇಳಿದರೆ ಯಾವ ಕನ್ನಡಿಗನಿಗೇ ಆಗಲಿ ಸಂತೋಶವಾಗಬೇಕು. ನನಗೂ ಆಯಿತು. ಆದರೆ, ಒಡನೆಯೇ ಕೆಲ ಸಂದೇಹಗಳೂ ತಲೆ ಎತ್ತಿದುವು. ನಾನು ನುಡಿಯರಿಗನಲ್ಲ. ನುಡಿಗಳ ಬಗೆಗಿನ ಪೇರರಿವು ನನಗೆ ಕಂಡಿತ ಇಲ್ಲ. ಮೇಲೆ ಹೆಸರಿಸಿದ ಅರಿಗರ ತೀರ‍್ಮಾನಗಳನ್ನು ಅಲ್ಲಗಳೆಯುವ ಗುಂಡಿಗೆ ನನಗಿಲ್ಲ. ಆದರೂ, ಅವರ ಅನಿಸಿಕೆಗಳು ಇಡಿನನ್ನಿ (ಪೂರ‍್ಣ ಸತ್ಯ) ಅಲ್ಲ ಎನಿಸುವ ಸಂದೇಹಗಳು ನನ್ನಲ್ಲಿ ಮೂಡಿವೆ. ಅವುಗಳನ್ನು ಕಿರಿದಾಗಿ ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ.
      ಯಾವುದೇ ನುಡಿಯ ಇಂದಿನ ಹಾಗೂ ನಾಳೆಯ ಆರೋಗ್ಯವನ್ನು ಅದರ ಚರಿತ್ರೆ ಮತ್ತು ಸಾಹಿತ್ಯಗಳ ಹಳಮೆಯಿಂದ ನಿಜಕ್ಕೂ ಅಳೆಯಲು ಬರುತ್ತದೆಯೆ? ಕನ್ನಡದಲ್ಲಿ ’ಹಳೆಯ’ ನುಡಿಪೇನೋ ಬೇಕಾದಶ್ಟಿದೆ. ಆದರೆ, ಅದನ್ನು ಓದುವವರು ಎಶ್ಟಿದ್ದಾರೆ? ಜನ, ಬಾಶೆಗೆ ಇಂದು ಎಶ್ಟು ಉಪಯೋಗ ಇದೆ ಎಂಬುದರ ಬಗ್ಗೆ ಯೋಚಿಸುತ್ತಾರೆಯೆ ಹೊರತು ಅದರ ಚರಿತ್ರೆಯ ಬಗ್ಗೆ ಅಲ್ಲ. ಇನ್ನು, ’ಸಂಕ್ಯಾಬಲವಿದ್ದರೆ ನುಡಿ ಅಳಿಯುವುದಿಲ್ಲ’ ಮತ್ತು ’ಆಡುಗರು ಅಳಿಯದಿದ್ದರೆ ನುಡಿ ಅಳಿಯುವುದಿಲ್ಲ’ ಎಂಬ ನಂಬಿಕೆಗಳ ಬಗ್ಗೆ ಕೊಂಚ ಯೋಚಿಸೋಣ. ಉದಾಹರಣೆಗಾಗಿ, ಮೆಕ್ಸಿಕೋ ದೇಶದಲ್ಲಿದ್ದ ಮತ್ತು ಇಡೀ ದಕ್ಶಿಣ ಅಮೆರಿಕದ ದೇಶಗಳಲ್ಲಿದ್ದ ಸ್ತಳೀಯ ಬಾಶೆಗಳ ಪಾಡು ಏನಾಯಿತು ಎಂಬುದನ್ನು ಒಂದಿಶ್ಟು ಗಮನಿಸೋಣ. ಆ ನಾಡುಗಳಿಗೆ ವಲಸೆ ಹೋದ ಅಯ್‍ರೋಪ್ಯರ ಸಂಕ್ಯೆ ಅಲ್ಲಿನ ಸ್ತಳೀಯರ ಸಂಕ್ಯೆಗೆ ಹೋಲಿಸಿದರೆ ಬಹಳ ಕಡಿಮೆ. ಆದರೂ, ಅಯ್‍ರೋಪ್ಯರ ಸ್ಪ್ಯಾನಿಶ್ ಮತ್ತು ಪೋರ‍್ಚುಗೀಸ್ ಬಾಶೆಗಳು ಸ್ತಳೀಯರ ಬಾಶೆಗಳನ್ನು ಬಗ್ಗು ಬಡಿದವು! ಈಗ ಅಲ್ಲಿ, ಎಲ್ಲೋ ಅಲ್ಲೊಂದು ಇಲ್ಲೊಂದು ಸ್ತಳೀಯ ಬಾಶೆಗಳು ಬರೀ ಮನೆಗಳಿಗೆ ಮತ್ತು ಹಟ್ಟಿಗಳಿಗೆ ಸೀಮಿತವಾಗಿ, ಇದ್ದೂ ಸತ್ತಂತೆ ಬಳಕೆಯಲ್ಲಿವೆ. ಅಶ್ಟಕ್ಕೂ ಅಯ್‍ರೋಪ್ಯರ ಬರವಿನಿಂದಾಗಿ ಅಮೆರಿಕ ಕಂಡದ ಸ್ತಳೀಯ ಜನರೇನೂ ಅಳಿದು ಹೋಗಲಿಲ್ಲ. ಅವರ ಸಂತತಿ ನಿರಂತರವಾಗಿ ಬಾಳಿ ಬದುಕಿಕೊಂಡೇ ಬಂದಿದೆ. ಆದರೆ, ಅವರ ಬಾಶೆಗಳು ಮಾತ್ರ ಇತಿಹಾಸದ ಪುಟಗಳನ್ನು ಸೇರಿಕೊಂಡಿವೆ. ಅಂದರೆ, ಆಡುಗರು ಅಳಿಯಲಿಲ್ಲ, ಆದರೆ ಅವರ ಬಾಶೆಗಳು ಅಳಿದವು. ಇದಕ್ಕೆ ಕಾರಣ ಏನು? ಸ್ತಳೀಯರು ವಲಸೆ ಬಂದ ಅಯ್‍ರೋಪ್ಯರ ಕಯ್ಯಲ್ಲಿ ಸೋತು ಆಳಿಸಿಕೊಂಡರು! ಪರಿಣಾಮವಾಗಿ ಅಯ್‍ರೋಪ್ಯರ ನುಡಿಗಳು ’ಉಪಯುಕ್ತ’ ಎನಿಸಿದುವು. ಸ್ತಳೀಯರ ನುಡಿಗಳು ’ಅನುಪಯುಕ್ತ’ ಎನಿಸಿದುವು. ಅಶ್ಟೇ ಕಾರಣ.
      ದೂರದ ಅಮೆರಿಕ ಕಂಡಗಳು ಬೇಡ. ಕನ್ನಡದ ಚರಿತ್ರೆಯನ್ನು ನೋಡಿದರೇ ಮೇಲಿನ ನಂಬುಗೆಗಳು ಎಶ್ಟರಮಟ್ಟಿಗೆ ಸರಿ ಎನ್ನುವ ಸಂದೇಹ ಮೂಡುತ್ತದೆ. ಹಲವಾರು ವಿದ್ವಾಂಸರ ಪ್ರಕಾರ ಮಹಾರಾಶ್ಟ್ರದಲ್ಲಿ ಮೊದಲು ಕನ್ನಡವೇ ಜನರ ಮಾತಾಗಿತ್ತು. ಆದರೆ, ಕಾಲಕ್ರಮೇಣ ಮರಾಟಿ ಅಲ್ಲಿ ಕನ್ನಡವನ್ನು ಅಳಿಸಿ ಹಾಕಿತು. ಈ ಸತ್ಯದ ಬಗ್ಗೆ ಡಾ.ಚಿದಾನಂದ ಮೂರ‍್ತಿಯವರು ಅವರ ’ಬ್ರುಹತ್ ಬಾಶಿಕ ಕರ‍್ನಾಟಕ’ ಎಂಬ ಓದುಗೆಯಲ್ಲಿ ವಿವರವಾಗಿ ಬರೆದಿದ್ದಾರೆ. ಇದರ ಅರ‍್ತ ಏನು? ಕನ್ನಡರೇನೂ ಮಹಾರಾಶ್ಟ್ರದಿಂದ ಎಲ್ಲಿಗೋ ಓಡಿ ಹೋಗಲಿಲ್ಲ. ಕನ್ನಡವನ್ನು ಬಿಟ್ಟು ಮರಾಟಿಯನ್ನು ಕಯ್ಗೆತ್ತಿಕೊಂಡರು, ಅಶ್ಟೆ. ಕನ್ನಡಿಗರ ಸಂಕ್ಯಾಬಲವಾಗಲೀ, ಮುಂದುವರೆದ ಅವರ ಸಂತತಿಗಳಾಗಲೀ ಅವರಿಗೆ ಕನ್ನಡವನ್ನು ಉಳಿಸಿಕೊಳ್ಳುವಲ್ಲಿ ನೆರವಾಗಲಿಲ್ಲ.
      ಕಡೆಯದಾಗಿ, ’ನುಡಿಗಳು ಹೊಳೆಗಳ ಹಾಗೆ. ಹರಿಯುತ್ತಲೇ ಇರುತ್ತವೆ. ಸಾಯುವುದಿಲ್ಲ’ ಎಂಬ ಅಬಿಪ್ರಾಯದ ಬಗ್ಗೆ ನನಗೆ ಹೊಳೆಯುವುದು ಇದು. ನಿಸರ‍್ಗದ ಇತಿಹಾಸದಲ್ಲಿ ನೂರಾರು ಹೊಳೆಗಳು ಬತ್ತಿಹೋಗಿವೆ. ಮನುಶ್ಯನ ಇತಿಹಾಸದಲ್ಲಿ ನೂರಾರು ನುಡಿಗಳು ಕಣ್ಮರೆಯಾಗಿವೆ. ಹಾಗಾಗಿ, ಹೊಳೆಗಳಾಗಲೀ ನುಡಿಗಳಾಗಲೀ ನೆಲೆಯಾದುವಲ್ಲ.
      ಒಬ್ಬ ಸಾಮಾನ್ಯ ಬಾಶಾಸಕ್ತನಾಗಿ ನನ್ನ ಅನಿಸಿಕೆ ಇದು - ’ಯಾವುದೇ ಬಾಶೆ, ಜನರ ಕಣ್ಣಿಗೆ ಉಪಯುಕ್ತ ಎನಿಸಿದರೆ ತಾನಾಗೇ ಉಳಿದುಕೊಳ್ಳುತ್ತದೆ. ಉಪಯುಕ್ತ ಅಲ್ಲ ಎನಿಸಿದರೆ, ಅದರ ಉಳಿವು ಅದರ ಆಡುಗರ ಇಚ್ಚಾಶಕ್ತಿಯನ್ನು ಅವಲಂಬಿಸಿರುತ್ತದೆ. ಆಡುಗರ ಬೆಂಬಲವಿಲ್ಲದಿದ್ದರೆ ಯಾವುದೇ ನುಡಿಯಾಗಲೀ ಉಳಿಯುವುದಿಲ್ಲ. ಸಂಕ್ಯಾಬಲ ಮುಂತಾದ ವಾದಗಳಿಗೆ ಅಶ್ಟಿಶ್ಟು ಹುರುಳಿರಬಹುದು. ಆದರೆ, ಆಡುಗರ ಇಚ್ಚಾಶಕ್ತಿಯಶ್ಟು ಮುಕ್ಯ ಅವು ಎಂದೆಂದೂ ಅಲ್ಲ’. ಹಾಗಾಗಿ, ಪ್ರಶ್ನೆ ಇದು - ಕನ್ನಡಿಗರಿಗೆ ಕನ್ನಡವನ್ನು ಉಳಿಸಿಕೊಳ್ಳುವ ಇಚ್ಚಾಶಕ್ತಿ ಇದೆಯೆ? ಇದ್ದರೆ ಕನ್ನಡಕ್ಕೆ ಕುಂದಿಲ್ಲ.
      ಇಶ್ಟೆಲ್ಲಾ ಸಂದೇಹಗಳಿದ್ದರೂ, ಮೇಲಿನ ನುಡಿಯರಿಗರು ಕಂಡಿರುವ ಕಾಣ್ಕೆ ಕನ್ನಡದ ಪಾಲಿಗೆ ಸರಿಗಾಣ್ಕೆಯಾಗಲಿ ಎಂದೇ ನಾನು ಬಯಸುತ್ತೇನೆ. ಅಳಿದುಳಿದಿರುವ ಕೆಲವೇ ದ್ರಾವಿಡ ಸೊಲ್ಲುಗಳಲ್ಲಿ ಮುಕ್ಯವೆನಿಸಿರುವ ನಮ್ಮ ಕನ್ನಡ ನುಡಿಗೆ ಕೊನೆ ಎಂದೂ ಬಾರದಿರಲಿ ಎಂದೇ ನಾನು ಹಾರಯ್ಸುತ್ತೇನೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಭಾನುವಾರ, ಆಗಸ್ಟ್ 25, 2013

ತೆಲಂಗಾಣವೆಂಬ ಎಚ್ಚರಿಕೆಯ ಗಂಟೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕೆಲ ದಿನಗಳ ಹಿಂದೆ ನನ್ನ ಗೆಳೆಯರೊಬ್ಬರು ನನಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ನೆರೆಯ ತೆಲುಗುನಾಡು ತೆಲಂಗಾಣದ ಸಲುವಾಗಿ ಇರುಪೋಳು ಆಗುತ್ತಿರುವ ಸಂಗತಿ ಅವರಿಗೆ ತುಂಬಾ ನೋವನ್ನುಂಟು ಮಾಡಿತ್ತು. ಹಾಗಂತ ಅವರೇನೂ ತೆಲುಗರಲ್ಲ. ನನ್ನ ಹಾಗೇ ಕನ್ನಡಿಗರು. ಆದರೆ, ದ್ರಾವಿಡ ಅರಿಮೆ ಇರುವ ಕನ್ನಡಿಗರು.
      "ನಾವು ದ್ರಾವಿಡರೆಲ್ಲ ಒಂದಾಗಬೇಕು ಅಂತ ನಾವು ಅಂದುಕೊಂಡರೆ, ಒಂದೇ ಬಾಶೆ ಆಡುವ ತೆಲುಗರೇ ಎರಡು ಹೋಳಾಗಲಿಕ್ಕೆ ಹೊರಟಿದ್ದಾರಲ್ಲಾ, ಈ ದಡ್ಡತನಕ್ಕೆ ಏನು ಹೇಳೋದು, ರಾಜ್?", ಎಂದು ನನಗೆ ಪ್ರಶ್ನೆ ಹಾಕಿದರು. "ಈ ತೆಲುಗು ಮಂದಿಗೆ ಗಟ್ಟಿಯಾದ ಒಂದು ತೆಲುಗು ಅಯ್‍ಡೆಂಟಿಟಿ ಅನ್ನೋದು ಇದ್ದಿದ್ದರೆ ತಮ್ಮ ನೆಲವನ್ನೇ ಎರಡು ಹೋಳು ಮಾಡಲಿಕ್ಕೆ ಹೋಗುತ್ತಿದ್ದರೆ? ಇದಕ್ಕೆಲ್ಲಾ ತೆಲುಗು ಬಾಶೆಯ ಸಂಸ್ಕ್ರುತೀಕರಣ ಕಾರಣ, ಆರ‍್ಯಮಯವಾದ ತೆಲುಗು ಸಾಹಿತ್ಯ ಕಾರಣ", ಎಂದು ವಿಶಯದ ಬಗ್ಗೆ ತಮ್ಮ ತೀರ‍್ಮಾನವನ್ನೂ ಹೇಳಿದರು.
      ತೆಲಂಗಾಣದ ಬೇರ‍್ಪಡಿಕೆಗೂ ತೆಲುಗಿನ ಸಂಸ್ಕ್ರುತೀಕರಣಕ್ಕೂ ಎಲ್ಲಿಯ ನಂಟು ಎಂಬುದು ನನಗೆ ಕೂಡಲೇ ಹೊಳೆಯಲಿಲ್ಲ. "ತೆಲಂಗಾಣ ಬೇರೆ ಆಗುತ್ತಿರುವುದಕ್ಕೆ ಆರ‍್ತಿಕ ಅಸಮಾನತೆ ಕಾರಣ ಅಲ್ಲವೆ? ಬಹಳ ಹಿಂದಿನಿಂದಲೂ ತೆಲಂಗಾಣ ಪ್ರಾಂತ್ಯದ ಅಬಿವ್ರುದ್ದಿಯ ಬಗ್ಗೆ ಉಳಿದ ತೆಲುಗರು ನಿರ‍್ಲಕ್ಶ್ಯ ಮಾಡಿದ್ದಾರೆ. ಸಾಲದುದಕ್ಕೆ ತೆಲಂಗಾಣದ ತೆಲುಗನ್ನು ಕಳಪೆ ತೆಲುಗು ಎಂದು ಕೂಡ ಆಡಿಕೊಂಡು ಬಂದಿದ್ದಾರೆ. ದಶಕಗಳಿಂದ ಈ ಬಗ್ಗೆ ತೆಲಂಗಾಣದ ಮಂದಿ ತಮ್ಮ ಅಸಮಾದಾನವನ್ನು ವ್ಯಕ್ತಪಡಿಸಿಕೊಂಡು ಬಂದಿದ್ದಾರೆ. ಇದೆಲ್ಲದರ ಜೊತೆಗೆ ಈ ನಡುವೆ ಹಯ್ದರಾಬಾದು ನಗರಕ್ಕೆ ಹಣದ ಹೊಳೆಯೇ ಹರಿದಿದೆ. ಆ ಹಣವನ್ನು ಹೊಡೆದುಕೊಳ್ಳುವ ಆಲೋಚನೆ ಇರುವ ಸ್ತಳೀಯ ಪುಡಾರಿಗಳ ಹಂಚಿಕೆಯೂ ತೆಲಂಗಾಣದ ಪ್ರತ್ಯೇಕತೆಯಲ್ಲಿ ಸೇರಿಕೊಂಡಿದೆ. ತೆಲಂಗಾಣದ ಬೇರ‍್ಪಡಿಕೆಗೆ ಇವು ಕಾರಣಗಳು ಅಂತ ಎಲ್ಲರೂ ಹೇಳೋದು. ನೀವು ಹೇಳುವ ಹಾಗೆ ತೆಲುಗಿನ ಸಂಸ್ಕ್ರುತೀಕರಣ ಇರಲಾರದು", ಎಂದು ನಾನು ಅವರ ತೀರ‍್ಮಾನಕ್ಕೆ ಪ್ರತಿ ಹೇಳಿದೆ.
      "ಅಯ್ಯೋ! ನಾನು ಹೇಳೋದು ದ್ರಾವಿಡತನ ಇರೋ ನಿಮಗೂ ಅರ‍್ತವಾಗ್ತಾ ಇಲ್ವಲ್ಲಾ!", ಎಂದು ಆಕ್ಶೇಪಣಿಯ ದನಿಯಲ್ಲಿ ಉದ್ಗಾರ ತೆಗೆದು ನನ್ನ ಗೆಳೆಯರು ಅವರ ವಾದದ ಅರ‍್ತ ಏನೆಂಬುದನ್ನು ವಿವರಿಸಿದರು. "ನೋಡಿ ರಾಜ್, ತೆಲುಗರಿಗೆ, ’ನಾವು ಎಲ್ಲಕ್ಕೂ ಮೊದಲು ತೆಲುಗರು. ನಾವು ಒಂದೇ ಜನ. ನಮ್ಮ ನಿಶ್ಟೆ ಎಂದೂ ನಮ್ಮ ತೆಲುಗುತನಕ್ಕೇ’ಎಂಬ ಗಟ್ಟಿಯಾದ ’ತೆಲುಗು ಅಯ್‍ಡೆಂಟಿಟಿ’ ಇದ್ದಿದ್ದರೆ, ತೆಲಂಗಾಣದ ಅಬಿವ್ರುದ್ದಿಯನ್ನು ಅವರು ಕಡೆಗಣಿಸುತ್ತಿರಲಿಲ್ಲ. ತೆಲಂಗಾಣದ ತೆಲುಗನ್ನು ಕಳಪೆ ಅಂತ ಆಡಿಕೊಳ್ಳುತ್ತಿರಲಿಲ್ಲ. ಅಶ್ಟಕ್ಕೂ ತೆಲಂಗಾಣದ ಹೋರಾಟ ನೆನ್ನೆ ಮೊನ್ನೆಯದಲ್ಲ. ನಲ್ವತ್ತು ವರ‍್ಶಗಳಶ್ಟು ಹಳೆಯದು. ನಿಜವಾದ ತೆಲುಗುತನ ತೆಲುಗರಿಗೆ ಇದ್ದಿದ್ದರೆ ಅಶ್ಟು ಸಮಯದಲ್ಲಿ ತೆಲಂಗಾಣದ ಸಮಸ್ಯೆಯನ್ನು ಅವರು ಬಗೆಹರಿಸಿಕೊಂಡಿರುತ್ತಿದ್ದರು. ಈ ಮಾತನ್ನಾದರೂ ನೀವು ಒಪ್ಪಬೇಕು ತಾನೆ?"
      "ಮನುಶ್ಯರು ಎಶ್ಟೇ ಆಗಲಿ ಸ್ವಾರ‍್ತಿಗಳು. ಅವರ ಸ್ವಾರ‍್ತ ಅವರ ಕಯ್ಯಲ್ಲಿ ಯಾವ್ಯಾವಾಗ ಏನೇನು ಮಾಡಿಸುತ್ತೆ ಅಂತ ಹೇಳಲಿಕ್ಕೆ ಬರೋದಿಲ್ಲ. ಅಚಲವಾದ ತೆಲುಗು ಅಯ್‍ಡೆಂಟಿಟಿ ಅನ್ನೋದೊಂದು ತೆಲುಗರಲ್ಲಿ ಇದ್ದಿದ್ದರೆ ತೆಲುಗುನಾಡಿನಲ್ಲಿ ಎಲ್ಲಾ ಸರಿ ಇರುತ್ತಿತ್ತು ಅನ್ನೋದು ತುಂಬಾ ಸರಳ ದ್ರುಶ್ಟಿಯ ವಾದ ಅಂತ ನನಗೆ ಅನಿಸುತ್ತೆ. ಆದರೂ ಈ ವಾದವನ್ನು ಸುಮ್ಮನೆ ಬದಿಗೆ ಸರಿಸಲಿಕ್ಕೆ ಆಗೋದಿಲ್ಲ. ಅದರಲ್ಲಿ ಸತ್ಯದ ಎಳೆ ಇರೋ ಹಾಗಿದೆ. ಆದರೆ, ಇದರಲ್ಲಿ ತೆಲುಗು ಬಾಶೆಯ ಸಂಸ್ಕ್ರುತೀಕರಣದ ಪಾತ್ರ ಏನು ಅನ್ನೋದು ಮಾತ್ರ ಇನ್ನೂ ನನಗೆ ತಿಳೀತಿಲ್ಲ!", ಎಂದು ನನ್ನ ಸಂದೇಹವನ್ನು ಮತ್ತೆ ಅವರ ಮುಂದಿಟ್ಟೆ.
      "ಸಂಸ್ಕ್ರುತೀಕರಣದ ಪಾತ್ರ ಇದೆ. ನೋಡೀ, ಮೊದಮೊದಲು ನೂರಾರು ವರ‍್ಶ ತೆಲುಗಿನಲ್ಲಿ ಸಾಹಿತ್ಯ ಬರೆದವರೆಲ್ಲಾ ಸಂಸ್ಕ್ರುತ ಬಾಶೆಯ ಮೇಲೆ ಅಪಾರ ಗವ್ರವ ಇಟ್ಟುಕೊಂಡವರು. ಆರ‍್ಯ ಸಂಸ್ಕ್ರುತಿಯೇ ಇಡೀ ದೇಶದ ಸಂಸ್ಕ್ರುತಿ ಅಂತ ನಂಬಿಕೊಂಡವರು. ಅವರಿಗೆ ತೆಲುಗರ ದ್ರಾವಿಡತನದ ಬಗ್ಗೆ ಗೊತ್ತಿರಲಿಲ್ಲ. ಗೊತ್ತಿದ್ದರೂ ಅದನ್ನು ಲೆಕ್ಕಕ್ಕೆ ಇಡಲಿಲ್ಲ. ತೆಲುಗಿನ ಹೆಸರಿನಲ್ಲಿ ಬರೀ ಸಂಸ್ಕ್ರುತ ಪದಗಳನ್ನು ಗಿಡಿದು ’ತೆಲುಗು’ ಸಾಹಿತ್ಯ ರಚಿಸಿದರು. ಉತ್ತರದ ರಾಮಾಯಣ ಮಹಾಬಾರತದಂತಾ ಕತೆಗಳನ್ನೇ ಮತ್ತೆ ಮತ್ತೆ ತೆಲುಗಿನಲ್ಲಿ ಬರೆದು ’ಇದು ತೆಲುಗು ಸಾಹಿತ್ಯ’ ಎಂದು ಕರೆದರು. ಸಂಸ್ಕ್ರುತದಂತಾ ಬಾಶೆ ಇನ್ನೊಂದಿಲ್ಲ, ಆರ‍್ಯ ಸಂಸ್ಕ್ರುತಿಯೇ ಸಂಸ್ಕ್ರುತಿ ಅಂತ ಸಾಮಾನ್ಯ ತೆಲುಗರಿಗೆ ಶತಮಾನಗಳ ಕಾಲ ಒತ್ತುಣಿಸಿದರು. ತೆಲುಗರಲ್ಲಿ ತೆಲುಗಿನ ಅಬಿಮಾನ ಮೂಡಿಸುವ ಬದಲು ಅವರದಲ್ಲದ ಬಾರತದ ಅಬಿಮಾನ ತುಂಬಿಸಿದರು. ಬಾರತದ ಅಬಿಮಾನ ಮತ್ತು ತೆಲುಗು ಅಬಿಮಾನ ಬೇರೆಬೇರೆಯೇ ಅಲ್ಲ ಅನ್ನೋ ಹಾಗೆ ಗೊಂದಲ ಸ್ರುಶ್ಟಿ ಮಾಡಿದರು. ಇಂತಾ ಪರಿಸ್ತಿತಿಯಲ್ಲಿ ನಿಜವಾದ ’ತೆಲುಗು ಅಯ್‍ಡೆಂಟಿಟಿ’ ಹೇಗೆ ತಾನೆ ಬೆಳೆಯಲಿಕ್ಕೆ ಸಾದ್ಯ?", ಎಂದು ನನ್ನ ಗೆಳೆಯರು ಅವರ ವಾದವನ್ನು ಬಿಡಿಸಿ ಹೇಳಿದರು.
      ಅವರ ಈ ವಿವರಣೆ ಕೇಳಿದ ಮೇಲೆ ಅವರ ವಾದದಲ್ಲಿ ನಿಜಕ್ಕೂ ಹುರುಳಿದೆ ಎನಿಸಿತು. "ನಿಮ್ಮ ವಾದದ ಓಟ ಏನು ಅನ್ನೋದು ನನಗೆ ಈಗ ಗೊತ್ತಾಯಿತು. ನಿಮ್ಮ ವಾದ ಗಂಬೀರವಾಗಿ ಪರಿಗಣಿಸಬೇಕಾದದ್ದೇ. ನಿಮ್ಮ ವಾದ ತೆಲುಗಿಗೆ ಮಾತ್ರವಲ್ಲ, ಒಟ್ಟಾರೆ ಬಾರತದ ಎಲ್ಲ ಬಾಶೆಗಳಿಗೂ ಅನ್ವಯವಾಗುತ್ತೆ ಅಂತ ಅನಿಸುತ್ತೆ", ಎಂದು ಕೊಂಚ ಒಮ್ಮತ ಸೂಚಿಸಿದೆ.
      "ಹವ್‍ದು! weak identity ವಾದ ಎಲ್ಲ ಬಾಶೆಗಳಿಗೂ ಅನ್ವಯವಾಗುತ್ತೆ. ಅದರಲ್ಲೂ, ಮುಕ್ಯವಾಗಿ ಕನ್ನಡಕ್ಕೆ ಕಟುವಾಗೇ ಅನ್ವಯವಾಗುತ್ತೆ. ಕನ್ನಡದಲ್ಲಿ ಆಗಿರೋದೂ ಇದೇನೆ. ಕನ್ನಡದ ಸಾಹಿತಿಗಳಿಗೆ, ಚಿಂತಕರಿಗೆ, ಮಟಾದೀಶರಿಗೆ, ಮುಂದಾಳುಗಳಿಗೆ ಕನ್ನಡಿಗರ ದ್ರಾವಿಡತನವಾಗಲೀ ಕನ್ನಡತನವಾಗಲೀ ಚರಿತ್ರೆಯುದ್ದಕ್ಕೂ ಯಾವತ್ತೂ ಮುಕ್ಯವಾಗಿಲ್ಲ. ಹಳೆಯ ಸಾಹಿತಿಗಳು ಉತ್ತರದ ಹಳಸಲು ಕತೆಗಳನ್ನೇ ಕನ್ನಡದಲ್ಲಿ ಬರೆದು ’ಕನ್ನಡ’ಸಾಹಿತ್ಯ ಅಂತ ಕರೆದರು. ಕನ್ನಡದ ತುಂಬಾ ಸಂಸ್ಕ್ರುತ ಪದಗಳನ್ನು ತುರುಕಿಟ್ಟರು. ಈಚೆಗೆ ನಮ್ಮ ಮುಂದಾಳುಗಳು ದೇಶದ ಒಗ್ಗಟ್ಟಿನ ನೆವದಲ್ಲಿ ತ್ರಿಬಾಶಾ ಸೂತ್ರಕ್ಕೆ ಒಪ್ಪಿಗೆ ಕೊಟ್ಟು ಕನ್ನಡಿಗರಿಗೆ ಹಿಂದಿ ಕಲಿಸಿ, ಅದರ ಮೂಲಕ ಹಿಂದೀ ವಲಸಿಗರಿಗೆ ಅನುಕೂಲ ಮಾಡಿಕೊಟ್ಟರು. ಇನ್ನು ಸಂಸ್ಕ್ರುತ ವಿಶ್ವವಿದ್ಯಾಲಯ ಬೇರೆ ಕಟ್ಟುತ್ತಾರಂತೆ. ಹೀಗೆ ನಾಡಿನ ನಡೆನುಡಿಗಳನ್ನು ಎಡ್ಡಾದಿಡ್ಡಿ ಕಡೆಗಣಿಸಿದರೆ ಗೊಂದಲವಿಲ್ಲದ ’ಕನ್ನಡ ಅಯ್‍ಡೆಂಟಿಟಿ’ ಅನ್ನೋದು ಎಲ್ಲಿಂದ ಬರುತ್ತದೆ? ನಮ್ಮಲ್ಲೂ ಕೆಲವು ಪ್ರದೇಶಗಳು ಹಿಂದುಳಿದಿವೆ. ಅವುಗಳ ಮುನ್ನಡೆಗೆ ಉಳಿದ ಪ್ರದೇಶಗಳು ಸ್ವಾರ‍್ತ ಬಿಟ್ಟು ಗಮನ ಹರಿಸಬೇಕು. ಇಂತಾ ನಿಸ್ವಾರ‍್ತ ನಿಲುವನ್ನು ತೆಗೆದುಕೊಳ್ಳೋದಕ್ಕೆ, ’ನಾವು ಕನ್ನಡಿಗರು ಒಂದೇ ಮಂದಿ. ನಮಗೆ ನಮ್ಮ ನಾಡಿನ ನಡೆನುಡಿ ಮುಕ್ಯ. ನಮ್ಮ ನಿಶ್ಟೆ ನಮ್ಮ ನಾಡಿಗೆ ಅಶ್ಟೆ’ ಅನ್ನೋ ಒಂದು ಕಡುವಾದ ಕನ್ನಡ ಅಯ್‍ಡೆಂಟಿಟಿ ಬೇಕೇ ಬೇಕು. ಇಲ್ಲದಿದ್ದರೆ ತೆಲಂಗಾಣದಂತಾ ದುರಂತ ನಮ್ಮಲ್ಲೂ ಆಗಬಹುದು", ಎಂದು ನುಡಿದು ನನ್ನ ಗೆಳೆಯರು ಚರ‍್ಚೆ ಮುಗಿಸಿದರು.
      ನಾಡಿನ ಮುನ್ನಡೆಯಲ್ಲಿ ಪ್ರಾದೇಶಿಕ ಅಸಮಾನತೆ, ಕನ್ನಡಿಗರ ಬಗ್ಗೆ ಕಿಂಚಿತ್ತೂ ಆದರವಿಲ್ಲದ ಹೊರಗಿನವರ ಮಿತಿಮೀರಿದ ವಲಸೆ, ದೆಹಲಿಯ ಒಡೆಯರ ಮುಂದೆ ತೊತ್ತುಗಳಂತೆ ಕಯ್ಕಟ್ಟಿ ನಿಲ್ಲುವ ನಮ್ಮ ’ಮುಂದಾಳುಗಳು’ - ಇವು ಇತ್ತೀಚಿನ ದಶಕಗಳಲ್ಲಿ ನಾವು ಕಂಡಿರುವ ವಾಸ್ತವಗಳು. ಈ ವಾಸ್ತವಗಳ ಎದುರು ನಮ್ಮ ಗೆಳೆಯರು ಒಡ್ಡಿದ ವಾದದ ತಿರುಳನ್ನೂ ಪ್ರಸ್ತುತತೆಯನ್ನೂ ಅಲ್ಲಗಳೆಯಲು ಆದೀತೆ? ನೀವೇ ಹೇಳಿ!

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶನಿವಾರ, ಆಗಸ್ಟ್ 10, 2013

Frankenstein ಪದಗಳು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಇತ್ತೀಚೆಗೆ ಟೀವೀಯಲ್ಲಿ ಸುದ್ದಿ ಕಾರ‍್ಯಕ್ರಮವೊಂದನ್ನು ನೋಡುತ್ತಿದ್ದೆ. ಸುದ್ದಿ ಓದುತ್ತಿದ್ದ ಆಳು ಯಾವುದೋ ಸುದ್ದಿಯೊಂದನ್ನು ಓದಿ, ಅದು ’ನಂಬಿಕಾರ‍್ಹ’ ಮೂಲಗಳಿಂದ ಸಿಕ್ಕಿದುದು ಎಂದು ಹೇಳಿಕೊಂಡರು. ಆ ’ನಂಬಿಕಾರ‍್ಹ’ ಎಂಬ ಪದವನ್ನು ಕೇಳಿದೊಡನೆ ನನ್ನಲ್ಲಿ ಹಲವಾರು ’ಒಳ್ಳೆಯವು’ ಎಂದು ಹೇಳಲಾರದ ಬಾವನೆಗಳು ಒಟ್ಟಿಗೇ ಮೂಡಿದವು. ಹಿಂದೊಮ್ಮೆ ’ನಂಬಲಾರ‍್ಹ’ ಎಂಬ ಇಂತಹುದೇ ಇನ್ನೊಂದು ಪದವನ್ನು ಕೇಳಿದ್ದು ಕೂಡಾ ನನ್ನ ನೆನಪಿಗೆ ಬಂತು. ಮೊದಲೆಲ್ಲಾ ಇಂತಹ ಪದಗಳನ್ನು ಕೇಳಿದಾಗ ನನಗೆ ಸಿಟ್ಟೇ ಬರುತ್ತಿತ್ತು. ಈಗಲಾದರೋ, ವಯಸ್ಸಿಗೆ ಅನುಗುಣವಾಗಿ ಮೆದುವಾಗಿರುವುದರಿಂದಲೋ ಇಲ್ಲ ಸೋಲನ್ನು ಹೆಚ್ಚುಕಡಿಮೆ ಒಪ್ಪಿಕೊಂಡಿರುವುದರಿಂದಲೋ, ಇಂತಹ ಪದಗಳನ್ನು ಕೇಳಿದರೆ ನನ್ನಲ್ಲಿ ಸಿಟ್ಟಿನ ಬದಲು ’ಅಯ್ಯೋ ಪಾಪ’ ಎನ್ನುವ ಉದ್ಗಾರಕ್ಕೆ ಹೊಂದುವ ಬಾವನೆಗಳು ಏಳುತ್ತವೆ. ಏಕೆ ಎಂದು ಕೇಳುತ್ತೀರಾ? ಹೇಳುತ್ತೇನೆ ಕೇಳಿ.
      ಕನ್ನಡ ನುಡಿಯಲ್ಲಿ ಬಳಕೆಯಾಗುತ್ತಿರುವ ಪದಗಳಲ್ಲಿ ಕನ್ನಡದ್ದೇ ಆದ ’ಅಚ್ಚಗನ್ನಡ’ ಎಂದು ಕರೆಸಿಕೊಳ್ಳುವ ಕಯ್, ಕಣ್ಣು, ಕೋಳಿ, ನಾಯಿ, ಮಳೆ, ಹೊಳೆ ಮುಂತಾದ ಪದಗಳಿವೆ. ಇವುಗಳ ಜೊತೆಗೆ ಹೊರನುಡಿಗಳಿಂದ ಎರವಲಾಗಿ ಬಂದ ದೀಪ, ಆಕಾಶ, ಪೆನ್ನು, ಮೇಜು ಮುಂತಾದ ’ಆಮದು’ ಪದಗಳಿವೆ. ಈ ಎರಡು ಬಗೆಯ ಪದಗಳಲ್ಲಿ ಅಸಹಜವಾದದ್ದು ಏನೂ ಇಲ್ಲ. ಆದರೆ, ಇವರೆಡು ಬಗೆಗಳಿಗೆ ಹೊರತಾಗಿ ಇನ್ನೊಂದು ಬಗೆಯ ಪದಗಳಿವೆ. ಈ ಪದಗಳನ್ನು ಸಹಜ ಎನ್ನಬೇಕೋ, ಅಸಹಜ ಎನ್ನಬೇಕೋ, ನನಗೆ ಸುಲಬವಾಗಿ ತೋಚುವುದಿಲ್ಲ. ಮೇಲೆ ತಿಳಿಸಿದ ’ನಂಬಿಕಾರ‍್ಹ’ ಎನ್ನುವುದು ಈ ಗುಂಪಿಗೆ ಸೇರಿದ್ದು. ಯಾವುದೇ ಕಿಡಿಗೇಡಿತನವಿಲ್ಲದೆ ಕೆಲ ಜನರಿಂದ ತಾನೇ ತಾನಾಗಿ ಇಂತಹ ಪದಗಳ ಸ್ರುಶ್ಟಿ ಆಗಿರುವುದರಿಂದ, ಇಂತಹ ಪದಗಳನ್ನೂ ’ಸಹಜ’ ಎಂದೇ ಕರೆಯಬೇಕಾಗಬಹುದು. ಆದರೆ, ಇಂತಹ ಪದಗಳು ’ಸರಿ’ ಎನ್ನುವುದು ಮಾತ್ರ ನನ್ನಂತಹ ಮನೋಬಾವನೆಯವರಿಗೆ ಸಾದ್ಯವಿಲ್ಲ.
      ಅದೇನು ಈ ’ನಂಬಿಕಾರ‍್ಹ’ ಎನ್ನುವ ಪದದಲ್ಲಿ ಆಗಿರುವ ಅಂತಾ ಎಡವಟ್ಟು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಹೀಗಿದೆ ನೋಡಿ. ’ನಂಬಿಕಾರ‍್ಹ’ ಪದ ಕನ್ನಡದ ’ನಂಬಿಕೆ’ ಎನ್ನುವ ಪದಕ್ಕೆ ’ಅರ‍್ಹ’ ಎನ್ನುವ ಸಂಸ್ಕ್ರುತ ಪದವನ್ನು ಯಾರೂ ಕಂಡುಕೇಳರಿಯದ ಸೊಲ್ಲರಿಮೆಯ (ವ್ಯಾಕರಣದ) ಕಟ್ಟಳೆಯ ಪ್ರಕಾರ ಅಂಟಿಸಿ ಮಾಡಿಕೊಂಡ ಪದ! ’ವಿಶ್ವಾಸಾರ‍್ಹ’ ಎಂಬ ಸರಿಯಾದ ರೀತಿಯಲ್ಲಿ ಮಾಡಿಕೊಂಡ ಸಂಸ್ಕ್ರುತ ಪದ ಒಂದಿದೆ. ಅದನ್ನೇ ಅನುಕರಿಸ ಹೊರಟು ಕನ್ನಡ ಸರಿಯಾಗಿ ತಿಳಿಯದವರು ಯಾರೋ ಮಾಡಿಟ್ಟ ತಪ್ಪುತಪ್ಪು ಪದ ಈ ನಮ್ಮ ’ನಂಬಿಕಾರ‍್ಹ’ ಪದ. ಮೊದ್ದು ಅನುಕರುಣೆಯಿಂದಾಗಿ ಇಂತಹ ಪದಗಳ ಟಂಕಣೆ ಆಗಾಗ್ಗೆ ಕನ್ನಡದಲ್ಲಿ ಆಗಿದೆ, ಆಗುತ್ತಿರುತ್ತದೆ. ಎತ್ತುಗೆಗೆ (ಉದಾಹರಣೆಗೆ), ’ಊಟೋಪಚಾರ’ ಎನ್ನುವ ಇನ್ನೊಂದು ಪದವಿದೆ. ಇದಂತೂ ತುಂಬಾ ಸ್ವಾರಸ್ಯವುಳ್ಳ ಪದ. ಇಲ್ಲಿ ಕನ್ನಡದ ’ಊಟ’ ಮತ್ತು ಸಂಸ್ಕ್ರುತದ ’ಉಪಚಾರ’ ಎಂಬ ಪದಗಳನ್ನು ಸಂಸ್ಕ್ರುತ ಸೊಲ್ಲರಿಮೆಯ ’ಗುಣ ಸಂದಿ’ ಎಂಬ ಕಟ್ಟಳೆಗೆ ಒಳಪಡಿಸಿ, ’ಊಟೋಪಚಾರ’ ಎಂದು ಯಾರೋ ಕಡುಜಾಣರು ಇಶ್ಟೆಲ್ಲಾ ತಿಳಿಯದೆಯೇ ಸಮೆದಿದ್ದಾರೆ! ಇವರ ಪ್ರತಿಬೆಗೆ ತಕ್ಕ ಪ್ರಶಸ್ತಿಯನ್ನು ಕೊಡಬೇಕು! ಈ ಪದದ ಬಳಕೆ ಸಾಮಾನ್ಯವಾಗಿ ಮದುವೆಗೆ ಪತ್ತಿದ ಬರಹಗಳಲ್ಲಿ ಕಾಣಬರುತ್ತದೆ. ಹಾಗಾಗಿ, ಸಂಸ್ಕ್ರುತದ ’ವರೋಪಚಾರ’ ಎಂಬ ಪದದ ದಡ್ಡ ಅನುಕರಣೆಯೇ ’ಊಟೋಪಚಾರ’ ಪದದ ಬರವಿಗೆ ಕಾರಣ ಎಂದು ಊಹಿಸುವುದು ಕಶ್ಟವಲ್ಲ. ಈ ತೆರನ ಅಮಾಯಕ ಅನುಕರಣೆಯಿಂದ ’ದೊಡ್ಡಸ್ತಿಕೆ’, ’ನೆಂಟಸ್ತಿಕೆ’, ’ಚಿಪ್ಪೇಂದ್ರಿಯ (chip + ಇಂದ್ರಿಯ)’ ಮುಂತಾದ ಇನ್ನೂ ಕೆಲ ಪದಗಳು ಕನ್ನಡದಲ್ಲಿ ಸ್ರುಶ್ಟಿಯಾಗಿವೆ.
      ಈ ರೀತಿ, ಕನ್ನಡದ ಪದಕ್ಕೆ ಬೇರೆ ಬಾಶೆಯ ಪದವನ್ನು ಅಂಟಿಸಿ ಮಾಡಿಕೊಳ್ಳುವ ಪದಗಳಿಗೆ ನಾನು ’ಪ್ರಾಂಕನ್‍ಸ್ಟಯ್ನ್’ (frankenstein) ಪದಗಳು ಎಂದು ಕರೆಯುತ್ತೇನೆ (Dr. Frankenstein ಎಂಬ ಒಬ್ಬ ಹುಚ್ಚು ವಿಜ್ನಾನಿ ಬೇರೆ ಬೇರೆ ಹೆಣಗಳಿಂದ ಅವಯವಗಳನ್ನು ಆಯ್ದು ಒಟ್ಟಿಗೆ ಸೇರಿಸಿ ಒಬ್ಬ ಕ್ರುತಕ ಮನುಶ್ಯನನ್ನು ಮಾಡಿದ ಎಂಬುದು ಪಡುವಲ ನುಡಿಪಿನಲ್ಲಿ, ಅಂದರೆ ಪಾಶ್ಚಾತ್ಯ ಸಾಹಿತ್ಯದಲ್ಲಿ, ಮೂಡಿಬಂದ ಒಂದು ಕತೆ). ಪ್ರಾಂಕನ್‍ಸ್ಟಯ್ನ್ ಪದಗಳು ಕನ್ನಡದಲ್ಲಿ ಬಹು ಹಿಂದಿನಿಂದಲೂ ಇವೆ. ಕನ್ನಡದ ಮೊತ್ತಮೊದಲ ಬರಹವಾದ ಪಲ್ಮಿಡಿ ಶಾಸನದಲ್ಲೇ ’ಪೆತ್ತಜಯನ್’ ಎಂಬ ಪ್ರಾಂಕನ್‍ಸ್ಟಯ್ನ್ ಪದವಿದೆ! ಕನ್ನಡದ ಪದಗಳ ಕೊನೆಗೆ ಸಂಸ್ಕ್ರುತದ ಒಟ್ಟುಗಳನ್ನು (ಪ್ರತ್ಯಯಗಳನ್ನು) ಅಂಟಿಸುವುದಂತೂ ನಮ್ಮಲ್ಲಿ ತುಂಬಾ ಹಳೆಯ ವಾಡಿಕೆ. ಸಮಗಾರ (ಕಾರ), ಹಣವಂತ (ವಂತ < ಮತ್),  ಕೂದಲುಮಯ (ಮಯ) ಮುಂತಾದ ಪದಗಳು ಕನ್ನಡದಲ್ಲಿ ಸಾಕಶ್ಟಿವೆ. ಇನ್ನು ’ಕಸುಬುದಾರ’, ’ಗುತ್ತಿಗೆದಾರ’ ಮುಂತಾದ ಪದಗಳಲ್ಲಿ ಕನ್ನಡದ್ದಲ್ಲದ ’ದಾರ್’ ಎಂಬ ಹಿನ್ನೊಟ್ಟಿನ ಬಳಕೆಯಾಗಿದೆ. ಹಿನ್ನೊಟ್ಟುಗಳನ್ನು ಬಳಸುವುದು ಸರಿ ಎಂದ ಮೇಲೆ ಬೇರೆ ನುಡಿಗಳ ಮುನ್ನೊಟ್ಟುಗಳನ್ನೂ ಏಕೆ ಬಳಸಬಾರದು? ಹೀಗೆ ಪ್ರಶ್ನೆ ಕೇಳಿಕೊಂಡೋ ಎಂಬಂತೆ ಈಗೀಗ ನಾವು ಸಂಸ್ಕ್ರುತದ ಪ್ರತ್ಯಯಗಳನ್ನು ಕನ್ನಡದ ಪದಗಳ ಮೊದಲಿಗೂ ಹಚ್ಚುತ್ತಿದ್ದೇವೆ. ಸನ್ನಡತೆ, ದುರ‍್ಬಳಕೆ, ಪುನರ‍್ಬಳಕೆ ಮುಂತಾದವು ಇದಕ್ಕೆ ಎತ್ತುಗೆ. ಅಶ್ಟಕ್ಕೇ ನಾವು ಸುಮ್ಮನಾಗಿಲ್ಲ. ಕನ್ನಡಕ್ಕೆ ಸಂಸ್ಕ್ರುತದ ಒಟ್ಟುಗಳನ್ನು ಅಂಟಿಸಿದ ಹಾಗೇ ಸಂಸ್ಕ್ರುತಕ್ಕೆ ಕನ್ನಡದ ಒಟ್ಟುಗಳನ್ನು ಏಕೆ ಅಂಟಿಸಬಾರದು? ಹೀಗೆ ಯೋಚಿಸಿ ನಾವು ಅದನ್ನೂ ಮಾಡಿದ್ದೇವೆ! ’ಮುಂಬಾಗ’, ’ಹಿಂಬಾರ’, ’ಮುಂದಾಲೋಚನೆ’, ’ಹೊಂಗಿರಣ’ ಎಂದೆಲ್ಲಾ ಪದಗಳನ್ನು ಬಳಕೆಗೆ ತಂದಿದ್ದೇವೆ. ಈಗ ಉಳಿದಿರುವುದು ಇಂಗ್ಲೀಶಿನ ಪ್ರತ್ಯಯಗಳನ್ನು ಕನ್ನಡಕ್ಕೆ ಅಂಟಿಸುವುದು ಮಾತ್ರ. ಅದೂ ಆಗಲೇ ಆಗಿದೆ ಎಂದು ನನಗೆ ಯಾರಾದರೂ ಹೇಳಿದರೆ ನಾನೇನೂ ಅಚ್ಚರಿ ಪಡುವುದಿಲ್ಲ.
      ಸಾಮಾನ್ಯ ಮಂದಿಗೆ ಪದಗಳ ಕಟ್ಟೋಣ ಹೇಗೆ ಆಗಿದೆ ಎಂಬುದರ ಅರಿವಿರುವುದಿಲ್ಲ. ಅವರಿಗೆ ತಮ್ಮ ನುಡಿಯ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಹಾಗಾಗಿ, ಪದಗಳು ಸರಿಯಾಗಿ ಮಾಡಿರುವಂತಹವೋ ಅಲ್ಲವೋ ಎನ್ನುವುದು ಅವರಿಗೆ ಗೊತ್ತಾಗುವುದಿಲ್ಲ. ಪದಗಳು ಹೇಗಿದ್ದರೂ ಅವುಗಳನ್ನು ಅವರು ಒಪ್ಪಿಕೊಳ್ಳುತ್ತಾರೆ ಮತ್ತು ಬಳಸುತ್ತಾರೆ. ಆದರೆ, ’ನಮ್ಮ ನುಡಿ ಎಂತಹುದು, ಯಾವ ಗುಂಪಿನದು, ಅದರ ವಿಶೇಶತೆ ಏನು, ಅದರ ಮಾಳ್ಕೆ ಹೇಗೆ, ಅದನ್ನು ಹೇಗೆ ಬಳಸುವುದು ಒಳ್ಳೆಯದು, ಅದರ ಬೆಳವಣಿಗೆಗೆ ಯಾವುದು ಒಳ್ಳೆಯದು’ ಮುಂತಾದ ಮಾಹಿತಿಗಳನ್ನು ತಿಳಿದುಕೊಂಡಿರುವವರಿಗೆ, ಎಡ್ಡಾದಿಡ್ಡಿಯಾಗಿ ಪದಗಳನ್ನು ಮಾಡಿಕೊಳ್ಳುವುದು ಒಪ್ಪಿಗೆಯಾಗುವುದಿಲ್ಲ. ನಮ್ಮ ಶಿಕ್ಶಣದಲ್ಲಿ ಕನ್ನಡದ ಬಗೆಗಿನ ಇಂತಹ ವಿಶಯಗಳ ಬಗ್ಗೆ ಸಾಕಶ್ಟು ಹೇಳಿಕೊಡುವುದಿಲ್ಲ. ಒಂದು ವೇಳೆ ಹೇಳಿಕೊಟ್ಟರೆ, ಬಹಳಶ್ಟು ಕನ್ನಡಿಗರು ಪ್ರಾಂಕನ್‍ಸ್ಟಯ್ನ್ ಪದಗಳನ್ನು ಇಶ್ಟಪಡುವುದಿಲ್ಲ ಎನ್ನುವುದು ನನ್ನ ನಂಬಿಕೆ. ಇಶ್ಟೆಲ್ಲಾ ಹೇಳಿದ ಮೇಲೆ, ಕನ್ನಡ ಒಂದು ಬಾಳುನುಡಿ (ಜೀವಂತ ಬಾಶೆ) ಎನ್ನುವುದನ್ನು ಮರೆಯಲಾಗುವುದಿಲ್ಲ. ಅದರ ಮೇಲೆ ಯಾರಿಗೂ ’ಕಾಪಿ ರಯ್‍ಟ್ ’ ಇಲ್ಲ. ಮಂದಿಗೆ, ’ಈ ಪದಗಳನ್ನು ಬಳಸಿ, ಈ ಪದಗಳನ್ನು ಬಳಸಬೇಡಿ’ ಎಂದು ಒತ್ತಾಯಿಸುವ ಅದಿಕಾರ ಯಾರಿಗೂ ಇಲ್ಲ. ಸರಿಯಾದ ಶಿಕ್ಶಣದಿಂದ ಮಾತ್ರ ಅವರ ಮನ ಒಲಿಸಬೇಕು. ಸರಿಯಾದ ಶಿಕ್ಶಣ ಯಾವಾಗ ದೊರೆಯುತ್ತದೋ ಯಾರಿಗೆ ಗೊತ್ತು? ಅಲ್ಲಿಯವರೆಗೂ ಪ್ರಾಂಕನ್‍ಸ್ಟಯ್ನ್ ಪದಗಳ ಟಂಕಣೆ ನಿಲ್ಲುವುದಿಲ್ಲ, ಬಳಕೆ ನೀಗುವುದಿಲ್ಲ. ಸದ್ಯಕ್ಕೆ, ಎಂದಾದರೊಂದು ದಿನ ಪ್ರಾಂಕನ್‍ಸ್ಟಯ್ನ್ ಪದಗಳಿಂದ ಕನ್ನಡಕ್ಕೆ ಬಿಡುಗಡೆ ದೊರೆಯಬಹುದು ಎಂದುಕೊಳ್ಳೋಣ, ಅಶ್ಟೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಗುರುವಾರ, ಜುಲೈ 25, 2013

ಕನ್ನಡಿಗರಿಗೇಕೆ ಸಂಸ್ಕ್ರುತ ವಿಶವಿದ್ಯಾಲಯದ ಹೊರೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ಕೆಳಗಿನ ಓಲೆಯನ್ನು ಜುಲಯ್ ೨೪, ೨೦೧೩ ರಂದು ಮಾಗಡಿ ಕ್ಶೇತ್ರದ ಶಾಸಕರಾದ ಶ್ರೀ ಎಚ್.ಸಿ.ಬಾಲಕ್ರಿಶ್ಣರ ಕಯ್ಗಿತ್ತೆ. ಬಾಲಕ್ರಿಶ್ಣರು ಇತ್ತೀಚೆಗೆ ಸುದ್ದಿಗಾರರ ಬಳಿ ಮಾಗಡಿ ತಾಲೂಕಿನಲ್ಲಿ ತೆರೆಯಬೇಕೆಂದಿರುವ ಸಂಸ್ಕ್ರುತ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‍ನ ನಿರ‍್ಮಾಣವನ್ನು ವಿರೋದಿಸುವುದಾಗಿ ಹೇಳಿಕೆ ನೀಡಿದ್ದಾರೆ. ’ಇವರು ಬರಿಯ ಮಾತಿನ ಮಲ್ಲರಲ್ಲ!’ - ಇದು ಅವರನ್ನು ಕಂಡ ಬಳಿಕ ನನಗೆ ಅನಿಸಿದ್ದು. ಒಂದು ವೇಳೆ ಸಂಸ್ಕ್ರುತ ವಿಶ್ವವಿದ್ಯಾಲಯದ ವಿರುದ್ದ ಹೋರಾಟ ಮೊದಲಾದರೆ ನಾವೆಲ್ಲ ಬಾಲಕ್ರಿಶ್ಣರಿಗೆ ಬೆಂಬಲವನ್ನು ನೀಡೋಣ.


      ಜುಲಯ್ ೨೨, ೨೦೧೩

      ಮಾಗಡಿ ಕ್ಶೇತ್ರದ ಶಾಸಕರಾದ ಮಾನ್ಯ ಎಚ್.ಸಿ.ಬಾಲಕ್ರಿಶ್ಣರಿಗೆ ವಂದನೆಗಳು.
      ಕಳೆದ ಸರ‍್ಕಾರದ ಆದೇಶದ ಮೇರೆಗೆ ನಿಮ್ಮ ತಾಲೂಕಿನಲ್ಲಿ ತೆರೆಯಬೇಕೆಂದಿರುವ ಸಂಸ್ಕ್ರುತ ವಿಶ್ವವಿದ್ಯಾಲಯದ ಕ್ಯಾಂಪಸ್‍ನ ವಿರುದ್ದ ಹೋರಾಟ ನಡೆಸುವುದಾಗಿ ಇತ್ತೀಚೆಗೆ ನೀವು ಮಾದ್ಯಮದವರಿಗೆ ಹೇಳಿಕೆ ಕೊಟ್ಟಿದ್ದೀರಿ. ’ಈ ಯೋಜನೆಯಿಂದ ಸ್ತಳೀಯರಿಗೆ ಯಾವುದೇ ಪ್ರಯೋಜನವಿಲ್ಲ. ತಾಲೂಕಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡದ ಸಂಸ್ಕ್ರುತ ವಿಶ್ವವಿದ್ಯಾಲಯ ನಮಗೆ ಬೇಡ’ ಎಂದು ಸುದ್ದಿಗಾರರ ಬಳಿ ಹೇಳಿದ್ದೀರಿ. ಈ ಸಂಗತಿ ಜುಲಯ್ ೨, ೨೦೧೩ ತಾರೀಕಿನ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯಾಗಿದೆ.
      ಸಂಸ್ಕ್ರುತ ವಿಶ್ವವಿದ್ಯಾಲಯ ಸಣ್ಣ ಯೋಜನೆಯಲ್ಲ. ಅದು ನಿಮ್ಮ ಕ್ಶೇತ್ರದ ನೂರು ಎಕರೆಗಳಶ್ಟು ನೆಲವನ್ನು ಕಬಳಿಸಲಿದೆ. ನಿಮ್ಮ ಕ್ಶೇತ್ರದ ಇಶ್ಟೊಂದು ಸಂಪನ್ಮೂಲವನ್ನು ಬಳಸಿಕೊಂಡರೂ ಅದಕ್ಕೆ ಪ್ರತಿಯಾಗಿ ಈ ವಿಶ್ವವಿದ್ಯಾಲಯ ಸ್ತಳೀಯರಿಗೆ ಯಾವ ಉಪಯೋಗವನ್ನೂ ದೊರಕಿಸಿಕೊಡುವುದಿಲ್ಲ ಎಂಬ ನಿಮ್ಮ ಗ್ರಹಿಕೆ ಸರಿಯಾದುದೇ. ಹಾಗಾಗಿ, ಅದರ ನಿರ‍್ಮಾಣವನ್ನು ವಿರೋದಿಸುವ ನಿಮ್ಮ ನಿಲುವು ತಕ್ಕ ನಿಲುವೇ ಆಗಿದೆ. ನಿಮ್ಮ ನಿಲುವನ್ನು ಕೇವಲ ಸ್ತಳೀಯರಲ್ಲದೆ ಅಸಂಕ್ಯಾತ ಇತರ ಕನ್ನಡಿಗರೂ ಬೆಂಬಲಿಸುತ್ತಾರೆಂಬ ನಂಬಿಕೆ ನನಗಿದೆ.
      ನೀವು ಜನಪ್ರತಿನಿದಿಗಳಾಗಿರುವುದರಿಂದ, ನೀವು ಪ್ರತಿನಿದಿಸುವ ಜನಗಳ ಒಳಿತನ್ನು ಮುಂದಿಟ್ಟುಕೊಂಡು, ಸಹಜವಾಗಿಯೆ ಈ ವಿಶಯವನ್ನು ಸ್ತಳೀಯ ದ್ರುಶ್ಟಿಕೋನದಿಂದ ನೋಡಿ, ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದೀರಿ. ಆದರೆ, ಈ ವಿಶಯವನ್ನು ಕೇವಲ ಸ್ತಳೀಯ ದ್ರುಶ್ಟಿಕೋನದಿಂದಲ್ಲದೆ ಸಮಸ್ತ ಕನ್ನಡಿಗರ ದ್ರುಶ್ಟಿಕೋನದಿಂದಲೂ ಪರಿಗಣಿಸಬಹುದು. ಇದರ ಅರಿವು ನಿಮಗೂ ಇರುತ್ತದೆ. ಈ ವಿಶಾಲ ದ್ರುಶ್ಟಿಕೋನದ ಬಗ್ಗೆ ಸಂಕ್ಶಿಪ್ತವಾಗಿ ಇಲ್ಲಿ ಒಂದೆರಡು ವಿಶಯಗಳನ್ನು ಮಂಡಿಸಲು ನಾನು ಬಯಸುತ್ತೇನೆ.
      ಸಂಸ್ಕ್ರುತ ಬಾಶೆಯಿಂದ ಕನ್ನಡಿಗರಿಗೆ ಏನು ಪ್ರಯೋಜನ? ಇದು ಎಲ್ಲ ಕನ್ನಡಿಗರೂ ಕೇಳಬೇಕಾದ ಮೊತ್ತಮೊದಲ ಪ್ರಶ್ನೆ. ಏನೂ ಇಲ್ಲ. ಕಿಂಚಿತ್ತೂ ಇಲ್ಲ. ಎಳ್ಳಶ್ಟೂ ಇಲ್ಲ. ಇದು ಉತ್ತರ! ಸಂಸ್ಕ್ರುತ ಕಲಿಯುವುದರಿಂದ ಕನ್ನಡ ಯುವಕರಿಗೆ ಕೆಲಸ ದೊರೆಯುವುದೆ? ಇಲ್ಲ. ಕೆಲಸ ಕೊಡುವ ಯಾವ ಉದ್ಯಮದವರಾಗಲೀ ಸಂಸ್ತೆಯವರಾಗಲೀ, ’ನೀನು ಸಂಸ್ಕ್ರುತ ಕಲಿತಿದ್ದೀಯಾ?’ ಎಂದು ಉದ್ಯೋಗಾರ‍್ತಿಯನ್ನು ಕೇಳುತ್ತಾರೆಯೆ? ಎಂದೂ ಇಲ್ಲ. ಏಕೆಂದರೆ, ಸಂಸ್ಕ್ರುತದಿಂದ ನಿಜಪ್ರಪಂಚದ ವ್ಯವಹಾರದಲ್ಲಿ ಯಾವ ಉಪಯೋಗವೂ ಇಲ್ಲ.
      ವಾಸ್ತವ ಹೀಗಿದ್ದೂ ಸಂಸ್ಕ್ರುತ ವಿಶ್ವವಿದ್ಯಾಲಯವನ್ನು ತೆರೆಯುವ ಅವ್‍ಚಿತ್ಯವೇನು? ಈ ಪ್ರಶ್ನೆಯನ್ನು ಸಂಸ್ಕ್ರುತ ವಿಶ್ವವಿದ್ಯಾಲಯದ ಕುಲಪತಿ ಮಲ್ಲೇಪುರಮ್ ವೆಂಕಟೇಶರಿಗೆ ಈ ಹಿಂದೆ ಕೆಲ ಬುದ್ದಿಜೀವಿ ಕನ್ನಡಿಗರು ಕೇಳಿದ್ದರು. ಅದಕ್ಕೆ ಅವರು ಕೊಟ್ಟ ಒಟ್ಟಾರೆ ಉತ್ತರ ಹೀಗಿತ್ತು - ’ಹಳಗನ್ನಡದ ಕಾವ್ಯಗಳಲ್ಲಿ ಸಂಸ್ಕ್ರುತದ ಬಳಕೆ ಎಶ್ಟೊಂದು ವ್ಯಾಪಕವಾಗಿ ಆಗಿದೆ ಎಂದರೆ, ಸಂಸ್ಕ್ರುತದ ತಿಳಿವಳಿಕೆ ಇಲ್ಲದೆ ಅವುಗಳನ್ನು ಸರಿಯಾಗಿ ಅರ‍್ತ ಮಾಡಿಕೊಳ್ಳಲು ಆಗುವುದಿಲ್ಲ’. ಹೇಗಿದೆ ನೋಡಿ ಈ ಸಮರ‍್ತನೆ! ಹೆಚ್ಚುಕಡಿಮೆ ಇಂತಹ ವಾದವನ್ನೇ ಸಂಸ್ಕ್ರುತ ವಿಶ್ವವಿದ್ಯಾಲಯದ ಪರವಾಗಿರುವ ಎಲ್ಲರೂ ಸಾಮಾನ್ಯವಾಗಿ ಮುಂದಿಡುವುದು. ಇಂತಹ ಹುಲು ವಾದಕ್ಕೆ ಏನು ಹೇಳುವುದು? ಇವರ ವಾದ ಎಶ್ಟು ಪೊಳ್ಳು ಎನ್ನುವುದಕ್ಕೆ ಒಂದು ಸರಳ ಉದಾಹರಣೆ ಕೊಡುತ್ತೇನೆ, ಕೇಳಿ. ಯಾವಾಗಲಾದರೂ ಒಮ್ಮೆ ನಿಮಗೇನಾದರೂ ಕೊಂಚ ಹಾಲಿನ ಅಗತ್ಯ ಬಿದ್ದರೆ, ಅದನ್ನು ಅಂಗಡಿಗೆ ಹೋಗಿ ಕೊಂಡುಕೊಳ್ಳುತ್ತೀರೋ ಇಲ್ಲ ಕೊಟ್ಟಿಗೆ ಕಟ್ಟಿ, ಹಸುವನ್ನು ಸಾಕಿ ಕರೆದುಕೊಳ್ಳುತ್ತೀರೋ? ಕೊಟ್ಟಿಗೆ ಕಟ್ಟಿ, ಹಸುವನ್ನು ಸಾಕಿ ಕರೆದುಕೊಳ್ಳಬೇಕು ಎನ್ನುತ್ತಾರೆ ಸಂಸ್ಕ್ರುತ ವಿಶ್ವವಿದ್ಯಾಲಯ ಬೇಕು ಎನ್ನುವ ಸಂಸ್ಕ್ರುತದ ಒಣ ಅಬಿಮಾನಿಗಳು! ದೇಶದ ತುಂಬೆಲ್ಲಾ ಉತ್ಕ್ರುಶ್ಟವಾದ ಸಂಸ್ಕ್ರುತ ವಿಶ್ವವಿದ್ಯಾಲಯಗಳಿವೆ. ಕೆಲ ಪಂಡಿತರನ್ನು ಅಲ್ಲಿಗೇ ಕಳಿಸಿ, ಕನ್ನಡಕ್ಕೆ ಬೇಕಾಗುವಶ್ಟು ಸಂಸ್ಕ್ರುತದ ಅದ್ಯಯನವನ್ನು ಅವರಿಂದ ಮಾಡಿಸಿದರೆ ಸಾಕಾಗುವುದಿಲ್ಲವೆ? ಈ ಅಲ್ಪ ಕಾರಣಕ್ಕಾಗಿ ಒಂದು ಇಡಿಯ ಸಂಸ್ಕ್ರುತ ವಿಶ್ವವಿದ್ಯಾಲಯವನ್ನೇ ತೆರೆದು ನಡೆಸಬೇಕೆ? ಕನ್ನಡಿಗರ ಸಂಪನ್ಮೂಲಗಳನ್ನು ಇಂತಹ ಪ್ರಯೋಜನಕ್ಕೆ ಬಾರದ ಯೋಜನೆಗಳ ಸಲುವಾಗಿ ಪೋಲು ಮಾಡಬೇಕೆ?
      ಇಂದು ಕನ್ನಡಿಗರಿಗೆ ಬೇಕಾಗಿರುವುದು ಇಂಗ್ಲೀಶ್. ಸಂಸ್ಕ್ರುತವಲ್ಲ. ಇಂದು ಇಡೀ ಪ್ರಪಂಚವೇ ಇಂಗ್ಲೀಶ್ ಬಾಶೆಯನ್ನು ಕಲಿಯುತ್ತಿದೆ. ಇಂಗ್ಲೀಶನ್ನು ಅಶ್ಟಾಗಿ ಹಚ್ಚಿಕೊಂಡಿರದಿದ್ದ ಪ್ರಾನ್ಸ್, ಜಪಾನ್, ಚೀನಾ ಮುಂತಾದ ರಾಶ್ಟ್ರಗಳೇ ಇಂದು ಮುತುವರ‍್ಜಿಯಿಂದ ಇಂಗ್ಲೀಶ್ ಕಲಿಯುತ್ತಿವೆ. ಇಡೀ ಪ್ರಪಂಚಕ್ಕೇ ಒಂದು ವ್ಯಾವಹಾರಿಕ ಬಾಶೆಯಾಗಿ ಇಂದು ಇಂಗ್ಲೀಶ್ ತಲೆ ಎತ್ತಿ ನಿಂತಿದೆ. ಇಂದಿನ ಪ್ರಪಂಚದಲ್ಲಿ ಇಂಗ್ಲೀಶ್ ಕಲಿಯುವುದರಿಂದ ಆಗುವ ಲಾಬ ಕಡಿಮೆಯಲ್ಲ. ಇಂಗ್ಲೀಶ್ ಬಾರದಿದ್ದರೆ ನಶ್ಟ ಕಂಡಿತ. ಕನ್ನಡ ಮಾದ್ಯಮದಲ್ಲಿ ಓದುವವರೂ ಕೂಡ ಒಂದಲ್ಲಾ ಒಂದು ಹಂತದಲ್ಲಿ ಇಂಗ್ಲೀಶಿನಲ್ಲಿ ವ್ಯವಹರಿಸಲೇ ಬೇಕಾಗುತ್ತದೆ. ಸ್ವಾಬಿಮಾನಕ್ಕೂ ಇಂದು ಇಂಗ್ಲೀಶ್ ಬೇಕಾಗಿದೆ. ಇಂಗ್ಲೀಶಿನಲ್ಲಿ ಮಾತನಾಡಲು ಬಾರದೆ ಕೀಳರಿಮೆ ಅನುಬವಿಸುತ್ತಿರುವ ಲಕ್ಶಾಂತರ ಕನ್ನಡ ತರುಣರ ಪಾಡು ಯಾರಿಗೆ ತಿಳಿದಿಲ್ಲ? ಇಂಗ್ಲೀಶ್ ಬಾರದೆ ಬೇರೆ ದಾರಿ ಇಲ್ಲ ಎನ್ನುವಶ್ಟರಮಟ್ಟಿಗೆ ಇಂದು ಇಂಗ್ಲೀಶ್ ಅನಿವಾರ‍್ಯವಾಗಿದೆ. ಆದ್ದರಿಂದ, ಕನ್ನಡಿಗರು ಇಂದು ಕನ್ನಡದ ಜೊತೆ ಹೆಚ್ಚುವರಿಯಾಗಿ ಕಲಿಯಬೇಕಾಗಿರುವುದು ಇಂಗ್ಲೀಶನ್ನು. ಕನ್ನಡಿಗರ ಸಾರ‍್ವಜನಿಕ ಹಣ ಸಲ್ಲಬೇಕಾಗಿರುವುದು ಇಂಗ್ಲೀಶ್ ಕಲಿಕೆಗೆ. ಸಂಸ್ಕ್ರುತ ಕಲಿಕೆಗೆ ಅಲ್ಲ.
      ’ಕೋಟಿಗಟ್ಟಲೆ ಹಣ ನಿತ್ಯವೂ ಪೋಲಾಗುತ್ತಿರುತ್ತದೆ. ಸಂಸ್ಕ್ರುತ ಬಾಶೆಗೆ ಕೊಂಚ ಹಣ ಹೋದರೆ ಕೊಳ್ಳೆ ಹೋದುದು ಏನು?’ ಎಂದು ಸಂಸ್ಕ್ರುತ ದುರಬಿಮಾನಿಗಳು ಸಾಮಾನ್ಯವಾಗಿ ಸವಾಲು ಹಾಕುತ್ತಾರೆ. ಅವರಿಗೆ ನಾವು ಹೇಳಬೇಕಾದುದು ಇಶ್ಟೇ - ಪೋಲು ಪೋಲೇ. ವ್ಯರ‍್ತ ವ್ಯರ‍್ತವೇ. Wasting of resources is never justified!
     ಇವೆಲ್ಲ ಕಾರಣಗಳಿಂದಾಗಿ ಕನ್ನಡ ನಾಡಿನಲ್ಲಿ ಕನ್ನಡಿಗರ ಹಣ ಸುರಿದು ಸಂಸ್ಕ್ರುತ ವಿಶ್ವವಿದ್ಯಾಲಯವೊಂದನ್ನು ಸಾಕುವ ಆಲೋಚನೆ ತಕ್ಕುದಲ್ಲ. ಇದು ಅನೇಕ ಕನ್ನಡಿಗರಿಗೆ ತಿಳಿದಿದೆ. ತಕ್ಕ ಮುಂದಾಳ್ತನ ಇಲ್ಲದಿರುವುದರಿಂದ ಹಾಗೂ ತಕ್ಕ ಸನ್ನಿವೇಶ ಒದಗಿ ಬಂದಿಲ್ಲವಾದ್ದರಿಂದ, ಅವರು ಸದ್ಯಕ್ಕೆ ಸುಮ್ಮನೆ ಕುಳಿತಿದ್ದಾರೆ. ಗಂಬೀರವಾದ ಹೋರಾಟ ನಡೆಯುವ ಸೂಚನೆ ಕಂಡು ಬಂದರೆ ಅವರೆಲ್ಲರೂ ಎದ್ದು ತಮ್ಮ ಬೆಂಬಲವನ್ನು ವ್ಯಕ್ತಪಡಿಸುವುದರಲ್ಲಿ ಸಂದೇಹವಿಲ್ಲ. ಮಾನ್ಯ ಬಾಲಕ್ರಿಶ್ಣರೆ, ಅಂತಹ ಒಂದು ಹೋರಾಟಕ್ಕೆ ನಿಮ್ಮ ಕ್ಶೇತ್ರದಿಂದಲೇ, ನಿಮ್ಮಿಂದಲೇ ಚಾಲನೆ ದೊರಕಲಿ ಎಂದು ನಾನು ಹಾರಯ್ಸುತ್ತೇನೆ. ನಿಮ್ಮ ಹೋರಾಟಕ್ಕೆ ನನ್ನ ಯಾವತ್ತೂ ಬೆಂಬಲವಿರುತ್ತದೆಂಬ ಸಂಪೂರ್ಣ ನಂಬುಗೆಯನ್ನು ನಿಮಗೆ ನೀಡುತ್ತೇನೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಕನ್ನಡಿಗರೂ ದ್ರಾವಿಡರೆ ಗೆಳೆಯರ ಬಳಗ
(kannadigarudravidare.blogspot.in)
kannadigarudravidare@gmail.com

ಬುಧವಾರ, ಜುಲೈ 10, 2013

ಮಹಿಶಿ ವರದಿಗೆ ಸಂವಿದಾನದ ಅಡ್ಡಗಾಲು!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಮುಕ್ಯಮಂತ್ರಿ ಸಿದ್ದರಾಮಯ್ಯನವರು ಸರೋಜಿನಿ ಮಹಿಶಿ ವರದಿಯನ್ನು ಪರಿಶ್ಕರಿಸುವುದಕ್ಕೆ ಆದೇಶ ನೀಡುವುದಾಗಿ ಹೇಳಿದ್ದಾರೆ. ಹಾಗೆಂದು ಅವರು ಹೇಳಿರುವುದನ್ನು ಪತ್ರಿಕೆಗಳು ಕಳೆದ ತಿಂಗಳ ಹದಿನಾರರಂದು ವರದಿ ಮಾಡಿವೆ. ಪರಿಶ್ಕರಿಸುವುದು ಎಂದರೆ ತಕ್ಕ ಬಗೆಯ ಮಾರ‍್ಪಾಟುಗಳಿಂದ ಮೂರು ದಶಕಳಶ್ಟು ಹಳೆಯದಾದ ಈ ವರದಿಯನ್ನು ಇಂದಿನ ನೆಲೆನಡೆಗೆ ಹೊಂದಿಸುವುದು ಎಂದರ‍್ತ. ಹಾಗೆ ಮಾಡುವುದರಿಂದ ಅದರ ಅನುಶ್ಟಾನ ಹಗುರವೂ ಅರ‍್ತಪೂರ‍್ಣವೂ ಆಗಬಹುದೆಂಬುದು ಹೇಳಿಕೆಯ ಇಂಗಿತ. ಸಿದ್ದರಾಮಯ್ಯನವರಿಗಾದರೂ ಮಹಿಶಿ ವರದಿಯ ನೆನಪು ಇನ್ನೂ ಇದೆಯಲ್ಲಾ ಎನ್ನುವುದು ಒಂದು ಸಂತಸದ ಸಂಗತಿ.
      ವರದಿಗೆ ಮಾರ‍್ಪಾಟುಗಳೇನೋ ಆಗಲೇ ಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಎಂತಹ ಮಾರ‍್ಪಾಟುಗಳು ಆಗಬೇಕು? ಇದರ ಬಗ್ಗೆ ಸರ‍್ಕಾರ ಕೊಂಚ ಚಚ್ಚರದಿಂದ ಯೋಚಿಸಬೇಕು. ಮಾರ‍್ಪಾಡುಗಳು ತಕ್ಕವಲ್ಲದಿದ್ದರೆ ವರದಿಯ ಅನುಶ್ಟಾನಕ್ಕೆ ಸಂವಿದಾನದ ಅಡ್ಡಗಾಲು ಬೀಳುವುದು ಕಂಡಿತ. ನ್ಯಾಯಾಲಯಗಳು ಸಂವಿದಾನದ ಪರ ತೀರ‍್ಪುಗಳನ್ನು ಕೊಡುವುದೂ ಅಶ್ಟೇ ಕಂಡಿತ. ಹೀಗೆ ಏಕೆ ಹೇಳುತ್ತಿದ್ದೇನೆ ಎಂದರೆ, ನಮ್ಮ ಉಚ್ಚ ನ್ಯಾಯಾಲಯ ಈಗಾಗಲೇ ಈಗಿರುವ ಮಹಿಶಿ ವರದಿಯ ಬಗ್ಗೆ ತನ್ನ ಅನಿಚ್ಚೆಯನ್ನು ಕಡ್ಡಿ ಮುರಿದಂತೆ ವ್ಯಕ್ತಪಡಿಸಿದೆ. ಸಂವಿದಾನವನ್ನು ಮುಂದಿಟ್ಟುಕೊಂಡು ಮಹಿಶಿ ವರದಿಯನ್ನು ಹೊಡೆದುರುಳಿಸಿದೆ.
      ಕಳೆದ ವರ‍್ಶ ನಮ್ಮ ಹಿರಿಯ ನಾಗರೀಕರಾದ ವಿನುತ, ’ಕರ‍್ನಾಟಕದ ಅಯ್‍ಟೀ ಕಂಪನಿಗಳು ಕೆಲಸ ಕೊಡುವಲ್ಲಿ ಕನ್ನಡಿಗರನ್ನು ಬೇಕೆಂದೇ ಕಡೆಗಾಣಿಸುತ್ತಿವೆ. ಆದ್ದರಿಂದ ಮಹಿಶಿ ವರದಿಯ ಸಂಪೂರ‍್ಣ ಅನುಶ್ಟಾನ ನಮ್ಮ ನಾಡಿನ ಉದ್ಯಮಗಳಲ್ಲಿ ಆಗಬೇಕು’ ಎಂದು ಆಗ್ರಹಿಸಿ ಉಚ್ಚ ನ್ಯಾಯಾಲಯದಲ್ಲಿ ಸಾರ‍್ವಜನಿಕ ಹಿತಾಸಕ್ತಿಯ ದಾವೆ ಹೂಡಿದ್ದರು. ’ಬೆಂಗಳೂರಿನ ಅಯ್‍ಟೀ ಕಂಪನಿಗಳಲ್ಲಿ ಕೆಲಸ ಮಾಡುವ ಕನ್ನಡಿಗರ ಸಂಕ್ಯೆ ನೂರಕ್ಕೆ ಹತ್ತರಶ್ಟೂ ಇಲ್ಲ. ಅದೇ ಚೆನ್ನಯ್‍ನ ಅಯ್‍ಟೀ ಕಂಪನಿಗಳಲ್ಲಿ ದುಡಿಯುವ ತಮಿಳರ ಸಂಕ್ಯೆ ಮತ್ತು ಹಯ್ದರಾಬಾದಿನ ಅಯ್‍ಟೀ ಕಂಪನಿಗಳಲ್ಲಿ ಕೆಲಸ ಮಾಡುವ ತೆಲುಗರ ಸಂಕ್ಯೆ ನೂರಕ್ಕೆ ಎಪ್ಪತ್ತಕ್ಕೂ ಮಿಕ್ಕಿದೆ’ ಎಂದು ದಾವೆಯಲ್ಲಿ ವಾದಿಸಿದ್ದರು. ಇನ್ನೂ ಮುಂದುವರೆದು, ’ಕಾಲೇಜುಗಳಿಂದ ನೇರವಾಗಿ ಕಂಪನಿಗೆ ಪದವೀದರರನ್ನು ಸೇರಿಸಿಕೊಳ್ಳುವಾಗ ಮತ್ತು ಕಂಪನಿಯೊಳಗೆ ಬಡ್ತಿಗಳನ್ನು ಕೊಡುವಾಗಲೂ ಕನ್ನಡಿಗರ ಕಡೆಗಣನೆ ಉದ್ದೇಶಪೂರ‍್ವಕವಾಗೇ ಆಗುತ್ತಿದೆ’ ಎಂದೂ ಅವರು ದೂರಿದ್ದರು.
      ವಿನುತರ ಈ ದಾವೆಗೆ ಈ ವರ‍್ಶ ಹಯ್‍ಕೋರ‍್ಟಿನ ವಿಬಾಗೀಯ ಬೆಂಚ್ ತೀರ‍್ಪು ಕೊಟ್ಟಿತು. ಅದು ಹೀಗಿದೆ - ’ಉದ್ಯೋಗದ ವಿಶಯದಲ್ಲಿ ಬಾಶೆಯನ್ನು ಪರಿಗಣಿಸುವುದು ಅಕ್ರಮವಾಗುತ್ತದೆ. ಸಂವಿದಾನದ ಹದಿನಾಲ್ಕನೆಯ ಮತ್ತು ಹದಿನಾರನೆಯ ಆರ‍್ಟಿಕಲ್ಲುಗಳನ್ನು ಮೀರಿದಂತಾಗುತ್ತದೆ. ಬಾಶೆಯ ಆದಾರದ ಮೇಲೆ ಕೆಲಸಗಳನ್ನು ಕೊಡುವಂತೆ ಸರ‍್ಕಾರಕ್ಕೆ ನ್ಯಾಯಾಲಯಗಳು ಆದೇಶ ಮಾಡುವಂತಿಲ್ಲ. ಹಾಗೆ ಮಾಡುವುದಕ್ಕೆ ಸಂಸತ್ತಿಗೆ ಮಾತ್ರ ಅಳವಿರುತ್ತದೆ.’ ಸಂಸತ್ತಿಗೆ ಮಾತ್ರ ಅದಿಕಾರ ಇದೆ ಎಂದರೆ, ’ತಕ್ಕ ಕಾನೂನುಗಳನ್ನು ಜಾರಿ ಮಾಡುವುದೂ, ಸಂವಿದಾನವನ್ನು ಅದಕ್ಕಾಗಿ ತಿದ್ದುಪಡಿ ಮಾಡುವುದೂ - ಇವೇ ನಾಡಿನ ಮಕ್ಕಳಿಗೆ ಆದ್ಯತೆಯಿಂದ ಕೆಲಸ ದೊರಕಿಸಿ ಕೊಡುವುದಕ್ಕೆ ದಾರಿ.’ ಎಂದರ‍್ತ. ಈ ತೀರ‍್ಪನ್ನು ನೋಡಿದರೆ, ಮಹಿಶಿ ವರದಿಯನ್ನು ಬರೀ ಪರಿಶ್ಕರಿಸಿದ ಮಾತ್ರಕ್ಕೆ ಅದರ ಅನುಶ್ಟಾನ ನ್ಯಾಯಾಲಯದ ಅಡ್ಡಗಾಲನ್ನು ದಾಟುವುದೆ ಎಂಬ ಅನುಮಾನ ಮೂಡುತ್ತದೆ. ನುರಿತ ನ್ಯಾಯವಾದಿಗಳೇ ಈ ಸಂದೇಹವನ್ನು ಬಗೆಹರಿಸಬೇಕು.
      ಕಂಪನಿಗಳು ಇಂದು ಬರೀ ’ಪ್ರತಿಬೆಯ’ ಆದಾರದ ಮೇಲೆ ಕೆಲಸಗಳನ್ನು ಕೊಡುತ್ತಿರುವುದಾಗಿ ಹೇಳಿಕೊಳ್ಳುತ್ತಿವೆ.  ಬರೀ ’ಪ್ರತಿಬೆಗೆ’ ಮನ್ನಣೆ ಕೊಡುವ, ಕನ್ನಡಿಗರ ಸ್ತಳೀಯತೆಗೆ ಮನ್ನಣೆ ಕೊಡದ, ತಮ್ಮ ಒಳಿತನ್ನು ಮಾತ್ರ ಲೆಕ್ಕವಿಡುವ ಕಂಪನಿಗಳಿಗೆ ನಮ್ಮ ನಾಡಿನ ಸಂಪನ್ಮೂಲಗಳನ್ನು ಬಿಟ್ಟಿಯಾಗೋ ರಿಯಾಯತಿಯಲ್ಲೋ ಏಕೆ ಕೊಡಬೇಕು? ತೆರಿಗೆ ವಿನಾಯತಿಗಳನ್ನು ಏಕೆ ಕೊಡಬೇಕು? ಈ ಕಂಪನಿಗಳಿಂದ ನಮಗೇನು ವಿಶೇಶ ಲಾಬ? ಯಾವುದೇ ಹುದ್ದೆಗಾಗಲೀ, ಅದನ್ನು ನಿಬಾಯಿಸುವ ಕೌಶಲವಿರುವ ಕನ್ನಡಿಗ ಅಬ್ಯರ‍್ತಿಗಳಿದ್ದರೆ, ಅವರೇ ಅದಕ್ಕೆ ನೇಮಕವಾಗಬೇಕು. ಕನ್ನಡಿಗ ಅಬ್ಯರ‍್ತಿಗಳ ಕೊರತೆ ಇದ್ದರೆ ಮಾತ್ರ ಬೇರೆಯವರನ್ನು ನೇಮಕ ಮಾಡಿಕೊಳ್ಳಬಹುದು. ಈ ಬಗೆಯ ಒಟ್ಟಾರೆ ಶರತ್ತಿಗೆ ಒಪ್ಪದಿರುವ ಕಂಪನಿಗಳಿಗೆ ನಮ್ಮ ನಾಡಿನ ಸಂಪನ್ಮೂಲಗಳು ರಿಯಾಯತಿಯಲ್ಲಿ ಏಕೆ ದೊರೆಯಬೇಕು?
      ಇನ್ನು ಕನ್ನಡಿಗರ ಕೆಲಸಗಳನ್ನು ಕಸಿದುಕೊಳ್ಳುತ್ತಿರುವರಲ್ಲಿ ಎರಡು ಬಗೆ ಇದೆ. ಒಂದು, ಕನ್ನಡಿಗರಂತೆಯೆ ದ್ರಾವಿಡರಾದ ನೆರೆನಾಡವರಾದ ತಮಿಳರು, ತೆಲುಗರು ಮತ್ತು ಮಲಯಾಳರು. ಇನ್ನೊಂದು, ಲೆಕ್ಕವಿಲ್ಲದ ಸಂಕ್ಯೆಯಲ್ಲಿ ಬಂದು ಸೇರಿಕೊಳ್ಳುತ್ತಿರುವ ಉತ್ತರ ಬಾರತದವರು. ಈ ಉತ್ತರದವರ ವರಸೆಯೇ ಬೇರೆ. ದಕ್ಶಿಣದವರು ಸ್ತಳೀಯ ಬಾಶೆಯ ಸ್ತಿತಿಯಲ್ಲಿ ಏರುಪೇರು ಮಾಡುವುದು ಕಡಿಮೆ. ಆದರೆ ಉತ್ತರದವರು ಹೋದಲ್ಲೆಲ್ಲಾ ಹಿಂದೀ ಪತಾಕೆಯನ್ನು ನೆಡುತ್ತಾರೆ. ಈ ಹಿಂದೆ ಹೇಳಿದ ದಾವೆಯಲ್ಲಿ ವಿನುತರು ಹಿಂದೀ ಮಂದಿಗಳ ಬಗ್ಗೆಯೂ, ’ಅಯ್‍ಟೀ ಕಂಪನಿಗಳಲ್ಲಿ ಹಿಂದಿಯ ಹೇರಿಕೆ ನಡೆಯುತ್ತದೆ. ಕಂಪನಿ ಬಸ್ಸುಗಳಲ್ಲಿ ಬರೀ ಹಿಂದೀ ಹಾಡುಗಳನ್ನು ಮಾತ್ರ ಹಾಕುತ್ತಾರೆ. ಕನ್ನಡ ನಾಡಹಬ್ಬದ ಆಚರಣೆಗೆ ಅಡ್ಡಗಾಲು ಹಾಕುತ್ತಾರೆ.’ ಎಂದು ಅಳಲನ್ನು ತೋಡಿಕೊಂಡಿದ್ದರು. ಹಿಂದೀವಾಲರ ಈ ಬಗೆಯ ದಬ್ಬಾಳಿಕೆಯ ಬಗ್ಗೆ ಅಲ್ಲಲ್ಲಿ ಆಗಾಗ್ಗೆ ಪ್ರತ್ಯೇಕ ವರದಿಗಳೂ ಆಗಿವೆ. ಹಿಂದೀ ಮಂದಿಯೇ ಹೀಗೆ ಎನಿಸುತ್ತದೆ. ಮುಂಬಯ್ ಹೊಳಲನ್ನು ಹಿಂದೀಮಯ ಮಾಡಿದ ಇವರಿಗೆ ಬೆಂಗಳೂರನ್ನೂ ಹಾಗೇ ಮಾಡುವುದು ಕಶ್ಟವೆ?
      ಉದ್ಯೋಗ, ವಲಸೆ, ಆಡಳಿತ ಬಾಶೆ - ಇಂತಹ ಸಮಸ್ಯೆಗಳಿಗೆ ಸಂವಿದಾನದ ತಿದ್ದುಪಡಿ ಇಲ್ಲದೆ ಹುರುಳುಳ್ಳ ಬಗೆಹರಿಕೆ ಸಾದ್ಯವಿಲ್ಲವೇನೋ. ಹಾಗಾದರೆ, ಸಂವಿದಾನದ ತಿದ್ದುಪಡಿಗೆ ಅಳವನ್ನು ಬರಿಸಿಕೊಳ್ಳುವುದು ಹೇಗೆ? ಕನ್ನಡಿಗರು ಮಾತ್ರ ಪ್ರತ್ಯೇಕವಾಗಿ ಬೊಬ್ಬೆ ಹಾಕಿದರೆ ಆಗುತ್ತದೆಯೆ? ಕನ್ನಡಿಗರು ಮತ್ತು ಬೇರೆ ರಾಜ್ಯದವರು ಸೇರಿ ಪ್ರಯತ್ನಿಸಬೇಕು. ಮೊದಲು ದಕ್ಶಿಣದ ದ್ರಾವಿಡರು - ನಾವು, ತೆಲುಗರು, ತಮಿಳರು ಮತ್ತು ಮಲಯಾಳರು - ದ್ರಾವಿಡತನದ ಅಡಿಯಲ್ಲಿ ಒಂದಾಗಬೇಕು. ನಾವು ಒಗ್ಗೂಡಿದರೆ ನಮ್ಮೊಡನೆ ಕಯ್ ಸೇರಿಸಲು ದೇಶದ ಕೆಲ ಇತರೆ ರಾಜ್ಯದವರೂ ಮುಂದೆ ಬರಬಹುದು. ಹೀಗೆ ಎಲ್ಲರೂ ಒಟ್ಟಾಗಿ ಪ್ರಯತ್ನಪಟ್ಟರೆ ಸಂವಿದಾನದ ತಿದ್ದುಪಡಿ ಸಾದ್ಯವಾಗಬಹುದು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಮಂಗಳವಾರ, ಜೂನ್ 25, 2013

ಕನ್ನಡದಲ್ಲೂ ಮುದ್ದಾದ ಹೆಸರುಗಳಿವೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕನ್ನಡ ಟೀವಿ ಕಾಲುವೆಯೊಂದರಲ್ಲಿ ’ಚಿಣ್ಣರ ಚಿಲಿಪಿಲಿ’ಎಂಬ, ಪುಟ್ಟ ಮಕ್ಕಳು ಪಾಲ್ಗೊಳ್ಳುವ ಜನಪ್ರಿಯ ಕಾರ‍್ಯಕ್ರಮವೊಂದು ಪ್ರಸಾರವಾಗುತ್ತಿದೆ. ಅದರಲ್ಲಿ ಇತ್ತೀಚೆಗೆ ಕೇವಲ ಕೊಡವ ಮಕ್ಕಳಶ್ಟೇ ಪಾಲ್ಗೊಂಡ ವಿಶೇಶ ಸಂಚಿಕೆಯೊಂದು ಬಿತ್ತರವಾಯಿತು. ಆ ಮಕ್ಕಳಲ್ಲಿ ಒಬ್ಬ ಪುಟಾಣಿ ಹುಡುಗಿಗೆ ’ಬೆಳಕು’ ಎಂಬ ಮುದ್ದಾದ ಹೆಸರು. ’ಬೆಳಕು’ ಅಪ್ಪಟ ಕನ್ನಡ ಪದ. ಅದು ಕೊಡವ ಪದವೂ ಆಗಿರಬಹುದೇನೋ. ಒಟ್ಟಿನಲ್ಲಿ ದ್ರಾವಿಡ ಮೂಲದ ಪದ. ಸಾಮಾನ್ಯವಾಗಿ ಬರೀ ಸಂಸ್ಕ್ರುತ ಪದಗಳಿಂದಲೇ ಮಕ್ಕಳಿಗೆ ಹೆಸರಿಡುವ ನಮ್ಮಲ್ಲಿ ಈಗೀಗ ಕನ್ನಡ ಅತವ ದ್ರಾವಿಡ ಮೂಲದ ಹೆಸರುಗಳನ್ನಿಡುವ ಪ್ರವ್ರುತ್ತಿ ಕೂಡ ಶುರುವಾಗಿದೆ. ’ನಮ್ಮ ನುಡಿಯಲ್ಲೇ ಹೆಸರಿಡೋಣ, ಸಂಸ್ಕ್ರುತವೇನೂ ಬೇಕಾಗಿಲ್ಲ’ ಎಂಬ ನಿಲುವು ಇದಕ್ಕೆ ಕಾರಣವೋ, ಇಲ್ಲ, ’ಸಾಮಾನ್ಯ ಹೆಸರು ಬೇಡ, ಯುನೀಕ್ ಆದ ಹೆಸರು ಇರಲಿ’ ಎನ್ನುವ ದೋರಣೆ ಕಾರಣವೋ, ನನಗೆ ತಿಳಿಯದು. ಆದರೆ, ಕಾರಣ ಏನಾದರೂ ಇರಲಿ, ಮತ್ತೆ ಅಚ್ಚಗನ್ನಡ ಹೆಸರುಗಳು ಚಲಾವಣೆಗೆ ಹೇಗೋ ಬರುತ್ತಿರುವುದು ಅಚ್ಚಗನ್ನಡದ ಒಲವಿಯಾದ ನನ್ನ ಕಣ್ಣಿನಲ್ಲಿ ಒಂದು ಸಂತಸದ ಸಂಗತಿ.
      ಅಯ್ದಾರು ದಶಕಗಳ ಹಿಂದಿನವರೆಗೆ ಕನ್ನಡಿಗರ ಹೆಸರುಗಳು ಹೆಚ್ಚುಕಡಿಮೆ ಕನ್ನಡದ್ದೇ ಅಂದರೆ ದ್ರಾವಿಡ ಮೂಲದ ಹೆಸರುಗಳೇ ಆಗಿರುತ್ತಿದ್ದವು. ಚೆಲುವಯ್ಯ, ಕಲ್ಲಪ್ಪ, ಚೆನ್ನಣ್ಣ, ಕೆಂಪ, ಕರಿಯ, ತಾಯಕ್ಕ, ಪುಟ್ಟಮ್ಮ, ಚಿಕ್‍ತಾಯಿ, ಎಲ್ಲವ್ವ - ಹೀಗೆ ಕನ್ನಡದ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದುದೇ ರೂಡಿಯಲ್ಲಿತ್ತು. ಕೆಳಜಾತಿಯ ಮಂದಿಯಲ್ಲಿ ಇಂತಹ ಹೆಸರುಗಳೇ ಹೆಚ್ಚಾಗಿ ಕಾಣುತ್ತಿದ್ದವು. ಮೇಲುಜಾತಿಯವರಲ್ಲಿ ಸ್ವಲ್ಪ ಸಂಸ್ಕ್ರುತ ಮೂಲದ ಹೆಸರುಗಳು ಚಾಲ್ತಿಯಲ್ಲಿದ್ದು, ಆ ಹೆಸರುಗಳು ಸಾಮಾನ್ಯವಾಗಿ ನಾರಾಯಣ, ಶ್ರೀನಿವಾಸ, ರಾಮಕ್ರಿಶ್ಣ, ಸೀತಾಪತಿ ಮುಂತಾದ ದೇವರ ಹೆಸರುಗಳಾಗಿರುತ್ತಿದ್ದವು. ಬಳಿಕದ ದಿನಗಳಲ್ಲಿ ಕ್ರಮೇಣ ಕನ್ನಡದ ಹೆಸರುಗಳು ಮತ್ತು ದೇವರ ಹೆಸರುಗಳು ಕಾಣೆಯಾಗತೊಡಗಿದವು. ಸಂಸ್ಕ್ರುತ ಮೂಲದ ಪಶು, ಪಕ್ಶಿ, ವಸ್ತುಗಳ ಹೆಸರುಗಳು ಬಳಕೆಗೆ ಬರಲು ಶುರುವಾದವು. ’ಓದಿದ’ ಕನ್ನಡಿಗರು ಇಂತಹ ಸಂಸ್ಕ್ರುತ ಮೂಲದ ಹೆಸರುಗಳನ್ನು ಇಡುವುದರಲ್ಲಿ ಒಂದು ರೀತಿಯಲ್ಲಿ ಪಯ್‍ಪೋಟಿಗೇ ತೊಡಗಿದರು ಎನ್ನಬಹುದು. ಪವನ್, ಪರಾಗ್, ಕಿರಣ್, ವಸಂತ್, ಮಯೂರ್, ಸುನಿಲ್, ಸೀಮಾ, ಪುಶ್ಪ, ಸ್ನೇಹಾ, ಸಾಗರ್, ಪಂಚಮ್, ಶ್ರುತಿ, ಶ್ವೇತಾ ಮುಂತಾದ ಹೆಸರುಗಳೇ ಪುಟಿದಾಡತೊಡಗಿದವು. ಬರುಬರುತ್ತಾ ಕನ್ನಡಿಗರಲ್ಲಿ ’ತಮ್ಮ ಮಕ್ಕಳ ಹೆಸರುಗಳು ಬರೀ ಸಂಸ್ಕ್ರುತ ಮೂಲದ್ದಾದರೆ ಸಾಲದು, ಅವು ಸಾಮಾನ್ಯವಾಗಿರಬಾರದು, ಯುನೀಕ್ ಕೂಡಾ ಆಗಿರಬೇಕು’ ಎಂಬ ದೋರಣೆಯೂ ಮೂಡಿತು. ಅದರ ಪರಿಣಾಮವಾಗಿ ಆಕಾಂಕ್ಶಾ, ಪ್ರಜ್ನ್ಯಾ, ಸ್ರುಜನಾ, ಮನೋಜ್ನ್ಯಾ ಮುಂತಾದ ಕಂಡುಕೇಳದ ಹೆಸರುಗಳೂ ಚಲಾವಣೆಗೆ ಬಂದವು. ಎಶ್ಟೋ ಮಕ್ಕಳ ಹೆಸರುಗಳನ್ನು ಅವರ ತಾತ ಅಜ್ಜಿಯರಿಗೆ ಉಚ್ಚಾರಣೆ ಮಾಡುವುದೇ ಅಸಾದ್ಯವಾಯಿತು! ಒಟ್ಟಿನಲ್ಲಿ ಕನ್ನಡದ ಹಾಗೂ ದೇವರ ಹೆಸರುಗಳು ಯಾರಿಗೂ ಹಿಡಿಸದೆ ಮೂಲೆಗುಂಪಾದವು. ಸಂಸ್ಕ್ರುತದ ಹೆಸರುಗಳು ಮನೆಮನೆಯಲ್ಲೂ ಬಳಕೆಗೆ ಬಂದವು. ಸಂಸ್ಕ್ರುತದ ಹೆಸರಾದರೆ ಆಯಿತು, ಅದು ಹೇಗೇ ಇರಲಿ, ಅದಕ್ಕೆ ಸಮಾಜದ ಒಪ್ಪಿಗೆ ಕೂಡಲೇ ದೊರೆಯುವಂತಾಯಿತು. ಸಂಸ್ಕ್ರುತದ ಹೆಸರುಗಳ ಇಂತಹ ಜನಪ್ರಿಯತೆಯಿಂದಾಗಿ ’ಇನ್ನು ಕನ್ನಡದ ಹೆಸರುಗಳು ಮತ್ತೆ ಬರುವುದಿಲ್ಲ, ಅವು ಹೋಗೇ ಬಿಟ್ಟವು’ಎನ್ನುವಂತಾಯಿತು. ಆದರೂ ಅಚ್ಚರಿ ಎಂಬಂತೆ ಅಲ್ಲಲ್ಲಿ ಒಂದೊಂದು ಕನ್ನಡದ ಹೆಸರುಗಳು ಹೊಸ ರೂಪಗಳಲ್ಲಿ ತಲೆ ಎತ್ತಲು ಶುರುಮಾಡಿದವು! ಈಗೀಗ ಅವುಗಳ ಸಂಕ್ಯೆ ಹೆಚ್ಚುತ್ತಿರುವ ಹಾಗೆಯೂ ಕಾಣಿಸುತ್ತಿದೆ. ಕನ್ನಡದ ಹೆಸರುಗಳ ಬೇರು ಇನ್ನೂ ಜೀವಂತವಾಗಿರುವ ಹಾಗೆ ಕಾಣುತ್ತದೆ!
      ಕೆಲ ಕನ್ನಡಿಗರು ತಮ್ಮ ಮಕ್ಕಳಿಗೆ ಅಪ್ಪಟ ಕನ್ನಡದ ಹೆಸರುಗಳನ್ನು ಇಟ್ಟಿರುವುದಕ್ಕೆ ಕೆಲವು ಎತ್ತುಗೆಗಳನ್ನು (ಉದಾಹರಣೆಗಳನ್ನು) ಕೊಡುತ್ತೇನೆ. ರಯ್ತ ಸಂಗ ಕಟ್ಟಿದ ನಂಜುಂಡಸ್ವಾಮಿಯವರ ಮಗಳ ಹೆಸರು ಚುಕ್ಕಿ. ಹೆಸರಾಂತ ಸಾಹಿತಿಗಳಾದ ದಾರವಾಡದ ಪಟ್ಟಣಶೆಟ್ಟಿ ದಂಪತಿಗಳ ಮಗಳ ಹೆಸರು ಹೂ. ಸಾಹಿತಿ ಹಾಗು ಚಿತ್ರ ನಿರ‍್ದೇಶಕ ನಾಗತಿಹಳ್ಳಿಯವರ ಇಬ್ಬರು ಹೆಣ್ಣುಮಕ್ಕಳ ಹೆಸರು ಸಿಹಿ ಮತ್ತು ಕನಸು. ಈಗ ನಮ್ಮ ನಾಡಿನ ಅಡ್ವೊಕೇಟ್ ಜನರಲ್ ಆಗಿರುವ ಹಿರಿಯ ನ್ಯಾಯವಾದಿ ರವಿವರ‍್ಮ ಕುಮಾರರ ಮಗಳ ಹೆಸರು ಬೆಳ್ಳಿ. ಇವರೆಲ್ಲಾ ಸಾಮಾನ್ಯರಲ್ಲ. ತಮ್ಮ ತಮ್ಮ ಸಾದನೆಗಾಗಿ ಹೆಸರು ಪಡೆದುಕೊಂಡಂತವರು (ಮಕ್ಕಳಿಗೆ ಹೆಸರಿಡುವ ಕಾಲಕ್ಕೆ ಇವರಿಗೆ ಇನ್ನೂ ಹೆಸರು ಬಂದಿರಲಿಕ್ಕಿಲ್ಲ. ಆಗ ಮಂದಿಯ ಕಣ್ಣಲ್ಲಿ ಇವರೂ ಸಾಮಾನ್ಯರೇ ಆಗಿದ್ದಿರಬೇಕು). ಇಂತಹ ಸಾದಕರೇ ಹೆಮ್ಮೆಯಿಂದ ತುಳಿದಂತಹ ದಾರಿಯನ್ನು ತುಳಿಯಲು ಉಳಿದವರಿಗೆ ಹಿಂಜರಿಕೆ ಆಗಲೇ ಬಾರದು ತಾನೆ? ಅಂದಹಾಗೆ, ಬೇರೆ ಕೆಲ ಕನ್ನಡಿಗರೂ ಮಕ್ಕಳಿಗೆ ಕನ್ನಡದ ಹೆಸರುಗಳನ್ನು ಇಟ್ಟಿರುವುದನ್ನು ನಾನು ನೋಡಿದ್ದೇನೆ. ನುಡಿ, ನವಿಲ್, ಇಬ್ಬನಿ, ಇಂಪು ಮುಂತಾದವು ಈ ಹೆಸರುಗಳು.
      ಹಳಗನ್ನಡದಲ್ಲಿ ಕಣ್ಣಾಡಿಸಿದರೆ ’ಆದುನಿಕ’ ಎನಿಸುವ ಹಲವಾರು ಹೆಸರುಗಳು ದೊರೆಯುತ್ತವೆ. ಇನ್ನು ’ಬರೀ ಕನ್ನಡದ್ದೇ ಆಗಬೇಕಾಗಿಲ್ಲ, ಒಟ್ಟಾರೆ ದ್ರಾವಿಡ ಮೂಲದ್ದಾದರೆ ಸಾಕು’ ಎನ್ನುವುದಾದರೆ ಹೆಸರುಗಳ ಆಯ್ಕೆಗೆ ಕೊರತೆ ಇರುವುದಿಲ್ಲ. ತುಳು, ಕೊಡವ, ತಮಿಳು, ತೆಲುಗು ಮತ್ತು ಮಲಯಾಳ ಬಾಶೆಗಳಿಂದ ಹೇರಳವಾಗಿ ಹೆಸರುಗಳು ದೊರೆಯಬಹುದು. ಒಂದು ರೀತಿಯಲ್ಲಿ ಎಲ್ಲಾ ದ್ರಾವಿಡ ನುಡಿಗಳಿಂದ ಹೆಸರುಗಳನ್ನು ಹೆಕ್ಕಿಕೊಳ್ಳುವುದೇ ಒಳ್ಳೆಯದು. ಹಾಗೆ ಮಾಡುವುದರಿಂದ ’ದ್ರಾವಿಡ ನುಡಿಗಳನ್ನಾಡುವ ನಮ್ಮೆಲ್ಲರದು ಒಂದೇ ಸಮುದಾಯ’ ಎನ್ನುವ ಅರಿವಿಗೆ ಹೆಚ್ಚಿನ ಇಂಬು ಸಿಕ್ಕಂತಾಗುತ್ತದೆ.
      ಇಶ್ಟೆಲ್ಲಾ ಹೇಳಿದ ಮೇಲೆ ಒಂದು ಎಚ್ಚರಿಕೆಯ ಮಾತನ್ನೂ ಹೇಳಬೇಕಾಗುತ್ತದೆ. ’ದ್ರಾವಿಡ ಹೆಸರನ್ನೇ ಇಡುತ್ತೇನೆ’ಎಂದು ಹಟಕ್ಕೆ ಬಿದ್ದು ಮಕ್ಕಳಿಗೆ ಹೇಗೆ ಹೇಗೋ ಹೆಸರನ್ನಿಡುವುದು ಸರಿಯಲ್ಲ. ಹೆಸರನ್ನಿಡುವುದೇನೋ ತಂದೆತಾಯಿಗಳು. ಆದರೆ, ಅದರ ಹೊರೆಯನ್ನು ಹೊರುವುದು ಮಾತ್ರ ಬಡಪಾಯಿ ಮಕ್ಕಳು! ಆದ್ದರಿಂದ, ಮಕ್ಕಳಿಗೆ ಹೆಸರನ್ನಿಡುವಾಗ ಸಮಾಜ ಆ ಹೆಸರನ್ನು ಹೇಗೆ ನೋಡಬಹುದು ಎಂಬುದರ ಪರಿವೆಯೂ ನಮಗಿರಬೇಕು. ಜಾಗರೂಕತೆಯಿಂದ ಹೆಸರನ್ನಿಡಬೇಕು. ಒಟ್ಟಾರೆ ನನ್ನ ಈ ಬರಹದ ಉದ್ದೇಶ ಇಶ್ಟೆ - ’ಇಂಪಾದ ಇಲ್ಲ ಆದುನಿಕ ಎನಿಸುವ ಹೆಸರುಗಳು ಬರೀ ಸಂಸ್ಕ್ರುತದ ಸೊತ್ತಲ್ಲ. ದ್ರಾವಿಡ ನುಡಿಗಳಲ್ಲೂ ಅವು ಇವೆ. ಮಕ್ಕಳ ಹೆಸರನ್ನು ಆಯುವಾಗ ಕನ್ನಡ ಮತ್ತು ಉಳಿದ ದ್ರಾವಿಡ ನುಡಿಗಳಲ್ಲೂ ಒಮ್ಮೆ ಕಣ್ಣಾಡಿಸುವುದು ಒಳ್ಳೆಯದು. ಹಾಗೆ ಮಾಡುವುದರಿಂದ ಮುದ್ದಾದ ಹಾಗೂ ಸಾಮಾನ್ಯವಲ್ಲದ ಹೆಸರುಗಳು ನಮ್ಮ ನುಡಿಗಳಲ್ಲೇ ನಮಗೆ ಸಿಗಬಹುದು.’

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಸೋಮವಾರ, ಜೂನ್ 10, 2013

ಇಂಗ್ಲೀಶಿನೊಡನೆ ಕನ್ನಡದೊಲವನ್ನೂ ಕಲಿಸಬೇಕು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕಳೆದ ಏಪ್ರಿಲ್ಲಿನ ಎರಡನೇ ವಾರ ಇರಬೇಕು. ದೇವನಹಳ್ಳಿಯ ಬಸ್ ನಿಲ್ದಾಣದಲ್ಲಿ ಬೆಂಗಳೂರಿನ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಆಗ ಅಲ್ಲಿ ಅಯ್ದಾರು ಕಾಲೇಜು ಹುಡುಗರು ನನ್ನ ಹತ್ತಿರವೇ ನಿಂತುಕೊಂಡು ಹರಟೆ ಹೊಡೆಯುತ್ತಿದ್ದರು. "ಏನ್ರಪ್ಪಾ, ಏನ್ ಓತ್ತಾ ಇದ್ದೀರಿ?" ಎಂದು ಆತ್ಮೀಯತೆಯಿಂದ ಪ್ರಶ್ನೆ ಮಾಡಿ ನಾನೂ ಕೂಡ ಸ್ವಲ್ಪ ಹೊತ್ತಿನಲ್ಲಿ ಅವರೊಂದಿಗೆ ಮಾತಿಗೆ ಸೇರಿಕೊಂಡೆ. ಮಾತಿನ ನಡುವೆ ಅವರಲ್ಲಿ ಒಬ್ಬ ಹುಡುಗ, ಯಾರೋ ಒಬ್ಬರ ಬಗ್ಗೆ ಮಾತಾಡುತ್ತ, "ಅವರು ಲಾಂಗಾಗಿದಾರೆ" ಎಂದು ಹೇಳಿದ. ’ಅವರು ಎತ್ತರವಾಗಿದ್ದಾರೆ’ ಎಂದು ಹೇಳುವುದು ಅವನ ಉದ್ದೇಶವಾಗಿತ್ತು. ನಾನು ಕೂಡಲೇ, "ಲಾಂಗಾಗಿದಾರೆ ಅಂತ ಅನ್ನಬಾರದು. ಟಾಲಾಗಿದ್ದಾರೆ ಅಂತ ಅನ್ಬೇಕು. ಲಾಂಗಾಗಿದಾರೆ  ಅಂತಾನೂ ಹೇಳ್ಬೋದೇನೋ. ಆದರೆ, ಈಗೆಲ್ಲ ಸಾಮಾನ್ಯವಾಗಿ ಎಲ್ಲರೂ ಟಾಲ್ ಅಂತಾನೇ ಹೇಳೋದು" ಎಂದು ತಂತಾನೆ ಅವನಿಗೆ ಹೇಳಿಬಿಟ್ಟೆ. ನಾನು ಹೇಳಿದ್ದನ್ನು ಕೇಳಿ ಅವನ ಮುಕ ಕೊಂಚ ಮಂಕಾಯಿತು. ಅವನಿಗೆ ಬೇಸರವಾದದ್ದನ್ನು ನೋಡಿ, "ಬೇಜಾರ್ ಮಾಡ್ಕೋಬೇಡಪ್ಪಾ, ನಿನ್ನ ಇಂಗ್ಲೀಶ್ ಸರಿ ಆಗ್ಲಿ ಅನ್ನೋ ಒಳ್ಳೇ ಉದ್ದೇಶ್ದಿಂದ ಆಟೋಮ್ಯಾಟಿಕ್ಕಾಗಿ ಹೇಳ್ಬಿಟ್ಟೆ ಅಶ್ಟೇ. ಬೇರೆ ಇನ್ನೇನೂ ಅಲ್ಲ." ಎಂದು ನಾನು ತಕ್ಶಣವೇ ಕಳಕಳಿಯಿಂದ ಅವನಿಗೆ ಸಮಾದಾನ ಆಗುವಂತೆ ಹೇಳಿದೆ. ಹಾಗೆ ಮಾಡಿದ್ದರಿಂದ ಅವನ ಮುಕ ಮತ್ತೆ ಮೊದಲಿನಂತಾಯಿತು. ಬೇಗನೇ ಚೇತರಿಸಿಕೊಂಡ ಅವನು, "ಇಲ್ಲಿ ಎಲ್ರೂ ಲಾಂಗಾಗಿದಾರೆ ಅಂತಾನೇ ಹೇಳೋದು ಸಾರ್. ನೀವು ಬೆಂಗಳೂರಿನೋರು. ನಿಮ್ಮಶ್ಟ್ ಚನ್ನಾಗಿ ನಮಗೆ ಇಂಗ್ಲೀಶ್ ಬರ‍್ಲಿಕ್ಕೆ ಸಾದ್ಯಾನಾ?" ಎಂದು ’ಸಣ್ಣ ಊರಿನವರಿಗೆ ಇಂಗ್ಲೀಶ್ ಕಲಿಕೆಯಲ್ಲಿ ಅನ್ಯಾಯ ಆಗುತ್ತಿದೆ’ ಎನ್ನುವ ದಾಟಿಯಲ್ಲಿ ಕೇಳಿದ. "ಬೆಂಗ್ಳೂರ‍್ನವರಿಗೂ ಇಂಗ್ಲೀಶ್ ಸರಿಯಾಗಿ ಬರೋದಿಲ್ಲಪ್ಪ" ಎಂದು ಹೇಳಿ ನಾನು ಅವನಿಗೆ ಇನ್ನಶ್ಟು ಸಮದಾನ ಮಾಡಿದೆ. ಅಲ್ಲಿಂದ ನಮ್ಮ ಮಾತು ’ಇಂಗ್ಲೀಶ್ ಬೇಕೋ ಬೇಡವೋ, ಇಂಗ್ಲೀಶ್ ಎಶ್ಟು ಕಲೀಬೇಕು, ಯಾವ ವಯಸ್ಸಿನಿಂದ ಕಲೀಬೇಕು’ ಎಂದು ಮುಂತಾದ ವಿಶಯಗಳ ಕಡೆಗೆ ತಿರುಗಿತು.
      ’ಈಗ ಕೆಲಸ ಸಿಗಬೇಕು ಅಂದರೆ ಇಂಗ್ಲೀಶ್ ಬರಬೇಕು. ದೊಡ್ಡ ಊರುಗಳಲ್ಲಿ ಬೆಳೆದವರಿಗೆ ಇಂಗ್ಲೀಶ್ ಚೆನ್ನಾಗಿ ಬರುತ್ತದೆ. ಸಣ್ಣ ಊರಿನವರಿಗೆ ಇಂಗ್ಲೀಶ್ ಬರುವುದಿಲ್ಲ. ಇದರಿಂದಾಗಿ ಒಳ್ಳೆಯ ಕೆಲಸಗಳು ಪಟ್ಟಣದವರ ಪಾಲಾಗುತ್ತಿವೆ. ಕಡಿಮೆ ಸಂಬಳದ ಕೆಲಸಗಳು ಮಾತ್ರ ಹಳ್ಳಿಯವರಿಗೆ ಸಿಗುತ್ತಿವೆ. ಪಟ್ಟಣದ ಹುಡುಗರ ಜೊತೆ ಸ್ಪರ‍್ದಿಸುವುದು ಹಳ್ಳಿಯ ಹುಡುಗರಿಗೆ ತುಂಬಾ ಕಶ್ಟವಾಗಿದೆ. ಹಳ್ಳಿಯ ಹುಡುಗರಲ್ಲಿ ಕೀಳರಿಮೆ ಉಂಟಾಗಿದೆ. ಇಂಗ್ಲೀಶ್ ಬೇಕೇ ಬೇಕು. ಆದರೆ, ಚಿಕ್ಕ ಊರುಗಳಲ್ಲಿ ಇಂಗ್ಲೀಶನ್ನು ಅಶ್ಟು ಸರಿಯಾಗಿ ಕಲಿಸುತ್ತಿಲ್ಲ’ - ಒಟ್ಟಾರೆಯಾಗಿ ಹೀಗೆ, ಮಾತಿನ ವೇಳೆ ಆ ಹುಡುಗರು ಅವರ ಅಳಲನ್ನು ತೋಡಿಕೊಂಡರು. ಸರ‍್ಕಾರ ಪದವಿಗಾಗಿ ಓದುತ್ತಿರುವ ವಿದ್ಯಾರ‍್ತಿಗಳಿಗೆ ಇಂಗ್ಲೀಶಿನಲ್ಲಿ ಮಾತನಾಡುವುದನ್ನು ಕಲಿಸಲು ವಿಶೇಶವಾದ ಯೋಜನೆಗಳನ್ನು ಹಾಕಿಕೊಂಡಿರುವುದರ ಬಗ್ಗೆ ಇತ್ತೀಚೆಗೆ ನಾನು ಪತ್ರಿಕೆಯಲ್ಲಿ ಓದಿದ್ದೆ. ಅದರ ಬಗ್ಗೆ ಅವರನ್ನು ಕೇಳಿದೆ. ಆ ಯೋಜನೆಗಳ ಪರಿಚಯ ಅವರಿಗೆ ಇರಲಿಲ್ಲ. ’ಅಂತಹ ಯೋಜನೆ ಇದ್ದರೂ, ಇಂಗ್ಲೀಶಿನಲ್ಲಿ ಮಾತಾಡುವುದನ್ನು ಅಶ್ಟು ತಡವಾಗಿ ಕಲಿಸಿದರೆ ಹೆಚ್ಚು ಪ್ರಯೋಜನವಿಲ್ಲ. ಕಾನ್ವೆಂಟು ಶಾಲೆಗಳ ಹಾಗೆ ಚಿಕ್ಕ ವಯಸ್ಸಿನಿಂದಲೇ ಹೇಳಿಕೊಡಬೇಕು.’ ಎಂದು ಆ ಯೋಜನೆಯ ಬಗ್ಗೆ ಅವರು ಅಬಿಪ್ರಾಯ ಪಟ್ಟರು.
      ಅಶ್ಟರಲ್ಲಿ ಬಸ್ಸು ಬಂತು. ಎಲ್ಲರೂ ಬಸ್ ಹತ್ತಿಕೊಂಡೆವು. ಬಸ್ಸಿನಲ್ಲಿ ಕುಳಿತು, ಅದುವರೆಗೂ ಮಾತಾಡಿದ್ದರ ಬಗ್ಗೆ ಯೋಚನೆ ಮಾಡಿದೆ. ನಮ್ಮ ಸಮಾಜದಲ್ಲಿರುವ ’ಇಂಗ್ಲೀಶಿನಲ್ಲಿ ಮಾತಾಡುವುದನ್ನು ಕಲಿತವರೇ ವಿದ್ಯಾವಂತರು, ಇಂಗ್ಲೀಶ್ ಬಾರದವರು ಅವಿದ್ಯಾವಂತರು’ ಎನ್ನುವ ದೋರಣೆ ನಿಜಕ್ಕೂ ತುಂಬಾ ಹಳೆಯದು. ನಾನು ಚಿಕ್ಕವನಾಗಿದ್ದಾಗಲೂ ಅದು ಇತ್ತು. ಇಂಗ್ಲೀಶರ ಆಡಳಿತ ಶುರುವಾದಾಗಲಿಂದಲೂ ಇಂಗ್ಲೀಶಿನಲ್ಲಿ ಮಾತನಾಡಲು ಬರುವುದು ನಮಗೆ ಒಂದು ಪ್ರತಿಶ್ಟೆಯ ಕುರುಹು ಆಗಿ ಬಂದಿರುವ ಹಾಗೆ ಕಾಣುತ್ತದೆ. ಇಂಗ್ಲೀಶ್ ಬರುವವರು ಅದು ಬಾರದವರಿಗೆ ಬಹಳ ಹಿಂದಿನಿಂದಲೂ ಕೀಳರಿಮೆ ಬರಿಸಿದ್ದಾರೆ. ಆದರೂ, ಕೆಲಸ ಪಡೆದುಕೊಳ್ಳುವ ವಿಶಯದಲ್ಲಿ ಇಂಗ್ಲೀಶ್ ಬಾರದಿರುವುದು ಹಿಂದೆ ಅಶ್ಟು ದೊಡ್ದ ತೊಡಕು ಎನಿಸಿರಲಿಲ್ಲ ಎಂದು ತೋರುತ್ತದೆ. ಆದರೆ ಈಗ, ಅದರಲ್ಲೂ ಜಾಗತೀಕರಣ ಬಂದ ಮೇಲೆ, ಸಮಾಜ ಇಂಗ್ಲೀಶಿಗೂ ಕೆಲಸ ದೊರಕಿಸಿಕೊಳ್ಳುವುದಕ್ಕೂ ಬಿಗಿಯಾಗಿ ತಳುಕು ಹಾಕಿರುವಂತೆ ಕಾಣುತ್ತಿದೆ. ಸಮಾಜ ಹಾಗೆ ಮಾಡಿರುವುದಕ್ಕೆ ಸರಿಯಾದ ಕಾರಣಗಳೂ ಇವೆ. ಒಂದೇ ಎಡೆಯಲ್ಲಿ ಬೇರೆ ಬೇರೆ ನುಡಿಗಳನ್ನು ಆಡುವವರು ವಾಸ ಮಾಡುವುದು ಹೆಚ್ಚುತ್ತಿದೆ. ಹೆಚ್ಚು ಹೆಚ್ಚು ಕಂಪನಿಗಳ ವಹಿವಾಟುಗಳು ಅಂತರ ರಾಶ್ಟ್ರೀಯ ಹರವನ್ನು ಪಡೆದುಕೊಳ್ಳುತ್ತಿವೆ. ಪ್ರಪಂಚದಗಲಕ್ಕೂ ಈಗ ಇಂಗ್ಲೀಶ್ ಕಲಿಕೆ ಬಿರುಸಿನಿಂದ ಸಾಗಿದೆ. ಆದ್ದರಿಂದ, ಇಂಗ್ಲೀಶ್ ಕಲಿಯುವುದು ಅಗತ್ಯವೂ ಉಪಯುಕ್ತವೂ ಅಗುತ್ತಿದೆ. ಒಟ್ಟಿನಲ್ಲಿ, ಇಂಗ್ಲೀಶ್ ಮಾತಾಡುವುದು ಬಂದರೆ ಕೆಲಸ ಮತ್ತು ಮನ್ನಣೆ - ಎರಡೂ ಸಿಗುತ್ತವೆ ಈಗ ನಮ್ಮ ಸಮಾಜದಲ್ಲಿ. ಹಾಗಾಗಿ, ಹಳ್ಳಿಯಾಗಲೀ ಪಟ್ಟಣವಾಗಲೀ, ಎಲ್ಲಾ ಕಡೆ ಈಗ ತಂದೆತಾಯಿಗಳು ತಮ್ಮ ಮಕ್ಕಳು ಇಂಗ್ಲೀಶ್ ಮಾತಾಡುವುದನ್ನು ಕಲಿಯಬೇಕು, ಅದರಲ್ಲೂ ಚಿಕ್ಕ ವಯಸ್ಸಿನಿಂದಲೇ ಕಲಿಯಬೇಕು ಎಂದು ಕಾತರಿಸುತ್ತಿದ್ದಾರೆ. ಆದ್ದರಿಂದಲೇ ಇಂಗ್ಲೀಶ್ ಮಾದ್ಯಮದ ಶಾಲೆಗಳಿಗೆ ಅಶ್ಟೊಂದು ಬೇಡಿಕೆ.
      ಇಂಗ್ಲೀಶಿನಲ್ಲಿ ಮಾತನಾಡುವ ಆಸೆ ಬಾನಿಗೇರಿರುವುದು ಎಲ್ಲರಿಗೂ ಗೊತ್ತಿರುವ ವಿಶಯ. ಅದರಲ್ಲಿ ಹೊಸದೇನೂ ಇಲ್ಲ. ಇತ್ತೀಚೆಗೆ ಚುನಾವಣೆ ಸಂದರ‍್ಬದಲ್ಲಿ, ಜನತಾದಳ ಪಕ್ಶ ’ಬೆಂಗಳೂರಿನ ಪ್ರತಿ ವಾರ‍್ಡಿನಲ್ಲೂ ಒಂದು ಮಾದರಿ ಇಂಗ್ಲೀಶ್ ಶಾಲೆಯನ್ನು ತೆರೆಯುವುದಾಗಿ’ ಪ್ರಣಾಳಿಕೆಯಲ್ಲಿ ಹೇಳಿತು. ಶ್ರೀರಾಮುಲು ಅವರ ಪಕ್ಶ ಇನ್ನೂ ಮುಂದೆ ಹೋಗಿ ’ನಾಡಿನ ಎಲ್ಲಾ ಸರ‍್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲೀಶನ್ನು ಕಲಿಸಿಕೊಡುವುದಾಗಿ’ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತು. ನಾಡಿನ ಮಂದಿ ತಮ್ಮ ಮಕ್ಕಳಿಗೆ ಇಂಗ್ಲೀಶ್ ಕಲಿಸುವುದಕ್ಕೆ ಎಶ್ಟು ಹಾತೊರೆಯುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಆದಾರ ಬೇಡ. ಮಂದಿಗೆ ಏನು ಬೇಕೋ ಅದನ್ನು ಕೊಡುತ್ತೇವೆ ಎಂದು ಹೇಳಿ ಮತ ಪಡೆದುಕೊಳ್ಳುವುದೇ ತಾನೆ ಪುಡಾರಿಗಳ ಚಾಳಿ? ಅದೇನೆ ಇರಲಿ, ತಂದೆತಾಯಿಗಳಲ್ಲಿ ಇಂದು ಅವರ ಮಕ್ಕಳು ಇಂಗ್ಲೀಶಿನಲ್ಲಿ ಅರಳು ಹುರಿದಂತೆ ಮಾತನಾಡಬೇಕು ಎಂಬ ಹಂಬಲ ಎಶ್ಟು ಬಲವಾಗಿ ಬೇರೂರಿದೆ ಅಂದರೆ, ಮಕ್ಕಳಿಗೆ ಇಂಗ್ಲೀಶ್ ಮಾತನಾಡುವುದನ್ನು ಕಲಿಸದೇ ಬೇರೆ ದಾರಿಯೇ ಇಲ್ಲ, ಎನ್ನುವ ಹಾಗಾಗಿದೆ. ಹಾಗಾಗಿ, ಎಲ್ಲಾ ಮಕ್ಕಳೂ ಹೇಗೋ ಒಂದು ಬಗೆಯಲ್ಲಿ ಇಂಗ್ಲೀಶ್ ಕಲಿತು ಮಾತನಾಡುವ ಕಾಲ ಇನ್ನು ದೂರ ಉಳಿದಿಲ್ಲ. ಇದು ನನ್ನಿ! ಇದು, ಕನ್ನಡ ಉಳಿಯಬೇಕು ಎಂದು ಬಯಸುವ ನಮ್ಮಂತಹವರೆಲ್ಲ ತಪ್ಪದೆ ತಲೆಯಲ್ಲಿಟ್ಟುಕೊಳ್ಳಬೇಕಾದ ಕಡು ನನ್ನಿ.
      ಈಗ ಪ್ರಶ್ನೆ ಇದು - ಎಲ್ಲರೂ ಇಂಗ್ಲೀಶ್ ಮಾತನಾಡುವುದನ್ನು ಕಲಿತಾಗ ಕನ್ನಡ ಮಾತನಾಡುವವರು ಯಾರು? ಇಂಗ್ಲೀಶಿನ ವಾತಾವರಣದಲ್ಲಿ ಕನ್ನಡ ಮಾತಾಡುವುದನ್ನು ಉಳಿಸಿಕೊಳ್ಳುವುದು ಹೇಗೆ? ಎಲ್ಲರಿಗೂ ತಿಳಿದಂತೆ ಇಂಗ್ಲೀಶ್ ಬಲ್ಲವರಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ಇಂಗ್ಲೀಶನ್ನೇ ಆಡುತ್ತಾರೆ. ಇಂಗ್ಲೀಶ್ ಬಂದೂ ಕನ್ನಡವನ್ನೇ ಹೆಚ್ಚಾಗಿ ಆಡುವವರು ಕಡಿಮೆ. ಇಂಗ್ಲೀಶ್ ಆಡುವುದು ಹಲವು ವೇಳೆ ಪ್ರತಿಶ್ಟೆಗಾಗಿ ಮಾತ್ರ. ಪ್ರತಿಶ್ಟೆ ಮನುಶ್ಯರಿಗೆ ಅಶ್ಟು ಮುಕ್ಯ. ಆದರೆ, ಪ್ರತಿಶ್ಟೆ ಅಶ್ಟು ಮುಕ್ಯವಾದರೂ ಕೆಲವರಿಗಾದರೂ ಪ್ರತಿಶ್ಟೆಯನ್ನೂ ಮೀರಿದ ಕನ್ನಡದ ಒಲವು ಇರುತ್ತದೆ ಎನ್ನುವುದೂ ನಿಜ. ಇಂತಹವರನ್ನೂ ನಾವು ನೋಡುತ್ತೇವೆ. ಕನ್ನಡದ ಮೇಲೆ ಒಲವು ಮತ್ತು ಅಬಿಮಾನ ಇರುವವರು ಇಂಗ್ಲೀಶ್ ಬಂದರೂ ಕನ್ನಡವನ್ನೇ ಆಡುತ್ತಾರೆ. ಕನ್ನಡ ಮಾತಾಡುವುದನ್ನು ಉಳಿಸುವ ಸುಳುಹು ನಮಗೆ ಇಂತಹವರಿಂದ ಬಹುಶಹ ಸಿಗಬಹುದು.
      ಮುಕ್ಯವಾಗಿ ನಮ್ಮ ಮಂದಿಗೆ ಮತ್ತು ಮಕ್ಕಳಿಗೆ ಕನ್ನಡದ ಬಗ್ಗೆ ಒಲವು ಮತ್ತು ಅಬಿಮಾನಗಳನ್ನು ಮೂಡಿಸಬೇಕು. ’ತಾಯ್ನುಡಿಯ ಬಗ್ಗೆ ಒಲವನ್ನು ಯಾರೂ ಕಲಿಸಬೇಕಾಗಿಲ್ಲ. ಅದು ತಾನಾಗೇ ಬರುತ್ತದೆ’ ಎನ್ನುವ ನಂಬಿಕೆ ಸುಳ್ಳು. ಇದಕ್ಕೆ ಇಂದಿನ ಇಂಗ್ಲೀಶ್ ಬರುವ ಕನ್ನಡಿಗರ ನಡವಳಿಕೆಯೇ ಸಾಕ್ಶಿ. ತಾಯ್ನುಡಿಯ ಪ್ರೀತಿ ಮತ್ತು ಅಬಿಮಾನಗಳನ್ನೂ ಕೂಡ ಬೇರೆ ವಿದ್ಯೆಗಳನ್ನು ಕಲಿಸುವ ಹಾಗೆಯೆ ಕಲಿಸಬೇಕು. ಕನ್ನಡದ ಮಟ್ಟಿಗೆ ಹೇಳುವುದಾದರೆ, ಕನ್ನಡ ಒಂದು ದ್ರಾವಿಡ ನುಡಿ, ಕನ್ನಡ ಆಡುವ ಪ್ರದೇಶದ ಹರವು ಅರ‍್ದಕ್ಕಿಂತಲೂ ಹೆಚ್ಚು ಕುಗ್ಗಿದೆ, ಒಮ್ಮೆ ಇಡೀ ದೇಶದ ಅಗಲಕ್ಕೂ ಹರಡಿದ್ದ ದ್ರಾವಿಡ ನುಡಿಗಳು ಇಂದು ಎಲ್ಲವನ್ನೂ ಕಳೆದುಕೊಂಡು ತೆಂಕಣದ ಬಾಗದಲ್ಲಿ ಮಾತ್ರ ಉಳಿದುಕೊಂಡಿವೆ, ಹೀಗೆ ಪ್ರಪಂಚದಲ್ಲಿ ಉಳಿದುಕೊಂಡಿರುವ ಕೆಲವೇ ಕೆಲವು ದ್ರಾವಿಡ ನುಡಿಗಳಲ್ಲಿ ಕನ್ನಡ ನುಡಿ ಮುಕ್ಯ, ಕನ್ನಡದ ನುಡಿಪಿನ (ಸಾಹಿತ್ಯದ) ಸಂಪತ್ತು ಸಾವಿರ ವರ‍್ಶಗಳನ್ನೂ ಮೀರಿದೆ, ಕನ್ನಡ ನುಡಿಯನ್ನು ಆಡುವವರದು ದ್ರಾವಿಡ ಬುಡಕಟ್ಟಿನ ಹಿನ್ನೆಲೆ, ದ್ರಾವಿಡರಿಗೆ ಇತಿಹಾಸದ ಉದ್ದಕ್ಕೂ ಹಿನ್ನಡೆ ಆಗಿದೆ - ಹೀಗೆ ಕನ್ನಡದ ಬಗ್ಗೆ ಎಲ್ಲ ವಾಸ್ತವ ವಿಶಯಗಳ ಅರಿವನ್ನು ತಿಳಿಸಿಕೊಡುವುದರಿಂದ ಕನ್ನಡಿಗರಿಗೆ ಕನ್ನಡದ ಮೇಲೆ ಅಬಿಮಾನ ಮೂಡಿಸಬಹುದು ಎಂಬುದು ನನ್ನ ನಂಬಿಕೆ. ತ್ರಿಬಾಶಾ ಸೂತ್ರದಿಂದಾಗಿ ಕೆಲಸಕ್ಕೆ ಬಾರದ ಹಿಂದೀಯನ್ನು ಕಲಿಸುವುದರಲ್ಲಿ ಸಮಯವನ್ನು ಪೋಲು ಮಾಡುವ ಬದಲು, ಅದೇ ಸಮಯದಲ್ಲಿ ನಮ್ಮ ವಿದ್ಯಾರ‍್ತಿಗಳಿಗೆ ಇಂಗ್ಲೀಶ್ ಮಾತಾಡುವುದನ್ನೋ ಅತವ ಕನ್ನಡದ ಬಗ್ಗೆ ಅಬಿಮಾನ ಬೆಳೆಸಿಕೊಳ್ಳುವುದನ್ನೋ ಕಲಿಸಿದರೆ ಒಳ್ಳೆಯದು ಎನಿಸುತ್ತದೆ ನನಗೆ.
      ’ಕನ್ನಡ ಮಾತನಾಡಿದರೆ ಕೆಲಸ ದೊರೆಯುತ್ತದೆ, ಕನ್ನಡ ಮಾತನಾಡಿದರೆ ಜನ ಬೆಲೆ ಕೊಡುತ್ತಾರೆ, ಕನ್ನಡ ಮಾತನಾಡಿದರೆ ಲಾಬ ಉಂಟು, ಕನ್ನಡ ಮಾತಾಡದೆ ಬೇರೆ ದಾರಿಯೇ ಇಲ್ಲ’ ಎಂಬ ನೆಲೆಯನ್ನು ದಿನನಿತ್ಯದ ಬದುಕಿನಲ್ಲಿ ನಮಗೆ ಸ್ರುಶ್ಟಿ ಮಾಡಲಿಕ್ಕೆ ಸಾದ್ಯವಾದರೆ ಕನ್ನಡ ಮಾತಾಡುವುದು ತಾನಾಗೇ ಉಳಿಯುತ್ತದೆ. ಆದರೆ, ಅಂತಹ ನೆಲೆಯನ್ನು ಉಂಟುಮಾಡುವುದು ಇಂದಿನ ಸನ್ನಿವೇಶದಲ್ಲಿ ಸುಲಬದ ಮಾತೆ? ಹಾಗಾಗಿ, ಕನ್ನಡಿಗರು ಕನ್ನಡ ಮಾತನಾಡುವುದನ್ನು ಬಿಡಬಾರದೆಂದರೆ, ಕನ್ನಡದ ಬಗ್ಗೆ ಒಲವನ್ನು ನಿರ‍್ದಿಶ್ಟ ಪ್ರಯತ್ನಗಳಿಂದ ಅವರಲ್ಲಿ ಮೂಡಿಸುವುದು ಅವಶ್ಯವಾಗುತ್ತದೆ. ಕನ್ನಡಿಗರು ’ಕನ್ನಡದಿಂದ ನನಗೇನು ಲಾಬ?’ ಎನ್ನುವ ಬದಲು ’ನನ್ನಿಂದ ಕನ್ನಡಕ್ಕೇನು ಲಾಬ?’ ಎಂದು ಕೇಳುವಂತಾಗಬೇಕು. ಇಂತಹ ಬಾವನೆ ಬರುವುದು ನಾವು ನಮ್ಮ ಕನ್ನಡವನ್ನು ಪ್ರೀತಿಸಿದರೆ ಮಾತ್ರ. ಹಾಗಾಗಿ, ಕನ್ನಡದ ಬಗ್ಗೆ ಪ್ರೀತಿ ಮೂಡಿಸುವ ಕೆಲಸ ಕನ್ನಡವನ್ನೂ ಕನ್ನಡ ಮಾತಾಡುವುದನ್ನೂ ಉಳಿಸುವ ಪ್ರಯತ್ನದಲ್ಲಿ ಒಂದು ಮುಕ್ಯವಾದ ಉಪಾಯ. ಆದರೆ, ಪ್ರಶ್ನೆ ಇದು - ಈ ಪ್ರಯತ್ನದಲ್ಲಿ ಗಟ್ಟಿ ನಿರ‍್ದಾರದಿಂದ ತೊಡಗುವ ಚಲ ನಮಗಿದೆಯೆ? ಇದಕ್ಕೆ ಕಾಲವೇ ಉತ್ತರ ಹೇಳಬೇಕು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್