ಶನಿವಾರ, ಮೇ 25, 2013

ರಮ್ಯಾ ಮಾಡಿದ್ದು ತಪ್ಪೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕಳೆದ ತಿಂಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಶದ ಹುರಿಯಾಳಿಗಾಗಿ ಕನ್ನಡ ಚಿತ್ರರಂಗದ ತಾರೆ ರಮ್ಯಾ ಶಾಂತಿನಗರ ಕ್ಶೇತ್ರದಲ್ಲಿ ಪ್ರಚಾರ ಕೈಗೊಂಡಿದ್ದರು. ಶಾಂತಿನಗರ ಕ್ಶೇತ್ರದಲ್ಲಿ ತಮಿಳರ ಸಂಕ್ಯೆ ಹೆಚ್ಚು. ರಮ್ಯಾಗೆ ತಮಿಳಿನಲ್ಲಿ ಮಾತನಾಡುವುದು ಬರುತ್ತದೆ. ಒಂದು ಕಡೆ ಅವರ ಪ್ರಚಾರ ಮೆರವಣಿಗೆಯನ್ನು ನೋಡಲು ನೆರೆದಿದ್ದ ಮಂದಿಯಲ್ಲಿ ತಮಿಳರೇ ಹೆಚ್ಚು ಇದ್ದಿದ್ದರಿಂದ, ರಮ್ಯಾ ತಮಿಳಿನಲ್ಲೇ ಅವರನ್ನು ಉದ್ದೇಶಿಸಿ ಮಾತನಾಡಿದರು. ಪ್ರಚಾರದ ಹುರುಪಿನಲ್ಲಿದ್ದ ರಮ್ಯಾ ತಮಗೆ ಅರಿವಿಲ್ಲದಂತೆಯೇ ಹಾಗೆ ಸಹಜವಾಗಿ ತಮಿಳಿನಲ್ಲಿ ಮಾತನಾಡಿರಬಹುದು, ಇಲ್ಲ, ತಮಿಳರನ್ನು ಓಲಯ್ಸುವ ಸಲುವಾಗಿ ಉದ್ದೇಶಪೂರ‍್ವಕವಾಗೇ ತಮಿಳಿನಲ್ಲಿ ಮಾತನಾಡಿರಬಹುದು. ಕಾರಣ ಏನೇ ಇರಲಿ, ಚುನಾವಣಾ ಪ್ರಚಾರದಂತಹ ಹುರುಪಿನ ಸನ್ನಿವೇಶಗಳಲ್ಲಿ ಈ ರೀತಿ ಮತದಾರರನ್ನು ಪುಸಲಾಯಿಸುವುದು ತೀರಾ ಸಹಜ ಮತ್ತು ಸಾಮಾನ್ಯ. ಜನಸಾಮಾನ್ಯರು ಇಂತಹವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಕೆಲ ಟೀವಿ ಚಾನೆಲ್ಲುಗಳ ಪರಿಯೇ ಬೇರೆ. ಒಂದು ಕನ್ನಡ ಚಾನೆಲ್, ರಮ್ಯಾ ತಮಿಳಿನಲ್ಲಿ ಮಾತನಾಡಿದ ಈ ಸಾಸಿವೆಯಂತಹ ಸಣ್ಣ ವಿಶಯವನ್ನು ಎತ್ತಿಕೊಂಡು ಬೆಟ್ಟದಶ್ಟು ದೊಡ್ಡದು ಮಾಡಿ ಎರಡು-ಮೂರು ಗಂಟೆಗಳ ಕಾಲ ರಮ್ಯಾರ ಮೇಲೆ ಹಾಗೂ ಪರೋಕ್ಶವಾಗಿ ತಮಿಳರ ಮೇಲೆ ವಿಶ ಕಾರಿತು. ಜೊತೆಗೆ, ತಾವೇ ಕನ್ನಡ ಬಕ್ತರು ಎಂದು ತಿಳಿದುಕೊಂಡಿರುವ ಕೆಲ ಕನ್ನಡಿಗರಿಂದಲೂ ಟೆಲಿಫೋನ್ ಕರೆಗಳನ್ನು ತೆಗೆದುಕೊಂಡು, ಅವರಿಂದಲೂ ವಿಶ ಕಾರಿಸಿತು.
      ಚಾನೆಲ್ಲಿನವರ ಈ ’ಲಯ್‍ವ್’ ಕಾರ‍್ಯಕ್ರಮದ ಸುಳಿವು ಗೊತ್ತಾದಾಗ ಸ್ವತಹ ರಮ್ಯಾರೇ ಕರೆ ಮಾಡಿ ಸಮಜಾಯಿಶಿ ಕೊಡಲು ಪ್ರಯತ್ನಿಸಿದರು. ರಮ್ಯಾ ಕೊಂಚ ಯೋಚನೆ ಮಾಡಿದ್ದರೆ, ’ಪ್ರಚಾರದ ಗುಂಗಿನಲ್ಲಿದ್ದೆ. ತಮಿಳರ ಏರಿಯಾದಲ್ಲಿದ್ದೆ. ಸಹಜವಾಗೇ ನನಗೇ ಗೊತ್ತಿಲ್ಲದಂತೆ ತಮಿಳಿನಲ್ಲಿ ಮಾತನಾಡಿದೆ. ಕನ್ನಡವನ್ನು ಕಡೆಗಣಿಸಬೇಕೆಂಬ ಉದ್ದೇಶ ನನಗೆ ಇರಲಿಲ್ಲ. ನಾನು ಕನ್ನಡದವಳು. ಕನ್ನಡಿಗರಿಂದ ನಾನು ಈ ಸ್ತಿತಿಯಲ್ಲಿ ಇದ್ದೇನೆ. ನಾನು ತಮಿಳಿನಲ್ಲಿ ಮಾತನಾಡಿದ್ದರಿಂದ ಕನ್ನಡಿಗರಿಗೆ ನೋವಾಗಿದ್ದರೆ, ಅವರಲ್ಲಿ ಕ್ಶಮೆ ಕೇಳುತ್ತೇನೆ’ ಎಂದು ಸರಳವಾಗಿ, ನಡೆದುದನ್ನು ನಡೆದಂತೆ ಹೇಳಿ ಬೆಂಕಿಯನ್ನು ಆರಿಸಬಹುದಾಗಿತ್ತು. ಆದರೆ, ಹಾಗೆ ಮಾಡುವ ಬದಲು ಅವರು ’ಬಾರತದಲ್ಲಿ ಹಲವು ಬಾಶೆಗಳಿವೆ. ಎಲ್ಲಾ ಬಾಶೆಗಳನ್ನೂ ನಾವು ಗವ್‍ರವಿಸಬೇಕು’ ಎಂದು ಮುಂತಾಗಿ ಉಪದೇಶಕ್ಕೆ ತೊಡಗಿ, ಕೆಸರಿಗೆ ದೊಡ್ಡ ಕಲ್ಲನ್ನು ಹಾಕಿ ಇನ್ನಶ್ಟು ರಾಡಿಯನ್ನು ತಮ್ಮ ಮೇಲೆ ಸಿಡಿಸಿಕೊಂಡರು!
      ರಮ್ಯಾರ ಕರೆ ಮುಗಿದ ಬಳಿಕ ಚಾನೆಲ್ಲಿನವರ ಕನ್ನಡ ಕಳಕಳಿಯ ಕಾರ‍್ಯಕ್ರಮ ಇನ್ನಶ್ಟು ಜೋಶ್ ಪಡೆದುಕೊಂಡು ಮುಂದುವರೆಯಿತು. ಕಾರ‍್ಯಕ್ರಮ ನಡೆಸಿಕೊಡುತ್ತಿದ್ದ ’ಕನ್ನಡದ ಕಟ್ಟಾಳಿನ’ ಒಟ್ಟಾರೆ ತಕರಾರು ಇದಾಗಿತ್ತು - ’ನಮ್ಮ ನಾಡಿನಲ್ಲೇ ನಾವು ಕನ್ನಡವಲ್ಲದ ಬಾಶೆಯಲ್ಲಿ ಮತ ಕೇಳಲು ತೊಡಗಿದರೆ ಕನ್ನಡದ ಪಾಡೇನು?’. ಈ ಕಾರ‍್ಯಕ್ರಮ ನಡೆದ ಕೆಲ ದಿನಗಳ ಮುಂಚೆಯಶ್ಟೇ ಉತ್ತರದ ಬೀಜೇಪಿ ಮುಂದಾಳುಗಳು ಬಂದು ’ಕನ್ನಡ’ ನಾಡಿನಲ್ಲಿ ಹಿಂದೀಯಲ್ಲಿ ಬಾಶಣ ಬೊಗಳಿ ಹೋಗಿದ್ದರು. ಅದು ನಡೆದಿರುವುದು ಈ ನಮ್ಮ ಕಾರ‍್ಕ್ರಮ ನಡೆಸುತ್ತಿದ್ದ ಆಳಿನ ತಲೆಯೊಳಗಿತ್ತು. ಅದಕ್ಕಾಗಿಯೋ ಏನೋ, ಆತ, ’ನರೇಂದ್ರ ಮೋದಿಯಂತವರು ಹಿಂದೀಯಲ್ಲಿ ಬಾಶಣ ಮಾಡಿದರೆ ನಾವು ಅದನ್ನು ಮನ್ನಿಸುತ್ತೇವೆ. ಏಕೆಂದರೆ, ಅವರಿಗೆ ಕನ್ನಡ ಬರುವುದಿಲ್ಲ’ ಎಂದು ಪದೇ ಪದೇ ಹೇಳುತ್ತಿದ್ದರು. ಹೇಗಿದೆ ನೋಡಿ ಈ ವರಸೆ! ದೇಶದ ಎಲ್ಲೆಡೆಯಲ್ಲೂ ಹಿಂದೀಯ ಒಡೆತನವನ್ನು ಸ್ತಾಪಿಸಬೇಕು ಎಂದು ಟೊಂಕ ಕಟ್ಟಿರುವ ’ಕೇಸರಿಗಳು’ ಬಂದು, ಎಳ್ಳಶ್ಟೂ ಅಳುಕದೆ ಹಿಂದೀಯಲ್ಲಿ ನಮ್ಮ ಮುಂದೆ ಬೊಗಳಿ ಹೋಗುವುದನ್ನು ಕನ್ನಡದ ಕಳಕಳಿ ಇರುವ ಯಾರೇ ಆದರೂ ಕಂಡಿಸಬೇಕು. ಅದನ್ನು ಬಿಟ್ಟು ಈ ಮಹಾನುಬಾವರು ಕೇಸರಿಗಳ ದಬ್ಬಾಳಿಕೆಯನ್ನು ಸ್ವ ಇಚ್ಚೆಯಿಂದ ಸಮ್ರ‍್ತಿಸಿಕೊಳ್ಳುತ್ತಿದ್ದಾರೆ! ಇವರ ಪ್ರಕಾರ ಕನ್ನಡ ಬರದವರು ಬೇರೆ ಬಾಶೆಯಲ್ಲಿ ಬಾಶಣ ಮಾಡಿದರೆ ತೊಂದರೆ ಇಲ್ಲ ತಾನೆ? ಹಾಗಾದರೆ, ಕನ್ನಡ ಬಾರದ ಯಾರೋ ಒಬ್ಬ ತಮಿಳು ಮನ್ನನ್ ತಮಿಳುನಾಡಿನಿಂದ ಬಂದು ತಮಿಳು ಅರ‍್ತವಾಗುವ ಬೆಂಗಳೂರಿನ ಕನ್ನಡಿಗರನ್ನು ಉದ್ದೇಶಿಸಿ ತಮಿಳಿನಲ್ಲಿ ಬಾಶಣ ಮಾಡಿದರೆ, ಚಾನೆಲ್ಲಿನ ಈ ಮನುಶ್ಯ ಅದನ್ನು ಮನ್ನಿಸುತ್ತಾರೆಯೆ? ಕನ್ನಡಿಗರು ಮನ್ನಿಸುತ್ತಾರೆಯೆ? ಈ ಪ್ರಶ್ನೆಯನ್ನು ಚಾನೆಲ್ಲಿನವರಿಗೆ ನೇರವಾಗಿ ಕೇಳಿಬಿಡೋಣ ಎಂದು ಫೋನ್ ಎತ್ತಿಕೊಂಡೆ. ಆದರೆ, ಎಶ್ಟು ಪ್ರಯತ್ನಿಸಿದರೂ ಸಂಪರ‍್ಕ ಸಿಗಲಿಲ್ಲ.
      ಏನು ಹೇಳುವುದು ಸ್ವಾಮೀ ನಮ್ಮ ಅರಿವುಗೇಡಿತನಕ್ಕೆ! ಕನ್ನಡ ಮತ್ತು ತಮಿಳು - ಎರಡೂ ದ್ರಾವಿಡ ಬಾಶೆಗಳು. ಅಕ್ಕತಂಗಿಯರಿದ್ದ ಹಾಗೆ. ಕನ್ನಡಿಗರೂ ತಮಿಳರೂ ಒಟ್ಟಾರೆ ದ್ರಾವಿಡರೆ. ಒಬ್ಬರಲ್ಲೊಬ್ಬರಿಗೆ ಸಹಜ ಮಯ್‍ತ್ರಿ ಇರಬೇಕು. ಒಬ್ಬರ ನುಡಿಯನ್ನೊಬ್ಬರು ಆದರಿಸಬೇಕು. ಅದನ್ನು ಬಿಟ್ಟು, ನಮಗೆ ಸಂಬಂದವೇ ಇಲ್ಲದ ಉತ್ತರದ ಹಿಂದೀಗೆ ಮಣೆ ಹಾಕುತ್ತೇವೆ. ನಮ್ಮ ನಂಟಿರುವ ನಮ್ಮ ಪರಿವಾರದ್ದೇ ಆದ ತಮಿಳಿಗೆ ಕೆಂಗಣ್ಣು ಬಿಡುತ್ತೇವೆ! ಇದಕ್ಕೆ ಕಾರಣ ಏನು? ನಮ್ಮಲ್ಲಿ ಬಹುಮಂದಿಗೆ ನಮ್ಮ ದ್ರಾವಿಡತನದ ಅರಿವು ಇಲ್ಲದಿರುವುದೇ ಇದಕ್ಕೆ ಕಾರಣ. ಕನ್ನಡ ಸಮುದಾಯದ ಚುಕ್ಕಾಣಿ ಹಿಡಿದವರು ತಲತಲಾಂತರದಿಂದ ಕನ್ನಡಿಗರ ಸಹಜ ದ್ರಾವಿಡತನವನ್ನು ಮರೆಮಾಜಿ, ಕನ್ನಡಿಗರನ್ನು ಉತ್ತರದ ಸಂಸ್ಕ್ರುತಿಯ ಕಡೆಗೆ ಓಲಿಸುತ್ತಾ ಬಂದಿರುವುದು ಕಾರಣ. ಇನ್ನಾದರೂ ನಾವು ಕನ್ನಡಿಗರು ಇಂತಹ ದ್ರೋಹಿಗಳು ಎರಚಿರುವ ಮಂಕುಬೂದಿಯ ಪ್ರಬಾವದಿಂದ ಹೊರಬರುವುದು ಒಳ್ಳೆಯದು.
      ಕೆಲ ದಶಕಗಳ ಹಿಂದೆ ಬೆಂಗಳೂರಿನ ಕೆಲ ತಮಿಳು ಪ್ರದೇಶಗಳಲ್ಲಿ ಕನ್ನಡ ಬಾರದ ತಮಿಳರು ಇದ್ದುದು ದಿಟ. ಆದರೆ, ಈಗ ಸನ್ನಿವೇಶ ತುಂಬಾ ಮಾರ‍್ಪಟ್ಟಿದೆ. ಬೆಂಗಳೂರಿನಲ್ಲಿ ಬಹಳ ಕಾಲದಿಂದ ನೆಲೆಸಿರುವ ತಮಿಳರು ಕನ್ನಡವನ್ನು ಚೆನ್ನಾಗೇ ಮಾತಾಡುತ್ತಾರೆ. ಕನ್ನಡ ಮಾತಾಡುವುದಕ್ಕೆ ಅವರಿಗೆ ಬೇಸರವಿಲ್ಲ. ಅವರ ಪ್ರದೇಶಗಳಲ್ಲಿ ಕೂಡ ಅವರು ತಮಿಳಿನಲ್ಲೇ ನಾವು ಮಾತಾಡಬೇಕು ಎಂದು ಆಗ್ರಹಿಸುವುದಿಲ್ಲ. ತಮಿಳರು ಹೆಚ್ಚಾಗಿರುವ ಹಲಸೂರಿನಲ್ಲಿ ಮನೆಮಾಡಿಕೊಂಡಿರುವ ನನಗೆ ಇದು ಚೆನ್ನಾಗಿ ತಿಳಿದಿದೆ. ಬೆಂಗಳೂರಿನಲ್ಲಿ ಕೆಲ ಹಿಂದೀಯವರು ಮಾತ್ರ ಅವರ ಮಾತನ್ನೇ ಎಲ್ಲರೂ ಆಡಬೇಕೆಂದು ಬಯಸುವವರು. ತಮಿಳರಲ್ಲ. ತೆಲುಗರೂ ಮಲೆಯಾಳಿಗರೂ ಅಲ್ಲ. ಬೆಂಗಳೂರಿನಲ್ಲಿ ದ್ರಾವಿಡ ನುಡಿಗಳನ್ನಾಡುವ ಮಂದಿ ತಮ್ಮಶ್ಟಕ್ಕೆ ತಾವು ಒಬ್ಬರಿಗೊಬ್ಬರು ತೊಂದರೆ ಕೊಡದೆ ಬದುಕುತ್ತಿದ್ದಾರೆ. ಈ ಒಳ್ಳೆಯ ನೆಲೆಯನ್ನು ಇನ್ನೂ ಗಟ್ಟಿಗೊಳಿಸುವ ಬದಲು, ಅದಕ್ಕೆ ದಕ್ಕೆ ತರುವ ಕೇಡುಗ ಬುದ್ದಿಯನ್ನು ಕೆಲ ಅರಿವುಗೆಟ್ಟ ಸ್ವಾರ‍್ತಿಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕಾಗಿ ಆಗಾಗ್ಗೆ ತೋರಿಸುತ್ತಿರುತ್ತಾರೆ. ಅದಕ್ಕೆ ನಾವು ಸೊಪ್ಪು ಹಾಕುವ ದಡ್ಡತನ ತೋರಬಾರದು, ಅಶ್ಟೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಗುರುವಾರ, ಮೇ 09, 2013

ಬಲೇ ಅಮಿತಾಬ್ ಮತ್ತು ಸೋನಿಯಾ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಹಿಂದೀ ಚಿತ್ರರಂಗದ ಮೇರು ನಟ ಅಮಿತಾಬ್ ಬಚ್ಚನ್ ಇತ್ತೀಚಿನ ವರ‍್ಶಗಳಲ್ಲಿ ದೇಶದ ಒಳಿತಿಗಾಗಿ ಸರ‍್ಕಾರವೂ ಸಾರ‍್ವಜನಿಕರೂ ಹಮ್ಮಿಕೊಂಡಿರುವ ಹಲವಾರು ಯೋಜನೆಗಳಿಗೆ ರಾಯಬಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವುಗೊಂಡ ಹೆಸರಾಂತ ವ್ಯಕ್ತಿಗಳು ಹೇಗೆ ಸಮಾಜಕ್ಕೆ ಬೇರೆಬೇರೆ ಬಗೆಗಳಲ್ಲಿ ಒಳಿತು ಗಯ್ಯಬಹುದು ಎಂಬುದಕ್ಕೆ ಅವರು ಒಂದು ಬೆಳಗುವ ಆದರ‍್ಶವಾಗಿದ್ದಾರೆ. ನಮ್ಮ ದೇಶದ ಹುಲಿಗಳನ್ನು ಕಾಪಾಡುವ ಯೋಜನೆಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡು ಬಂದಿರುವ ರೀತಿಗೆ ಅವರನ್ನು ನಾನು ವಿಶೇಶವಾಗಿ ಮೆಚ್ಚಿದ್ದೇನೆ. ಇತ್ತೀಚೆಗೆ ಅವರನ್ನು ಇನ್ನಶ್ಟು ಮೆಚ್ಚುವ ಸಂಗತಿಯೊಂದು ನನ್ನ ಗಮನಕ್ಕೆ ಬಂತು. ಈ ಸಂಗತಿ ಬಹಳ ಮಂದಿಗೆ ವಿಶೇಶ ಎನಿಸದಿರಬಹುದು. ಆದರೆ, ಕನ್ನಡತನ ಹಾಗೂ ದ್ರಾವಿಡತನವನ್ನು ಮಯ್ಗೂಡಿಸಿಕೊಂಡಿರುವ ನನಗೆ ಅದರಲ್ಲಿ ಸೆರಪು (ವಿಶೇಶ) ಕಂಡದ್ದರಲ್ಲಿ ಸಂಶಯವಿಲ್ಲ. ಅದೇನೆಂದರೆ, ಟಯ್‍ಮ್ಸ್ ಆಫ್ ಇಂಡಿಯಾ ಪತ್ರಿಕೆಯ ಏಪ್ರಿಲ್ ೧೯ರ ಸಂಚಿಕೆಯಲ್ಲಿ ಬಚ್ಚನ್ ಅವರು ಇತ್ತೀಚೆಗೆ IPL ಕ್ರಿಕೆಟಿಗರ ಬಗ್ಗೆ ಕೊಟ್ಟ ಹೇಳಿಕೆಯನ್ನು ಪ್ರಕಟಿಸಿದ್ದಾರೆ. ಬಚ್ಚನ್ ಅವರ ಹೇಳಿಕೆ ಹೀಗಿದೆ - "Indian IPL players, you do not have to reply in English when questioned at the end of a game...reply in your mother tongue if uncomfortable.". ಈ ಹೇಳಿಕೆಯಲ್ಲಿ ಅದೇನು ಅಂತಾ ಸೆರಪು ಕಂಡಿತು ನನಗೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಇದು - ಬಚ್ಚನ್ ಅವರು, 'reply in your mother tongue' ಎನ್ನುವ ಬದಲು ’reply in Hindi’ ಎಂದು ಹಾಗೇ ಸುಮ್ಮನೆ ಹೇಳಿಬಿಡಬಹುದಾಗಿತ್ತು. ಹಾಗೊಂದು ವೇಳೆ ಅವರು ’reply in Hindi’ ಎಂದೇ ಹೇಳಿದ್ದರೆ, ಯಾರೂ ಅದಕ್ಕೆ ಹುಬ್ಬೇರಿಸುತ್ತಿರಲಿಲ್ಲ. ಯಾರೂ ಅದಕ್ಕೆ ಎದುರು ಹೇಳುತ್ತಿರಲಿಲ್ಲ. ಯಾರೂ ಅದನ್ನು ಗಮನಿಸುತ್ತಲೂ ಇರಲಿಲ್ಲ. ಹಾಗಿದ್ದರೂ, ಬಚ್ಚನ್ ಅವರು ಬಾಶಾಸೂಕ್ಶ್ಮತೆಗೆ ಕುಂದು ಬರದ ಹಾಗೆ, ಹಿಂದೀಯೇತರರನ್ನೂ ಒಳಗೊಳ್ಳುವ ಹಾಗೆ 'reply in your mother tongue' ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ. IPL ಆಟಗಾರರಲ್ಲಿ ಹಿಂದೀ ತಾಯ್ನುಡಿಯಲ್ಲದವರೂ ಇದ್ದಾರೆ ಎಂಬುದನ್ನು ಮರೆಯದೆ, ಪ್ರಜ್‍ನಾಪೂರ‍್ವಕವಾಗಿ ಕೊಟ್ಟ ಹೇಳಿಕೆ ಇದು ಎಂಬುದು ನನ್ನ ನಂಬಿಕೆ. ಬಡಗಣ ರಾಜ್ಯಗಳ ಕೋಟಿ ಕೋಟಿ ಹಿಂದೀವಾದಿಗಳೂ ಹೀಗೇ ಕೊಂಚ ನುಡಿನಣ್ಪನ್ನು ತೋರಿದರೆ, ನಮ್ಮಲ್ಲಿ ಬಾಶಾಕಲಹಕ್ಕೆ ಎಡೆಯೇ ಇರುವುದಿಲ್ಲ, ಅಲ್ಲವೆ?
      ಇನ್ನು ಈ ಕಳೆದ ಕೆಲ ನಾಳುಗಳಲ್ಲಿ ಬಾಶಾಸೂಕ್ಶ್ಮತೆ ತೋರಿದ ಇನ್ನೊಬ್ಬರು ಯಾರೆಂದರೆ ಕಾಂಗ್ರೆಸ್ ಪಕ್ಶದ ಮುಂದಾಳುಗಳು. ಚುನಾವಣೆಯ ಪ್ರಚಾರಕ್ಕೆಂದು ನಮ್ಮ ನಾಡಿನಲ್ಲಿ ಓಡಾಡಿದ ಕಾಂಗ್ರೆಸ್ ಪಕ್ಶದ ಮುಂದಾಳು ಸೋನಿಯಾ ಗಾಂದಿ, ಮಂಗಳೂರು ಬೆಂಗಳೂರುಗಳಂತಹ ಊರುಗಳಲ್ಲಿ ಇಂಗ್ಲೀಶಿನಲ್ಲಿ ಮಾತ್ರ ಪ್ರಚಾರ ಬಾಶಣಗಳನ್ನು ಮಾಡಿದರು. ಗುಲ್ಬರ‍್ಗದಲ್ಲಿ, ಬಹುಶಹ ಅಲ್ಲಿ ಹಿಂದೀ ಕೆಲಮಟ್ಟಿಗೆ ಚಲಾವಣೆಯಲ್ಲಿದೆ ಎಂಬ ಕಾರಣಕ್ಕೇನೋ, ಹಿಂದಿಯಲ್ಲಿ ಬಾಶಣ ಮಾಡಿದರು. ಒಟ್ಟಾರೆ, ಹೆಚ್ಚಿನ ಕಡೆ ಹಿಂದೀಯಲ್ಲಿ ಬಾಶಣ ಮಾಡದೇ ಇರುವ ಮೂಲಕ, ’ಕರ‍್ನಾಟಕ ತೆಂಕಣ ನಾಡು. ಕರ‍್ನಾಟಕದಲ್ಲಿ ಹಿಂದೀ ಆಡುವ ಉಡಾಫೆ ತೋರಿಸಬಾರದು’ ಎಂಬ ಬಾಶಾಸೂಕ್ಶ್ಮತೆಯನ್ನು ತೋರಿಕೆಗಾದರೂ ಅವರು ಮೆರೆದಿದ್ದಾರೆ. ’ನಾವೂ ಹಿಂದೊಮ್ಮೆ ಹಿಂದೀ ಹೇರಿಕೆಗೆ ವಿರೋದ ತೋರಿಸಿದ್ದೆವು, ನಮ್ಮ ದ್ರಾವಿಡತನವನ್ನೂ ಪ್ರಾದೇಶಿಕತೆಯನ್ನೂ ಮೆರೆದಿದ್ದೆವು’ ಎಂಬ ಸತ್ಯ ಅಲ್ಪಾವದಿ ನೆನಪಿನ ಶಕ್ತಿಯ ಕನ್ನಡಿಗರು ನಮಗೆ ಮರೆತು ಹೋಗಿರಬಹುದು. ಆದರೆ, ಕಾಂಗ್ರೆಸ್ ಪಕ್ಶಕ್ಕೆ ಇನ್ನೂ ಅದು ಮರೆತು ಹೋಗಿಲ್ಲ ಎನ್ನುವುದು ಸಮಾದಾನಕರ ಸಂಗತಿ.
      ಕಾಂಗ್ರೆಸ್ಸಿನವರು ಹೀಗೆ ನಮ್ಮ ದ್ರಾವಿಡತನಕ್ಕೆ ಕೊಂಚವಾದರೂ ಬೆಲೆ ಕೊಟ್ಟರೆ, ಕೊಬ್ಬಿನ ಮೊಟ್ಟೆಗಳಾದ ಬೀಜೇಪಿಯ ’ನೇತಾಗಳು’ ಏನು ಮಾಡಿದವು ನೋಡಿ. ಹೋದ ಕಡೆಯೆಲ್ಲಾ ಬರೀ ಹಿಂದಿಯಲ್ಲೇ ಬೊಗಳಾಟ! ಬಾಶಣವನ್ನು ಕನ್ನಡದಲ್ಲಿ ಶುರು ಮಾಡುವ ’ಸ್ಟಂಟ್’ ಹಾಕುವುದು, ಬಳಿಕ ಹಿಂದೀಯಲ್ಲಿ ಗಂಟೆಗಟ್ಟಲೆ ಜಡಿಯುವುದು! ಕರ‍್ನಾಟಕ ಹಿಂದೀಗೆ ಸೋತು ಶರಣಾದ ಇನ್ನೊಂದು ರಾಜ್ಯ ಎನ್ನುವ ಬಾವನೆ ಅವರ ಬಗೆಯಲ್ಲಿ ಎಶ್ಟು ಗಟ್ಟಿಯಾಗಿ ನಿಂತಿದೆ ಎಂದರೆ, ಅವರು ಇಲ್ಲಿಗೆ ಬಂದು ಹಿಂದೀಯಲ್ಲಿ ಬಾಶಣ ಮಾಡುವುದಕ್ಕೂ ವ್ಯವಹರಿಸುವುದಕ್ಕೂ ಎಳ್ಳಶ್ಟೂ ಅಳುಕು ತೋರಿಸುವುದಿಲ್ಲ. ಕೇಸರಿ ಬಣದವರಿಗೆ ಇಡೀ ದೇಶವನ್ನು ಹಿಂದೀಮಯ ಮಾಡದಿದ್ದರೆ ತಿಂದದ್ದು ಅರಗುವುದಿಲ್ಲ, ಇರುಳಲ್ಲಿ ನಿದ್ದೆ ಬರುವುದಿಲ್ಲ. ಇಂತಹ ದಬ್ಬಾಳಿಕೆ ನಡೆಸುವ ಗರ‍್ವಿಗಳು ಹಾಕುವ ತಾಳಕ್ಕೆ ಕಮಕ್ ಕಿಮಕ್ ಎನ್ನದೆ ಕುಣಿಯುತ್ತೇವೆ ನಾವು! ಇದೇನು ನಾವು ಅಮಾಯಕರೋ, ಇಲ್ಲ, ಬೆಪ್ಪು ತಕ್ಕಡಿಗಳೋ, ಇಲ್ಲ, ಹೇಡಿಗಳೋ, ನಮ್ಮನ್ನು ಪಡೆದ ಆ ಕನ್ನಡ ತಾಯಿಗೇ ಗೊತ್ತಿರಬೇಕು!
      ಇನ್ನು ಕಡೆಯದಾಗಿ, ಚುನಾವಣೆಯ ವೇಳೆಯಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ತಮಾಶೆಯ ವಿಶಯ. ಮತ ಹಾಕುವ ನಾಳು, ಬೀಜೇಪಿಯ ದೇಶಮಟ್ಟದ ’ನೇತಾ’ ವೆಂಕಯ್ಯ ನಾಯುಡು, ಸಾಲಿನಲ್ಲಿ ತಮ್ಮ ಸರದಿಗಾಗಿ ಕಾಯದೇ ನೇರವಾಗಿ ಅದಿಕಾರಿಗಳ ಬಳಿ ಹೋಗಿ, ’ನಾನು ಇಂತವನು. ನನಗೆ ಕೂಡಲೇ ಮತ ಹಾಕಲು ಬಿಡಿ’ ಎಂದು ಕೇಳಿಕೊಂಡರು. ಅದಿಕಾರಿಗಳು ಏನು ಮಾಡಿರುತ್ತಿದ್ದರೋ. ಆದರೆ, ಸಾಲಿನಲ್ಲಿ ಕಾಯುತ್ತಾ ನಿಂತಿದ್ದ ಮತದಾರರು ಅದಕ್ಕೆ ಅವಕಾಶ ಕೊಡಲಿಲ್ಲ. ಬೇರೆ ದಾರಿ ಇಲ್ಲದೆ, ನಾಯುಡು ಅವರು ತಮ್ಮ ಸರದಿಗಾಗಿ ಕಾದೇ ಮತ ಹಾಕಬೇಕಾಯಿತು. ಪೆಚ್ಚು ಮೋರೆ ಹಾಕಿಕೊಂಡು ಬಳಿಕ ಅವರು ಮಾದ್ಯಮದವರಿಗೆ ’ಏಕೆ ಹಾಗೆ ಸರದಿಗೆ ಕಾಯದಿರುವ ಆತುರ ತೋರಿಸಿದರು’ ಎಂಬುದನ್ನು ವಿವರಿಸಿದರು. ವಿವರಣೆ ಕೊಟ್ಟಿದ್ದು ಹಿಂದೀ ಮತ್ತು ಇಂಗ್ಲೀಶುಗಳಲ್ಲಿ. ಮತ್ತೆ ಅದೇ ಮೊಂಡಾಟ! ಬರೀ ಇಂಗ್ಲೀಶಿನಲ್ಲಿ ಬೊಗಳಿದ್ದರೆ ಸಾಕಿತ್ತಲ್ಲವೆ? ಹಿಂದೀ ಏಕೆ ಬೇಕಿತ್ತು?
      ಅದೇನೇದರೂ ಇರಲಿ. ಹಿಂದೀ ಬಾಶಣಗಳಿಗೆ ಮತ್ತೆ ಎದುರು ತೋರಿಸುವುದನ್ನು ನಾವು ರೂಡಿಸಿಕೊಳ್ಳಬೇಕು. ನಾವು ಕನ್ನಡಿಗರು. ನಾವು ದ್ರಾವಿಡರು. ನಮಗೆ ನಮ್ಮದೇ ಆದ ದ್ರಾವಿಡ ನುಡಿ ಇದೆ. ನಮಗೆ ಕೆಲಸಕ್ಕೆ ಬಾರದ ಹಿಂದೀ ಬೇಡ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಸೋಮವಾರ, ಮಾರ್ಚ್ 25, 2013

ಮಣಿಯಿತು UPSC!

ವಿ.ಸೂ.: ವಿದಾನ ಸಬೆಯ ಚುನಾವಣೆ ಮುಗಿಯುವವರೆಗೆ, ಅಂದರೆ, ಮೇ ತಿಂಗಳ ಮೊದಲ ವಾರದವರೆಗೆ, ಬ್ಲಾಗನ್ನು ಬರೆಯುವುದರಿಂದ ಬಿಡುವು ತೆಗೆದುಕೊಂಡಿದ್ದೇನೆ - ಎಚ್.ಎಸ್.ರಾಜ್

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕೋಟಿಗಟ್ಟಲೆ ಮಂದಿಗೆ ತಾಯ್‍ನುಡಿಗಳಾಗಿದ್ದರೂ ಕನ್ನಡ, ತಮಿಳು, ತೆಲುಗು, ಮರಾಟಿ ಮುಂತಾದ ನುಡಿಗಳಿಗೆ ಕೇವಲ ’ಪ್ರಾದೇಶಿಕ ಬಾಶೆ’ ಎಂಬ ಇಳಿಗೆಯ್ವ ಹಣೆಪಟ್ಟಿ ನಮ್ಮ ದೇಶದಲ್ಲಿ! ಸಾಲದುದಕ್ಕೆ ಅವುಗಳ ಮೇಲೆ ಹಿಂದೀ ಮತ್ತು ಇಂಗ್ಲಿಶ್ ನುಡಿಗಳ ಎಡೆಬಿಡದ ದಬ್ಬಾಳಿಕೆ ಬೇರೆ. ಯಾವಾಗ ಯಾವ ರೂಪದಲ್ಲಿ ಕುತ್ತುಗಳು ಬಂದು ಅವುಗಳ ಮೇಲೆ ಎರಗುತ್ತವೋ ಎಂದು ಹೇಳಲು ಬರುವುದಿಲ್ಲ. ’ಹೋದೆಯಾ ಪಿಶಾಚೀ ಎಂದರೆ, ಬಂದೆ ಗವಾಕ್ಶೀಲಿ!’ ಎನ್ನುವ ಹಾಗೆ, ಕನ್ನಡದಂತಹ ನುಡಿಗಳ ಮೇಲೆ ಹಿಂದೀ ಮತ್ತು ಇಂಗ್ಲೀಶುಗಳ ಹಾವಳಿ ತಪ್ಪಿದ್ದಲ್ಲ. ಕಳೆದ ಎರಡು ಮೂರು ವಾರಗಳಲ್ಲಿ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿದ ಕೆಂದ್ರ ಲೋಕಸೇವಾ ಸಮಿತಿಯ (UPSC) ಹೊಸ ಪರೀಕ್ಶಾ ಕಟ್ಟಳೆಗಳೇ ಇದಕ್ಕೆ ಒಂದು ಅತ್ಯುತ್ತಮ ನಿದರ‍್ಶನ.
      ಪ್ರಾದೇಶಿಕ ಬಾಶೆಗಳಲ್ಲಿ ಪ್ರಾವೀಣ್ಯತೆ ಇದ್ದು ಪ್ರಾದೇಶಿಕ ಬಾಶೆಗಳಲ್ಲೇ ಅಯ್. ಏ. ಎಸ್. ಮುಂತಾದ ಸೇವೆಗಳಿಗಾಗಿ ನಡೆಯುವ ಪರೀಕ್ಶೆಗಳಿಗೆ ಉತ್ತರಗಳನ್ನು ಬರೆಯಲು ಬಯಸುವ ಅಬ್ಯರ‍್ತಿಗಳಿಗೆ ಹಿನ್ನಡೆಯಾಗುವ ರೀತಿಯಲ್ಲಿ ಲೋಕಸೇವಾ ಸಮಿತಿ ತನ್ನ ಹೊಸ ಪರೀಕ್ಶಾ ವಿದಾನವನ್ನು ರೂಪಿಸಿ, ಜಾರಿಗೆ ತರಲು ಹೊರಟಿತ್ತು. ಸಹಜವಾಗೇ ಪ್ರಾದೇಶಿಕ ಬಾಶೆಗಳನ್ನಾಡುವವರಿಂದ ಇದಕ್ಕೆ ಎದಿರು ವ್ಯಕ್ತವಾಗಲು ತೊಡಗಿತು. ಲೋಕಸೇವಾ ಸಮಿತಿ ಬರೀ ಇಶ್ಟೇ ಬದಲಾವಣೆ ತಂದಿದ್ದರೆ, ಅಂದರೆ, ಪ್ರಾದೇಶಿಕ ಬಾಶೆಗಳ ಅಬ್ಯರ‍್ತಿಗಳಿಗೆ ಮಾತ್ರ ಹಿನ್ನಡೆಯಾಗುವ ಹಾಗೆ ಮಾರ‍್ಪಾಡುಗಳನ್ನು ತಂದಿದ್ದರೆ, ಅದರ ಎದುರು ಹೋರಾಡುವುದು ನಮ್ಮಂತಹ ಪ್ರಾದೇಶಿಕ ಬಾಶೆಗಳನ್ನಾಡುವವರಿಗೆ ದಿಟವಾಗಿಯೂ ಕಶ್ಟವಾಗುತ್ತಿತ್ತು. ಆದರೆ, ನಮ್ಮ ಅದ್ರುಶ್ಟ ಕೊಂಚ ಚೆನ್ನಾಗಿತ್ತು ಎಂದು ಕಾಣುತ್ತದೆ. ಏಕೆಂದರೆ, ಲೋಕಸೇವಾ ಸಮಿತಿ, ಪ್ರಾದೇಶಿಕ ಬಾಶೆಗಳ ಅಬ್ಯರ‍್ತಿಗಳಿಗೆ ಕೆಡುಕು ಮಾಡುವುದರ ಜೊತೆಗೆ, ಇಂಗ್ಲಿಶ್ ಬಾಶೆಗೆ ಒತ್ತು ಕೊಟ್ಟು, ಇಂಗ್ಲಿಶ್ ಬಾಶೆಯಲ್ಲಿ ಕುಶಲತೆ ಇರುವ ಅಬ್ಯರ‍್ತಿಗಳಿಗೆ ಒಳಿತಾಗುವ ಹಾಗೆ ಕೂಡ ಮಾರ‍್ಪಾಡುಗಳನ್ನು ಮಾಡಿತ್ತು. ಇದರಿಂದಾಗಿ, ಇಂಗ್ಲಿಶ್ ಅಶ್ಟಾಗಿ ಬಾರದ, ಹಿಂದಿಯಲ್ಲಿ ಮಾತ್ರ ಕುಶಲತೆ ಇರುವ ಮಂದಿಗೂ ಹಿನ್ನಡೆಯಾಗಿತ್ತು. ಹಾಗಾಗಿ, ಹಿಂದೀ ಆಡುಗರಿಂದಲೂ ಸಮಿತಿಯ ಹೊಸ ನೀತಿಗೆ ತೀವ್ರ ವಿರೋದ ವ್ಯಕ್ತವಾಯಿತು.
      ಒಟ್ಟಿನಲ್ಲಿ, ಸಂಸತ್ತಿನಲ್ಲಿ ಹೆಚ್ಚುಕಡಿಮೆ ಎಲ್ಲಾ ಪಕ್ಶಗಳಿಂದಲೂ ಲೋಕಸೇವಾ ಸಮಿತಿ ಹೊರಡಿಸಿದ್ದ ಹೊಸ ನೀತಿಯ ಅದಿಸೂಚನೆಗೆ ಒಗ್ಗಟ್ಟಿನಿಂದ ಕೂಡಿದ ವಿರೋದ ವ್ಯಕ್ತವಾಯಿತು. ಪ್ರತಿಬಟನೆಯ ಗದ್ದಲ ಎಶ್ಟು ಗಟ್ಟಿಯಾಗಿತ್ತೆಂದರೆ, ಕಲಾಪವನ್ನು ಮೂರು ಬಾರಿ ಮುಂದೂಡಬೇಕಾಯಿತು. ಲೋಕಸೇವಾ ಸಮಿತಿಯ ತಲೆಯವರನ್ನು ಕೂಡಲೇ ವಜಾ ಮಾಡಿ ಎಂದು ಜೆಡಿಯು ಮುಂದಾಳು ಶರದ್ ಯಾದವ್ ಒತ್ತಾಯಿಸಿದರು. ಲಾಲೂ ಪ್ರಸಾದ್ ಯಾದವರ ಪಕ್ಶದ ಸದಸ್ಯ ರಗುವಂಶ್ ಸಿಂಗರು ಎರಡು ಬಾರಿ ಸಬಾದ್ಯಕ್ಶರ ಪೀಟದ ಕಡೆ ನುಗ್ಗಿ ಅದಿಸೂಚನೆ ವಿರುದ್ದ ಗೋಶಣೆ ಕೂಗಿದರು! ಇಂತಹ ಕಟ್ಟಿದಿರಿಗೆ ಮಣಿದು ಸರ‍್ಕಾರ ಬೇರೆ ದಾರಿ ಇಲ್ಲದೆ ಲೋಕಸೇವಾ ಸಮಿತಿಯ ಅದಿಸೂಚನೆಯನ್ನು ತಡೆಹಿಡಿಯುವ ನಿರ‍್ದಾರವನ್ನು ಪ್ರಕಟಿಸಿತು. ಇದೆಲ್ಲಾ ನಡೆದ ಎರಡು ನಾಳುಗಳ ಬಳಿಕ ಲೋಕಸೇವಾ ಸಮಿತಿ ತನ್ನ ಪರೀಕ್ಶಾ ಮಾದರಿಯನ್ನು ಮತ್ತೆ ರೂಪಿಸುವುದಾಗಿ ಹೇಳಿಕೆ ಕೊಟ್ಟಿತು. ಮತ್ತೆರಡು ದಿನಗಳಲ್ಲಿ, ಇಂಗ್ಲೀಶಿಗೆ ಕೊಟ್ಟಿರುವ ಒತ್ತನ್ನಶ್ಟೇ ಅಲ್ಲದೆ ಪ್ರಾದೇಶಿಕ ನುಡಿಗಳ ಮೇಲೆ ಹಾಕಿದ್ದ ಎಲ್ಲ ಅಡ್ಡಿಗಳನ್ನೂ ತೆಗೆದು ಹಾಕಿರುವುದಾಗಿ ಕೂಡಾ ತಿಳಿಸಿತು.
      ಎಲ್ಲಾ ಪಕ್ಶಗಳೂ ಹೀಗೆ ಒಟ್ಟಿಗೆ ಎದುರು ತೋರಿಸಿದ್ದರಿಂದ ನಮ್ಮ ಕನ್ನಡಕ್ಕೆ ಕುತ್ತಾಗಿದ್ದ ಅದಿಸೂಚನೆಗೆ ಬೇಗನೇ ತಡೆ ಬಿದ್ದಿತು. ಈ ಗೆಲುವು ನಮಗೆ ಸಂತಸದ ವಿಶಯವೇನೋ ಸರಿ. ಆದರೆ, ಈ ಗೆಲುವಿಗೆ ಕಾರಣವಾದ ಹೋರಾಟದಲ್ಲಿ ನಮ್ಮ ಪಾಲು ಎಶ್ಟರ ಮಟ್ಟಿನದು ಎಂಬುದು ಸರಿಯಾಗಿ ತಿಳಿಯದು. ಏಕೆಂದರೆ, ನಾನು ನೋಡಿದ ಪತ್ರಿಕೆಗಳಲ್ಲಿ ನಮ್ಮ ಕನ್ನಡ ನಾಡಿನ ಸಂಸದರು ಹೋರಾಡಿದ ಬಗ್ಗೆ ನಿರ‍್ದಿಶ್ಟ ವರದಿಗಳಿರಲಿಲ್ಲ. ಅದೇನೇ ಇರಲಿ, ಕನ್ನಡದ ಸಂಗಟನೆಗಳಲ್ಲಾದರೂ ಕೆಲವು ಹಾಗೂ ಕನ್ನಡದ ಸಾಹಿತಿಗಳಲ್ಲಾದರೂ ಕೆಲವರು ಕಂಡಿತವಾಗಿಯೂ ಲೋಕಸೇವಾ ಸಮಿತಿಯ ಅದಿಸೂಚನೆಗೆ ಕಟುವಾದ ಪ್ರತಿಬಟನೆಯನ್ನು ಸೂಚಿಸಿದ್ದರು. ಅದೇ ವೇಳೆ ಬೆಂಗಳೂರಿನಲ್ಲಿ ನಡೆದ ತೆಲುಗು ವಿಜ್‍ನಾನ ಸಮಿತಿಯ ಸಮಾರಂಬದಲ್ಲೂ ಹಲವು ತೆಲುಗು ಗಣ್ಯರು ಅದಿಸೂಚನೆಯ ಬಗ್ಗೆ ವಿರೋದವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದರು. ಇದೆಲ್ಲಾ ನಮ್ಮಲ್ಲಿ ಆಶಾಬಾವನೆಯನ್ನು ಮೂಡಿಸುವ ಸಂಗತಿ.
      ಲೋಕಸೇವಾ ಸಮಿತಿಯ ಅದಿಸೂಚನೆಯ ಬಗ್ಗೆ ಕಂಡು ಬಂದ ಪ್ರತಿಬಟನೆಯಲ್ಲಿ ಗಮನಿಸಬೇಕಾದ ಒಂದು ಮುಕ್ಯ ಅಂಶವಿದೆ. ಅದೇನೆಂದರೆ, ಹಿಂದೀವಾಲರ ಪ್ರತಿನಿದಿಗಳು ನಿಜಕ್ಕೂ ಪ್ರತಿಬಟಿಸಿದ್ದು ಇಂಗ್ಲೀಶಿಗೆ ಹೆಚ್ಚಿನ ಒತ್ತು ಸಿಕ್ಕಿದುದಕ್ಕೇ ಹೊರತು ಪ್ರಾದೇಶಿಕ ಬಾಶೆಗಳಿಗೆ ತೊಡಕು ಉಂಟಾದುದಕ್ಕಲ್ಲ!  ಪರೀಕ್ಶೆಗಳ ಹೊಸ ಮಾದರಿಯಿಂದ ಪ್ರಾದೇಶಿಕ ಬಾಶೆಗಳಿಗೆ ಮಾತ್ರ ತೊಡಕು ಉಂಟಾಗಿದ್ದರೆ, ಹಿಂದೀ ನಾಡಿನ ಮುಂದಾಳುಗಳು ಚಕಾರವನ್ನಾದರೂ ಎತ್ತುತ್ತಿದ್ದರೆ? ಹಿಂದೀವಾಲರಿಗೆ ಪ್ರಾದೇಶಿಕ ಬಾಶೆಗಳ ಬಗ್ಗೆಯೂ ಸಹಾನುಬೂತಿ ಏನಾದರು ಇದೆಯೆ? ಇದು ಬಗೆದು ನೋಡಬೇಕಾದ ವಿಚಾರ.
      ಈ ಸಲವೇನೋ ಕಾರಣಾಂತರದಿಂದ ಹಿಂದೀವಾಲರ ನೆರವು ನಮಗೆ ದೊರೆಯಿತು. ಆದರೆ, ಎಲ್ಲ ಸಂದರ‍್ಬಗಳಲ್ಲೂ ಅದು ದೊರೆಯಲಾರದು. ಆದ್ದರಿಂದ, ಎಲ್ಲ ಸಂದರ‍್ಬಗಳಲ್ಲೂ ನೆರವು ದೊರೆಯುವತ್ತ ನಮ್ಮ ಕೆಳೆಯ ಕಯ್ಯನ್ನು ನಾವು ಚಾಚಿರಬೇಕು. ಅಂದರೆ, ನಮ್ಮ ಹಾಗೇ ಕಶ್ಟಗಳನ್ನು ಎದುರಿಸಬೇಕಾದ ಬೇರೆ ಪ್ರಾದೇಶಿಕ ನುಡಿಗರಿಗೆ ನಮ್ಮ ಬೆಂಬಲವನ್ನು ನೀಡುತ್ತಿರಬೇಕು ಮತ್ತು ಅವರಿಂದ ಬೆಂಬಲವನ್ನು ಪಡೆದುಕೊಳ್ಳುತ್ತಿರಬೇಕು. ಮುಕ್ಯವಾಗಿ, ನಡೆನುಡಿಗಳಲ್ಲಿ ಹಾಗೂ ಬುಡಕಟ್ಟಿನಲ್ಲಿ ನಮ್ಮವರೆನಿಸುವ ನಮ್ಮ ಸಹದ್ರಾವಿಡರಾದ ತಮಿಳರು, ತೆಲುಗರು ಮತ್ತು ಮಲೆಯಾಳರೊಂದಿಗೆ ಸವ್‍ಹಾರ‍್ದವನ್ನೂ ಒಗ್ಗಟ್ಟನ್ನೂ ಮೂಡಿಸಿಕೊಳ್ಳಬೇಕು. ತೆಂಕಣರು ನಾವೆಲ್ಲ ದ್ರಾವಿಡತನವೆಂಬ ನಮ್ಮ ನನ್ನಿ ಹಿನ್ನೆಲೆಯ ಬಲದಿಂದ ಒಗ್ಗೂಡಬೇಕು. ಹೀಗೆ ಒಗ್ಗೂಡಿದರೆ, ಮರಾಟಿ ಮತ್ತು ಬಂಗಾಲಿಗಳಂತಹ ಬೇರೆ ಪ್ರಾದೇಶಿಕ ನುಡಿಗರ ನೆರವನ್ನು ಪಡೆದುಕೊಳ್ಳುವುದೂ ಹಗುರಾಗಬಹುದು. ಆಗ, ಕೇಂದ್ರದಿಂದ ಆಗಾಗ್ಗೆ ಬರುವ ಲೋಕಸೇವಾ ಸಮಿತಿಯ ಕೆಡುಕ ನೀತಿಗಳಂತಹ ಕುತ್ತುಗಳ ವಿರುದ್ದ ಹೋರಾಡುವುದು ನಮಗೆ ಬಹುಮಟ್ಟಿಗೆ ಸುಲಬವಾಗಬಹುದು. ನಮ್ಮ ನಡೆನುಡಿಗಳು ಉಳಿದುಕೊಳ್ಳಬಹುದು.

ನಲ್‍ಮೆಯೊಡನೆ,
ಎಚ್.ಎಸ್.ರಾಜ್

ಗುರುವಾರ, ಮಾರ್ಚ್ 14, 2013

ಗೋಹತ್ಯಾನಿಶೇದವೆಂಬ ದೊಂಬರಾಟ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಬೆಳಗಾವಿಯ ಸುವರ‍್ಣ ಸವ್ದದಲ್ಲೂ ಶಾಸಕಸಬೆಯ ಅದಿವೇಶನ ನಡೆಯಿತು. ಅದಿವೇಶನದ ಕಡೆಯ ನಾಳು, ತರಾತುರಿಯಿಂದ ಆಡಳಿತ ಪಕ್ಶ ಆವುಗೊಲೆಗೆ ತಡೆ ಹಾಕುವ ಮಸೂದೆಯನ್ನು ಸದನದ ಮುಂದೆ ಚರ‍್ಚೆಗೆ ತಾರದೆ ಗುಟ್ಟುಗುಟ್ಟಾಗಿ ಅಂಗೀಕರಿಸಿತು. ಸ್ವಾಬಾವಿಕವಾಗಿಯೆ, ಸವರ‍್ಣೀಯ ಹಿಂದೂಗಳನ್ನು ಓಲಯ್ಸುವ ಆಡಳಿತ ಪಕ್ಶದ ಈ ನುಸುಳು ರಾಜಕಾರಣದ ನಡೆಯ ಬಗ್ಗೆ ಮರುದಿನಗಳಲ್ಲಿ ಟೀವೀ ಕಾಲುವೆಗಳಲ್ಲಿ ಪರ-ವಿರೋದಿ ಚರ‍್ಚೆಗಳು ನಡೆದವು. ಇಂತಹ ಒಂದು ಕಾರ‍್ಯಕ್ರಮದಲ್ಲಿ ಶಾಸಕ ಹಸನಬ್ಬನವರು, ’ಮುಸ್ಲಿಮರಲ್ಲಿ ಬಡವರೇ ಹೆಚ್ಚು. ಗೋಮಾಂಸ ಅಗ್ಗ. ಮುಸ್ಲಿಮರು ಗೋಹತ್ಯೆ ನಿಶೇದವನ್ನು ವಿರೋದಿಸುತ್ತಿರುವುದು ಬಡತನದ ಅನಿವಾರ‍್ಯತೆಯಿಂದಾಗಿ. ಒಂದು ವೇಳೆ, ಕುರಿಯಡಗು  ಗೋಮಾಂಸಕ್ಕಿಂತ ಅಗ್ಗವಾಗಿ ದೊರೆತರೆ, ಮುಸ್ಲಿಮರು ಗೋಹತ್ಯೆ ನಿಶೇದವನ್ನು ವಿರೋದಿಸುವುದಿಲ್ಲ. ಸರ‍್ಕಾರ ಕುರಿಮಾಂಸ ಬಡವರಿಗೆ ರಿಯಾಯತಿ ದರದಲ್ಲಿ ಸಿಗುವಂತೆ ಮಾಡಬೇಕು’ ಎಂದು ಹೇಳಿದರು. ಅವರ ಹೇಳಿಕೆಗೆ ಶ್ರೀರಾಮ ಸೇನೆಯ ಮುತಾಲಿಕರು, ’ಹವುದು. ಆಕಳ ಹತ್ಯೆ ನಿಲ್ಲುತ್ತದೆ ಎನ್ನುವುದಾದರೆ, ಕುರಿಮಾಂಸವನ್ನು ಅಗ್ಗದ ಬೆಲೆಗೆ ಒದಗಿಸುವ ಏರ‍್ಪಾಟು ಆಗಬೇಕು’ ಎಂದು ಒಪ್ಪಿಗೆ ಸೂಚಿಸಿದರು. ಇದನ್ನೆಲ್ಲಾ ಕೇಳಿ ನಾನು ’ಶಿವ ಶಿವಾ’ ಎಂದುಕೊಂಡೆ.
      ಇತ್ತೀಚೆಗೆ ಗೋಹತ್ಯೆಯ ಬಗ್ಗೆ ಇನ್ನೊಂದು ಕಾರ‍್ಯಕ್ರಮವನ್ನು ಟೀವೀಯಲ್ಲಿ ನೋಡಿದೆ. ಎಂಟನೇ ತರಗತಿಯ ಹಿಂದೀ ಪಟ್ಯಪುಸ್ತಕದಲ್ಲಿ ನಮ್ಮ ’ಗೋವಿನ ಹಾಡು’ ಒಂದು ಪಾಟದ ರೂಪದಲ್ಲಿ ಅಳವಟ್ಟಿದೆಯಂತೆ. ಆದರೆ, ಆ ಪಾಟದ ಕತೆಗೂ ನಮ್ಮ ಮೂಲ ಗೋವಿನ ಹಾಡಿನ ಕತೆಗೂ ಒಂದು ಆಕ್ಶೇಪಾರ‍್ಹ ವ್ಯತ್ಯಾಸವಿದೆಯಂತೆ. ಪಾಟದ ಕತೆಯಲ್ಲಿ, ಗೋವಿನ ಸತ್ಯಸಂದತೆಗೆ ಮೆಚ್ಚಿ, ಬಗೆನೊಂದು, ಹುಲಿ, ’ಇನ್ನೆಂದೂ ನಾನು ಗೋಮಾಂಸವನ್ನು ತಿನ್ನುವುದಿಲ್ಲ’ ಎಂದು ಪ್ರತಿಜ್ನೆ ಮಾಡುತ್ತದಂತೆ (ಮೂಲ ಗೋವಿನ ಹಾಡಿನಲ್ಲಿ ಹುಲಿ ಬೆಟ್ಟದ ತುದಿಯಿಂದ ಹಾರಿ ತಂಗೊಲೆ ಗೆಯ್ದುಕೊಳ್ಳುತ್ತದೆ). ಚರ‍್ಚೆಯಲ್ಲಿ ಪಾಲ್ಗೊಂಡಿದ್ದ ಕೆಲ ದಲಿತ ಮುಂದಾಳುಗಳ ಪ್ರಕಾರ, ಹೀಗೆ ಮೂಲ ಕತೆಯನ್ನು ತಿರುಚಿದ್ದು, ಹಿಂದುತ್ವಪರ ಸರ‍್ಕಾರದ ನುಸುಳು ರಾಜಕಾರಣ. ’ಗೋಮಾಂಸವನ್ನು ತಿನ್ನುವುದು ಕೆಟ್ಟದ್ದು’ ಎಂಬ ಪ್ರಜ್ನೆಯನ್ನು ಎಳೆಯ ಮಕ್ಕಳಲ್ಲಿ ಬರಿಸುವುದೇ ಇಲ್ಲಿನ ಉದ್ದೇಶ, ಎಂಬುದು ಅವರ ವಾದ.
      ಈ ಮೇಲಿನ ಎರಡೂ ಚರ‍್ಚೆಗಳನ್ನು ನೋಡಿದ ಮೇಲೆ ನನಗೆ ಅನ್ನಿಸಿದ್ದು ಇದು - ’ಹಸು ಎಮ್ಮೆಗಳನ್ನು ಕಾಪಾಡುವುದಕ್ಕೆ ಸಾವಿರಾರು ಮಂದಿ ಇದ್ದಾರೆ. ಆದರೆ, ಕುರಿ ಕೋಳಿಗಳನ್ನು ಕಾಪಾಡುವುದಕ್ಕೆ ಮಾತ್ರ ಒಬ್ಬನೂ ಇಲ್ಲ! ಹಸು ಎಮ್ಮೆಗಳನ್ನು ತಿನ್ನುವುದು ದೊಡ್ಡ ಪಾಪ. ಅದೇ ಕುರಿ ಕೋಳಿಗಳನ್ನು ತಿನ್ನುವುದು ಪಾಪವಲ್ಲ, ಅತವ ಕಡಿಮೆ ಪಾಪ! ಹಸು ಎಮ್ಮೆಗಳ ಹತ್ಯೆ ನಿಲ್ಲುತ್ತದೆ ಎನ್ನುವುದಾದರೆ, ಕುರಿ ಕೋಳಿಗಳನ್ನು ರಿಯಾಯಿತಿ ದರದಲ್ಲಿ ಮಾರಿಸಲಿಕ್ಕೂ ಕೆಲವರು ಸಿದ್ದರಿದ್ದಾರೆ!’. ಅದೇನು ಪಾಪ ಮಾಡಿದ್ದವು ಸ್ವಾಮೀ ಕುರಿ ಕೋಳಿಗಳು? ಅವುಗಳ ನೋವು ನೋವಲ್ಲವೆ? ಪ್ರಾಣಿಗಳಲ್ಲೂ ಮೇಲು-ಕೀಳು ಎಣಿಸುವುದೇ?
      ಪ್ರಾಣಿಗಳಲ್ಲಿ ಮೇಲು-ಕೀಳು ಎಣಿಸುವುದೂ, ಮಾನವರಲ್ಲಿ ಮೇಲು-ಕೀಳು ಎಣಿಸುವುದೂ, ಇಂತಹ ಅನ್ಯಾಯದ ಪರಿಕಲ್ಪನೆಗಳು ಸದ್ಯ ದಕ್ಶಿಣದ ನಾವು ದ್ರಾವಿಡರು ಹುಟ್ಟುಹಾಕಿದವಲ್ಲ. ಈ ವಿಶಯದಲ್ಲಿ ಅದೊಂದು ಸಮಾದಾನ ನನಗೆ. ಹಾಗೆಂದು ಉತ್ತರದಿಂದ ಬಂದ ಇಂತಹ ಕೀಳು ಆಚಾರಗಳನ್ನು ನಾವೇನೂ ನಡೆಸದೆ ಬಿಟ್ಟಿಲ್ಲ. ಇದು ನಿಶ್ಚಯವಾಗಿಯೂ ಒಂದು ಕೊರಗು ನನಗೆ. ಕೆಟ್ಟ ಪದ್ದತಿಗಳನ್ನು ಹುಟ್ಟುಹಾಕುವುದು ಎಶ್ಟು ಪಾಪವೋ, ಆ ಪಾಪಗಳನ್ನು ಒಪ್ಪಿ ಆಚರಿಸುವುದೂ ಅಶ್ಟೇ ಪಾಪ, ನನ್ನ ಕಣ್ಣಿನಲ್ಲಿ.
      ಪ್ರಾಣಿಗಳ ವಿಶಯದಲ್ಲಿ ದಕ್ಶಿಣದ ಸಾದುಸಂತರು ಎಂತೆಂತಹ ಕನಿಕರದ ಮಾತುಗಳನ್ನಾಡಿದ್ದಾರೆ. ’ಇನ್ನೊಂದರ ಮಾಂಸ ತಿಂದು ತನ್ನ ಮೆಯ್ಯ ಮಾಂಸ ಹೆಚ್ಚಿಸಿಕೊಳ್ಳುವವನು, ಅದು ಹೇಗೆ ತಾನೆ ಕನಿಕರ ಉಳ್ಳವನಾಗುತ್ತಾನೆ?’ ಎಂದು ತಮಿಳಿನ ತಿರುಕ್ಕುರಲ್‍ ಬರೆದ ಸಂತ ವಳ್ಳುವಾರ್ ಕೇಳುತ್ತಾನೆ. ನಮ್ಮವನೇ ಆದ ಕನ್ನಡಿಗ ಬಸವಣ್ಣ ಹೇಳುತ್ತಾನೆ, ’ದಯೆಯೇ ದರ‍್ಮದ ಮೂಲವಯ್ಯಾ, ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂದು. ದಯೆ ಇರಬೇಕಾದುದು ’ಸಕಲ’ ಪ್ರಾಣಿಗಳಲ್ಲಿ. ಬರೀ ಹಸು ಮತ್ತು ಎಮ್ಮೆಗಳಲ್ಲಿ ಮಾತ್ರವಲ್ಲ. ಪ್ರಾಣಿದಯೆ ಸಾರುವ ಮಾತುಗಳು ಉತ್ತರದ ನಾಡುಗಳಲ್ಲೂ ಇರಬಹುದು. ಆದರೆ, ಅವುಗಳೊಂದಿಗೆ, ’ಕೆಲವು ಪ್ರಾಣಿಗಳು ದೇವರಿಗೆ ಸಮಾನ. ಅವಕ್ಕೆ ವಿಶೇಶವಾಗಿ ದಯೆ ತೋರಿರಿ’ ಎಂಬ, ’ಕೆಲವು ಪ್ರಾಣಿಗಳು ಶ್ರೇಶ್ಟ, ಉಳಿದವು ಅಲ್ಲ’ ಎಂದು ತಾರತಮ್ಯ ಮಾಡುವ ಮಾತುಗಳೂ ಅಲ್ಲಿವೆ. ದ್ರಾವಿಡರ ನಾಡಾದ ದಕ್ಶಿಣದಲ್ಲಿ ಈ ಬಗೆಯ ಇಬ್ಬಂದಿ ನೀತಿಯ ಸಂದೇಶಗಳು ನನಗೆ ತಿಳಿದಂತೆ ಇಲ್ಲ.
      ನಮ್ಮ ದ್ರಾವಿಡ ಸಂತರು ಸಮತಾಬಾವದಿಂದ ಎಶ್ಟು ಮಾತು ಹೇಳಿದ್ದರೇನು? ನಾವಂತೂ ಅದನ್ನು ಪಾಲಿಸುತ್ತಿಲ್ಲ. ಸಮತಾಬಾವದ ಮಾತುಗಳು ಹೋಗಲಿ, ಅಸಮತೆಯೇ ಆದಾರವಾಗಿರುವ ಉತ್ತರದಿಂದ ಬಂದ ಆಚರಣೆಗಳಿಗೆ ಗಟ್ಟಿಯಾಗಿ ನಾವು ಜೋತುಬಿದ್ದಿದ್ದೇವೆ. ಮೇಲು-ಕೀಳಿನ ಎಣಿಕೆಯಿಂದ ಬಂದ ಉತ್ತರದ ನಂಬಿಕೆಗಳು ದಕ್ಶಿಣದ ದ್ರಾವಿಡರಾದ ನಮಗೆ ಎಂದೂ ಆದರ‍್ಶವಾಗಬಾರದು. ಆದರೂ, ಆಗಿವೆ. ಮುಂದೆ ಎಂದಾದರೊಂದು ದಿನ, ಬಸವಣ್ಣನ ’ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂಬ ಸಂದೇಶ ನಮಗೆಲ್ಲಾ ಆದರ‍್ಶಪ್ರಾಯವಾಗುತ್ತದೆ ಎಂದು ನಂಬೋಣ. ಆದರೆ, ಅಲ್ಲಿಯವರೆಗೆ, ’ಹಸು ಎಮ್ಮೆ ಮೇಲು, ಕುರಿ ಕೋಳಿ ಕೀಳು’ ಎನ್ನುವ ಇಬ್ಬಂದಿ ನೀತಿಯ ದೊಂಬರಾಟದಿಂದ ನಾವು ಹೊರಗಿರೋಣ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಸೋಮವಾರ, ಮಾರ್ಚ್ 04, 2013

ಮಹಿಶಿ ವರದಿ ಜಾರಿ ಮಾಡಿರಿ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ನಮ್ಮ ನೆಚ್ಚಿನ(?) ಮುಂದಾಳುಗಳೆ,
      ಕನ್ನಡ ನಾಡಿನಲ್ಲಿ ಕನ್ನಡಿಗರಾದ ನಮಗೆ ನಮ್ಮ ಕವ್‍ಶಲ್ಯಕ್ಕೆ ತಕ್ಕ ಉದ್ಯೋಗ ದೊರೆಯುವುದು ನಮ್ಮ ಹುಟ್ಟಿನಿಂದಲೇ ಬಂದ ಹಕ್ಕು! ಅದನ್ನು ದೊರಕಿಸಿಕೊಡುವುದು ನಾವು ಆರಿಸಿ ಕಳಿಸಿರುವ ನಮ್ಮ ಮುಂದಾಳುಗಳಾದ ನಿಮ್ಮ ಕನಿಶ್ಟ ಕರ‍್ತವ್ಯ! ಆದರೆ, ನ್ಯಾಯವಾಗಿ ನಮಗೆ ದೊರೆಯಬೇಕಾದ ಕೆಲಸಗಳನ್ನು ನೀವು ನಮ್ಮಿಂದ ದೂರ ಮಾಡಿ ಹೊರನಾಡಿಗರ ಪಾಲು ಮಾಡುತ್ತೀರಿ. ಹಾಗೆ ಮಾಡಿ ನಮ್ಮ ಬದುಕನ್ನೇ ಕಸಿದುಕೊಳ್ಳುತ್ತೀರಿ. ಸಂಬಳ ತರುವ ಕೆಲಸವೇ ಇಲ್ಲದಿದ್ದರೆ ನಾವು ಬದುಕುವುದಾದರೂ ಹೇಗೆ? ಚೆಂದದ ಬಾಳನ್ನು ಕಟ್ಟಿಕೊಳ್ಳುವುದಾದರೂ ಹೇಗೆ?
      ಮೊದಲಿಂದಲೂ ನಮ್ಮ ನಾಡನ್ನು ಮುನ್ನಡೆಸಿಕೊಂಡು(?) ಬಂದಿರುವ ಮುಂದಾಳುಗಳು ನೀವು, ನಮ್ಮ ಕೆಲಸಗಳನ್ನು ವಲಸಿಗರ ಮಡಿಲಿಗೆ ಹಾಕಿ, ನಮ್ಮ ಬದುಕಿಗೆ ಕತ್ತಲೆ ತುಂಬಿಸುತ್ತಾ ಬಂದಿದ್ದೀರಿ. ಇಪ್ಪತ್ತಯ್ದು ವರುಶಗಳ ಹಿಂದೆಯೇ ನಮ್ಮ ಉದ್ಯೋಗಗಳನ್ನು ಹೇಗೆ ಕಾಪಾಡಬೇಕು ಎಂದು ನಿಮಗೆ, ನೀವೇ ನೇಮಿಸಿದ ಸಮಿತಿಯೊಂದು ಸಲಹೆ ಮಾಡಿತ್ತು. ಅದರ ನೆನಪಿದೆ ತಾನೆ? ಸರೋಜಿನಿ ಮಹಿಶಿ ಸಮಿತಿ ಎಂದು ಅದರ ಹೆಸರು. ಅದರ ಸಲಹೆಗಳನ್ನು ನೀವು ತಡವಿಲ್ಲದೆ ಆಗಲೇ ಜಾರಿಗೆ ತರಬೇಕಾಗಿತ್ತು. ಆದರೆ, ತರಲಿಲ್ಲ. ಅದನ್ನು ಬಿಟ್ಟು, ನಮ್ಮ ಕೆಲಸಗಳನ್ನು ವಲಸಿಗರ ಕಯ್ಗಿಡುವ, ವಲಸಿಗರನ್ನು ಓಲಯ್ಸುವ ನಿಮ್ಮ ಎಂದಿನ ಚಾಳಿಯನ್ನು ತಡೆಯಿಲ್ಲದೆ ನಡೆಸಿಕೊಂಡು ಬಂದಿರಿ! ಅಶ್ಟು ಸಾಲದು ಎಂಬಂತೆ, ಈಗೀಗ, ’ಇಪ್ಪತ್ತಯ್ದು ವರುಶಗಳ ಹಿಂದಿನ ಹಾಗೆ ಇಂದಿನ ಪರಿಸ್ತಿತಿ ಇಲ್ಲ. ಹಾಗಾಗಿ, ಅಂದಿನ ಸಲಹೆಗಳನ್ನು ಇಂದು ಜಾರಿಗೆ ತರಲು ಬರುವುದಿಲ್ಲ’ ಎಂದು ಹೇಳುತ್ತಿದ್ದೀರಿ. ’ಕಳ್ಳನಿಗೊಂದು ಪಿಳ್ಳೆ ನೆವ’ ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದೀರಿ. ನಮ್ಮ ಜಾಣ್ಮೆಯ ಮಟ್ಟವನ್ನೇ ಅಣಕಿಸುತ್ತಿದ್ದೀರಿ. ನಮ್ಮ ತಾಳ್ಮೆಯನ್ನು ಕೆಣಕುತ್ತಿದ್ದೀರಿ. ಇಶ್ಟು ವರುಶ ನಮಗೆ ಗಾಯ ಮಾಡಿದ್ದಲ್ಲದೆ, ಈಗ ಗಾಯದ ಮೇಲೆ ಬರೆಯನ್ನೂ ಎಳೆಯಲು ಹೊರಟಿದ್ದೀರಿ.
      ನಮ್ಮ ಮುಂದಾಳುಗಳಾದ ನೀವು ಅಯ್‍ವತ್ತು ವರುಶಗಳ ಹಿಂದೆ ದೇಶದ ಒಗ್ಗಟ್ಟಿನ ಹೆಸರಿನಲ್ಲಿ ನಮ್ಮ ಮೇಲೆ ತಪ್ಪು ಬಾಶಾನೀತಿಯನ್ನು ಹೊರಿಸಿದಿರಿ. ’ಇಂತಹ ಕನ್ನಡಗುಲಿ ಬಾಶಾನೀತಿ ಬೇಡ’ ಎಂದ ಕುವೆಂಪು ಅಂತಹ ಮಹನೀಯರ ಎಚ್ಚರಿಕೆಗೆ ಜಾಣಕಿವುಡು ನಟಿಸಿದಿರಿ. ತ್ರಿಬಾಶಾ ಸೂತ್ರ ಎಂಬ ಉರುಳಿಗೆ ನಮ್ಮ ಕೊರಳನ್ನು ನೂಕಿದಿರಿ. ಹಿಂದೀ ಮಾರಿಗೆ ಕನ್ನಡದ ಕಂದಮ್ಮಗಳನ್ನು ಬಲಿಕೊಟ್ಟಿರಿ. ಅದರ ಪರಿಣಾಮ ಇಂದು ಏನಾಗಿದೆ ನೋಡಿ. ಜನಸಂಖ್ಯೆ ಮಿತಿ ಮೀರಿದ ಉತ್ತರದ ಹಿಂದೀ ನಾಡುಗಳಿಂದ ನಮ್ಮ ನಾಡಿಗೆ ವಲಸಿಗರ ಹೊಳೆಯೇ ಹರಿದು ಬರುತ್ತಿದೆ. ಲಕ್ಶಲಕ್ಶ ಹಿಂದೀಯರಿಗೆ ನಮ್ಮ ನಾಡಿನಲ್ಲಿ ಬಂದು ನೆಲೆಸುವುದೂ ನಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುವುದೂ ನಮ್ಮ ಬಾಯಲ್ಲೇ ಹಿಂದೀ ಆಡಿಸುವುದೂ ನೀರು ಕುಡಿದಷ್ಟು ಸರಾಗವಾಗಿದೆ. ಇದರಿಂದಾಗಿ, ನಾವು ಮತ್ತು ನಮ್ಮ ನಡೆನುಡಿಗಳು ನಮ್ಮ ನೆಲದಲ್ಲೇ ಮೂಲೆಗುಂಪಾಗುವ ಸ್ತಿತಿ ಬಂದೊದಗಿದೆ! ನಮ್ಮ ನಾಡಿನಲ್ಲೇ ನಾವು ಅಲ್ಪಸಂಕ್ಯಾತರೂ, ಎರಡನೇ ದರ‍್ಜೆಯ ಜನರೂ ಆಗುವ ಹೊತ್ತು ಹತ್ತಿರ ಬರುತ್ತಿದೆ. ಇಶ್ಟೆಲ್ಲಾ ಕೆಡುಕು ನಡೆಯುತ್ತಿದ್ದರೂ ಮುಂದಾಳುಗಳು ನೀವು ಏನು ಮಾಡುತ್ತಿದ್ದೀರಿ? ನಮಗಾಗಿ ಇರಬೇಕಾದ ಏರ‍್ಪಾಡುಗಳನ್ನು ವಲಸಿಗರಿಗೆ ಹೊಂದುವಂತೆ ಬದಲಾಯಿಸುತ್ತಿದ್ದೀರಿ. ನಮ್ಮ ಹಿರಿಯರು ನಮಗಾಗಿ ಕೂಡಿಟ್ಟ ನಮ್ಮ ನಾಡಿನ ಎಲ್ಲ ಸವಲತ್ತುಗಳನ್ನೂ ಸಂಪನ್ಮೂಲಗಳನ್ನೂ ವಲಸಿಗರ ಪಾಲು ಮಾಡುತ್ತಿದ್ದೀರಿ.
      ನಮ್ಮ ನೆಚ್ಚಿನ(?) ಮುಂದಾಳುಗಳೆ, ಇನ್ನಾದರೂ ನಿಮ್ಮನ್ನು ನಂಬಿ ಆರಿಸಿ ಕಳಿಸಿದ ಹುಲು ಕನ್ನಡಿಗರ ಬಗ್ಗೆ ಕೊಂಚ ಯೋಚಿಸಿರಿ. ಸುಳ್ಳು ದೇಶಯ್‍ಕ್ಯತೆಯ ಪೊಳ್ಳು ನೀತಿಗಳನ್ನು ಅತ್ತ ತಳ್ಳಿ. ಕನ್ನಡತನವನ್ನು ಕಲಿತುಕೊಳ್ಳಿ. ಕನ್ನಡತನವನ್ನು ಕಲಿಸಿ. ಕನ್ನಡಿಗರಲ್ಲಿರುವ ತಮ್ಮತನದ ಅರಿವಿನ ಕೊರತೆಯನ್ನು ನೀಗಿಸಿ. ಕನ್ನಡಿಗರಿಗೆ ಅವರ ನಿಜವಾದ ಹಿನ್ನೆಲೆಯ ಬಗ್ಗೆ ಅರಿವು ಕಾಣಿಸಿ. ಕನ್ನಡ ನಡೆನುಡಿಗಳನ್ನು ಕಾಪಾಡಿ. ಕನ್ನಡಿಗರ ಬದುಕಿನ ನಾಳೆಗಳನ್ನು ಬೆಳಗಿಸಿ. ಕನ್ನಡಿಗರು ಹೊನ್ನಿನ ಬಾಳನ್ನು ಕಟ್ಟಿಕೊಳ್ಳುವುದಕ್ಕೆ ನೆರವಾಗಿ.
ಇಂತೀ ನಿಮ್ಮನ್ನು ಮತ್ತೆ ಮತ್ತೆ ನಂಬಿ ಆರಿಸಿ ಕಳಿಸುವ,
ಬಡಪಾಯಿ ಕನ್ನಡಿಗರು
(ಬರೆದವರು: ಎಚ್.ಎಸ್.ರಾಜ್ ಮತ್ತು ಪ್ರಶಾಂತ ಸೊರಟೂರ)

ಗುರುವಾರ, ಫೆಬ್ರವರಿ 21, 2013

ಹಿಂದೀ ಹುಚ್ಚು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಇತ್ತೀಚೆಗೆ ಬಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊತ್ತಮೊದಲ ನಾಳು, ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕೆಲ ಗಣ್ಯರ ಮತ್ತು ವೇದಿಕೆಗೆ ಕಾವಲಾಗಿದ್ದ ಪೋಲೀಸರ ನಡುವೆ ಗದ್ದಲ ನಡೆಯಿತು ಎಂಬುದನ್ನು ನೀವು ಕೇಳಿರಬಹುದು. ಬರೀ ಗದ್ದಲವಲ್ಲದೆ, ಹಗುರಾಗಿ ನೂಕಾಟ ತಳ್ಳಾಟವೂ ನಡೆಯಿತು ಎಂದು ಮಾದ್ಯಮಗಳು ವರದಿ ಮಾಡಿದ್ದವು.
      ಮುಕ್ಯಮಂತ್ರಿಗಳು ವೇದಿಕೆಗೆ ಬರುವವರೆಗೆ ಗಣ್ಯರನ್ನಾಗಲೀ ಯಾರನ್ನೇ ಆಗಲಿ, ವೇದಿಕೆಯ ಮೇಲೆ ಹೋಗಲು ಬಿಡುವುದಿಲ್ಲ ಎಂದು ಅಲ್ಲಿ ಕಾರ‍್ಯ ನಿರ‍್ವಹಿಸುತ್ತಿದ್ದ ಅಯ್.ಪೀ.ಎಸ್. ಅದಿಕಾರಿ ಹಟ ಹಿಡಿದಿದ್ದರಂತೆ. ಅವರ ಹಟಮಾರಿತನಕ್ಕೆ ಮಾಜಿ ಕಸಾಪ ಅದ್ಯಕ್ಶ ನೆಲ್ಲೂರು ಪ್ರಸಾದರು ಕೊಂಚ ಕಟುವಾಗಿ ವಿರೋದ ತೋರಿಸಿದಾಗ, ’ಇವನನ್ನ ಕೂಡಲೇ ಅರೆಸ್ಟ್ ಮಾಡು’ ಎಂದು ಅದಿಕಾರಿ ಪಕ್ಕದಲ್ಲಿದ್ದ ಪೇದೆಗಳಿಗೆ ಆಜ್ನೆ ಮಾಡಿದರಂತೆ. ಅದರಿಂದ ಶುರುವಾಯಿತಂತೆ ನೂಕಾಟ ತಳ್ಳಾಟ. ಇಲ್ಲಿ ತಮಾಶೆ ಏನೆಂದರೆ, ಆ ಅಯ್.ಪೀ.ಎಸ್. ಅದಿಕಾರಿ, ’ಇವನನ್ನ ಕೂಡಲೇ ಅರೆಸ್ಟ್ ಮಾಡು’ ಎಂದು ಕೂಗಿದ್ದು ಹಿಂದೀ ಬಾಶೆಯಲ್ಲಿ. ಬಹುಶಹ ಅವರಿಗೆ ಕನ್ನಡ ಇನ್ನೂ ಬರುತ್ತಿಲ್ಲವೇನೋ, ಇಲ್ಲ,  ಅವರ ತಾಯ್ನುಡಿ ಹಿಂದೀ ಇರಬಹುದೇನೋ. ಆವೇಶದ ಬರದಲ್ಲಿ ಅವರ ಬಾಯಿಂದ ತಾಯ್ನುಡಿಯಲ್ಲಿ ಆಜ್ನೆ ಹೊರಟಿರಬಹುದೇನೋ. ಆದರೂ, ಕನ್ನಡ ನುಡಿ ಜಾತ್ರೆಯ ಮುಕ್ಯ ವೇದಿಕೆಯ ಬಳಿ ಹಿಂದಿಯಲ್ಲಿ ಕೂಗಬಾರದೆಂಬ ಪರಿಜ್ನಾನ ಅವರಿಗೆ ಇರಬೇಕಾಗಿತ್ತು. ಕರ‍್ನಾಟಕದ ಬದಲು ತಮಿಳುನಾಡಿನಲ್ಲಿ ಇಂತಹ ಒಂದು ಕಾರ‍್ಯಕ್ರಮ ನಡೆದಿದ್ದರೆ, ಅದಿಕಾರಿಗಳಿಗೆ, ಅವರೆಶ್ಟೇ ಹೊಸಬರಾಗಿರಲಿ,  ಒಬ್ಬ ತಮಿಳು ಗಣ್ಯನನ್ನು ಅರೆಸ್ಟ್ ಮಾಡು ಎಂದು ಹಿಂದೀಯಲ್ಲಿ ಕೂಗುವ ಎದೆಗಾರಿಕೆ ಬರುತ್ತಿತ್ತೆ? ಬರುತ್ತಿರಲಿಲ್ಲ. ಕರ‍್ನಾಟಕದಲ್ಲಿ ಮಾತ್ರ ಯಾರಿಗೇ ಆದರೂ ಯಾವ ಸಂದರ‍್ಬದಲ್ಲಾದರೂ ಆ ಎದೆಗಾರಿಕೆ ಸುಲಬವಾಗಿ ಬರುತ್ತದೆ. ಅಂದ ಹಾಗೆ, ಗಲಾಟೆಗೆ ಕಾರಣ ’ಅರೆಸ್ಟ್ ಮಾಡು’ ಎಂದದ್ದೋ, ಇಲ್ಲ, ಅದನ್ನು ಹಿಂದೀಯಲ್ಲಿ ಹೇಳಿದ್ದೋ ಎಂಬುದು ಇನ್ನೂ ತಿಳಿದಿಲ್ಲ.
      ತಮಿಳರು, ನಾವು, ಇಬ್ಬರೂ ಒಟ್ಟಾರೆ ದ್ರಾವಿಡರೇ. ಆದರೂ, ಹಿಂದಿಯ ಬಗೆಗಿನ ನಿಲುವಿನಲ್ಲಿ ಅವರಿಗೂ ನಮಗೂ ಎಶ್ಟೊಂದು ಬೇರ‍್ಮೆ! ಇತ್ತೀಚೆಗೆ, ಮದುರಯ್ ಜಿಲ್ಲೆಯ ಆಡಳಿತಾದಿಕಾರಿ, ’ಮದುರಯ್‍ನ ಹೆಸರಾಂತ ಗುಡಿಗಳನ್ನು ನೋಡಲು ಬಡಗ ಬಾರತದ ಬಹುಮಂದಿ ಬರುತ್ತಿರುತ್ತಾರೆ. ಅವರ ಅನುಕೂಲಕ್ಕಾಗಿ ಇನ್ನು ಮುಂದೆ ಹಿಂದೀಯಲ್ಲೂ ಪಲಕಗಳನ್ನು ಹಾಕೋಣ’ ಎಂದು ಕಾರಣ ಕೊಟ್ಟು, ಹಾಗೇ ಮಾಡುವುದಾಗಿ ಆದೇಶ ಹೊರಡಿಸಿದರು. ಕೂಡಲೇ ಅದಕ್ಕೆ ಮದುರೆಯ ತಮಿಳರಿಂದ ಎಂತಹ ಕಟ್ಟೆದಿರು ವ್ಯಕ್ತವಾಯಿತೆಂದರೆ, ಜಿಲ್ಲಾದಿಕಾರಿ ತಮ್ಮ ಆದೇಶವನ್ನು ತಕ್ಶಣವೇ ರದ್ದು ಮಾಡಬೇಕಾಯಿತು (ಈ ಸುದ್ದಿ ಫೆಬ್ರವರಿ ೭, ೨೦೧೩ರ ಪ್ರಜಾವಾಣಿಯಲ್ಲಿ ವರದಿಯಾಗಿದೆ). ತಮಿಳರ ಈ ನಡೆ, ನಮ್ಮ ಕಣ್ಣಿನಲ್ಲಿ, ಹಿಂದೀ ದ್ವೇಶ ಎನಿಸಬಹುದು. ಆದರೆ, ಹಿಂದೀಯಂತಹ ವಸಾಹತುಶಾಹಿ ಬಾಶೆಯನ್ನು ತಡೆಯಲು ತಮಿಳರು ಪಾಲಿಸುವ ನೀತಿಯೇ ಸರಿಯಾದ ನೀತಿ.
      ನಾವೂ ಹಿಂದೊಮ್ಮೆ ಹಿಂದಿಗೆ ಕಟ್ಟೆದಿರನ್ನು ತೋರಿಸಿದ್ದೆವು. ೧೯೬೮ರಲ್ಲಿ ಕೇಂದ್ರ ಸರ‍್ಕಾರ ಹಿಂದೀಯನ್ನು ರಾಶ್ಟ್ರಬಾಶೆಯನ್ನಾಗಿ ಮಾಡಲು ಹೊರಟಾಗ, ತಮಿಳರು ಮತ್ತು ಬಂಗಾಳಿಗಳ ಒಡನೆ ನಾವೂ ’ಆಗದು’ ಎಂದು ಕೂಗಿದ್ದೆವು. ಅಂದಿನ ವಿರೋದ ಇಂದು ಎಲ್ಲಿ ಹೋಯಿತೋ ತಿಳಿಯುವುದಿಲ್ಲ. ಬೆಳಗಾವಿಯಲ್ಲಿ ನಡೆದ ಕನ್ನಡ ವಿಶ್ವ ಸಮ್ಮೇಳನದಲ್ಲಿ ಅಯ್‍ಶ್ವರ‍್ಯಾ ರಯ್ ಹಿಂದೀಯಲ್ಲಿ ಬಾಶಣ ಬಿಗಿದಾಗ ನಮ್ಮಿಂದ ಆಕ್ಶೇಪಣೆ ಏಳಲಿಲ್ಲ. ಬಡಗ ಬಾರತದ ದುರೀಣರು ಬಂದು ನಮ್ಮೆದುರು ’ಕರ‍್ನಾಟಕದ ಬಾಶೆಯೇ ಹಿಂದಿ’ ಎನ್ನುವ ಹಾಗೆ ಹಿಂದೀಯಲ್ಲಿ ಬಾಶಣಗಳನ್ನು ಕಿರುಚುವಾಗ ನಾವು ತುಟಿಪಿಟಕ್ಕೆನ್ನುವುದಿಲ್ಲ. ಏನಾಯಿತು ನಮಗೆ? ತ್ರಿಬಾಶಾ ಸೂತ್ರಕ್ಕೆ ನಮ್ಮನ್ನು ನಾವೇ ಒಳಪಡಿಸಿಕೊಂಡದ್ದರ ಪರಿಣಾಮವೇ ಇದು?
      ಹಿಂದಿಯ ಮಟ್ಟಿಗೆ ವಿರೋದ ಹೋಗಿರುವುದಶ್ಟೇ ಅಲ್ಲ, ವಿರೋದದ ಬದಲು ಅಪ್ಪಟ ಉತ್ಸಾಹ ನಮ್ಮ ಮಂದಿಗೆ ಬಂದಿರುವಂತೆ ಕಾಣಿಸುತ್ತದೆ. ಎಶ್ಟೋ ಕಡೆ ನಾವೇ ಮೇಲೆ ಬಿದ್ದು ಹಿಂದೀ ಮಾತಾಡುತ್ತೇವೆ. ಗೇಟನ್ನು ಕಾಯುವ ಸೆಂಟ್ರೀಗಳಿಗೆ, ಲಿಫ್ಟುಗಳನ್ನು ನಡೆಸುವವರಿಗೆ ನಾವಾಗಿ ನಾವು ಹಿಂದಿಯಲ್ಲಿ ಮಾತಾಡಿಸುತ್ತೇವೆ. ಮಾಲುಗಳಲ್ಲಿ ಹಿಂದೀ ಗ್ರಾಹಕರಿಗೆ ಹಿಂದೀಯಲ್ಲೇ ಸೇವೆ ನೀಡುತ್ತೇವೆ. ಕನ್ನಡ ಸಿನಿಮಾಗಳಿಗೆ ಹಿಂದಿಯಲ್ಲಿ ಹೆಸರುಗಳನ್ನು ಇಡುತ್ತೇವೆ. ಕನ್ನಡ ಟೀವೀ ಕಾಲುವೆಗಳಲ್ಲಿ ಎಶ್ಟೋ ಬಾರಿ ಹಿಂದೀ  ಹಾಡುಗಳ ಕಾರ‍್ಯಕ್ರಮಗಳನ್ನು ನಡೆಸುತ್ತೇವೆ. ರೇಡಿಯೋದಲ್ಲೂ ಕನ್ನಡ ಮತ್ತು ಹಿಂದೀ ಹಾಡುಗಳನ್ನು ಬೆರೆಸಿ ಬಿತ್ತರ ಮಾಡುತ್ತೇವೆ. ಒಟ್ಟಿನಲ್ಲಿ ಹಿಂದಿಗೆ ಮಣೆಹಾಕಿ ಕೂರಿಸಿದ್ದೇವೆ. ಹಿಂದಿ ತಳವೂರಿದರೆ ಕನ್ನಡಕ್ಕೆ ಎಡೆ ಇರುವುದಿಲ್ಲ ಎನ್ನುವ ಅಂಜಿಕೆ ನಮಗಿದ್ದಂತೆ ಕಾಣುವುದಿಲ್ಲ.
      ಇಶ್ಟೆಲ್ಲಾ ನಿರಾಶಾವಾದದ ಕತ್ತಲೆಯಲ್ಲಿ ಒಂದು ಆಶಾವಾದದ ಬೆಳಕು ಈ ನಡುವೆ ಕಾಣಿಸಿಕೊಂಡಿದೆ. ಬನವಾಸಿ ಬಳಗ, ಕನ್ನಡ ಮತ್ತು ಇತರ ಎಡೆನುಡಿಗಳಿಗೆ ಹಿಂದಿಯಶ್ಟೇ ಮಾನ್ಯತೆ ದೊರಕಬೇಕೆಂದೂ, ಅದಕ್ಕೆ ತಕ್ಕಂತೆ ಸಂವಿದಾನದಲ್ಲಿ ತಿದ್ದುಪಡಿ ಆಗಬೇಕೆಂದೂ, ರಾಜ್ಯಪಾಲರ ಮೂಲಕ ಕೇಂದ್ರ ಸರ‍್ಕಾರವನ್ನು ಒತ್ತಾಯಿಸಲು ಪ್ರಯತ್ನ ನಡೆಸಿದೆ. ಪ್ರಯತ್ನಕ್ಕೆ ಒತ್ತಾಸೆಯಾಗಿ ಸಾವಿರಾರು ಸಹಿಗಳನ್ನು ಕಲೆಹಾಕಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಶತ್ತಿನ ಬೆಂಬಲವನ್ನು ಪಡೆದುಕೊಳ್ಳುವುದರಲ್ಲೂ ಯಶಸ್ವಿಯಾಗಿದೆ. ’ಅರೆಸ್ಟ್ ಮಾಡು’ ಎಂದು ಹಿಂದಿಯಲ್ಲಿ ಕೂಗು ಬಂದ ಬಿಜಾಪುರದ ಸಮ್ಮೇಳನದಲ್ಲೇ ’ಕನ್ನಡಕ್ಕೆ ಹಿಂದಿಯ ಸ್ತಾನಮಾನಗಳನ್ನು ಕೇಂದ್ರ ಸರ‍್ಕಾರ ನೀಡಬೇಕು’ ಎಂಬ ನಿರ‍್ಣಯವನ್ನು ಪ್ರಕಟಿಸುವಂತೆ ಮಾಡುವಶ್ಟು ಪ್ರಬಾವ ಬೀರಿದೆ. ಬನವಾಸಿ ಬಳಗದ ಈ ಪ್ರಯತ್ನದ ಸುದ್ದಿ ಹರಡುತ್ತದೆ ಎಂದು ಹಾರಯ್ಸೋಣ. ಇನ್ನಾದರೂ ಕನ್ನಡಿಗರು, ’ಕನ್ನಡನಾಡಿನಲ್ಲಿ ಕನ್ನಡಕ್ಕೆ ಎಡೆ, ಹಿಂದಿಗಲ್ಲ’ ಎಂಬ ನಿಲುವನ್ನು ತಾಳುತ್ತಾರೆ ಎಂದು ನಂಬೋಣ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ಹಾಗೂ ಅದರಿಂದ ಕನ್ನಡಕ್ಕೆ ಆಗುವ ಕೆಡುಕಿನ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.

ಸೋಮವಾರ, ಫೆಬ್ರವರಿ 11, 2013

ಬಾಶಾಂದತೆ ಬೇಡ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಹೇಸಿಗೆ ಬರಿಸುವ ಸುದ್ದಿಗಳಿಗೆ ಏನೂ ಕೊರತೆ ಇಲ್ಲ ಈ ದಿನಗಳಲ್ಲಿ. ಇತ್ತೀಚೆಗೆ ಟೀವೀಯಲ್ಲಿ ನೋಡಿದ ಒಂದು ಸುದ್ದಿ, ಬಾಶೆಯ ಹೆಸರಿನಲ್ಲಿ ನಡೆಯುವ ಕೇಡುಗತನದ ಕಟ್ಟೆದುರಿಯಾದ ನನ್ನಲ್ಲಿ ಅತೀವ ಕಳವಳ ಉಂಟುಮಾಡಿತು.
      ಸುಮಾರು ಹತ್ತು ವರ‍್ಶದ ಹುಡುಗನೊಬ್ಬನ ಬೆಂದು ಹೋಗಿದ್ದ ಎರಡೂ ಮುಂಗಯ್ಗಳನ್ನು ಮತ್ತೆ ಮತ್ತೆ ಟೀವೀ ತೆರೆಯ ಮೇಲೆ ತೋರಿಸುತ್ತಿದ್ದರು. ಹುಡುಗನ ಹೆಸರು ಮಹಮದ್ ಜಾವೆದ್. ಅವನ ಕಯ್ಗಳನ್ನು ಹಾಗೆ ಬೇಯಿಸಿದವನು ದಾದಾ ಪೀರ್ ಎಂಬ ಒಬ್ಬ ಮುಸ್ಲಿಮ್ ದರ‍್ಮಗುರು. ಈ ಅಮಾನವೀಯ ಆಗುಹ ನಡೆದದ್ದು ಆ ಹುಡುಗ ತಂಗಿಕೊಂಡು ಓದುತ್ತಿದ್ದ ಚಿಕ್ಕಮಗಳೂರಿನ ಒಂದು ಮುಸ್ಲಿಮ್ ವಸತಿ ಶಾಲೆಯಲ್ಲಿ. ಕುದಿವ ನೀರಿಂದ ಆ ಹುಡುಗನ ಕಯ್ಯನ್ನು ಆ ದರ‍್ಮಗುರು ಸುಟ್ಟದ್ದು ಯಾಕೆ ಗೊತ್ತೆ? ಆ ಹುಡುಗನ ಕುರಾನ್ ಕಲಿಕೆ ಆ ದರ‍್ಮಗುರು ಎಣಿಸಿದ ಹಾಗೆ ಸಾಗುತ್ತಿರಲಿಲ್ಲ ಎಂಬ ಕಾರಣಕ್ಕಾಗಿ!
      ಹುಡುಗನನ್ನೂ ಹುಡುಗನ ತಂದೆಯನ್ನೂ ವರದಿಗಾರರು ಮಾತಾಡಿಸುತ್ತಿದ್ದರು. ದರ‍್ಮಗುರು ವರದಿಗಾರರಿಂದ ತಲೆಮರೆಸಿಕೊಂಡಿದ್ದ. ವಿಶಯವನ್ನು ವರದಿಗಾರರು ಕೆದಕಿ ನೋಡಿದಾಗ ತಿಳಿದು ಬಂದದ್ದು ಇದು - ಅರಬ್ಬೀ ಬಾಶೆಯ ಅಡಚಣೆ ಆ ಹುಡುಗನಿಗೆ ಕುರಾನ್ ಕಲಿಯುವುದನ್ನು ಕಶ್ಟ ಮಾಡಿತ್ತು.
      ಹುಡುಗ ಮತ್ತು ಆತನ ತಂದೆ ಇಬ್ಬರೂ ಮಾಮೂಲಿ ತೆಂಕಣ ಬಾರತದವರಂತೆ ಕಾಣುತ್ತಿದ್ದರು. ಅವರದ್ದು ದ್ರಾವಿಡ ಮಯ್ಬಣ್ಣ ಮತ್ತು ದ್ರಾವಿಡ ಚಹರೆ. ಇಸ್ಲಾಮನ್ನು ಪಾಲಿಸುವ ದ್ರಾವಿಡರು ಎಂದು ಅವರನ್ನು ಯಾರು ಬೇಕಾದರೂ ಗುರುತಿಸಬಹುದಾಗಿತ್ತು. ಹಾಗಿತ್ತು ಅವರ ಮಯ್ಪರಿ.
      ಆ ಬಡಪಾಯಿ ಹುಡುಗನನ್ನು ನೋಡಿ, ’ಎತ್ತಣ ದ್ರಾವಿಡ ಹುಡುಗ, ಎತ್ತಣ ಅರಬ್ಬೀ ಬಾಶೆ?’ ಎಂದುಕೊಂಡೆ ನಾನು. ದ್ರಾವಿಡ ಹುಡುಗನೊಬ್ಬನಿಗೆ ಅರಬ್ಬೀ ಬಾಶೆ ಕೊಂಚ ತೊಡಕೆನಿಸಿದರೆ, ಅದೇನು ಮಹಾ ತಪ್ಪು ಸ್ವಾಮಿ? ಅಶ್ಟಕ್ಕೂ, ದರ‍್ಮದಲ್ಲಿ ಯಾವುದು ಮುಕ್ಯ? ಅದರ ತಿರುಳೋ, ಇಲ್ಲ, ಅದನ್ನು ಬರೆದಿಟ್ಟಿರುವ ಬಾಶೆಯೋ? ತಿರುಳನ್ನು ತೂರಿ ತವುಡನ್ನು ಬಾಚಿಕೊಳ್ಳುವ ಅರಿವುಗೇಡಿತನ ಯಾಕೆ? ಕ್ರಯ್‍ಸ್ತರು ಅವರ ಅರವೋದುಗೆಯನ್ನು ಅವರವರ ಬಾಶೆಗಳಲ್ಲೇ ಓದಿ ಪ್ರಾರ‍್ತನೆ ಸಲ್ಲಿಸುತ್ತಾರೆ. ಅದರಿಂದ ಕ್ರಯ್‍ಸ್ತ ದರ‍್ಮಕ್ಕೇನಾದರೂ ಕುಂದು ಬಂದಿದೆಯೆ? ಸಂಸ್ಕ್ರುತವನ್ನು ಬಿಟ್ಟು ಮಂದಿಯ ಆಡುನುಡಿಗಳಲ್ಲಿ ಬವ್‍ದ್ದ  ಬಿಕ್ಶುಗಳು ತಮ್ಮ ದರ‍್ಮದ ಪ್ರಚಾರ ಮಾಡಿದರು. ಹಾಗೆ ಮಾಡಿದ್ದಕ್ಕೆ ಬವ್‍ದ್ದ ದರ‍್ಮವೇನಾದರೂ ಮುರುಟಿ ಹೋಯಿತೆ? ಇನ್ನು ನಮ್ಮ ನಾಡಿನಲ್ಲೇ, ಶರಣರು ತಿಳಿಗನ್ನಡದಲ್ಲಿ ವಚನಗಳನ್ನು ಹಾಡಿದರು. ಅದರಿಂದೇನಾದರೂ ವೀರಶಯ್ವ ಮತ ಹರಡದೆ ಉಳಿಯಿತೆ?
      ದರ‍್ಮದ ಹೆಸರಿನಲ್ಲಿ, ಸಂಸ್ಕ್ರುತಿಯ ಹೆಸರಿನಲ್ಲಿ, ತಿಳಿಯದ ಬಾಶೆಯನ್ನು ಜನರ ನಡುವೆ ತೂರಿಸುವುದರಲ್ಲಿ ನಾವು ಹಿಂದೂಗಳು ಕೂಡ ಯಾರಿಗೂ ಕಡಿಮೆ ಇಲ್ಲ. ನಮ್ಮ ವಿಶಯದಲ್ಲಿ ಅರಬ್ಬಿಯ ಸ್ತಾನವನ್ನು ಸಂಸ್ಕ್ರುತ ತೆಗೆದುಕೊಳ್ಳುತ್ತದೆ, ಅಶ್ಟೆ.
      ನಮ್ಮ ಪೂಜೆ ಪುನಸ್ಕಾರಗಳು ನಡೆಯುವುದು ಸಂಸ್ಕ್ರುತದಲ್ಲಿ. ಹೋಮ ಹವನಗಳು ನಡೆಯುವುದು ಸಂಸ್ಕ್ರುತದಲ್ಲಿ. ಮದುವೆಯ ವಿದಿವಿದಾನಗಳು ನಡೆಯುವುದು ಸಂಸ್ಕ್ರುತದಲ್ಲಿ. ದಾರ‍್ಮಿಕ ಕಾರ‍್ಯಕ್ರಮಗಳು ಮೊದಲುಗೊಳ್ಳುವುದು ಸಂಸ್ಕ್ರುತದಲ್ಲಿ. ಎಶ್ಟೋ ಶಾಲೆಗಳಲ್ಲಿ ಮಕ್ಕಳು ಮೊದಲು ಪ್ರಾರ‍್ತನೆ ಸಲ್ಲಿಸುವುದು ಸಂಸ್ಕ್ರುತದಲ್ಲಿ. ಎಲ್ಲವೂ ನಮಗೆ ತಿಳಿಯದ ಸಂಸ್ಕ್ರುತದಲ್ಲಿ! ಸಂಸ್ಕ್ರುತವೇ ಯಾಕಾಗಬೇಕು? ಕನ್ನಡ ಯಾಕಾಗಬಾರದು?
      ನಾವು ಕನ್ನಡಿಗರು ದ್ರಾವಿಡರು, ನಮ್ಮ ಕನ್ನಡ ದ್ರಾವಿಡ ಬಾಶೆ, ಸಂಸ್ಕ್ರುತ ಬಡಗದ ಆರ‍್ಯ ಬಾಶೆ, ಕನ್ನಡಕ್ಕೂ ಅದಕ್ಕೂ ನೆತ್ತರ ನಂಟಿಲ್ಲ, ಸಂಸ್ಕ್ರುತ ನಮ್ಮದಲ್ಲ ಎಂದು ಮುಂತಾದ ಕಾರಣಗಳಿಗಾಗಿ ನಾನು ಸಂಸ್ಕ್ರುತದ ಇದಿರಾಗಿ ಮಾತಾಡುತ್ತಿಲ್ಲ. ನಮ್ಮ ಬದುಕಿಗೆ ಮುಕ್ಯವಾದ ವಿದಿವಿದಾನಗಳು ನಮಗೆ ತಿಳಿಯದ ಬಾಶೆಯಲ್ಲಿ ಯಾಕೆ ನಡೆಯಬೇಕು ಎಂಬ ಮೂಲಬೂತ ಕೇಳ್ವಿಯ ನೆಲೆಯಿಂದ ಮಾತಾಡುತ್ತಿದ್ದೇನೆ. ನಮ್ಮ ವಿದಿವಿದಾನಗಳು ನಮಗೆ ತಿಳಿಯುವ ಬಾಶೆಯಲ್ಲಿದ್ದರೆ ಸರಿಯಲ್ಲವೆ ಎಂಬ ಸಹಜ ತರ‍್ಕದ ನೆಲೆಯಿಂದ ಮಾತಾಡುತ್ತಿದ್ದೇನೆ.
     ಹಿಂದೆ, ಕುವೆಂಪು ಅವರು ಮದುವೆಯ ಸರಳ ವಿದಿಗಳನ್ನು ಕನ್ನಡದಲ್ಲೇ ರಚಿಸಿದ್ದರಂತೆ. ಅವರ ಮಾದರಿಯನ್ನು ಅನುಸರಿಸಿ ಹಲವು ಮದುವೆಗಳು ನಡೆದಿದ್ದವಂತೆ (ತೀರ ಇತ್ತೀಚೆಗೂ ಕುವೆಂಪು ವಿದಿಯಲ್ಲಿ ಮದುವೆಗಳು ನಡೆದಿವೆ ಎಂದೂ ಕೇಳಿದ್ದೇನೆ). ಇನ್ನು ನಮ್ಮ ಕಾಲದಲ್ಲಿ ಕೂಡ, ನಗೆಗಯ್ವಿ ಕ್ರಿಶ್ಣೇಗವ್ಡರ ಮಗಳ ಮದುವೆಯನ್ನು ಹಿರೇಮಗಳೂರು ಕಣ್ಣನ್ ಅವರು ಕನ್ನಡದಲ್ಲೇ ನಡೆಸಿಕೊಟ್ಟುದನ್ನು ಟೀವೀಯಲ್ಲಿ ಕಳೆದ ವರ‍್ಶ ನಾವು ನೋಡಿದ್ದೇವೆ. ಹೀಗೆ ಸಂಸ್ಕ್ರುತದ ಬದಲು ಕನ್ನಡದಲ್ಲೇ ನಡೆಸುವ ಶುಬ ಕಾರ‍್ಯಕ್ರಮಗಳು ಆಗಾಗ್ಗೆ ಜರುಗುತ್ತಿರುತ್ತವೆ.
      ಹಾಗಾಗಿ, ಸಂಸ್ಕ್ರುತವಿಲ್ಲದೆ ನಮ್ಮ ದರ‍್ಮ ಮತ್ತು ಸಂಸ್ಕ್ರುತಿ ನಡೆಯುವುದಿಲ್ಲ ಎಂದು ನಾವು ನಂಬಬೇಕಾಗಿಲ್ಲ. ನಮ್ಮ ಕನ್ನಡದಲ್ಲೇ ಅವು ನಡೆಯಬಲ್ಲವು. ಬರಿಯ ಮದುವೆ ಮುಂತಾದವುಗಳೇ ಏಕೆ, ನಮ್ಮ ಪರಮ ಗುರಿ ಮೋಕ್ಶ ಕೂಡ ಕನ್ನಡದ ಮೂಲಕವೇ ದೊರೆಯಬಲ್ಲುದು. ಶತಮಾನಗಳ ಹಿಂದೆಯೇ ಮಹಲಿಂಗ ರಂಗನೆಂಬ ಒಬ್ಬ ಕನ್ನಡದ ಕವಿ ಹೇಳಿದ್ದ - ಸುಲಿದ ಬಾಳೆಯ ಹಣ್ಣಿನಂದದಿ, ಕಳಿದ ಸಿಗುರಿನ ಕಬ್ಬಿನಂದದಿ, ... ಸುಲಬವಾಗಿರ‍್ಪ ಕನ್ನಡದ ನುಡಿಯಲ್ಲಿ ತಿಳಿದು ತನ್ನೊಳು ತನ್ನ ಮೋಕ್ಶವ ಗಳಿಸಿಕೊಂಡರೆ ಸಾಲದೇ, ಸಂಸ್ಕ್ರುತದಲಿನ್ನೇನು?
      ಮಹಲಿಂಗ ರಂಗಾ, ನಿನ್ನ ಮಾತಿಗೆ ನನ್ನ ನೆರೆಯೊಪ್ಪಿಗೆ.

ನಲ್ಮೆಯೊಡನೆ,
ಎಚ್.ಎಸ್.ರಾಜ್